ಅಂತರಂಗ

ಅರಿಮೆಯ ಅರಿವಿರಲಿ-13 : ಸಹವಾಸಿ ಉಪವಾಸಿ

Published

on

  • ಯೋಗೇಶ್ ಮಾಸ್ಟರ್

ತಂದೆ ಮಗಳನ್ನು ಒಬ್ಬಳೇ ಎಲ್ಲಿಗೂ ಹೋಗಲು ಬಿಡರು. ಎಲ್ಲಿಂದಾದರೂ ಇನ್ನೂ ಬಂದಿಲ್ಲವೆಂದರೆ ಫೋನಿನ ಮೇಲೆ ಫೋನ್ ಮಾಡುತ್ತಲೇ ಕೇಳುವರು. ಎಲ್ಲಿದ್ದೀಯಾ? ಏನು ಮಾಡ್ತಿದ್ದೀಯಾ? ಹುಷಾರಾಗಿದ್ದೀಯಾ ತಾನೇ? ನಾನೇನಾದರೂ ಅಲ್ಲಿಗೆ ಬರಬೇಕಾ? ಅಲ್ಲಿಯೇ ಯಾರಿಗಾದರೂ ಫೋನ್ ಮಾಡ್ಲಾ?; ಇತ್ಯಾದಿ. “ಇಲ್ಲಪ್ಪಾ ಬರ್ತಿದ್ದೀನಿ. ಇನ್ನು ಒಂದರ್ಧ ಗಂಟೆ” ಎಂದು ಮಗಳು ಹೇಳಿದರೆ, ಸರಿಯಾಗಿ ಅರ್ಧಗಂಟೆಗೆ ಫೋನ್ ಮಾಡುತ್ತಾರೆ “ಎಲ್ಲಿದ್ದೀಯಾ?” ಅಂತ.

“ಇತ್ತೀಚೆಗೆ ನೀನು ಸೊರಗ್ತಾ ಇದ್ದೀಯಾ. ಕಣ್ತುಂಬ ನಿದ್ರೆ ಮಾಡಲ್ಲ. ಹೊಟ್ಟೆ ತುಂಬಾ ಊಟ ಮಾಡಲ್ಲ” ಎಂದು ರಾತ್ರಿ ಎಚ್ಚರವಿರುವ ಮಗಳನ್ನು ಪದೇ ಪದೇ ಮಲಗಿಸಲು ಯತ್ನಿಸುವ, ಊಟದ ಸಮಯಕ್ಕೆ ಸರಿಯಾಗಿ ಮತ್ತೆ ಮತ್ತೆ ಊಟ ಮಾಡೆಂದು ನೆನಪಿಸುವ, ಇಷ್ಟು ಸಾಲದು ಮತ್ತಷ್ಟು ತಿನ್ನು ಎಂದು ಬಲವಂತ ಮಾಡುವ ತಂದೆ ತಾಯಿ ಅಥವಾ ಇನ್ನಿತರು ಯಾರೇ ಆಗಲಿ, ಅವರು ಕಾಳಜಿ ವಹಿಸುತ್ತಿದ್ದೇವೆ ಎಂದುಕೊಂಡಿದ್ದರೂ ಆ ಬಗೆಯ ಪೋಷಣೆ ಪಡೆಯುತ್ತಿರುವವರಿಗೆ ತಾವು ಶೋಷಣೆಗೆ ಒಳಗಾಗಿದ್ದೇವೆ ಎಂಬಂತೆ ಕಷ್ಟಪಡುತ್ತಿರುತ್ತಾರೆ. ತಾವು ಅವರ ಅತಿಕಾಳಜಿಯ ಬಂಧನದಲ್ಲಿ ಇದ್ದೇವೆ ಎಂದು ಭಾಸವಾಗುತ್ತಿರುತ್ತದೆ.

