ಅಂತರಂಗ
ಧರ್ಮ ಮರ್ಮ – 06 : ಸ್ವರ್ಗದ ಆಸೆ, ನರಕದ ಭಯ
- ಯೋಗೇಶ್ ಮಾಸ್ಟರ್
ಯಾವುದೇ ಸ್ಥಾಪಿತ ಧರ್ಮವಾಗಲಿ, ಯಾವುದೇ ಮತದ ಕವಲುಗಳಾಗಲಿ ಹುಟ್ಟುವುದೇ ಸಂಘರ್ಷದ ಫಲವಾಗಿ. ಆಯಾ ಕಾಲಘಟ್ಟದ ಮೌಢ್ಯ, ಧಾರ್ಮಿಕ ಅಥವಾ ಸಾಂಪ್ರದಾಯಕ ವಿಧಿ ವಿಧಾನಗಳು ಸಮಂಜಸವಾಗಿಲ್ಲ ಎಂದು ಎತ್ತಿದ ದನಿಗಳು ಮತ್ತು ಪರ್ಯಾಯ ಮಾರ್ಗಗಳು ಹೊಸ ಧರ್ಮಗಳಾದವು ಅಥವಾ ಹೊಸ ಪಂಥಗಳಾದವು.
ಸ್ಥಾಪಿತ ವ್ಯಕ್ತಿ ಅಥವಾ ಸಮೂಹದ ಜೀವಿತಾವಧಿಯ ನಂತರದ ಕಾಲಘಟ್ಟಗಳಲ್ಲಿ ಅದೇ ಹೊಸ ಪಂಥದ ಸದಸ್ಯರೇ ಕಟ್ಟರ್ ಧೋರಣೆಗಳನ್ನು ಅನುಸರಿಸುತ್ತಾ, ತಮ್ಮದೇ ಪಂಥ ಅಥವಾ ಧರ್ಮ ಉದಸಿದ್ದ ವೈಶಾಲ್ಯದ ಕಾರಣವನ್ನು ಒಂದು ಚೌಕಟ್ಟಿಗೆ ಒಳಪಡಿಸಿ ಸಂಕುಚಿತಗೊಳಿಸುತ್ತಾರೆ.
ಹೊಸತರ ಆಕರ್ಷಣೆ ಅಥವಾ ಅದರಲ್ಲಿರುವ ವ್ಯಕ್ತಿಗಳ ಮೇಲಿನ ತಮ್ಮ ಗೌರವದಿಂದ ಪಂಥವನ್ನು ಪ್ರವೇಶಿಸಿದ್ದರೂ ಹಳೆಯ ಸಾಂಪ್ರಾದಯಕ ಮನಸ್ಥಿತಿಗಳು ಬದಲಾಗಿರುವುದಿಲ್ಲ. ಹಾಗಾಗಿ ಹಳೆಯ ಪಂಥದಲ್ಲಿದ್ದಂತಹ ಮನಸ್ಥಿತಿಗಳನ್ನು ಹೊಸದರಲ್ಲೂ ಮುಂದುವರಿಸುತ್ತಾರೆ. ಮುಖ್ಯವಾಗಿ ಅವರಿಗೆ ಸ್ಥಾಪಕರ ಮೂಲ ಆಶಯವೇ ಅವರಿಗೆ ತಿಳಿದಿರುವುದಿಲ್ಲ.
ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ, ಲಿಂಗಾಯತ ಮೊದಲಾದ ಧರ್ಮಗಳು, ಹಿಂದೂ ಜೀವನ ಪದ್ಧತಿಯ ಪಂಥಗಳು ಎಲ್ಲವೂ ಇದೇ ರೀತಿಯಲ್ಲಿ ಸೊರಗಿವೆ. ತಮ್ಮ ಮೂಲ ಆಶಯವನ್ನು ಜೀವಂತವಾಗಿರಿಸಿಕೊಳ್ಳಲು ವಿಫಲವಾಗಿವೆ. ಆದರೆ ಇಲ್ಲಿ ನಾವು ವಿಚಾರ ಮಾಡಬೇಕಾದ ಅಂಶವೆಂದರೆ ಸೋತಿರುವುದು ಅಥವಾ ವಿಫಲವಾಗಿರುವುದು ಧರ್ಮ ಅಥವಾ ಧರ್ಮದ ಸ್ಥಾಪಕರು ಅಲ್ಲ. ಆಯಾ ಧರ್ಮಗಳ ಧಾರ್ಮಿಕರು.
