ಲೈಫ್ ಸ್ಟೈಲ್
ಕಾರಹುಣ್ಣೀಮೇಯ ಕರಿ ಹರಿಯಲು ಸಜ್ಜಾದ ಕರುನಾಡು
ಉತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಕಾರಹುಣ್ಣಿಮೆ ಒಂದಾಗಿದೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ರೈತರು ಸಂಭ್ರಮದಿಂದ ಆಚರಿಸುತ್ತಾರೆ. ಕೆಲ ಕಡೆ ಒಂದಷ್ಟು ಅವಘಡಗಳು ಸಂಭವಿಸಿದರೂ ಒಟ್ಟಾರೆ ಕಾರಹುಣ್ಣಿಮೆ ಹಬ್ಬ ರೈತಾಪಿ ವರ್ಗದ ಕಳೆಯೇರಿಸಿದ್ದಂತೂ ಹೌದು. ಉತ್ತರ ಕರ್ನಾಟಕದದಲ್ಲಿ ವಿಭಿನ್ನ, ಹಾಗೂ ರೈತರು ನಂಬಿಕೆಯಿಂದ ಕಾರ ಹುಣ್ಣಿಮೆ ಆಚರಿಸುವ ಪದ್ಧತಿ ತಲೆತಲಾಂತರದಿಂದ ಬಂದಿದೆ.
ಹಬ್ಬದ ಅಂಗವಾಗಿ ನಗರ ಹಾಗೂ ಹಳ್ಳಿಗಳಲ್ಲಿ ವಿವಿಧೆಡೆ ಎತ್ತುಗಳ ಕರಿ ಹರಿಯುವ ಮೂಲಕ ಕಡು ಬೇಸಿಗೆ ಕಳೆದು ಮುಂಗಾರು ಸ್ವಾಗತಿಸಲು ಈ ಹಬ್ಬ ಸಾಕ್ಷಿಯಾಗುತ್ತದೆ. ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ರೈತರು ವಿವಿಧ ಬಗೆ ಶೃಂಗಾರದ ವಸ್ತುಗಳನ್ನು ಹಾಕುತ್ತಾರೆ. ಇನ್ನು ಎತ್ತು, ಹೋರಿಗಳ ಕೊಂಬುಗಳಿಗೆ ಬಣ್ಣ ಬಳೆಯುತ್ತಾರೆ. ಜೊತೆಗೆ ಮೈಮೇಲೆ ವಿಶೇಷವಾದ ಚಿತ್ತಾರ ಬಿಡಿಸಿ ಮೆರವಣಿಗೆ ಮಾಡುತ್ತಾರೆ.
ಸಂಜೆ ಹಮ್ಮಿಕೊಳ್ಳುವ ಕರಿ ಹರಿಯುವ ಸಂರ್ಭಮದಲ್ಲಿ ಭಾಗವಹಿಸಿ ರೋಮಾಂಚನಗೊಳಿಸುತ್ತಾರೆ. ವರ್ಷವಿಡೀ ದುಡಿಯುವ ಎತ್ತುಗಳಿಗೆ ಮನರಂಜನಾ ಕೂಟವಾಗಿ ಕಾರಹುಣ್ಣಿಮೆಯ ಕರಿ ಹರಿವುವ ಕಾರ ಹುಣ್ಣಿಮೆ ನಿಮಿತ್ತ ವಿಶೇಷವಾಗಿ ಶೃಂಗಾರಗೊಂಡಿರುವ ಎತ್ತು ಹೋರಿಗಳಿಗೆ ವಿವಿಧ ಬಗೆಯ ಭಕ್ಷ್ಯಗಳಾದ ಹೋಳಿಗೆ, ಕಡುಬು ಖಾದ್ಯಗಳನ್ನು ಮಾಡಿ ಉಣಬಡಿಸುವ ಮೂಲಕ ಅನ್ನದಾತರು ತಮ್ಮ ಎತ್ತುಗಳ ಮೇಲಿನ ಅಭಿಮಾನ ಮೆರೆಯುತ್ತಾರೆ.
