ಅಂತರಂಗ
ಅರಿಮೆಯ ಅರಿವಿರಲಿ – 18 : ಅಮೌಲ್ಯದ ಮೌಲ್ಯ ಮಾಪನ
- ಯೋಗೇಶ್ ಮಾಸ್ಟರ್
ಈ ಬಲಿದಾನದರಿಮೆಯು ಮೊಳೆಯುವುದು ಹೇಗೆ? ಕೆಲವರು ಬಲಿಗಂಬಕ್ಕೆ ತಮ್ಮನ್ನು ತಾವು ಬಲಿಪಶುವನ್ನಾಗಿಸಿಕೊಂಡು ನಡೆದರೆ, ಮತ್ತೆ ಕೆಲವರು ತಮ್ಮನ್ನು ತಾವು ಗೆಲುವ ನಾಯಕರನ್ನಾಗಿಸಿಕೊಂಡು ನಡೆಯುತ್ತಾರೆ. ಏಕೆ ಹೀಗೆ?ಬಹಳ ಗಂಭೀರವಾಗಿ ಗಮನಿಸಬೇಕು ಮತ್ತು ಅನುಕಂಪದಿಂದ ವಿಷಯವನ್ನು ಗ್ರಹಿಸಬೇಕು.
ಸಾಮಾನ್ಯವಾಗಿ ಅರಿಮೆಗಳು ಮೊಳೆಯುವುದು ಮತ್ತು ಬೆಳೆಯುವುದು ಬಾಲ್ಯದಲ್ಲಿಯೇ. ಕೆಲವು ಅರಿಮೆಗಳು ಅಂಕುರಿಸಿ ಸಹಜವಾದ ಅರಿವು ಬರುತ್ತಾ ಅಳಿಸಿ ಹೋಗುತ್ತವೆ. ಮತ್ತೆ ಕೆಲವು ಮೊಳೆತು ಬೆಳೆದು ಬಲಿತು ಬೆಳೆ ನೀಡುತ್ತವೆ. ಈ ಬಲಿದಾನದರಿಮೆಯೂ ಕೂಡಾ ಸಾಮಾನ್ಯವಾಗಿ ಬಾಲ್ಯದಲ್ಲಿ ತಂದೆ ತಾಯಿಗಳಿಂದ ಸಿಗುವಂತಹ ಬಳುವಳಿಯೇ. ಕುಟುಂಬದ ಹಿರಿಯರ ದ್ವಂದ್ವ ಮತ್ತು ಮಿಶ್ರವರ್ತನೆಗಳು, ಅವರು ಪ್ರತಿಪಾದಿಸುವ ಮೌಲ್ಯಗಳು ಕಾರಣವಾಗುತ್ತವೆ.
ಸುಮ್ಮನೆ ಹೀಗಂತ ಅಂದುಕೊಳ್ಳಿ; ನಿಮ್ಮ ತಾಯಿಯು ಏನೋ ಓದಬೇಕು ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣಬೇಕು ಎಂದು ಕನಸಿರುತ್ತಾರೆ. ಆದರೆ ಅದು ಆಗದೇ ಕನಸನ್ನು ಕನವರಿಸಿಕೊಂಡೇ, ಅದನ್ನು ತಾಂತ್ರಿಕವಾಗಿ ತ್ಯಾಗ ಮಾಡಿದ್ದು ನಿಮಗಾಗಿ ಮನೆಯಲ್ಲಿ ಗೇಯುತ್ತಿರುತ್ತಾರೆ. ಹಾಗೆ ಹೆಣಗುವುದು ಒಂದು ಮೌಲ್ಯವೆಂದು ಬೇರೆ ಭಾವಿಸಿರುತ್ತಾರೆ. ಹೆಣ್ಣಾದವಳು ಈ ಬಗೆಯ ತ್ಯಾಗಗಳಿಗೆ ಅಣಿಯಾಗಿರಲೇ ಬೇಕು ಎಂದು ಭಾವಿಸಿರುತ್ತಾರೆ. ಅದು ಅವರಿಗೆ ಮೌಲ್ಯ. ಸಾಲದಕ್ಕೆ ಹೆಣ್ಣಿಗೆ ಬಿರುದು ಬಾವಲಿಗಳನ್ನಿತ್ತು ಅವಳನ್ನು ತ್ಯಾಗಕ್ಕೆ ಸಜ್ಜುಗೊಳಿಸಿರುತ್ತಾರೆ. ಹೆಣ್ಣು ಸಂಸಾರದ ಕಣ್ಣು. ಅವಳಿಗೆ ಭೂಮಿಯಷ್ಟು ಸಹನೆ. ಅದೂ ಇದೂ ಪರಾಕುಗಳ ಒಂದು ಪಟ್ಟಿ. ಆ ಪಟ್ಟಿಯನ್ನು ಆಕೆಯ ಒಳಮನಸ್ಸು ಬಾಯಿಪಾಠ ಮಾಡಿಕೊಂಡಿದ್ದು ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಲು ಯತ್ನಿಸುತ್ತಿರುತ್ತಾಳೆ. ಅವಳ ವೈಯಕ್ತಿಕ ಬಯಕೆಗಳೂ ಭುಗಿಲೆದ್ದು ಕುಣಿಯುತ್ತಿರುತ್ತವೆ.