ಸಾಮಾನ್ಯವಾಗಿ ಧರ್ಮಗಳಲ್ಲಿ ಆಶಯದ ಅನುಷ್ಠಾನಕ್ಕೆ ಅಗತ್ಯವಿರುವ ನೇಮ, ನಿಯಮಗಳನ್ನು ಸಂಪ್ರದಾಯಗಳನ್ನಾಗಿಸಿ, ಅವುಗಳನ್ನು ಉಳಿಸಿಕೊಳ್ಳಲು ಅವುಗಳ ಬಗ್ಗೆ ಭಯ ಮತ್ತು ಆಸೆಗಳನ್ನು ಹುಟ್ಟುಹಾಕುವುದು ಆ ಸಂಪ್ರದಾಯಸ್ಥ ಮನಸ್ಥಿತಿಗಳ ಕೆಲಸ. ಭಯ ಮತ್ತು ಆಸೆಗಳನ್ನು ಹುಟ್ಟು ಹಾಕಲು ಅವರು ಬಳಸುವ ತಂತ್ರವೇ ಕಥನಕಲೆ. ಸಾಮಾನ್ಯವಾಗಿ ಕಥನ ನಿರೂಪಣೆಗಳಿಗೆ ಸಾಮಾನ್ಯರ ಮನಸ್ಸುಗಳು ಸೋಲುತ್ತವೆ.
ಅದರಲ್ಲೂ ಆ ನಿರೂಪಣೆಗಳು ಭಾವನಾತ್ಮಕವಾಗಿ ನಾಟಕೀಯವಾಗಿ ಪ್ರಸ್ತುತವಾಗಿಬಿಟ್ಟರಂತೂ ಅವರು ಸಂಪೂರ್ಣ ಮರುಳಾಗಿಬಿಡುತ್ತಾರೆ. ತಮ್ಮದೇ ಬದುಕಿನ ಪ್ರತಿಫಲನದಂತೆ ಆರಂಭವಾಗುವ ಆ ಕಥೆಗಳು ಯಾರದ್ದೋ ಆಗಿರುತ್ತವೆ. ಆದರೆ ನೋವು, ಸಂಕಟ, ಕಷ್ಟಗಳ ಸಾಮ್ಯತೆ ಇರುತ್ತವೆ. ಆ ಕಥೆಗಳಲ್ಲಿ ಅದ್ಯಾವುದೋ ಮಾರ್ಗದಿಂದ ಆ ಕಷ್ಟ ನೋವುಗಳು ಪರಿಹಾರವಾಗುತ್ತವೆ. ಹಾಗಾಗಿ ತಾವೂ ಅಂತೆಯೇ ವ್ರತವನ್ನು ಮಾಡಬೇಕು ಎಂದು ಜನ ತಿಳಿಯುತ್ತಾರೆ. ವ್ರತ ಎಂದರೇನೇ ನೇಮ. ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸುವುದು. ಇದರಿಂದ ಸಾಂಪ್ರದಾಯಕ ಚೌಕಟ್ಟುಗಳು ಬಲಗೊಳ್ಳುತ್ತಾ ಬರುವವು.
ಹಾಗೆಂದು ನೇಮ ನಿಷ್ಟೆಗಳನ್ನು ನಕಾರಾತ್ಮಕವಾಗಿ ನೋಡುವ ಅಗತ್ಯವಿಲ್ಲ. ಯಾವುದೇ ಸಂದರ್ಭದಲ್ಲಿ ಕೇಡಿನೊಂದಿಗೆ, ಅಸತ್ಯದೊಂದಿಗೆ, ಪರಿಸ್ಥಿತಿಗೆ ಅನುಗುಣವಾಗಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೇ ತನ್ನ ಜೀವನ್ಮುಖಿ ಧೋರಣೆಯನ್ನು, ಸತ್ಯ ನಿಷ್ಟತೆಯನ್ನು, ನ್ಯಾಯಪರತೆಯನ್ನು ಕಾದುಕೊಳ್ಳುತ್ತಾ ಬರುವುದು ಕೂಡ ನೇಮವೇ. ಅದೇ ಇಲ್ಲಿ ನಾವು ಸ್ಪಷ್ಟತೆಯನ್ನು ಕಂಡುಕೊಳ್ಳಬೇಕಾಗಿರುವುದು. ಯಾವ ನೇಮವನ್ನು ಮಾಡಿಕೊಂಡಿದ್ದೇವೆ.