ಎತ್ತು ಹೋರಿಗಳಿಗೆ ಉಣಿಸುವ ಸಂಪ್ರದಾಯ ಉತ್ತರ ಕರ್ನಾಟಕದಾದ್ಯಂತ ರೂಢಿಯಲ್ಲಿದೆ. ಗ್ರಾಮದ ರೈತರು ಹಾಗೂ ಯುವಕರು ಶೃಂಗರಿಸಿ ತಂದಿದ್ದ ತಮ್ಮ ಎತ್ತುಗಳನ್ನು ಸಾಲು ಸಾಲಾಗಿ ಓಡಿಸಿ ಸಂಭ್ರಮಪಡುತ್ತಾರೆ. ನಂತರ ರೈತರು ಮನೆಗೆ ಬಂದಾಗ ಅವುಗಳಿಗೆ ಆರತಿ ಎತ್ತಿ ಖುಷಿ ಪಟ್ಟರು. ಇದರ ಅಂಗವಾಗಿ ನಗರದ ಸುತ್ತ-ಮುತ್ತಲಿರುವ ವಿವಿಧ ಹಳ್ಳಿಯ ಜನರು ಎತ್ತುಗಳ ಕರಿ ಹರಿಯುವ ವಿಶಿಷ್ಠ ಆಚರಣೆಗೆ ನೂರಾರು ರೈತರು, ಗ್ರಾಮದ ಮಹಿಳೆಯರು ಹಾಗೂ ಯುವಕರು ಸಾಕ್ಷಿಯಾಗುತ್ತಾರೆ.
ಇದಕ್ಕೂ ಮೊದಲು ಮಹಿಳೆಯರು ಕಾರ ಹುಣ್ಣಿಮೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಿ, ಈ ವರ್ಷನಾದ್ರೂ ಉತ್ತಮ ಮಳೆ-ಬೆಳೆ, ಸಿರಿ-ಧಾನ್ಯ ಸಂಪತ್ತು ಉತ್ತಮ ರೀತಿಯಲ್ಲಿ ನೀಡಿ ನಮ್ಮನ್ನು ಉದ್ದರಿಸು ಎಂದು ಭೂ ತಾಯಿ ಹಾಗೂ ಗೋಮಾತೆಯಲ್ಲಿ ಮೊರೆಯಿಡುತ್ತಾರೆ. ಅಲ್ಲದೆ ಸಮೀಪದ ಅರಳಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಂಗಾರನ್ನು ಬರಮಾಡಿಕೊಳ್ಳುತ್ತಾರೆ. ಕಾರಹುಣ್ಣಿಮೆ ದಿನದಂದು ಎತ್ತು, ಹೋರಿಗಳಿಗೆ ಕೃಷಿ ಚಟುವಟಿಕೆ ಯಿಂದ ವಿರಾಮ ನೀಡಲಾಗಿರುತ್ತೆ. ಹಬ್ಬದ ಅಂಗವಾಗಿ ಮನೆಯಲ್ಲಿ ತಯಾರಿಸಿದ ವಿಶೇಷ ಸಿಹಿ ಖಾದ್ಯಗಳನ್ನು ಸವಿದು ಸಂಭ್ರಮ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಆಕರ್ಷಣೆಯಾಗಿರುತ್ತದೆ.
ಕಾರಹುಣ್ಣಿಮೆಯ ಉದ್ದೇಶ
ಕಾರಹುಣ್ಣಿಮೆ ದಿನದಂದು ಪ್ರಮುಖವಾಗಿ ಎತ್ತು, ಹೋರಿಗಳೇ ಆಕರ್ಷಣೆಯಾಗಿರುತ್ತವೆ.
ಕಾರ ಹಬ್ಬದ ವಿಶೇಷತೆಯಲ್ಲಿ ಕರಿ ಹರಿಯುವ ಕಾರ್ಯಕ್ರಮವೂ ಒಂದು. ಕಾರಹುಣ್ಣಿಮೆಯಂದು ಸಂಜೆಯಾಗುತ್ತಿದಂತೆ ಕರಿ ಹರಿಯುವ ಸಮಾರಂಭ ಹಮ್ಮಿಕೊಳ್ಳಲಾಗಿರುತ್ತೆ. ಊರ ಅಗಸಿಯಲ್ಲಿ ಬೇವಿನ ತಪ್ಪಲಿನ ತೋರಣದ ನಡುವೆ ಕೊಬ್ಬರಿ, ಶೇಂಗಾ, ಬೆಲ್ಲ, ಪುಟ್ಟಾಣಿ, ಚುರುಮುರಿ, ಉತ್ತತ್ತಿ ಹಾಗೂ ಕಲ್ಲುಸಕ್ಕರೆಯನ್ನು ಕಟ್ಟಲಾಗಿರುತ್ತೆ.
ಕರಿ ಹರಿಯಲು ಬಿಳಿ, ಹಾಗೂ ಕೆಂದು ಬಣ್ಣದ ಎತ್ತುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ಹಲಗೆ ಸದ್ದು ಮಾಡುತ್ತಿದ್ದಂತೆ ಅಗಸಿ ಎದುರಿಗೆ ಕರಿ ಹರಿಯಲು ಎತ್ತುಗಳೊಂದಿಗೆ ರೈತರು ತಾ ಮುಂದು ನೀ ಮುಂದು ಎಂದು ಎತ್ತುಗಳನ್ನು ಓಡಿಸಿಕೊಂಡು ಬಂದು ಕರಿ ಹರಿಯುತ್ತಾರೆ. ಕರಿಯುವ ಓಟದಲ್ಲಿ ಇತರೆ ರೈತರು ಕೇಕೆ ಹಾಕಿ ಉತ್ಸಾಹ ತುಂಬುತ್ತಾರೆ. ಯಾವ ಬಣ್ಣದ ಎತ್ತು ಕರಿಹರಿಯುತ್ತೋ ಆ ಬಣ್ಣದ ಬೆಳೆ ಚೆನ್ನಾಗಿ ಬರುತ್ತೆ ಅನ್ನುವ ನಂಬಿಕೆ ರೈತರದ್ದಾಗಿದೆ.
ಈ ಬಾರಿಯ ಕಾರಹುಣ್ಣಿಮೆ ಹಬ್ಬದಂದು ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಕಾರಹುಣ್ಣಿಮೆ ಕರಿ ಹರಿಯುವ ಸಂಪ್ರದಾಯದ ನಡೆಸಲು ಎಲ್ಲ ಜನರು ಎತ್ತುಗಳ ಓಟದ ಕರಿ ಹಬ್ಬಕ್ಕೆ ಸಾವಿರಾರು ಸಂಖ್ಯೆಯಲ್ಲಿ ರೈತರು ಸಾಕ್ಷಿಯಾಗಲು ಕಾತುರರಾಗಿದ್ದಾರೆ. ಈ ಬಾರಿ, ಓಟದಲ್ಲಿ ಯಾವ ಬಣ್ಣದ ಎತ್ತು ಮೊದಲ ಸ್ಥಾನದಲ್ಲಿ ಓಡಿ ಬಂದು ಕರಿ ಹರಿಯಲಿದೆ ಎನ್ನುವುದೆ ಒಂದು ಯಕ್ಷ ಪ್ರಶ್ನೆಯಾಗಿದೆ. ಯಾಕೆಂದರೆ ಬಿಳಿ ಎತ್ತು ಮೊದಲು ಕರಿ ಹರಿದ್ರೆ ಬಿಳಿಜೋಳ, ಅಂದರೆ ಹಿಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನುವ ನಂಬಿಕೆ.
ಇನ್ನು ಕೆಂದು ಬಣ್ಣದ ಕರಿ ಹರಿದ್ರೆ ಮುಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನುವ ನಂಬಿಕೆ ಯನ್ನು ರೈತರು ಹೊಂದಿದ್ದಾರೆ. ಯಾವ ಬಣ್ಣದ ಎತ್ತು ಮೊದಲು ಬರುತ್ತದೆವೋ ಆ ಬೆಳೆ ಬಿತ್ತಲೂ ಕಾತೂರರಾಗಿದ್ದಾರೆ. ಇತ್ತ ಎತ್ತುಗಳು ಒಂದೆಡೆ ಕಂಡು ಬಂದ್ರೆ, ಸಾಲು ಸಾಲಾಗಿ ರಸ್ತೆಯ ಇಕ್ಕೆಲಗಳಲ್ಲಿ ನಿಂತ ರೈತ್ರು ಕೇಕೆ ಹಾಕಿ ಸಂಭ್ರಮಿಸಿದ್ರು. ಇನ್ನು ಮೊದಲು ಕರಿ ಹರಿದ ಎತ್ತಿಗೆ ರೈತರೆಲ್ಲರೂ ಸೇರಿ ಮೆರವಣಿಗೆ ಮಾಡುತ್ತಾರೆ.
ಕೆಲವು ಕಡೆಗಳಲ್ಲಿ ಕರಿ ಹರಿದ ಬಳಿಕ ಗುಂಡು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿರುತ್ತೆ. ವರ್ಷವಿಡೀ ಕೃಷಿಯಲ್ಲಿ ತೊಡಗಿದ ರೈತರು ದೈಹಿಕ ಕಸರತ್ತು ನಡೆಸುವ ಮೂಲಕ ಕ್ರೀಡಾ ಮನೋಭಾವ ಮೆರೆಯುತ್ತಾರೆ. ಆನಂತರ ಶಕ್ತಿ ದೇವತೆಗಳ ದೇಗುಲಗಳಿಗೆ ತೆರಳಿ ರೈತರು ಮಳೆ ಕುರಿತಾಗಿ ದೇವರ ಹೇಳಿಕೆಯನ್ನು ಕೇಳುತ್ತಾರೆ. ಒಟ್ಟಿನಲ್ಲಿ ಕಾರಹುಣ್ಣಿಮೆ ಎಂದರೆ ರೈತರ- ಎತ್ತುಗಳ ಹಬ್ಬ ಅಂತಾನೆ ಫೇಮಸ್..
ಇನ್ನು ಕಪ್ಪು ಬಣ್ಣದ ಎತ್ತು ಅಪಶಕುನ ಎನ್ನುವ ಕಾರಣಕ್ಕೆ ಕರಿ ಹರಿಯಲು ಕಪ್ಪು ಬಣ್ಣದ ಎತ್ತನ್ನು ಓಟಕ್ಕೆ ಬಿಡುವುದಿಲ್ಲ.ಇನ್ನೊಂದು ನಂಬಿಕೆ ಎಂದರೆ ಕರಿ ಹರಿದ ಎತ್ತು ಕೈಗೆ ಸಿಗದೆ ಊರಿನ ಸೀಮೆ ದಾಟಿ ಹೋದರೆ ಕರಿ ಹರಿಯುದನ್ನು ನಿಷೇಧಿಸಿ ಕಾರಹುಣ್ಣಿಮೆ ಹಬ್ಬವನ್ನು ಕೈಬಿಡುತ್ತಾರೆ. ಒಟ್ನಲ್ಲಿ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ-ಬೆಳೆ ಚೆನ್ನಾಗಿ ಬರಲಿ ಎನ್ನುವ ಬರವಸೆಯಲ್ಲಿ ಕಾಯುತ್ತಿದ್ದಾರೆ. ಈ ವರ್ಷನಾದ್ರು ಭೂತಾಯಿ ಹಾಗೂ ವರುಣದೇವರಿಬ್ಬರೂ ಸೇರಿ ರೇತನ ದುಖಃದ ಬದುಕು ಬವಣೆಯನ್ನು ನೀಗಿಸಲಿ ಎಂದು ಆಶಿಸುತ್ತೇವೆ.
- ಕಾರಹುಣ್ಣಿಮೆ ಹಬ್ಬ ಆಚರಿಸಲು ನಮಗೆ ತುಂಬಾ ಸಂತೋಷ ಇದೆ. ನಾನು ನಮ್ಮ ಎತ್ತುಗಳನ್ನು ಸಹ ಓಟಕ್ಕೆಂದು ಸಿಂಗಾರ ಮಾಡಿ ತಯಾರಿ ಮಾಡುತ್ತಿದ್ದೆವೆ. ಆದರೆ ವರ್ಷದಿಂದ ವರ್ಷಕ್ಕೆ ಮಳೆ ಬೆಳೆ ಕಡಿಮೆಯಾಗಿದೆ. ಈ ವರ್ಷನಾದ್ರು ದೇವರು ಉತ್ತಮ ಮಳೆ ಕೊಡುತ್ತಾನೆನೋ ಎನ್ನುವ ಬರವಸಲೆಯಲ್ಲಿ ಅನ್ನದಾತ ಕಾಯುತ್ತಿದ್ದಾನೆ. ಅನ್ನದಾತ ಪ್ರತಿವರ್ಷವು ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದು ಈ ವರ್ಷ ಕಡಿಯಾಗುತ್ತದೆ ಎಂದು ನಂಬಿದ್ದವೆ.
|ಸಂಗಪ್ಪ. ಚಂ. ಮೇತ್ರಿ (ವಿಜಯಪುರ ರೈತ)
ಸುದ್ದಿದಿನ.ಕಾಂ|ವಾಟ್ಸಾಪ್|9980346243