ಅಂತರಂಗ

ರೈತ ಚಳುವಳಿ : ಒಂದು ಟಿಪ್ಪಣಿ

Published

on

  • ಪುರುಷೋತ್ತಮ ಬಿಳಿಮಲೆ

ದೇಶದ ರಾಜಧಾನಿಯ ವಿವಿಧ ಗಡಿ ಭಾಗಗಳಲ್ಲಿ ಲಕ್ಷಾಂತರು ರೈತರು ಚಳುವಳಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಚಳುವಳಿಯ ಬಗ್ಗೆ ಪ್ರಾಥಮಿಕ ತಿಳಿವಳಿಕೆಯನ್ನು ನೀಡುವುದು ಈ ಟಿಪ್ಪಣಿಯ ಉದ್ದೇಶ.

ಕೃಷಿ ಸುಧಾರಣೆ

ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ಕೃಷಿ ಪದ್ಧತಿಯು ಸಾಧಿಸಿದ ಪ್ರಗತಿಯನ್ನು ನಮ್ಮ ದೇಶದ ಸಾಂಪ್ರದಾಯಕ, ಕೃಷಿ ಪದ್ಧತಿಯೊಡನೆ ಹೋಲಿಸಿ ನೋಡಿದಾಗ, ನಮ್ಮ ಕೃಷಿ ಪದ್ಧತಿಯಲ್ಲಿ ಸುಧಾರಣೆ ಅಗತ್ಯ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. 1990ರ ದಶಕದಲ್ಲಿ ಜ್ಯಾರಿಗೆ ಬಂದ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ಪ್ರಕ್ರಿಯೆಗಳು ಅನ್ನದಾತನ ಬದುಕಲ್ಲಿ ಬದಲಾವಣೆಗಳನ್ನು ತರಲಿವೆ ಎಂದು ಈಗಿನಂತೆಯೇ ಆಗಲೂ ಹೇಳಲಾಗಿತ್ತು.

ಆದರೆ ಅಂತ ಬದಲಾವಣೆಗಳೇನೂ ಸಂಭವಿಸಲಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ಸರಕಾರವೇ ನೀಡಿದ ಅಂಕಿ ಅಂಶಗಳ ಪ್ರಕಾರ1995ರಿಂದ 2019ರ ನಡುವೆ ಒಟ್ಟು 296438 ರೈತರು ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸರಕಾರದ ಲೆಕ್ಕಕ್ಕೆ ಸಿಗದ ಸಾವುಗಳು ಇದಕ್ಕಿಂತಲೂ ಹೆಚ್ಚಿರುತ್ತವೆ.

ರೈತರು ದಿಕ್ಕೆಟ್ಟಿದ್ದಾರೆ, ತಮ್ಮ ಜಮೀನನ್ನು ಕಳೆದುಕೊಂಡಿದ್ದಾರೆ. ಇದರ ಪರಿಣಾಮವೋ ಎಂಬಂತೆ2014 ರಿಂದ ರೈತ ಹೋರಾಟಗಳು ಶೇಕಡಾ 700ರಷ್ಟು ಹೆಚ್ಚಿವೆ. ಈಗ ನಡೆಯುತ್ತಿರುವುದು ಅವುಗಳ ಮುಂದುವರಿಕೆಯಾಗಿದೆ.

ಇಂಥ ಪರಿಸ್ಥಿತಿಯಲ್ಲಿ ಕೃಷಿ ಸುಧಾರಣೆಯನ್ನು ಹೇಗೆ ಮಾಡಬೇಕೆಂಬುದು ಬಹಳ ಮುಖ್ಯ ಪ್ರಶ್ನೆ. ಈ ಕುರಿತು 2006ರಷ್ಟು ಹಿಂದೆಯೇ ಸ್ವಾಮಿನಾಥನ್‌ ವರದಿ ತನ್ನ ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಿತ್ತು.

ಅದರಲ್ಲಿ ಭೂಮಿಯ ಹಂಚಿಕೆ, ನೀರಾವರಿ, ರೈತರ ಭೂಮಿಯ ಮಾರಾಟ ಇತ್ಯಾದಿ ವಿಷಯಗಳ ಕುರಿತು ಅತ್ಯಂತ ಉಪಯುಕ್ತವಾದ ಸಲಹೆಗಳಿದ್ದುವು. ಆದರೆ ಆ ಮೇಲೆ ಅಧಿಕಾರಕ್ಕೆ ಬಂದ ಯುಪಿಎ ಮತ್ತು ಎನ್‌ಡಿಯೆ ಸರಕಾರಗಳು ಸ್ವಾಮಿನಾಥನ್‌ ವರದಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಯಾಕೆ ಪರಿಗಣಿಸುವುದಿಲ್ಲ ಎಂದು ಹೇಳಲೂ ಇಲ್ಲ, ನಾವು ಕೇಳಲೂ ಇಲ್ಲ.

ಮೂರು ಹೊಸ ಕಾಯ್ದೆಗಳು

ಕೃಷಿ ವಿಷಯಕವಾದ ಪ್ರಶ್ನೆಗಳ ಗಹನತೆಯನ್ನು ಅರ್ಥಮಾಡಿಕೊಳ್ಳದ ಪ್ರಸ್ತುತ ಸರಕಾರವು ಜನರೆಲ್ಲ ಕೊರೋನಾ ಭಯದಿಂದ ತತ್ತರಿಸುತ್ತಿರುವಾಗ, ಲೋಕ ಸಭೆ, ರಾಜ್ಯ ಸಭೆಗಳಲ್ಲಿ ವಿಸ್ತೃತ ಚರ್ಚೆಯನ್ನೂ ಮಾಡದೆ, ಈಗ ವಿವಾದಾಸ್ಪದವಾಗಿರುವ ಮೂರು ಕಾಯ್ದೆಗಳನ್ನು ತರಾತುರಿಯಿಂದ ( 2019ರ ಸಪ್ಟಂಬರ ತಿಂಗಳ 20ರಂದು) ಅಂಗೀಕರಿಸಿತು. ಈ ಮೂರು ಕಾಯ್ದೆಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ವಿವರಿಸಬಹುದು.

1. ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020

ಇದರ ಪ್ರಕಾರ, ಎಪಿಎಂಸಿ-ನಿಯಂತ್ರಿತ ಮಂಡಿಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿಯೂ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಿದೆ. ಮೇಲ್ನೋಟಕ್ಕೆ ಇದು ಮುಕ್ತ ವ್ಯವಸ್ಥೆಯಂತೆ ಕಂಡರೂ ನಿಧಾನವಾಗಿ ಅದು ಎಪಿಎಂಸಿಗಳನ್ನು ಸ್ಥಗಿತಗೊಳಿಸುತ್ತದೆ.

ಜೊತೆಗೆ ಸರಕಾರವು ಈಗ ನೀಡುತ್ತಿರುವ ಅನೇಕ ಬಗೆಯ ಸಬ್ಸಿಡಿಗಳನ್ನು ನಿಧಾನವಾಗಿ ಕೊನೆಗೊಳಿಸುತ್ತದೆ. ಕೃಷಿಯು ಸರಕಾರದ ಕೈ ತಪ್ಪಿದ ತಕ್ಷಣ ಖಾಸಗಿಯವರು ರೈತರೊಡನೆ ಆಟವಾಡಲು ಸುರು ಮಾಡುತ್ತಾರೆ. ಈ ಆಟಕ್ಕೆ ಕೊನೆಯೇ ಇರುವುದಿಲ್ಲ. ನಮ್ಮ ದೇಶದಲ್ಲಿ ಇನ್ನೂ 68.8 ಶೇಕಡಾ ಜನರು ( ಸುಮಾರು 80 ಕೋಟಿ) ಬಡತನದ ರೇಖೆಯಿಂದ ಕೆಳಗಿರುವಾಗ ಸರಕಾರವು ಇಂತ ಜವಾಬ್ದಾರಿಗಳಿಂದ ತನ್ನನ್ನು ಈಗಲೇ ಮುಕ್ತಗೊಳಿಸಿಕೊಂಡರೆ ಇನ್ನಷ್ಟು ಅಪಾಯಗಳು ಸಂಭವಿಸುತ್ತವೆ.

2. ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆ, 2020

ಇದನ್ನು ʼಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯದ ಸುಗ್ರೀವಾಜ್ಞೆʼ ಎಂದು ಕರೆಯಬಹುದು. ಈ ಕಾಯ್ದೆಯ ಪ್ರಕಾರ, ಆರ್ಥಿಕ ಏಜೆಂಟರು ಯಾವುದೇ ಕಾನೂನು ಕ್ರಮದ ಭಯವಿಲ್ಲದೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಬಹುದು. ಒಬ್ಬ ರೈತನಿಗೆ ಏನಾದರೂ ಅನ್ಯಾಯವಾದರೆ, ಆತ ನ್ಯಾಯಾಲಯಕ್ಕೆ ಹೋಗುವಂತಿಲ್ಲ, ಬದಲು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳಬೇಕು.

ಒಂದು ಕಾಯ್ದೆಯನ್ನು ಹೀಗೆ ನ್ಯಾಯಾಂಗ ವ್ಯವಸ್ಥೆಯಿಂದಲೇ ಹೊರಗಿಟ್ಟಿರುವುದು ಇದುವೇ ಪ್ರಥಮ. ಇಂಥಲ್ಲಿ ದಾಸ್ತಾನುಗಾರರು ಕೃತಕ ಅಭಾವ ಸೃಷ್ಟಿಸಿ, ಬೆಲೆ ಏರಿಕೆ ಮಾಡಿದರೆ ಸರಕಾರವೂ ಸೇರಿದಂತೆ ಯಾರಿಗೂ ಏನೂ ಮಾಡಲಾಗದು. ದಾಸ್ತಾನುಗಾರರು ದೇಶದ ಹಲವು ಕಡೆಗಳಲ್ಲಿ ನೀರುಳ್ಳಿಯ ಕೃತಕ ಅಭಾವ ಸೃಷ್ಟಿಸಿ ಕಿಲೋ ಒಂದಕ್ಕೆ 300 ರೂಪಾಯಿ ವಸೂಲಿ ಮಾಡುವಾಗ ಯಾವ ಸರಕಾರಗಳಿಗೂ ಏನೂ ಮಾಡಲಾಗಲಿಲ್ಲ.

ನಾಳೆ ಅಕ್ಕಿ, ಗೋಧಿ, ಎಣ್ಣೆ, ಬೇಳೆಗಳಿಗೆ ಹೀಗಾಗುವ ಸಾಧ್ಯತೆಗಳು ನಮ್ಮ ಕಣ್ಣ ಮುಂದೆಯೇ ನಿಂತಿವೆ. ಅಗತ್ಯ ವಸ್ತು ಬೆಲೆ ನಿಯಂತ್ರಣ ಇಲ್ಲವಾಗುವುದರಿಂದ ರೈತರೂ ಸೇರಿದಂತೆ ಎಲ್ಲರೂ ವಿಪರೀತ ಬೆಲೆ ಏರಿಕೆಗೆ ಬಲಿಯಾಗಬೇಕಾಗುತ್ತದೆ.

3 . ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ 2020

ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯೆಂದು ಹೇಳಲಾಗುತ್ತಿದೆ. ಈ ಕಾಯ್ದೆಯು ಕಾರ್ಪೋರೇಟ್‌ ಕಂಪೆನಿಗಳು ಕೃಷಿಗೆ ಪ್ರವೇಶಿಸಲು ಒಂದು ಚೌಕಟ್ಟನ್ನು ಒದಗಿಸಿಕೊಡುತ್ತದೆ. ಇದರ ಪ್ರಕಾರ ಆರೋಗ್ಯಕರ ಸಂಭಾವನೆಗೆ ಪ್ರತಿಯಾಗಿ ಕಂಪೆನಿಯು ಬಯಸಿದ್ದನ್ನು ಉತ್ಪಾದಿಸಲು ಕಂಪನಿಯೊಂದಿಗೆ ರೈತರು ಲಿಖಿತ ಒಪ್ಪಂದಕ್ಕೆ ಸಹಿ ಹಾಕಬೇಕು.

ಈ ಸಹಿಯು ರೈತನ ಭೂಮಿಯ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲ, ಬದಲು ಬೆಳೆಯ ಹಕ್ಕನ್ನು ಕಿತ್ತುಕೊಳ್ಳುತ್ತದೆ. ಪರೋಕ್ಷವಾಗಿ ತಮ್ಮದೇ ಜಮೀನಿಗೆ ರೈತರು ತಾವೇ ಕೂಲಿಯಾಳುಗಳಾಗುತ್ತಾರೆ. ಕ್ಷಿಪ್ರವಾಗಿ ಹಣ ಮಾಡುವ ಕಲೆಯಲ್ಲಿ ನುರಿತರಾಗಿರುವ ಕಾರ್ಪೊರೇಟ್‌ ಕಂಪೆನಿಗಳು, ಹೆಚ್ಚು ಉತ್ಪಾದಿಸಲು ಬಗೆ ಬಗೆಯ ರಾಸಾಯನಿಕಗಳನ್ನು ಬಳಸಿ, ಭೂಮಿಯನ್ನು ಬಂಜರುಗೊಳಿಸುತ್ತವೆ. ಪಂಜಾಬ್‌, ಹರಿಯಾಣಗಳಲ್ಲಿ ಈಗ ಆದದ್ದು ಇದುವೇ. ಇದರಿಂದ ಅಲ್ಲಿಯ ರೈತರು ಎಚ್ಚತ್ತಿದ್ದಾರೆ, ಆದರೆ ಉಳಿದವರಿಗೆ ಅಪಾಯದ ಅರಿವಿದ್ದಂತಿಲ್ಲ.

ಇತರ ಸಮಸ್ಯೆಗಳು

ಕಾಯ್ದೆಗಳ ಈ ಸಮಸ್ಯೆಗಳೊಂದಿಗೆ ಇನ್ನಷ್ಟು ಪ್ರಶ್ನೆಗಳೂ ಸೇರಿಕೊಂಡು ಈಗ ಸಂಕೀರ್ಣವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಬಹಳ ಮುಖ್ಯವಾದದ್ದೆಂದರೆ, ಸಂವಿಧಾನದ ಪ್ರಕಾರ ಕೃಷಿಯು ರಾಜ್ಯ ಸರಕಾರದ ಆಧೀನದಲ್ಲಿ ಬರುತ್ತದೆ. ಅದು ಸರಿ ಕೂಡಾ ಹೌದು. ಏಕೆಂದರೆ ರಾಜ್ಯ ಸರಕಾರಗಳಿಗೆ ತಮ್ಮ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಭೂಮಿಯ ಗುಣ, ಬೆಳೆಗಳು, ನೀರಾವರಿ, ಬೇಸಾಯದ ಕ್ರಮಗಳು, ರೈತರ ನಂಬುಗೆಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಇರುತ್ತದೆ.

ಹೀಗಿರುವಾಗ, ಕೇಂದ್ರ ಸರಕಾರವು ಏಕಾ ಏಕಿ ಕೃಷಿ ಕಾಯ್ದೆಗಳನ್ನು ತಾನು ಚಾಲ್ತಿಗೆ ತಂದದ್ದು ಸಂವಿಧಾನ ವಿರೋಧೀ ನಡೆಯಾಗುತ್ತದೆ. ಈ ಕುರಿತ ಕೇಸೊಂದು ಸುಪ್ರೀಂ ಕೋರ್ಟಲ್ಲಿ ದಾಖಲಾಗಿದೆ. ಆದರೆ ಸುಪ್ರೀಂ ಕೋರ್ಟು ಅದನ್ನು ಆದ್ಯತೆಯ ಮೇಲೆ ಚರ್ಚೆಗೆ ತೆಗೆದುಕೊಳ್ಳದ್ದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ.

ಸರಕಾರವು ಇದೇ ರೀತಿ ವಿದ್ಯುತ್‌ ಕಾಯ್ದೆಯಲ್ಲಿಯೂ ಬದಲಾವಣೆ ತಂದಿದೆ. ಸಂವಿಧಾನದ ಪ್ರಕಾರ ವಿದ್ಯುತ್‌, ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಂಟಿಯಾಗಿ ನಿರ್ವಹಿಸಬೇಕಾದ ಕನ್ಕರೆಂಟ್‌ ಪಟ್ಟಿಯಲ್ಲಿ ಬರುತ್ತದೆ. ಆದರೆ ಕೇಂದ್ರ ಸರಕಾರ ಇದನ್ನು ಪರಿಗಣಿಸದೆ, ಏಕಾ ಏಕಿ ತಾನೇ ನಿರ್ಧಾರ ತೆಗೆದುಕೊಂಡಿರುವುದೂ ಸಂವಿಧಾನ ಬಾಹಿರ ಕ್ರಮವಾಗಿದೆ.

ಕೇಂದ್ರೀಕರಣ

ದೇಶದ ಅತಿ ಮುಖ್ಯ ಸಂಗತಿಗಳೆಲ್ಲ ಹೀಗೆ ಕೇಂದ್ರ ಸರಕಾರದ ಕೈ ಕೆಳಗೆ ಬಂದರೆ ಖಾಸಗಿಯವರ ಕೆಲಸ ಸುಲಭವಾಗುತ್ತದೆ. ಅವರಿಗೆ ಈಗ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಆಗಬೇಕಿಲ್ಲ. ಬದಲು ಒಂದು ಕೇಂದ್ರದ ಮೂಲಕ ಇಡೀ ದೇಶವನ್ನೇ ಆಕ್ರಮಿಸಿಕೊಳ್ಳಬಹುದು. ಸಾಮಾಜಿಕ ನ್ಯಾಯಕ್ಕಾಗಿ ಇನ್ನೂ ಹಪಹಪಿಸುತ್ತಿರುವ ಭಾರತದಂಥ ದೇಶದಲ್ಲಿ ಇಂಥ ಬೆಳವಣಿಗೆಗಳು ಬಡತನವನ್ನು ಇನ್ನಷ್ಟು ಹೆಚ್ಚು ಮಾಡಿ ಆಳದಲ್ಲಿ ದೇಶವನ್ನು ದುರ್ಬಲಗೊಳಿಸುತ್ತದೆ.

ಕೊನೆಮಾತು

ಇವತ್ತು ಭಾರದಲ್ಲಿ ನಡೆಯುತ್ತಿರುವ ರೈತ ಚಳುವಳಿಯು ಅತ್ಯಂತ ಮಹತ್ವದ ಘಟನೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಬಂಧಗಳನ್ನು (ಫೆಡರಲ್‌ ರಚನೆ) ಪರಿಶೀಲಿಸಲು ಒತ್ತಾಯಿಸಿದೆ. ಕೃಷಿಭೂಮಿಯ ಖಾಸಗೀಕರಣವು ಭಾರತದಂಥ ಅಭಿವೃದ್ಧಿ ಶೀಲ ದೇಶದಲ್ಲಿ ಉಂಟು ಮಾಡಬಹುದಾದ ಅನಾಹುತಗಳ ಬಗ್ಗೆ ಎಲ್ಲೆಡೆಯೂ ಚರ್ಚೆ ನಡೆಯುತ್ತಿದೆ.

ತತ್ಕಾಲೀನ ರಾಜಕೀಯ ಲಾಭಗಳನ್ನು ಬದಿಗಿರಿಸಿ ಎಲ್ಲರೂ ಈ ಕುರಿತು ಯೋಚಿಸಿದರೆ ಬಹಳ ಪ್ರಯೋಜನವಿದೆ. ಇದು ಸಾಧ್ಯವಾಗಲು, ಸರಕಾರವು ಈಗ ಗಡಿಬಿಡಿಯಿಂದ ಜ್ಯಾರಿಗೆ ತಂದ ಮೂರೂ ಕಾಯ್ದೆಗಳನ್ನು ಹಿಂಪಡೆಯಬೇಕು. ಕೃಷಿ ಅಭಿವೃದ್ಧಿಯ ಕುರಿತು ಚರ್ಚಿಸಲೆಂದೇ ವಿಶೇಷ ಪಾರ್ಲಿಮೆಂಟ್‌ ಅಧಿವೇಶನವನ್ನು ಕರೆಯಬೇಕು. ಅದಕ್ಕೂ ಮುನ್ನ ರೈತರೊಂದಿಗೆ, ಕೃಷಿ ತಜ್ಞರೊಂದಿಗೆ, ರಾಜ್ಯ ಸರಕಾರಗಳೊಂದಿಗೆ ಕೇಂದ್ರವು ಮುಕ್ತವಾದ ಚರ್ಚೆಯನ್ನು ನಡೆಸಬೇಕು. ಸ್ವಾಮಿನಾಥನ್‌ ವರದಿ ಯಾಕೆ ಬೇಡವೆಂದು ಜನರಿಗೆ ಹೇಳಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version