ದಿನದ ಸುದ್ದಿ

ಕವಿತೆ | ಮಾಧುರ್ಯದ ಮರುವ್ಯಾಖ್ಯಾನ

Published

on

  • ಡಾ.ಎನ್. ಕೆ. ಪದ್ಮನಾಭ

ಪ್ರತೀ ದಿನ ಬೆಳಗನ್ನು ಎದುರು ನೋಡುತ್ತೇನೆ
ಬರೀ ಬೆಳಕಿನ ಹಂಬಲದಿಂದ ಮಾತ್ರವಲ್ಲ;
ನಿನ್ನ ಹೊಳೆವ ಕಾಂತಿಯ ವೈಭವದೊಳಗೆ ಮಿಂದೇಳುವ ಅವಕಾಶಕ್ಕಾಗಿ

ಮಳೆಹನಿವ ಕ್ಷಣಗಳಿಗೆ ಹಾತೊರೆಯುತ್ತೇನೆ
ನೀರಸಿಂಚನ ಸೊಗಡು
ಸವಿಯುವುದಕ್ಕಷ್ಟೇ ಅಲ್ಲ:
ಕಟ್ಟಿದ ಮೋಡಗಳ ಕರಗಿಸುವ
ನಿನ್ನಿರುವಿನ ಮಹಿಮೆ ಕಣ್ತುಂಬಿಕೊಳ್ಳುವುದಕ್ಕಾಗಿ

ಕ್ಷಣಕ್ಷಣವೂ ಹೊಸಹುಟ್ಟು ನನ್ನದಾಗಿಸಿಕೊಳ್ಳಬೇಕೆಂದುಕೊಳ್ಳುತ್ತೇನೆ
ಜಗದ ವಿಸ್ಮಯಗಳ ಹಾದುಹೋಗುವುದಕ್ಕಲ್ಲ:
ನಾನಿರುವ ಕಾಲವನ್ನು ಪಾವನಗೊಳಿಸಿದ ನಿನ್ನ ಪ್ರಖರತೆಯ ಒಡಲುಗೊಳ್ಳುವುದಕ್ಕಾಗಿ

ಧಾವಿಸಿ ಬರುವ ಅಲೆಗಳೊಳಗಿನ ಬಿಂದುವಾಗಬೇಕೆಂದುಕೊಳ್ಳುತ್ತೇನೆ
ಕಡಲಾಳದ ಮುತ್ತುಗಳಿಗಾಗಿ ಅಲ್ಲ;
ತೀರದಲಿ ಕುಳಿತು ಕಂಗೊಳಿಸುವ ನಿನ್ನ ನೋಟದ ಬೆರಗಿನೊಳಗಿನ ಕಣಕಣವಾಗುವುದಕ್ಕಾಗಿ

ನಿನ್ನಿಷ್ಟದ ಹೂವಿನ ಬಣ್ಣವಾಗಬೇಕೆಂದುಕೊಳ್ಳುತ್ತೇನೆ
ಘಮದ ಪರಿಮಳಕ್ಕಾಗಿ ಅಲ್ಲ;
ನಿನ್ನ ಗಮನ ಸೆಳೆಯುವ ಭಾಗ್ಯಕ್ಕಾಗಿ

ಗಾಳಿಯಾಗಬೇಕೆಂದುಕೊಳ್ಳುತ್ತೇನೆ
ತಂಗಾಳಿಯಾಗಬೇಕೆಂದುಕೊಳ್ಳುತ್ತೇನೆ
ಜಗಕೆ ಉಸಿರಾಟ ದಯಪಾಲಿಸಿದ ಹೆಮ್ಮೆ ನನ್ನದಾಗಿಸಿಕೊಳ್ಳುವುದಕ್ಕಲ್ಲ;
ನಿನ್ನ ಜೀವಂತಿಕೆಯ ಸ್ಫೂರ್ತಿ ಜೊತೆಯಾಗಿಸಿಕೊಳ್ಳುವುದಕ್ಕೆ

ಕಳೆದುಹೋಗಬೇಕೆಂದುಕೊಳ್ಳುತ್ತೇನೆ
ಮನವ ಚುಚ್ಚುವ ನೋವುಗಳಿಗೆ
ಬೆನ್ನು ತೋರಿಸಿ ಪಲಾಯನಗೈಯ್ಯುವುದಕ್ಕಲ್ಲ;
ಪ್ರಕೃತಿ ಬರೆದು ಕೊಡುಗೆಯಾಗಿ ಕೊಟ್ಟ
ನಿನ್ನಂದದೊಳಗಿನ ಕವಿತೆಯ ಪದಗಳಲ್ಲಿ ಅಡಗಿಕೊಳ್ಳುವುದಕ್ಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version