ಅಂತರಂಗ

ಧರ್ಮ ಮರ್ಮ-02 : ದೈವಿಕತೆಯ ಸೃಷ್ಟಿ

Published

on

  • ಯೋಗೇಶ್ ಮಾಸ್ಟರ್

ನಾಸ್ತಿಕ ಧೋರಣೆಯ ಧರ್ಮಗಳಿದ್ದರೂ ಅದಕ್ಕಿಂತ ಪುರಾತನವಾದ ಧರ್ಮಗಳಲ್ಲಿ ದೇವರೇ ಧಾರ್ಮಿಕ ಕೇಂದ್ರ. ಅವನ ಶಕ್ತಿ, ಅವನ ಸೃಷ್ಟಿ, ಅವನ ಒಲವು, ಅವನ ನಿಲುವು, ಅವನ ಕೋಪ, ಕಟ್ಟಕಡೆಗೆ ಮನುಷ್ಯನ ಮೇಲೆ ಅವನ ಪ್ರಭಾವ ಮತ್ತು ನಿಯಂತ್ರಣವೇ ಧಾರ್ಮಿಕತೆಯ ಪ್ರಾರಂಭ. ಬೌದ್ಧ ಧರ್ಮವೂ ಸೇರಿದಂತೆ ಹಲವಾರು ನಿರೀಶ್ವರವಾದದ ಅಂದರೆ ದೇವರನ್ನು ಕೇಂದ್ರವಾಗಿಟ್ಟುಕೊಳ್ಳದ ಧರ್ಮಗಳಿವೆ.

ಆದರೆ ಧಾರ್ಮಿಕತೆ ಎಂದಕೂಡಲೇ ದೇವರನ್ನು ಕೇಂದ್ರವಾಗಿರಿಸಿಕೊಳ್ಳುವುದು ರೂಢಿಯಾಗಿದೆ. ಅಬ್ರಹಾಮನ ಧರ್ಮವೇ ಮೊದಲಾಗಿ 1844ರಲ್ಲಿ ಹುಟ್ಟಿರುವ ಬಹಾಯಿಯವರೆಗೂ ಹಲವು ಧರ್ಮದವರೆಗೂ ದೇವರೇ ಕೇಂದ್ರ.

ಆದಿಮ ಕಾಲದಲ್ಲಿ ಯಾವ ಧರ್ಮಗಳೂ ಇರಲಿಲ್ಲ. ಬೇಟೆಯಾಡುತ್ತಿದ್ದ ಅಲೆಮಾರಿ ಗುಂಪುಗಳ, ಹಣ್ಣು ಕಾಯಿಗಳನ್ನು ಆಯುವ ಬುಡಕಟ್ಟುಗಳು, ನಂತರ ಕೃಷಿಯನ್ನು ಪ್ರಾರಂಭಿಸಿ ಮನುಷ್ಯ ನೆಲೆ ನಿಲ್ಲಲು ಪ್ರಾರಂಭಿಸಿದ ಮೇಲೂ ಧರ್ಮಗಳ ಕಲ್ಪನೆಗಳೇ ಇರಲಿಲ್ಲ. ಆದರೆ ದೇವರ ಪರಿಕಲ್ಪನೆ ಹುಟ್ಟಿತ್ತು. ಧರ್ಮಕ್ಕಿಂತ ದೇವರು ಹಳತು ಎಂಬುದು ನಿಜ.

ಧರ್ಮದ ಕೇಂದ್ರವನ್ನಾಗಿ ದೇವರನ್ನು ಹೊಂದಿದ್ದರೂ ದೇವರಿಗಾಗಿ ಧರ್ಮವು ಹುಟ್ಟಿದ್ದಲ್ಲ. ಈಗ ನಾವು ನೋಡುತ್ತಿರುವ ಎಲ್ಲಾ ಸ್ಥಾಪಿತ ಧರ್ಮಗಳೂ ಕೂಡ ಆಯಾ ಕಾಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘರ್ಷಗಳ ಫಲವೇ ಆಗಿವೆ. ಹಿಂದೂ ಧರ್ಮ ಮಾತ್ರ ಈ ಪಟ್ಟಿಗೆ ಸೇರುವುದಿಲ್ಲ. ಏಕೆಂದರೆ ಹಿಂದೂ ಧರ್ಮವು ಸ್ಥಾಪಿತ ಧರ್ಮವಲ್ಲ. ಅದೊಂದು ವಿಕಸಿತ ಧರ್ಮ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವಿಕಾಸವಾಗುತ್ತಾ ಬಂದ ಜೀವನ ಪದ್ಧತಿಯು ಆಧ್ಯಾತ್ಮವೇ ಮೊದಲಾದ ಅನೇಕ ಅಂಶಗಳನ್ನು ತನ್ನದಾಗಿಸಿಕೊಂಡು ಧರ್ಮವೆಂದು ಕರೆಯಿಸಿಕೊಳ್ಳಲ್ಪಟ್ಟಿತು. ಇದರ ವಿಕಾಸದ ಪ್ರಕ್ರಿಯೆಯ ಬಗ್ಗೆ ಮುಂದೆ ವಿವರವಾಗಿ ನೋಡುತ್ತೇವೆ. ಈಗ ಸಧ್ಯಕ್ಕೆ ದೇವರ ಕಡೆ ತಿರುಗೋಣ.