ಪ್ರತಿಯೊಂದಕ್ಕೆ ಕಾಳಜಿ ವಹಿಸುತ್ತಿರುವ ಭಾವ ಅವರಲ್ಲಿ. ಪ್ರತಿಯೊಂದಕ್ಕೂ ಮೂಗು ತೂರಿಸುತ್ತಾರೆ ಎಂಬ ಭಾವ ಇವರಲ್ಲಿ. ನನ್ನ ಪಾಡಿಗೆ ನನ್ನ ಬಿಡು. ನಾನು ಮಾಡಿಕೊಳ್ಳುತ್ತೇನೆ ಎಂದರೂ ಬಿಡದೇ ನಿನಗೆ ಗೊತ್ತಾಗಲ್ಲ ಎನ್ನುವ ಅವರಿಂದ ತಮ್ಮ ಸ್ವಾತಂತ್ರ್ಯದ ಹರಣವಾಗುತ್ತಿದೆ, ಮುಕ್ತವಾಗಿ ಉಸಿರಾಡಲೂ ಆಗದು ಎಂದು ಇವರು ಚಡಪಡಿಸುತ್ತಿರುತ್ತಾರೆ. ಬಹಳ ಮುಖ್ಯವಾಗಿ ಅವರ ಸಂಬಂಧವು ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ಸಾಲದಕ್ಕೆ ಇದನ್ನು ದೂರಲೂ ಆಗದು. ಏಕೆಂದರೆ ನೋಡುಗರ ಕಣ್ಣಿಗೆ ಇತು ಕಾಳಜಿ ಮತ್ತು ತಮ್ಮವರ ಸುರಕ್ಷತೆಯ ಬಗ್ಗೆ ಇರುವ ಆತಂಕವಾಗಿಯಷ್ಟೇ ಕಾಣುತ್ತದೆ. ಮಕ್ಕಳಿದ್ದಾಗಲೇ ಕೆಲವು ಪೋಷಕರು ಇದನ್ನು ರೂಢಿಸಿಕೊಂಡುಬಿಟ್ಟಿರುತ್ತಾರೆ. ಅದರಲ್ಲೂ ಕೆಲವು ಒಂಟಿ ಪೋಷಕರಲ್ಲಿ ಈ ಮನಸ್ಥಿತಿ ಹೆಚ್ಚು.

“ನನಗಿರುವುದು ನೀನಷ್ಟೇ. ನಿನಗೇನಾದರೂ ಹೆಚ್ಚೂ ಕಡಿಮೆಯಾದರೆ ಆದರೆ ನಾನು ಎಲ್ಲಿಗೆ ಹೋಗಲಿ?” ಎನ್ನುತ್ತಾರೆ. ಇಲ್ಲಿಗೆ ಬಂತು ವಿಷಯ. ಅಂದರೆ ನಿನ್ನ ಮೇಲಿನ ಅತಿಕಾಳಜಿಯು ತನ್ನಾತ್ಮದ ಭಯಕ್ಕೆ. ತಾನೆಲ್ಲಿ ಒಂಟಿಯಾಗುವೆನೋ ಎಂಬ ಆತಂಕಕ್ಕೆ. ಇದಕ್ಕೆ      Codependency ಎನ್ನುತ್ತಾರೆ. ಸಹಾವಲಂಬನ ಎಂದು ಪದವನ್ನೊಂದನ್ನು ಬಳಸಿಕೊಳ್ಳಬಹುದು.