ಅದರ ಆಶಯವೇನು? ಅದು ಯಾವ ಪರವಾಗಿದೆ? ಅದು ವಿಶಾಲಾರ್ಥದಲ್ಲಿ ಸಮಾಜಮುಖಿಯಾಗಿದೆಯೋ,ಜೀವನ್ಮುಖಿಯಾಗಿದೆಯೋ, ಜೀವಪರವಾಗಿದೆಯೋ, ತಮ್ಮದೇ ಪಂಥದ ಪ್ರತಿಷ್ಠೆ ಅಥವಾ ಅಹಂಭಾವದ ಧೋರಣೆಯಾಗಿದೆಯೋ, ಶ್ರೇಷ್ಟತೆಯ ವ್ಯಸನದಿಂದ ಕೂಡಿದೆಯೋ; ಇಂಥವನ್ನೆಲ್ಲಾ ತಿಳಿಯಬೇಕಾದರೆ ಒಬ್ಬಾತನಿಗೆ ವ್ಯಕ್ತಿಗತವಾಗಿ ಪರಾಮರ್ಶೆ ಮಾಡಿಕೊಳ್ಳುವ ಗುಣವಿರಬೇಕು. ತಾನೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಆತ್ಮವಿಶ್ವಾಸದಿಂದ ಕೂಡಿರುವ ಧೈರ್ಯವಿರಬೇಕು.
ತನ್ನ ಒಲವು, ನಿಲುವುಗಳಲ್ಲಿ ಸ್ಪಷ್ಟತೆ ಇದ್ದ ಪಕ್ಷದಲ್ಲಿ ಯಾವುದೇ ಧರ್ಮ, ಮತ ಅಥವಾ ಪಂಥದಲ್ಲಿದ್ದರೂ ಅದರ ಕೆಲವು ಅಂಶಗಳನ್ನು ಒಪ್ಪುವ ಅಥವಾ ನಿರಾಕರಿಸುವ, ಕೆಲವನ್ನು ಅಚ್ಚುಕಟ್ಟಾಗಿ ಪಾಲಿಸುವ ಅಥವಾ ತಿರಸ್ಕರಿಸುವ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾನೆ. ಅಲ್ಲದೇ ತನ್ನ ಧೋರಣೆ ಮತ್ತು ಆಶಯದ ಬಗ್ಗೆ ಸ್ಪಷ್ಟತೆಯನ್ನು ತಳೆದಿರುವ ಕಾರಣ ಕಾಳು ಹೊಟ್ಟುಗಳನ್ನು ಬೇರ್ಪಡಿಸುವ, ಅಗತ್ಯ ಮತ್ತು ಅನಗತ್ಯಗಳನ್ನು ಸ್ಪಷ್ಟವಾಗಿ ನೋಡುವಂತಹ ದೃಷ್ಟಿಯನ್ನು ಹೊಂದಿರುತ್ತಾರೆ.
ಇದರಿಂದಾಗಿಯೇ ಸ್ಥಾಪಿತ ಧರ್ಮಗಳಲ್ಲಿದ್ದು, ಅದೇ ಧರ್ಮದ ನೇಮ ನಿಷ್ಟೆ ಶ್ರದ್ಧೆಗಳನ್ನು ಹೊಂದಿದ್ದರೂ ಅವರು ಕ್ರಾಂತಿಕಾರಿಗಳಂತೆ ಕಾಣುತ್ತಾರೆ. ಏಕೆಂದರೆ ಬರಿಯ ಸಾಂಪ್ರದಾಯಿಕ ಮನಸ್ಥಿತಿಗಳ ಸಮೂಹವು ನಡೆದುಕೊಳ್ಳುವುದಕ್ಕಿಂದ ಭಿನ್ನವಾಗಿ ಇವರು ಕಾಣುತ್ತಾರೆ. ಅವರನ್ನು ಒಪ್ಪಬಹುದು, ನಿರಾಕರಿಸಬಹುದು, ನಿವಾರಿಸಿಯೇಬಿಡಬಹುದು. ಅದು ಸಾಂಪ್ರದಾಯಕ ಮನಸ್ಥಿತಿಯವರ ರೋಗಗ್ರಸ್ಥದ ಗಾಢತೆ ಮತ್ತು ಪ್ರಭಾವಗಳ ಮೇಲೆ ಆಧಾರಿತವಾಗಿರುತ್ತದೆ.
