ಅಂತರಂಗ
ಅರಿಮೆಯ ಅರಿವಿರಲಿ-21 : ಬಿತ್ತಿದಂತೆ ಬೆಳೆ
- ಯೋಗೇಶ್ ಮಾಸ್ಟರ್
ಕೆಲವರಿಗೆ ದೇಹದಲ್ಲಿ ಯಾವುದಾದರೊಂದು ಸಮಸ್ಯೆ ಇರುತ್ತದೆ. ಹೃದಯದ್ದೋ, ಮೂತ್ರಪಿಂಡಗಳದ್ದೋ, ಕರುಳಿನದ್ದೋ, ಕಿವಿಯದೋ; ಎಂತದ್ದೋ. ಅದು ಅವರ ಯಾವ ಪಾಪಕ್ಕೂ ಅಲ್ಲ, ತಪ್ಪಿಗೂ ಅಲ್ಲ. ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ಅಂತಾರಲ್ಲಾ ಹಾಗೆ. ಪುಟ್ಟ ಪುಟ್ಟ ಮಕ್ಕಳಿಗೆ ಸಕ್ಕರೆ ಖಾಯಿಲೆ, ಹುಟ್ಟಿದ ಮಗುವಿಗೇ ಹೃದಯದ ಸಮಸ್ಯೆ; ಹೀಗೆಲ್ಲಾ ಇರುತ್ತದೆ. ಅದು ಗಮನಕ್ಕೆ ಬಂದಾಗ ತಜ್ಞರ ಬಳಿ ತೋರಿಸಿ ಅದಕ್ಕೆ ಚಿಕಿತ್ಸೆ ಕೊಡುತ್ತಾ ಅದನ್ನು ಕಡಿಮೆ ಮಾಡಿಕೊಂಡು ಬರುತ್ತೇವೆ. ಬಹಳಷ್ಟು ಬಾರಿ ಅದು ಯಶಸ್ಸನ್ನು ಕಾಣುತ್ತದೆ.
ಅದೇ ರೀತಿಯಲ್ಲಿ ಕೆಲವು ಮಾನಸಿಕ ಸಮಸ್ಯೆಗಳೂ ಕೆಲವರಿಗೆ ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ರೀತಿಯಲ್ಲಿ ಇರುತ್ತದೆ. ಆದರೆ ನಮ್ಮ ಕರ್ಮಕ್ಕೆ ಅದು ದೈಹಿಕ ಸಮಸ್ಯೆಯ ರೀತಿಯಲ್ಲಿ ಭೌತಿಕವಾಗಿ ಕಾಣುವುದಿಲ್ಲ. ಕೈಗೂಸಾಗಿದ್ದರೂ ಹೃದಯದ ಸಮಸ್ಯೆ, ಮೂತ್ರ ಪಿಂಡದ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗುವಂತೆ ಬಹಳ ಸಣ್ಣ ಮಕ್ಕಳಲ್ಲಿ ಕೆಲವು ಬಗೆಯ ಮಾನಸಿಕ ಸಮಸ್ಯೆಗಳನ್ನು ಅರಿಮೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಮಗುವಾಗಿ ಬೆಳೆಬೆಳೆಯುತ್ತಿದ್ದಾಗ ಕೆಲವು ಅನುಚಿತ ವರ್ತನೆಗಳನ್ನು, ಅವೈಚಾರಿಕ ನಡವಳಿಕೆಗಳನ್ನು, ಅಸಹಜ ಗುಣಗಳನ್ನು ಕಂಡರೂ ನಮ್ಮ ಧನಾತ್ಮಕ ಧೋರಣೆಯ ಕುಟುಂಬ, “ಮಗು ಬೆಳಿತಾ ಬೆಳಿತಾ ಸರಿ ಹೋಗುತ್ತದೆ” ಎಂದು ಸುಮ್ಮನಾಗುತ್ತದೆ. ತಜ್ಞರೊಂದಿಗೆ ಸಂವಹನ ಮಾಡುವುದಿಲ್ಲ. ಸಂಪರ್ಕಿಸುವುದೂ ಇಲ್ಲ. ಅದೆಲ್ಲಾ ಇರಲಿ, ಅದಕ್ಕೆಂದು ತಜ್ಞರು ಇದ್ದಾರೆಂದೂ ಗೊತ್ತಿರುವುದಿಲ್ಲ.
ಇದು ಚಿಕಿತ್ಸೆ ಕೊಡಬೇಕಾದ ರೋಗವೆಂದು ಎಂದಿಗೂ ಅಂದುಕೊಳ್ಳುವುದಿಲ್ಲ. ದೈಹಿಕ ಸಮಸ್ಯೆಗಳಿಗೆ ಗಮನ ಕೊಟ್ಟಂತೆ ಮಾನಸಿಕ ಸಮಸ್ಯೆಗಳಿಗೂ ಗಮನ ಕೊಟ್ಟಿದ್ದರೆ, ನಾವೆಲ್ಲರೂ ಇಷ್ಟುಹೊತ್ತಿಗಾಗಲೇ ಬಹಳಷ್ಟು ಆರೋಗ್ಯಕರವಾದಂತಹ ಸಮಾಜದಲ್ಲಿ ಉಸಿರಾಡಬಹುದಿತ್ತು. ಬೆಳೆಯುವ ಪೈರು ಮೊಳಕೆಯಲ್ಲಿ, ಬಿತ್ತಿದಂತೆ ಬೆಳೆ, ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ? ಮೂರರ ಬುದ್ಧಿ ನೂರರ ತನಕ – ಈ ಗಾದೆಗಳನ್ನು ಮಾತ್ರ ಕೊಂಡಾಡುತ್ತೇವೆ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂದು. ಆದರೆ ಆ ಗಾದೆಗಳು ನೇರವಾಗಿ ಮಕ್ಕಳ ಮಾನಸಿಕ ಸ್ಥಿತಿಯನ್ನು ಕುರಿತೇ ಹೇಳಿರುವುದು ಎಂಬುದನ್ನು ಮಾತ್ರ ಬಹುದೊಡ್ಡ ಸಮೂಹವು ಅರ್ಥ ಮಾಡಿಕೊಳ್ಳಲೇ ಇಲ್ಲ.
ಬಿತ್ತುವುದು ಬೀಳಿಸುವುದು
ಅರಿಮೆಗಳೆಂಬ ಬೀಜಗಳನ್ನು ಎಳೆಯ ಹಾಗೂ ಫಲವತ್ತಾದ ಮನಗಳಲ್ಲಿ ಬಿತ್ತಲಾಗುತ್ತದೆ. ಅವು ಹುಲುಸಾಗಿ ಮತ್ತು ಬಲವಾಗಿ ಬೆಳೆದು ನಿಂತಾಗ ಅದನ್ನು ಕತ್ತರಿಸಿ ಹಾಕಲು ಕುಟುಂಬ ಮತ್ತು ಸಮಾಜ ಹೆಣಗಾಡುತ್ತದೆ. ಆಗ ಕಷ್ಟ ಸಾಧ್ಯ. ಯಶಸ್ಸಿನ ಗಾಥೆಗಳು ಇಲ್ಲವೇ ಇಲ್ಲವೆನಿಸುವಷ್ಟು ತೀರಾ ಕಡಿಮೆ.
ಮನೆಗಳಲ್ಲಿ, ದೊಡ್ಡ ದೊಡ್ದ ವಿದ್ಯಾವಂತರ ಮತ್ತು ಸ್ಥಿತಿವಂತರ ಮನೆಗಳಲ್ಲಿ ಕಂಡಿದ್ದೇನೆ. ಎದುರಿಗೇ ಎರಡು ಮಕ್ಕಳನ್ನು ನಿಲ್ಲಿಸಿಕೊಂಡು ಈ ಮಗು ಜಾಣ, ಎಲ್ಲದರಲ್ಲೂ ಚುರುಕು, ಮತ್ತೊಂದು ಮಗು ಅಷ್ಟು ಚುರುಕಿಲ್ಲ, ಎಲ್ಲದರಲ್ಲೂ ನಿಧಾನ; ಎನ್ನುವುದನ್ನು. ಚುರುಕಿಲ್ಲ ಎಂದು ಎಲ್ಲರ ಎದುರು ಪಟ್ಟಾಭಿಷೇಕ ಮಾಡಿಸಿಕೊಂಡು ಪದವಿ ಪಡೆಯುವ ಮಗುವು ತಾನು ಚುರುಕಿಲ್ಲದರ ಬಗ್ಗೆ ಕೀಳರಿಮೆಯಿಂದ ನರಳುವುದರ ಜೊತೆಜೊತೆಗೆ ತನ್ನ ಕಡೆಗಣಿಸಲು ಬಳಸುವ ಚುರುಕಿರುವ ಮಗುವಿನ ಬಗ್ಗೆ ದ್ವೇಷ ಮತ್ತು ಅಸೂಯೆಯನ್ನು ಬೆಳೆಸಿಕೊಳ್ಳುತ್ತದೆ. ಇದು ನಮ್ಮ ಪೋಷಕರಿಗೆ ಅರ್ಥವೇ ಆಗುವುದಿಲ್ಲ.
ಇನ್ನು ಶಾಲೆಯಲ್ಲಿ ಕೆಲವು ಮಕ್ಕಳಿಗೆ ಎ+, ಬಿ+, ರ್ಯಾಂಕ್ ಇತ್ಯಾದಿಗಳನ್ನು ನೀಡುತ್ತಾ ಮತ್ತೆ ಕೆಲವು ಮಕ್ಕಳಿಗೆ ಸಿ, ಡಿ, ಇತ್ಯಾದಿಗಳನ್ನು ಕೊಡುತ್ತಾ, ಆ ಮಕ್ಕಳಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುವ ಶಿಕ್ಷಣ ವ್ಯವಸ್ಥೆಗೆ ಮೌಲ್ಯಮಾಪನದ ಮತ್ತೊಂದು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಲಾಗಿಲ್ಲ. ಮಕ್ಕಳ ಎಳೆಯ ಮನಸ್ಸುಗಳಲ್ಲಿ ಅರಿಮೆಗಳನ್ನು ಬಿತ್ತುತ್ತಿದ್ದೇವೆ ಎಂಬ ನೈತಿಕ ಪ್ರಜ್ಞೆ ಅವರಲ್ಲಿ ಮೂಡಿಯೇ ಇಲ್ಲ. ಏಕೆಂದರೆ ಮಾನಸಿಕವಾದಂತಹ ವಿಷಯಕ್ಕೆ ಅವರು ‘ಕೇರ್’ ಮಾಡಿಯೇ ಇಲ್ಲ.
ಸ್ಪರ್ಧೆಗಳನ್ನು ಮಾಡಿ ಗೆದ್ದವರಿಗೆ ಪರಾಕುಗಳನ್ನು ಹಾಕುವಾಗ, ಫಲಕ, ಪದಕ ಮತ್ತು ಇನಾಮುಗಳನ್ನು ಕೊಟ್ಟು ಹೆಸರುಗಳನ್ನು ಕೂಗಿ ಕರೆಯುವಾಗ ಸೋತವರು ಎಂಬ ಭಾವವನ್ನು ಹುಟ್ಟಿಸಿ ಹಲವು ಜೀವಗಳಲ್ಲಿ ಕೀಳರಿಮೆಯನ್ನು ಹುಟ್ಟಿ ಹಾಕುತ್ತಿದ್ದೇವೆ ಎಂಬ ಪ್ರಜ್ಞೆ ಸ್ಪರ್ಧಾತ್ಮಕ ಸಮಾಜಕ್ಕೆ ಬಂದೇ ಇಲ್ಲ. ಇದನ್ನೆಲ್ಲಾ ಸ್ಪೋರ್ಟೀವ್ ಆಗಿ ತಗೋಬೇಕು. ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಇತ್ಯಾದಿ ತಿಪ್ಪೆ ಸಾರಿಸುವ ಮಾತುಗಳಿಂದ ಅರಿಮೆಗಳು ಉಂಟಾಗುವುದನ್ನು ತಡೆಯಲು ಸಾಧ್ಯವಿಲ್ಲ. ಸೋತವರ ನೋವು ಅವರ ಮನಸ್ಸಿನಲ್ಲಿ ಅದೆಷ್ಟು ಹಿಂಡಿ ಹಿಪ್ಪೆ ಮಾಡುತ್ತದೆ ಎಂದರೆ, ಅವರು ಪ್ರತಿಕಾರಕ್ಕೆ, ಹಟಕ್ಕೆ ಏನಾದರೂ ಮಾಡಬಹುದು. ಮಾಡಲಾಗದ ಕಾರಣಕ್ಕೆ ಆ ಆಕ್ರೋಶವನ್ನು ಅದುಮಿಟ್ಟುಕೊಳ್ಳುತ್ತಾರೆ. ಇಂತಹ ಅದುಮಿಟ್ಟುಕೊಳ್ಳುವ ಎಲ್ಲಾ ಭಾವಗಳೂ ಮನೋರೋಗದ ಮೂಲಗಳೇ.