ಸಹಾವಲಂಬನಕ್ಕೆ ಸಮಾಜದ ಸಹಮತ

ಸಹಾವಲಂಬನವೂ ಕೂಡಾ ಆತ್ಮರತಿಯ ಮತ್ತೊಂದು ಮಗ್ಗುಲೇ. ತಮ್ಮ ಮಿತಿಮೀರುವ ಅಥವಾ ಅತಿ ಎನಿಸುವ ಕಾಳಜಿಯಿಂದ ಅವರಿಗೆ ಕಿರಿಕಿರಿಯಾಗುತ್ತಿದೆ ಅಥವಾ ಒತ್ತಡವುಂಟಾಗುತ್ತಿದೆ ಅಥವಾ ಸ್ವಾತಂತ್ರ್ಯಹರಣವಾಗುತ್ತಿದೆ ಎಂದೇನೂ ಆಲೋಚಿಸುವುದೇ ಇಲ್ಲ. ಸಮಾಜವೂ ಕೂಡಾ ಇದಕ್ಕೆ ವಿರೋಧಿಸದು. ಒಂಟಿ ತಾಯೊಬ್ಬಳು ತನ್ನ ಮಗನ ಮೇಲೆ ಅತೀವ ಕಾಳಜಿ ತೋರುವಾಗ, ಅದು ಸಹಜ ಎನ್ನುತ್ತದೆ ಸಮಾಜ. ಮಗನು ತನ್ನ ಸ್ವಾತಂತ್ರ್ಯಕ್ಕೆ, ನನ್ನ ಆಸಕ್ತಿಯ ಚಟುವಟಿಕೆಗಳಿಗೆ ನಮ್ಮಮ್ಮನ ಈ ಸಹಾವಲಂಬನ ತೊಂದರೆಯಾಗುತ್ತಿದೆ ಎಂದರೆ, “ಪಾಪ ನಿನ್ನ ತಾಯಿ ನಿನಗಾಗಿ ಎಷ್ಟು ಕಷ್ಟಪಡುತ್ತಿದ್ದಾಳೆ. ಅವಳಿಗೆ ನೀನಲ್ಲದೇ ಇನ್ನಾರು? ನಿನಗಾಗಿ ಅವಳು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾಳೆ. ನಿನಗಾಗಿ ಬೇರೆ ಮದುವೆಯಾಗದೇ ತನ್ನ ಸುಖವನ್ನು ತ್ಯಾಗ ಮಾಡಿದ್ದಾಳೆ. ನೀನು ಅವಳ ತ್ಯಾಗಕ್ಕೆ ಬೆಲೆ ಕೊಡಬೇಕು. ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವಳು ಒಂದು ವೇಳೆ ನಿನಗೆ ತೊಂದರೆ ಕೊಟ್ಟರೂ ಸಹಿಸಿಕೊಳ್ಳಬೇಕು. ಅಂತದ್ದರಲ್ಲಿ, ಅವಳು ಕಾಳಜಿ ತೋರಿಸುವುದು ನಿನಗೆ ಹಿಂಸೆ ಎನ್ನುತ್ತೀಯಲ್ಲಾ? ಮಗು ಹುಟ್ಟಿದಾಗಲೇ ತೊಟ್ಟಿಗೆ ಬಿಟ್ಟು ಓಡಿಹೋಗಿ ಅನಾಥರಾಗಿರುವ ಜನರಿದ್ದಾರೆ ಈ ಲೋಕದಲ್ಲಿ….” ಹೀಗೆ, ಒಂದೆರಡಲ್ಲ,

ಸಾಲುಸಾಲಾಗಿ ತಾಯಿ ದೇವರ ಸ್ತುತಿಗೀತೆಗಳನ್ನು ಸಮಾಜವು ಸಮೂಹಗಾನದಲ್ಲಿ ಹಾಡುತ್ತಿರುತ್ತದೆ.
ತ್ಯಾಗ! ಯಾರು ಕೇಳಿದರು ಅವಳು ಮಾಡುವುದಕ್ಕೆ? ಇದು ಅವನ ಮನಸ್ಸಿನಲ್ಲಿ ಬರುವ ಪ್ರಶ್ನೆ. ಅವನಿಗೆ ಅನ್ನಿಸುವುದೇನೆಂದರೆ, ಒಂದು ವೇಳೆ ತಾನು ಅನಾಥನಾಗಿದ್ದರೇನೇ ಚೆನ್ನಾಗಿರುತ್ತಿತ್ತು. ಅದೊಂದು ಮುಕ್ತ ಮತ್ತು ಸ್ವಚ್ಛಂದ ಜೀವನ. ದಿನದಿನಕ್ಕೂ ಥ್ರಿಲ್ ಕೊಡುವ ಸಾಹಸದ ಬದುಕು. ಸ್ವತಂತ್ರವಾಗಿ ಯಾರ ಬಂಧನವೂ ಇಲ್ಲದೇ ಇರಬಹುದಾಗಿತ್ತು ಎಂದು ಈ ಸಂದರ್ಭಕ್ಕೆ ಅನ್ನಿಸುತ್ತದೆ.

