ಭಾವ ಭೈರಾಗಿ
ಕವಿತೆ | ಮೃಗಗಳಿಗಂಜಿ ಹೋದಳು..!
- ಟಿ.ಎಸ್. ರಾಜೇಂದ್ರ ಪ್ರಸಾದ್ ತೇಕಲವಟ್ಟಿ, ದಾವಣಗೆರೆ
ಕಣ್ಣೊಳಗೆ ಕಣ್ಣು ನೆಟ್ಟು ಪುಣ್ಯಕೋಟಿಯಂತೆ ಸೆರಗಲ್ಲಿ ನೋವಿನ ಮುಡಿತುಂಬ ಬಿಚ್ಚಿಟ್ಟು ಎದೆಯೊಳಗಿನ ಬೆಂಕಿಯಂತಹ ದಿಟವನು ನಡೆದು ಹೋದಳು ಅಕ್ಕನಂತೆ!
ಗುಟ್ಟುರಟ್ಟಾಗದಿರಲು ಕೈಯಲ್ಲಿ ಕೈ ಬೆಸೆದು ಮುಚ್ಚಿಟ್ಟು ಬೆರಳುಗಳಲ್ಲಿ ಬಾಷೆಯನು ಎದೆಯಲ್ಲಿ ನಿಜವನು ಬಚ್ಚಿಟ್ಟು ಮೃಗಜಲವಾಗಿ ಹರಡಿಕೊಂಡು!
ಉಳಿದುಕೊಂಡ ನೀರವ ಮೌನ ಕುಸಿದು ಕುಳಿತು
ಕಣ್ಣಲಿ ಮಂಜುಮುತ್ತಿ ಅಕ್ಷರಗಳೆಲ್ಲ ಒದ್ದೆಯಾದವು!
ಬಂಜೆಯಾದ ಅಪ್ಪ ಕಪ್ಪು ಹೇಳಿದ ಅವ್ವ ತುಪ್ಪ ಸುರಿದ ಹಗಲು ಉರುಳಾದ ಹರೆಯ ಕರುಳು ಕತ್ತರಿಸಿದ ಒಡಲು ಹೇಳಿ ಹೋಗುವಾಗ
“ಹುಟ್ಟಬಾರದು ಹೆಣ್ಣಾಗಿ.!” ನೋವಿನ ದನಿಯನ್ನು
ನೆನಪಾಗಿ ನೆಟ್ಟು ಮೃಗಗಳಿಗಂಜಿ ಹೋದಳು!
ನಂಜುಂಡೇಶ್ವರ ಕಲ್ಲಾಗಿ ಅರಳದಾಯಿತು ಮಲ್ಲಿಗೆ ಕರುವಿನ ಕೊರಳ ಕಟ್ಟಿ ಹೆತ್ತ ಕರುಳು ಮೃಗವಾಯಿತು ಕತ್ತುಕೊಟ್ಟು ದಿಗಿಲಾಗಿ ಮುತ್ತು ಬಿದ್ದು ಮಣ್ಣಾಗಿ ಮುಳ್ಳುಹೊದೆಯೊಳಗೆ ಬೆಂಕಿ ಹೊಗೆಯಾಡಿತು!
ಬರಿದಾಯಿತು ಬಯಲು
ಒಣಗಿದ ಮರದಡಿಯಲಿ ಅವಳ ಸಮಾಧಿಯ ಮೇಲೆ ಬಾಡಿಹೋದ ಹೂವುಗಳು ಬಿಕ್ಕಳಿಸುತ್ತಿದ್ದವು!
ಸುದ್ದಿದಿನ.ಕಾಂ|ವಾಟ್ಸಾಪ್|9980346243