ಭಾವ ಭೈರಾಗಿ
ಕವಿತೆ | ಯಯಾತಿಗಳು
ಮಸಣದ ದಾರಿಯಲ್ಲಿನ ಮನೆ
ಒಂಟಿ-ಶೂನ್ಯ ಆಕಾರ ನಿರಾಕಾರ
ಭವ ಬಂಧನಗಳ ಕಳಚದ
ಕೊಂಡಿ,ಬೆಳಕು ಹಾಯದ ಕಿಂಡಿ.
ಹಗಲ ಮೆರವಣಿಗೆ ಮಸಣದತ್ತ
ಸಾಲು ಸಾಲು ಅಳು ಕಿರಿಚಾಟ;
ಉಸಿರಾಟ ಮರೆತ ಗಾಳಿ
ಸ್ತಬ್ದ,ನಿಶ್ಶಬ್ದ,ಸಶಬ್ದ!
ಇರುಳು ತಮ್ಮ ಹೆಣಗಳ ತಾವೆ
ಹೊತ್ತವರ ಆರ್ತನಾದ
ನರನರಗಳಲ್ಲೂ ನರಳಾಟ
ಉಸಿರ ತಿತ್ತಿಗಳ ಕಿತ್ತು ಬರಿಗೈ.
ಒಳಗೂ ಹೊರಗೂ ಕುಣಿತ,ಮೊರೆತ
ನಿಸ್ಸಹಾಯಕ ಆಕ್ರಂದನ
ನಿಲುಗಡೆ ಇಲ್ಲದ ಯಾನ
ಅಗಮ್ಯ ಅಗೋಚರ.
ಪುರುವನ್ನು ಕಾದ ಯಯಾತಿಗಳು
ಉಂಡ ಸುಖದ ನೆನಪ
ನೆಕ್ಕುವ ನಾಲಗೆಯ ಮುಲುಕು
ಮೈತುಂಬ ಅಕಾಲ ಮರಣ!
– ಜಿ. ಮುದ್ದುವೀರಸ್ವಾಮಿ ಹಿರೇಮಳಲಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401