ಈ ಎರಡರ ತಾಕಲಾಟದಲ್ಲಿ ಸ್ವಭಾವತಃ ಮೃದು ಅಥವಾ ದುರ್ಬಲ ಮನಸ್ಕರಾದರೆ ವ್ಯವಸ್ಥೆ ಮತ್ತು ಪರಿಸ್ಥಿತಿಗಳ ಕೈ ಮೇಲಾಗುತ್ತದೆ. ಅವರು ಬಲಿದಾನದರಿಮೆಯ ನೇರ ಬಲಿಪಶುಗಳಾಗಿರುತ್ತಾರೆ. ಈ ಘನವೆತ್ತ ತ್ಯಾಗದ ಪರಂಪರೆಯನ್ನು ನೀವೂ ಕೂಡಾ ಬಹಳ ಶ್ರದ್ಧೆಯಿಂದ ವ್ರತ ಸ್ವೀಕರಿಸುವಂತೆ ಸ್ವೀಕರಿಸಿದ್ದಿರಬಹುದು. ಏಕೆಂದರೆ ಆ ತಾಯಿಯೇ ನಿಮ್ಮ ಪ್ರತಿದಿನದ ಜೀವಂತ ಮಾದರಿ. ಅವರದೇ ಬಿತ್ತನೆ. ಅವರಿಂದಲೇ ಮೊಳಕೆಯೊಡೆಯುವುದು, ಚಿಗುರೊಡೆಯುವುದು, ಟಿಸಿಲೊಡೆಯುವುದು, ಮೊಗ್ಗರಳಿ ಹೂವಾಗುವುದು. ಇದೊಂದು ಉದಾಹರಣೆಯಷ್ಟೇ. ಯಾವುದನ್ನೋ ಮೌಲ್ಯವೆಂದು ಚಿನ್ನದ ಚೌಕಟ್ಟಿನಲ್ಲಿ ಬರೆದಿಟ್ಟಿರುತ್ತದೆಯೋ ಅದು ನಿಮ್ಮ ವ್ಯಕ್ತಿಗತ ಬಯಕೆಯ, ಉತ್ಕಟ ಬಯಕೆಯ ಮರಣಶಾಸನವಾಗಿರಬಹುದು. ಉತ್ಕಟ ಬಯಕೆಗಳ ಮರಣಶಾಸನಗಳೇ ಅರಿಮೆಯ ಲಕ್ಷಣಗಳು.
ತಂದೆ ತಾಯಿಯರ ಎಷ್ಟೋ ತಾಕಲಾಟಗಳನ್ನು, ತೊಳಲಾಟಗಳನ್ನು, ತಿಕ್ಕಲುತನಗಳನ್ನು ಪರಮಶ್ರದ್ಧೆಯಿಂದ ಮಕ್ಕಳು ಎರವಲು ಪಡೆದಿರುತ್ತಾರೆ. ಅಲ್ಲಿಗೆ ಮನೆಯೇ ಒಂದು ಬಲಿಗಂಬ.ಮನೆಯವರೆಲ್ಲರೂ ಬಲಿಪಶುಗಳು ಸ್ವಯಿಚ್ಛೆಯಿಂದ, ಅನಿವಾರ್ಯವಾಗಿ ಅರಿಮೆಯ ಬಲಿಪಶುಗಳು.
ಮೌಲ್ಯಗಳ ಹೇರುವ ಸಮಾಜ
ಮನೆಯೆಂಬ ಬಾಣಲಿಯಿಂದ ಜಿಗಿದು ಬಂದರೆ ನಿಮಗೆ ಹೊರಗೆ ಸಮಾಜವೆಂಬ ಬೆಂಕಿಯಿದೆ. ವ್ಯಕ್ತಿಯೊಬ್ಬನ ಆಂತರಿಕವಾದ ಉತ್ಕಟ ಬಯಕೆಗಳೇನೇ ಇರಲಿ, ಸಾಮಾಜಿಕ ಕಟ್ಟುಪಾಡುಗಳು, ಸಾಂಸ್ಕೃತಿಕ ನಿರೀಕ್ಷೆಗಳು ಅರಿಮೆಗಳನ್ನು ಬಲಪಡಿಸುತ್ತವೆ.
ಉದಾಹರಣೆಗೆ ನಾನೊಬ್ಬ ಜೈನನೋ, ಬ್ರಾಹ್ಮಣನೋ, ಲಿಂಗಾಯತನೋ ಆಗಿದ್ದರೆ ನನ್ನ ವ್ಯಕ್ತಿಗತವಾದ ಬಯಕೆಗಳೇನೇ ಇರಲಿ. ಚಿಕನ್ ಮಂಚೂರಿಯ ತಿನ್ನಬೇಕೆಂದು ಬಯಸಿದರೆ, ಸಮಾಜ ಅದನ್ನು ವಿಚಿತ್ರವಾಗಿ ಅಥವಾ ವಿಲಕ್ಷಣವಾಗಿ ನೋಡುತ್ತದೆ. “ಬಿಡಪ್ಪಾ ಬ್ರಾಹ್ಮಣರು, ಲಿಂಗಾಯತರೆಲ್ಲಾ ತಿನ್ನಕ್ಕೆ ಶುರು ಮಾಡಿದ್ದರಿಂದ ಮಾಂಸದ ಬೆಲೆ ಏರಿತು” ಎಂದು ತಿನ್ನುವುದನ್ನು ಪರೋಕ್ಷವಾಗಿ ವ್ಯಕ್ತಿಯೊಬ್ಬನ ಆಹಾರದ ಬಯಕೆಯನ್ನು ಖಂಡಿಸುತ್ತಾರೆ.
ಬ್ರಾಹ್ಮಣ ಅಥವಾ ಲಿಂಗಾಯತನು ಮಾಂಸ ತಿನ್ನುವುದಕ್ಕೂ ಬೆಲೆ ಏರಿಕೆಗೂ ಏನೂ ಸಂಬಂಧವಿಲ್ಲದಿದ್ದರೂ ಇವನ್ನು ಕೇಳಬೇಕಾಗುತ್ತದೆ. ಬ್ರಾಹ್ಮಣರ ಅಥವಾ ಜೈನರ ಅಥವಾ ಲಿಂಗಾಯತರ ಸಮುದಾಯವೂ, ಬಳಗವೂ ತಮ್ಮಲ್ಲಿರುವ ಮಾಂಸ ತಿನ್ನುವ ವ್ಯಕ್ತಿಯನ್ನು ಪುರಸ್ಕರಿಸುವುದಿಲ್ಲ. ಅವನೊಬ್ಬ ನೇರವಾಗಿ ಅಲ್ಲದಿದ್ದರೂ ಒಂದು ರೀತಿಯಲ್ಲಿ ಜಾತಿಗೆಟ್ಟವ. ಹಾಗಾಗಿ ಅವನು ಕದ್ದು ತಿನ್ನಬೇಕು. ಅಥವಾ ಅವರ ತಿರಸ್ಕಾರಕ್ಕೆ ಒಳಗಾಗದಿರಲು ತಿನ್ನಬಾರದು.
