ಅಂತರಂಗ

ಧರ್ಮ ಮರ್ಮ-04 : ಧರ್ಮಶಾಸ್ತ್ರದ ಉಗಮ

Published

on

Art: Kim knoll, Chicago
  • ಯೋಗೇಶ್ ಮಾಸ್ಟರ್

ರ್ಮವು ತಾತ್ವಿಕವೋ ಅಥವಾ ಆಧ್ಯಾತ್ಮಿಕವೋ? ಇವನ್ನೂ ಒಳಗೊಂಡು ಮತ್ತು ಇವನ್ನು ಮೀರಿರುವ ಸಂಗತಿಗಳೋ. ಜೈವಿಕ ಅಗತ್ಯ ಮತ್ತು ಸಾಮಾಜಿಕ ವಾಸ್ತವಕ್ಕೆ ಈ ಧರ್ಮವೆನ್ನುವುದು ಬೇಕಾಗಿದೆಯೇ? ಧರ್ಮವೆಂಬ ಅಮೂರ್ತವಾದ ಪರಿಕಲ್ಪನೆಯನ್ನು ಅಥವಾ ಆಂತರಿಕ ಮೌಲ್ಯವನ್ನು ಕಾಪಾಡಲು ಅದರ ಸ್ವರೂಪನ್ನು, ವಿವರಣೆಯನ್ನು, ಅದನ್ನು ಕಂಡುಕೊಳ್ಳಬೇಕಾಗಿರುವ ಅಗತ್ಯವನ್ನು, ಅದನ್ನು ಪಾಲಿಸಬೇಕಾಗಿರುವ ಅವಶ್ಯಕತೆ ಮತ್ತು ಪಾಲಿಸದಿದ್ದರೆ ಆಗುವ ತೊಂದರೆಗಳನ್ನು ಹೇಳಬೇಕು. ಅದಕ್ಕಾಗಿ ಅದನ್ನು ಪಠ್ಯದಲ್ಲಿ ಕಟ್ಟಿಕೊಡುವ ಒಂದು ಅನುಕ್ರಮಣೀಯ ಶಾಸ್ತ್ರಬೇಕು.

ಯಾವಾಗ ಧರ್ಮ ಎಂಬುದು ಶಾಸ್ತ್ರದ ಕಟ್ಟಿನಲ್ಲಿ ಬಂದು ಬಿತ್ತೋ ಅದಕ್ಕೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಅಧಿಕಾರಗಳನ್ನೆಲ್ಲಾ ಹೊರಿಸಲಾಯಿತು. ಅಂತೆಯೇ ಅವೆಲ್ಲದರ ಗುಣಗಳನ್ನೂ ಆರೋಪಿಸಲಾಯಿತು. ಧರ್ಮದ ಆಂತರಿಕ ಮೌಲ್ಯವನ್ನು ತಾತ್ವಿಕವಾಗಿ ಗ್ರಹಿಸುವ ತತ್ವಜ್ಞಾನಿಯದು ಆಯಾಮವಾದರೆ, ಧರ್ಮಶಾಸ್ತ್ರದ ಪಂಡಿತನದು ಮತ್ತೊಂದು ಆಯಾಮ.

ಒಟ್ಟಾರೆ, ತತ್ವಜ್ಞಾನಿಯು ಕತ್ತಲೆಯ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕಿಗಾಗಿ ಹುಡುಕುವ ಕುರುಡನಂತಿದ್ದಾನೆ. ಧರ್ಮಶಾಸ್ತ್ರದ ಪಂಡಿತನು ಕತ್ತಲೆಯ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕಿಗಾಗಿ ಹುಡುಕುತ್ತಿರುವ ಕುರುಡುನಂತಿದ್ದೂ, ಅದನ್ನು ತಾನು ಕಂಡಿರುವುದಾಗಿ ಆಣೆಯಿಟ್ಟು ಹೇಳುತ್ತಿದ್ದಾನೆ. ನಮ್ಮ ಜನ ಈ ಆಣೆಯನ್ನು ನಂಬಿ ಮ್ಯಾಜಿಕ್ ಬಟ್ಟೆಯನ್ನು ತೊಟ್ಟು ಬಂದಿರುವ ರಾಜನ ಪ್ರಜೆಗಳು ಬಟ್ಟೆಯನ್ನು, ಅದರ ಬಣ್ಣಗಳನ್ನು, ವಿನ್ಯಾಸಗಳನ್ನು ವರ್ಣಿಸುತ್ತಾರೆ.

ಗೊತ್ತಲ್ಲಾ, ಒಬ್ಬ ರಾಜನಿಗೆ ಬಟ್ಟೆಯ ಹುಚ್ಚು. ಆತನಿಗೆ ಅದನ್ನು ಬಿಡಿಸಲು ಒಮ್ಮೆ ಮಂತ್ರಿಗಳು ಯಾರೋ ನೇಕಾರರನ್ನು ಕರೆತಂದರು. ಅವರು ನೇಯುವ ಬಟ್ಟೆ ಬುದ್ಧಿವಂತರಿಗೆ ಮಾತ್ರ ಕಾಣುವಂತದ್ದು. ಯಾರಿಗೂ ತಾವು ದಡ್ಡರೆಂದು ಕರೆಯಿಸಿಕೊಳ್ಳಲು ಇಷ್ಟವಿಲ್ಲ. ಆ ನೇಕಾರರು ಖಾಲಿ ಮಗ್ಗ ನೇಯುತ್ತಿದ್ದರೆ ನೋಡುಗರೆಲ್ಲಾ ಅದರ ವಿನ್ಯಾಸ, ಬಣ್ಣ, ಹೊಳಪನ್ನು ಹೊಗಳುತ್ತಿದ್ದರು. ಈ ಬಟ್ಟೆಯನ್ನು ತೊಟ್ಟ ರಾಜ ಬೆತ್ತಲಾಗೇ ಇದ್ದ.

ಆದರೆ ತಾವು ರಾಜ ಬಟ್ಟೆ ತೊಟ್ಟಿಲ್ಲವೆಂದು ಹೇಳಿದರೆ ತಾನು ದಡ್ಡನೆಂದು ಇತರರಿಗೆ ಗೊತ್ತಾಗುವುದೆಂದು ಎಲ್ಲರೂ ತೊಟ್ಟಿರದ ಬಟ್ಟೆಯನ್ನು ಹೊಗಳುವವರೇ. ಯಾವುದೋ ಒಂದು ಮಗುವು ಮಾತ್ರ ರಾಜನು ಬೆತ್ತಲಾಗಿದ್ದಾನೆಂದು ನೇರವಾಗಿ ಹೇಳಿತು. ನಂತರ ಅದು ಎಲ್ಲರೂ ಒಪ್ಪತೊಡಗಿದರು. ನಂತರ ನಾಚಿಕೆಯಿಂದ ರಾಜ ಮನೆ ಓಡಿದ. ಇದೊಂದು ಅತ್ಯಂತ ಸುಂದರವಾದ ಕಥೆ.

ನಮ್ಮ ಪುರಾಣಿಕರೂ ಕೂಡ ಅದೇನನ್ನೋ ತೋರಿಸುತ್ತಾ ವರ್ಣಿಸುತ್ತಿರುತ್ತಾರೆ. ನಮ್ಮವರೆಲ್ಲಾ ಅದೆಲ್ಲಾ ಅರ್ಥವಾಗಿರುವ ಹಾಗೆ ತಲೆದೂಗುತ್ತಾ ಒಪ್ಪುತ್ತಿರುತ್ತಾರೆ. ಅತ್ಯಂತ ಜ್ಞಾನಿಯೆಂದು ಕಾಣುವ ಆತನ ಮಾತನ್ನು ನಿರಾಕರಿಸಿದರೆ ತಾನು ದಡ್ಡನೆಂದು ನಿರೂಪಿತವಾಗುತ್ತದೆ ಎಂಬ ಭಯ. ನನ್ನ ಗೆಳೆಯ ಇಂಗ್ಲೀಷ್ ಸಿನಿಮಾ ನೋಡುವಾಗ ಯಾವುದಾದರೂ ಸಂಭಾಷಣೆಗೆ ಅಕ್ಕಪಕ್ಕದವರು ನಕ್ಕರೆ ಅವನೂ ನಗುತ್ತಿದ್ದ. ಏಕೆಂದರೆ ಇವನಿಗೆ ಇಂಗ್ಲೀಷ್ ಬಾರದು ಎಂದು ತಿಳಿಯಬಾರದಲ್ಲಾ. ಯಾರಿಗಾದರೂ ತಿಳಿದರೂ ಅಲ್ಲಿರುವವರಲ್ಲಿ ‘ಯಾಕಯ್ಯಾ ನೀನು ನಗಲ್ಲಾ, ಯಾಕಯ್ಯಾ ಇಂಗ್ಲೀಷ್ ಕಲಿತಿಲ್ಲ’ ಎಂದು ಯಾರೂ ಕೇಳುವುದಿಲ್ಲ. ಆದರೂ ಇವನಿಗೇ ಕೀಳರಿಮೆ.

ತನಗೂ ಜ್ಞಾನವಿದೆ ಎಂದು ಪ್ರದರ್ಶಿಸುವ ಹುಸಿ ಪ್ರತಿಷ್ಟೆ. ಈ ಬಗೆಯಲ್ಲಿ ತಮಗೆ ತೋಚಿದಂತೆ ಹೇಳಿ ಇದೇ ಸತ್ಯ ಎಂದು ಸಾಧಿಸುವವರ ಸಾಧನೆ ಎಂದರೆ ಧರ್ಮದ ಅಪವ್ಯಾಖ್ಯಾನಗಳು. ಹಾಗಾದರೆ ತಮಗೆ ಏನು ತೋಚುತ್ತದೆಯೋ, ತಮ್ಮ ಗ್ರಹಿಕೆಗೆ ಎಟುಕುತ್ತದೆಯೋ, ತಮ್ಮ ಅಧ್ಯಯನದ ಅರಿವಿಗೆ ನಿಲುಕುತ್ತದೆಯೋ ಅದನ್ನು ಹೇಳಬಾರದೇ? ಹೇಳಬೇಕು. ಆದರೆ ಅದೇ ಸತ್ಯವೆಂದು ಮತ್ತು ಅಂತಿಮವೆಂದು ನಂಬಬಾರದು ಮತ್ತು ನಂಬಿಸಲು ಹೋಗಬಾರದು. ಸತ್ಯವೆಂದು ಮತ್ತು ಅಂತಿಮವೆಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಯಾವುದನ್ನೂ ನಿರುಕಿಸಲಾಗದು. ಏಕೆಂದರೆ ಯಾವುದು ಸಜೀವವಾಗಿರುವುದೋ ಅದು ಬೆಳೆಯುತ್ತದೆ, ಅರಳುತ್ತದೆ, ವಿಕಾಸವಾಗುತ್ತಿರುತ್ತದೆ. ಬೆಳವಣಿಗೆ ಅಥವಾ ಪ್ರಗತಿ ಜೀವಂತಿಕೆಯ ಲಕ್ಷಣ.

ಧರ್ಮವಾಗಲಿ, ಸಂಸ್ಕೃತಿಯಾಗಲಿ, ಮೌಲ್ಯಗಳಾಗಲಿ; ಅವುಗಳನ್ನು ಜೀವಂತಿಕೆಯಿಂದಿರಿಸಿಕೊಳ್ಳಬೇಕೆಂದರೆ ಅವುಗಳು ವಿಕಾಸವಾಗಲು ಅವಕಾಶಕೊಡಬೇಕು. ಅವುಗಳ ಬೆಳವಣಿಗೆಯನ್ನು ಗೌರವಿಸುವ ಮನಸ್ಥಿತಿಯನ್ನು ನಮ್ಮದಾಗಿಸಿಕೊಳ್ಳಬೇಕು. ಅಂದೆಂದೋ ಕಾಲದ್ದು ಇಂದಿಗೂ ನಮಗೆ ಹಾಗೆಯೇ ಪ್ರಾಯೋಗಿಕವಾಗಿರಬೇಕೆಂದರೆ ಬದಲಾದ ಕಾಲಘಟ್ಟದಲ್ಲಿ ಅದು ಉಸಿರುಗಟ್ಟಿಸುತ್ತದೆ.
ನಾನು ಮೂರರ ಪ್ರಾಯದಲ್ಲಿದ್ದಾಗ ತೊಟ್ಟ ಬಟ್ಟೆಗಳು ಸುಸ್ಥಿತಿಯಲ್ಲಿವೆ ಎಂದಿಟ್ಟುಕೊಳ್ಳಿ. ಅದನ್ನು ನೋಡಿದಾಗ ನಾನೇ ಆಗ ತೊಡುತ್ತಿದ್ದ ಬಟ್ಟೆಗಳಿವು ಎಂಬ ಪ್ರಾಚ್ಯಗೌರವದಿಂದ ಅವನ್ನು ನೋಡುತ್ತೇನೆ.

ಹಾಗೆಯೇ ಅದನ್ನು ಮುಟ್ಟಿದಾಗ, ಸೋಕಿಸಿಕೊಂಡಾಗ ಮಧುರವಾದ ಭಾವನೆಗಳು ಉಂಟಾಗುತ್ತದೆ. ಒಟ್ಟಾರೆ ಅದರ ಮೇಲೆ ಏನೋ ವಿಶೇಷ ಅಭಿಮಾನವಿರುತ್ತದೆ. ಆದರೆ, ಅದನ್ನು ಈಗ ನಾನು ತೊಡಬೇಕೆಂದರೆ ಸಾಧ್ಯವೇ ಆಗದು. ಬಟ್ಟೆಯೆಂಬ ಭೌತಿಕ ವಸ್ತುವಿನಂತೆ ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪಿಸಿಕೊಂಡಿರುತ್ತೇವೆ. ತಾತ್ವಿಕವಾದ ಚಿಂತನೆಗಳು ಮೂಡಿರುತ್ತವೆ. ಆದರೆ, ಬದಲಾದ ಕಾಲಘಟ್ಟದ ವ್ಯವಸ್ಥೆಗೆ ತಕ್ಕಂತೆ ತಾತ್ವಿಕತೆಯೂ ಕೂಡಾ ರೂಪಾಂತರ ಹೊಂದದಿದ್ದರೆ ಹೇರಿಕೆಯಾಗಿ ಪರಿಣಮಿಸುತ್ತದೆ.