ಒಂದು ವೇಳೆ ಅನಾಥನಾಗಿದ್ದರೆ ತಂದೆ ತಾಯಿ ಇರುವ ಮಗುವನ್ನು ನೋಡಿ ತನಗೆ ಹಾಗಿರಬೇಕಿತ್ತು, ಕನಿಷ್ಟಪಕ್ಷ ಒಂಟಿ ಪೋಷಕರಾದರೂ ಇರಬೇಕಿತ್ತು ಎಂದು ಅನಿಸಬಹುದು. ಅದು ಬೇರೆ. ಆದರೆ, ಸಹಾವಲಂಬನದ ಪೋಷಕರು ಮಕ್ಕಳಿಗೆ ತಾವು ಅನಾಥರಾಗಿದ್ದರೇನೇ ಚೆನ್ನಾಗಿರುತ್ತಿತ್ತು ಎಂಬ ಭಾವ ಮೂಡಿಸುವಷ್ಟು ಅತೀವ ಕಾಳಜಿ ತೋರುವುದಂತೂ ಸುಳ್ಳಲ್ಲ.

ಬಾಯಿ ನುಡಿವುದು ಕೈ ನಡೆಯದು

ಸಹಾವಲಂಬನದ ಆತ್ಮರತಿ ಆತ್ಮೀಯ ಸಂಬಂಧಗಳಲ್ಲಿ, ಆಪ್ತವಲಯಗಳಲ್ಲಿ, ಕುಟುಂಬಗಳಲ್ಲಿ ಈ ಬಗೆ ನೋಡಿದರೆ, ಹುಸಿ ಕಾಳಜಿಯ ಸ್ವಾರ್ಥಪರರು ಕೂಡಾ ಇರುತ್ತಾರೆ. ಅವರದೇನಪ್ಪಾ ಲಕ್ಷಣ ಅಂದರೆ, ನಿಮಗೇನೋ ಒಂದು ಸಮಸ್ಯೆಯಾಗಿದೆ. ಕೂಡಲೇ ಪ್ರತಿಕ್ರಿಯಿಸುತ್ತಾರೆ. ಏನೂ ಕೊಡುವುದಿಲ್ಲ. ಆದರೆ ಅತೀವ ಕಾಳಜಿ ತೋರುತ್ತಾರೆ. ಜ್ವರ ಬಂದಿದೆ ಎಂದರೆ, ಹಾಗೆ ಎಚ್ಚರವಹಿಸು, ಹೀಗೆ ಡಾಕ್ಟರ್ ಬಳಿಗೆ ಹೋಗು, ಇಂಥಾ ಆಹಾರವನ್ನು ತಿನ್ನು ಎಂದೆಲ್ಲಾ ಒತ್ತಾಯ ಮಾಡುತ್ತಾರೆ. ಆದರೆ ತಮ್ಮ ಬಳಿ ಇರುವ ಕಿಂಚಿತ್ತೂ ಹಂಚಿಕೊಳ್ಳುವುದಿಲ್ಲ. ಅವರ ಬಾಯಿಯ ತುಂಬಾ ಕಾರುಣ್ಯ ಕಟ್ಟೆಯೊಡೆದು ಬರುತ್ತಿರುತ್ತದೆ. ಕೊಡುವುದಕ್ಕೆ ಮಾತ್ರ ಕೈ ಮುಂದಾಗದು.

