ಅಂತರಂಗ

ಅರಿಮೆಯ ಅರಿವಿರಲಿ-55 : ಭಯಗಳು ಭಾವಗಳಾಗೆ

Published

on

  • ಯೋಗೇಶ್ ಮಾಸ್ಟರ್

ಲೋಚನೆಗಳಿಂದ ಭಾವನೆಗಳೋ ಅಥವಾ ಭಾವನೆಗಳಿಂದ ಆಲೋಚನೆಗಳೋ; ಚರ್ಚೆ ಒಂದೊಟ್ಟಿಗಿರಲಿ. ಆದರೆ ವ್ಯಕ್ತಿಯೊಬ್ಬನು ತನ್ನತನದ ಬದ್ಧತೆಯಿಂದ ತನಗೆ ಎದುರಾಗುವ ಸಂಗತಿ, ವ್ಯಕ್ತಿ ಮತ್ತು ಸನ್ನಿವೇಶಗಳನ್ನು ಹೇಗೆ ಗ್ರಹಿಸುತ್ತಾನೆ? ಅದು ಮುಖ್ಯ. ಆ ಗ್ರಹಿಕೆಯಿಂದಲೇ ಆಲೋಚನೆಗಳು ಮೂಡುವವು. ಭಾವನೆಗಳು ಉಂಟಾಗುವವು.

ಈಗ ಹುಟ್ಟುವ ಒಂದು ಬಗೆಯ ಆಲೋಚನೆಗೆ ಅಂದೆಂದೋ ಬಿತ್ತಿರುವ ಆಲೋಚನೆಯು ಬೀಜವಾಗಿ ಮೊಳೆದಿರುತ್ತವೆ. ಇರಲಿ, ಮನುಷ್ಯನ ಮೂಲ ಪ್ರವೃತ್ತಿಗಳು ಆಲೋಚನೆಗಳಿಗೆ ಪ್ರೇರೇಪಿಸುತ್ತವೆ. ಹಾಗೆಯೇ ಆಲೋಚನೆಗಳೂ ಆ ಪ್ರವೃತ್ತಿಗಳನ್ನು ಪ್ರೇರೇಪಿಸುತ್ತವೆ.

ಭಾವನೆಗಳು ಆಲೋಚನೆಗಳನ್ನು, ಆಲೋಚನೆಗಳು ಭಾವನೆಗಳನ್ನು, ಇವೆರಡೂ ಪ್ರವೃತ್ತಿಗಳನ್ನು, ಪ್ರವೃತ್ತಿಗಳು ಇವೆಲ್ಲವನ್ನೂ ಪ್ರೇರೇಪಿಸುತ್ತಿರುತ್ತವೆ. ಒಟ್ಟಾರೆ, ಮನಸ್ಸೆಂಬ ತರಂಗವಿದೆಯಲ್ಲಾ ಅದು ಎಲ್ಲದಕ್ಕೂ ವಾಹಕವಾಗುತ್ತದೆ, ಮಿಡಿಯುತ್ತದೆ ಮತ್ತು ಅಲೆಯಾಗುತ್ತದೆ.

ಆತಂಕಗಳ ಪ್ರಸಂಗಗಳು

ವೇದಿಕೆಯ ಮೇಲೆ ಮಾತಾಡಿ ರೂಢಿ ಇಲ್ಲದಿರುವಾಗ ಅಥವಾ ಮಾತಾಡುವ ವಿಷಯದಲ್ಲಿ ಗೊಂದಲ ಇರುವಾಗ ಅಥವಾ ಸ್ಪಷ್ಟತೆ ಇಲ್ಲದಿರುವಾಗ ಅಥವಾ ಬಹಳಷ್ಟು ಜನ ಸೇರಿರುವ ಸಭೆಯನ್ನು ಎದುರಿಸುವ ಭಯವಿರುವಾಗ ವೇದಿಕೆಗೆ ಹೋಗುವಾಗ ಅಥವಾ ಹೋಗಿ ನಿಂತಾದ ಮೇಲೆ ಹೊಟ್ಟೆಯಲ್ಲಿ ಏನೋ ಒಂದು ತರ ಆಗುತ್ತಿರುತ್ತದೆ.

ಕೆಲವೊಮ್ಮೆ ಧಾರಾಕಾರವಾಗಿ ಬೆವರು ಸುರಿಯುತ್ತಿರುತ್ತದೆ. ಮತ್ತೂ ಕೆಲವೊಮ್ಮೆ ಹೇಳಬೇಕಾದುದೆಲ್ಲಾ ಮರೆತೇ ಹೋಗತ್ತೆ. ನಾಲಿಗೆ ತೊದಲುತ್ತದೆ, ಗಂಟಲು ಒಣಗುತ್ತದೆ. ಕೈ ಕಾಲುಗಳು ನಡುಗುತ್ತಿರುತ್ತದೆ. ಹಾಗಾಗುವುದು ಏಕೆ?

ನಿಮ್ಮ ಮನೆಯವರೋ ಸ್ನೇಹಿತರೋ ಅದ್ಯಾವುದೋ ಸ್ಥಳಕ್ಕೆ ಹೋಗಿದ್ದಾರೆ. ನಿಮಗೆ ಆ ಸ್ಥಳದಲ್ಲಿ ದೊಡ್ಡ ಗಲಭೆಯಾಗಿದೆ, ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ, ವಾಹನಗಳಿಗೆ ಕಲ್ಲು ತೂರುತ್ತಿದ್ದಾರೆ ಎಂದೆಲ್ಲಾ ಸುದ್ಧಿ ಬರುತ್ತದೆ. ನೀವು ಸಂಪರ್ಕಿಸಲು ಯತ್ನಿಸಿದರೆ ನಿಮ್ಮವರ ಫೋನ್ ಸ್ವಿಚ್ ಆಫ್ ಆಗಿದೆ ಅಥವಾ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದು ಕೇಳುತ್ತಿರುತ್ತದೆ. ಆಗ ಹೊಟ್ಟೆಯಲ್ಲಿ ಸಂಕಟ ಪ್ರಾರಂಭವಾಗುತ್ತದೆ.