ಆದಿ ದೇವರು

ಬೈಬಲ್ಲಿನ ಆದಿಕಾಂಡ ದೇವರು ತನ್ನ ರೂಪದಂತೆ ಪ್ರತಿರೂಪವಾಗಿ ಮನುಷ್ಯನನ್ನು ಸೃಷ್ಟಿ ಮಾಡಿದ ಎಂದು ಹೇಳುತ್ತದೆ. ಅದು ಬ್ಯಾಬಿಲೋನದ ಮಿಥಾಲಜಿಯಿಂದ ಎರವಲು ಪಡೆದಿರುವ ಕತೆ. ಅದೇನೇ ಇರಲಿ, ವಾಸ್ತವವೆಂದರೆ ಮನುಷ್ಯ ತನ್ನ ರೂಪದ ಪ್ರತಿರೂಪವಾಗಿ ದೇವರನ್ನು ಸೃಷ್ಟಿಸಿದ್ದು. ದೇವರು ಎನ್ನುವ ಪರಿಕಲ್ಪನೆಯೇ ಒಂದು ಬಗೆಯ ಭಾವುಕತೆಯಿಂದ ಅಥವಾ ಭಾವಾವೇಶದಿಂದ ಉಂಟಾಗಿರುವ ಮಾನವ ಸೃಷ್ಟಿಯೇ ಹೊರತು ಪ್ರಾಕೃತಿಕವಾಗಿಯಾಗಲಿ, ವೈಜ್ಞಾನಿಕವಾಗಿಯಾಗಲಿ ಎಂದಿಗೂ ಪ್ರಕಟಗೊಂಡಿರುವಂತಹ ಒಂದು ಪ್ರಾಯೋಗಿಕ ಸತ್ಯವೇನಲ್ಲ.

ಆದರೆ, ಯಾರಿಂದಲೇ ಆಗಲಿ, ಹೇಗೇ ಆಗಲಿ, ಆಗ ಸೃಷ್ಟಿಯಾದ ಈ ಪರಿಕಲ್ಪನೆಯು ಇಷ್ಟು ಬೃಹದ್ರೂಪ ತಾಳುವುದೆಂದು ಯಾರಿಗಾದರೂ ಕಲ್ಪನೆ ಇರಲಿಲ್ಲ. ಕೆಲವರಲ್ಲಿ ಅದೊಂದು ಮುಗ್ಧತೆಯ ಭಾವುಕ ಅಭಿವ್ಯಕ್ತತೆಯಾದರೆ ಮತ್ತೂ ಕೆಲವರಲ್ಲಿ ದಡ್ಡತನದ ವಿತಂಡವಾದದ ಪ್ರಕಟಣೆ ಮತ್ತು ಹಟಸಾಧನೆ.
ದೇವರೆಂಬ ಪರಿಕಲ್ಪನೆಯು ಹುಟ್ಟುವ ಮೂಲವೂ ಒಂದೇ ಏನು ಆಗಿರಲಿಲ್ಲ. ವಿವಿಧ ಸ್ಥಳಗಳಲ್ಲಿ, ವಿವಿಧ ಪ್ರೇರಣೆಗಳಿಂದ, ವಿವಿಧ ರೀತಿಯ ಅತಿಮಾನುಷವಾದಂತಹ ಪರಿಕಲ್ಪನೆಗಳಿಂದ ಮೊಳೆದವು.

ಪ್ರಕೃತಿಯ ವಿಸ್ಮಯಗಳಿಗೆ ಬೆರಗಾಗಿ, ಅಥವಾ ಪ್ರಕೃತಿಯ ರುದ್ರ ಸ್ವಭಾವಕ್ಕೆ ಹೆದರಿ ಅತಿಮಾನುಷಶಕ್ತಿಯೆಂದು ಗುರುತಿಸಿ ಹೆದರಿದರೆ ಅಥವಾ ಗೌರವಿಸಿದರೆ, ಸೃಷ್ಟಿಯಲ್ಲಿ ಹುಟ್ಟುವ ಪ್ರಕ್ರಿಯೆ ಮತ್ತು ಸಾಯುವ ಅನಿವಾರ್ಯತೆಗಳನ್ನು ಗಮನಿಸುತ್ತಾ ಅವುಗಳ ಬೇಧಿಸಲಾಗದ ರಹಸ್ಯಗಳನ್ನು ಅನುಸರಿಸಲು ಯತ್ನಿಸುತ್ತಾ ದೈವತ್ವದ ಪರಿಕಲ್ಪನೆಗೆ ತಗುಲಿಕೊಂಡರು.

ಕೆಲವೊಂದು ಸಂಸ್ಕೃತಿಗಳಲ್ಲಂತೂ ಸತ್ತ ಪಿತೃಗಳ ಆರಾಧನೆಯೇ ಕ್ರಮೇಣ ದೇವರ ಪರಿಕಲ್ಪನೆ ಗಟ್ಟಿಗೊಳ್ಳಲು ಸಾಧ್ಯವಾಯಿತು. ಅವುಗಳೆಲ್ಲಾ ನಂತರದ ದಿನಗಳಲ್ಲಿ ವಿವಿಧ ಸಂಸ್ಕೃತಿಗಳು ಪರಸ್ಪರ ಪರಿಚಯವಾದಂತೆಲ್ಲಾ ತಮ್ಮ ಪರಿಕಲ್ಪನೆಗೂ ಮತ್ತು ಇತರರ ಪರಿಕಲ್ಪನೆಗೂ ಸಾಮ್ಯತೆಗಳನ್ನು ಗುರುತಿಸಿಕೊಳ್ಳುತ್ತಾ ಅದನ್ನು ಏಕರೂಪದಲ್ಲಿ ಗ್ರಹಿಸಲಾರಂಭಿಸಿದರು. ಅದನ್ನೇ ಈಗ ನಾವು ಒಟ್ಟಾರೆ ದೇವರೆನ್ನಲು ಸಾಧ್ಯವಾಗುತ್ತಿದೆ.

ಆರ್ಯರಲ್ಲಿ ದೇವರ ಕಲ್ಪನೆಗಳ ಸಾಧ್ಯತೆ

ಅಲೆಮಾರಿಗಳಾಗಿದ್ದ ಆರ್ಯ ಬುಡಕಟ್ಟುಗಳು ಸ್ಥಳದಿಂದ ಸ್ಥಳಕ್ಕೆ ಚಲಿಸುವಾಗ ಅವರ ಮುಖ್ಯ ಗಮನಕ್ಕೆ ಮತ್ತು ಗೌರವಕ್ಕೆ ಬರುತ್ತಿದ್ದದ್ದು ಪ್ರಕೃತಿಯ ನೇರ ಕೊಡುಗೆಗಳು. ಭೂಮಿ, ಸೂರ್ಯ, ಚಂದ್ರ, ಗಾಳಿ, ನೀರು, ಅಗ್ನಿ ಇತ್ಯಾದಿ ಪ್ರಕೃತಿಯ ಕೊಡುಗೆಗಳ ಉಪಯುಕ್ತತೆಗೆ ಪ್ರಶಂಸಾರೂಪವಾಗಿ ಸ್ತುತಿಗಳನ್ನು ಮಾಡುತ್ತಾ, ಆರ್ಯ ಕವಿಗಳು ಅವುಗಳನ್ನು ಪ್ರತಿಮಾರೂಪದಲ್ಲಿಯೂ ಕೂಡ ಕಾಣುತ್ತಾ ಸಂವಹನ ನಡೆಸಲು ಯತ್ನಿಸಿದರು.