ಸ್ಪಷ್ಟವಾಗಿ ನಮಗೆ ಎಲ್ಲಾ ಧರ್ಮಗಳಲ್ಲೂ ಕಾಣಬರುವುದೇನೆಂದರೆ ಅದೇ ಧರ್ಮದ ನೇಮವನ್ನು ಆಚರಿಸುತ್ತಲೇ ಅದೇ ಧರ್ಮದ ಸಾಂಪ್ರದಾಯಿಕ ಧೋರಣೆಗಳ ಬಗ್ಗೆ ಧ್ವನಿ ಎತ್ತಿರುವಂತಹದ್ದು. ಆದರೆ ಇವರ ಸಂಖ್ಯೆ ಬಹಳ ಕಡಿಮೆ. ಕೆಲವೊಮ್ಮೆ ಇಲ್ಲವೇ ಇಲ್ಲ ಎಂದೆನಿಸುವಷ್ಟೂ ಕಡಿಮೆ. ಸ್ವರ್ಗ ನರಕಗಳ ಜನಕರು ಸಂಪ್ರದಾಯವಾದಿಗಳು ಮೂಲಭೂತ ಆಶಯವನ್ನು ಉಳಿಸಿಕೊಳ್ಳಲು ಹಾಕಿಕೊಟ್ಟಿರುವ ಮಾರ್ಗವನ್ನು ಬಿಡಲೇಬಾರದೆಂಬಂತಹ ವಿಚಾರಕ್ಕೆ ಬದ್ಧರಾಗಿರುವ ಕಾರಣದಿಂದ ಸಂಪ್ರದಾಯಕ್ಕೆ ಶರಣು ಹೋಗುವುದು. ಇತರರನ್ನು ಅದರ ತೆಕ್ಕೆಯಲ್ಲಿ ಸೆಳೆಯಲು ಅಥವಾ ಈಗಾಗಲೇ ಇರುವವರು ಬಿಟ್ಟು ಹೋಗದಿರಲು ಸ್ವರ್ಗದ ಗಳಿಕೆ ಮತ್ತು ನರಕದ ಭೀತಿಯನ್ನು ಇಟ್ಟಿರುವರು.
ಕನ್ನಡದ ನಾಗರಹೊಳೆ ಚಿತ್ರದಲ್ಲಿ “ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೆ ಇಲ್ಲ ಸುಳ್ಳು. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು” ಎಂಬ ಹಾಡು ಬಹಳ ಜನಪ್ರಿಯ. ಈ ಸ್ವರ್ಗ ಮತ್ತು ನರಕ ಸುಳ್ಳು ಎಂಬ ಧೋರಣೆ ತಳೆಯುವಂತಹ ಇಂತಹದ್ದೊಂದು ವಿಚಾರ ಬರಲು ಬಹಳಷ್ಟು ಕಾಲ ಬೇಕಾಯ್ತು. ಈಗ, ಈ ಕಾಲಘಟ್ಟದಲ್ಲಂತೂ ಸ್ವರ್ಗ ಮತ್ತು ನರಕದ ಭಯ ಬಹುತೇಕ ಯಾರಿಗೂ ಇಲ್ಲ. ಈಗ ಮಾಡಿದ್ದು ಈಗಲೇ ಎಂಬ ಮನಸ್ಥಿತಿಗೆ ತಲುಪಿಯಾಗಿದೆ. ಮರಣಾನಂತರದ ಜೀವನದಲ್ಲಿ, ದೇವರ ಸಾಮ್ರಾಜ್ಯದಲ್ಲಿ ಎಂದೇನೆಲ್ಲಾ ಯಾರಾದರೂ ಸತ್ತಾಗ ಹೇಳಬಹುದು.