ಕೆಲವೊಮ್ಮೆ ಅದು ವಿಪರೀತಕ್ಕೆ ಹೋಗಿ ಮಲ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಒಮ್ಮೆ ಹೋಗಿ ಬಂದರೂ ಮತ್ತೆ ಮತ್ತೆ ಹೋಗುವಂತಾಗುತ್ತದೆ. ಏಕೆ?

ತಡೆಯಲಾರದಷ್ಟು ಬೇಸರವಾಗಿದೆ. ಕೋಪ ಬಂದಿದೆ ಅಥವಾ ಆತಂಕವಾಗಿದೆ ಎಂದರೆ ಉಸಿರಾಟ ವಿಪರೀತ ಏರಿಳಿಯುತ್ತಿರುತ್ತದೆ. ಬೆವರುತ್ತಿದೆ. ಕೈ ಕಾಲುಗಳು ನಡುಗುತ್ತವೆ. ಏನು ಮಾಡಬೇಕೆಂದು ತೋಚುವುದಿಲ್ಲ. ಹೀಗೇಕಾಗುತ್ತದೆ?

ನಮಗೆ ಇಷ್ಟವಾದವರೊಬ್ಬರು ಯಾವುದೋ ಊರಿನಿಂದ ಬರುತ್ತಿದ್ದಾರೆ. ನಮ್ಮ ಪ್ರೀತಿಪಾತ್ರರು ನಮಗಾಗಿ ಬರುತ್ತಾರೆ. ಯಾವುದೋ ಹಬ್ಬ. ಕೆಲಸಕ್ಕೆ ರಜೆ ಹಾಕಿ ಎಲ್ಲರೊಟ್ಟಿಗೆ ಮನೆಯಲ್ಲಿರುತ್ತೇವೆ. ಉತ್ಸಾಹ ಮತ್ತು ಆನಂದವಿರುವಾಗ ಮೈ ಮನಸ್ಸು ಪ್ರಫುಲ್ಲವಾಗಿರುತ್ತದೆ. ಇಷ್ಟಪಟ್ಟಿರುವ ಹೊಸ ಬಟ್ಟೆಯೊಂದನ್ನು ಹಾಕಿಕೊಂಡಾಗ ನಮ್ಮಲ್ಲಿ ಉಂಟಾಗುವ ಹುರುಪನ್ನು ಗಮನಿಸಿ.

ಅಂದು ಹೆಚ್ಚು ಕೆಲಸ ಮಾಡಿದರೂ, ಹೆಚ್ಚು ಹೆಚ್ಚು ಓಡಾಡಿದರೂ ಆಯಾಸವಿಲ್ಲ. ಅಂದೇನೋ ಹೊಸಬಲ. ಅದೆಲ್ಲೆಂದ ಬರುವುದು?
ಕೋಪ ಬರುವುದು, ಬೇಜಾರಾಗುವುದು, ಸಂತೋಷವಾಗುವುದು, ಭಯವಾಗುವುದು, ಆತಂಕವಾಗುವುದು; ಇವೆಲ್ಲವೂ ಮನಸ್ಸಿಗೆ ಮತ್ತು ಭಾವನೆಗಳಿಗೆ ಸಂಬಂಧಪಟ್ಟಿರುವುದು. ಆದರೆ ಅದರ ಪರಿಣಾಮವು ದೇಹದ ಮೇಲೂ ಆಗುತ್ತಿರುತ್ತದೆ. ಮನಸ್ಸಿನ ಅಧೀನ ದೇಹವೋ? ಅಥವಾ ದೇಹದ ಭಾಗವು ಮನಸ್ಸಿನದೋ? ಹೇಗಾದರೂ ಆಲೋಚಿಸಿ.

ಆದರೆ ಒಂದು ವಿಷಯ ನಿಜ. ಮನಸ್ಸು ಸಂತೋಷಗೊಂಡಾಗ ದೇಹದಲ್ಲಿ ಕೆಲವು ಬಗೆಯ ರಸಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗೆಯೇ ಖೇದಗೊಂಡಾಗ, ದುಃಖಿತರಾದಾಗ, ಆತಂಕಗೊಂಡಾಗ, ಕೋಪಗೊಂಡಾಗಲೂ ಹಾಗೆಯೇ ಕೆಲವು ಬಗೆಯ ರಸಗಳು ಉತ್ಪತ್ತಿಯಾಗುತ್ತದೆ. ಹಾಗೆ ಉತ್ಪತ್ತಿಯಾದ ರಸಗಳ ರಾಸಾಯನಿಕ ಕ್ರಿಯೆಗಳು ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ರಸಗಳು ಹೆಚ್ಚುಹೆಚ್ಚಾಗಿ ಸ್ರವಿಸುತ್ತಿದ್ದರೆ, ರಾಸಾಯನಿಕ ಕ್ರಿಯೆಯು ತೀವ್ರವಾದರೆ ಸಹಜವಾಗಿ ದೇಹದ ಮೇಲೆಯೂ ಪರಿಣಾಮವನ್ನು ಬೀರುತ್ತದೆ.

ಆತಂಕ, ಉದ್ವೇಗ, ಉದ್ರೇಕಗಳು ಹೃದಯದ ಬಡಿತವನ್ನು ಏರಿಸುತ್ತದೆ. ಸಿಕ್ಕಾಪಟ್ಟೆ ವೇಗವಾಗಿ ಹೊಡೆದುಕೊಳ್ಳಲು ಆರಂಭಿಸುತ್ತದೆ. ರಕ್ತದ ಒತ್ತಡ ಏರುತ್ತದೆ. ರಕ್ತ ಸಂಚಲನ ವೇಗವಾಗುತ್ತದೆ. ವಾಕರಿಕೆ ಬರುವುದು, ಕೆಲವೊಮ್ಮೆ ವಾಂತಿಯಾಗುವುದೂ ಉಂಟು. ನಡುಕ, ಬೆವರುವಿಕೆ, ಬಾಯಿ ಒಣಗುವುದು, ಎದೆಯಲ್ಲಿ ನೋವು, ತಲೆ ನೋವು, ಹೊಟ್ಟೆಯಲ್ಲಿ ಹಿಂಡಿದಂತೆ ನೋವು ಮತ್ತು ಉಸಿರಾಟದಲ್ಲಿ ವಿಪರೀತವಾಗಿ ಏರಿಳಿತ.

ಮೆದುಳು ಆತಂಕವನ್ನು ಗ್ರಹಿಸಿ ಅಥವಾ ಉದ್ವೇಗಗೊಂಡು ದೇಹದ ಇತರ ಭಾಗಗಳಿಗೆ ತನ್ನ ಆತಂಕದ ಸಂದೇಶಗಳನ್ನು ಕಳುಹಿಸುತ್ತದೆ. ಅದರಂತೆ ದೇಹದ ಇತರ ಭಾಗಗಳೂ ಕೂಡಾ ವರ್ತಿಸುತ್ತವೆ. ಈ ಮನೋದೈಹಿಕ ವ್ಯತ್ಯಾಸವು ಬಹಳಷ್ಟು ಸಲ ಸಾಂದರ್ಭಿಕವಾಗಿ ಎದುರಿಸುವ ಸನ್ನಿವೇಶಕ್ಕೆ ಅನುಗುಣವಾಗಿ ಇರುತ್ತದೆ.

ಆಗ ಬರುವ ಶಾರೀರಿಕ ಸಮಸ್ಯೆ ಸನ್ನಿವೇಶವು ಬದಲಾಗುತ್ತಿದ್ದಂತೆ, ವಾತಾವರಣವು ತಿಳಿಯಾಗುತ್ತಿದ್ದಂತೆ ಬಂದಂತೆಯೇ ಹೊರಟೂ ಹೋಗುತ್ತದೆ. ಆದರೆ, ಕೆಲವರಿಗೆ ಕೋಪಗೊಳ್ಳುವುದು ಅಥವಾ ಆತಂಕಗೊಳ್ಳುವುದು, ಖಿನ್ನತೆಗೆ ಒಳಗಾಗುವುದು, ನಕಾರಾತ್ಮಕವಾಗಿಯೇ ಚಿಂತಿಸುವುದು, ಏನಾಗುತ್ತದೋ, ಏನನ್ನು ಎದುರಿಸಬೇಕೋ ಎಂದು ಭಯದಲ್ಲಿಯೇ ಇರುವುದು ವ್ಯಕ್ತಿತ್ವದ ಭಾಗವಾಗಿಟ್ಟಿರುತ್ತದೆ.

ಆಗ ಅವರು ಅವರ ರಕ್ತದೊತ್ತಡವನ್ನು ಸದಾ ಹೊಂದುತ್ತಿರುತ್ತಾರೆ. ಯಾವಾಗಲೂ ಏರಿಳಿತಗಳಾಗುತ್ತಿರುತ್ತದೆ. ಇದರಿಂದ ರಕ್ತದೊತ್ತಡದಿಂದ ಉಂಟಾಗುವ ರೋಗಗಳನ್ನು ಬಳುವಳಿಯಾಗಿ ಪಡೆಯುತ್ತಾರೆ. ಮೆದುಳಿಗೆ ಮತ್ತು ಹೃದಯಕ್ಕೆ ಸಂಬಂಧಪಟ್ಟಂತಹ ತೊಂದರೆಗಳನ್ನು ಪರಿಣಾಮಗಳಾಗಿ ನೋಡಬೇಕಾಗುತ್ತದೆ.

ಕೆಲವರು ಹೇಳುತ್ತಿರುತ್ತಾರೆ, ಅವರಿಗೆ ಬ್ಲಡ್ ಪ್ರೆಷರ್ ಇದೆ ಅದಕ್ಕೆ ಹೆಚ್ಚು ಕೋಪ ಎಂದು. ಆದರೆ ಅದು ಹೀಗೂ ಇರಬಹುದು. ಅವರಿಗೆ ಕೋಪಗೊಳ್ಳುವುದು, ಆತಂಕಗೊಳ್ಳುವುದು ಸತತವಾದ ಅಭ್ಯಾಸವಾಗಿವುದರಿಂದ ರಕ್ತದೊತ್ತಡವು ಖಾಯಿಲೆಯಾಗಿ ಪರಿಣಮಿಸಿದೆ ಎಂದು.

ಏನೇ ಆಗಲಿ, ವಂಶವಾಹಿನಿಯಿಂದ, ಬೇರೆ ಕಾರಣಗಳಿಂದ ಬರುವ ಕಾಯಿಲೆಗಳನ್ನೂ ಕೂಡಾ ಮನೋಭಾವನೆಗಳ ಮತ್ತು ವರ್ತನೆಗಳ ಸರಿಯಾದ ನಿಯಂತ್ರಣ ಮತ್ತು ತರಬೇತಿಯಿಂದ ವಾಸಿ ಮಾಡಲಾಗದಿದ್ದರೂ ಉಲ್ಬಣಗೊಳ್ಳದಿರುವಂತೆ ನೋಡಿಕೊಳ್ಳಬಹುದು.

ಮನೋದೈಹಿಕ ಸಮಸ್ಯೆಗಳು

ಕೌಟುಂಬಿಕವಾಗಿ, ವೃತ್ತಿಯಲ್ಲಿ, ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅದೆಷ್ಟೇ ಒತ್ತಡಗಳಿದ್ದರೂ, ಆತಂಕಗಳಿದ್ದರೂ ಅವುಗಳನ್ನು ನೋಡುವ ದೃಷ್ಟಿ ಮತ್ತು ಅವುಗಳೊಂದಿಗೆ ಕೆಲಸ ಮಾಡುವ ಮುಕ್ತ ಮನಸ್ಥಿತಿಯನ್ನು ಹೊಂದಬೇಕು. ಆಗ ಅವು ರೋಗಗಳಾಗಿ ತಿರುಗುವುದಿಲ್ಲ. ಹೊರಗಿನ ಕೆಲಸಗಳು ಎಷ್ಟೇ ಒತ್ತಡಗಳನ್ನು ಹೇರಿದರೂ ಮನಸ್ಸಿನ ಒತ್ತಡಕ್ಕೆ ಬಲಿಯಾಗಲೇಬಾರದು. ಇದನ್ನು ಸ್ಪಷ್ಟವಾಗಿ ತಿಳಿಯೋಣ.

ಮನಸ್ಸಿನ ಸ್ಥಿತ್ಯಂತರಗಳ ನಿರೋಧಕ ಶಕ್ತಿಯು ಶರೀರದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ದುರ್ಬಲ ಮನಸ್ಸಿನವರಿಗೆ ರೋಗ ನಿರೋಧಕ ಶಕ್ತಿಯೂ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಿಂದೆ ಮುಂದೆ ನೋಡುತ್ತದೆ. ಖಿನ್ನತೆಗೊಳಗಾಗುವ ಅಥವಾ ಆತಂಕಕ್ಕೊಳಗಾಗುವ ರೂಢಿಯವರಿಗೆ ಸರಿಯಾಗಿ ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ.

ಸರಿ, ಹೊತ್ತು ಹೊತ್ತಿಗೆ ಸರಿಯಾಗಿ ಆಹಾರ ತೆಗೆದುಕೊಳ್ಳದೇ ಮತ್ತು ನಿದ್ದೆ ಮಾಡದೇ ಇರುವುದರಿಂದ ಆಗುವಂತಹ ಸಮಸ್ಯೆಗಳಿಗೆ ಅದು ಆಹ್ವಾನ ಕೊಟ್ಟಂತಾಗುತ್ತದೆ. ಈ ರೀತಿ ಮನಸ್ಸಿನ ಸ್ಥಿತ್ಯಂತರದ ಕಾರಣಗಳಿಂದ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೆ ಮನೋದೈಹಿಕ ಸಮಸ್ಯೆಗಳು ಅಥವಾ ಸೈಕೋಸೊಮ್ಯಾಟಿಕ್ ಡಿಸಾರ್ಡರ್ ಎನ್ನುತ್ತಾರೆ.

ಈ ಮನೋದೈಹಿಕ ಸಮಸ್ಯೆಗಳು ಎಗ್ಸಿಮಾ, ಹೊಟ್ಟೆಯ ಹುಣ್ಣುಗಳಿಗೆ, ಹೈಪರ್ ಟೆಂನ್ಶನ್, ಸೋರಿಯಾಸಿಸ್ ಮತ್ತು ಹೃದಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಆತಂಕ ಮತ್ತು ಉದ್ವೇಗಗಳನ್ನು ಹೊಂದುವುದರಿಂದ, ಖಿನ್ನತೆಗೆ ಜಾರುವುದರಿಂದ ಅಡ್ರಿನಲ್ ಗ್ರಂಥಿಯಲ್ಲಿ, ಎಪಿನೆಫ್ರಿನ್ ನಲ್ಲಿ ತೀವ್ರಗತಿಯಲ್ಲಿ ಹಾರ್ಮೋನುಗಳ ವ್ಯತ್ಯಯ ಉಂಟಾಗುವುದು.

ಆಗ ಸಹಜವಾಗಿ ಈ ಹಾರ್ಮೋನುಗಳ ವ್ಯತ್ಯಾಸದಿಂದ ಏನು ಶಾರೀರಿಕ ಸಮಸ್ಯೆ ಬರುವುದೋ ಅದನ್ನು ಎದುರಿಸಬೇಕಾಗುವುದು. ಸಾಮಾನ್ಯವಾಗಿ ಕುತ್ತಿಗೆ ನೋವು, ಆಮ್ಲತೆ (ಅಸಿಡಿಟಿ), ಬೆನ್ನು ನೋವು, ಮರೆತುಹೋಗುವುದು, ಪಿತ್ತ ಕೆರಳುವುದು, ಹಠಾತ್ ಕೋಪ ಬರುವುದು ಕೂಡಾ ಮನೋದೈಹಿಕ ಸಮಸ್ಯೆಗಳಾಗಿರುತ್ತವೆ. ಮನೋದೈಹಿಕ ಸಮಸ್ಯೆಗಳಲ್ಲಿ ಮುಖ್ಯವಾಗಿ ಎರಡು ವಿಧವನ್ನು ಗುರುತಿಸಬಹುದು.

ಶರೀರದಲ್ಲಿ ನೋವು, ಆಯಾಸ, ಅಧಿಕವಾಗಿ ನಿದ್ರೆ, ಅಥವಾ ನಿದ್ರೆ ಇಲ್ಲದಿರುವುದು, ಹಸಿವು ಇಲ್ಲದಿರುವುದು, ಆಮ್ಲತೆ (ಅಸಿಡಿಟಿ) ಈ ಬಗೆಯ ಸಮಸ್ಯೆಗಳು ಬರುವುದು ಒಂದಾದರೆ, ನರದೌರ್ಬಲ್ಯ ಸಮಸ್ಯೆಗಳು ಎದುರಾಗುವುದು, ಹೆಂಗಸರಲ್ಲಿ ಋತುಚಕ್ರವು ವ್ಯತ್ಯಾಸಗೊಳ್ಳುವುದು, ಲೈಂಗಿಕತೆಯಲ್ಲಿ ದೌರ್ಬಲ್ಯವನ್ನು ಹೊಂದುವುದು ಇತ್ಯಾದಿಗಳು ಮತ್ತೊಂದು ಬಗೆಯ ಸಮಸ್ಯೆಗಳು.

ಗರ್ಭಿಣಿಯರಾದಾಗಲೂ ಕೂಡಾ ಆ ಬಗೆಯ ಮನೋದೈಹಿಕ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ವಾಕರಿಕೆ, ಹುಸಿ ಹೆರಿಗೆ ನೋವು, ದೇಹದ ಇತರ ಭಾಗಗಳಲ್ಲಿ ನೋವು; ಇತ್ಯಾದಿಗಳನ್ನು ಕಾಣಬಹುದು.

ಅದೇ ರೀತಿ ಮನೋದೈಹಿಕ ವ್ಯತ್ಯಾಸಗಳು ಇನ್ನೂ ಕೆಲವು ಲಕ್ಷಣಗಳನ್ನು ತೋರುತ್ತವೆ. ಕೆಲವೊಮ್ಮೆ ದಿಢೀರನೆ ಹಾಸಿಗೆ ಹಿಡಿದು ಮಲಗುವಂತೆ ಮಾಡಬಹುದು. ಮೂರ್ಚೆ ಹೋಗುವುದು, ನಿದ್ರೆ ಬರುತ್ತಿರುವಂತೆ ಕಣ್ಣುಗಳು ಭಾರವಾಗಿದ್ದು ಕಣ್ಣೆಳೆಯುತ್ತಿರುವುದು, ಕೆಲವೊಮ್ಮೆ ಕಣ್ಣು ಕಾಣಿಸದೇ ಹೋಗುವುದು. ದೇಹದ ಯಾವುದಾದರೂ ಒಂದೋ, ಎರಡೋ ಭಾಗವನ್ನು ಕಳೆದುಕೊಂಡಂತೆ ಭಾಸವಾಗುವ ರೀತಿಗಳಲ್ಲಿಯೂ ಕಾಣುವುದು.

ಬಯಸಿ ಬರುವ ರೋಗ

ಮನೋದೈಹಿಕ ಸಮಸ್ಯೆಯಿಂದಾಗಿ ಕೆಲವರು ತಮಗೇನೋ ಬಹುದೊಡ್ಡ ರೋಗವೊಂದಿದೆ ಎಂದು ಭಾವಿಸತೊಡಗುತ್ತಾರೆ. ಯಾರಾದರೂ ವೈದ್ಯರ ಬಳಿ ತೋರಿಸಿ ಏನಿಲ್ಲ ಎಂದು ವರದಿ ಬಂದರೂ ಅವರಿಗೆ ಸಮಾಧಾನವಾಗುವುದಿಲ್ಲ. ಮತ್ತೊಬ್ಬ, ಮಗದೊಬ್ಬ ವೈದ್ಯರ ಬಳಿ ಪರೀಕ್ಷೆಗೆ ಒಳಪಡುತ್ತಿರುತ್ತಾರೆ. ನಿಮಗೆ ಏನೂ ಸಮಸ್ಯೆ ಇಲ್ಲವೆಂದರೂ ಅವರು ನಂಬುವುದಿಲ್ಲ.

ವೈದ್ಯರನ್ನು ಬದಲಾಯಿಸುತ್ತಾರೆಯೇ ಹೊರತು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಕೆಲವರಿಗೆ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಅದಕ್ಕೆ ಯಾವ ಕಾರಣವೂ ಇರುವುದಿಲ್ಲ. ಅದನ್ನು ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ಅವರಿಗೆ ಅಲ್ಲಿ ಏನೂ ತಿಳಿಯುದಿಲ್ಲ. ಆದರೆ ಇವರಿಗೆ ಮಾತ್ರ ಬಹುಕಾಲದಿಂದ ಆ ನೋವು ಕಾಣುತ್ತಿರುತ್ತದೆ. ಇದೂ ಕೂಡಾ ಮನೋದೈಹಿಕ ನೋವಿನ ಸಮಸ್ಯೆಯೇ ಆಗಿರುತ್ತದೆ.

ಕೆಲವರು ತಮ್ಮ ಮುಖದಲ್ಲಿ ಅಥವಾ ದೇಹದಲ್ಲಿ ಯಾವುದೋ ನ್ಯೂನ್ಯತೆ ಇದೆ ಎನಿಸುತ್ತಿರುತ್ತದೆ. ಅದಕ್ಕಾಗಿ ಕಾಸೆಮೆಟಿಕ್ ಚಿಕಿತ್ಸೆ ತೆಗೆದುಕೊಳ್ಳುತ್ತಿರುತ್ತಾರೆ. ಕೆಲವರು ಲಘು ಶಸ್ತ್ರ ಚಿಕಿತ್ಸೆಗಳನ್ನೂ ಕೂಡಾ ಕಾಲದಿಂದ ಕಾಲಕ್ಕೆ ಮಾಡಿಸಿಕೊಳ್ಳುತ್ತಿರುತ್ತಾರೆ. ಅದೆಷ್ಟು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡರೂ ಅಥವಾ ಕಾಸ್ಮೆಟಿಕ್ ಚಿಕಿತ್ಸೆಗಳನ್ನು ತೆಗೆದುಕೊಂಡರೂ ಅವರಿಗೆ ತೃಪ್ತಿಯೇ ಇರದಂತೆ ಮನೋರೋಗವಾಗಿ ಪರಿಣಮಿಸಿರುತ್ತದೆ.

ಉದಾಹರಣೆಗೆ ತಮ್ಮ ಮೂಗು ಸೊಟ್ಟ ಎನಿಸುತ್ತಿರುತ್ತದೆ. ತುಟಿಯಲ್ಲೇನೋ ಸ್ವಲ್ಪ ಸಮಸ್ಯೆ ಎನಿಸುತ್ತಿರುತ್ತದೆ. ಕೆನ್ನೆಯ ಮೇಲ್ಭಾಗದಲ್ಲೇನೋ ವಿನ್ಯಾಸ ಸರಿ ಇಲ್ಲ ಎನಿಸುತ್ತಿರುತ್ತದೆ, ಹೀಗೆ ತಮ್ಮ ಶರೀರ ರಚನೆಯ ಬಗ್ಗೆ ಅವರಿಗೆ ಸದಾ ಅತೃಪ್ತಿ. ಕೆಲವು ಸಿನಿಮಾ ಕಲಾವಿದರು, ಫ್ಯಾಷನ್ ಮತ್ತು ಪಾಪ್ ತಾರೆಯರಿಗೆ ಈ ಗೀಳಿತ್ತು. ತಮ್ಮ ಶರೀರದ ಯಾವುದೋ ಒಂದು ಭಾಗವನ್ನು ಒಂದಲ್ಲಾ ಒಂದು ಕಾರಣಕ್ಕೆ ಚಿಕಿತ್ಸೆಗೆ ಒಳಪಡಿಸಿಕೊಳ್ಳುತ್ತಿದ್ದರು. ಅವರಿಗೆ ತಮ್ಮದೇ ಶರೀರದ ಬಗ್ಗೆ ತೃಪ್ತಿಯೇ ಇರುತ್ತಿರಲಿಲ್ಲ.

ಸಾಮಾನ್ಯವಾಗಿ ಮಾನಸಿಕ ಖಿನ್ನತೆ ಮತ್ತು ಅನಿಯಂತ್ರಿತ ಭಾವೋದ್ವೇಗ ಈ ಬಗೆಯ ಮನೋದೈಹಿಕ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಒಟ್ಟಾರೆ ಮನಸ್ಥಿತಿಯು ದೇಹದ ಸ್ಥಿತಿಗತಿಗಳ ಮೇಲೆ ನೇರಾನೇರ ಪ್ರಭಾವವನ್ನು ಬೀರುತ್ತದೆ. ಅಂದರೆ ಈ ದೇಹದಲ್ಲಿ ತೊಂದರೆಗಳನ್ನು ಸರಿಪಡಿಸಿಕೊಳ್ಳಬೇಕೆಂದರೆ, ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕೆಂದಾಯಿತು.

ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ

ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ, ರೀತಿಯಿಂದ ರೀತಿಗೆ ಬದಲಾಗುತ್ತಿರುತ್ತದೆ. ಏನೇ ಆಗಲಿ, ಮನೋದೈಹಿಕ ಸಮಸ್ಯೆ ಇದೆ ಎಂಬುದನ್ನು ಗುರುತಿಸಿದ ಮೇಲೆ ವ್ಯಕ್ತಿಯು ಪ್ರಶಾಂತತೆಯನ್ನು ಪಡೆಯುವುದರ ಕಡೆಗೆ ಮೊದಲ ಗಮನ ಹರಿಸಬೇಕು.
ವಾತಾವರಣ ಬದಲಾವಣೆ ಬಹಳ ಉತ್ತಮವಾದದ್ದು.

ಯಾಂತ್ರಿಕವಾಗಿ ಕೆಲಸ ಮಾಡಿಕೊಂಡಿರುವ ಮತ್ತು ಒಂದೇ ಸಮನೆ ಅದೇ ಸ್ಥಳದಲ್ಲಿ ಇರುವ ಮೂಲಕ ಉಂಟಾಗಿರುವ ಏಕತಾನತೆಯನ್ನು ಒಡೆಯಲು ಬೇರೆ ವಾತಾವರಣಕ್ಕೆ ಹೋಗಬೇಕು. ಸ್ಥಳ ಬದಲಾವಣೆಯಾಗಬೇಕು. ಹೆಚ್ಚಿನ ಜನ ಸಂಚಾರವಿರದ, ಗದ್ದಲವಿರದ ಸ್ಥಳಗಳಿಗೆ ಪ್ರವಾಸ ಹೋಗುವುದು, ಅಲ್ಲಿ ಇರುವುದು ಮತ್ತು ತಮ್ಮ ಓದು, ಬರಹ, ಅಥವಾ ಇನ್ನಾವುದೇ ಒಬ್ಬರೇ ಮಾಡಿಕೊಳ್ಳುವ ಕೆಲಸ ಮಾಡಿಕೊಳ್ಳುವುದೆಲ್ಲವೂ ಮನೋದೈಹಿಕ ಸಮಸ್ಯೆಗಳಿಂದ ಪಾರಾಗಲು ಒಳ್ಳೆಯದೇ.

ಸುಂದರ ಮತ್ತು ಗದ್ದಲವಿಲ್ಲದಂತಹ ಸುಮಧುರ ಸಂಗೀತವನ್ನು ಕೇಳಬೇಕು. ಹಿಂಸೆ, ಅತಿ ಮಾನುಷಶಕ್ತಿಯ ಪ್ರದರ್ಶನಗಳಿರದ, ತುಂಬಾ ಉತ್ಪ್ರೇಕ್ಷಿತ ವೈಭವಗಳಿರದ ಸಕಾರಾತ್ಮಕವಾದ ಸಿನಿಮಾಗಳಿಗೆ ಹೋಗಬೇಕು. ನಿತ್ಯವೂ ನಿಯಮಿತವಾಗಿ ವ್ಯಾಯಾಮ, ನೃತ್ಯ ಈ ರೀತಿಯಲ್ಲಿ ದೇಹಕ್ಕೆ, ಮನಸ್ಸಿಗೆ ಮತ್ತು ಹೃದಯಕ್ಕೆ ಹದ ನೀಡಬೇಕು.

ಧಾರ್ಮಿಕತೆಯ ರೂಢಿಯಿದ್ದರೆ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಗಳನ್ನು ಮಾಡಬೇಕು.
ಒಳ್ಳೆಯ ಧನಾತ್ಮಕವಾದ ಕತೆಗಳನ್ನು ಕೇಳಬೇಕು ಅಥವಾ ಓದಬೇಕು.

ನಮ್ಮನ್ನು ನಾವು ಗಮನಿಸಿಕೊಂಡು, ಆತ್ಮಾವಲೋಕನ ಮಾಡಿಕೊಂಡು ನಮ್ಮ ವರ್ತನೆಗಳಲ್ಲಿ ಉದ್ದೇಶಪೂರ್ವಕವಾದಂತಹ ಬದಲಾವಣೆಗಳನ್ನು ತಂದುಕೊಳ್ಳಬೇಕು. ಇತರರಿಗೆ ಕಷ್ಟಗಳಲ್ಲಿ ನೆರವಾಗುವುದು, ಒತ್ತಡ ಮತ್ತು ಖಿನ್ನತೆ ಇರುವಂತವರನ್ನು ಕೂರಿಸಿಕೊಂಡು ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದರಿಂದ ಹೇಗೆ ಹೊರಗೆ ಬರಬೇಕೆಂಬ ಸಾಧ್ಯತೆಗಳನ್ನು ಅವರಿಗೆ ಅರಿವಾಗುವಂತೆ ತಿಳಿಸಬೇಕು.

ಎಷ್ಟೋ ಸಲ ಈ ರೀತಿ ಇನ್ನೊಬ್ಬರಿಗೆ ಅವರ ಕಷ್ಟದಿಂದ ಹೊರಗೆ ನೆರವಾಗಲು ಹೇಳಿಕೊಡುವಾಗ ನಮ್ಮ ಕಷ್ಟಗಳಿಂದ ನಾವು ಹೊರಗೆ ಬರಲು, ನಮ್ಮ ಒತ್ತಡಗಳಿಂದ ನಾವು ಹಗುರವಾಗಲು ನಮಗೆ ಒಳನೋಟಗಳು, ದಾರಿ ಸಿಗುವುದು. ಮಕ್ಕಳೊಂದಿಗೆ ಆಡುವುದು, ಅವರೊಂದಿಗೆ ಓದುವುದು, ಉದ್ಯಾನವನಗಳಲ್ಲಿ ಓಡಾಡುವುದು ಇವೆಲ್ಲವೂ ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸಕ ರೀತಿಯಲ್ಲಿ ಸಹಾಯಕ್ಕೆ ಬರುವುದು.