ಇವುಗಳೆಲ್ಲವೂ ರೂಪಕಗಳೇ ಹೊರತು, ಅವರಿಗೂ ಇವನ್ನು ಅದಕ್ಕಿಂತ ಹೆಚ್ಚಾಗಿ ಅರ್ಥೈಸಲು ಸಾಧ್ಯವಿರಲಿಲ್ಲ. ಅವರಿಗಿರುವ ಅನೇಕ ನಂಬುಗೆಗಳಂತೆ, ಆಕಾಶವೆಂಬುದು ಮೊಗಚಿ ಹಾಕಿದ ಬುಟ್ಟಿಯಂತೆ ಭೂಮಿಯ ಮೇಲಿದೆ, ಭೂಮಿಯು ಚಪ್ಪಟೆಯಾಗಿದೆ ಎಂದು ನಂಬುವಂತೆ, ಜೊತೆಗೆ ಪಿತು ಎಂಬ ಆಹಾರದ ದೇವನನ್ನು ಕಂಡುಕೊಂಡಿದ್ದಂತೆ, ಅನೇಕ ಇತರ ಅಗತ್ಯ ವಸ್ತುಗಳಿಗೆ ಮತ್ತು ಗುಣಗಳಿಗೆ ದೈವತ್ವವನ್ನು ಆರೋಪಿಸುತ್ತಿದ್ದದ್ದು ಗೌರವದಿಂದಲೇ ಹೊರತು, ಅದಕ್ಕೂ ತಮ್ಮಂತೆ ಮನಸ್ಸು, ಭಾವನೆ, ಕ್ರೋಧಾ, ಒಲವು ಇತ್ಯಾದಿ ಮಾನವ ರೀತಿಯ ಗುಣಗಳಿವೆ ಎಂತಲ್ಲ.

ಆದರೆ, ಆರ್ಯರು ಒಂದೆಡೆ ನೆಲೆ ನಿಲ್ಲಲು ಯತ್ನಿಸುತ್ತಿದ್ದಂತೆ, ಕೊಂಚ ಮಟ್ಟಿಗೆ ಅಲೆದಾಟದ ಪಾಡು ಕ್ಷೀಣಿಸುತ್ತಿದ್ದಂತೆ, ತಮ್ಮ ಪರಿಕಲ್ಪನೆಗಳನ್ನು ಮತ್ತಷ್ಟು ಬಲಗೊಳಿಸತೊಡಗಿದ್ದರು. ಯಾವುದೇ ಪರಿಕಲ್ಪನೆಯ ಜನಕರು ತಮಗಿಂತ ಬುದ್ಧಿಮತ್ತೆಯಲ್ಲಿ, ವೈಚಾರಿಕ ಶಕ್ತಿಯಲ್ಲಿ ಕಡಿಮೆಯಿರುವವರಿಗೆ ತಮ್ಮ ವಿಚಾರವನ್ನು ತಲುಪಿಸಲು ಹೋದಾಗ, ಅವರಿಗಾಗುವ ಅರ್ಥಗ್ರಹಣವಾಗಲಿ, ರಸಾನುಭವವಾಗಲಿ ಪೂರ್ಣವಾಗಿ ಆಗುವುದಿಲ್ಲ.

ತಮಗೆ ಅಷ್ಟು ಮೇದಾವಂತಿಕೆ ಇಲ್ಲವೆಂದು ಒಪ್ಪಿಕೊಳ್ಳುವ ಮುಗ್ಧರು ನೇರವಾಗಿ, ಅಕ್ಷರಶಃ ಬುದ್ಧಿವಂತರ ಅಥವಾ ಪರಿಕಲ್ಪನೆಯ ಹರಿಕಾರರ ವಿಷಯವನ್ನು ಒಪ್ಪಿಕೊಳ್ಳುತ್ತಾರೆ. ಅವರ ಸ್ವೀಕೃತಿಯು ಆ ಪರಿಕಲ್ಪನೆಯ ಸಾಕಾರಭಾವವನ್ನೇ ಹೊಂದಿರುತ್ತದೆ. ಅದಕ್ಕಿಂತ ಆಚೆಗೆ ಆಲೋಚಿಸಲು ಅವರಿಗೆ ಬಹುಶಃ ಸಾಧ್ಯವಿರುವುದಿಲ್ಲ. ಅಂಥ ಮುಗ್ಧರು ಒಂದು ಬಗೆಯಲ್ಲಿ ಇಂತಹ ಪರಿಕಲ್ಪನೆಗಳನ್ನು ಕೊಂಡೊಯ್ಯುತ್ತಿದ್ದರೆ, ಮೂರ್ಖರು ಅಥವಾ ಕಿಲಾಡಿ ಬುದ್ಧಿವಂತರು ಅದೇ ಪರಿಕಲ್ಪನೆಗಳನ್ನು ಮತ್ತೊಂದು ಬಗೆಯಲ್ಲಿ ಸಾಮಾನ್ಯರಲ್ಲಿ ಹರಡುವರು.

