ಅಂತರಂಗ

ಧರ್ಮ ಮರ್ಮ – 05 : ಕ್ರಿಸ್ತ ಮತ್ತು ಬಸವಣ್ಣ ಧಾರ್ಮಿಕ ಪುರಾಣ

Published

on

Art: Klaus fabry
  • ಯೋಗೇಶ್ ಮಾಸ್ಟರ್

ಬಾಗೇವಾಡಿಯ ಬಸವೇಶ್ವರನ (ನಂದಿ) ದೇವಸ್ಥಾನಕ್ಕೆ ಹೋದರೆ ಬಸವಣ್ಣನವರ ತಾಯಿ ಇದೇ ಬಸವನ ಪೂಜೆ ಮಾಡಿ ಶಿಶು ಭಾಗ್ಯ ಪಡೆದರೆಂದು ಹೇಳುತ್ತಾ ಕೋಡುಳ್ಳ ನಂದಿಯ ವಿಗ್ರಹವನ್ನು ತೋರುತ್ತಾರೆ. ಅದಕ್ಕೆ ಅಲ್ಲಿ ಬಹಳ ಮಾನ್ಯತೆಯೂ ಇದೆ.

ಶಿವಗಣದಲ್ಲಿ ಒಬ್ಬನಾದ ಸಾಕ್ಷಾತ್ ನಂದಿಯೇ ತಾಯಿ ಮಾದಲಾಂಬಿಕೆಯ ಗರ್ಭವನ್ನು ಸೇರಿ ಬಸವಣ್ಣನಾಗಿ ಜನ್ಮತಾಳಿದ ಎಂದು ಹೇಳುವಂತಹ ಮಿಥಿಕವನ್ನು ನಮ್ಮಲ್ಲಿ ಕಟ್ಟಿದ್ದಾರೆ. ಯಾವ ಅವೈಚಾರಿಕವಾದ ಡೋಂಗಿ ಪುರಾಣಗಳನ್ನು ಗುಡಿಸಿ ಹಾಕಿ ಜನತೆಯನ್ನು ಪ್ರಜ್ಞಾವಂತರನ್ನಾಗಿ ಮಾಡಲು ಜೀವನವೆಲ್ಲಾ ಹೆಣಗಿ ಮರಣಿಸಿದ ಬಸವಣ್ಣನಿಗೆ ಸಂದ ಗೌರವವಿದು.

ಅಂದು ಕಲ್ಯಾಣ ಕ್ರಾಂತಿಯಲ್ಲಿ ಶರಣರ ಕಗ್ಗೊಲೆಗಳು ನಡೆಯುವಾಗ ಸಂಪ್ರದಾಯವಾದಿಗಳ ಮಾರಣ ಘಾತಗಳಿಂದ ಶರಣರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಎತ್ತೆತ್ತಲೋ ವಲಸೆ ಹೋಗಬೇಕಾಯ್ತು. ತಲೆ ಮರೆಯಿಸಿಕೊಳ್ಳಬೇಕಾಯ್ತು. ನಂತರ ನಿಧಾನವಾಗಿ ತಮ್ಮ ಅಸ್ತಿತ್ವವನ್ನು ಮರುಸ್ಥಾಪಿಸಲು ಬಸವನ ಅನಾವರಣ ಮಾಡಲು, ಜನರ ನಡುವೆ ಬಸವನ ಬಗ್ಗೆ ಸದಭಿಮಾನವನ್ನು ಮೂಡಿಸಲು ಬಸವನ ಅಭಿಮಾನಿಗಳು ಪ್ರಯತ್ನಿಸುವಾಗ ಅದೇ ಹಳೆಯ ಪುರಾಣದ ತಂತ್ರಗಳನ್ನೂ ಬಳಸಲಾರಂಭಿಸಿದರು.

ಕ್ರಿಸ್ತ ಮತ್ತು ಬಸವರ ಕ್ರಾಂತಿ

ಕ್ರಿಸ್ತ ಮತ್ತು ಬಸವಣ್ಣ, ಇವರಿಬ್ಬರ ಸಾವು ಧರ್ಮ ಸ್ಥಾಪನೆಗೆ ನಾಂದಿಯಾಯ್ತು. ಇಬ್ಬರಲ್ಲೂ ಅನೇಕ ಸಾಮ್ಯತೆಗಳಿವೆ. ಕ್ರಿಸ್ತನ ಸಾವಿನ ನಂತರ ಅವನ ