ಅಂತರಂಗ
ಅರಿಮೆಯ ಅರಿವಿರಲಿ-56 : ಸಸಿಗವಚ ಮತ್ತು ಶಿಶುಗವಚ
- ಯೋಗೇಶ್ ಮಾಸ್ಟರ್
ದೇಶಸೇವೆ ಎನ್ನುವುದಾದರೆ, ರಾಷ್ಟ್ರನಿರ್ಮಾಣ ಎನ್ನುವುದಾದರೆ, ನಾಗರಿಕ ಸಮಾಜ ಸಂರಚನೆ ಎನ್ನುವುದಾದರೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು. ಈ ದಿಕ್ಕಿನಲ್ಲಿ ಶಿಕ್ಷಕರಿಗೆ ಒಂದು ಅಪೂರ್ವವಾದ ಅವಕಾಶವಿದೆ. ನಾಗರಿಕ ಸಮಾಜದ, ಸದೃಢ ರಾಷ್ಟ್ರದ ನಿರ್ಮಾಣದ ಪ್ರಕ್ರಿಯೆಯು ಶಿಕ್ಷಕರಿಂದ ಪ್ರತಿದಿನವೂ ಸದಾ ಆಗುತ್ತಿರುತ್ತದೆ.
ಮಗುವೊಂದರ ಮಗುತನವನ್ನು ಜತನ ಮಾಡುವುದು ಎಂದರೆ ಸಸಿಯೊಂದು ನಾನಾ ದಾಳಿಗೆ ಸಿಕ್ಕು ನಾಶವಾಗದಂತೆ ನೋಡಿಕೊಳ್ಳಲು ಸಸಿಗವಚವನ್ನು ನಿರ್ಮಿಸಿದಂತೆ. ಬೃಹತ್ ವೃಕ್ಷವಾಗಿ ಬೆಳೆದುನಿಲ್ಲುವ ಸಾಧ್ಯತೆ ಇರುವ ಸಸಿಯನ್ನು ಯಾವುದೋ ಪಶುವು ಮೇಯದಂತೆ ನೋಡಿಕೊಳ್ಳಬೇಕು, ಗಾಳಿಗೆ, ಮಳೆಗೆ ಸಿಕ್ಕಿ ಬೀಳದಂತೆ ನೋಡಿಕೊಳ್ಳಬೇಕು, ದಾರಿಹೋಕರು, ತುಂಟ ಮಕ್ಕಳು ಎಲೆಗಳನ್ನು ತರಿಯದಂತೆ, ಚಿಗುರುಗಳನ್ನು ಚಿವುಟದಂತೆ ನೋಡಿಕೊಳ್ಳಬೇಕು. ಅದಕ್ಕಾಗಿಯೇ ಒಂದು ಒಳ್ಳೆಯ ಟ್ರೀ ಗಾರ್ಡ್ ಮಾಡಬೇಕು. ಈ ಟ್ರೀಗಾರ್ಡನ್ನು ಸಸಿಗವಚವೆನ್ನುತ್ತೇನೆ.
ಮರದ ಸಸಿ ರೂಪದ ಎಳೆವೆಯ ದಿನಗಳಲ್ಲಿ ಈ ಸಸಿಗವಚ ಬೇಕು. ಒಮ್ಮೆ ಬೇರುಬಿಟ್ಟ ಮೇಲೆ, ಗಟ್ಟಿಯಾಗಿ ನಿಂತ ಮೇಲೆ, ಬೃಹತ್ ವೃಕ್ಷವಾದ ಮೇಲೆ ಅದಕ್ಕೆ ಈ ಸಸಿಗವಚದ ಅಗತ್ಯವಿರುವುದಿಲ್ಲ. ಅಂತೆಯೇ ಮಗುವಿನ ಮಗುತನದ ಜೋಪಾನ ಮಾಡುವ ಹೊಣೆಗಾರಿಕೆ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಸಮಾಜದ ಯಾವುದೇ ಸದಸ್ಯರಿಗೆ ಇರುವುದು.
ಸಾಧಾರಣ ಮನಸ್ಥಿತಿಯ ಮಕ್ಕಳ ಜೊತೆಜೊತೆಗೆ ಶರೀರದಲ್ಲಿ ನ್ಯೂನ್ಯತೆ ಇರುವಂತಹ ಮಕ್ಕಳು, ಬುದ್ಧಿಮತ್ತೆಯಲ್ಲಿ ಕೊರತೆಯುಳ್ಳವರು, ಮೊಂಡರು, ಹಟಮಾರಿಗಳು, ಪುಕ್ಕಲರು, ಸುಳ್ಳರು, ಮಳ್ಳರು, ದೌರ್ಜನ್ಯಕ್ಕೊಳಗಾಗಿರುವವರು, ಕ್ರೂರಿಗಳು, ದುಷ್ಕರ್ಮಿಗಳು; ಹೀಗೆ ನಾನಾ ಬಗೆಯ ಮಕ್ಕಳೂ ಇರುತ್ತಾರೆ. ಇಂತಹ ಹಲವಾರು ಮನಸ್ಥಿತಿಯ ಅಥವಾ ಮಾನಸಿಕ ಸಮಸ್ಯೆ ಇರುವವರನ್ನು ಅತ್ಯುತ್ತಮ ಪ್ರಜೆಗಳನ್ನಾಗಿ ಅಥವಾ ಪ್ರಖ್ಯಾತ ವಿಜ್ಞಾನಿಯನ್ನಾಗಿ ಅಥವಾ ಜನಪ್ರಿಯ ಮಹಾತ್ಮನನ್ನಾಗಿ ಅಥವಾ ಮಹಾನ್ ಸಂತರನ್ನಾಗಿ ರೂಪಿಸುವ ಕೆಲಸವಲ್ಲ ನಾವು ಶಿಕ್ಷಕರಿಂದ ಅಪೇಕ್ಷಿಸುವುದು.
ನಮ್ಮ ಸಮಾಜವು ಮಹಾತ್ಮರ, ಪ್ರಖ್ಯಾತರ ರೇಸ್ ಟ್ರ್ಯಾಕ್ ಆಗುವುದೇನೂ ಬೇಕಾಗಿಲ್ಲ. ಸಮಾಜದಲ್ಲಿರುವವರೆಲ್ಲಾ ಇಂದು ಮತ್ತು ನಾಳೆ ನೆಮ್ಮದಿಯಿಂದ ಬಾಳಲು ಪೂರಕವಾದ ವಾತಾವರಣವು ನಿರ್ಮಾಣವಾಗಬೇಕು. ಅದಕ್ಕೆ ಎಲ್ಲರಲ್ಲಿ ಇರಬೇಕಾಗಿರುವುದು ಸಹಕಾರದ ಧೋರಣೆ. ಅಷ್ಟರಮಟ್ಟಿಗೆ ಮಾತ್ರ ಕುಟುಂಬದಲ್ಲಿ ಪೆÇೀಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಯೋಚಿಸಬೇಕಾಗಿರುವುದು ಮತ್ತು ಯೋಜಿಸಬೇಕಾಗಿರುವುದು. ಇನ್ನುಳಿದ ಕಿರೀಟಕ್ಕೆ ಗರಿಗಳನ್ನು ಏರಿಸಿಕೊಳ್ಳುವುದು ಬಿಡುವುದು ಅವರ ಬಾಳ್ದಾರಿಯಲ್ಲಿನ ಸಂಭವಗಳಿಗೆ ಬಿಟ್ಟಿದ್ದು.
ಶಿಶುಪೋಷಣೆ ಎಂಬ ತಪಸ್ಸು
ಅದರಲ್ಲೂ ವಿಶೇಷವಾಗಿ ಶಿಕ್ಷಕರಿಗೆ ತಮ್ಮ ತರಗತಿಗಳಲ್ಲಿ ಕೆಲಸ ಮಾಡುವುದೆಂದರದು ತಪಸ್ಸು. ಸದಾ ಧ್ಯಾನನಿರತರಾಗಿರುವಂತೆ. ಜೊತೆಜೊತೆಗೆ ಹಲವು ಮಾದರಿಗಳ ಜೀವಗಳನ್ನು ಸಾಕ್ಷೀಕರಿಸುವಂತಹ ಸಾಕ್ಷಿಪ್ರಜ್ಞೆಯಾಗಿರಬೇಕು. ಮಕ್ಕಳಿದ್ದರೆ ವಾತಾವರಣವು ಸಹಜ ಜೀವಂತಿಕೆಯಿಂದಲೂ, ಲವಲವಿಕೆಯಿಂದಲೂ ತುಂಬಿರುತ್ತದೆ. ಅರಳುತ್ತಿರುವ ಮೊಗ್ಗುಗಳಂತಿರುವ ಆ ಮಕ್ಕಳ ಸುಗಂಧವನ್ನು ಆಘ್ರಾಣಿಸಿಕೊಂಡು, ಅವರ ಮಧುರ ಸಾಮಿಪ್ಯವನ್ನು ಆಸ್ವಾದಿಸಿಕೊಂಡು ಇರಲಾರದಂತಹ ಪರಿಸ್ಥಿತಿಯು ಶಿಕ್ಷಕರಿಗೆ ಸಾಮಾನ್ಯ.
ಮಕ್ಕಳನ್ನು ಗದರಿಸಬೇಕು, ಅವರ ಜಗಳ ಬಿಡಿಸಬೇಕು, ಕಲಿಸುವುದನ್ನು ಕಲಿಯದಿದ್ದರೆ ಬೇರೆಬೇರೆ ಮಾರ್ಗಗಳನ್ನು ಹುಡುಗಬೇಕು, ಅವರನ್ನು ಕ್ರಮದಲ್ಲಿಡಬೇಕು, ಎಚ್ಚರಿಸಬೇಕು, ಬುದ್ಧಿವಾದ ಹೇಳಬೇಕು, ನಿರ್ದೇಶನಗಳನ್ನು ನೀಡಬೇಕು; ಹೀಗೆ ಒಂದೆರಡರಲ್ಲದ ಹಲವು ಕ್ರಿಯೆಗಳನ್ನು ತಮ್ಮ ಅಧಿಕಾರವನ್ನು ಬಳಸಿಕೊಂಡು ಮಾಡುತ್ತಿರಲೇಬೇಕು. ಅವರೆಲ್ಲಾ ತುಂಟತನಗಳನ್ನು, ಚೇಷ್ಟೆಗಳನ್ನು ಶಿಶುಸಹಜವೆಂದು ಬಿಟ್ಟು ನೋಡಿಕೊಂಡಿರಲಾಗುವುದಿಲ್ಲ.
ಶಿಕ್ಷಕರಿಗೆ ಅವರ ಮೇಲಿನ ಅಧಿಕಾರಗಳಿಂದ ಒತ್ತಡವಿರುತ್ತವೆ. ಶಿಕ್ಷಕರು ಮಾಡಲೇಬೇಕಾದ ಕೆಲಸಗಳ ನಿರೀಕ್ಷೆಗಳಿರುತ್ತವೆ. ಏನೇ ಆಗಲಿ ವಿವಿಧ ರೀತಿಯಲ್ಲಿ ವರ್ತಿಸುವ ಮಕ್ಕಳನ್ನು ಕ್ರಮಕ್ಕೆ ತರಲು ಅಥವಾ ಸರಿದಾರಿಗೆ ತರಲು, ಕನಿಷ್ಟಪಕ್ಷ ಅವರ ಮಿತಿಮೀರಿದ ವರ್ತನೆಗಳನ್ನು ತಹಬಂದಿಗೆ ತರಲು ಅವರ ಸಮಸ್ಯೆಯ ಮೂಲದ ಬಗ್ಗೆ ತಿಳುವಳಿಕೆ ಶಿಕ್ಷಕರಿಗೆ ಇರಬೇಕು.
ಒಂದು ಮಗುವು ಕಲಿಕೆಯಲ್ಲಿ ಹಿಂದುಳಿದಿರಲು, ಬಳಲಿದಂತೆ ಕಾಣುತ್ತಿರಲು, ಕಣ್ಣುಗಳಲ್ಲಿ ಗುಳಿ ಬಿದ್ದಿರಲು, ಹಲಗೆಯ ಮೇಲೆ ಬರೆದಿರುವುದನ್ನು ದೂರದಿಂದ ಕಾಣದಿರಲು, ಕರೆದರೆ ಸರಿಯಾಗಿ ಸ್ಪಂದಿಸದಿರಲು, ಬೆರಳುಗಳಿಗೆ ಸೀಸದ ಕಡ್ಡಿಯನ್ನು ಸರಿಯಾಗಿ ಹಿಡಿಯಲು ಸಾಧ್ಯವಿಲ್ಲದಿರಲು, ತಲೆಗೂದಲಲ್ಲಿ ಹೇನು ಬಿದ್ದಿರಲು, ಒರಟಾಗಿ ನಡೆದುಕೊಳ್ಳಲು, ಪುಕ್ಕಲನಾಗಿರಲು, ಮುಖೇಡಿಯಾಗಿರಲು, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರಲು, ಬಿಸಿಲಲ್ಲಿ ತಲೆ ಸುತ್ತಿ ಬೀಳಲು; ಹೀಗೆ ನಾನಾ ತರಹದ ಸಮಸ್ಯೆಗಳಿಗೆಲ್ಲಾ ಮನೆಯವರ ಅರಿವಿಗೆ ಬರದಂತಹ ಹಲವು ಕಾರಣಗಳಿರುತ್ತವೆ.
ಆ ಕಾರಣಗಳು ಪೌಷ್ಟಿಕಾಂಶದ ಕೊರತೆ ಇರಬಹುದು, ಮಾನಸಿಕ ಸಮಸ್ಯೆ ಇರಬಹುದು, ನರದೌರ್ಬಲ್ಯವಿರಬಹುದು, ಕೌಟುಂಬಿಕ ಸಮಸ್ಯೆ ಇರಬಹುದು, ಮಗುವಿನ ಮನೆಯ ಆರ್ಥಿಕ ಸಮಸ್ಯೆ ಇರಬಹುದು, ಕುಟುಂಬಗಳಲ್ಲಿ ಸಂಘರ್ಷ ಅಥವಾ ಒಡಕು ಇರಬಹುದು, ತಂದೆ ಇಲ್ಲದ ಮಗುವೋ ಅಥವಾ ತಾಯಿ ಇಲ್ಲದ ಮಗುವೋ ಇರಬಹುದು, ಮನೋರೋಗವಿರಬಹುದು, ಖಾಯಿಲೆ ಇರಬಹುದು, ಅನುವಂಶೀಯವಾಗಿರುವ ಮಾನಸಿಕ ಅಥವಾ ಶಾರೀರಿಕ ಸಮಸ್ಯೆ ಸಮಸ್ಯೆ ಇರಬಹುದು, ಆಪ್ತ ಸಂಬಂಧಗಳ ಕೊರತೆ ಇರಬಹುದು; ಏನೋ ಅಂತೂ ಒಂದು ಬಗೆಯ ಕಾರಣವಂತೂ ಮಗುವಿನ ಕ್ರಿಯೆ, ಪ್ರತಿಕ್ರಿಯೆಗಳಲ್ಲಿ, ವರ್ತನೆಗಳಲ್ಲಿ ಕಾಣುತ್ತಿರುತ್ತದೆ.
ಶಿಕ್ಷಕರಿಗೆ ವೈದ್ಯಕೀಯವಾಗಲಿ, ಮನೋವಿಜ್ಞಾನವಾಗಲಿ, ಸಮಾಜ ವಿಜ್ಞಾನವಾಗಲಿ; ಎಲ್ಲದರ ಮೂಲತತ್ವಗಳಂತೂ ಗೊತ್ತಿರಲೇ ಬೇಕು. ಅದರಲ್ಲೂ ಮಕ್ಕಳಿಗೆ ಸಂಬಂಧಿಸಿರುವಷ್ಟು ಸಾಮಾನ್ಯ ತಿಳುವಳಿಕೆಯಂತೂ ತಿಳಿದಿರಬೇಕು. ಇದರ ಜೊತೆಗೆ ಅವರಿಗೆ ಖಂಡಿತವಾಗಿ ತಿಳಿದಿರಲೇ ಬೇಕಾದ ವಿಷಯವೆಂದರೆ ಮಕ್ಕಳ ಮಾನಸಿಕ ಸ್ಥಿತಿಯನ್ನು ವಿಶ್ಲೇಷಣೆಯನ್ನು ಮಾಡುವ ಕ್ರಮ.
ಒಂದು ವೇಳೆ ಮಗುವಿಗೆ ಶಾರೀರಿಕ ಸಮಸ್ಯೆ ಅಥವಾ ನರದೌರ್ಬಲ್ಯದಂತಹ ಸಮಸ್ಯೆಗಳಿದ್ದರೆ ಪೆÇೀಷಕರಿಗೆ ವಿಷಯ ತಿಳಿಸಿ, ಅವರು ಮತ್ತು ಶಿಕ್ಷಕರು ಒಟ್ಟಾಗಿ ಅದರ ಪರಿಹಾರಕ್ಕಾಗಿ ಕೆಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಆದರೆ ಕೌಟುಂಬಿಕ ಸಮಸ್ಯೆಗಳಿದ್ದರೆ, ಒಡಕು ಕುಟುಂಬಗಳಿದ್ದರೆ, ಆರ್ಥಿಕ ಸಮಸ್ಯೆ ಅಥವಾ ಒಂಟಿ ಪೋಷಕರಾಗಿದ್ದರೆ, ಅಂತಹ ಮಕ್ಕಳ ಪೋಷಕರ ಸ್ಥಿತಿಗತಿಗಳನ್ನು ಶಿಕ್ಷಕರಿಗೆ ಸರಿ ಮಾಡಲು ಆಗುವುದಿಲ್ಲ. ಹಾಗೆ ಮಾಡಲು ಹೋಗುವುದು ಅಪ್ರಾಯೋಗಿಕ ಮತ್ತು ಅವಾಸ್ತವದ ಯೋಚನೆ.
ಆದರೆ, ಮನೆಯಲ್ಲಿ ಮಗುವು ಯಾವುದೇ ಸ್ಥಿತಿಯನ್ನು ಎದುರಿಸುತ್ತಿರಲಿ, ಮಗುವು ತನ್ನ ಸ್ವತಂತ್ರ ಅಸ್ತಿತ್ವಕ್ಕೆ ಬೇಕಾದ ಮಾನಸಿಕ ಸ್ಥೈರ್ಯ, ಸಾಮಾಜಿಕ ಧೈರ್ಯ ಮತ್ತು ಭೌದ್ಧಿಕ ಸಾಮರ್ಥ್ಯವನ್ನು ಪಡೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಂತು ಬದುಕು ನಡೆಸಲು ಶಕ್ತನಾಗಿಸಲು ಖಂಡಿತವಾಗಿ ಸಾಧ್ಯ. ಅದಕ್ಕೆ ಬೇಕಾದ ಎಲ್ಲಾ ಮಾನಸಿಕ ಮತ್ತು ಬೌದ್ಧಿಕ ತರಬೇತಿಗಳನ್ನು ನೀಡುತ್ತಾ ಭಾವನಾತ್ಮಕವಾಗಿ ಸಶಕ್ತನಾಗಿಸಲು ಪ್ರೀತಿಯ ಅನುಭವನ್ನು ಆ ಮಗುವಿಗೆ ನೀಡಬೇಕು. ಇದು ಸಾಧ್ಯ. ಶಿಕ್ಷಕರೊಬ್ಬರು ತಮ್ಮ ಸಂಪರ್ಕಕ್ಕೆ ಬರುವ ಒಂದೊಂದು ಮಗುವಿಗೂ ತಮ್ಮ ಪ್ರೀತಿಯನ್ನು ಮತ್ತು ಬದುಕಿನ ಬಗ್ಗೆ ಆಸಕ್ತಿಯನ್ನು ಹೊಂದುವಂತಹ ಪ್ರೇರಣೆಯನ್ನು ನೀಡಲು ಸಾಧ್ಯ.
ಶಿಕ್ಷಕರೆಂಬ ಊರುಗೋಲು
ನಿಜವಾಗಿಯೂ ನಿರ್ಲಕ್ಷಿತ ಮಕ್ಕಳಿಗೆ ಶಿಕ್ಷಕರು ಅತ್ಯಂತ ಬೇಕಾಗಿರುವಂತಹ ಊರುಗೋಲು, ದಾರಿದೀಪ ಮತ್ತು ಸಸಿಗವಚ (ಟ್ರೀಗಾರ್ಡ್). ಇಂದು ಮತ್ತು ನಾಳಿನ ನೆಮ್ಮದಿಯ ಸಮಾಜವನ್ನು ಬಯಸುವವಾರೇ ಆಗಲಿ ಸಸಿಗವಚದಂತೆ ಶಿಶುಗವಚವಾಗಬೇಕು.
ನಮ್ಮ ಮನೆಯ, ನೆರೆಹೊರೆಯ, ಸಮಾಜದ, ಜಗತ್ತಿನ ಪ್ರತಿಯೊಂದು ಮಗುವಿನ ಮಗುತನ ಜತನವಾಗಿರಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವುದು ಹೇಗೆ ಒಂದು ಸಂಕಲಿತ ಹೊಣೆಗಾರಿಕೆಯೋ, ರಾಷ್ಟ್ರದ ಪ್ರಗತಿಯ ಹೊಣೆಗಾರಿಕೆ ಹೇಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆಯೋ ಅದೇ ರೀತಿ ಮಗುತನವನ್ನು ಜೋಪಾನ ಮಾಡುವುದೂ ಕೂಡಾ ಪ್ರತಿಯೊಬ್ಬನ ಅತ್ಯುನ್ನತ ಕರ್ತವ್ಯವಾಗಿರುತ್ತದೆ. ಭೂಮಿಯನ್ನು ಸಂರಕ್ಷಿಸುವಲ್ಲಿ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯು ಒಬ್ಬರಿಗೆ ಎಷ್ಟರ ಮಟ್ಟಿಗಿನ ಜವಾಬ್ದಾರಿಯಾಗಿರುತ್ತದೆಯೋ, ಮಾನವ ಸಮಾಜದ ಬಾಳ್ವೆಗೆ ಮಗುತನದ ಜತನ ಅಷ್ಟೇ ಗಂಭೀರವಾದ ಜವಾಬ್ದಾರಿಯಾಗಿರುತ್ತದೆ.
ಮಗುತನದ ಜತನಕ್ಕೆ ಶಿಶುಗವಚ
ಮಗುತನದ ಜತನವು ಸಾಮಾನ್ಯ ಕೆಲಸವಲ್ಲ. ಅದು ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಬೇಡುವ ಸಾಹಸದ ಕಾರ್ಯ. ಏಕೆಂದರೆ ಮಗುವು ಈ ಮಗುತನದ ಜತನದ ತಪಸ್ಸಿಗೆ ಬದ್ಧವಾಗಿರುವ, ಶಿಶುಗವಚವಾಗಲು ಕಂಕಣ ತೊಟ್ಟಿರುವ ಕೆಲವರ ಕೈಗಳಲ್ಲಿ ಮಾತ್ರ ಹಾದುಹೋಗುವುದಲ್ಲ. ಮಗುವಿನ ಮೇಲೆ ನಾನಾ ರೀತಿಗಳಿಂದ ಪ್ರಭಾವ ಬೀರುವಂತವರು, ತಿಳಿದೋ, ತಿಳಿಯದೆಯೋ ಮಗುವೆಂಬ ಮೆದು ಜೇಡಿಮಣ್ಣಿನ ಮುದ್ದೆಯನ್ನು ತಮ್ಮ ಆಶಯಕ್ಕೆ ತಕ್ಕಂತೆ, ಅರಿವಿಗೆ ತಕ್ಕಂತೆ ರೂಪುಗೊಳಿಸಲು ತಮ್ಮ ಕೈಗಳನ್ನು ಬಳಕೆ ಮಾಡುತ್ತಿರುತ್ತಾರೆ. ಈ ಎಲ್ಲಾ ಪಾಶಗಳಿಂದ ಮಗುವನ್ನು ವಿಮೋಚನಗೊಳಿಸಿಕೊಂಡು ಜಾಣ್ಮೆಯಿಂದ ಮತ್ತು ಎಚ್ಚರಿಕೆಯಿಂದ ಮಗುತನವನ್ನು ಜತನಗೊಳಿಸುವ ಶಿಶುಗವಚಗಳು ನಾವಾಗಬೇಕು.
ಮಕ್ಕಳು ತಮ್ಮ ಪ್ರಭಾವ ಮತ್ತು ಸೆಳೆತಗಳಿಂದ ರೂಪುಗೊಂಡಂತೆ ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿರುತ್ತಾರೆ. ಅವುಗಳಿಗೆಲ್ಲಾ ಶಿಕ್ಷಕರಾದವರು ಅಥವಾ ಶಿಶುಗವಚಗಳು ಪ್ರತಿಕ್ರಿಯಿಸಬಾರದು. ಮಕ್ಕಳಿಗೂ ದೊಡ್ಡವರಿಗಿದ್ದಂತೆ ಪೂರ್ವಾಗ್ರಹಗಳಿರುತ್ತವೆ. ಸಾಂಪ್ರದಾಯಕ ನಡವಳಿಕೆಗಳು ರೂಢಿಯಾಗಿರುತ್ತವೆ. ನಮ್ಮ ನಿರ್ದೇಶನಗಳನ್ನು ಒಮ್ಮಿಂದೊಮ್ಮೆಲೇ ಸ್ವೀಕರಿಸುವುದಿಲ್ಲ. ನಮ್ಮನ್ನು ಅನುಮಾನಿಸುತ್ತಾರೆ. ಅವರ ವಿಕರ್ಷಣ ವರ್ತನೆಗಳು ನಮ್ಮನ್ನು ಅಪಮಾನಿಸುತ್ತವೆ. ಆದರೆ ತಮ್ಮ ಶಿಶುಗವಚದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಯಾವುದೇ ಹಿರಿಯರು ತಮ್ಮ ಸಾಮರ್ಥ್ಯವು ಮಗುವಿನ ವಿಕರ್ಷಣದಿಂದ ವಿಚಲಿತವಾಗದಂತೆ ಕಾಯ್ದುಕೊಳ್ಳುತ್ತಾರೆ.
ಅದೇ ಬಹಳ ಮುಖ್ಯ. ಬಹಳಷ್ಟು ಜನ ಪೋಷಕರು, ಶಿಕ್ಷಕರು ಮತ್ತು ಶಿಶುಸಂಬಂಧಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ವಿಫಲರಾಗುವುದು ಇಲ್ಲಿಯೇ. ತಮ್ಮ ಮಾತು ಕೃತಿಗಳಿಗೆ ಆಕರ್ಷಕವಾಗುವ ಮಕ್ಕಳನ್ನು ಆನಂದದಿಂದ ಅಪ್ಪಿಕೊಳ್ಳುತ್ತಾರೆ. ಆದರೆ ತಮ್ಮಿಂದ ವಿಕರ್ಷಣವಾಗುವ ಮಕ್ಕಳನ್ನು ಬಿಟ್ಟುಬಿಡುತ್ತಾರೆ. ಅವರು ನಮ್ಮ ಮಾತು ಕೇಳುವುದಿಲ್ಲ. ಅವರಿಗೆ ಎಷ್ಟು ಹೇಳಿದರೂ ಅಷ್ಟೇ. ಅವರಿಗೆ ಏನು ಮಾಡಿದರೇನು ಲಾಭ? ಇತ್ಯಾದಿ ಜಿಗುಪ್ಸೆಯ ಆಲೋಚನೆಗಳೊಂದಿಗೆ ಅಂತಹ ಮಕ್ಕಳಿಂದ ವಿಮುಖರಾಗಿಬಿಡುತ್ತಾರೆ.
ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಫಲಿತಾಂಶ ಮತ್ತು ಸಂಸ್ಥೆಯ ಕೀರ್ತಿ ಮಾತ್ರ ನಿರೀಕ್ಷೆಯ ವಸ್ತುಗಳಾಗಿರಬಹುದು. ಆದರೆ, ಶಿಕ್ಷಕರು ನಿರೀಕ್ಷಿಸಬೇಕಾಗಿರುವುದು ಅಭೌತಿಕವಾದ ವಿಷಯಗಳನ್ನು. ಜೀವಂತಿಕೆಯ ವಿಷಯಗಳನ್ನು. ತಾತ್ವಿಕ ಮತ್ತು ಭಾವನಾತ್ಮಕವಾಗಿರುವ ವಿಷಯಗಳನ್ನು. ತತ್ವ ಮತ್ತು ಭಾವುಕತೆಗಳಿಂದ ಶಿಕ್ಷಕರು ಹೊರತಾದ ಕ್ಷಣದಲ್ಲಿಯೇ ಅವನು ಅಥವಾ ಅವಳು ಶಿಕ್ಷಣವೃತ್ತಿಯ ನೈತಿಕ ಮೌಲ್ಯವನ್ನು ಕಳೆದುಕೊಂಡರೆಂದೇ ಅರ್ಥ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243