ನಿನ್ನ ಕಷ್ಟಕ್ಕೆ ಮರುಗುತ್ತಾರೆ. ನಿನ್ನ ಸಾಹಸ ಮತ್ತು ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತಾರೆ. ಆದರೆ ಒಂದು ಪೈಸೆ ಕೊಟ್ಟುಬಿಡಲಿ ನೋಡೋಣ! ಅವರ ಹತ್ತಿರ ಇರುವುದಿಲ್ಲ ಎಂದಲ್ಲ. ಇರುವಷ್ಟರಲ್ಲಿ ಹಂಚಿಕೊಳ್ಳುವುದಿಲ್ಲ.ನಿನ್ನನ್ನು ವಿರೋಧಿಸುವುದಿಲ್ಲ. ನಿನ್ನ ಬಗ್ಗೆ ಕಾಳಜಿ ಇದೆ. ನಿನ್ನ ಬಗ್ಗೆ ಅತೀವ ಪ್ರೀತಿ ಇದೆ; ಎಂದೆಲ್ಲಾ ತೋರ್ಪಡಿಸುತ್ತಾ ತನ್ನ ಆತ್ಮರತಿಯ ಅರಿಮೆಯ ಹಸಿವನ್ನು ನೀನೊದಗಿಸುವ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಉಣಬಡಿಸಿಕೊಂಡು ತೃಪ್ತರಾಗುತ್ತಾರೆ. ಹುಸಿಕಾಳಜಿಯ ಪ್ರದರ್ಶನದ ಸಮಸ್ಯೆ.

ಬಸವಣ್ಣನವರು ಇಂತಹ ಕಾಂಪ್ಲೆಕ್ಸ್ ಇರುವವರ ಬಗ್ಗೆ ಬಲೇ ಸೊಗಸಾಗಿ ಹೇಳಿದ್ದಾರೆ. “ಹಸಿದು ಬಂದ ಗಂಡಂಗೆ ಉಣಲಿಕ್ಕದೆ, ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ ಬಂದುದನರಿಯಳು, ಇದ್ದುದ ಸವಸಳು.” ಬಸವಣ್ಣನವರೂ ಕೂಡಾ ಹುಸಿಕಾಳಜಿಯ ಪ್ರದರ್ಶನದ ಸಮಸ್ಯೆ ಇರುವ ಸತಿಗೆ ವಿಷಯವನರಿಯಳು ಎಂದು ಒಪ್ಪುತ್ತಾರೆ.

ಹೌದು, ಅವರು ಬೇಕೆಂದೇ ಜಿಪುಣತನವನ್ನು ಮಾಡುವುದಲ್ಲ. ಅವರಿಗೆ ಇರುವ ಈ ಅರಿಮೆಯಿಂದ ಅವರಿಗೆ ತಮ್ಮ ವರ್ತನೆಯ ರೀತಿಯೇ ಅರ್ಥವಾಗುವುದಿಲ್ಲ. ಅಲ್ಲಿದೆ ಸಮಸ್ಯೆ. ಈ ಸಮಸ್ಯೆಯನ್ನು ಕಂಡುಕೊಂಡರೆ ಅದರ ಪರಿಹಾರಕ್ಕೆ ಖಲೀಲ್ ಗಿಬ್ರಾನ್ ತಮ್ಮ ಪ್ರಾಫೆಟ್ ಪುಸ್ತಕದ ದುಡಿಮೆಯ ಅಧ್ಯಾಯದಲ್ಲಿ ಒಂದು ಸೂತ್ರ ಹೇಳಿಕೊಡುತ್ತಾರೆ. “ಕೆಲಸ ಪ್ರೇಮದ ಸಾಕಾರ ಮೂರ್ತಿ” ಹೌದು, ನೀವು ಯಾರ ಬಗ್ಗೆಯಾದರೂ, ಯಾವುದರ ಕುರಿತಾದರೂ ಪ್ರೇಮವನ್ನು ಹೊಂದಿದ್ದರೆ, ಅದನ್ನು ಕೆಲಸ ಮಾಡುವ ಮೂಲಕ ಪ್ರಕಟಿಸಬೇಕು.

ಪ್ರೇಮವು ಅಮೂರ್ತವಾದದ್ದು. ಕಣ್ಣಿಗೆ ಕಾಣದ್ದು. ಬರಿಯ ಬಾಯಿ ಮಾತಲ್ಲಿ ನಾನು ನಿನ್ನೊಂದಿಗಿದ್ದೇನೆ, ನಾನು ನಿನ್ನ ಪ್ರೀತಿಸುತ್ತೇನೆ ಇತ್ಯಾದಿಗಳನ್ನೆಲ್ಲಾ ಹೇಳಿದರೆ ವಾಸ್ತವದಲ್ಲಿ ಏನೂ ಪ್ರಯೋಜನವಿಲ್ಲ. ತತ್ಕಾಲಕ್ಕೆ ಧೈರ್ಯವುಂಟಾದರೂ ಪ್ರಾಯೋಗಿಕವಾಗಿ ಏನೂ ಪ್ರಯೋಜನವಾಗದೇ, ಈ ಮಾತುಗಳು, ನೈತಿಕ ಧೈರ್ಯಗಳೆಲ್ಲಾ ಪೊಳ್ಳು ಸುಳ್ಳು ಎನಿಸುತ್ತದೆ. ಹಾಗಾಗಿ, ತಮ್ಮ ಸಹವಾಸದಲ್ಲಿರುವವರಿಗೆ ತಮ್ಮ ಅಮೂರ್ತವಾಗಿರುವ ಪ್ರೇಮವನ್ನು ನಮ್ಮ ಕೆಲಸದ ಮೂಲಕ, ಕಷ್ಟ ಎಂದರೆ ಕೊಡುವುದರ ಮೂಲಕ, ಒಂಟಿಯಾಗಿ ಎದುರಿಸುವವರ ಜೊತೆಗೆ ಸೇರಿಕೊಳ್ಳುವುದರ ಮೂಲಕ ಪ್ರಕಟಿಸಬೇಕು.

ಇಲ್ಲವೆಂದರೆ ಅನುಕಂಪದ ಮಾತುಗಳು, ನೈತಿಕ ಬೆಂಬಲ, ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬಂತಹ ಮಾತುಗಳೆಲ್ಲಾ ಅರ್ಥ ಕಳೆದುಕೊಂಡು ಹುಸಿಕಾಳಜಿ ಪ್ರದರ್ಶನದ ವಿಭಾಗಕ್ಕೆ ಬಂದು ಬೀಳುತ್ತವೆ.
ನಮ್ಮ ಸಹವಾಸದಲ್ಲಿ ಇಲ್ಲದೇ ಬೇರೆಲ್ಲೋ ಇದ್ದಾರೆ, ಅವರನ್ನು ನಾವು ಭೌತಿಕವಾಗಿ ಸಂಧಿಸಲು ಸಾಧ್ಯವಿಲ್ಲವೆಂದರೆ ಅದು ಬೇರೆ ಮಾತು. ಆದರೆ ಅಷ್ಟು ದೂರದಲ್ಲಿರುವರು ಎಂಬಂತೆ ಸಹವಾಸಿಗಳನ್ನು ಉಪವಾಸಿಗಳನ್ನಾಗಿಸುವುದು ಬಸವಣ್ಣನವರು ಗುರುತಿಸಿರುವ ಸತಿಯ ಸ್ನೇಹದಂತೆ.

ಬಹಳ ಮುಖ್ಯವಾಗಿ ಮಕ್ಕಳಿಗೆ ಪ್ರಾರಂಭದಿಂದಲೇ ಇದನ್ನು ರೂಢಿ ಮಾಡಿಸಬೇಕು. ಅವರು ತಾವು ಯಾವುದರಲ್ಲಿ ಆಸಕ್ತಿಯನ್ನು ತೋರುತ್ತಾರೋ, ಒಲವನ್ನು ತೋರುತ್ತಾರೋ ಅದಕ್ಕೆ ಅವರು ಕೆಲಸ ಮಾಡಬೇಕು. ಈ ರೂಢಿ ಬಾಲ್ಯದಿಂದಲೇ ಆದರೆ ಈ ಅರಿಮೆಯನ್ನೇ ಹೊಂದುವುದಿಲ್ಲ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version