ದಿನದ ಸುದ್ದಿ
ಶಿಮ್ಲಾದಿಂದ ಕನ್ನಡತಿ ಕರೆತಂದ ವಿಕ ವರದಿಗಾರ ನಿಮಗೆ ಗೊತ್ತಾ?
ಸುದ್ದಿದಿನ ಡೆಸ್ಕ್: ಪತ್ರಕರ್ತರು ಚೌಕಟ್ಟಿನ ಹೊರಗೂ ಕೆಲಸ ಮಾಡಿ ಹೇಗೆ ಸತ್ಕಾರ್ಯ ಮಾಡಬಹುದು ಎನ್ನುವುದಕ್ಕೆ ಶಿಮ್ಲಾದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರಿನ ಪಿರಿಯಾಪಟ್ಟಣ ಮೂಲದ ಕನ್ನಡತಿ ಪದ್ಮಾರನ್ನು ಕರೆತರಲು ಅವಿರತವಾಗಿ ಶ್ರಮಿಸಿದ ವಿಜಯ ಕರ್ನಾಟಕ ದಿನಪತ್ರಿಕೆಯ ಮೈಸೂರು ವಿಭಾಗದ ಹಿರಿಯ ಉಪ ಸಂಪಾದಕ ಚಾಣಕ್ಯ ನೀಲಕಂಠನಹಳ್ಳಿ ಅವರು ಮಾದರಿಯಾಗಿ ನಿಂತಿದ್ದಾರೆ.
ಚಾಣಕ್ಯ ಅವರ ಸೇವೆಯ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಕೂಡ ಪದ್ಮಾ ಅವರನ್ನು ಭೇಟಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ವಿಜಯ ಕರ್ನಾಟಕ ಹೆಸರನ್ನು ಪ್ರಸ್ತಾಪಿಸಿ ವರದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ಸುಳ್ಳೋ ನಿಜವೋ ಎಂದು ಯೋಚಿಸದೆ ಯಥಾವತ್ತಾಗಿ ಭಟ್ಟಿ ಇಳಿಸುವ ಮಾಧ್ಯಮಗಳಿಗೆ ಹೀಗೂ ಕೆಲಸ ಮಾಡಬಹುದು ಎಂಬುದನ್ನು ಒಂದು ನಿದರ್ಶನ ಸಮೇತ ಚಾಣಕ್ಯ ಅವರು ಸಾಬೀತುಮಾಡಿ ತೋರಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಎಂಬ ಪುಟ್ಟ ಗ್ರಾಮ ಮೂಲದವರಾದ ಅವರು, ಸದ್ಯ ಮೈಸೂರಿನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅಮೋಘ್ ಸ್ಥಳೀಯ ವಾಹಿನಿಯಲ್ಲಿ ವರದಿಗಾರರಾಗಿ, ಪ್ರಜಾವಾಣಿ ಬೆಂಗಳೂರು ವಿಭಾಗದಲ್ಲಿ ಟ್ರೇನಿಯಾಗಿ, ವಿಜಯವಾಣಿ ದಿನಪತ್ರಿಕೆಯ ಚಿತ್ರದುರ್ಗ ಹಾಗೂ ದಾವಣಗೆರೆಯ ವರದಿಗಾರನಾಗಿ ಕೆಲಸ ಮಾಡಿದ್ದ ಅವರು ಕಳೆದ ಐದು ವರ್ಷಗಳಿಂದ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕರಣ ಭೇದಿಸಿದ್ದು ಹೀಗೆ…
ಪದ್ಮಾ ಪ್ರಕರಣ ಕುರಿತು ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಕಾಣಿಸಿಕೊಂಡ ಒಂದು ಮಾಹಿತಿಯ ಬೆನ್ನು ಹತ್ತಿದ ಚಾಣಕ್ಯ ಅವರು ಶಿಮ್ಲಾ ಆಸ್ಪತ್ರೆಯ ದೂರವಾಣಿ ಸಂಖ್ಯೆಯನ್ನು ಗೂಗಲ್ನಲ್ಲಿ ಪತ್ತೆಮಾಡಿದರು. ತಮಗೆ ಗೊತ್ತಿದ್ದಷ್ಟು ಹಿಂದಿಯಲ್ಲಿ ಅಲ್ಲಿನ ಸ್ವಾಗತಕಾರನ ಹತ್ತಿರ ಮಾತನಾಡಿ ಹೇಗೋ ಅಲ್ಲಿನ ವೈದ್ಯ ಸಂಜಯ್ ಪಾಠಕ್ ಸಂಪರ್ಕ ಸಾಧಿಸಿ ಪದ್ಮಾ ಅವರೊಂದಿಗೆ ಮಾತನಾಡಲು ಯಶಸ್ವಿಯಾದರು. ಶಿಮ್ಲಾದಲ್ಲಿದ್ದ ಪದ್ಮಾರನ್ನು ಮೊದಲು ಗುರುತಿಸಿದ ಹಿಮಾಚಲಪ್ರದೇಶದ ಸಾಮಾಜಿಕ ಕಾರ್ಯಕರ್ತೆ ಸುನೀಲ ಶರ್ಮಾ ಅವರಿಗೆ ಫೇಸ್ ಬುಕ್ನಲ್ಲಿ ಸಂದೇಶ ಕಳಿಸಿ ಅವರ ಸಂಪರ್ಕವನ್ನೂ ಗಳಿಸಲು ಯಶಸ್ವಿಯಾದರು.
ವರದಿ ಮಾಡಿ ಸುಮ್ಮನಾಗಲಿಲ್ಲ
ಮೇಲಿನವರ ಗಮನಕ್ಕೆ ತಂದು ವರದಿಮಾಡಿ ತಣ್ಣಗಾಗಿದ್ದರೆ ಅವರು ಹತ್ತರಲ್ಲಿ ಹನ್ನೊಂದನೆಯವರಾಗಿರಬೇಕಾಗಿತ್ತು. ವಿಕ ಮೈಸೂರು ಸ್ಥಾನಿಕ ಸಂಪಾದಕ ಲೋಕೇಶ್ ಕಾಯರ್ಗ ಅವರು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರಿಗೆ ವಿಷಯ ಮುಟ್ಟಿಸಿದರು. ಚಾಣಕ್ಯ ಮೈಸೂರು ಜಿಲ್ಲಾ ಮಾನಸಿಕ ಆರೋಗ್ಯ ಯೋಜನಾಧಿಕಾರಿ ಮಂಜುಪ್ರಸಾದ್ ಅವರಿಗೆ ವಿಷಯ ಮುಟ್ಟಿಸಿದರು. ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗೆ ಸುನೀಲ ಶರ್ಮಾ, ಸಂಜಯ್ ಪಾಠಕ್ ಅವರ ಮೊಬೈಲ್ ನಂಬರ್ ನೀಡಿ. ಈ ಪ್ರಕರಣದಲ್ಲಿ ವಿಜಯ ಕರ್ನಾಟಕ ಪತ್ರಿಕೆಯು ಮುಖ್ಯ ಸೂತ್ರಧಾರಿಯಾಗಿರುವಂತೆ ನೋಡಿಕೊಂಡರು.
ವರದಿ ಪರಕಟವಾದ ಮರುದಿನವೇ ವಿಜಯ ಕರ್ನಾಟಕದ ಪಿರಿಯಾಪಟ್ಟಣ ವರದಿಗಾರ ನವೀನ್ ಅವರು ಕಂಪಲಾಪುರದ ಮಾಕನಹಳ್ಳಿ ಪಾಳ್ಯದಲ್ಲಿರುವ ಪದ್ಮಾ ಅವರ ಮನೆಯನ್ನು ಪತ್ತೆ ಮಾಡಿದರು. ಮಾನಸಿಕ ಆರೋಗ್ಯಾಧಿಕಾರಿಗೆ ವಿಳಾಸ ತೋರಿಸಿ ಅವರನ್ನು ಕರೆದೊಯ್ದವರು ನವೀನ್.
ಮನೆ ಪರಿಸ್ಥಿತಿ ಸರಿ ಇರಲಿಲ್ಲ
ಪದ್ಮಾ ಅವರ ಕುಟುಂಬ ವರ್ಗವನ್ನು ಮಾನಸಿಕ ಆರೋಗ್ಯ ಇಲಾಖೆ ತಂಡ ಭೇಟಿಯಾದಾಗ ಅವರ ಮನೆ ಪರಿಸ್ಥಿತಿ ಕರಳು ಚುರುಕ್ ಎನ್ನುವಂತಿತ್ತು. ದುಡ್ಡಿಲ್ಲದೆ ಅರ್ಧಕ್ಕೆ ಮನೆ ನಿಂತಿದ್ದರಿಂದ ಪದ್ಮಾರ ತಾಯಿ ಪಾರ್ವತಮ್ಮನವರು ಅವರ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು. ಕೂಲಿ ಮಾಡಿ ಬದುಕುವ ಕುಟುಂಬಕ್ಕೆ ಪದ್ಮಾ ಇನ್ನಷ್ಟು ಹೊರೆಯಾಗಬಹುದೆಂದು ಮೇಲ್ನೋಟದಲ್ಲೇ ಕಾಣುತ್ತಿತ್ತು. ಕೂಡಲೇ ಪಿರಿಯಾಪಟ್ಟಣ ಶಾಸಕ ಮಹದೇವು ಅವರನ್ನು ಸಂಪರ್ಕಿಸಿದ ಚಾಣಕ್ಯ ಅವರು ಪದ್ಮಾರ ಮನೆ ಪರಿಸ್ಥಿತಿಯನ್ನು ವಿವರಿಸಿ ಹೇಳಿದರು. ಇದರಿಂದ ಕರಗಿದ ಶಾಸಕರು ಪದ್ಮಾ ಕುಟುಂಬಕ್ಕೆ ನೆರವು ನೀಡುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಅಭಿರಾಂ ಅವರೂ ಕೂಡ ಇದೇ ರೀತಿ ಭರವಸೆ ನೀಡಿದರು.
ಪ್ರೇರಣೆಯಾಗಿದ್ದು ಸಂಸ್ಥೆ ಹಾಗೂ ಗುರುಗಳು
ವರದಿಗಳು ಸಮಾಜದ ಮೂರನೇ ವ್ಯಕ್ತಿಗೆ ಲಾಭ ತಂದುಕೊಟ್ಟಾಗಲೇ ಸಾರ್ಥಕವಾಗುವುದು ಎಂದು ಚಾಣಕ್ಯ ಅವರು ತಮ್ಮ ಫೇಸ್ಬುಕ್ ಪೋಸ್ಟ್ವೊಂದರಲ್ಲಿ ಹೇಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ನನ್ನ ಸಂಸ್ಥೆ ಹಾಗೂ ಸ್ಥಾನಿಕ ಸಂಪಾದಕರು ನೀಡಿದ ಪ್ರೋತ್ಸಾಹ ಎಂದು ಫೇಸ್ ಬುಕ್ ಮೆಸೆಂಜರ್ನಲ್ಲಿ ಸುದ್ದಿದಿನ ಕ್ಕೆ ತಿಳಿಸಿದ್ದಾರೆ.
ನಾನು ವಿಕ ಬಳಗಕ್ಕೆ ಸೇರಿದಾಗ ನನ್ನ ಆದ್ಯಗುರುಗಳು ನೀವು ಏನು ಬರೆಯುತ್ತೀರಾ ಎಂದು ಕೇಳಿದರು. ಕೃಷಿ, ವಿಜ್ಞಾನ, ಭಾಷಾಂತರ, ಲೈಫ್ ಸ್ಟೈಲ್ ವರದಿಗಾರಿಕೆ ಬಗ್ಗೆ ವಿವರಿಸಿದೆ. ಶ್ರೀಸಾಮಾನ್ಯನಿಗೆ ನೆರವಾಗುವಂತಹ ಯಾವುದಾದರೂ ಲೇಖನ ಬರೆದಿದ್ದೀರಾ ಎಂದು ಕೇಳಿದರು. ನನ್ನ ಬಳಿ ಉತ್ತರ ಇರಲಿಲ್ಲ. ಸಮಾಜದ ಮೂರನೇ ವ್ಯಕ್ತಿಗೆ ಲಾಭ ತಂದು ಕೊಟ್ಟಾಗ ಮಾತ್ರ ವರದಿ ಸಾರ್ಥಕವಾಗತ್ತದೆ ಎಂದು ಅವರು ಹೇಳಿದ್ದರು. ಇದು ಅರ್ಥವಾಗಲು ಐದು ವರ್ಷ ಹಿಡಿಯಿತು ಎಂದು ಚಾಣಕ್ಯ ಅವರು ತಮ್ಮ ಫೇಸ್ಬುಕ್ ಪೋಸ್ಟ್ ವೊಂದರಲ್ಲಿ ಬರೆದಿದ್ದಾರೆ.