ಅಂತರಂಗ

ಅರಿಮೆಯ ಅರಿವಿರಲಿ-29 : ಮೌಲ್ಯದ ಮೌಲ್ಯಮಾಪನ

Published

on

  • ಯೋಗೇಶ್ ಮಾಸ್ಟರ್

ಮೌಲ್ಯ ಅಥವಾ ಬೆಲೆ ಎನ್ನುವುದು, ಅದು ತಾತ್ವಿಕವೋ ಅಥವಾ ಲೌಕಿಕವೋ, ಒಟ್ಟಾರೆ ಅದು ಮಾನವನಿಂದ ಆರೋಪಿತವಾಗಿರುವುದು. ಪಾತ್ರ ಅಪಾತ್ರ, ದಯೆ ನಿರ್ದಯೆ, ಔದಾರ್ಯ ಅನೌದಾರ್ಯ, ಪ್ರಾಮಾಣಿಕ ಅಪ್ರಮಾಣಿಕ, ಸದ್ಗುಣ ದುರ್ಗುಣ, ಒಳಿತು ಕೆಡಕು, ಧರ್ಮ ಅಧರ್ಮ; ಈ ದ್ವಂದ್ವ ಪರಿಕಲ್ಪನೆಗಳಾವುವೂ ವಾಸ್ತವವಾಗಿ ನಿಸರ್ಗದಲ್ಲಿ ಇಲ್ಲ. ಆದರೆ ಮಾನವ ನಿರ್ಮಿತ ಸಮಾಜದಲ್ಲಿ ಎಲ್ಲವೂ ಇದೆ. ಎಲ್ಲಿ ದ್ವಂದ್ವಗಳು ಇರುತ್ತವೆಯೋ ಅಲ್ಲಿ ಮಾನಸಿಕ ಸಮಸ್ಯೆಗಳೂ ಇರುತ್ತವೆ. ಸಂಘರ್ಷ, ತುಮುಲ, ದ್ವಂದ್ವ, ಗೊಂದಲ, ಒತ್ತಡ, ಖಿನ್ನತೆ; ಈ ಎಲ್ಲವೂ ಮನೋರೋಗಗಳಿಗೆ ಕಾರಣವೇ.

ಒಂದು ಕಾಲಘಟ್ಟದಲ್ಲಿ ಯಾವುದನ್ನು ಮೌಲ್ಯ ಎಂದು ಭಾವಿಸಿಲಾಗಿರುತ್ತದೆಯೋ ಮನುಷ್ಯನ ಜೀವನ ಕ್ರಮ, ಆಲೋಚನಾ ಕ್ರಮಗಳು ಬದಲಾದಂತೆ ನಾವು ವಸ್ತು ಅಥವಾ ವಿಷಯಗಳಿಗೆ ಆರೋಪಿಸುವ ಮೌಲ್ಯಗಳೂ ಕೂಡ ಬದಲಾಗುತ್ತವೆ. ತೊಟ್ಟಲಿನಲ್ಲಿಯೇ ಮಕ್ಕಳನ್ನು ವಧೂವರರನ್ನಾಗಿಸುವ ಕಾಲಘಟ್ಟವಿತ್ತು.ಹೆಣ್ಣುಮಗುವು ಮೈನೆರೆಯುವ ಮುನ್ನವೇ ಮದುವೆ ಮಾಡಬೇಕಾದ ಕಾಲದಲ್ಲಿ ಬಾಲ್ಯವಿವಾಹ ಸಮಾಜವು ಒಪ್ಪಿತ ವ್ಯವಸ್ಥೆಯಾಗಿತ್ತು. ಆದರೆ ಈಗ ಅದು ಅಪರಾಧ. ಸಾಮಾಜಿಕ ಮೌಲ್ಯಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತವೆ ಎಂದು ತಿಳಿಯಲು ಇಷ್ಟು ಸಾಕು. ಹೆಚ್ಚು ಹೆಚ್ಚು ಚರ್ಚೆಗಳು ಬೇಡ.

ಹಾಗಾಗಿಯೇ ಸಾಮಾಜಿಕ ಮೌಲ್ಯವೆಂದು, ಸಮಾಜವೋ, ಸಂಸ್ಕೃತಿಯೋ ಒಪ್ಪಬೇಕೆಂದು ಪ್ರಾಣವನ್ನು ಪಣವಾಗಿಟ್ಟು ನಾವು ಎಂದೂ ನಡೆದುಕೊಳ್ಳುವ ಅಗತ್ಯವಿಲ್ಲ. ಆದರೂ ಒಂದು ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ನಮ್ಮ ನಡವಳಿಕೆಗಳನ್ನು, ಆಲೋಚನೆಗಳನ್ನು, ಕೆಲಸಗಳನ್ನು ಒಂದು ಕ್ರಮಕ್ಕೆ ಒಳಪಡಿಸಿಕೊಳ್ಳಬೇಕಾದ ಅಗತ್ಯವಿದೆ.

ಯಮ ನಿಯಮ

ಒಂದು ಕೆಲಸವು ಸರಾಗವಾಗಿ ನಡೆಯಲು ಅದಕ್ಕೊಂದು ಕ್ರಮಬೇಕು. ಕ್ರಮವಿಲ್ಲದೇ ಹೋದರೆ ಸಾಮಾನ್ಯವಾಗಿ ಆ ಕೆಲಸ ಆಗದು. ಆ ಕೆಲಸದ ಕ್ರಮಕ್ಕೆ ವ್ಯಕ್ತಿಯು ತನ್ನನ್ನು ಬದ್ಧಗೊಳಿಸಿಕೊಳ್ಳುವುದಕ್ಕೆ ಶಿಸ್ತು ಎನ್ನುತ್ತೇವೆ. ಹೀಗೆಂದುಕೊಳ್ಳೋಣ, ನಮ್ಮ ಆಲೋಚನೆಯಲ್ಲಿ ಒಂದು ಕ್ರಮವಿರಲಿ, ಕೆಲಸದಲ್ಲಿ ಒಂದು ಶಿಸ್ತು ಇರಲಿ. ಒಬ್ಬ ವ್ಯಕ್ತಿಯು ತನ್ನ ಮನಸ್ಸನ್ನು, ದೇಹವನ್ನು, ಭಾವನೆಗಳನ್ನು, ಕುಟುಂಬವನ್ನು, ಸಂಬಂಧಗಳನ್ನು ಮತ್ತು ಸಮಾಜದಲ್ಲಿ ತನ್ನ ಇರುವಿಕೆ ಮತ್ತು ಭಾಗವಹಿಸುವಿಕೆಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಆ ಕ್ರಮಗಳನ್ನು ಕಾರ್ಯರೂಪಕ್ಕೆ ತರಲು ಶಿಸ್ತು ಬೇಕಾಗುತ್ತದೆ. ಕ್ರಮ ಮತ್ತು ಶಿಸ್ತುಗಳ ಉದ್ದೇಶ ವ್ಯಕ್ತಿ, ಕುಟುಂಬ, ಸಂಬಂಧ ಮತ್ತು ಸಮಾಜ; ಇವಿಷ್ಟನ್ನೂ ಆರೋಗ್ಯವಾಗಿಡುವುದಷ್ಟೇ ಆಗಿರುತ್ತದೆ. ಇದನ್ನೇನಾದರೂ ನಾವು ಮೌಲ್ಯ ಎನ್ನಬಹುದೇ? ಅನ್ನಬಹುದು. ಅಂದುಕೊಳ್ಳೋಣ, ಅಡ್ಡಿಯಿಲ್ಲ.

ಆರೋಗ್ಯವಾಗಿರಬೇಕು ಎಂದು ಬಯಸುತ್ತಿರುವುದಾದರೂ ಆನಂದಕ್ಕೆ. ಹಿತವಾದ ಬದುಕು, ಆನಂದವಾದ ವಾತಾವರಣ ಮತ್ತು ಘಾಸಿತವಾಗುವಂತಹ ಸಂಘರ್ಷಗಳಿಲ್ಲದ ಜೀವನವನ್ನು ನಾವು, ನಮ್ಮ ಸಹಜೀವಿಗಳು ಮತ್ತು ಮುಂದಿನ ಪೀಳಿಗೆಯವರು ಹೊಂದಬೇಕೆನ್ನುವುದೇ ನಮ್ಮ ಉದ್ದೇಶವಾಗಿದ್ದ ಪಕ್ಷದಲ್ಲಿ ಯಾವುದ್ಯಾವುದಕ್ಕೋ ಮೌಲ್ಯವೆಂದು ಆರೋಪಿಸುವುದನ್ನು ನಿಲ್ಲಿಸಬೇಕು. ಅನರ್ಥಕಾರಿ ಮತ್ತು ಅನಗತ್ಯವಾಗಿರುವುದನ್ನೆಲ್ಲಾ ಮೌಲ್ಯವೆಂದು ಪರಿಗಣಿಸುವುದನ್ನು ನಿಲ್ಲಿಸಬೇಕು.

ಅವಗ್ಯಾವಾಗಲೋ ಪತಿಯೇ ಪರದೈವ ಎಂಬುದೊಂದು ಮೌಲ್ಯ. ಅವನು ಬೂಟುಗಾಲಿನಲ್ಲಿ ಒದ್ದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ಬಂದು ಕೇಳದೇ ಇರುವಂತಹ ಕೌಟುಂಬಿಕ ಅಥವಾ ದಾಂಪತ್ಯದ ಮೌಲ್ಯವನ್ನು ಅವನು ಪಾಲಿಸುತ್ತಿದ್ದರು.ಮೌಲ್ಯಗಳಿಗೊಂದು ಮೌಲ್ಯಮಾಪನವಿರಬೇಕು. ಇದನ್ನು ಗಂಭೀರವಾಗಿ ಪರಿಗಣಿಸೋಣ. ಯಾವುದನ್ನು ಮೌಲ್ಯವೆಂದು ಭಾವಿಸುತ್ತೇವೆಯೋ ಆ ಗುಣವಾಗಲಿ, ವರ್ತನೆಯಾಗಲಿ, ಆಚಾರ ಅಥವಾ ವಿಚಾರವಾಗಲಿ ತನಗೂ ನೋವನ್ನುಂಟು ಮಾಡಿಕೊಳ್ಳಬಾರದು. ಇತರರಿಗೆ ನೋವನ್ನುಂಟು ಮಾಡಬಾರದು. ನೋವೆಂದರೆ ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕಿರುಕುಳ ಆಗಬಾರದು. ಯಾವುದೇ ವ್ಯಕ್ತಿಯ ವಯಸ್ಸು, ಹಿನ್ನೆಲೆ, ವರ್ಣ ಮತ್ತು ವರ್ಗಗಳನ್ನು ಲೆಕ್ಕಿಸದೇ ಗೌರವವನ್ನು ಸಲ್ಲಿಸಬೇಕು.

ಅಂದರೆ ಯಾವುದರ ಆಧಾರದಲ್ಲಿಯೂ ಯಾರೊಬ್ಬರ ವ್ಯಕ್ತಿಗೌರವಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಸೋಲು, ಅವಘಡ, ನೋವು, ಸಾವಿನಂತಹ ಸಂಕಟಗಳ ಸಮಯಗಳಲ್ಲಿ ಯಾರಿಗಾದರೂ ನೆರವಾಗುವಂತಹ ವರ್ತನೆಗಳು ಸಹಜವಾಗಿರಬೇಕು. ಯಾರೊಬ್ಬರ ಆಯ್ಕೆ ಮತ್ತು ಜೀವನ ಕ್ರಮದಲ್ಲಿ ಅನಗತ್ಯವಾಗಿ ಮೂಗು ತೂರಿಸುವಂತಹ ಅತಿಕ್ರಮಣ ಪ್ರವೇಶದ ಧೋರಣೆಗಳು ಇರಬಾರದು.

ಯಾರೊಬ್ಬರ ಆಹಾರ, ಆಶ್ರಯ, ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಯಾರಾದರೂ ತಮ್ಮಿಂದಾಗುವ ಕಾಣ್ಕೆಯನ್ನು ನೀಡುವಂತಹ ಔದಾರ್ಯವನ್ನು ಹೊಂದಿರಬೇಕು. ಈ ರೀತಿಯಲ್ಲಿ ಒಂದಿಷ್ಟನ್ನು ಪಟ್ಟಿ ಮಾಡಿಕೊಂಡು ಪಟ್ಟು ಹಿಡಿದು ಉಳಿದ ವಿಷಯಗಳನ್ನು ಧಾರ್ಮಿಕವೇ ಆಗಿರಲಿ, ಸಾಂಸ್ಕೃತಿಕವೇ ಆಗಿರಲಿ, ಸಾಮಾಜಿಕವಾಗಿ ಪ್ರಚಲಿತದಲ್ಲಿದ್ದು ಬಹಳ ಜನಪ್ರಿಯವಾಗಿರಲಿ ನಿರಾಕರಿಸುವಂತಹ ಸಾಮಾಜಿಕವಾಗಿ ಧೈರ್ಯವೂ ಮಾನಸಿಕವಾಗಿ ಗಟ್ಟಿತನವೂ ಇರಬೇಕು.

ಧೈರ್ಯ ಮತ್ತು ಗಟ್ಟಿತನ

ಸಾಮಾಜಿಕವಾಗಿ ಧೈರ್ಯ ಮತ್ತು ಮಾನಸಿಕವಾಗಿ ಗಟ್ಟಿತನದಿಂದ ಕೂಡಿರುವ ಮೌಲ್ಯವನ್ನು ಪ್ರತಿಪಾದಿಸಿಕೊಂಡು ಬರುವಂತಹ ಮನಸ್ಥಿತಿಯವರಿಗೆ ಅರಿಮೆಗಳಂತಹ ಮಾನಸಿಕ ಸಮಸ್ಯೆಗಳು ವಿರಳವೆಂದೇ ಹೇಳಬಹುದು. ಏಕೆಂದರೆ ಅವರಿಗೆ ಸಮಾಜದ ಒಪ್ಪಿತ ಅಥವಾ ತಿರಸ್ಕೃತ ವಿಚಾರಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರುವ ವಿಷಯದ ಬಗ್ಗೆ ಅರಿವಿರುತ್ತದೆ.

ವ್ಯಕ್ತಿಗತವಾಗಿ ಮತ್ತು ವ್ಯಕ್ತಿಗಳಿಂದ ಕೂಡಿರುವ ಸಮಾಜಕ್ಕೆ ಯಾವುದು ಅಗತ್ಯ ಮತ್ತು ಯಾವುದು ಅನಗತ್ಯ ಎಂದು ತಿಳಿದಿರುತ್ತದೆ. ತಾವು ಯಾವ ಕ್ರಮದಲ್ಲಿ ಆಲೋಚನೆಗಳನ್ನು ಹೊಂದಿದ್ದೇವೆ ಮತ್ತು ಯಾವ ರೀತಿಯಲ್ಲಿ ಶಿಸ್ತುಬದ್ಧರಾಗಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆ ಇರುತ್ತದೆ. ಹಾಗಾಗಿ ಅರಿಮೆಗಳ ಸಮಸ್ಯೆ ಅವರಲ್ಲಿ ವಿರಳ. ದ್ವಂದ್ವಗಳು, ಗೊಂದಲಗಳು ಸಮಸ್ಯೆಗಳಿಗೆ ಸಂಪನ್ಮೂಲಗಳು.

ಸಾಮಾಜಿಕ ಸೋಂಕು

ತಿಳಿಯದೇ ಯಾವುದ್ಯಾವುದೋ ಸೋಂಕುಗಳು ತಗುಲಿ ಶರೀರದಲ್ಲಿ ಸಮಸ್ಯೆಯಾದಂತೆ, ಆಕಸ್ಮಿಕ ಮತ್ತು ಅಪಘಾತಗಳಿಂದ ದೇಹಕ್ಕೆ ಗಾಯಗಳಾದಂತೆ, ಮನಸ್ಸಿಗೂ ಕೆಲವು ಸಮಸ್ಯೆಗಳು ಬರುತ್ತವೆ, ಗಾಯಗಳು ಆಗುತ್ತವೆ. ಇವಕ್ಕೆ ಯಾವುದೋ ಸನ್ನಿವೇಶ, ಸಂಗತಿಗಳು ಮತ್ತು ಸಾಂದರ್ಭಿಕ ಒತ್ತಡಗಳು ಕಾರಣಗಳಾಗುತ್ತವೆ. ದೈಹಿಕ ಸಮಸ್ಯೆಗಳನ್ನು ತಪಾಸಣೆಗಳಿಂದ ತಿಳಿದುಕೊಳ್ಳುವಂತೆ ಮಾನಸಿಕ ಸಮಸ್ಯೆಗಳನ್ನು ಮತ್ತು ಘಾಸಿತ ಮನಸ್ಸಿನ ನೋವಿನ ಕಾರಣಗಳನ್ನೂ ವ್ಯಕ್ತಿಗಳು ಗಮನಿಸಿಕೊಳ್ಳುವಷ್ಟು ಪ್ರಜ್ಞಾವಂತರಾದರೆ ಅಲ್ಲಿಗೆ ಆರೋಗ್ಯಕರ ಮನಸ್ಸಿನ ಭರವಸೆಯನ್ನು ಹೊಂದಬಹುದು.

ಆಕಾಶದಲ್ಲಿ ಮೋಡಗಳು ಚಲಿಸಿದಂತೆ ಯಾವುದ್ಯಾವುದೋ ಮನೋವಿಕಾರಗಳು, ವಿಕೃತ ಭಾವನೆಗಳು, ಅಸಂಬದ್ಧ ಆಲೋಚನೆಗಳು ವರ್ತಿಸಲು ಮತ್ತು ಪ್ರದರ್ಶಿಸಲು ಹಾತೊರೆಯುತ್ತವೆ. ವಿಕಾರ ವಿಕೃತ ಅಕ್ರಮ ಎಂದೆಲ್ಲಾ ಹೇಳುವುದೂ ಕೂಡಾ ಸಾಮಾಜಿಕ ಅಭಿಪ್ರಾಯಗಳ ಪದಗಳೇ. ಆದರೆ ಸಮಸ್ಯೆಗೆ ಸಮಾಧಾನ ಹುಡುಕುವವರಿಗೆ ಅವು ಸಮಸ್ಯೆಗಳು ಮಾತ್ರವೇ. ಮನೋವೈದ್ಯರಿಗೆ ಅವುಗಳು ರೋಗಲಕ್ಷಣಗಳು. ಆ ರೋಗಲಕ್ಷಣಗಳನ್ನು ಅನುಸರಿಸಿ ಸಮಾಲೋಚನೆ ಮಾಡಿ ರೋಗದ ಕಾರಣವನ್ನು ಪತ್ತೆ ಮಾಡಬೇಕು ಮತ್ತು ಚಿಕಿತ್ಸೆಯನ್ನು ನೀಡಿ ರೋಗಿಯನ್ನು ರೋಗಮುಕ್ತನನ್ನಾಗಿ ಮಾಡಬೇಕು. ಇದು ವೈದ್ಯರಾದವರ ಮತ್ತು ಸಮಾಲೋಚಕರ ಉದ್ದೇಶ ಮತ್ತು ಗಮ್ಯ.

ವೈದ್ಯರು ರೋಗಿಯನ್ನು ದ್ವೇಷಿಸಲಾರರು. ಅವರ ಗುರಿ ರೋಗಿಯೆಂಬ ಜೀವಿಯ ಕ್ಷೇಮ ಮತ್ತು ರೋಗವೆಂಬುದರ ನಿರ್ನಾಮ. ಅರಿಮೆಗಳು ಮತ್ತು ಇತರ ಮಾನಸಿಕ ಸಮಸ್ಯೆಗಳು ಇರುವ ನಾವಾಗಲಿ, ನಮ್ಮ ಜೊತೆಯಲ್ಲಿರುವವರು ಯಾರೇ ಆಗಲಿ ನಾವು ಹೊಂದಬೇಕಾದ ಧೋರಣೆಯೇ ಇದು. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹುಟ್ಟುಹಾಕುವಲ್ಲಿ ಧರ್ಮಗಳು, ಸಂಸ್ಕೃತಿಗಳು, ಸಾಮಾಜಿಕ ಅಭಿಪ್ರಾಯಗಳು, ಜಾತಿ ಗೋತ್ರಗಳ ಶ್ರೇಷ್ಟತೆ ಮತ್ತು ಮಡಿವಂತಿಕೆಯ ಗೀಳುಗಳು, ಸೈದ್ಧಾಂತಿಕ ವ್ಯಸನಗಳೆಲ್ಲವೂ ತಮ್ಮ ಪಾತ್ರಗಳನ್ನು ವಹಿಸುತ್ತವೆ.

ನಮಗೆ ಅಪಘಾತವಾಗಿ ಅಥವಾ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರಕ್ತಬೇಕಾದಾಗ ಧರ್ಮ ಅಥವಾ ಜಾತಿಯನ್ನು ನೋಡದೇ ಅಗತ್ಯವಾಗಿರುವ ಗ್ರೂಪಿನ ರಕ್ತವನ್ನು ನೋಡುವಂತೆ, ಜಡ್ಡು ಬಿದ್ದ ದೇಹಕ್ಕೆ ಅಗತ್ಯವಿರುವ ಔಷಧಿಯನ್ನು ತೆಗೆದುಕೊಳ್ಳುವಂತೆ, ಧಾರ್ಮಿಕ – ಸಾಂಸ್ಕೃತಿಕ – ಸಾಮಾಜಿಕ ಕಟ್ಟುಪಾಡುಗಳಿಂದ ಉಂಟಾಗುವ ಮಾನಸಿಕ ಒತ್ತಡಗಳು ಮತ್ತು ಸಮಸ್ಯೆಗಳನ್ನು ನಿಭಾಯಿಸುವಲ್ಲಿಯೂ ಕೂಡಾ ವೈಜ್ಞಾನಿಕ ಮತ್ತು ವೈಚಾರಿಕ ಕ್ರಮಗಳನ್ನು ಅನುಸರಿಸಬೇಕು.
ದೈಹಿಕ ಸಮಸ್ಯೆಗಾದರೂ ಅವರಿವರು ಬಾಹ್ಯ ಒತ್ತಡವನ್ನು ವ್ಯಕ್ತಿಗಳ ಮೇಲೆ ಹೇರಿ ಚಿಕಿತ್ಸೆಯು ನಡೆಯುವಂತೆ ನೋಡಿಕೊಳ್ಳಬಹುದು. ಆದರೆ ಮಾನಸಿಕ ಸಮಸ್ಯೆಗೆ ಅವರಿವರು ಬಾಹ್ಯ ಒತ್ತಡವನ್ನು ತರಲು ಆಗದು. ವ್ಯಕ್ತಿಯು ತಾನೇ ಮೊದಲು ಒಪ್ಪಿಕೊಳ್ಳಬೇಕು. ತನಗಿರುವ ಸಮಸ್ಯೆಯಿಂದ ತಾನು ಬಿಡುಗಡೆಯಾಗುವ ಆಶಯವನ್ನು ಹೊಂದಬೇಕು. ಅದಕ್ಕಾಗಿ ಅವನು ಪ್ರಾಮಾಣಿಕವಾಗಿ ಕ್ರಮದಲ್ಲಿ ಒಳಗಾಗಿ, ಶಿಸ್ತನ್ನು ಪಾಲಿಸಲು ಸಿದ್ಧನಾಗಬೇಕು.

ಇದು ವ್ಯಕ್ತಿಯು ತಾನೇ ಮುಂದಾಗಬೇಕಾದ ಕಾರಣದಿಂದ ತಪಾಸಣೆಯೂ ಆಗದು, ಚಿಕಿತ್ಸೆಯೂ ನಡೆಯದು, ಗುಣಮುಖರೂ ಆಗರು. ಹಾಗಾಗಿಯೇ ಮಾನಸಿಕ ಸಮಸ್ಯೆಗಳ ನಿರ್ವಹಣೆಯಲ್ಲಿ ಭಾರತವು ಬಹಳ ಹಿಂದಿದೆ. ವೈಜ್ಞಾನಿಕ ತಪಾಸಣೆಗೆ ಮತ್ತು ಚಿಕಿತ್ಸೆಗೆ ಒಡ್ಡಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆಯಿದೆ. ರೋಗಿಗಳ ಸಂಖ್ಯೆಯು ಬಹುದೊಡ್ಡ ಪ್ರಮಾಣದಲ್ಲಿದೆ. ಮಾನಸಿಕ ರೋಗಿಯೆಂದರೆ ಕಡೆಗಣಿಸಿ ಕಾಣುವಂತಹ ಮನಸ್ಥಿತಿ ಸಮಾಜದಲ್ಲಿದೆ.

ಅವರನ್ನು ಕೇವಲವಾಗಿ ಕಾಣುವ, ನಿಮ್ಹಾನ್ಸ್ ನಂತಹ ಪ್ರತಿಷ್ಟಿತ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಿರುವಂತಹ ಚಿಕಿತ್ಸಾ ಕೆಂದ್ರವನ್ನು “ಹುಚ್ಚರ ಆಸ್ಪತ್ರೆ” ಎಂದು ಅವಹೇಳನಕಾರಿಯಾಗಿ ಹಾಸ್ಯ ಮತ್ತು ಅಪಹಾಸ್ಯಗಳನ್ನು ಮಾಡುವ ಜನರಿದ್ದಾರೆ. ಇಂತಹ ಸೋಶಿಯಲ್ ಸ್ಟಿಗ್ಮಾ ಅಥವಾ ಸಾಮಾಜಿಕ ಅಪಕೀರ್ತಿಯೂ ಕೂಡಾ ಮಾನಸಿಕ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳದಿರಲು ಕಾರಣ. ಆದರೆ ಸಾಮಾಜಿಕ ಅಪಕೀರ್ತಿಯನ್ನು ಅಥವಾ ಕಳಂಕವನ್ನು ಸೃಷ್ಟಿಸಿರುವವರಾದರೂ ಯಾರು? ಮತ್ತಿದೇ ವ್ಯಕ್ತಿಗಳು.

ತಾವೇ ಸಮಸ್ಯೆಯಲ್ಲಿರುವರು, ತಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಲಾಗದಂತೆ ತಾವೇ ಸಾಮಾಜಿಕ ಮನಸ್ಥಿತಿಯನ್ನು ನಿರ್ಮಿಸುವರು. ಇದು ಇಂದಿನ ಬಹುದೊಡ್ಡ ಸಮಸ್ಯೆ. ಇದರ ಬಗ್ಗೆ ನಾವು ಮೊದಲು ಜಾಗೃತರಾಗುವುದು ಮತ್ತು ಇತರರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಸಧ್ಯದ ಕರ್ತವ್ಯ. ಇದಾದರೆ ಆರೋಗ್ಯಕರವಾದ ಮನಸ್ಸು ಮತ್ತು ಸಮಾಜವನ್ನು ಹಂತಹಂತವಾಗಿಯಾದರೂ ಮುಂದಿನ ಪೀಳಿಗೆಗಳಿಗೆ ನಿರ್ಮಿಸಲು ಸಾಧ್ಯವೇನೋ ನೋಡಬಹುದು.

(ಮುಂದುವರಿಯುತ್ತದೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version