ಅಂತರಂಗ
ಅರಿಮೆಯ ಅರಿವಿರಲಿ-30 : ಬಯಕೆ ಮತ್ತು ಭಯಗಳ ಬಂಧನದಲ್ಲಿ
- ಯೋಗೇಶ್ ಮಾಸ್ಟರ್
ವ್ಯಕ್ತಿಯ ಬಯಕೆ ಮತ್ತು ಭಯಗಳೆರಡೂ ನೈಸರ್ಗಿಕ ಪ್ರವೃತ್ತಿಗಳಂತೆ. ಈ ಎರಡೂ ಅತಿಯಾಗಿ ಹೆಚ್ಚಾಗಿದ್ದರೆ, ಅತಿಯಾಗಿ ಕಡಿಮೆಯಿದ್ದರೆ ಅಲ್ಲಿ ಸಮಸ್ಯೆ ಇದೆ ಎಂದು ಅರ್ಥ. ಹಾಗೆಯೇ ಅವು ವ್ಯಕ್ತಪಡಿಸಲಾಗದಂತೆ ಒತ್ತಡಕ್ಕೊಳಗಾದರೂ ಮಾನಸಿಕ ಸಮಸ್ಯೆಗಳಾಗುತ್ತವೆ. ಸಾಮಾನ್ಯವಾಗಿ ಮನುಷ್ಯನ ಎಲ್ಲಾ ಮಾನಸಿಕ ಸಮಸ್ಯೆಗಳ ಮೂಲ ಈ ಎರಡು ಪ್ರವೃತ್ತಿಗಳಲ್ಲಿಯೇ.ಬಯಕೆ ಅಥವಾ ಆಸೆಯನ್ನು ಹಾಗೂ ಭಯವನ್ನು ಬೇರೆ ಬೇರೆ ಒಳ್ಳೊಳ್ಳೆಯ ಶಬ್ಧಗಳಲ್ಲಿಯೂ ಕೂಡಾ ವ್ಯಕ್ತಪಡಿಸುತ್ತೇವೆ.
ಆಸೆಪಡುವವನನ್ನು ಕ್ಷುಲ್ಲಕವಾಗಿ ಅಥವಾ ಕನಿಷ್ಟವಾಗಿ ನೋಡುವ ಒಂದು ರೀತಿಯ ಧಾರ್ಮಿಕ ಅಥವಾ ಆಧ್ಯಾತ್ಮಿಕ ಅಥವಾ ನೈತಿಕ ಸಂಪ್ರದಾಯ ನಮ್ಮ ದೇಶದ ಬಹುಜನರಲ್ಲಿ ಗುಪ್ತಗಾಮಿನಿಯಾಗಿ ಇದೆ. ಹಾಗಾಗಿ ಅದಕ್ಕೆ ಬೇರೊಂದು ರೀತಿಯಲ್ಲಿ ವ್ಯಕ್ತಪಡಿಸುವ ಬಗೆಗಳನ್ನು ಅನ್ವೇಷಣೆ ಮಾಡುತ್ತಿರುತ್ತಾರೆ. ನನಗೆ ಅದು ಇಷ್ಟ ಎನ್ನುವ ಮನಸ್ಥಿತಿಯಲ್ಲಿರುವಷ್ಟು ಮುಕ್ತವಾದ ಭಾವದಲ್ಲಿ ನನಗೆ ಅದನ್ನು ಕಂಡರೆ ಆಸೆ ಎಂದು ಹೇಳರು.ಧಾರ್ಮಿಕತೆಯು ಆಸೆ ಅಥವಾ ಕಾಮವನ್ನು ಖಂಡಿಸುತ್ತಾ ಬಂದಿರುವ ಪರಿಣಾಮವಿದು.