ಹೆಣ್ಣು ಮಗುವೊಂದರ ಹಣೆಯಲ್ಲಿ ಕುಂಕುಮವಿರದಿದ್ದರೆ ನೀನು ಮುಸಲ್ಮಾನಳಾ ಎನ್ನುವುದು, ಗಡ್ಡವಿಟ್ಟುಕೊಂಡು ಮೀಸೆ ತೆಗೆದ ಪುರುಷನಿಗೆ “ಸಲಾಂ ವಾಲೆಕುಂ” ಎನ್ನುವುದು, ದೇವಸ್ಥಾನಕ್ಕೆ ಅಥವಾ ಮಂಗಳಕಾರ್ಯಕ್ಕೆ ಸೀರೆ, ಇತ್ಯಾದಿ ಮಂಗಳದ್ರವ್ಯಗಳಿಂದ ಅಲಂಕೃತವಾಗಿ ಹೋಗಬೇಕೆನ್ನುವುದು, ಮುತ್ತೈದೆಯಾದವಳು ಹೇಗೆಲ್ಲಾ ಇರಬೇಕೆನ್ನುವುದು ಅಥವಾ ವಿಧವೆಯಾದವಳು ಏನೆಲ್ಲಾ ಬಳಸಬಾರದು ಎನ್ನುವುದು; ಹೀಗೇ, ಸಾಲುಸಾಲಾಗಿ ವ್ಯಕ್ತಿಯ ಆಂತರಿಕ ಬಯಕೆಯನ್ನು ಮೀರಿದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಿರೀಕ್ಷೆಗಳನ್ನೆಲ್ಲಾ ವ್ಯಕ್ತಿಯು ಮನ್ನಿಸಬೇಕಾದ ಮೌಲ್ಯವೆಂದು ಅವನಲ್ಲಿ ದ್ವಂದ್ವವನ್ನುಂಟು ಮಾಡುತ್ತಾ ಬಲಿದಾನದರಿಮೆಯನ್ನು ಬಲಿಸುತ್ತದೆ.
ದೌರ್ಬಲ್ಯಕ್ಕೆ ಮೌಲ್ಯದ ಕವಚ
ಸರಿ, ಇನ್ನೊಂದು ಬದಿಯಲ್ಲಿಯೂ ಬಲಿದಾನದರಿಮೆಯು ಬಲಿಯುತ್ತಾ ಬಲಗೊಳ್ಳುವುದನ್ನು ಬಗೆಯಬೇಕು. ಕೆಲವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಎದುರಿಸಿ ತಮ್ಮ ಶಕ್ತಿಪ್ರದರ್ಶನ ಮಾಡಿ ತಮ್ಮ ಆಸೆಯನ್ನು ಪ್ರಕಟಗೊಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ತಮ್ಮ ದೌರ್ಬಲ್ಯಕ್ಕೆ ಮೌಲ್ಯವನ್ನು ಆರೋಪಿಸಿಕೊಂಡು ತಾವು ವಿಧೇಯವಾಗಿ ನಡೆದುಕೊಂಡು ಹೋಗಿಬಿಡುವುದು. ಸುಮ್ಮನೆ ಕೆಲವು ಉದಾಹರಣೆಗಳು ಅಂತ ಹೇಳ್ತೀನಿ. ಆ ಮಾದರಿಯಲ್ಲಿ ಬೇರೆಯದನ್ನು ಗಮನಿಸಿ.