ಇದರ ಕಾಳಜಿ ಧರ್ಮವನ್ನು ಪ್ರತಿಪಾದನೆ ಮಾಡುವವರಿಗೆ ಖಂಡಿತ ಇರಬೇಕಾಗುತ್ತದೆ. ಇದನ್ನು ಪ್ರಾಯೋಗಿಕ ತತ್ವವಾಗಿ ಮನಗಂಡ ಡಿ ವಿ ಜಿ ಹೇಳುವುದು ಹೀಗೆ.

ಹೊಸ ಚಿಗುರು ಹಳೇಬೇರು ಕೂಡಿರಲು ಮರಸೊಬಗು, ಹೊಸ ಯುಕ್ತಿ ಹಳೇ ತತ್ವದೊಡಗೂಡೆ ಧರ್ಮ,
ಋಷಿವಾಕ್ಯದೊಡನೆ ವಿಜ್ಞಾನ ಕಲೆಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ.

ಹಳತಿನ ಬೇರಿನ ಮೇಲೆ ವಿಕಾಸವಾಗುವ ಹೊಸ ಚಿಗುರನ್ನು ಕಾಣುವ ಕ್ರಮವನ್ನೇ ಧರ್ಮ ಎಂದು ಹೇಳುವರು.

ಆಂತರಿಕವಾಗಿ ನೋಡಿದಾಗ ಧರ್ಮವೆಂದರೆ ಸ್ವಭಾವವೇನೋ ಸರಿ. ಆದರೆ ಸಾಮಾಜಿಕ ವಾಸ್ತವದಲ್ಲಿ ಅದನ್ನು ಕ್ರಮವಾಗಿ ನೋಡುವ ಅಗತ್ಯವಿದೆ. ಆದರೆ ಕ್ರಮವೆಂದು ನಿರ್ಧರಿಸುವವರು ಯಾರು? ಸಮಾಜವೆಂಬುದು ವೈವಿದ್ಯಮಯವಾದ ಜನರ ಸಮೂಹವಾಗಿದೆ.

ವಿವಿಧ ಜನರಲ್ಲಿ ಯಾವ ಜನ ಸಮಾಜಕ್ಕೆ ಧರ್ಮವನ್ನು ಅಂದರೆ ಪರಮೋಚ್ಛ ಕ್ರಮವನ್ನು ವಿಧಿಸುವುದು? ವಸ್ತುವೊಂದರ ಸ್ವಭಾವವು ತನ್ನ ನಡವಳಿಕೆ ಮತ್ತು ವರ್ತನೆಗಳಲ್ಲಿ ಪ್ರಕಟವಾಗುವಂತೆ, ಜನರು ಎಂದು ಕರೆಯಿಸಿಕೊಳ್ಳುವ ಜೀವಿಗಳಿಗೂ ಅವರದೇ ಧರ್ಮವಿದೆ. ಅದಕ್ಕೆ ತಕ್ಕಂತೆ ಕ್ರಮವೂ ಕೂಡಾ ನೇಮವಾಗಬೇಕು.

ಅಂದರೆ ಧರ್ಮಕ್ಕೆ ಶಾಸ್ತ್ರವೊಂದು ಬೇಕು ಮತ್ತು ಅದನ್ನು ವಿಧಿಸಬೇಕು. ಅದನ್ನು ವಿಧಿಸುವವರು ಯಾರು? ಇಲ್ಲಿ ಧರ್ಮವನ್ನು ಶಾಸ್ತ್ರದ ರೂಪದಲ್ಲಿ ಪಠ್ಯ ಮಾಡುವವರೊಬ್ಬರು ಬೇಕಾಗಿದ್ದಾರೆ. ಆ ಅಧಿಕಾರವನ್ನು ಪಡೆಯುವವರು ಧರ್ಮದ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಧರ್ಮದ ಉಲ್ಲಂಘನೆಯಾಗಬಾರದು; ಇವೆಲ್ಲಾ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ಧರ್ಮವನ್ನು ಶಾಸ್ತ್ರವಾಗಿ ಪಠ್ಯಕ್ಕೆ ಒಳಪಡಿಸುವವರ ಗಟ್ಟಿಗತನದ ಮೇಲೆ ಸಮಾಜದಲ್ಲಿ ಅವರ ವಿಕ್ರಮ ಕಹಳೆ ಮೊಳಗುತ್ತದೆ. ಅಲ್ಲಿಂದ ನಿರ್ಬಲರ ಮೇಲೆ ಸಬಲರ ಧರ್ಮಶಾಸ್ತ್ರದ ಕಟ್ಟಳೆಗಳು ಶೋಷಣೆ ಮಾಡಲಾರಂಭಿಸುತ್ತದೆ.

ಧರ್ಮಶಾಸ್ತ್ರಗಳನ್ನು ವಿಭಾಗಿಸುವುದಾದರೆ ಪುರಾಣ ಧರ್ಮಶಾಸ್ತ್ರ, ನಾಗರಿಕ ಧರ್ಮಶಾಸ್ತ್ರ ಎಂದು ಸ್ಪಷ್ಟವಾಗಿ ಗ್ರೀಕರು ಗುರುತಿಸಿದರೆ ಮತ್ತು ನಿಸರ್ಗ ಧರ್ಮಶಾಸ್ತ್ರವೆಂಬ ಒಂದು ಅಧ್ಯಯನ ಶಾಖೆಯನ್ನು ಪ್ಲೇಟೋ ಗುರುತಿಸಿದನು. ಪುರಾಣ ಧರ್ಮಶಾಸ್ತ್ರ ಎಂದರೆ ದೇವಾನುದೇವತೆಗಳ ಕಥೆಗಳು ಮತ್ತು ಕಾವ್ಯಗಳು.

ನಾಗರಿಕ ಧರ್ಮಶಾಸ್ತ್ರವೆಂದರೆ ಗ್ರೀಕರ ಪ್ರಕಾರ ಪ್ರಭುತ್ವದ ಸಮೃದ್ಧಿ – ಅರಕೆಗಳನ್ನು, ಕಾರ್ಯಕ್ರಮಗಳನ್ನು, ಅವಕ್ಕೆ ಸಂಬಂಧಿಸಿರುವಂತಹ ಆಚರಣೆಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ನಿಸರ್ಗ ಧರ್ಮಶಾಸ್ತ್ರದಲ್ಲಿ ದೈವ ಮತ್ತು ದೈವಿಕತೆಯ ಬಗೆಗಿನ ತತ್ವಗಳಿದ್ದು ಅದು ನಿಸರ್ಗ ಸಿದ್ಧಾಂತದ ಅಭಿನ್ನ ಅಂಗವಾಗಿದೆ.ಅದು ಮುಂದಿಡುವ ಮೂರು ಸಿದ್ಧಾಂತಗಳೆಂದರೆ,

  1. ದೇವರಿದ್ದಾನೆ ಮತ್ತು ನಾವು ಯಾವುದನ್ನು ನಿಸರ್ಗ ಅಥವಾ ವಿಶ್ವವೆನ್ನುತ್ತೇವೆಯೋ ಅದಕ್ಕೆ ಅವನೇ ಕರ್ತೃವಾಗಿದ್ದಾನೆ.
  2. ದೇವರು ನಿಸರ್ಗ ಸಮಸ್ತವನ್ನೂ ನಿಯಂತ್ರಿಸುತ್ತಾನೆ.
  3. ಮಾನವ ಕೋಟಿಯ ಮೇಲೆ ದೇವರ ಪ್ರಭುತ್ವವಿದೆ. ಆತನ ನ್ಯಾಯ ನೀತಿಯೇ ಉತ್ತಮೋತ್ತಮವಾದದ್ದು.

ಇದಕ್ಕೆಲ್ಲಾ ಹೊರತಾಗಿ ಅಂತಃಪ್ರೇರಣೆಯನ್ನು ಅನುಸರಿಸುವ ಸ್ವಧರ್ಮಶಾಸ್ತ್ರವೂ ಇದೆಯೆಂಬುದನ್ನು ಧರ್ಮಗಳು ಮಾಡುವ ಶೋಷಣೆಯನ್ನು ವಿರೋಧಿಸುವ ಅಂಬೇಡ್ಕರ್ ಕೂಡ ತಾತ್ವಿಕವಾಗಿ ಒಪ್ಪುತ್ತಾರೆ.

ಆದರೆ ಧರ್ಮವೆಂಬುದನ್ನು ನೈತಿಕತೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ನಿರ್ಧಾರ, ವ್ಯಕ್ತಿಗತ ನಂಬಿಕೆ, ಆಧ್ಯಾತ್ಮಿಕತೆ; ಹೀಗೆ ಎಲ್ಲವನ್ನೂ ಕಲಸು ಮೇಲೋಗರ ಮಾಡಿ ಯಾವುದಕ್ಕೂ ಸ್ಪಷ್ಟತೆಯಿಲ್ಲದೇ ಹೋಗಿರುವ ಸಾರ್ಥಕತೆ ನಮ್ಮ ಹುಸಿಪ್ರತಿಷ್ಟೆಯ ವಿವರಣೆಕಾರರಿಗಿದೆ.

ಬ ಛತ್ರಿಯಡಿಯಲ್ಲಿ ತನ್ನೆಲ್ಲಾ ಪೀಳಿಗೆಗಳು ಹಿತವಾಗಿ ಬದುಕುವ ಅತ್ಯಾಸೆಯಿಂದ, ಶ್ರೇಷ್ಟತೆಯ ಗೀಳಿನಿಂದ ಏನೆಲ್ಲ ಆಗಬಹುದೆಂದು ಮನುಸ್ಮೃತಿ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.

ಮನುಸ್ಮೃತಿಯಲ್ಲಿ ಹೇಳುವಂತೆ (8.374) ಉನ್ನತ ವರ್ಣದ ರಕ್ಷಿತ ಅಥವಾ ಅರಕ್ಷಿತ ಸ್ತ್ರೀಯೊಡನೆ ಸಂಭೋಗ ಮಾಡಿದ ಶೂದ್ರನಿಗೆ ಆತನ ಜನನಾಂಗವನ್ನು ಛೇದಿಸಬೇಕು ಅಥವಾ ಮರಣದಂಡನೆ ವಿಧಿಸಬೇಕು.

ಆದರೆ ಬ್ರಾಹ್ಮಣರು ತಮ್ಮನ್ನು ಭೂದೇವರೆಂದು, ಪೃಥ್ವಿಪತಿಗಳೆಂದು ಇದೇ ಮನುವಿನಿಂದ ಕರೆಸಿಕೊಂಡವರು ತಮಗೆ ಇತರ ವರ್ಗದ ಹೆಂಗಸರೊಡನೆ ಕೂಡುವ ಲೈಂಗಿಕ ಹಕ್ಕು ಇದೆಯೆಂದು ವಾದಿಸುತ್ತಿದ್ದರು. ಇದಕ್ಕೆ ರಾಣಿಯೂ ಕೂಡ ಹೊರತಾಗಿರಲಿಲ್ಲ. ಕ್ರಿ.ಶ. 1502 ರಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದ ಲುಡೊವಿಕೋ ಡಿ ವರ್ತೆಮಾ ಕಲ್ಲಿಕೋಟೆ ಬ್ರಾಹ್ಮಣರ ಬಗ್ಗೆ ಈ ಸಂಗತಿಯನ್ನು ದಾಖಲು ಮಾಡಿದ್ದಾನೆ.

ಬ್ರಾಹ್ಮಣರು, ಅರ್ಚಕರು ಹಾಗೆಯೇ ಧರ್ಮದ ಪ್ರಮುಖ ವ್ಯಕ್ತಿಗಳ ಪೈಕಿ ಅತ್ಯಮೂಲ್ಯ ಹಾಗೂ ಅತ್ಯಂತ ಗೌರವಾನ್ವಿತರನ್ನು ಆರಿಸಿ ಆಕೆಯ ಕನ್ಯತ್ವ ಕಳೆಯಲೆಂದು ಆಕೆಯೊಡನೆ ಮೊದಲರಾತ್ರಿ ಮಲಗುವಂತೆ ಮಾಡುತ್ತಿದ್ದರು.

ಹ್ಯಾಮಿಲ್ಟನ್ ದಾಖಲು ಮಾಡಿರುವ ವಿಚಾರವನ್ನು ಗಮನಿಸಿ. ಸಾಮೋರಿನ್ ಮದುವೆಯಾದಾಗ ನಂಬೂರಿ (ನಂಬೂದರಿ ಬ್ರಾಹ್ಮಣ) ಅಥವಾ ಮುಖ್ಯ ಅರ್ಚಕರು ಭೋಗಿಸುವವರೆಗೆ ವರನು ತನ್ನ ವಧುವನ್ನು ಸೇರುವಂತಿರಲಿಲ್ಲ. ಏಕೆಂದರೆ ಆಕೆಯ ಮೊದಲ ಫಲಗಳು ಅವಳು ಪೂಜಿಸುವ ದೇವರಿಗೆ ಸಲ್ಲಬೇಕಿತ್ತು.

1869ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಕರೊಸವದಾಸ್ ಮೂಲ್ಜಿ ಎಂಬುವವರ ವಿರುದ್ಧ ಅರ್ಚಕರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಏಕೆಂದರೆ ಮುಂಬೈ ಪ್ರಾಂತ್ಯದಲ್ಲಿ ವೈಷ್ಣವ ಕುಲದ ಅರ್ಚಕರ ಕುಲದ ಎಲ್ಲ ಹೆಂಗಸರ ಕನ್ಯತ್ವ ಕಳೆಯುವ ಹಕ್ಕು ಕೇಳಲಾಗಿತ್ತು. ಹೆಚ್ಚೂ ಕಡಿಮೆ 1869ರವರೆಗೂ ಮೊದಲರಾತ್ರಿಯ ಹಕ್ಕು ನಿರಂತರವಾಗಿ ರೂಢಿಯಲ್ಲಿತ್ತು. ಅದಾದ ನಂತರ ಬ್ರಾಹ್ಮಣರು ಯಾವುದೇ ಜಾತಿಯ ಹೆಣ್ಣನ್ನು ಲೈಂಗಿಕ ಕ್ರಿಯೆಗಾಗಿ ಬಳಸಿಕೊಳ್ಳುವ ಹಕ್ಕು ಕ್ಷೀಣಿಸುತ್ತಾ ಬಂದಿತು.

ದಾನ ದಕ್ಷಿಣೆಗಳನ್ನು ತಮ್ಮ ಅಧಿಕಾರದಂತೆ ನಿಗದಿತವಾಗಿ ಪಡೆಯುತ್ತಿದ್ದ ಬ್ರಾಹ್ಮಣರು ಶೂದ್ರರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಿದ್ದರು. ಆದರೆ ಅವರ ಪ್ರಕಾರ ವೈಶ್ಯರು ಕೇವಲ ತಮ್ಮ ದೈವೀದತ್ತವಾದ ಕರ್ತವ್ಯವನ್ನು ಮಾಡುತ್ತಿದ್ದಾರೆ. ಕ್ರಿಸ್ತಪೂರ್ವ 350ರ ಅರ್ಥಶಾಸ್ತ್ರದಲ್ಲಿಯೇ ಹೇಳಿದೆ, ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು ವೈಶ್ಯರ ಹಕ್ಕೆಂದು.

  • ಕ್ರಿಸ್ತಶಕ 150ಯ ಮನುಸ್ಮೃತಿಯು ಇನ್ನೂ ಮುಂದುವರಿದು ಹೇಳುತ್ತದೆ, ಬ್ರಾಹ್ಮಣರಿಗೆ ತಿಂಗಳಿಗೆ 2%, ಕ್ಷತ್ರಿಯರಿಗೆ 3%, ವೈಶ್ಯರಿಗೆ 4% ಮತ್ತು ಶೂದ್ರರಿಗೆ5% ಬಡ್ಡಿಯನ್ನು ವಿಧಿಸಬೇಕು ಎಂದು. ವಾರ್ಷಿಕವಾಗಿ ಲೆಕ್ಕಿಸಿದರೆ, ಬ್ರಾಹ್ಮಣರಿಗೆ ಶೇಕಡಾ 24 ಆದರೆ, ಶೂದ್ರ ಅಥವಾ ದಲಿತರಿಗೆ ಶೇಕಡಾ 60 ಬಡ್ಡಿಯಾಗುತ್ತದೆ.
  • ಮನುಸ್ಮೃತಿ (8.20) ಹುಟ್ಟು ಮಾತ್ರದಿಂದ ಬ್ರಾಹ್ಮಣನಾದವನೂ (ಅಂದರೆ ವಿದ್ಯೆ ಇಲ್ಲದಿರಲಿ, ಯಾವುದೇ ವೇದೋಕ್ತ ಕ್ರಿಯೆ ಮಾಡಿರದವನು) ರಾಜನಿಗೆ ಧರ್ಮ ಪ್ರವಚನ ಹೇಳಬಹುದು.
    (8.272) ಶೂದ್ರನು ದರ್ಪದಿಂದ ಬ್ರಾಹ್ಮಣನಿಗೆ ಧರ್ಮೋಪದೇಶ ಮಾಡಲು ಹೊರಟರೆ ರಾಜನು ಅವನ ಮುಖ, ಕಿವಿಗಳಿಗೆ ಕಾದ ಎಣ್ಣೆ ಸುರಿಯಬೇಕು.
  • (3.156) ವೇದವನ್ನು ಕದ್ದು ಕೇಳಿದ ಅಥವಾ ಉಚ್ಚರಿಸಿದ ಶೂದ್ರನ ನಾಲಿಗೆಯನ್ನು ಸೀಳಬೇಕು. ಕಿವಿಗೆ ಕಾದ ಸೀಸೆ ಸುರಿಯಬೇಕು ಎಂದು ರಾಜನಿಗೆ ಕಾತ್ಯಾಯನು ವಿಧಿಸುತ್ತಾನೆ.

ಇಂಥಾ ವ್ಯವಸ್ಥೆಯನ್ನು ಬ್ರಾಹ್ಮಣರು ಕಟ್ಟಿಕೊಳ್ಳುವಂತಹ ಶಾಸ್ತ್ರವನ್ನು ರಚಿಸುವ ಪ್ರಮೇಯಕ್ಕೂ ಕಾರಣಗಳು ಇಲ್ಲದಿಲ್ಲ. ತನ್ನ ಕೆಲಸದಿಂದ ವರ್ಣ ಅಥವಾ ಜಾತಿಯನ್ನು ಗುರುತಿಸುವ ರೂಢಿಯಿದ್ದ ಆಗಿನ ಸಮಾಜದಲ್ಲಿ, ಅದರಲ್ಲೂ ವೇದಗಳನ್ನು ಧಿಕ್ಕರಿಸಿ ಅಥವಾ ಪರ್ಯಾಯವಾಗಿ ಚಿಂತನೆಗಳನ್ನು ಮಾಡಿದ್ದ ಋಷಿಗಳಿಂದ ಉಪನಿಷತ್ತುಗಳು ರಚಿತವಾದವು. ಉಪನಿಷತ್ತುಗಳ ಕಾಲದಲ್ಲಿ ವರ್ಣವ್ಯವಸ್ಥೆಯ ವಿರುದ್ಧವಾದಂತಹ ಕ್ರಾಂತಿಕಾರಕ ನಡೆಗಳು ಉಂಟಾದವು.

ಕ್ರಾಂತಿಕಾರಕ ಉಪನಿಷತ್ತುಗಳು

ಛಾಂದೋಗ್ಯೋಪನಿಷತ್ತಿನ ಸತ್ಯಕಾಮ ಜಾಬಾಲಿಯ ಪ್ರಕರಣವನ್ನು ಗಮನಿಸಿದರೆ, ಸತ್ಯಕಾಮನೆಂಬ ಎದೆಯ ಮೇಲೆ ಯಜ್ಞೋಪವೀತವಿಲ್ಲದ ಬಾಲಕನು, ವಿದ್ಯಾಭ್ಯಾಸದ ಅಧಿಕಾರವನ್ನು ಹೊಂದಿರುವ ಬ್ರಾಹ್ಮಣ ಗುರುಕುಲದ ಮುಖ್ಯಸ್ಥನಾದ ಗೌತಮನ ಬಳಿಗೆ ಬರುತ್ತಾನೆ. ತನ್ನ ವಿದ್ಯಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾನೆ. ಆಗ ಗೌತಮನು ಆತನ ಗೋತ್ರವನ್ನೂ, ತಂದೆಯ ಹೆಸರನ್ನೂ ಕೇಳುತ್ತಾನೆ.

