Connect with us

ದಿನದ ಸುದ್ದಿ

ಕೊರೋನಾ ತಂದಿದೆ ಆಪತ್ತು; ತಲ್ಲಣಗೊಂಡಿದೆ ಮಕ್ಕಳ ಜಗತ್ತು..!

Published

on

ಹೋಯ್ತಾ ಕೊರೋನಾ..? ಶಾಲೆಗೆ ಹೊರಡೋಣ..?

  • ವಿ.ಕೆ.ಕುಮಾರಸ್ವಾಮಿ, ಶಿಕ್ಷಕರು, ರಾಮನಗರ

ಮ್ಮಾ ನನ್ ಲಂಚ್ ಬಾಕ್ಸ್ ಎಲ್ಲಿ? ನನ್ ಡ್ರಾಯಿಂಗ್ ಬುಕ್ ಎಲ್ಲೋಯ್ತು? ಅಯ್ಯೋ ಲೇಟ್ ಆಯ್ತು, ವ್ಯಾನ್ ಬಂದೇಬಿಡ್ತು ಅಮ್ಮಾ, ಲೇ ಪುಟ್ಟಾ ನೆನ್ನೆ ಮಿಸ್ಸು ಕನ್ನಡ ಹೋಮ್‍ವರ್ಕ್ ಕೊಟ್ಟಿದ್ರಲ್ಲಾ ಅದನ್ನ ಕಂಪ್ಲೀಟ್ ಮಾಡಿದ್ಯೇನೋ? ಲೋ ಸಾಗರ್ ಬಿಡೋ ಇವತ್ತು ಫಸ್ಟ್ ಪೀರಿಯಡ್ ಪಿ.ಟಿ ಇದೆ, ಚೆನ್ನಾಗಿ ಆಟ ಆಡೋಣ ಆಮೇಲೆ ಮಿಕ್ಕಿದ್ದು ನೋಡ್ಕಳಣ! ಅಬ್ಬಾ! ಮಕ್ಕಳ ಲೋಕ ಅದೆಷ್ಟು ಚೆಂದ ಅಲ್ವಾ. ಹೀಗಿದ್ದ ಮಕ್ಕಳ ಆಟ ಪಾಠಗಳ ತುಂಟಾಟಕ್ಕೆ ಇಂದು ಕೊರೋನಾ ಹೆಮ್ಮಾರಿ ಬ್ರೇಕ್ ಹಾಕಿರುವುದು ವಿಷಾದನೀಯ.

ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಮಕ್ಕಳ ಮನದ ತುಂಬಾ ಮೋಡ ಕವಿದ ವಾತಾವರಣ ಆವರಿಸಿದ್ದು ಖಿನ್ನತೆ, ಮಾನಸಿಕ ಅಸಮತೋಲನ, ವರ್ತನೆಯಲ್ಲಿ ಬದಲಾವಣೆ, ಮೊಬೈಲ್ ಗೀಳು ಹೆಚ್ಚಾಗಿ ಅವರ ಬದುಕು ಬಿರುಗಾಳಿಗೆ ಸಿಕ್ಕ ನಾವೆಯಂತೆ ಉಯಿಲಾಡುತ್ತಿದೆ. ಈ ಬಗ್ಗೆ ಇಲ್ಲೊಂದು ಅವಲೋಕನ..

ಹಿರಿದಾಗುತ್ತಿದೆ ಶೈಕ್ಷಣಿಕ ಅಂತರ

ಪ್ರಸ್ತುತ ಸಂದರ್ಭದಲ್ಲಿ ಇಡೀ ಶೈಕ್ಷಣಿಕ ಚಟುವಟಿಕೆಗಳು ನಿಂತುಹೋಗಿದ್ದು, ಕಳೆದ ಮೂರು ತಿಂಗಳಿಂದ ಮಕ್ಕಳ ಕಲಿಕೆಯ ಅಂತರ ಹಿರಿದಾಗುತ್ತಿದೆ. ಈಗಾಗಲೇ ಕೊರೋನಾ ಎಂಬ ವಿಷ ಕ್ರಿಮಿ ತನ್ನ ಬಾಹುಗಳನ್ನು ವಿಸ್ತಾರವಾಗಿ ಚಾಚುತ್ತಿರುವುದರಿಂದ, ಮಕ್ಕಳ ಸುರಕ್ಷತೆಯೊಂದಿಗೆ ಶಾಲೆಗಳ ಆರಂಭ ಅಷ್ಟು ಸುಲಭದ ಮಾತಲ್ಲ. ಈ ಸಂಬಂಧ ಸರ್ಕಾರ ಅಥವಾ ಪೋಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅದು ಮಕ್ಕಳ ಮೇಲೆ ನೇರ ಶಿಕ್ಷಣ ಪದ್ಧತಿಯಷ್ಟು ತೀವ್ರ ಪರಿಣಾಮ ಬೀರದಿರುವುದು ಆತಂಕದ ಸಂಗತಿಯಾಗಿದೆ.

ಬಹುತೇಕ ಇಂದಿನ ಮಕ್ಕಳಲ್ಲಿ ಕಾಡುತ್ತಿರುವ ತಾತ್ಕಾಲಿಕ ನೆನಪಿನ ಶಕ್ತಿಯ ಪರಿಣಾಮವಾಗಿ, ಮಕ್ಕಳನ್ನು ಈ ಮೊದಲಿನ ಸಹಜ ಸ್ಥಿತಿಗೆ ತರುವುದು ತೀರಾ ಪ್ರಾಯಾಸದ ಕೆಲಸವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ದುಸ್ತರವಾಗುತ್ತಿದ್ದು, ಇದು ಶೈಕ್ಷಣಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಕೊರೋನಾ ಹೋಯ್ತಾ? ಶಾಲೆಗೆ ಆರಂಭವಾಯ್ತಾ? ಎಂಬುದು ಇಂದು ಏನೂ ಅರಿಯದ ಮುಗ್ಧ ಮಕ್ಕಳನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಹೀಗೆ ಕೊರೋನಾ ಮಧ್ಯದಲ್ಲಿ ಅಡಕತ್ತರಿಗೆ ಸಿಕ್ಕಂತಾಗಿರುವ ಮಕ್ಕಳ ಬದುಕು ನಿಜಕ್ಕೂ ತಲ್ಲಣಗೊಂಡಿದೆ.

ಸಾಮಾಜೀಕರಣಕ್ಕೆ ಬ್ರೇಕ್

ಮಕ್ಕಳನ್ನು ಸಾಮಾಜೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಕುಟುಂಬದಷ್ಟೇ, ಶಾಲೆ, ನೆರೆಹೊರೆ ಹಾಗೂ ಸಮಕಾಲೀನ ವಯೋಮಾನದವರ ಪಾತ್ರವೂ ಸಹ ಹಿರಿದಾಗಿದೆ. ಆದರೆ ಕೊರೋನಾ ವಿಷ ಪೀಡೆ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿರುವುದರಿಂದ, ಅವರು ಮನೆಯಿಂದ ಹೊರಗೆ ಬಾರದಂತಾಗಿ ಖಿನ್ನತೆ ಹೆಚ್ಚಾಗುತ್ತಿದೆ.

ಇದರಿಂದ ಅವರಲ್ಲಿ ವಯೋ ಸಹಜ ಮಾನಸಿಕ ಬೆಳವಣಿಗೆ ಕ್ಷೀಣಿಸುತ್ತಿದ್ದು, ವರ್ತನೆಯಲ್ಲಿ ವಿಭಿನ್ನ ಬದಲಾವಣೆಗಳು ಕಂಡು ಬರುತ್ತಿದೆ. ನಿತ್ಯವೂ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮಕ್ಕಳ ಲೋಕ ಇಂದು ಮಂಕಾಗುತ್ತಿದೆ. ಹೀಗಾಗಿ ಸಾಮಾಜೀಕರಣ ಪ್ರಕ್ರಿಯೆ ತಡವಾಗುವುದರ ಜೊತೆಗೆ, ಅವರ ಭವಿಷ್ಯವೂ ಸಹ ಡೋಲಾಯಮಾನವಾಗುತ್ತಿದೆ.