ಶಿಶ್ನದಲ್ಲಿ ನಿಮಿರುವಿಕೆಯ ಸಮಸ್ಯೆ ಇರುವವನು ಅಥವಾ ಷಂಡತನದಿಂದ ಬಳಲುತ್ತಿರುವವನು ತಾನು ಕಾಮವನ್ನು ನಿಗ್ರಹ ಮಾಡಿ ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತಿದ್ದೇನೆಂದು ಘೋಷಿಸುತ್ತಾ ಸಂನ್ಯಾಸಿಯಾಗುವುದು. ಅವನ ಸಮಸ್ಯೆಗೆ ಸಂನ್ಯಾಸವೆಂಬ ಆಧ್ಯಾತ್ಮಿಕ ಮೌಲ್ಯದ ಸಮಾಧಾನ. ಅವನು ತನ್ನ ಬಲಿದಾನದರಿಮೆಯನ್ನು ಮೌಲ್ಯಕ್ಕೆ ತಿರುಗಿಸಿಕೊಳ್ಳುವ ಬಗೆ. ತನ್ನಿಂದ ಏನನ್ನೋ ಕಿತ್ತುಕೊಂಡವನಿಗೆ ಎರಡು ತಟ್ಟಿ ವಾಪಸ್ಸು ಕಿತ್ತುಕೊಳ್ಳಲಾಗದವನು ಅವನನ್ನು ಕ್ಷಮಿಸಿದ್ದೇನೆ. ಹೋದರೆ ಹೋಗಲಿ ಎಂಬ ಔದಾರ್ಯವನ್ನು ಪ್ರದರ್ಶಿಸುತ್ತಾ ಮೌಲ್ಯವನ್ನು ಆರೋಪಿಸಿಕೊಳ್ಳುವುದು.
ಪಾಪ, ನಮ್ಮಪ್ಪ ಅಮ್ಮನಿಗೆ ಹೊತ್ತುಹೊತ್ತಿಗೆ ಊಟಕ್ಕೆ ಹವಣಿಸುವುದೇ ದೊಡ್ಡ ಕೆಲಸವಾಗಿರುತ್ತಿತ್ತು. ಇನ್ನು ನನಗೆ ಓದಿಸೋದು, ಇನ್ನೇನೋ ಕಲಿಸೋದು ಹೇಗೆ ಸಾಧ್ಯವಾಗುತ್ತದೆ ಎಂದು ಇನ್ನೊಬ್ಬರನ್ನು ಆರೋಪಿಸುತ್ತಾ ತಮ್ಮನ್ನು ಬಲಿಪಶುವನ್ನಾಗಿಸಿಕೊಂಡು ಕೊರಗುವುದು, ತಮಗೆ ತಾವೇ ಮರುಗುವುದು, ಇತರರಿಂದ ಅನುಕಂಪವನ್ನು ಅಪೇಕ್ಷಿಸುವುದು ಕೂಡಾ ಈ ಅರಿಮೆಯ ಮತ್ತೊಂದು ಮುಖವೇ.
ಅರಿಮೆಗೆ ಪೋಷಕ ಮಾದರಿಗಳು
ಬಲಿದಾನದರಿಮೆಯನ್ನು ಪೋಷಿಸಲು ನಿಮಗೆ ರಾಷ್ಟ್ರೀಯ ನಾಯಕರೂ ಸಿಗುತ್ತಾರೆ. ಆಧ್ಯಾತ್ಮವ್ಯಕ್ತಿಗಳೂ ಸಿಗುತ್ತಾರೆ. ಜೋನ್ ಆಫ್ ಆರ್ಕ್, ಅಸ್ಸಿಸ್ಸಿಯ ಸಂತ ಫ್ರಾನ್ಸಿಸ್, ಗಾಂಧೀಜಿ, ಯೇಸು, ಮದರ್ ಥೆರೆಸಾರೇ ಮೊದಲಾದ ಮಾದರಿಗಳು ಕೂಡಾ ತಮ್ಮನ್ನು ತಾವು ನೋವಿಗೆ ಒಳಪಡಿಸಿಕೊಂಡು ಇತರರ ಸೇವೆಯೇ ತಮ್ಮ ಒಲವು ಎಂಬ ಆದರ್ಶವನ್ನು ಒಡ್ಡಬಲ್ಲವು. ಇಂತಹ ಯಶಸ್ವೀ ಮತ್ತು ಪ್ರಖ್ಯಾತ ಐತಿಹಾಸಿಕ ವ್ಯಕ್ತಿಗಳ ತ್ಯಾಗದ ಮೌಲ್ಯಗಳು ವ್ಯಕ್ತಿಯೊಬ್ಬನ ತ್ಯಾಗದ ಅರಿಮೆಯನ್ನು ಬಲಪಡಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.