ಅದೇನೇ ಇರಲಿ, ಪ್ರಕೃತಿಯ ಅದ್ಭುತಗಳನ್ನು ಕಂಡ, ಅದರ ಅಪ್ರತಿಮವಾದ ವರದಾನಗಳನ್ನು ಮನಗಂಡ ಆರ್ಯ ದಾರ್ಶನಿಕರು ಮತ್ತು ಕವಿಗಳು ತಮ್ಮ ಕೃತಿಗಳಲ್ಲಿ ಅವನ್ನು ರೂಪಿಸಿದರು. ಈ ಎಲ್ಲಾ ಪ್ರಾಕೃತಿಕ ಅದ್ಭುತಗಳು ಶಕ್ತಿಗಳೆಂದೂ ಮತ್ತು ಶಕ್ತಿಗಳಿಂದ ಹೊರಡುವ ರಸಭಾವಗಳೆಂದೂ ಮನಗಂಡಿದ್ದರು. ಶಕ್ತಿಗಳ ಸ್ವರೂಪವನ್ನು ಮತ್ತು ರಸಗುಣವನ್ನು ಇತರೇ ವಸ್ತುಗಳಲ್ಲಿ ಅಥವಾ ವ್ಯಕ್ತಿಗಳಲ್ಲೂ ಹುಡುಕುವ ಅಥವಾ ಆಕಸ್ಮಿಕವಾಗಿ ಕಾಣುವ ಅಥವಾ ಗುರುತಿಸುವ ಶೋಧನೆಗಳೂ, ಜಿಜ್ಞಾಸುಪೂರ್ಣವಾದ ಅನ್ವೇಷಣೆಯನ್ನೂ ಮಾಡುತ್ತಿದ್ದರು.

ಆಗಲೇ ಅವರು ಕಂಡುಕೊಂಡ ಒಂದು ಅದ್ಭುತ ವಿಷಯವೆಂದರೆ, ವ್ಯಕ್ತಿಯಲ್ಲಿಯೂ ಒಂದು ಪ್ರಮಾಣದಲ್ಲಿ ಪ್ರಕೃತಿಯ ಶಕ್ತಿಯು ಅಂಶವಿದ್ದು ಅಥವಾ ಗ್ರಹಿಕೆಯಿದ್ದು, ಅವು ಕಾಲದೊಂದಿಗೆ ಹೆಚ್ಚುವುದು, ಅಥವಾ ಗಮನಿಸುವಂತಹ (ಧ್ಯಾನ) ಕ್ರಿಯೆಯಿಂದ ಅವುಗಳ ಗುಣಶಕ್ತಿಯು ಪ್ರಕಟವಾಗುವುದು ಎಂಬುದು. ಈ ಅರಿವೇ ವ್ಯಕ್ತಿಯನ್ನು ದೇವರನ್ನಾಗಿಸುವ ಪ್ರಕ್ರಿಯೆಗೆ, ಯೋಗ, ಧಾರಣ ಇತ್ಯಾದಿಗಳಾದ ತಂತ್ರ ಸಾಧನೆಗಳಿಗೂ ಪ್ರೇರಣೆಯಾಯಿತು.

ರಸವಿದ್ಯೆ ಮತ್ತು ದೇವವಿದ್ಯೆ

ಸಾಧಾರಣವಾದ ಲೋಹವನ್ನು ಚಿನ್ನವನ್ನಾಗಿಸುವ ರಸವಿದ್ಯೆಯನ್ನು ನೆನೆಪಿಸಿಕೊಂಡರೆ, ಮನುಷ್ಯನಿಗೂ ಅವನಿಗಿರುವ ಗುಣಶಕ್ತಿಯನ್ನು ಆಧರಿಸಿ ದೈವತ್ವಕ್ಕೇರಿಸುವ ಪ್ರಕ್ರಿಯೆ ಅಥವಾ ಆ ಬಗೆಯ ಆಲೋಚನೆಗಳು, ಪರಿಕಲ್ಪನೆಗಳು ಅರ್ಥವಾಗುತ್ತದೆ.

ಇದೇ ಮುಂದುವರಿದಂತೆ ತನ್ನನ್ನು ತಾನು ಹಾಗೆ ಪ್ರಕೃತಿಯ ಶಕ್ತಿಗಳಿಗೆ ಗುರುತಿಸಿಕೊಂಡವನು ಅಥವಾ ಗುರುತಿಸಲ್ಪಟ್ಟಂತಹ ಮಾನವನು ವಿಶೇಷವೆಂದು ಮಾನ್ಯವಾಗಿದ್ದೇ ಅಲ್ಲದೇ ಅವನ ವೈಯಕ್ತಿಕ ಗುಣಸ್ವಾಭಾವಗಳ ಮುಖೇನ ಇತರರೊಂದಿಗೆ ವ್ಯವಹರಿಸಬಹುದಾದ ಸಂಗತಿಗಳನ್ನು ಸಾಕ್ಷೀಕರಿಸಿದವರು ಅವನ್ನೂ ದಾಖಲು ಮಾಡತೊಡಗಿರುವ ಸಾಧ್ಯತೆಗಳು ಉಂಟು. ಹಾಗೆಯೇ ಅಲ್ಪಪ್ರಮಾಣಗಳಲ್ಲಿ ಗುರುತಿಸಲ್ಪಟ್ಟ ಅಂತಹ ಗುಣಸ್ವಭಾವಗಳು ಮತ್ತಷ್ಟು ಶಕ್ತಿಶಾಲಿಯಾಗಲೆಂದು ಯಾಗ ಯಜ್ಞ, ಮಂತ್ರ-ತಂತ್ರಗಳ ಮೂಲಕ ಉದ್ದೀಪನಗೊಳಿಸುವ ಯತ್ನಗಳೂ ಕೂಡ ನಡೆಯತೊಡಗಿದವು.

ತಾಂತ್ರಿಕತೆಯಲ್ಲಿ ಶಕ್ತಿಯ ಉದ್ದೀಪನಕ್ಕೆ ಗಮನೀಯವಾದ ಸ್ಥಾನವಿದೆ. ಅಂತಹ ಸೈದ್ಧಾಂತಿಕ ವಿಚಾರಗಳಿಂದ ಮತ್ತು ತಾಂತ್ರಿಕ ಆಚರಣೆಗಳಿಂದ ಮುಂದೆ ಪುರೋಹಿತರು, ತಾವದನ್ನು ನಂಬಲಿ ಬಿಡಲಿ, ಇತರರ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಿದರು.

ಆಚಾರಗಳು ವಿಚಾರಗಳನ್ನು ಗೌರವಿಸುವ ಸಂಕೇತಗಳಾಗಿ ಮುಂದುವರಿದವು. ಹಾಗೂ ನಂಬುಗೆಗಳು ಪರಿಕಲ್ಪನೆಗಳನ್ನು ನಿಜವಾಗಿಸುವ ಪ್ರಯತ್ನಗಳು ಅಥವಾ ಗೌರವಿಸುವ ಸಂಕೇತಗಳು. ಹಾಗಾಗಿ ಸೌಜನ್ಯದ ನೆಲೆಯಿಂದ ಒಪ್ಪಿಕೊಂಡಂತಹ ಅನೇಕ ವಿಚಾರಗಳು ಇಂದು ಬೃಹದಾಕಾರವಾಗಿ ಬೆಳೆದು ಮೂಲ ಭಾವನೆಗಳನ್ನೇ ಕದಡಿಬಿಟ್ಟಿವೆ.

ಆರ್ಯ ಮತ್ತು ದ್ರಾವಿಡ ದೇವರುಗಳು

ಭಾರತದಲ್ಲಿ ದ್ರಾವಿಡರೇ ಮೊದಲಾದ ಮೂಲನಿವಾಸಿಗಳು ಪ್ರಕೃತಿಯ ಆರಾಧಕರಾಗಿದ್ದು, ನಿಸರ್ಗದ ಮಕ್ಕಳಾಗಿದ್ದ ಅರಣ್ಯಕರು ಮತ್ತು ರೈತರು ಶವಸಂಸ್ಕಾರವನ್ನು ಭೂಮಿಯಲ್ಲಿ ಮಾಡುತ್ತಿದ್ದರು. ಅವರ ಮೃತ ಹಿರಿಯರ ಅಥವಾ ಇತರರ ಮರಣಾನಂತರದ ಅತಿಭೌತಿಕ ಶಕ್ತಿಯನ್ನು ಕಲ್ಪಿಸಿಕೊಂಡವರು ತಮ್ಮ ಪಿತೃಗಳನ್ನು ಗೌರವಿಸುತ್ತಿದ್ದರು. ತಮ್ಮ ಮೇಲಿನ ಪ್ರೇಮ ಮತ್ತು ಅನುರಾಗ ಅಥವಾ ಸೆಳೆತದಿಂದಾಗಿ ಮೃತರು ದೈಹಿಕವಾಗಿ ದೂರಾದರೂ, ಭಾವನಾತ್ಮಕವಾಗಿ, ಮಾನಸಿಕವಾಗಿ, ಚೇತನಾರೂಪದಲ್ಲಿ ತಮ್ಮನ್ನು ಸಮೀಪಿಸುತ್ತಾರೆ ಅಥವಾ ತಮ್ಮೊಡನೆ ಇರುತ್ತಾರೆ ಎಂದು ನಂಬಲು ಭಾವನಾತ್ಮಕವಾದ ನಿಲುವೇ ಕಾರಣವಾಗಿತ್ತು.

ಹಾಗಾಗಿ ತಮ್ಮ ಪರಿಕಲ್ಪನೆಯ ದೈವಗಳಿಗೆ, ಶಕ್ತಿಗಳಿಗೆ ತಾವು ಕಂಡಿದ್ದ ಮೃತರ ಕೋಪ, ಒಲವು, ಆಸೆ, ಅಸೂಯೆ, ಅನುರಾಗ ಇತ್ಯಾದಿ ಗುಣಗಳನ್ನೂ ಆರೋಪಿಸುತ್ತಿದ್ದರು.

ದೇವರ ಬಗೆಗಿನ ದ್ರಾವಿಡರ ಮತ್ತು ಆರ್ಯರ ಎರಡೂ ಬಗೆಯ ಪರಿಕಲ್ಪನೆಗಳು ಸಂಸ್ಕೃತಿಗಳು ಮತ್ತು ಜೀವನ ಶೈಲಿಗಳು ವಿಲೀನವಾದ ರೀತಿಯಲ್ಲಿಯೇ ವಿಲೀನವಾಗಿ ಇಂದು ನಾವು ಕ್ರೋಧಾವಿಷ್ಟವಾಗಿ ಶಾಪ ಕೊಡುವ ದೇವರನ್ನೂ, ಸ್ತುತಿಗೆ ಒಲಿದು, ಒಲವಿಗೆ ಮಣಿದು ವರ ಕೊಡುವಂತಹ ದೇವರನ್ನೂ ಕಾಣುತ್ತಿದ್ದೇವೆ. ಆದರೆ ಆರ್ಯರ ಅಥವಾ ದ್ರಾವಿಡ ಪರಿಕಲ್ಪನೆಯ ದೇವರ ವಿಚಾರದಲ್ಲಿ ಗಮನಿಸುವಾಗ ಮೂಲದಲ್ಲಿ ಗೋಚರವಾಗುವುದು ಮಾನವಾತೀತವಾದ ‘ಚೈತನ್ಯ’ ಎಂಬ ಅರ್ಥೈಸುವಿಕೆ.

ಮಾನವಾತೀತವಾಗಿರುವ ಕಾರಣದಿಂದ ಮಾನವರೂಪಕ್ಕೆ ಇಳಿಯುವ ಸಾಧ್ಯತೆಯೂ ಕೂಡ ತೀರಾ ಸಹಜ. ಇರಲಿ, ಚೈತನ್ಯ ಎಂಬ ಅಂಶದ ಮುಖೇನ ನೋಡಿದರೆ, ದೇವರೆನ್ನುವ ಪರಿಕಲ್ಪನೆಯು ಶಾಪ ಕೊಡುವಷ್ಟು ಕ್ರೂರ ಕಲ್ಪನೆಯಿಂದಲೂ, ವರ ಕೊಡುವಷ್ಟು ಅಹಂಕಾರದ ಕಲ್ಪನೆಯಿಂದಲೂ ದೂರವಾಗುತ್ತದೆ. ವಾಸ್ತವವಾಗಿ ಅದು ಮನುಷ್ಯ ಸಹಜವಾದ ಮೋಹ, ಕ್ರೋಧಾದಿ ವಿಷಯಗಳಿಗೆ ಅತೀತವಾದ ನಿರ್ಮನಸ್ಸಿನ ಸ್ಥಿತಿ, ನಿರ್ಭಾವದ ಸ್ಥಿತಿಯಾದ ಪ್ರಕೃತಿಯ ಶಕ್ತಿಗೆ ತೆರೆದುಕೊಳ್ಳುತ್ತದೆ.
ಗಮನಿಸಿ, ಸೂರ್ಯನ ಬೆಳಕು ಪಸರಿಸುತ್ತದೆ. ಅದಕ್ಕೆ ಎಲ್ಲೆಲ್ಲಿ ಅವಕಾಶಗಳಿರುತ್ತದೆಯೋ ಅಲ್ಲೆಲ್ಲಾ ತನ್ನ ಕಿರಣಗಳನ್ನು ಬೀರುತ್ತದೆ.

ಅದಕ್ಕೆ ಇದು ಸುಂದರವಾದ ವಸ್ತು, ಇದನ್ನು ಚೆನ್ನಾಗಿ ಬೆಳಗಿಸಬೇಕೆಂದೋ ಅಥವಾ ಇದು ಕುರೂಪವಾದ ವಸ್ತು ಇದನ್ನು ಕಾಣಿಸುವುದು ಬೇಡವೆಂದೋ ಆಲೋಚನೆಗಳನ್ನು ಮಾಡದೇ ಅವಕಾಶಾನುಗುಣವಾಗಿ ತನ್ನ ಪ್ರಕಾಶವನ್ನು ಚೆಲ್ಲುತ್ತದೆ. ಹಾಗೆಯೇ ಮಳೆಯೂ ಕೂಡ ಸುಂದರವಾದ ಹೂಗಳನ್ನು ನೀಡುವ ಎಂದು ಹೂಗಿಡಗಳ ಮೇಲೆ ಮಾತ್ರ ಸುರಿದು, ಮುಳ್ಳುಗಳು ಇರುವಂತಹ ಗಿಡಗಳ ಮೇಲೆ ಸುರಿಯದೇ ಇರುವುದಿಲ್ಲ. ಅಂದರೆ, ಚೈತನ್ಯವೆನ್ನುವುದು ನಿಷ್ಪಕ್ಷಪಾತವಾದ, ನಿರ್ಭಾವುಕವಾದ, ನಿರ್ವ್ಯಾಮೋಹಿಯಾದ ಗುಣವೆನ್ನುವುದು ಸ್ಪಷ್ಟವಾಗುವುದು.

ಹಾಗಾದರೆ, ದೇವರೆಂಬ ಶಕ್ತಿ, ಚೈತನ್ಯಕ್ಕೆ ಶಾಪ ಕೊಡುವ, ವರ ಕೊಡುವ, ಮುನಿಯುವ, ಒಲಿಯುವ, ನಲಿಯುವ ಗುಣಗಳು ಹೇಗೆ ಬಂತೆಂದು ಮೇಲೆ ವಿಚಾರ ಮಾಡಿದ ರೀತಿಯನ್ನು ಗಮನಿಸಿದರೆ ತಿಳಿಯುವುದು.

ದೇವರು ಎಂದು ಹಿಂದೂ ಧರ್ಮದಲ್ಲಿ ಯಾರನ್ನೆಲ್ಲಾ ಕರೆಯುವರೋ ಹಾಗೆ ಹಿಂದೆ ವೈದಿಕರಲ್ಲೇ ಕರೆಯುತ್ತಿರಲಿಲ್ಲ. ಅವರ ದೇವರುಗಳೇ ಬೇರೆ ಇದ್ದರು. ಹಾಗೆಯೇ ಯಹೂದಿ, ಕ್ರೈಸ್ತ, ಇಸ್ಲಾಂ ರೀತಿಯ ಏಕದೇವೋಪಾಸನೆಯ ದೇವರು ಹಿಂದೂ ಧರ್ಮದ ದೇವರುಗಳ ರೀತಿಯಲ್ಲ. ಹಾಗಾಗಿ ಹಿಂದೂ ಧರ್ಮದಲ್ಲಿ ದೇವರುಗಳ ಕುರಿತಾಗಿ ಹಲವಾರು ಪೌರಾಣಿಕ ಕತೆಗಳಿರುತ್ತವೆ. ಆದರೆ ದೇವರನ್ನು ಮಾನವ ರೂಪದಲ್ಲಿ ನೋಡದ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಂತಹ ಏಕ ದೇವೋಪಾಸನೆಯ ಧರ್ಮಗಳಲ್ಲಿ ದೇವರಿಗೆ ಮಡದಿ ಮಕ್ಕಳು ಸಂಸಾರಗಳು ಇರುವುದಿಲ್ಲ.

ಅವರಲ್ಲಿ ಮಿಥ್ ಇಲ್ಲವೆಂದೇನಿಲ್ಲ. ಅಗಾಧವಾಗಿಯೇ ಇವೆ. ಆದರೆ ಈ ಮಾದರಿಯದಲ್ಲ. ಯೆಹೂದರ ದೇವರಿಗೂ ಹಿಂದೂ ಧರ್ಮದ ದೇವರಿಗೆ ಬಂದಂತೆ ಕೋಪ ಬರುತ್ತದೆ, ಖುಷಿಯಾಗುತ್ತದೆ. ಆದರೆ ಹೆಂಡತಿ ಮಕ್ಕಳು ಇರುವುದಿಲ್ಲ ಅಷ್ಟೇ. ದೇವರ ಪ್ರೊಜೆಕ್ಷನ್ ಬೇರೆ ರೀತಿಯದ್ದಾಗಿರುತ್ತದೆ. ಏನೇ ಆಗಲಿ, ಧರ್ಮವನ್ನು ತಿಳಿಯಬೇಕಾದರೆ ದೇವರ ಉಗಮದ ಬಗ್ಗೆ ಕಿಂಚಿತ್ತು ಪರಿಚಯ ಇರಬೇಕು.

(ಮುಂದುವರಿಯುತ್ತದೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version