ಮೊಬೈಲ್ ಬಳಕೆಯಿಂದ ಆಪತ್ತು

ಮನೆಯಲ್ಲೇ ಉಳಿದುಕೊಂಡಿರುವ ಕೋಟ್ಯಂತರ ಮಕ್ಕಳು ಇಂದು ಕಾಲ ಕಳೆಯಲೆಂದೋ ಅಥವಾ ಆನ್‍ಲೈನ್ ತರಗತಿಗಳಿಗೆಂದೋ ಮೊಬೈಲ್ ಮೊರೆ ಹೋಗಿದ್ದಾರೆ. ಆದರೆ ಭಾರತದಲ್ಲಿನ ಬಹುಪಾಲು ಪೋಷಕರ ಅನಕ್ಷರತೆ ಸಮಸ್ಯೆಯಿಂದಾಗಿ ತಮ್ಮ ಮಕ್ಕಳು ಮೊಬೈಲ್‍ನ್ನು ಸರಿಯಾದ ಉದ್ದೇಶಕ್ಕೆ ಬಳಸುತ್ತಿದ್ದಾರೆಯೇ ಎಂಬುದನ್ನು ತಿಳಿಯುವುದರಲ್ಲಿ ವಿಫಲತೆ ಎದುರಾಗಿದೆ.

ಇದರಿಂದ ಮಕ್ಕಳ ಮೇಲಿನ ಹಿಡಿತ ತಪ್ಪಿ, ಅವರ ಮನಸ್ಸು ವ್ಯಗ್ರವಾಗಿ ವಿವಿಧ ಸೈಬರ್ ಕ್ರೈಮ್‍ಗಳತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ ಪ್ರತಿದಿನ ಗೇಮ್ ಆಡಲು, ಚಾಟ್ ಮಾಡಲು ಇನ್ನಿತರ ಉದ್ದೇಶಗಳಿಗಾಗಿ ದೀರ್ಘಾವಧಿಯವರೆಗೆ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಇದು ತೊಡಕಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳ ಮೇಲೆ ಆಘಾತಕಾರಿ ಪರಿಣಾಮಗಳು ಸೃಷ್ಟಿಯಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.

ಮೌಲ್ಯಗಳ ಕುಸಿತ

ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬಹುತೇಕ ಇಂದಿನ ಡಿಜಿಟಲ್ ಯುಗದ ಮಕ್ಕಳು ಪೋಷಕರ ಮಾತಿಗೆ ಮನ್ನಣೆ ನೀಡುವುದು ಕಡಿಮೆಯೇ. ಮನೆಯಲ್ಲೇ ಉಳಿದ ಮಕ್ಕಳ ಮನಸ್ಸು ದಿಕ್ಕು ತಪ್ಪಿದಂತಾಗಿ, ಅವರಲ್ಲಿ ತೀವ್ರತರ ಮಾನಸಿಕ ಅಸಮತೋಲನ ಉಂಟಾಗುತ್ತಿದೆ. ಇದರಿಂದ ಪೋಷಕರು ಮಕ್ಕಳಿಗೆ ಏನು ಹೇಳಿದರೂ ಅದು ತಪ್ಪೇ ಎಂಬಂತಾಗುತ್ತಿದೆ.

ಸುಮಾರು ಮಕ್ಕಳು ತಮ್ಮ ಪೋಷಕರ ವಿರುದ್ಧ ವಾಗ್ವಾದಕ್ಕೆ ಇಳಿಯುತ್ತಿರುವುದು, ಆತ್ಮಹತ್ಯೆ ಬೆದರಿಕೆಗಳನ್ನು ಒಡ್ಡುತ್ತಿರುವುದು, ತಮ್ಮ ವಯೋಮನಕ್ಕೆ ಮೀರಿದ ಭಾಷೆಯ ಬಳಕೆ, ಮಾನಸಿಕ ಸಂಘರ್ಷಗಳು, ಮಾನಸಿಕ ಕ್ಷೋಭೆ, ಇವುಗಳಿಂದಾಗಿ ಮಕ್ಕಳಲ್ಲಿರಬೇಕಾದ ನಿರೀಕ್ಷಿತ ಮೌಲ್ಯಗಳು ಕ್ಷೀಣಿಸುತ್ತಿವೆ. ಅತಿಯಾದ ಟಿ.ವಿ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಅತ್ಯಂತ ಕ್ಷಿಷ್ಟಕರವಾಗುತ್ತಿದೆ. ಇವಿಷ್ಟೇ ಅಲ್ಲದೆ ಪೌಷ್ಟಿಕಾಂಶಗಳ ಕೊರತೆ, ಕೌಟುಂಬಿಕ ದೌರ್ಜನ್ಯಗಳು, ಬಲವಂತದ ದುಡಿಮೆ, ಮುಂತಾದ ಸಮಸ್ಯೆಗಳು ಮಕ್ಕಳಲ್ಲಿ ತಲೆದೋರುತ್ತಿದೆ.

-ವಿ.ಕೆ.ಕುಮಾರಸ್ವಾಮಿ,
ಬರಹಗಾರ, ಶಿಕ್ಷಕರು,
ವಿರುಪಾಪುರ, ಸುಗ್ಗನಹಳ್ಳಿ ಅಂಚೆ,
ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ – 561101
ಮೊ: 9113906120, 9740840678 (ವಾಟ್ಸಪ್)
ಇ ಮೇಲ್ : kumarvirupapura@gmail.com

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾಮಾಜಿಕ ಸುಧಾರಣೆಗೆ ಡಾ. ಬಾಬು ಜಗಜೀವನ್‍ರಾಂ ಕೊಡುಗೆ ಅಪಾರ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ:ಡಾ.ಬಾಬು ಜಗಜೀವನರಾಂ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಬಣ್ಣಿಸಿದರು.

ಶನಿವಾರ (ಏ.5) ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಹಾನಗರಪಾಲಿಕೆಯ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಡಾ. ಬಾಬು ಜಗಜೀವನ್ ರಾಂ ಅವರ 118ನೇ ಜಯಂತಿ ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಡಾ.ಬಾಬು ಜಗಜೀವನ ರಾಂ ಅವರು 8 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಸಂಪನ್ನ ರಾಜಕಾರಣಿ ಜಗಜೀವನ ರಾಂ. ಕೇಂದ್ರ ಸರ್ಕಾರದಲ್ಲಿ ಹಲವಾರು ಮಹತ್ತರ ಇಲಾಖೆಗಳ ನಿರ್ವಹಣೆಯನ್ನು ಮಾಡಿದ ಏಕೈಕ ರಾಜಕಾರಣಿ ಎಂದು ಹೇಳಿದರು.

ಪುಟ್ಟ ಬಾಲಕನಾಗಿರುವಾಗಲೇ ದೊಡ್ಡ ದೊಡ್ಡ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಂತ ಹಂತವಾಗಿ ಬೆಳೆದು. ಅಂದಿನ ಕಾಲದಲ್ಲಿಯೇ ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಹೋರಾಟ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಇವರ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ, ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು.

ಸ್ವಾತಂತ್ರ್ಯ ನಂತರ ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದರು.

ಹಸಿರುಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಳ, ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಅಲ್ಲದೇ ಇನ್ನೂ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅಂತಹ ಮಹಾನ್ ನಾಯಕರ ಜಯಂತಿಯ ಮೂಲಕ ಅವರ ಆದರ್ಶವನ್ನು ನಾವೆಲ್ಲಾ ಪಾಲಿಸಬೇಕು. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದರು.

ಇದಕ್ಕೂ ಮುನ್ನ ಮಹಾನಗರಪಾಲಿಕೆ ಆವರಣದ ಉದ್ಯಾನದಲ್ಲಿರುವ ಡಾ.ಬಾಬು ಜಗಜೀವನ ರಾಮ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಪಿ.ಬಿ.ರಸ್ತೆಯಲ್ಲಿರುವ ಗಾಂಧಿ ಸರ್ಕಲ್‍ನಿಂದ ಮೆರವಣೆಗೆ ಸಾಗಿ ಮಹಾನಗರಪಾಲಿಕೆ ಬಂದು ಸೇರಿತು.

ಈ ವೇಳೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅವರು ಸಂವಿಧಾನ ಪೀಠಿಕೆಯನ್ನು ಓದಿದರು. ಪ್ರತಿಭಾ ಪುರಸ್ಕಾರ: 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವರುಣ್, ಶೃತಿ, ಸೃಷ್ಠಿ, ಅರ್ಪಿತ, ಲಕ್ಷ್ಮೀ, ಹರ್ಷಧಾರೆ ಇವರಿಗೆ ಸನ್ಮಾನಿಸಲಾಯಿತು.