ಬಾಲ್ಯದಲ್ಲಿನ ಪ್ರೀತಿ ವಾತ್ಸಲ್ಯಗಳ ಕೊರತೆ, ದೇಹದ ಆಕಾರವು ಸರಿ ಇಲ್ಲ ಎಂಬ ಭಾವ, ಮನೆಯಲ್ಲಿ ಕಠಿಣವಾಗಿ ತೀರ್ಮಾನಕ್ಕೊಳಗಾಗುತ್ತಿದ್ದರೆ ಬಲಿದಾನದರಿಮೆಯು ಮೊಳೆಯುವ ಸಾಧ್ಯತೆಗಳಿರುತ್ತವೆ. ತಂದೆ ತಾಯಿ ಅಥವಾ ಮನೆಯ ಇತರ ಸದಸ್ಯರಿಂದ, ಶಿಕ್ಷಕರಿಂದ, ಸಾಮಾಜಿಕ ಪರಿಸರದಿಂದ, ಓರಗೆಯವರಿಂದ ಮಗುವು ಭಾವನಾತ್ಮಕವಾಗಿ ತಳಮಳಕೊಳಗಾಗುತ್ತಿದ್ದರೆ, ಒತ್ತಡವನ್ನು ಅನುಭವಿಸುತ್ತಿದ್ದರೆ ಈ ಬಲಿದಾನದರಿಮೆಯ ಉದಯವಾಗುವುದು.
ದೇಹಾಲಸ್ಯವಿರುವಾಗ, ಶರೀರದಲ್ಲಿ ಅಸೌಖ್ಯವಿರುವಾಗ ಹೊಂದುವಂತಹ ಒಪ್ಪಲಾರದಂತಹ ಸಂಬಂಧಗಳು ಕೂಡಾ ಈ ಅರಿಮೆಗೆ ಕಾರಣವಾಗಬಹುದು. ಕೆಲವೊಮ್ಮೆ ತಾವು ನಿರ್ಧಾರ ತೆಗೆದುಕೊಳ್ಳಬೇಕಾದಾಗ ನಿರ್ಧಾರ ತೆಗೆದುಕೊಳ್ಳದೇ ಜವಾಬ್ದಾರಿಯಿಂದ ತಪ್ಪಿಸಿಕೊಂಡಿರುತ್ತಾರೆ. ಆ ನೋವು ಅಥವಾ ಬೇಸರವೂ ಕೂಡಾ ‘ಹೋಗತ್ತ, ನನ್ನ ಬಾಳು ಇಷ್ಟೇ’ ಎಂಬ ಧೋರಣೆಯಲ್ಲಿ ಬಲಿದಾನದರಿಮೆಯನ್ನು ಬೆಳೆಸಿಕೊಳ್ಳುತ್ತಾರೆ.
ಇನ್ನೂ ಕೆಲವರಿಗೆ ತಾವೊಬ್ಬ ಮಹಾನ್ ಮುಗ್ಧ ಜೀವಿ, ಭಾವುಕ ಮತ್ತು ಅನುಕಂಪದ ಜೀವಿಯೆಂದು ತೋರಿಸಿಕೊಳ್ಳುವ ತವಕ. ಈ ಆಂತರಿಕ ತವಕದ ಕೊಡುಗೆಯಾಗಿಯೂ ದೊರಕುವುದು ಈ ಮಾರ್ಟಿರ್ ಕಾಂಪ್ಲೆಕ್ಸ್.ಇನ್ನೂ ಕೆಲವರು ತಮ್ಮ ಹೆಣಗುವಿಕೆಯನ್ನು ಉತ್ಪ್ರೇಕ್ಷಿಸಿ ವೈಭವೀಕರಿಸುತ್ತಾರೆ. ಸುಮ್ಮನೆ ಒಂದು ಉದಾಹರಣೆ. ಬೇಗ ಬೇಗ ಊಟಕ್ಕೆ ಬಡಿಸಲು ಹೋದಾಗ ಕಾಲಿಗೆ ಚೇರು ಬಡಿದು ಒಂದು ಸಣ್ಣ ನೋವಾಗುತ್ತದೆ. ಅಯ್ಯೋ ಪಾಪ ಎಂದು ಉಪಚಾರಕ್ಕೆ ಅರ್ಹವಾಗಿಲ್ಲದ್ದಷ್ಟು ಸಣ್ಣ ನೋವು ಅದು. ಅದಕ್ಕೆ ಅವರು ಚೇರಿಗೆ ಮೊಣಕಾಲು ಬಡಿದು, ತಾವು ಬಿದ್ದು, ತಲೆಯು ನೆಲಕ್ಕೆ ಅಪ್ಪಳಿಸಿ, ಒಂದೈದು ನಿಮಿಷ ಮೂರ್ಚಾವಸ್ಥೆಯಲ್ಲಿದ್ದು ಎದ್ದು ಬಂದರಾದರೆ ಒಂದಷ್ಟು ಉಪಚಾರ, ಕನಿಕರ, ಅಯ್ಯೋ ಪಾಪ ಲಭ್ಯವಾಗುವುದು. ಅದಕ್ಕೆ ಉತ್ಪ್ರೇಕ್ಷೆ. ಅದು ಬರಿಯ ನೋವಿಗೆ ಸೀಮಿತವಲ್ಲ. ಅವರು ಪಡುವ ಶ್ರಮಕ್ಕೆ, ಅಥವಾ ಇತರರು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಕ್ಕೆ; ಇತರ ವಿಷಯಗಳಿಗೂ ಸಹ.
ಈ ಅರಿಮೆಯುಳ್ಳವರಿಗೆ ಇತರರ ಉದ್ದೇಶಗಳ ಮೇಲೆ ಅನುಮಾನವೂ ಕೂಡಾ ಸಾಮಾನ್ಯ.
ತಾವು ಸರಿಯಾಗಿಯೇ ಇರಬೇಕೆನ್ನುವುದು ಅವರ ಗೀಳು. ತಮ್ಮ ಕೈಯಲ್ಲಿ ಆಗುತ್ತದೋ ಇಲ್ಲವೋ, ಯಾರಾದರೂ ಕೆಲಸವನ್ನು ಮಾಡಿಕೊಡಲು ಕೇಳಿದರೆ “ಹೂ, ಮಾಡುತ್ತೇನೆ” ಎನ್ನುವುದೇ ಅವರ ಮೊದಲ ಉತ್ತರ.
ಕೆಲವೊಮ್ಮೆ ಅವರಿಗೆ ಅನ್ನಿಸುವುದೇನೆಂದರೆ, ಇತರರು ತನ್ನ ಮನಸ್ಸನ್ನು ತಿಳಿದುಕೊಂಡಿದ್ದಾರೆ ಅಥವಾ ತಿಳಿದುಕೊಳ್ಳುತ್ತಾರೆ ಎಂದು. ಇವರಿಂದ ಸಮಸ್ಯೆಗಳಿಗೆ ಪರಿಹಾರವಂತೂ ಎಂದಿಗೂ ಸಿಗುವುದಿಲ್ಲ. ಏಕೆಂದರೆ ಇವರು ನೋಯುವುದರಲ್ಲೇ ಸಂತೋಷಪಡುವವರು. ಒಂದು ವೇಳೆ ಸಮಸ್ಯೆಗೆ ಪರಿಹಾರ ಸಿಕ್ಕಿಬಿಟ್ಟಿತು ಎಂದಿಟ್ಟುಕೊಳ್ಳಿ, ಅದರ ನೆರಳಾಗಿ ಮತ್ತಷ್ಟು ಸಮಸ್ಯೆಗಳನ್ನು ತರುತ್ತಾರೆ. ಅವರು ಮಹಾನ್ ನಾಟಕಕಾರರು. ಪ್ರಶಂಸೆ ಗಿಟ್ಟಿಸಲು, ಗಮನ ಸೆಳೆಯಲು, ಜನರ ದೃಷ್ಟಿಯನ್ನು ತಮ್ಮ ಕಡೆಗೆ ಸೆಳೆಯಲು ನಟಿಸಲೂ ಸೈ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243