ಅದೆಷ್ಟು ಜನಕ್ಕೆ ಬೇರೆಯವರ ಮುಂದೆ ಕನ್ನಡಿಯ ಮುಂದೆ ತಮ್ಮ ತಲೆಗೂದಲನ್ನು ಸರಿಮಾಡಿಕೊಂಡು, ತಮ್ಮ ಸೌಂದರ್ಯ ನೋಡಿಕೊಂಡು ಪ್ರಶಂಸಿಸಿಕೊಂಡು ಹೋಗಲು ಸಾಧ್ಯ? ಬೇರೆಯವರ ಉಪಸ್ಥಿತಿಯಲ್ಲಿ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲು ಬಹಳ ಜನ ನಾಚಿಕೊಳ್ಳುತ್ತಾರೆ. ಯಾರೂ ನೋಡದಿದ್ದ ಕಡೆ ವಾಹನಗಳಲ್ಲಿರುವ ಕನ್ನಡಿಗಳಲ್ಲಿ ನೋಡಿಕೊಂಡು ತಲೆ ಸರಿಮಾಡಿಕೊಳ್ಳುತ್ತಾರೆ. ಫೇಸ್ಬುಕ್ ಎಂಬ ವೇದಿಕೆ ರೂಪುಗೊಂಡ ಮೇಲೆ ಜನರ ಅರಿಮೆಯು ಅನಾವರಣಗೊಳ್ಳಲು ಸಾಧ್ಯವಾಗಿದೆ. ಏಕೆಂದರೆ, ನಾನೊಬ್ಬನೇ ಅಲ್ಲ ನನ್ನ ಮುಖವನ್ನು ನಾನಾ ಭಂಗಿಗಳಲ್ಲಿ ಹಾಕಿಕೊಂಡು ನೋಡಿಕೊಳ್ಳುವುದು. ಇನ್ನೂ ಬೇಕಾದಷ್ಟು ಜನ ಇದ್ದಾರೆ ಎಂಬ ಧೈರ್ಯ ಮತ್ತು ಸಾಮಾನ್ಯೀಕರಿಸಿಕೊಂಡ ಭಾವದಲ್ಲಿ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಯತ್ನಿಸುತ್ತಾರೆ.
ಸಾಮಾನ್ಯೀಕರಿಸಿಕೊಳ್ಳುವ ಕೀಳರಿಮೆ
ತಮ್ಮ ಯಾವುದಾದರೂ ಆಸೆ, ಭಯ ಅಥವಾ ಸಾಮಾಜಿಕವಾಗಿ ಅಷ್ಟು ಮನ್ನಣೆಗೆ ಒಳಗಾಗದ ಗುಣವನ್ನು ಸಾಮಾನ್ಯೀಕರಿಸಿಕೊಳ್ಳುವುದು, ತಮ್ಮ ಆತ್ಮರತಿಯ ಅಥವಾ ಆತ್ಮಕೇಂದ್ರಿತ ವಿಷಯವನ್ನು ಎಲ್ಲರಿಗೂ ಎಂದು ಆರೋಪಿಸುವುದು ಒಂದು ಕೀಳರಿಮೆಯ ಗುಣವೇ. ತಾವು ದೊಡ್ಡ ಮನೆಗಾಗಿ, ಸುಂದರ ಸಂಗಾತಿಗಾಗಿ, ಆಡಂಬರದ ಜೀವನಕ್ಕಾಗಿ ಹಂಬಲಿಸುವುದಿದ್ದರೆ, ಅಂತಹ ಆಸೆಯನ್ನು ಹೊಂದಿರುವ ಕೀಳರಿಮೆಯನ್ನು ಮೆಟ್ಟಲು ಅವರು ಹೇಳುವುದೇನೆಂದರೆ, “ಯಾರಿಗೆ ತಾನೇ ಆಸೆ ಇರುವುದಿಲ್ಲ?”
ತಮಗೆ ನೋವು ಅಥವಾ ಸಾವಿನಂತಹ ಯಾವುದಾದರೊಂದು ವಿಷಯದಲ್ಲಿ ಭಯವಾದರೆ, “ಯಾರಿಗೆ ತಾನೇ ಭಯವಾಗುವುದಿಲ್ಲ?” ಎನ್ನುತ್ತಾರೆ. ಅದೇ ರೀತಿಯಲ್ಲಿ ತಾವು ಕೋಪಗೊಂಡು ಜಗಳವಾಡಿದಾಗ ಅದಕ್ಕೂ, “ಹೀಗೆ ಮಾಡಿದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ? ನನ್ನ ಜಾಗದಲ್ಲಿ ನೀವೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?” ಎನ್ನುತ್ತಾರೆ. ಗಂಡ ಹೆಂಡತಿಗೆ ಹೊಡೆದಾದ ಮೇಲೆ “ಒಂದು ಹೆಂಗಸು ಹೀಗೆ ಮಾಡಿದರೆ, ಯಾವ ಗಂಡಸಿಗಾಗಲಿ ಕೋಪ ಬರಲ್ಲ?” ಎಂದು ಪ್ರಶ್ನಿಸುತ್ತಾ ಕೋಪಿಸಿಕೊಂಡು ವರ್ತಿಸಿರುವ ಕೀಳರಿಮೆಯನ್ನು ಅಡಗಿಸಲು ಯತ್ನಿಸುತ್ತಾರೆ.
ಇದೇ ಸಮಸ್ಯೆ ಇರುವುದು. ಬಯಕೆ, ಭಯ, ಕೋಪಗಳೇ ಇತ್ಯಾದಿ ಹಲವು ಗುಣಗಳು ಸಹಜವಾಗಿದ್ದರೂ ಅವುಗಳ ಬಗ್ಗೆ ಹುಟ್ಟಿಹಾಕಿರುವ ಪರಿಕಲ್ಪನೆಗಳ ದೆಸೆಯಿಂದಾಗಿ ಅವುಗಳ ಹುಟ್ಟುವಿಕೆಯಲ್ಲಿಯೂ,ಪ್ರದರ್ಶಿಸುವಿಕೆಯಲ್ಲಿಯೂ ಜಗ್ಗಾಟಗಳು ನಡೆಯುತ್ತಾ ಮಾನಸಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ. ವ್ಯಕ್ತಿಯೊಬ್ಬನ ಸಾಧನೆಯ ಮೇಲಿನ ಅಸೂಯೆ ಮತ್ತು ಆಸೆಗಳು ಅದನ್ನು ಆದರ್ಶವೆಂದೂ ನಾಜೂಕಾಗಿ ಹೇಳುವುದುಂಟು. ಗಮನಿಸಿ, ನಾವು ಹೊಂದಲು ಆಸೆ ಪಡುವುದನ್ನೇ ಆದರ್ಶ ಎನ್ನುತ್ತೇವೆ. ಹಾಗಾಗಿ ನಮ್ಮ ಮನದ ಆಸೆಯ ಬಗ್ಗೆ ಕನಿಷ್ಟಪಕ್ಷ ನಾವಾದರೂ ಬಹಳ ಮುಕ್ತವಾದ ಧೋರಣೆಗಳನ್ನು ಹೊಂದಿರಬೇಕು.
ಭಯದ ಬಂಧನದಲ್ಲಿ
ತಮ್ಮ ಆಲೋಚನೆಗಳನ್ನು ತಾವು ಯಾವ ಗುಣವಾಚಕಗಳಿಲ್ಲದೇ ನೋಡಿಕೊಳ್ಳಲು ಸಾಧ್ಯವಾದರೆ ಅವನು ಬಹಳಷ್ಟು ಅರಿಮೆಗಳಿಂದ ಮುಕ್ತಿ ಹೊಂದಬಹುದು. ಕೆಲವರಿಗೆ ತಾವು ಕೆಟ್ಟ ಕೆಲಸ ಮಾಡದೇ ಇದ್ದರೂ ಎಲ್ಲಿ ಮಾಡಿಬಿಡುತ್ತೇವೆಯೋ ಎಂದು ಹೆದರುತ್ತಿರುತ್ತಾರೆ.ಕೆಟ್ಟ ಕೆಲಸವನ್ನು ಮಾಡಿಬಿಡುತ್ತೇವೆ ಎಂಬ ಫೋಬಿಯಾ. ಒಂದು ಒಳ್ಳೆಯ ಸಮಾರಂಭ ನಡೆಯುತ್ತಿರುತ್ತದೆ.ಸಭ್ಯಸ್ಥರು ಮತ್ತು ಗೌರವಾನ್ವಿತ ವ್ಯಕ್ತಿಗಳೆಲ್ಲಾ ಸೇರಿದ್ದಾರೆ ಎಂದಿಟ್ಟುಕೊಳ್ಳಿ. ಅವನಿಗೆ ಒಂದು ಭಯವಾಗುತ್ತಿರುತ್ತದೆ. ಎಲ್ಲಿ ತಾನು ಇದ್ದಕ್ಕಿದ್ದಂತೇ ಕೆಟ್ಟ ಮಾತುಗಳನ್ನು ಆಡಿಬಿಡುತ್ತೇನೆಯೋ, ಕೆಟ್ಟದಾಗಿ ವರ್ತಿಸಿಬಿಡುತ್ತೇನೆಯೋ ಎಂದು ತಮ್ಮನ್ನು ತಾವೇ ಸಂದೇಹಿಸಿಕೊಳ್ಳುತ್ತಿರುತ್ತಾರೆ. ಅಥವಾ ಲೈಂಗಿಕವಾಗಿ ತನ್ನ ಕಾಮುಕತೆಯನ್ನು ಪ್ರದರ್ಶಿಸಿಬಿಡುತ್ತೇನೆಯೋ ಎಂಬ ಭಯವಾಗುತ್ತಿರುತ್ತದೆ.
ಅವರಿಗೆ ಹಾಗೆ ಕೆಟ್ಟದಾಗಿ ವರ್ತಿಸಲು ಇಷ್ಟವಿಲ್ಲ. ಆದರೆ ಅದನ್ನು ತಾವು ಮಾಡಿಬಿಡುತ್ತೇವೆ ಎಂಬ ಭಯ. ಹಾಗೆ ವರ್ತಿಸಿದಾಗ ತಮ್ಮನ್ನು ಕಡೆಗಣಿಸುತ್ತಾರೆ, ತಮ್ಮ ವ್ಯಕ್ತಿತ್ವಕ್ಕೆ, ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಭಯವಾಗುತ್ತಿರುತ್ತದೆ. ಅದರಿಂದ ತಮಗೆ ದೊರಕುವ ಪ್ರತಿಕ್ರಿಯೆ ಬಹಳ ನಕಾರಾತ್ಮಕವಾಗಿರುತ್ತದೆ ಎಂಬ ಭಯ. ಇನ್ನೂ ಕೆಲವರಲ್ಲಿ ತಮ್ಮಲ್ಲಿ ನಕಾರಾತ್ಮಕವಾದ ಆಲೋಚನೆಗಳು ಇವೆಯೆಂದೇ ಕೀಳರಿಮೆಯಲ್ಲಿ ಬಳಲುತ್ತಾರೆ. ಅವರಲ್ಲಿ ಇದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಆದರೂ ಹೆದರುತ್ತಿರುತ್ತಾರೆ. ಭಯ ಮತ್ತು ಕೀಳರಿಮೆ; ಈ ಎರಡೂ ಸಾಮಾನ್ಯವಾಗಿ ಸ್ನೇಹಿತರು. ಆದರೆ ತಮಾಷೆ ಏನೆಂದರೆ ತಾವೇನೋ ಮಾಡಿಬಿಡುತ್ತೇವೆ, ಮಾಡಿಬಿಡುತ್ತೇವೆ ಎಂದು ತಮ್ಮಿಂದ ನಕಾರಾತ್ಮಕವಾದುದು ಸಂಭವಿಸಿಬಿಡುತ್ತದೆ ಎಂದು ಹೆದರುತ್ತಿರುತ್ತಾರಲ್ಲಾ, ಸಾಮಾನ್ಯವಾಗಿ ಅವರು ಅಂತವನ್ನೇನೂ ಮಾಡುವುದೇ ಇಲ್ಲ. ಬರೀ ಹೆದರಿಕೊಳ್ಳುತ್ತಿರುತ್ತಾರೆ ಅಷ್ಟೇ.
ವಿತರ್ಕಕ್ಕೆ ಪ್ರತಿಪಕ್ಷ
ಇದರಿಂದ ಹೊರಗೆ ಬರುವುದು ಹೇಗೆ? ಪತಂಜಲಿ ಯೋಗಸೂತ್ರದಲ್ಲಿ ಒಂದು ಸುಂದರವಾದ ಸೂತ್ರವಿದೆ. “ವಿತರ್ಕ ಭಾವನೇ ಪ್ರತಿಪಕ್ಷ ಭಾವನಾಂ” ಎಂದು. ಅಂದರೆ, ಬೇಡದ, ಕೆಟ್ಟದಾದ ಭಾವನೆ ಉಂಟಾದಾಗ, ಅದಕ್ಕೆ ವಿರುದ್ಧವಾದ ಭಾವನೆಯನ್ನು ತಂದುಕೊಳ್ಳುವುದು. ಮೊದಲು ತಮ್ಮಲ್ಲಿ ಬಂದಿರುವ ಭಾವನೆ ಅಥವಾ ವಿಚಾರವನ್ನು ಗಮನಿಸಬೇಕು. ಅದು ಬಂದಿರುವುದನ್ನು ಒಪ್ಪಿಕೊಳ್ಳಬೇಕು. ನಂತರ ಅದಕ್ಕೆ ವಿರುದ್ಧವಾದ ಸಕಾರಾತ್ಮಕವಾದ ಆಲೋಚನೆಯನ್ನು ಮಾಡಬೇಕು. ಇಷ್ಟು ಗಮನಿಸಿಕೊಳ್ಳೋಣ. ನಮಗೆ ಯಾವುದು ಆಗಬಾರದು ಎಂಬುದಿರುತ್ತದೆಯೋ ಆ ಆಲೋಚನೆ ಬಂದಾಗ ತಿರಸ್ಕರಿಸೋಣ. ಅದರ ಬದಲಾಗಿ ಯಾವುದು ಆಗಬೇಕು ಎಂದು ಆಸೆ ಪಡುತ್ತೇವೆಯೋ ಅದನ್ನು ಅದರ ಬದಲಾಗಿ ನೆನೆಸಿಕೊಳ್ಳೋಣ. ಉದ್ದೇಶ ಪೂರ್ವಕವಾಗಿ ನೆನೆಸಿಕೊಳ್ಳೋಣ.
ಆಸೆ ಅಗತ್ಯವೇ? ಭಯಕ್ಕೆ ಕಾರಣವಿದೆಯೇ?
ಬಯಕೆ ಮತ್ತು ಭಯ; ಈವೆರಡೂ ನಮಗೆ ಯಾವಾಗಲೇ ಆಗಲಿ ಮಾನಸಿಕ ಸಮಸ್ಯೆಗಳಾಗಿ ಕಾಡತೊಡಗಿದಾಗ ಮಾಡಬೇಕಾಗಿರುವುದೇ ಇಷ್ಟು. ಮೊದಲು ಬಯಕೆಯು ಅಗತ್ಯವೇ ಅಥವಾ ಅನಗತ್ಯವೇ ಎಂಬ ಆಲೋಚನೆ. ಅದೇ ರೀತಿಯಲ್ಲಿ ತಾನು ಭಯಪಡುವುದಕ್ಕೆ ಕಾರಣವಿದೆಯೇ? ನೋಡಿ, ಅನಗತ್ಯವಾದ ಆಸೆಯನ್ನು ಗುರುತಿಸಿದರೆ, ಅಕಾರಣವಾದ ಭಯವನ್ನು ಕಂಡುಕೊಂಡರೆ ಅರ್ಧ ಮನೋರೋಗ ಕಡಿಮೆಯಾಯಿತೆಂದೇ ಅರ್ಥ.ಅರಿವಿನ ಮೂಲಕ ಅರಿಮೆಗಳನ್ನು ತೊಡೆದು ಹಾಕುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆಂದೇ ಅರ್ಥ.
ಬಹಳಷ್ಟು ಜನ ತಮ್ಮಲ್ಲಿ ಸಮಸ್ಯೆಯು ಇಲ್ಲವೇ ಇಲ್ಲ ಎಂಬಂತೆ ತಮ್ಮ ಮಾನಸಿಕ ಸಮಸ್ಯೆಗಳನ್ನು, ಅರಿಮೆಗಳನ್ನು ಒಪ್ಪಿಕೊಳ್ಳದೇ ನಿರಾಕರಿಸುತ್ತಿರುತ್ತಾರೆ. ಈ ಬಗೆಯ ಸಮಸ್ಯೆಗಳ ಬಗ್ಗೆ, ಅರಿಮೆಗಳ ಬಗ್ಗೆ ತಿಳುವಳಿಕೆ ಬಂದಾಗ ತಮ್ಮಲ್ಲಿ ಅದನ್ನು ಗುರುತಿಸಿಕೊಳ್ಳುವ ಬದಲು ತಾವು ವ್ಯವಹರಿಸುವ ಸಂಬಂಧಗಳಲ್ಲಿ ಅವುಗಳನ್ನು ಗುರುತಿಸುತ್ತಿರುತ್ತಾರೆ. ಅಲ್ಲೂ ಒಂದು ಸಮಸ್ಯೆ ಇರುತ್ತದೆ. ಯಾವ ಸಂಬಂಧಗಳಿಂದ ತಮಗೆ ಹಿತ ಸಿಗುತ್ತಿರುತ್ತದೆಯೋ ಅವರಲ್ಲಿ ತೊಂದರೆ ಇದ್ದರೂ ಅದನ್ನು ಒಳ್ಳೆಯ ರೀತಿಯಲ್ಲಿ ನೋಡುವುದೋ ಅಥವಾ ಅನುಕಂಪದಿಂದ ನೋಡುವುದೋ ಮಾಡುತ್ತಾರೆ. ಒಂದು ವೇಳೆ ಅವರ ಸಂಬಂಧದಿಂದ ಹಿತವಿಲ್ಲದಿದ್ದ ಪಕ್ಷದಲ್ಲಿ ವ್ಯಕ್ತಿಯೇ ಒಂದು ಪೀಡೆಯಾಗಿ ಪರಿಗಣಿಸುತ್ತಾರೆ.
ಇದು ಬಹಳ ಸಾಮಾನ್ಯ. ಮಗುವಾಗಿದ್ದಾಗಿನಿಂದ ರೂಢಿಯಲ್ಲಿರುವುದು. ನಮ್ಮಲ್ಲಿ ಗಾದೆಯೊಂದಿದೆ “ಮಕ್ಕಳು ಇಕ್ಕಿದವ್ರ ಕಡೆ” ಅಂತ. ಅದು ನಿಜ.ಯಾರೋ ಹೆಂಗಸು, ಅತ್ತೆಯೋ, ಅಜ್ಜಿಯೋ, ಪಕ್ಕದ ಮನೆಯಾಕೆಯೋ ನಿಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರೆಂದರೆ ತಾಯಿಗಿಂತ ಮಿಗಿಲಾಗಿ ನೋಡಿಕೊಂಡರು ಎನ್ನುತ್ತೀರಿ. ಜಡ್ಡು ಬಿದ್ದಾಗ ನೋಡಿಕೊಳ್ಳುವುದು, ಹಸಿವಾದಾಗ ಉಣಿಸುವುದು, ಗಲೀಜಾದಾಗ ತೊಳೆಯುವುದು; ಹೀಗೆ ಹಲವು ಕೆಲಸಗಳನ್ನು ದೂರು ದುಮ್ಮಾನಗಳಿಲ್ಲದೇ ಮಾಡಿದವರಾರೇ ಆಗಲಿ ತಾಯಿ ಎಂದು ಪರಿಗಣಿಸುವ ಪ್ರಯತ್ನ ಮಾಡುತ್ತಾರೆ. ಒಟ್ಟಾರೆ ಹಿತ ಮತ್ತು ಸುಖವಿರುವ ಸಂಬಂಧಗಳೇ ಮಾನ್ಯ. ತಾಯಿ ಹಾಗಿರಲಿ ಇಲ್ಲದಿರಲಿ, ತಾಯಿ ಎಂದರೆ ಈ ಬಗೆಯ ವ್ಯಕ್ತಿತ್ವ ಮತ್ತು ಅವಳ ಕೆಲಸಗಳು ಇಂತವು ಅಂತ.
