ಭಾವ ಭೈರಾಗಿ
ಕವಿತೆ | ಆಳುವವರ ನಾಡು
- ಆಫ್ರಿಕನ್ ಕವಿ : ಮಬೆಲ್ಲಾ ಸೋನ್ ಡಿಸೊಕೊ |ಕನ್ನಡಕ್ಕೆ : ಡಾ. ಸಿ. ನಾಗಣ್ಣ
ಮಳೆ ಓಡಿದ ರಾತ್ರಿ ಇದು
ಬಡನೆಲದ ಭೂಪಟವನ್ನು ಬೆಳಕಿಗೊಡ್ಡಿ ಆಳುವವರು ಬಡಬಡಿಸುತ್ತಾರೆ
ಕುಡಿದು ಕಂಠಪೂರ್ತಿ
ಕ್ರುದ್ಧ ಕಡಲಿನ ನಡುಮಧ್ಯ ತೂಗುಯ್ಯಾಲೆಯಲ್ಲಿ ತೊನೆಯುವ ರೀತಿ ಅವರಿರುವ ಅರಮನೆ
ಬೀಳುವ ಗಾಳಿ ಮಳೆಗೆ ಮೊದಲು ತುಂಬುವ ಧೂಳಲ್ಲಿ ಮರೆಯಾದ ಬೀದಿದೀಪಗಳ ಸುತ್ತ ನರ್ತಿಸುವ
ಕೀಟಗಳಂತೆ ಅವರು
ಇದು ಬಿರುಗಾಳಿಯ ರಾತ್ರಿ ಬೆಟ್ಟಗಳು ಕಾಣೆಯಾಗುತ್ತವೆ ಕಣಿವೆಗಳಲ್ಲಿ
ನದಿಗಳು ಹರಿಯುತ್ತವೆ ಹಿಮ್ಮುಖವಾಗಿ
ಭೋರ್ಗರೆವ ಕಡಲು ಎರಚುವ
ಉಪ್ಪು ನೀರು ಇಳಿಯುತ್ತದೆ
ನಮ್ಮ ಮುಖ ಮೈಗಳಿಂದ
ಶಿಶಿರದಲ್ಲಿ ಒಡೆಯುವ ತುಟಿಗಳ ಹಾಗೆ
ನಮ್ಮ ಭರವಸೆ ಬಿರಿಯುವ ಕಾಲಕ್ಕೆ
ತುಟಿ ಬಿಚ್ಚಿದ ಕಡಲ ಹಕ್ಕಿಯು ಕೇಳಬೇಕು
ಅದು ಸತ್ತು
ಅದರ ಸುತ್ತ ಕಾಗೆಗಳು
ಶೋಕವಾಚರಿಸುವ ಮೊದಲು
ಕ್ರೂರ ರಾಜ್ಯದ ಹಣೆಬರಹವೇ ಹೀಗೆ
ಬಣ್ಣ ಬಣ್ಣದ ಪುಕ್ಕ ಹೊತ್ತ
ಗಿಣಿಗಳಾಳುವ ನಾಡು
(ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ಪ್ರಕಟಿಸಿರುವ ಡಾ.ಸಿ.ನಾಗಣ್ಣ ಅವರ ‘ಕಪ್ಪು ಕಾವ್ಯ‘ ಪುಸ್ತಕದಿಂದ ಈ ಕವಿತೆಯನ್ನು ಆಯ್ದುಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243