ಮಕ್ಕಳನ್ನು ಗಮನಿಸಿ, ಸಾಧಾರಣ ಆಟಗಳಲ್ಲಿ, ಆಡುವಾಗ ಸೋಲಬಾರದು, ಸೋತರೆ ಅಳುತ್ತಾರೆ. ಆಟವನ್ನು ಕೆಡಿಸುತ್ತಾರೆ. ಕೂಗಾಡುತ್ತಾರೆ. ಏಕೆ? ಅವರಿಗೆ ತಾವು ಸೋತ ನೋವಿಗಿಂತ ಎದುರಾಳಿಯ ಗೆದ್ದ ದರ್ಪದ ದೌರ್ಜನ್ಯವನ್ನು ಸಹಿಸಲಾಗುವುದಿಲ್ಲ. ಗೆದ್ದವನಿಗೇ ಮಾನ್ಯತೆ. ಇಂತಹ ಅರಿಮೆಯನ್ನು ಬಿತ್ತುವ ವಿಚಾರಗಳಲ್ಲಿ ನಮ್ಮ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದುವರೆಗೂ ಯಾವ ಜೀವಿಗಳ ಮನಸ್ಸುಗಳಿಗೂ ನೋವಾಗದ ಹಾಗೆ ನಡೆದುಕೊಳ್ಳುವಂತಹ ವ್ಯವಸ್ಥೆಯನ್ನು ಇನ್ನೂ ಕಂಡುಕೊಂಡಿಲ್ಲ. ಅಂತರವನ್ನು ಹೆಚ್ಚು ಮಾಡುವ, ಅರಿಮೆಯನ್ನು ಗಟ್ಟಿಗೊಳಿಸುವ ಸ್ಪರ್ಧೆಗಳಿಗೆ ಮತ್ತಷ್ಟು ಮಗದಷ್ಟು ಹೊಸಹೊಸ ವ್ಯಾಖ್ಯಾನಗಳು ಸಿಗುತ್ತಿವೆ. ವೈಭವಗೊಳ್ಳುತ್ತಿವೆ.
ಅದೆಷ್ಟೋ ವರ್ಷಗಳಿಂದ ಅದೆಷ್ಟು ಮಾರುಗಳ ಉಗುರುಗಳನ್ನು ಬೆಳೆಸಿಕೊಂಡು ಗಿನ್ನಿಸ್ ರೆಕಾರ್ಡ್ ಮಾಡುವವರು, ತಲೆಯಿಂದ ಅದೆಷ್ಟೋ ನೂರು ತೆಂಗಿನ ಕಾಯಿಗಳನ್ನು ಹೊಡೆದು ಚೂರು ಮಾಡಿ ಲಿಮ್ಕಾ ದಾಖಲೆ ಮಾಡುವವರು, ಇನ್ನೆಂತದ್ದೋ ಯಾರೂ ಮಾಡದೇ ಇರುವುದನ್ನು ತಾನು ಮಾಡಿ ರೆಕಾರ್ಡ್ ಮಾಡುವವರು ಕೀಳರಿಮೆಯ ವ್ಯಕ್ತಿಗಳೇ. ಯಾವುದೇ ದಾಖಲೆ ಮಾಡುವ ಹೆಚ್ಚುಗಾರಿಕೆಯು ಖಂಡಿತ ಆರೋಗ್ಯಕರ ಮನಸ್ಥಿತಿಯ ಲಕ್ಷಣವಂತೂ ಅಲ್ಲ.
ಗಾಯಕಿ ಲತಾ ಮಂಗೇಶ್ಕರ್ ತಮ್ಮ ಪ್ರತಿಭೆಗೆ ಅನುಸಾರವಾಗಿ ಅವಕಾಶಗಳು ಸಿಗುತ್ತಾ ಹಾಡಿಕೊಂಡು ಹೋದರು. ಸಾವಿರಾರು ಹಾಡುಗಳಾಗಿ ದಾಖಲೆಯಾಯಿತೆಂದರೆ ಅದು ಈ ಮಾನಸಿಕ ಸಮಸ್ಯೆಯ ವಿಭಾಗಕ್ಕೆ ಬರುವುದಿಲ್ಲ. ಆದರೆ ದಾಖಲೆಗೊಸ್ಕರವೇ ಹಪಹಪಿಸಿಕೊಂಡು ಮಾಡುವುದರ ಬಗ್ಗೆ ನಮಗೆ ಕಾಳಜಿ ಮತ್ತು ಅದಕ್ಕೆ ಚಿಕಿತ್ಸೆ ಬೇಸಾಮಾನ್ಯವಾಗಿ ಮಕ್ಕಳು ಒಂದಲ್ಲ ಒಂದು ಕೊರತೆಯನ್ನು ಹೊಂದಿರುತ್ತಾರೆ. ಒಂದಲ್ಲ ಒಂದು ವಿಷಯದಲ್ಲಿ ದುರ್ಬಲರಾಗಿರುತ್ತಾರೆ. ಯಾವುದೇ ಮಗುವನ್ನು ನೋಡಿ, ಅವರು ಆಸೆ ಪಡುವುದು, ತಾನು ಬೆಳೆದು ದೊಡ್ಡವರಾದಾಗ ಅದು ಮಾಡುತ್ತೇನೆ, ಇದು ಮಾಡುತ್ತೇನೆ, ಇದನ್ನು ಕಟ್ಟಿಸುತ್ತೇನೆ; ಇತ್ಯಾದಿ. ಯಾವ ಮಕ್ಕಳು ತಾವು ದೊಡ್ಡವರಾದಾಗ ಎಂದು ತಮ್ಮ ಕನಸುಗಳನ್ನು ಹೇಳುತ್ತಿರುತ್ತಾರೋ ಬಹುಪಾಲು ಕೀಳರಿಮೆಗೆ ಕಾರಣವಾಗಿರುವ ಸಂಗತಿಗಳನ್ನು ಅವರು ಎದುರಿಸಿದ್ದಾರೆ ಎಂದರ್ಥ. ಆ ಮಗು, ತಾನಿರುವ ಸ್ಥಿತಿಯನ್ನು ಸಂಪೂರ್ಣವಾಗಿ ಸಂತೋಷವಾಗಿ ಅನುಭವಿಸಲು ಅಲ್ಲಿ ಸರಿಯಾದ ಪ್ರೇರಣೆಗಳು ಮತ್ತು ಅವಕಾಶಗಳು ಸಿಗುತ್ತಿಲ್ಲ ಎಂದರ್ಥ.
ಸಾಮಾನ್ಯವಾಗಿ ಮಕ್ಕಳಲ್ಲೇನು ದೊಡ್ಡವರಲ್ಲಿಯೂ ಕೂಡಾ ನಮಗಿಂತ ಅವರು ಸಂತೋಷವಾಗಿದ್ದಾರೆ, ಸುಖವಾಗಿದ್ದಾರೆ, ಉತ್ತಮ ಜೀವನ ನಡೆಸುತ್ತಿದ್ದಾರೆ ಎಂಬ ಆಲೋಚನೆಗಳಿರುತ್ತವೆ. ಆ ಗಂಡ ಹೆಂಡತಿಯರು ನಮಗಿಂತ ಸುಖವಾಗಿದ್ದಾರೆ, ಅವನ ಅಪ್ಪ ಅಮ್ಮ ನಮ್ಮಪ್ಪ ಅಮ್ಮನಿಗಿಂತ ಹೆಚ್ಚು ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತಾರೆ. ನಮ್ಮ ಮನೆಗಿಂತ ಅವರ ಮನೆಯಲ್ಲಿ ಹೆಚ್ಚು ಶ್ರೀಮಂತಿಕೆ ಇದೆ. ನನಗಿಂತ ಒಳ್ಳೆಯ ಮೈ ಅವನಿಗಿದೆ. ನನಗಿಂತ ಅವಳು ಚೆನ್ನಾಗಿದ್ದಾಳೆ. ನಿಜ; ಅದು ವಾಸ್ತವವೇ ಇರಬಹುದು. ಆದರೆ ಅದು ಆಯಾ ವ್ಯಕ್ತಿಗಳ ಅರಿಮೆಗೆ ಎಟಕುವ ಆಲೋಚನೆಗಳು. ಅರಿಮೆಗಳಿಲ್ಲದ ಆಲೋಚನೆಗಳು ಬರಿದೇ ಗುರುತಿಸುತ್ತವೆ. ಅದರ ಬಗ್ಗೆ ಆಲೋಚಿಸುವುದಿಲ್ಲ. ಕರುಬುವುದಿಲ್ಲ. ಕೀಳರಿಮೆಯುಳ್ಳವರಿಗೆ ಅಸೂಯೆ ಬಹಳ ಸಹಜವಾದಂತಹ ಗುಣ.