ದುಃಖಿರಾಮಿ
ಇನ್ನೂ ಕೆಲವರಲ್ಲಿ ಹುಸಿ ಕೀಳರಿಮೆ ಇರುತ್ತದೆ. ಇವರ ಕತೆ ಏನೆಂದರೆ, ತಮ್ಮ ಬಗ್ಗೆ, ಇತರರ ಬಗ್ಗೆ, ಇಡೀ ಮನುಷ್ಯ ಕುಲದ ಬಗ್ಗೆ ‘ಸರಿ ಇಲ್ಲ’ ಎಂಬ ಆಲೋಚನೆಯೇ ಮೂಲಭೂತವಾಗಿರುತ್ತದೆ. ಇದಕ್ಕೇನೂ ಕಾರಣಬೇಡ. ಯಾರಿಗೆ ಯಾರೂ ಆಗಲ್ಲ ಎನ್ನುವುದು ಇವರ ಸಾಮಾನ್ಯ ಘೋಷವಾಕ್ಯ. ಒಳ್ಳೆಯ ಗಂಡ, ಹೆಂಡತಿ, ಮಕ್ಕಳು, ತಂದೆ ತಾಯಿಯೇ ಇರಲಿ, ಇವರ ಮಾತು ಏನೆಂದರೆ, “ಎಲ್ರೂ ಅವರವರ ಕೆಲಸ ಆಗಬೇಕೂಂದ್ರೇ ಚೆನ್ನಾಗಿರುತ್ತಾರೆ. ಯಾರಿಗೆ ಯಾರೂ ಆಗಲ್ಲ” ಎಂದು ಅಸಂತೋಷದಲ್ಲಿಯೇ ಇರುತ್ತಾರೆ. ದುಃಖಿರಾಮಿಗಳಿವರು. ತಮ್ಮಿಂದಾಗಲಿ, ತಮ್ಮೊಡನೆ ಇರುವ ಇತರರಿಂದಾಗಲಿ ಏನೂ ತೊಂದರೆಯಾಗಿರುವುದಿಲ್ಲ ಆದರೂ ಸಂತೋಷದ ಗೀತೆ ಹಾಡುವುದೇ ಇಲ್ಲ. ಸದಾ ಶೋಕಗೀತೆಯೇ. ಏನಾದರೂ ಕೇಳಿ, ಅವರು ಎತ್ತುವುದು ಅಪಸ್ವರವೇ.
ಅಲ್ಲೊಂದು ಅಜ್ಜಿ ಇತ್ತು. ಅವರ ಮುಂದೆ ಅವರ ಎರಡು ಮೊಮ್ಮಕ್ಕಳು ಆಡುತ್ತಿದ್ದರು. ಆದರೆ ಅಜ್ಜಿಯ ಮುಖದಲ್ಲಿ ಕಾರ್ಮೋಡ. “ಯಾಕಜ್ಜೀ ಬೇಜಾರಲ್ಲಿದ್ದೀರಾ? ಮೊಮ್ಮಕ್ಕಳನ್ನು ನೋಡಿ. ಎಷ್ಟು ಚೆನ್ನಾಗಿ ಆಡ್ತಿದ್ದಾರೆ. ಖುಷಿ ಪಡಿ” ಎಂದರೆ, “ಏನು ಮೊಮ್ಮಕ್ಕಳೋ ಏನೋ. ಏನು ಖುಷಿನೋ ಏನೋ. ಇವತ್ತು ಎಲ್ಲಾ ಖುಷಿಯಾಗೇ ಇದ್ದಾರೆ. ರೆಕ್ಕೆಪುಕ್ಕ ಬಂದ ಮೇಲೆ ಅವರವರ ಪಾಡು ಅವರವರು ನೋಡಿಕೊಂಡು ಹೋಗುತ್ತಾರೆ” ಇದು ಅವರ ಮಾತು. ಬೂಂದಿ ತಿನ್ನುವಾಗ ಭೇದಿಯಾಗುವ ಭಯ.
ಸಹೋದ್ಯೋಗಿಗಳೊಂದಿಗೆ ಯಾವ ತಂಟೇ ತಕರಾರು ಇಲ್ಲದಿದ್ದರೂ, ಇಬ್ಬರೂ ಕಿತ್ತಾಡಿಕೊಂಡು ಬೇರಾಗುವ ಅಥವಾ ಕೆಲಸ ಕಳೆದುಕೊಳ್ಳುವ ಭಯ. ಅದರಲ್ಲೂ ತನ್ನ ಕಾರಣದಿಂದ ಅಂತ. ಇನ್ನೂ ವಿಪರೀತಕ್ಕೆ ಹೋಗುವ ಇವರ ಮನೋಭಾವವೆಂದರೆ, ತಾವಿರುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ, ಅಥವಾ ಯಾರಿಂದಾದರೂ ಏನಾದರೂ ಘಟಿಸಿದರೆ, ಇದೆಲ್ಲಾ ತನ್ನಿಂದಲೇ ಆಗಿದ್ದು ಎಂದು ದುಃಖಿಸುವುದು. ಕೆಲವೊಮ್ಮೆ ನೇರವಾಗಿ ಹೇಳುತ್ತಾರೆ. ಕೆಲವೊಮ್ಮೆ ಹೇಳದೆಯೇ ಒಳಗೊಳಗೇ ನರಳುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಅವರಿಗೂ ಅಲ್ಲಿ ಘಟಿಸಿರುವ ಅಹಿತಕರ ಸಂಗತಿಗೂ ಏನೂ ಸಂಬಂಧವೇ ಇರುವುದಿಲ್ಲ.
ಈ ಮನೋಭಾವವನ್ನು ಕನ್ನಡ ಸಿನಿಮಾವೊಂದರಲ್ಲಿ ಹಾಸ್ಯನಟ ಉಮೇಶ್ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. “ಅಯ್ಯೋ, ನಾನು ಅವರ ಮನಸ್ಸಿಗೆ ನೋವು ಮಾಡಿಬಿಟ್ಟೆನೇ? ಅಯ್ಯೋ, ನನ್ನಿಂದಾಗಿ ಅವರಿಗೆ ಹೀಗೆ ತೊಂದರೆಯಾಗಿಬಿಟ್ಟಿತೇ” ಎಂದು ಎಲ್ಲರಿಗೂ ಕಿರಿಕಿರಿ ಮಾಡುತ್ತಿರುತ್ತಾರೆ. “ನಿನ್ನಿಂದ ನಮಗೇನೂ ತೊಂದರೆ ಆಗಲಿಲ್ಲ. ನೀನು ಹೀಗೆ ಪದೇ ಪದೇ ಅನ್ನುವುದರಿಂದ ತೊಂದರೆ, ಕಿರಿಕಿರಿಯಾಗುತ್ತಿದೆ” ಎಂದು ಅವರ ಸಹ ಕಲಾವಿದರು ಹೇಳುತ್ತಿರುತ್ತಾರೆ. ಅದು ನಿಜ. “ಅಯ್ಯೋ, ನಾನು ಹೀಗೆ ಮಾಡಿಬಿಟ್ಟೆನೇ? ನಿಮಗೆ ತೊಂದರೆ ಕೊಟ್ಟುಬಿಟ್ಟೆನೇ!” ಎನ್ನುವ ಅರಿಮೆಯಿಂದಾಗಿ ಇಲ್ಲದಿರುವ ಕಿರಿಕಿರಿ ಇತರರಲ್ಲಿ ಹುಟ್ಟುತ್ತಿರುತ್ತದೆ. ಇದರಿಂದ ಹೊರಗೆ ಬರುವುದಕ್ಕೆ ಒಂದು ಸೂಕ್ತವಾದ ಉಪಾಯವೆಂದರೆ, ತಾವು ಮಾಡಿರುವಂತಹ ತಪ್ಪುಗಳನ್ನು ಪದೇಪದೇ ಸ್ಮರಣೆಗೆ ತಂದುಕೊಳ್ಳದೇ ಇರುವುದು. ಮುಖ್ಯವಾಗಿ ಮುಕ್ತವಾಗಿ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಮೇಲೆ, ತಮ್ಮನ್ನು ತಾವು ಕ್ಷಮಿಸಿಕೊಳ್ಳುವುದು. ತಮ್ಮನ್ನು ತಾವು ಕ್ಷಮಿಸಿಕೊಳ್ಳದಿದ್ದರೆ, ಇತರರು ಕ್ಷಮಿಸಿದರೂ ಅಪರಾಧದ ಅರಿಮೆ ಉಳಿದೇ ಉಳಿದಿರುತ್ತದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243