ಒಟ್ಟಾರೆ ಮನೋಭಾವ, ಏಕಪ್ರಕಾರದ ಯೋಚನೆಗಳು ಮತ್ತು ಮನಸ್ಸಿನ ವಿವಿಧ ಬಗೆಯ ಆಲೋಚನೆಗಳು ಆತಂಕಗಳನ್ನು, ಒತ್ತಡವನ್ನು ಉಂಟುಮಾಡುತ್ತವೆ. ಅವು ದೇಹದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಗಮನಕ್ಕೆ ಬರುವಂತಹ ಆಲೋಚನೆಗಳ ಮನಸ್ಸು ಒಂದಾದರೆ, ನಮ್ಮ ಗಮನಕ್ಕೆ ಬರದೇ ಇರಬಹುದಾದಂತಹ ದೇಹದ ಮನಸ್ಸೊಂದು ಇದೆ. ಅದರಲ್ಲಿಯೂ ಕೂಡಾ ವ್ಯತ್ಯಾಸಗಳಾಗುತ್ತಿರುತ್ತವೆ.
ಇದು ನಾನಾ ರೀತಿಯ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಾಗಿ ಕಾಣುತ್ತವೆ. ಮನೋದೈಹಿಕ ಸಮಸ್ಯೆಗೆ ಎಷ್ಟೋ ಕಾರಣಗಳಿವೆ.

ಕೆಲವು ಜನಕ್ಕೆ ಸುಮ್ಮನೆ ದಿಗಿಲು ಬೀಳುವುದೇ ಒಂದು ಸಮಸ್ಯೆ. ಸಾಮಾಜಿಕ ಆತಂಕದ ಸಮಸ್ಯೆ, ವಿವಿಧ ರೀತಿಯ ಭಯಗಳು, ಏನೇನೋ ಕಾಣುವುದು, ಆರೋಗ್ಯದ ಬಗ್ಗೆಯೇ ಆತಂಕ, ಭಾವನೆಗಳ ವ್ಯತ್ಯಾಸಗಳು, ನಿದ್ರಾಹೀನತೆ, ಒತ್ತಡಗಳು, ಬಾಲ್ಯದ ಆತಂಕಗಳು, ಮದುವೆಯಾಗಿ ಹೊಸ ಮನೆಗೆ ಹೋಗುವ ಹೆಣ್ಣುಮಗುವಿನ ಆತಂಕ ಮತ್ತು ಒತ್ತಡಗಳು, ಸಂಬಂಧಗಳು ಮುರಿದುಹೋಗುತ್ತವೆ ಎಂಬ ಆತಂಕ, ಯಾರನ್ನಾದರೂ ಪ್ರೀತಿಪಾತ್ರರ ಕಳೆದುಕೊಂಡಿರುವ ನೋವು, ವ್ಯಾಪಾರ ವ್ಯವಹಾರ ರಾಜಕೀಯ ಅಥವಾ ಯಾವುದೇ ಉದ್ದಿಮೆಯಲ್ಲಿ ಅಪಾರವಾದ ನಷ್ಟ, ಕಿರುಕುಳ ನೀಡುವ ಸಾಲಗಾರರು, ಲೈಂಗಿಕ ಸಮಸ್ಯೆ, ಹೆಂಗಸರಲ್ಲಿ ಋತು ಸಮಸ್ಯೆ, ಸಾಮಾಜಿಕ ಅಥವಾ ಧಾರ್ಮಿಕತೆಯ ಕಾರಣದಿಂದ ಹತ್ತಿಕ್ಕಲಾಗುವ ಎಷ್ಟೋ ಮನೋಬಯಕೆಗಳು ಮತ್ತುಅವುಗಳಿಂದಾಗುವ ಒತ್ತಡಗಳು; ಹೀಗೆ ಯಾವುದ್ಯಾವುದೋ ಕಾರಣಗಳು ಮನೋದೈಹಿಕ ಸಮಸ್ಯೆಗೆ ಕಾರಣವಾಗುತ್ತವೆ.

ಒಟ್ಟಾರೆ ಕಣ್ಣು, ಕಿವಿ, ಮೂಗುಗಳಿಗೆ ಏನೋ ಸಮಸ್ಯೆ ಬಂದಂತೆ ಮನಸ್ಸಿಗೂ ಸಮಸ್ಯೆ ಬರುತ್ತಿರುತ್ತದೆ. ಹಾಗಾಗಿ ನಮ್ಮ ಮನಸ್ಸಿನ ಸಮಸ್ಯೆಗೆ, ಮೆದುಳಿನ ಸಮಸ್ಯೆಗೆ ಅಥವಾ ನರಗಳ ಸಮಸ್ಯೆಗೆ ಸಂಕೋಚಪಡುವುದು ಬೇಡ. ಮನಸಿನ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಎಷ್ಟೋ ಸಮಸ್ಯೆಗಳು ಇಲ್ಲವಾಗುತ್ತವೆ. ದೈಹಿಕ ಸಮಸ್ಯೆಗಳೂ ಗುಣ ಹೊಂದುತ್ತವೆ.

ಕೊನೆಯ ಎಲೆ

ವಾಸ್ತವಧಾರವಲ್ಲದೇ ಭ್ರಮಾಧೀನವಾದ ಮನಸ್ಸಿಗೂ ಬದುಕನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದು. ಅದೊಂದು ತಂತ್ರ. ದ ಲಾಸ್ಟ್ ಲೀಫ್ ಅಂದರೆ ಕೊನೆಯ ಎಲೆ ಎಂಬ ಕತೆ ಇದೆ. ಅದನ್ನು ಬರೆದವರು ಓ ಹೆನ್ರಿ ಎಂಬ ಅಮೇರಿಕೆಯ ಕತೆಗಾರ. ಅದರಲ್ಲಿ ಇಬ್ಬರು ಗೆಳತಿಯರಿರುತ್ತಾರೆ. ಅವರಿಬ್ಬರೂ ಚಿತ್ರಕಲಾವಿದೆಯರು. ಒಂದೇ ಸ್ಟುಡಿಯೋ ಮಾಡಿಕೊಂಡಿರುತ್ತಾರೆ. ಅವರಲ್ಲಿ ಒಬ್ಬಳಿಗೆ ನಿಮೋನಿಯಾ ರೋಗ ಬರುತ್ತದೆ.

ಅವಳಿಗೆ ಔಷಧೋಪಚಾರ ಆಗುತ್ತಿದ್ದರೂ, ಅವಳು ಮಲಗಿದ್ದ ಮಂಚದಿಂದ ಹೊರಗೆ ಒಂದು ಮರವನ್ನು ನೋಡುತ್ತಿರುತ್ತಾಳೆ. ಶಿಶಿರ ಕಾಲದಲ್ಲಿ ಆ ಮರದ ಎಲೆಗಳೆಲ್ಲಾ ದಿನದಿನವೂ ಉದುರುತ್ತಿರುತ್ತವೆ. ಅದನ್ನು ನೋಡುತ್ತಿದ್ದ ಅವಳಿಗೆ ಆ ಮರದ ಎಲೆಗಳೆಲ್ಲ ಉದುರುತ್ತಿರುವ ಹಾಗೆ ತನ್ನ ಬದುಕಿನ ದಿನಗಳೂ ಮುಗಿದುಹೋಗುತ್ತಿವೆ. ಆ ಮರದ ಕೊನೆಯ ಎಲೆ ಉದುರಿದ ಮೇಲೆ ತಾನೂ ಇರುವುದಿಲ್ಲ ಎಂದು ಹೇಳುತ್ತಿರುತ್ತಾಳೆ.

ದಿನವೂ ಅದನ್ನು ಕೇಳುತ್ತಿದ್ದ ಗೆಳತಿಯು ನಿಮೋನಿಯಾ ಬಂದಿರುವ ಗೆಳತಿಯ ಹುಚ್ಚು ಕಲ್ಪನೆಯನ್ನು ಒಪ್ಪದೇ ಸಕಾರಾತ್ಮಕವಾಗಿ ಅವಳಿಗೆ ಯೋಚಿಸಲು ಹಚ್ಚಲು ಯತ್ನಿಸುತ್ತಿರುತ್ತಾಳೆ. ಆದರೆ ಆಗುವುದಿಲ್ಲ. ನಿಮೋನಿಯಾದ ಹುಡುಗಿ ತನ್ನ ಕಲ್ಪನೆಯನ್ನೇ ಬಲಗೊಳಿಸಿಕೊಳ್ಳುತ್ತಿರುತ್ತಾಳೆ. ಒಂದು ದಿನ ಕಿಟಕಿ ತೆರೆದಾಗ ಮರದ ಎಲ್ಲಾ ಎಲೆಗಳು ಉದುರಿಬಿದ್ದಿದ್ದರೂ ಒಂದೇ ಒಂದು ಎಲೆ, ಕೊನೆಯ ಎಲೆ ಪಕ್ಕದ ಕಟ್ಟಡದ ಗೋಡೆಯೊಂದಕ್ಕೆ ತಗುಲಿದ್ದು, ಅದು ಉದುರಿರುವುದೇ ಇಲ್ಲ.

ಅದು ಉದುರುವ ಹೊತ್ತಿಗೆ ತಾನೂ ಸಾಯುತ್ತೇನೆ ಎಂದು ಅವಳ ನಂಬಿಕೆ. ಆದರೆ ಎಷ್ಟೇ ದಿನಗಳು ಕಳೆದರೂ ಅದು ಉದುರುವುದೇ ಇಲ್ಲ. ತಾನು ಬದುಕುತ್ತೇನೆ. ಆ ಎಲೆಯು ಅದನ್ನು ಸೂಚಿಸಲೆಂದೇ ಉದುರುತ್ತಿಲ್ಲ ಎಂದು ಅವಳಿಗೆ ಅನಿಸುತ್ತದೆ. ಅವಳು ಬದುಕುತ್ತಾಳೆ. ಆರೋಗ್ಯಕ್ಕೆ ಮರಳುತ್ತಾಳೆ.

ಆ ಎಲೆ ಉದುರುವುದೇ ಇಲ್ಲ. ಏಕೆಂದರೆ, ಈ ಹುಡುಗಿಯ ಹುಚ್ಚು ಭ್ರಮೆಯನ್ನು ಗೆಳತಿಯಿಂದ ತಿಳಿದ ಮುದುಕ ಕಲಾವಿದನೊಬ್ಬ ಮರದ ಕೊಂಬೆ ಮತ್ತು ಕಟ್ಟಡದ ಗೋಡೆ ಸಂಧಿಸುವಂತಹ ಎಡೆಯಲ್ಲಿ ಒಂದು ಎಲೆಯ ಚಿತ್ರವನ್ನು ಬಿಡಿಸಿರುತ್ತಾನೆ. ದೂರದಿಂದ ನೋಡಲು ಕೊಂಬೆಗೆ ಅಂಟಿಕೊಂಡಿರುವ, ಕಟ್ಟಡದ ಗೋಡೆಗೆ ತಗುಲಿಕೊಂಡಿರುವ ಹಳದಿ ಬಣ್ಣಕ್ಕೆ ತಿರುಗಿರುವ ಎಲೆಯಂತೆ ಕಾಣುತ್ತಿರುತ್ತದೆ. ಅದು ಅವಳ ಭ್ರಮೆಯ ಪ್ರಕಾರವೇ ಅವಳ ಜೀವವನ್ನು ಉಳಿಸಿರುತ್ತದೆ.

ಆದರೆ ದುರದೃಷ್ಟವಶಾತ್, ಆ ಕೊನೆಯ ಎಲೆಯ ಮಾಸ್ಟರ್ ಪೀಸ್ ಮಾಡಿದ್ದ ವೃದ್ಧ ಮತ್ತು ಕುಡುಕ ಕಲಾವಿದ ಮಾಗಿಯ ಚಳಿಯ ರಾತ್ರಿಯಲ್ಲಿ ಚಿತ್ರವನ್ನು ಬರೆದು ತಾನು ಚಳಿಗೆ ಸತ್ತಿರುತ್ತಾನೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version