ಇದರ ಅರಿವಿರದಿದ್ದ ಸತ್ಯಕಾಮ ತನ್ನ ತಾಯಿ ಜಬಲಾಳ ಬಳಿಗೆ ಬಂದು ಇದರ ಕುರಿತು ವಿಚಾರಿಸಿದಾಗ, “ಮಗನೇ ನಾನು ದಾಸಿಯಾಗಿ ಹಲವು ಯಜಮಾನರಿಗೆ ಸೇವೆ ಮಾಡುತ್ತಿದ್ದೆ, ಹೀಗೆ ಯಾರಿಗೋ ಹುಟ್ಟಿದ ಮಗ ನೀನು.ನನಗೂ ಕೂಡ ನಿರ್ಧಿಷ್ಟವಾಗಿ ನಿನ್ನ ತಂದೆ ಯಾರೆಂದು ತಿಳಿಯದು” ಎಂದು ಹೇಳಿ “ನಾನು ನಿನ್ನ ತಾಯಿ. ಅದು ಸತ್ಯ. ನೀನು ಸತ್ಯಕಾಮ ಜಬಾಲ” ಎಂದು ಹೇಳಿ ಕಳುಹಿಸುತ್ತಾಳೆ. ಮಗನು ತಾಯಿಯ ಮಾತಿನಂತೆಯೇ ಬಂದು ಗುರು ಗೌತಮನ ಮುಂದೆ ಹೇಳಿದಾಗ ಗೌತಮನಿಗೆ ಅತ್ಯಾನಂದವಾಗುತ್ತದೆ.

ಅವನು ಹೇಳುವಂತೆ “ಯಾರು ಸತ್ಯವನ್ನು ಹೇಳುತ್ತಾರೋ ಅವರೇ ಬ್ರಾಹ್ಮಣ” ಎಂದು ಬಾಲಕ ಮತ್ತು ಅವನ ತಾಯಿಯ ಸತ್ಯವಂತಿಕೆಯ ಆಧಾರದ ಮೇಲೆ ಬ್ರಾಹ್ಮಣನೆಂದು ಗುರುತಿಸುತ್ತಾನೆ. ಮಹಾಭಾರತದ ವನಪರ್ವದಲ್ಲಿಯೂ ಕೂಡ ಸ್ಪಷ್ಟವಾಗಿ ಬ್ರಾಹ್ಮಣಿಕೆಯ ಆಧಾರವನ್ನು ಗುರುತಿಸುತ್ತಾರೆ.

ಯಾರೊಬ್ಬನೂ ತನ್ನ ಜನ್ಮದಿಂದಾಗಲಿ, ವೇದಾಧ್ಯಯದಿಂದಾಗಲಿ, ಉಪನಯನಾದಿ ಸಂಸ್ಕಾರದಿಂದಾಗಲಿ ಬ್ರಾಹ್ಮಣನಲ್ಲ. ಅವನ ಸದಾಚಾರದಿಂದ ಮಾತ್ರವೇ ಬ್ರಾಹ್ಮಣನಾಗುತ್ತಾನೆ ಎಂದು.

ಹೀಗೆ ತಮ್ಮ ಕಾಯಕ ಮತ್ತು ಆಚಾರ ವಿಚಾರಗಳಿಂದ ಎಲ್ಲರೂ ಬ್ರಾಹ್ಮಣರಾಗುತ್ತಾ ಹೋದರೆ ಹೇಗೆ? ಈ ಭಯ ಬ್ರಾಹ್ಮಣವಾದಿಗಳಿಗಿತ್ತು. ವೈದಿಕಾಚರಣೆಗಳಿಗೆ ವಿರುದ್ಧವಾಗಿಯೇ ಉಪನಿಷತ್ತುಗಳು ನಿಲುವನ್ನು ತಳೆದಿದ್ದವು. ವೇದವನ್ನು ಅನುಸರಿಸುವವರಿಗೆ ಮಾತ್ರವೇ ಯಜ್ಞ ಯಾಗಾದಿಗಳು ಇದ್ದಿದ್ದು. ಉಪನಿಷತ್ತಿನ ಋಷಿಗಳಿಗಲ್ಲ. ಈಶವಾಸ್ಯೋಪನಿಷತ್ತಿನ ದ್ರಷ್ಟಾರನಾದ ವಾಮದೇವನೆಂಬ ಋಷಿ ತನ್ನ ಜೀವಿತದಲ್ಲಿ ಯಾವ ಯಜ್ಞ ಯಾಗಾದಿಗಳಿಂದ ಸಮಯ ವ್ಯಯಿಸದೇ ಮರಗಳನ್ನು ನೆಡುತ್ತಲೇ ಬಂದಿದ್ದವನು.

ಬೃಹದಾರಣ್ಯಕೋಪನಿಷತ್ತಿನಲ್ಲಿ ಶ್ವೇತಕೇತು ದನಗಳನ್ನು ಮೇಯಿಸುತ್ತಿದ್ದ. ಬ್ರಾಹ್ಮಣರಲ್ಲಿ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದ ಮತ್ತು ಮಹಿಳೆಯರನ್ನು ಕಟ್ಟುಪಾಡುಗಳಿಂದ ಬಂಧಿಸಿರುವಾಗ ಗಾರ್ಗಿ ಮತ್ತು ಮೈತ್ರೇಯಿಗಳೆಂಬ ಹೆಂಗಸರು ಬ್ರಹ್ಮ ಜಿಜ್ಞಾಸುಗಳಾಗಿ ವಿಶ್ಲೇಷಣೆಗಳನ್ನು ಮಾಡುತ್ತಿದ್ದರು. ಕಠೋಪನಿಷತ್ತಿನಲ್ಲಿ ವಾಜಶ್ರವನೆಂಬ ಮುನಿ ವಿಶ್ವಜಿತ್ ಯಜ್ಞವನ್ನು ಮಾಡಿ ಅತ್ಯುನ್ನತವಾದ ಪದವಿಯನ್ನು ಪಡೆಯಲು ಸಿದ್ಧತೆಗಳನ್ನು ಮಾಡಿಕೊಳ್ಳುವಾಗ ಅವನ ಮಗನಾದ ನಚಿಕೇತ ಅದನ್ನು ಗಮನಿಸುತ್ತಾನೆ.

ಎಲ್ಲವನ್ನೂ ಯಜ್ಞಕಾರಣಕ್ಕಾಗಿ ದಾನ ಮಾಡಬೇಕೆಂದಿರುವಾಗ ಕೇವಲ ನಾಮಕಾವಸ್ಥೆಗಾಗಿ ಗೊಡ್ಡುದನಗಳನ್ನು, ಕೆಲಸಕ್ಕೆ ಬಾರದ ಪಶುಗಳನ್ನು ದಾನ ಮಾಡಲು ತತ್ಪರನಾಗಿದ್ದ ತನ್ನ ತಂದೆಗೆ “ಅಪ್ಪಾ ನನ್ನನ್ನು ಯಾರಿಗೆ ದಾನ ಕೊಡುತ್ತೀ?” ಎಂಬ ಕ್ರಾಂತಿಕಾರಕ ಪ್ರಶ್ನೆಯನ್ನು ಕೇಳುತ್ತಾನೆ. ಯಾಜ್ಞಿಕನಾಗಿದ್ದ ವಾಜಶ್ರವನ ಶ್ರದ್ಧೆಯನ್ನು ಸಂಶಯಿಸುವ ಮತ್ತು ನಿರಾಕರಿಸುವ ಈ ಪ್ರಶ್ನೆಯು ಪುನರಾವರ್ತನವಾದಾಗ “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ಆಗ್ರಹದಿಂದ ಹೇಳುವನು.

ಇದರಿಂದ ನಚಿಕೇತನಾದರೂ ಬಹುಜನರಲ್ಲಿ ಪ್ರಥಮನಾಗಿಯೂ, ಬಹುಜನರಲ್ಲಿ ಮಧ್ಯಮನಾಗಿಯೂ ಇರುವಂತಹ ನನ್ನಿಂದ ಯಾವ ಕೆಲಸ ಯಮನಿಗೆ ಆಗಬಹುದು ಎಂಬ ಆತ್ಮಗೌರವದಿಂದ ಮೃತ್ಯುವಿನ ಬಳಿಗೆ ನಡೆಯುತ್ತಾನೆ. ಮುಂದೆ ಮೃತ್ಯು ಮತ್ತು ಮರಣಾನಂತರ ಜೀವನದ ಬಗ್ಗೆ ಜಿಜ್ಞಾಸೆಗಳನ್ನು ಮಾಡುತ್ತಾನೆ.

ಛಾಂದೋಗ್ಯ ಉಪನಿಷತ್ತಿನಲ್ಲಿ ನಾರದನು ಸನತ್ಕುಮಾರನ ಬಳಿಗೆ ಬಂದು ಬೋಧನೆಗಾಗಿ ಕೋರಿಕೊಳ್ಳುತ್ತಾನೆ. ಸನತ್ಕುಮಾರ “ನಿನಗೆ ಏನು ಗೊತ್ತೋ ಅದನ್ನು ತಿಳಿಸು. ಅದನ್ನು ನೋಡಿಕೊಂಡು ನಾನು ಬೋಧಿಸುತ್ತೇನೆ” ಎಂದು ಹೇಳಿದಾಗ, ನಾರದನು ತನಗೆ ನಾಲ್ಕೂ ವೇದಗಳು, ಇತಿಹಾಸ, ಪುರಾಣ, ಪಿತೃಕರ್ಮಗಳು, ದೇವಶಾಸ್ತ್ರ, ನೀತಿಶಾಸ್ತ್ರ ಇತ್ಯಾದಿಗಳೆಲ್ಲಾ ಗೊತ್ತೆಂದು ಹೇಳಿದಾಗ, ಸನತ್ಕುಮಾರ, “ಈಗ ನೀನು ಏನು ತಿಳಿದುಕೊಂಡಿರುವೆಯೋ ಅವೆಲ್ಲವೂ ಕೇವಲ ಹೆಸರುಗಳಷ್ಟೇ. ಋಗ್ವೇದ ಎಂಬುದು ಒಂದು ಹೆಸರು. ಅಂತೆಯೇ ಇತರ ವೇದಗಳು ಕೇವಲ ಹೆಸರುಗಳು” ಎಂದು ಹೇಳುತ್ತಾ ಅವುಗಳ ಔಚಿತ್ಯ ಮತ್ತು ಔನತ್ಯವನ್ನು ಕಡೆಗಣಿಸುತ್ತಾನೆ.

ಹೀಗೆ ಉಪನಿಷತ್ತುಗಳು ವೇದಗಳಿಗೆ, ಯಜ್ಞಗಳಿಗೆ ಸೆಡ್ಡು ಹೊಡೆದು ಸತ್ಯಾನ್ವೇಷಕರಾಗಿದ್ದವು.
ಈ ಬಗೆಯಲ್ಲಿ ಉಪನಿಷತ್ತು ಋಷಿಗಳು ಮತ್ತು ಗುರುಕುಲದ ಗುರುಗಳು ಗುಣಗ್ರಾಹಿಗಳಾಗಿದ್ದು ಯಾವುದೇ ಜನ್ಮದಿಂದ ಬಂದವನಾಗಿದ್ದರೂ ಅವನಿಗೆ ಅಕ್ಷರವನ್ನೂ, ವಿದ್ಯೆಯನ್ನೂ ಕೇವಲ ಆತನ ಆಸಕ್ತಿ ಮತ್ತು ಅರ್ಹತೆಗಳಿಗೆ ಅನುಸಾರವಾಗಿ ನೀಡುವಂತವರಾಗಿದ್ದರು.

ಗುರುಕುಲದ ವರ್ಣಾಧಿಕಾರ

ಪುರಾಣಗಳಲ್ಲಿ ವ್ಯಕ್ತವಾಗುವ ಸನಾತನ ಸಂಪ್ರದಾಯದಂತೆ ಮನು (ಮನುಸ್ಮೃತಿಯ ಮನುವಲ್ಲ) ಮತ್ತು ಸಪ್ತರ್ಷಿಗಳೆಂಬ ಸ್ವತಂತ್ರ ಅಧಿಕಾರದ ವರ್ಗದಿಂದ ವರ್ಣ ನಿಗದಿಯಾಗುತ್ತಿತ್ತು. ಆ ವರ್ಣವು ನಿರ್ದಿಷ್ಟ ಅವಧಿಗಾಗಿ ಇದ್ದು, ನಂತರ ಅದನ್ನು ಬದಲಾಯಿಸಲಾಗುತ್ತಿತ್ತು. ಒಬ್ಬ ವ್ಯಕ್ತಿಯ ವರ್ಣವನ್ನು ನಾಲ್ಕು ವರ್ಷ ಅಂದರೆ ಒಂದು ಯುಗ ಕಾಲಕ್ಕಾಗಿ ನಿಗದಿ ಮಾಡುತ್ತಿದ್ದರು. ಆ ನಾಲ್ಕು ವರ್ಷಗಳ ಕೊನೆಯಲ್ಲಿ ಮನ್ವಂತರ ಉಂಟಾಗುತ್ತಿತ್ತು. ಆ ಮೂಲಕ ಪ್ರತಿ ನಾಲ್ಕನೆಯ ವರ್ಷ ಪಟ್ಟಿ ಬದಲಾಯಿಸುತ್ತಿತ್ತು.

ಈ ಸುಧಾರಣೆಯಲ್ಲಿ ಕೆಲವರು ಹಳೆಯ ವರ್ಣವನ್ನು ಬದಲಿಸಿಕೊಳ್ಳುತ್ತಿದ್ದರು. ಕೆಲವರು ಉಳಿಸಿಕೊಳ್ಳುತ್ತಿದ್ದರು. ಕೆಲವರು ಕಳೆದುಕೊಳ್ಳುತ್ತಿದ್ದರು ಮತ್ತೂ ಕೆಲವರು ಗಳಿಸಿಕೊಳ್ಳುತ್ತಿದ್ದರು. ಗುರುಕುಲದಲ್ಲಿ ಶಿಕ್ಷಣದ ಅವಧಿ ಹನ್ನೆರಡುವರ್ಷ. ಶಿಕ್ಷಣದ ಅವಧಿ ಮುಗಿದ ಮೇಲೆ ಗುರುಕುಲದಲ್ಲೇ ಆಚಾರ್ಯರಿಂದ ಉಪನಯನ ಸಮಾರಂಭವಿರುತ್ತಿತ್ತು.

ಈ ಉಪನಯನ – ಅತ್ಯಂತ ಮುಖ್ಯ ಸಮಾರಂಭವಾಗಿದ್ದು ಇದರಲ್ಲಿ ಆಚಾರ್ಯರು ವಿದ್ಯಾರ್ಥಿಯ ವರ್ಣವನ್ನು ನಿರ್ಧರಿಸಿ, ಆ ವರ್ಣದ ಕರ್ತವ್ಯಗಳನ್ನು ನಿರ್ವಹಿಸಲು ಹೊರ ಜಗತ್ತಿಗೆ ಕಳುಹಿಸುವಂತಹ ಸಮಾರಂಭವಾಗಿತ್ತು. ವರ್ಣವೆಂಬುದು ಎಂದಿಗೂ ಅನುವಂಶೀಯವಾಗಿರಲಿಲ್ಲ.

ಈ ವ್ಯವಸ್ಥೆಯಿಂದ ಬ್ರಾಹ್ಮಣ ಧರ್ಮವು ತೃಪ್ತವಾಗಲಿಲ್ಲ. ಏಕೆಂದರೆ ಆಗ ಪ್ರಚಲಿತವಿದ್ದ ವ್ಯವಸ್ಥೆಯಲ್ಲಿ ಬ್ರಾಹ್ಮಣನೊಬ್ಬನ ಮಗನು ಶೂದ್ರನಾಗಲು ಮಾತ್ರ ಯೋಗ್ಯವೆಂದು ನಿರ್ಧರಿಸಿ ಗುರುಗಳು ಕಳುಹಿಸುವ ಸಾಧ್ಯತೆಗಳಿದ್ದವು. ತನ್ನ ಮಗನು ಅರ್ಹನಾಗಲಿ, ಅರ್ಹನಾಗಿರದಿರಲಿ ಬ್ರಾಹ್ಮಣನಾಗಿಯೇ ಉಳಿಯಬೇಕೆಂಬ ಪಕ್ಷಪಾತ, ವಾಂಛೆ ಮತ್ತು ಅಪರಿಮಿತ ದುರಾಸೆಯಿಂದ ಮುಂದೆ ಅತ್ಯಂತ ನಿರ್ಲಜ್ಜರೀತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರು. ಬ್ರಾಹ್ಮಣಾಧಿಕ್ಯದ ಗೀಳಿನ ಮನುವು ಮುಂದೆ ಗುರುಕುಲದಲ್ಲಿ ಶಿಷ್ಯವೃತ್ತಿಯನ್ನು ಮಾಡಿದ ನಂತರ ಉಪನಯನದಂತಹ ಸಂಸ್ಕಾರದಲ್ಲಿ ಗುರುವನ್ನು ಒಳಮಾಡಿಕೊಳ್ಳುವುದಿಲ್ಲ.

ಮಗುವಿಗೆ ಉಪನಯನ ಮಾಡುವ ಅಧಿಕಾರವನ್ನು ತಂದೆಗೆ ವರ್ಗಾಯಿಸಲಾಯಿತು. ಇದರ ಪರಿಣಾಮವಾಗಿ ತನ್ನ ಮಗುವಿನ ಉಪನಯನ ಮಾಡುವ ತಂದೆಯು, ತನ್ನ ವರ್ಣವನ್ನೇ ತನ್ನ ಮಗನಿಗೆ ನೀಡುವ ಮೂಲಕ ಕಸುಬುಗಳು ಅಥವಾ ವರ್ಣಗಳು ಅನುವಂಶೀಯವಾಗುವಂತೆ ಮಾಡಿದರು.

ಜನ್ಮದಿಂದ ಜಾತಿ ಎಂಬ ಪದ್ಧತಿಗೆ ನಾಂದಿ ಹಾಡಿದರು, ಎಂದು ಹೇಳುತ್ತಾ ವರ್ಣ ನಿರ್ಧಾರದ ಜವಾಬ್ದಾರಿಯನ್ನು ಗುರುವಿನಿಂದ ಕಿತ್ತು ತಂದೆಗೆ ವಹಿಸಿದ ಈ ವಿಷಯವನ್ನು ಅಂಬೇಡ್ಕರ್ ಬಹಳ ಗಂಭೀರವಾಗಿ ವಿವೇಚಿಸುತ್ತಾರೆ.

ಏನೇ ಆಗಲಿ, ಬ್ರಾಹ್ಮಣ್ಯಾಧಿಕ್ಯದ ಗೀಳಿನ್ನು ಖಂಡಿಸುವ ಭರದಲ್ಲಿ ಬ್ರಾಹ್ಮಣರನ್ನು ದ್ವೇಷಿಸುವ, ಅವರನ್ನು ಅನುಮಾನಿಸುವ, ಅಪಮಾನಿಸುವ ಮತ್ತು ಅವರನ್ನು ಸದಾ ಅಪಹಾಸ್ಯ ಮಾಡುವವರು ತಮ್ಮ ನಡೆಗಳನ್ನು ನಿಷ್ಟುರವಾಗಿ ಪರಿಶೀಲಿಸಿಕೊಳ್ಳುವ ಅಗತ್ಯವಿದೆ.

ಬ್ರಾಹ್ಮಣ ಎಂಬ ಸಹಜೀವಿಯನ್ನು ಜಾತಿಯಾಧಾರದಲ್ಲಿ ಮಾತ್ರವೇ ನೋಡುವ ಮನಸ್ಥಿತಿಯೂ ಕೂಡಾ ಅಸ್ಪೃಷ್ಯತೆ ಆಚರಿಸುತ್ತಿದ್ದ ಸವರ್ಣೀಯ ಮನಸ್ಥಿತಿಗಳಿಗಿಂತ ಏನೂ ಮೇಲಲ್ಲ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version