ಅದು ಬರಿಯ ಆಗಿನ ನಂಬಿಕೆಯ ಉಳಿಕೆಯ ಮಾತಾಗಿದೆಯೇ ಹೊರತು ಯಾರಿಗೂ ಅದರ ಮೇಲೆ ಗಾಢವಾದ ನಂಬಿಕೆಯೇನೂ ಅಷ್ಟಿಲ್ಲ. ಕನಿಷ್ಟಪಕ್ಷ ಸಂಖ್ಯಾವಾರು ದೃಷ್ಟಿಯಿಂದಾದರೂ ಈ ಹಿಂದೆಲ್ಲಾ ಇರುವಷ್ಟು ಪ್ರಮಾಣದಲ್ಲಿ ಖಂಡಿತ ಇಲ್ಲ. ಆದರೆ, ಕಾಯುವ, ಮುನಿಯುವ ದೇವರ ಕಲ್ಪನೆ ಮಾತ್ರ ಜೀವಂತವಾಗಿದೆ. ಅದೂ ನಾವು ಮಾಡುವ ಭಕ್ತಿ ಅಥವಾ ದೇವರಿಗೆ ವಿಮುಖವಾಗಿ ಮಾಡುವಂತಹ ಕೆಲಸ “ದೋಸೆ ಮುಗುಚಿ ಹಾಕಿದಂತೆ” ಈಗಲೇ, ಈ ಒಂದು ಜನ್ಮದಲ್ಲೇ ಅನುಭವಕ್ಕೆ ಬರುತ್ತದೆ ಎಂಬ ನಂಬಿಕೆ ಗಾಢವಾಗಿದೆ. ಇದು ನೇರ ಕರ್ಮ ಸಿದ್ಧಾಂತದ ಪ್ರಭಾವ.
ಕರ್ಮ ಸಿದ್ಧಾಂತದ ಬೇರು
ಕರ್ಮ ಸಿದ್ಧಾಂತವು ಭಾರತದ ಕೊಡುಗೆ ಎಂದು ಬಹಳಷ್ಟು ವಿದ್ವಾಂಸರು ಹೇಳುವುದುಂಟು, ಹಾಗೆಯೇ ಸಾಮಾನ್ಯರಲ್ಲಿ ಒಂದು ನಂಬುಗೆ ಉಂಟು. ಆದರೆ ಹಾಗೇನೂ ಇಲ್ಲ. ಕರ್ಮ ಸಿದ್ಧಾಂತದ ಬೇರು ಪ್ರಪಂಚದ ಶ್ರದ್ಧಾಕ್ಷೇತ್ರದ ಮೂಲೆ ಮೂಲೆಯಲ್ಲಿದೆ. ಎಲ್ಲಾ ಧಾರ್ಮಿಕತೆಗಳಲ್ಲೂ, ಸಂಸ್ಕೃತಿ, ಆಧ್ಯಾತ್ಮಿಕತೆಗಳಲ್ಲೂ ಕರ್ಮ ಸಿದ್ಧಾಂತವು ಒಂದಿಲ್ಲೊಂದು ರೀತಿಯಲ್ಲಿ ನುಸುಳಿಕೊಂಡಿವೆ. ಆದರೆ ಈ ಕರ್ಮ ಸಿದ್ಧಾಂತದ ಮೂಲವನ್ನು ಮನಸ್ಸಿನ ಮೂಲದೊಂದಿಗೆ ಗುರುತಿಸಿದವನು ಮತ್ತು ಸಮೀಕರಿಸಿದವನು ಬುದ್ಧ.
ಭಗವತ್ಗೀತೆಯ ಕರ್ಮಯೋಗದಲ್ಲಿ ಮತ್ತು ಇತರ ಅಧ್ಯಾಯಗಳಲ್ಲಿ ಕರ್ಮಸಿದ್ಧಾಂತವನ್ನು ಬಹಳ ಸೂಕ್ಷ್ಮವಾಗಿ ಮತ್ತು ಯೋಗ್ಯವಾಗಿ, ಕೆಲವೊಮ್ಮೆ ಆಗ್ರಹಕ್ಕೊಳಗಾಗಿ ಚಿತ್ರಿಸಿದ್ದಾರೆ. ಅವು ನಿಜಕ್ಕೂ ಅಧ್ಯಯನ ಯೋಗ್ಯ. ಅದರಿಂದ ನಮ್ಮ ಪೂರ್ವಿಕರ ಒಲವು ನಿಲುವುಗಳು ಹಾಗೂ ಗೀತೆಯನ್ನು ತಮ್ಮ ಬಳಕೆಗೆ ತಂದುಕೊಳ್ಳುವಂತಹ ಮನಸ್ಥಿತಿಯವರ ಗುಪ್ತ ಆಶಯ ಅಥವಾ ಗೀಳುಗಳೂ ನಮಗೆ ಅರಿವಾಗುತ್ತಾ ಹೋಗುತ್ತದೆ. ಅಂತಹ ಅರಿವಿಗೆ ತೆರೆದುಕೊಳ್ಳುವುದರಿಂದಲೇ ಮಾರ್ಗಕ್ಕೆ ಸ್ಪಷ್ಟತೆಯೂ, ಗಮ್ಯಕ್ಕೆ ನಿಖರತೆಯೂ ಲಭ್ಯವಾಗುತ್ತದೆ.
ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ ಸ್ವರ್ಗ ನರಕಗಳ ಪರಿಕಲ್ಪನೆ ಮತ್ತು ನರಕದಲ್ಲಿ ಇರುವಂತಹ ಒಂದು ಕೆಟ್ಟದಾದ ನದಿಯ ಪರಿಕಲ್ಪನೆಯು ವಿಶ್ವದ ಬಹುಪಾಲು ಎಲ್ಲಾ ಸಂಸ್ಕೃತಿಗಳಲ್ಲಿ ಇರುವುದು. ಹಾಗೆಯೇ ಬಹುಪಾಲು ಪ್ರಾಚೀನ ಧಾರ್ಮಿಕ ಅಥವಾ ಆಧ್ಯಾತ್ಮಿಕ ಸಿದ್ಧಾಂತಗಳಲ್ಲಿ ಮತ್ತು ಪೌರಾಣಿಕ ನಿರೂಪಣೆಗಳಲ್ಲಿ ಜಗತ್ತಿನ ಸೃಷ್ಟಿ ಮತ್ತು ಪ್ರಳಯಗಳ ಬಗ್ಗೆ ಜಿಜ್ಞಾಸೆಗಳಿವೆ. ಅಂದರೆ ಎಲ್ಲರೂ ಒಂದು ಉತ್ಪತ್ತಿ ಮತ್ತು ನಾಶದ ಬಗ್ಗೆ ಅವಧಾನವನ್ನು ಹೊಂದಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಹೆಚ್ಚಿನ ಮಟ್ಟದ ಗಮನ ನೀಡುವ ಅಭಿಲಾಷೆಯನ್ನು ಹೊಂದಿದ್ದರು.
ಅದರಿಂದಾಗಿಯೇ ತಮ್ಮ ಕಣ್ಣಿಗೆ ಕಾಣುವ ಜೀವ ಸೃಷ್ಟಿಯ ಹಿಂದಿನದುರ ಬಗ್ಗೆ ಮತ್ತು ಜೀವ ನಾಶದ ನಂತರದ ಬಗ್ಗೆ ಅತೀವ ಆಸಕ್ತಿಯನ್ನೂ ಹೊಂದಿದ್ದಲ್ಲದೇ, ಅವರ ಕಾಲಘಟ್ಟದ ದಾರ್ಶನಿಕರು, ಬುದ್ಧಿವಂತರು, ಸೂಕ್ಷ್ಮವಿಚಾರವಾದಿಗಳು ಹೇಳುವುದನ್ನು ಶ್ರದ್ಧಾ ಭಕ್ತಿಗಳಿಂದ ಕೇಳಿದ್ದೇ ಅಲ್ಲದೇ ಒಪ್ಪಿರುತ್ತಿದ್ದರು.
ಜಡ್ಜ್ಮೆಂಟ್ ಡೇ ಸ್ಪಷ್ಟವಾಗಿ ದಾಖಲಾಗಿರುವ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ತೀರ್ಮಾನದ ದಿನ (ಜಡ್ಜ್ಮೆಂಟ್ ಡೇ) ಎಂಬುದು ಜಗತ್ತಿಗೂ ಇರುತ್ತದೆ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆ ಜಡ್ಜ್ಮೆಂಟ್ ಅವಧಿ ಬಂದಿರುತ್ತದೆ. ಅದೇ ಅವನ ಪಾಪ ಪುಣ್ಯಗಳ ವಿಚಾರಣಾ ದಿನವೂ ಹೌದು.