ದಪ್ಪ, ಕೊಯಕಲ, ಉಬ್ಬ, ಕರಿಯ ಇತ್ಯಾದಿಗಳ ರೂಢನಾಮದಲ್ಲಿ ಬೆಳೆಯುವ ಮಕ್ಕಳಿಗೆ ಸಂಕೋಚ ಸಹಜವಾಗುತ್ತದೆ. ತನ್ನ ದೇಹವು ವಿರೂಪವಾಗಿದೆ. ಈ ಕುರೂಪವನ್ನು ಕಂಡು ನಗುವವರಿದ್ದಾರೆ ಎಂಬ ಭಾವ ಅವರನ್ನು ಕುಬ್ಜಗೊಳಿಸುತ್ತದೆ. ಕೀಳರಿಮೆಯನ್ನು ಬುಡಸಮೇತ ಕೀಳು ಸರಿ, ಈ ಕೀಳರಿಮೆಯನ್ನು ಹೋಗಲಾಡಿಸುವ ಬಗೆ ಹೇಗೆ? ಹುಟ್ಟು ಹಾಕದೇ ಇರುವ ಬಗೆಯಾದರೆ, ಅದು ಸುಲಭ. ಈ ರೀತಿಯ ಅನವಶ್ಯಕ, ಅಮಾನವೀಯ ಮತ್ತು ವಿಧ್ವಂಸಕ ದೃಷ್ಟಿಯನ್ನು ಹೊಂದದೇ ಇರುವುದು. ಆ ರೀತಿಯ ಮಾತುಗಳನ್ನು ಆಡದೇ ಇರುವುದು. ಎಲ್ಲರನ್ನೂ ಎಲ್ಲವನ್ನೂ ಸಹಜವಾಗಿ ನೋಡುತ್ತಾ ವ್ಯಕ್ತಿಗೌರವವನ್ನು ಪರಸ್ಪರ ಕೊಟ್ಟುಕೊಳುವುದು.
ಆದರೆ, ಈಗಾಗಲೇ ಇರುವ ಕೀಳರಿಮೆಯನ್ನು ಹೋಗಲಾಡಿಸುವುದು ಹೇಗೆಂದರೆ ಅದು ಕಷ್ಟ. ಈಗಾಗಲೇ ಬೇರುಬಿಟ್ಟಿರುವಂತಹ ಮನೋಭಾವವನ್ನು ಗುರುತಿಸಿಕೊಳ್ಳಬೇಕು. ಅದು ಇದೆ ಎಂಬುದನ್ನು ಒಪ್ಪಿಕೊಳ್ಳಬೇಕು. ನಂತರ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ತನಗೆ ಅರಿಮೆ ಇರುವುದರ ಅರಿವಿನಲ್ಲಿ ತನ್ನನ್ನೇ ತಾನು ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತಾನು ತನ್ನ ಹಿರಿಮೆಯನ್ನು ಸಾಬೀತುಗೊಳಿಸಿಕೊಳ್ಳುವ ಕಾರಣವೇನೂ ಇಲ್ಲ, ನನಗೆ ಇರುವಂತಹ ಮೌಲ್ಯ ನನಗಿದೆ ಎಂಬ ಭಾವದಲ್ಲಿ ಆತ್ಮತೃಪ್ತಿಯಿಂದ ತನ್ನನ್ನು ತಾನು ಸಂತೋಷಗೊಳಿಸಿಕೊಳ್ಳಲು ಸಾಧ್ಯತೆಗಳನ್ನು ಕಂಡುಕೊಳ್ಳುವುದು. ಅರಿವೇ ಅರಿಮೆಯನ್ನು ಅಡಗಿಸಲು ಸಾಧ್ಯ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243