ನಿವೃತ್ತ ಪ್ರಾಧ್ಯಾಪಕ ರಾಮಚಂದ್ರಪ್ಪ ಎ.ವಿ ಮಾತನಾಡಿ ದೇಶದಲ್ಲಿ ಕೃಷಿಯೇ ಅಭಿವೃದ್ಧಿಯ ಮೂಲಾಧಾರವಾಗಿದೆ. ಈ ದೃಷ್ಟಿಯಿಂದ ದೇಶದ ಭೀಕರ ಬರಗಾಲ, ಕ್ಷಾಮದ ಪರಿಸ್ಥಿತಿಯಲ್ಲಿ ಕೈಗೊಂಡ ಕ್ರಮಗಳು ದೇಶದ ಅಹಾರ ಕೊರತೆಯನ್ನು ನೀಗಿಸಿ ಸುಸ್ಥಿರ ಅಭಿವೃದ್ಧಿಗೆ ಸಹಾಯಕಾರಿಯಾಯಿತು ಎಂದರು.

ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಸುರೇಶ್.ಬಿ.ಇಟ್ನಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ದೂಡಾ ಆಯುಕ್ತರಾದ ಹುಲ್ಲುಮನಿ ತಿಮ್ಮಣ್ಣ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರವಿನಾರಾಯಣ ಮತ್ತು ರುದ್ರಮುನಿ, ದಲಿತ ಸಮಾಜದ ಮುಖಂಡರಾದ ಮಲ್ಲೇಶ್, ಹನುಮಂತಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೇ11 ರಂದು ಗ್ರಾಮ ಪಂಚಾಯತಿ ಚುನಾವಣೆ

Published

on

ಸುದ್ದಿದಿನಡೆಸ್ಕ್:ವಿವಿಧ ಕಾರಣಗಳಿಂದ ತೆರವಾಗಿರುವ, ರಾಜ್ಯದ 133 ತಾಲೂಕುಗಳ, 222 ಗ್ರಾಮ ಪಂಚಾಯಿತಿಗಳ, ೨೬೦ ಸದಸ್ಯ ಸ್ಥಾನಗಳಿಗೆ, ಮೇ 11 ರಂದು ಚುನಾವಣೆ ನಿಗದಿಯಾಗಿದೆ ಎಂದು, ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಇದೇ 22 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿ.ಆರ್.ಡಬ್ಲ್ಯೂ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 45 ವರ್ಷ ಒಳಗಿನ ವಯೋಮಾನದವರಾಗಿದ್ದು ಮಾಸಿಕ ರೂ.9,000/-ಗಳ ಗೌರವಧನ ಆಧಾರದ ಮೇಲೆ ಕೆಲಸ ಮಾಡಲು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಹಾಗೂ ಕಂಪ್ಯೂಟರ್ ಜ್ಞಾನವುಳ್ಳರಾಗಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯದಿನವಾಗಿರುತ್ತದೆದಾವಣಗೆರೆ ತಾಲ್ಲೂಕು ಹಳೇಬಾತಿ, ಆಲೂರಟ್ಟಿ, ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮ ಪಂಚಾಯಿತಿಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ವ್ಯಾಪ್ತಿಯಲ್ಲಿ ವಾಸವಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಅರ್ಜಿ ಹಾಗೂ ಇತರೆ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಛೇರಿ, ದೇವರಾಜ್ ಅರಸ್ ಬಡಾವಣೆ, ‘ಬಿ’ ಬ್ಲಾಕ್, ಶಿವಾಲಿ ಟಾಕೀಸ್ ಹತ್ತಿರ, ದಾವಣಗೆರೆ ದೂರವಾಣಿ:08192-263939 ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ದಾವಣಗೆರೆ ಮೊ:9590829024 ಮತ್ತು ಚನ್ನಗಿರಿ ತಾಲ್ಲೂಕು ಮೊ:9945738141, ಹರಿಹರ ತಾಲ್ಲೂಕು ಮೊ:9945458058 ಇವರನ್ನು ಸಂಪರ್ಕಿಸಬೇಕೆಂದು ಕಲ್ಯಾಣಾಧಿಕಾರಿ ಡಾ.ಕೆ.ಕೆ ಪ್ರಕಾಶ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending