ದಿನದ ಸುದ್ದಿ

ಕೊಡಗು ಪ್ರವಾಹ : ಪರಿಹಾರ ಕೇಂದ್ರದಲ್ಲಿ 1312 ಮಂದಿ ಸಂತ್ರಸ್ತರು

Published

on

ಸುದ್ದಿದಿನ,ಮಡಿಕೇರಿ : ಜಿಲ್ಲೆಯಾದ್ಯಾಂತ ಭಾರೀ ಮಳೆಯಿಂದಾಗಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿತ್ತು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ.

ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಾಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರಗಳಾದ ನಗರದ ಜಿಲ್ಲಾಡಳಿತ ಭವನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಪೊನ್ನಂಪೇಟೆಯ ಹಳೇ ನ್ಯಾಯಾಲಯ ಕಟ್ಟಡ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಗೆ ಆಹಾರ ಸಾಮಾಗ್ರಿಗಳು, ವೈದ್ಯಕೀಯ ಸಾಮಾಗ್ರಿಗಳು, ಕುಡಿಯುವ ನೀರು ಹಾಗೂ ಹಾಗೂ ಇತರೆ ಅಗತ್ಯ ಪರಿಹಾರ ಸಾಮಾಗ್ರಿಗಳು 04 ಭಾರಿ ಹಾಗೂ ಲಘು ವಾಹನಗಳಲ್ಲಿ ಸೆಪ್ಟೆಂಬರ್ 06 ರಂದು ಜಿಲ್ಲೆಗೆ ಬಂದಿರುತ್ತದೆ. ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನೆರೆ ಸಂತ್ರಸ್ತರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯಾಧಿಕಾರಿಗಳ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಮುಖಾಂತರ ಹಂಚಿಕೆ ಮಾಡಲು 21 ಲಘು ವಾಹನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಅವಶ್ಯವಿರುವ ಸಾಮಾಗ್ರಿಗಳು

9100 ಕೆ.ಜಿ. ಅಕ್ಕಿ, 925 ಕೆ.ಜಿ. ಸಕ್ಕರೆ, 955 ಲೀಟರ್ ಎಣ್ಣೆ, 905 ಕೆ.ಜಿ. ತೊಗರಿ ಬೆಳೆ, 60 ಬಾಕ್ಸ್ ಕುಡಿಯುವ ನೀರಿನ ಬಾಟಲಿ, 412 ಹೊದಿಕೆಗಳನ್ನು ಜಿಲ್ಲಾಡಳಿತದ ವತಿಯಂದ ಸಂತ್ರಸ್ತರಿಗೆ ಸೆಪ್ಟೆಂಬರ್ 06 ರಂದು ವಿತರಣೆ ಮಾಡಲಾಗಿದೆ.

ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರ ವಿವರ

  • ಮಡಿಕೇರಿ ತಾಲ್ಲೂಕಿನ 11 ಪರಿಹಾರ ಕೇಂದ್ರಗಳಲ್ಲಿ 370 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 470 ಗಂಡು, ಮತ್ತು 488 ಹೆಣ್ಣು ಸೇರಿದಂತೆ 958 ಜನ ಸಂತ್ರಸ್ತರಿದ್ದಾರೆ.
  • ಸೋಮವಾರಪೇಟೆ ತಾಲ್ಲೂಕಿನ 02 ಪರಿಹಾರ ಕೇಂದ್ರಗಳಲ್ಲಿ 146 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 173 ಗಂಡು ಮತ್ತು 181 ಹೆಣ್ಣು ಸೇರಿದಂತೆ ಒಟ್ಟು 354 ಜನ ಸಂತ್ರಸ್ತರಿದ್ದಾರೆ.
  • ಒಟ್ಟಾರೆ ಜಿಲ್ಲೆಯಲ್ಲಿರುವ 13 ಪರಿಹಾರ ಕೇಂದ್ರಗಳಲ್ಲಿ ಒಟ್ಟು 516 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 643 ಪುರುಷರು ಮತ್ತು 669 ಮಹಿಳೆಯರು ಸೇರಿದಂತೆ ಒಟ್ಟು 1312 ಜನ ಸಂತ್ರಸ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version