ಅಂತರಂಗ
ಅರಿಮೆಯ ಅರಿವಿರಲಿ-8 : ಶೀಲ ಅಶ್ಲೀಲ
- ಯೋಗೇಶ್ ಮಾಸ್ಟರ್
ಶೀಲದ ಗೀಳಿನ ಸಿನಿಮಾಗಳು
ಶೀಲ ಅಶ್ಲೀಲದರಿಮೆ (Madonna/Whore Complex)ನಮ್ಮ ಭಾರತೀಯ ಸಿನಿಮಾಗಳಲ್ಲಿ ಚೆನ್ನಾಗಿ ಅರ್ಥವಾಗುತ್ತದೆ. ಪಾಪ, ಅವರಾದರೋ ಹೊಸದನ್ನೇನೂ ಸೃಷ್ಟಿಸಿ ತೋರುವುದಲ್ಲ. ಸಮಾಜದಲ್ಲಿ ಸಾಮಾನ್ಯವಾಗಿರುವ ಮನಸ್ಥಿತಿಯನ್ನೇ ವಿಜೃಂಭಿಸಿ ತೋರಿಸುತ್ತಾರೆ. ಆಗ ಸಮಾಜವೂ ಅದನ್ನು ಮೆಚ್ಚುವುದು ಮಾತ್ರವಲ್ಲದೇ ತನ್ನ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿಕೊಳ್ಳುತ್ತದೆ.
“ಹೆಣ್ಣಿನ ಬಾಳು ಹಣ್ಣಿನ ಹೋಳು, ಜಾರಿದರೊಮ್ಮೆ ಮಣ್ಣಿನ ಧೂಳು” ಎಂದು ಹಾಡುವ ಹೆಣ್ಣು ತನ್ನ ಶೀಲವನ್ನು ಎಷ್ಟು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಬಹಳ ಸೂಕ್ಷ್ಮವಾಗಿರುವ ಗಾಜಿನ ವಸ್ತುವಂತೆ ಶೀಲ ಎನ್ನುವುದು. ಒಮ್ಮೆ ಬಿತ್ತೋ, ಒಡೆದು ಹೋಯಿತೋ, ಮುಗಿಯಿತು. ಅದಿನ್ನು ಬಿಸಾಡಬೇಕು. ತ್ರಿವೇಣಿಯವರ ಶರಪಂಜರದಲ್ಲಿ ಕಾವೇರಿಗೆ ಆವರಿಸಿದ್ದ ಸಮಸ್ಯೆ ಇದೆಯೇ. ಅಂದೆಂದೋ ಅಲ್ಲೆಲ್ಲೋ ಯಾರೊಂದಿಗೋ ಕಲೆತಿದ್ದ ವಿಷಯವನ್ನು ಯಾರೊಂದಿಗೂ ಹೇಳಿಕೊಳ್ಳದೇ ಹೋಗಿದ್ದಳು. ಯಾರಿಗೂ ಅದು ಗೊತ್ತಿಲ್ಲದಿದ್ದರೂ ಅವಳಿಗೇ ಅದನ್ನು ಸಮ್ಮತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದೇ ಮನೋರೋಗದಲ್ಲಿ ಬಳಲುವ ಅವಳು ಸಾಮಾಜಿಕ ಮತ್ತು ಕೌಟುಂಬಿಕ ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯದೇ ಮತ್ತೆ ಮನೋರೋಗಿಯಾಗಿಯೇ ಉಳಿದುಬಿಡುತ್ತಾಳೆ.
ಈಗಾದರೂ ಅತ್ಯಾಚಾರಕ್ಕೊಳಗಾದ ಹೆಣ್ಣಿನ ನೋವು ಮತ್ತು ಅತ್ಯಾಚಾರಿಯ ದೌರ್ಜನ್ಯ ಮತ್ತು ಕ್ರೌರ್ಯವನ್ನು ನಾವು ಗುರುತಿಸುತ್ತಿದ್ದೇವೆ. ಆದರೆ ಈ ಮೊದಲು ನಮ್ಮ ಸಿನಿಮಾಗಳಲ್ಲಿ ಕ್ರೌರ್ಯ ಮತ್ತು ನೋವಿಗಿಂತಲೂ ಕೇಂದ್ರೀಕರಿಸುತ್ತಿದ್ದದ್ದು ಶೀಲವನ್ನು ಕಳೆದುಕೊಂಡಳು ಎಂಬ ವಿಷಯದ ಕುರಿತು. ಮಕ್ಕಳ ಸೈನ್ಯ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಗೆ ಅನೇಕ ಮಕ್ಕಳಿರುತ್ತಾರೆ. ಚಿತ್ರದಲ್ಲಿ ತೋರುವಂತೆ ಆತ ವಿಧುರ ಮತ್ತು ಆಕೆ ವಿಧವೆ. ಅವರಿಬ್ಬರೂ ಪ್ರೀತಿಸುತ್ತಾರೆ. ಅವರಿಬ್ಬರಿಗೂ ಇದ್ದ ಸಮಸ್ಯೆ ಮಕ್ಕಳ ಸಾಮರಸ್ಯ. ಅದೆಲ್ಲಾ ಸರಿ ಹೋಗುತ್ತದೆ. ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ.
ಆದರೆ, ಇಲ್ಲಿ ಶೀಲ ಅಶ್ಲೀಲದ ಅರಿಮೆ ತಲೆ ಎತ್ತುತ್ತದೆ. ನಾಯಕಿ ವಿಧವೆಯಾಗಿದ್ದರೆ ಮತ್ತು ಹಲವು ಮಕ್ಕಳ ತಾಯಿ ಎಂದರೆ ಹಿಂದಿನ ಗಂಡನ ಜೊತೆ ಮಲಗಿರುವಾಕೆ. ಈಗ ನಾಯಕನಿಗೆ ಆಕೆ ಕನ್ಯೆಯಲ್ಲ. ಹಾಗಾಗಿ ಕತೆಯಲ್ಲಿ ಒಂದು ಟ್ವಿಸ್ಟ್. ಏನೆಂದರೆ ಆ ಮಕ್ಕಳೆಲ್ಲಾ ಅವಳ ಮಕ್ಕಳಲ್ಲ. ಅವಳ ಅಕ್ಕನದು. ಅವಳು ಅಪಘಾತವೊಂದರಲ್ಲಿ ಸತ್ತಿರುತ್ತಾಳೆ. ಹೀಗೆ ನಾಯಕಿಯನ್ನು ಶೀಲವಂತೆಯಾಗಿ ಉಳಿಸಿದ್ದಾಯಿತು. ಒಂದೆರಡಲ್ಲ, ಇಂತಹ ಉದಾಹರಣೆಗಳು ಸಾಲುಸಾಲು. ಒಬ್ಬಳು ಅತ್ಯಾಚಾರಕ್ಕೆ ಒಳಗಾದರೆ ಅಥವಾ ಪ್ರೀತಿಸಿ, ಮಲಗಿ, ಗರ್ಭಧರಿಸಿದರೆ ಅವಳು ಕಡ್ಡಾಯವಾಗಿ ಕೆರೆನೋ ಬಾವಿಯನ್ನೋ ನೋಡಿಕೊಳ್ಳಲೇ ಬೇಕು.
ಮೊದಲೇ ಹೇಳಿದಂತೆ ಇದು ಸಿನಿಮಾದವರ ಸಮಸ್ಯೆಯಲ್ಲ. ಸಮಾಜದಲ್ಲಿ ವ್ಯಾಪಕವಾಗಿದ್ದಂತಹ ಮನಸ್ಥಿತಿಯನ್ನು ಅವರು ಗಟ್ಟಿಗೊಳಿಸುತ್ತಾರೆ. ಇಲ್ಲವಾದರೆ ಅವರ ಸಿನಿಮಾವನ್ನು ಜನ ತಿರಸ್ಕರಿಸುತ್ತಾರೆ. ಮುತ್ತು ಒಂದು ಮುತ್ತು ಎಂಬ ಸಿನಿಮಾ. ಎಂ ಕೆ ಇಂದಿರಾ ಅವರ ಕಾದಂಬರಿ ಆಧಾರಿತ. ಅನಂತನಾಗ್ ನಾಯಕ, ರೂಪಾ ಚಕ್ರವರ್ತಿ ನಾಯಕಿ. ಆ ಸಿನಿಮಾದಲ್ಲಿ ಒಳ್ಳೆಯ ಹಾಡುಗಳಿದ್ದವು, ನಾಯಕ ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದರು. ಆದರೆ ಸಿನಿಮಾ ಸೋತಿತು. ಏಕೆಂದರೆ, ನಾಯಕಿ ಒಬ್ಬಳು ಮೂಗಿ. ಅವಳು ಎಲ್ಲೋ ಬೆಳೆಯುತ್ತಿರುತ್ತಾಳೆ. ನಾಯಕ ನೋಡುತ್ತಾನೆ ಪ್ರೀತಿಸುತ್ತಾರೆ. ಮದುವೆಯಾಗಬೇಕೆಂದು ಬಯಸುತ್ತಾರೆ. ನಾಯಕಿಯ ತಾಯಿಯೂ ವಿರೋಧಿಸುತ್ತಾರೆ. ನಾಯಕನ ತಂದೆಯೂ ವಿರೋಧಿಸುತ್ತಾರೆ. ಕಾರಣ ಹೇಳಿರುವುದಿಲ್ಲ.
ನಾಯಕ ಮತ್ತು ನಾಯಕಿ ಎಲ್ಲರ ವಿರೋಧವನ್ನು ಮೀರಿ ದೇವಸ್ಥಾನದಲ್ಲಿ ಮದುವೆಯಾಗುವಾಗ ತಂದೆ ಓಡೋಡಿ ಬರುತ್ತಾನೆ. ಮದುವೆಯನ್ನು ನಿಲ್ಲಿಸಲು ಆದರೆ ಕೈಗೆ ಅಕ್ಷತೆ ಕೊಟ್ಟುಬಿಡುತ್ತಾರೆ. ಅವನು ಹಾಕಿಬಿಡುತ್ತಾನೆ.ಮದುವೆಯಾಗಿಬಿಡುತ್ತದೆ. ವಿಷಯ ತಿಳಿಯುತ್ತದೆ. ಏನೆಂದರೆ, ಅವರಿಬ್ಬರೂ ಒಂದೇ ತಂದೆಯ, ಆದರೆ ಬೇರೆ ಬೇರೆ ತಾಯಿಯ ಮಕ್ಕಳು. ಬೇರೆ ಬೇರೆ ಕಡೆ ಬೆಳೆದಿರುತ್ತಾರೆ. ಮಾನವ ಸಂಬಂಧದಲ್ಲಿ ನೋಡಿದರೆ ಅವರಿಬ್ಬರೂ ಅಣ್ಣ ತಂಗಿಯರಾಗಬೇಕು. ಸಿನಿಮಾ ಗೆಲ್ಲಲಿಲ್ಲ. ಸಿನಿಮಾ ಮಾತ್ರವಲ್ಲ. ಅದು ಬಹಳ ಜನಪ್ರಿಯ ಮತ್ತು ನೇರ ಮಾಧ್ಯಮವಾದ್ದರಿಂದ ಉದಾಹರಣೆಯಾಗಿ ತೆಗೆದುಕೊಂಡೆ. ಇತರ ಕಲೆಗಳು ಮತ್ತು ಜನಪದವೂ ಸೇರಿದಂತೆ ಇತರ ಸಾಹಿತ್ಯವೂ ಕೂಡಾ ಶೀಲ ಅಶ್ಲೀಲಗಳಲ್ಲಿ ಮಿಂದೆದ್ದಿವೆ.
ಶೀಲ ಅಶ್ಲೀಲ
ಶೀಲ ಅಶ್ಲೀಲದ ಅರಿಮೆ ಸಾಮಾನ್ಯವಾಗಿ ಗಂಡಸರಲ್ಲಿಯೇ ಕಾಣುವುದು. ಅಥವಾ ಅವರಿಂದಲೇ ಪ್ರಾರಂಭವಾಗಿರುವುದು. ಗಂಡಸರು ಹೆಣ್ಣನ್ನು ಒಂದೋ ಶೀಲವಂತೆ ಅಥವಾ ಪತಿವ್ರತೆಯಾಗಿಯೇ ನೋಡಲು ಇಷ್ಟಪಡುವರು. ಇವರಿಗೆ ತನ್ನ ಹೆಣ್ಣು ಯಾರೊಂದಿಗೂ ಹಾಸುಗೆಯನ್ನು ಹಂಚಿಕೊಂಡಿರುವುದನ್ನು ಕಲ್ಪಿಸಿಕೊಳ್ಳಲೇ ಸಾಧ್ಯವಿಲ್ಲ. ಮದುವೆಯಾಗುವಾಗ ತಾನು ಮದುವೆಯಾಗುವ ಹೆಣ್ಣಿನ ಕನ್ಯಾಪೆÇರೆ ಹರಿದಿರಬಾರದು ಎಂದು ಆಶಿಸುವವರು ಇವರಂತವರೇ. ಅವರ ಮನಸ್ಸಿನಲ್ಲಿ ಪರಿಶುದ್ಧವಾಗಿರುವ ಅಥವಾ ಶೀಲವಂತೆಯಾಗಿರುವ ಹೆಣ್ಣಿನ ಚಿತ್ರಣವಿರುತ್ತದೆ. ಆ ವರ್ತನೆಗಳನ್ನು ಪ್ರದರ್ಶಿಸಿದರೆ, ಅವರ ಮಾನದಂಡಗಳ ಪ್ರಕಾರ ನಡೆದುಕೊಂಡರೆ ಅವರಿಗೆ ಸಮಾಧಾನವಿರುತ್ತದೆ. ಅದರಲ್ಲಿ ಏನೇನೆಲ್ಲಾ ಇರಬಹುದು. ತನ್ನ ಹೆಂಡತಿ ಅಥವಾ ತಮ್ಮ ಮನೆಯ ಹೆಣ್ಣು ಮಕ್ಕಳು ಯಾವ ಗಂಡಸರ ಜೊತೆಗೆ ಕೈ ಕುಲುಕಬಾರದು, ಗಾಡಿಯಲ್ಲಿ ಹಿಂದೆ ಕುಳಿತುಕೊಂಡು ಹೋಗಬಾರದು, ನಗುನಗುತ್ತಾ ಗಂಡಸರ ಜೊತೆ ಮಾತಾಡಬಾರದು; ಇತ್ಯಾದಿಗಳೂ ಕೂಡ.