ಅವನು ಮಾಡಿರುವ ಪಾಪ ಪುಣ್ಯಗಳ ಅನುಸಾರವಾಗಿ ಅವನು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವನು. ಹಾಗೆಯೇ ಎರಡನ್ನೂ ತೂಕ ಮಾಡಿ ನೋಡಲು ಮಾಡಿರುವ ಪಾಪಕ್ಕಿಂತ ಪುಣ್ಯವೇ ಹೆಚ್ಚಾಗಿದ್ದ ಪಕ್ಷದಲ್ಲಿ ಸ್ವರ್ಗಕ್ಕೆ ಹೋಗುವನು. ಕೆಲವೊಮ್ಮೆ ಮಾಡಿರುವ ಪಾಪಕ್ಕೆ ಶಿಕ್ಷೆ ಅನುಭವಿಸುವಂತೆ ಮಾಡಿ, ಆ ಪಾಪಕರ್ಮದ ಫಲವನ್ನು ಕಳೆದುಕೊಂಡು ಸ್ವರ್ಗಕ್ಕೆ ಕಳುಹಿಸಲಾಗುವುದು. ಕೆಲವೊಮ್ಮೆ ಮಾಡಿದ ಪಾಪಗಳನ್ನೆಲ್ಲಾ ಒಮ್ಮಿಂದೊಮ್ಮೆಲೇ ಶುದ್ಧಗೊಳಿಸಿ, ಆತ್ಮವನ್ನು ಶುದ್ಧಾತ್ಮವನ್ನಾಗಿಸಿ ಏಕ್ದಂ ಸ್ವರ್ಗಕ್ಕೆ ಕಳುಹಿಸುವಂತಹ ಕೆಲವು ಸೂಕ್ಷ್ಮ ತಂತ್ರಗಾರಿಕೆಗಳು ಉಂಟು. ಅವೇನೇ ಇರಲಿ.
ಈ ಪಾಪ ಪುಣ್ಯ ಮತ್ತು ಸ್ವರ್ಗ ನರಕಗಳ ಪರಿಕಲ್ಪನೆಯು ಮನುಷ್ಯನನ್ನು ಅತ್ಯಂತ ಸುದೀರ್ಘ ಕಾಲ, ಸಾವಿರಾರು ವರ್ಷಗಳ ಕಾಲ ಆಳಿದೆ ಎಂಬುದು ಸುಳ್ಳಲ್ಲ. ಈ ಪರಿಕಲ್ಪನೆಗಳನ್ನು ಒಮ್ಮಿಂದೊಮ್ಮೆಲೇ ಸುಳ್ಳು ಎಂದು ತಳ್ಳಿ ಹಾಕಿಬಿಡುವುದರಿಂದ ಸಮಸ್ಯೆಯೇ ಇಲ್ಲ, ಕೆಲಸವೇ ಇಲ್ಲ. ಆದರೆ, ಇಂತಹದ್ದೊಂದು ಸುಳ್ಳು ಏಕಾಗಿ ಮತ್ತು ಹೇಗೆ ಇಷ್ಟೂ ಕಾಲ, ಅಷ್ಟು ವ್ಯಾಪಕವಾಗಿ ಸಮೂಹಗಳಲ್ಲಿ ಜೀವಂತವಾಗಿತ್ತು, ಅವರನ್ನು ಆಳುತ್ತಿತ್ತು, ಅವರ ಮನಸ್ಸುಗಳನ್ನು, ಬದುಕುಗಳನ್ನು, ಶಕ್ತಿಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿತ್ತು ಎಂದು ವಿಚಾರಿಸಲು ಹೋದರೆ ಬಹಳ ಸೂಕ್ಷ್ಮವಾದ ವಿಷಯಗಳು ಅನಾವರಣಗೊಳ್ಳುತ್ತಾ ಹೋಗುವವು.
ಅದೇನೇ ಆಗಲಿ, ಒಬ್ಬ ವ್ಯಕ್ತಿಯ ಜೀವನಾವಧಿಯಲ್ಲಿ ವಿಕಾಸದ ಘಟ್ಟಗಳನ್ನು ಗುರುತಿಸಿಕೊಳ್ಳುತ್ತಾ, ಹಿಂದಕ್ಕೆ ನಡೆಯುತ್ತಾ ಭೂತದಲ್ಲಿ ಆದ ಪ್ರಭಾವಗಳನ್ನು ಗುರುತಿಸುವಷ್ಟೇ ಸುಂದರವಾದ ಮತ್ತು ಅಗತ್ಯವಾದ ಕೆಲಸ ಇದಾಗಿರುತ್ತದೆ. ಸ್ವರ್ಗ ಮತ್ತು ನರಕಗಳ ಪರಿಕಲ್ಪನೆಗಳನ್ನು ಉಪಚರಿಸಿದ ಬಗೆಗಳಲ್ಲಿ ನಾನಾ ರೀತಿಗಳಿವೆ. ಆದರೆ ಪ್ರಾಚೀನ ಸಮಾಜಗಳು ಅವನ್ನು ಸ್ವೀಕರಿಸಿದ್ದವು. ಅವನ್ನು ಗ್ರಹಿಸುತ್ತಿದ್ದ ರೀತಿಗಳಲ್ಲಿ ಮತ್ತು ಪರಿಗಣಿಸುತ್ತಿದ್ದ ಮತಿಗಳಲ್ಲಿ ವೈರುಧ್ಯತೆಗಳಿರುತ್ತಿದ್ದವು.
ನಾನು ಸಣ್ಣವನಿರುವಾಗ ಅನೇಕ ವಿಷಯಗಳನ್ನು ಕೇಳುತ್ತಿದ್ದೆ. “ಯಾರಾದರೂ ಸತ್ತಾಗ ಅತಿಯಾಗಿ ಅಳಬಾರದು. ನಮ್ಮೆಲ್ಲರ ಕಣ್ಣೀರು ಸತ್ತವರ ಸ್ವರ್ಗಾವರೋಹಣಕ್ಕೆ ಪ್ರವಾಹವಾಗಿ ಅಡ್ಡ ಬಂದು ತೊಡಕಾಗುವುದು.”
“ವಿಚಾರಣಾ ಸ್ಥಳದಿಂದ (ಯಮಲೋಕ) ಸ್ವರ್ಗಕ್ಕೆ ಹೋಗುವ ದಾರಿ ಬಹಳ ಸೂಕ್ಷ್ಮ. ಬೆಕ್ಕು ಅದನ್ನು ಕಡಿದು ಹಾಕಿದರೆ, ನಾಯಿಯು ತನ್ನ ಬಾಲದಿಂದ ದಾರಿಯು ತುಂಡಾಗದಂತೆ ಅಥವಾ ನಡೆಯುವಿಕೆಗೆ ತೊಡಕಾಗದಂತೆ ನೋಡಿಕೊಳ್ಳುತ್ತದೆ.”
“ಸತ್ತಮೇಲೆ ಮಾಡುವ ಸರಿಯಾದ ಸಂಸ್ಕಾರದಿಂದ, ಅವರ ಹೆಸರಿನಲ್ಲಿ ಮಾಡುವ ದಾನ ಧರ್ಮಗಳ ಪುಣ್ಯ ಸಂಚಯದಿಂದ ವಿಚಾರಣೆಯಲ್ಲಿರುವ ಮೃತವ್ಯಕ್ತಿಯ ಖಾತೆಗೆ ಪುಣ್ಯವು ಜಮಾಆಗಿ ಅವನು ಸ್ವರ್ಗಕ್ಕೆ ಹೋಗುವಂತಹ ಅರ್ಹತೆಗಳನ್ನು ಪಡೆಯುತ್ತಾನೆ.”
“ದೇವಸ್ಥಾನದಲ್ಲಿ ದೇವರ ದುಡ್ಡನ್ನು ಕದಿಯುವವನು, ದೈವೀಕಾರ್ಯದಲ್ಲಿ ವಂಚಿಸಿ ಧನ ಸಂಗ್ರಹ ಮಾಡುವವನು ಮುಂದಿನ ಜನ್ಮದಲ್ಲಿ ನಾಯಿಯಾಗುತ್ತಾನೆ.” (ನಾನು ಸಣ್ಣವನಿದ್ದಾಗ ಇದನ್ನು ತಿಳಿದ ಮೇಲೆ ಬಹಳ ಗಂಭೀರವಾಗಿ ನಂಬಿದ್ದೇ ಅಲ್ಲದೇ ಎದುರಾಗುವ ಪ್ರತಿ ನಾಯಿಗೂ ಯಾವ ದೇವಸ್ಥಾನದ ಪೂಜಾರಿಯಾಗಿದ್ದೆ? ಯಾವ ದೇವರ ಅರ್ಚಕನಾಗಿದ್ದೆ? ಎಂದು ವಿಚಾರಿಸುತ್ತಿದ್ದೆ.)
“ಕಬ್ಬಿಣವನ್ನು ಕದ್ದವನು ಮುಂದಿನ ಜನ್ಮದಲ್ಲಿ ಬಿಳಿಯ ಮಚ್ಚೆಗಳನ್ನು ಹೊಂದಿರುವಂತಹ ತೊನ್ನಿನ ರೋಗವನ್ನು ಪಡೆಯುತ್ತಾನೆ.” ಇತ್ಯಾದಿ. ಈ ಬಗೆಯ ಮಾತುಗಳೆಲ್ಲದರ ಹಿಂದೆ ಕಾರಣಗಳಿವೆ, ಪ್ರಭಾವಗಳಿವೆ ಮತ್ತು ಉದ್ದೇಶಗಳೂ ಸ್ಪಷ್ಟವಾಗಿವೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243