ಶೀಲ ಅಶ್ಲೀಲವನ್ನು ಇನ್ನೂ ಸ್ವಲ್ಪ ನಿಖರವಾಗಿ ಸುಶೀಲ ದುಶ್ಶೀಲವೆಂದೂ ಕರೆಯಬಹುದು.
ಸಾಮಾನ್ಯವಾಗಿ ಶೀಲಾಧಾರಿತ ನಿಬಂಧನೆಗಳು ಆ ವ್ಯಕ್ತಿಯ ಪ್ರಾದೇಶಿಕ ಸಂಸ್ಕೃತಿಯನ್ನು ಅಥವಾ ವ್ಯಕ್ತಿಯು ಬೆಳೆದುಬಂದಿರುವ ಸಮಾಜೋಧಾರ್ಮಿಕ ಸಂಸ್ಕೃತಿಯನ್ನೂ ಅವಲಂಬಿಸಿರಬಹುದು. ಶೀಲೆ ದುಶ್ಶೀಲೆಯ ಅರಿಮೆ ಇರುವಂತಹ ರಾಜಾಸ್ತಾನದ ಪುರುಷನಿಗೆ ತಲೆಯ ಮೇಲೆ ಸೆರಗಿಲ್ಲದೆ ಓಡಾಡುವ ಹೆಣ್ಣು ಮಗಳು, ಇದೇ ಬಗೆಯ ಕಾಂಪ್ಲೆಕ್ಸ್ ಇರುವ ಮುಸಲ್ಮಾನ ಪುರುಷನಿಗೆ ದೇಹದ ಉಬ್ಬುತಗ್ಗುಗಳು ಕಾಣುವಂತೆ ಬಟ್ಟೆ ಧರಿಸಿರುವ ಹೆಣ್ಣು ದುಶ್ಶೀಲೆಯಾಗಿ ಕಾಣಬಹುದು. ಹಿಂದೂ ಸನಾತನ ಸಂಪ್ರದಾಯಸ್ಥನಿಗೆ ಸ್ಕರ್ಟ್ ಹಾಕಿರುವ ಹೆಣ್ಣುಮಗು ದುಶ್ಶೀಲೆಯಾಗಿಯೂ, ಸೀರೆ ಉಟ್ಟು ಮೈತುಂಬಾ ಸೆರಗನ್ನು ಹೊದ್ದವಳು ಸುಶೀಲೆಯಾಗಿಯೂ ತೋರುವಳು.
ಹೀಗೆ ಅವರವರ ಧಾರ್ಮಿಕತೆ, ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಗಳ ವಿನ್ಯಾಸಗಳೂ ಅವರ ಅರಿಮೆಗಳಲ್ಲಿ ಹೊಕ್ಕಿರುತ್ತವೆ. ಹಿಂದಿನ ಸಿನಿಮಾಗಳನ್ನು ನೆನಪಿಸಿಕೊಳ್ಳಿ. ಅವಳು ಶೀಲವಂತೆಯಾಗಿರಬೇಕೆಂದರೆ ಸೀರೆಯುಟ್ಟಿರಬೇಕು, ಮೈ ತುಂಬಾ ಸೆರಗು ಹೊದ್ದಿರಬೇಕು, ಹಣೆಯಲ್ಲಿ ಕುಂಕುಮವಿರಬೇಕು. ದೊಡ್ಡವರಿಗೆ ಗೌರವ ಕೊಡಬೇಕು. ಅವಳು ಖಂಡಿತ ದೈವಭಕ್ತೆಯಾಗಿರಬೇಕು. ಅವಳು ದುಶ್ಶೀಲೆಯಾಗಿದ್ದರೆ, ಪಾಶ್ಚಾತ್ಯ ಉಡುಪು ತೊಟ್ಟಿರುತ್ತಾಳೆ. ಹಣೆಯಲ್ಲಿ ಕುಂಕುಮವಿರುವುದಿಲ್ಲ. ಕೇರ್ ಫ್ರೀ ಆಗಿರುತ್ತಾಳೆ; ಇತ್ಯಾದಿ.
ಒಟ್ಟಾರೆ ಸುಶೀಲೆ ದುಶ್ಶೀಲೆಗಳ ಅರಿಮೆಯವರು ಹೆಣ್ಣನ್ನು ಯಾವಾಗಲೂ ವಿಪರೀತವಾದ ದೃಷ್ಟಿಕೋನಗಳಲ್ಲೇ ನೋಡುತ್ತಿರುತ್ತಾರೆ.ತಮ್ಮ ಸಂಪರ್ಕದ ಹೆಣ್ಣಿನ ಜೊತೆಗೆ ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಮತ್ತು ಲೈಂಗಿಕ ಸಂಬಂಧಗಳನ್ನು ಹೊಂದುವುದರಲ್ಲಿಯೂ ಈ ಅರಿಮೆ ಅವರನ್ನು ಬಹಳವಾಗಿ ಕಾಡುತ್ತಿರುತ್ತದೆ. ಈ ಅರಿಮೆಯಿಂದ ಬಳಲುತ್ತಿರುವವರ ವರ್ತನೆಯು ತಮ್ಮ ಹೆಣ್ಣುಗಳನ್ನು ಅನುಮಾಸ್ಪದವಾಗಿ ನೋಡುತ್ತಿರುವಂತೆಯೂ ಕಾಣುತ್ತದೆ. ಹೌದು ಕೂಡಾ. ಈ ಅರಿಮೆಯುಳ್ಳವರು ತಮ್ಮ ಹೆಣ್ಣು ಇನ್ನೊಬ್ಬ ಗಂಡಸರೊಂದಿಗೆ ಸಲುಗೆಯಿಂದ ವರ್ತಿಸಿದರೆ ಅವರು ಆ ಗಂಡಸನ್ನು ಬೈಯುವುದಿಲ್ಲ. ತಮ್ಮ ಹೆಂಗಸನ್ನೇ ಬೈಯುತ್ತಾರೆ, ಆಕ್ಷೇಪಿಸುತ್ತಾರೆ. ಹೆಣ್ಣಾದವಳು ಸರಿಯಾಗಿ ಇರಬೇಕು ಎಂದು. ತನ್ನ ಶೀಲವನ್ನು ಕಾಪಾಡಿಕೊಳ್ಳುವುದು ಅವಳದೇ ಹೊಣೆಗಾರಿಕೆ ಎಂದು ನಿರೀಕ್ಷಿಸುತ್ತಾನೆ.
ಶೀಲಪ್ರಮಾಣ
ಈ ಅರಿಮೆಯ ಗಂಡಸು ಸೌಂದರ್ಯವೋ ಅಥವಾ ಪ್ರತಿಭೆಯೋ ಅಥವಾ ಚಟುವಟಿಕೆಗಳೋ; ಯಾವುದೋ ರೀತಿಯಲ್ಲಿ ತನಗೆ ಆಕರ್ಷಕವಾದಂತಹ ಹೆಣ್ಣಿಗೆ ಮಾರು ಹೋಗುತ್ತಾನೆ. ಆದರೆ ಆ ಆಕರ್ಷಣೆ ಅವನಲ್ಲಿ ಬಹುಕಾಲ ನಿಲ್ಲದು. ಅವನು ಅವಳ ಸುಶೀಲ ಮತ್ತು ದುಶ್ಶೀಲಗಳ ಮಾನದಂಡದಲ್ಲಿಯೇ ಅಳೆಯಲು ಪ್ರಾರಂಭಿಸಿ ನಂತರ ಅವನಿಂದ ಗುಣಪ್ರಮಾಣಪತ್ರವನ್ನು ಪಡೆಯದಿದ್ದರೆ ಸಂಘರ್ಷ ಪ್ರಾರಂಭವಾಗುತ್ತದೆ.ಇದು ಗಂಡಸಿನ ಸಮಸ್ಯೆ ಎಂದು ನಿರಾಳವಾಗಲು ಆಗದು. ಈ ಅರಿಮೆ ಹೆಂಗಸರಲ್ಲಿಯೂ ಇರುತ್ತದೆ. ತಮ್ಮಂತದೇ ಹೆಣ್ಣು ಸುಶೀಲೆಯೋ ದುಶ್ಶೀಲೆಯೋ ಎಂದು ಆಲೋಚಿಸುತ್ತಿರುತ್ತಿರುತ್ತಾರೆ. ಅವರ ಮಾನದಂಡದ ಪ್ರಕಾರ ಇರದ ಹೆಣ್ಣು ಮಕ್ಕಳನ್ನು ತಿರಸ್ಕರಿಸುತ್ತಾರೆ. ನಿಂದಿಸುತ್ತಾರೆ. ಅನುಮಾನದಿಂದ ನೋಡುತ್ತಾರೆ. ಅಷ್ಟೆಲ್ಲಾ ಏಕೆ? ಹೆಂಗಸರನೇಕರು ಇತರ ಹೆಂಗಸರು ತುಂಡು ಬಟ್ಟೆಯನ್ನು ಧರಿಸುವುದು, ಅಥವಾ ಮೈ ಕಾಣುವಂತ ವಿನ್ಯಾಸವಿರುವ ವಸ್ತ್ರವನ್ನು ಧರಿಸುವುದನ್ನೂ ಕೂಡಾ ಸಹಿಸುವುದಿಲ್ಲ. ಅವರಿಗೆ ಅಂತವನ್ನು ಕಾಣುವುದು ತೀರಾ ಮುಜುಗರ.
ಆದ್ದರಿಂದಲೇ ವಸ್ತ್ರಸಂಹಿತೆಯನ್ನು ಸಂಸ್ಕೃತಿಯ ಅಥವಾ ಧಾರ್ಮಿಕತೆಯ ಭಾಗವನ್ನಾಗಿಸಿಕೊಂಡು ಅದನ್ನು ಎತ್ತಿ ಹಿಡಿಯುತ್ತಾ ತಮ್ಮ ತಿರಸ್ಕಾರವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಈ ಅರಿಮೆಯ ಅಸಹನೆಯು ಯಾವ ಯಾವ ವಿಪರೀತಗಳನ್ನು ಮುಟ್ಟುವುದೋ ಹೇಳಲಾಗದು. ಈ ಅರಿಮೆಯಿಂದಲೇ ಅನೇಕಾನೇಕ ಬೈಗುಳಗಳು ಹೆಣ್ಣನ್ನು ಕೇಂದ್ರೀಕರಿಸಿರುವವು. ಇಂಗ್ಲೀಶಲ್ಲಿ ಬಿಚ್, ವೋರ್ ಇಂದ ಹಿಡಿದು ಕನ್ನಡದ ಸೂಳೆ, ಬೋಳಿಮಗನೇ, ಸೂಳೆಮುಂಡೆ, ಹಾದರಗಿತ್ತಿ, ಚಿನ್ನಾಲಿ, ಚಂಬೇಲಿ; ಇನ್ನೂ ಅನೇಕಾನೇಕ ಪದಗಳು ಹುಟ್ಟಿರುವವು.
ಒಟ್ಟಾರೆ ಸುಶೀಲ ದುಶ್ಶೀಲದ ಅರಿಮೆಯ ಬಲಿಪಶು ಹೆಣ್ಣು. ಅದು ಹೆಣ್ಣಿಗಿರಲಿ ಗಂಡಿಗಿರಲಿ. ಗಂಡು ತಪ್ಪು ಮಾಡಿದರೂ ಅವನನ್ನು ಬೈಯುವುದು ಹೆಣ್ಣಿನ ಮೂಲದಿಂದಲೇ. ಗಂಡಸರು ಜಗಳವಾಡುವಾಗಲೂ ಪರಸ್ಪರ ತಾಯಿ, ಹೆಂಡತಿ, ಸೋದರಿಯರನ್ನು ಲೈಂಗಿಕ ಸಂಬಂಧದ ಬೈಗುಳಗಳಲ್ಲಿ ಬಳಸಿಕೊಳ್ಳುವುದು ಈ ಅರಿಮೆಯ ಅಭಿವ್ಯಕ್ತಿಯೇ. ಎಷ್ಟೋ ಗಂಡಸರು ವಿಧವೆಯರ ಮತ್ತು ವಿಚ್ಛೇದಿತರ ವಿವಾಹಗಳನ್ನು ಪುರಸ್ಕರಿಸುತ್ತಾರೆ. ಬೆಂಬಲಿಸುತ್ತಾರೆ. ಆದರೆ ತಾವು ಮಾತ್ರ ಅಂತಹ ವಿವಾಹಗಳನ್ನು ಮಾಡಿಕೊಳ್ಳಲು ಬಯಸುವುದಿಲ್ಲ. ತಮ್ಮ ಹೆಣ್ಣು ಕನ್ಯೆಯೇ ಆಗಿರಬೇಕೆಂದು ಬಯಸುತ್ತಾರೆ. ತಮ್ಮ ಹೆಣ್ಣು ಬೇರೆ ಪುರುಷನೊಂದಿಗೆ ಮಲಗಿಕೊಂಡಿರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಹಾಗೆಯೇ ಕೆಲವು ಕೆಟಗೆರಿ ಪುರುಷರು ತಮಗೆ ಯಾವುದೇ ಹೆಣ್ಣು ನಿರಾಯಾಸವಾಗಿ ತಮ್ಮ ಲೈಂಗಿಕ ವಾಂಛೆಗೆ ಬಳಕೆಯಾಗುವುದನ್ನು ಬಯಸುತ್ತಾರೆ ಮತ್ತು ಸುಖಿಸುತ್ತಾರೆ. ಆದರೆ, ತಮ್ಮ ಮನೆಯ ಹೆಣ್ಣುಮಕ್ಕಳು ಆ ರೀತಿಯಲ್ಲಿ ಎಲ್ಲಿ ಬಳಕೆಯಾಗಿಬಿಡುತ್ತಾರೋ ಎಂಬ ಅನುಮಾನ ಮತ್ತು ಭಯದಿಂದ ಅತಿಯಾದ ಗಮನವನ್ನು ಕೊಡುತ್ತಾರೆ. ಇದರಿಂದ ಅವರ ಮನೆಯ ಹೆಣ್ಣು ಮಕ್ಕಳಿಗೆ ಹಿಂಸೆಯಾಗುತ್ತಿರುತ್ತದೆ. ತಮ್ಮನ್ನು ಅನುಮಾನಿಸುತ್ತಾರೆ ಮತ್ತು ಅಪಮಾನಿಸುತ್ತಾರೆ ಎಂದು ಅನ್ನಿಸುತ್ತಿರುತ್ತದೆ. ಇದರಿಂದ ಸಂಬಂಧಗಳು ಸಡಿಲಗೊಳ್ಳುತ್ತವೆ ಹಾಗೂ ಹಳಸತೊಡಗುತ್ತವೆ.
ಆತ್ಮಾವಲೋಕನ ಮಾಡಿಕೊಂಡಾಗ ತಮ್ಮಲ್ಲಿ ಇಂತಹ ಅರಿಮೆಯನ್ನು ಕಂಡುಕೊಂಡರೆ ಎಚ್ಚೆತ್ತುಕೊಂಡು ಅದೊಂದು ತಮ್ಮಲ್ಲಿರುವ ಮಾನಸಿಕ ಸಮಸ್ಯೆ ಎಂದು ತಿಳಿದು ಪ್ರಜ್ಞಾವಂತಿಕೆಯಿಂದ ವರ್ತಿಸತೊಡಗಿದರೆ ಸಂಬಂಧಗಳು ಮೌಲ್ಯವನ್ನು ಪಡೆಯುತ್ತವೆ. ಇಲ್ಲದಿದ್ದರೆ ತಾವೂ ನೆಮ್ಮದಿಯಾಗಿರರು, ತಮ್ಮ ಸಂಗಾತಿಗಳನ್ನೂ ನೆಮ್ಮದಿಯಾಗಿರಲು ಬಿಡರು.ಮಡಿ ಮೈಲಿಗೆಯಂತಹ ವ್ಯಸನವೇ ಈ ಶೀಲ ಅಶ್ಲೀಲದ ಅರಿಮೆಯು. ಕರೋನ ವೈರಸ್ಸಿನ ಸಂದರ್ಭದಲ್ಲಿ ಸ್ವಾಮೀಜಿಗಳು ಸೇರಿದಂತೆ ಅನೇಕರು ಮಡಿ ಮೈಲಿಗೆಯನ್ನು ಸ್ವಚ್ಛತೆ ಶುದ್ಧತೆಯ ಕಾರಣಗಳಿಂದ ಸಮರ್ಥಿಸಿಕೊಳ್ಳಲು ಮುಂದಾದರು. ಅಂತೆಯೇ ಶೀಲ ಅಶ್ಲೀಲವನ್ನು ವ್ಯಕ್ತಿಗಳು ಪ್ರಾಮಾಣಿಕತೆ ಮತ್ತು ಬದ್ಧತೆಗೆ ಅನ್ವಯಿಸಿಕೊಳ್ಳಲು ಯತ್ನಿಸುತ್ತಾರೆ.
ಸತ್ಯಕಾಮ ಜಾಬಾಲಿ
ಛಾಂದೋಗ್ಯೋಪನಿಷತ್ತಿನಲ್ಲಿ ಗೌತಮ ಋಷಿಯ ಗುರುಕುಲಕ್ಕೆ ಸತ್ಯಕಾಮನೆಂಬ ಬಾಲಕ ಬರುತ್ತಾನೆ. ಅವನಿಗೆ ಅಲ್ಲಿ ಶಿಕ್ಷಣ ಪಡೆಯಬೇಕೆಂಬ ಬಯಕೆ. ವಾಡಿಕೆಯಂತೆ ನಿನ್ನ ತಂದೆ ಯಾರು? ನೀನು ಯಾವ ಗೋತ್ರದವನು? ಎಂದು ಗುರು ಪ್ರಶ್ನಿಸುತ್ತಾನೆ. ಬ್ರಾಹ್ಮಣರಿಗೆ ವಿದ್ಯಾಭ್ಯಾಸದ ಅರ್ಹತೆ ಎಂಬ ವ್ಯವಸ್ಥೆಯ ಕಾಲವದು. ಬಾಲಕ ಸತ್ಯಕಾಮನಿಗೆ ತಿಳಿದಿರುವುದಿಲ್ಲ. ತಾಯಿಯಾದ ಜಾಬಾಲಿಯನ್ನು ಕೇಳಿ ತಿಳಿದುಕೊಂಡು ಬಂದು ಉತ್ತರಿಸುತ್ತಾನೆ.
“ನನ್ನ ತಾಯಿ ದಾಸಿಯಾಗಿದ್ದಳು. ಹಲವರ ಬಳಿ ಸೇವೆ ಮಾಡುತ್ತಿದ್ದಳು. ಆಗ ಯಾರಿಗೋ ಹುಟ್ಟಿರುವ ಮಗ ನಾನು. ಹಾಗಾಗಿ ನನಗೆ ತಂದೆ ಯಾರೆಂದು ಗೊತ್ತಿಲ್ಲ. ನನಗೆ ಗೋತ್ರವಿಲ್ಲ. ನನ್ನ ತಾಯಿ ಜಬಾಲಿ. ನಾನು ಸತ್ಯಕಾಮ ಜಾಬಾಲಿ” ಎಂದು ಉತ್ತರಿಸುತ್ತಾನೆ.ಗೌತಮ ಶೀಲ ಅಶ್ಲೀಲಗಳ ಅರಿಮೆ ಇಲ್ಲದ ಅರಿವಿರುವವನು. “ಸತ್ಯವನ್ನು ನುಡಿವವನೇ ಬ್ರಾಹ್ಮಣ. ನೀನಿಲ್ಲಿ ವಿದ್ಯಾಭ್ಯಾಸ ಪಡೆಯಲು ಯೋಗ್ಯ” ಎಂದು ಅವನನ್ನು ಸ್ವೀಕರಿಸುತ್ತಾನೆ. ಬ್ರಾಹ್ಮಣ್ಯವನ್ನು ಜಾತಿಯ ಸಂಕೋಲೆಯಿಂದ ಬಿಡಿಸಿ ನೀತಿಯ ಮೌಲ್ಯ ನೀಡುತ್ತಾನೆ.
ಶೀಲ ಅಶ್ಲೀಲಗಳ ಅರಿಮೆಯನ್ನು ಮೀರಿವ ಪ್ರತಿಮೆಗಳು ಸತ್ಯಕಾಮ, ಜಬಾಲಿ ಮತ್ತು ಗೌತಮ. ತಾಯಿಗೆ ಶೀಲವನ್ನು ಮೀರಿದ ತನ್ನ ವಾಸ್ತವವನ್ನು ಒಪ್ಪಿಕೊಳ್ಳುವ ಅರಿವಿದೆ. ಮಗನಿಗೂ ತನ್ನ ಹುಟ್ಟಿನ ಪಾವಿತ್ರ್ಯತೆ ಬಗ್ಗೆ ಯಾವ ಅರಿಮೆ ಇಲ್ಲದೇ ತಾಯಿಯನ್ನು ತಾಯಂದಷ್ಟೇ ಸ್ವೀಕರಿಸುವ ಅರಿವಿದೆ. ಗುರುವಿಗೆ ಸಾಂಪ್ರದಾಯಕ ಅರಿಮೆಯನ್ನು ಮೀರಿ ವ್ಯಕ್ತಿಗತವಾದ ಧೈರ್ಯ ಮತ್ತು ಸತ್ಯವನ್ನು ಮನ್ನಿಸುವ ಅರಿವಿದೆ.
ಅರಿಮೆಗಳನ್ನು ಮೀರಲು ಅರಿವೊಂದು ಸಾಧನ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243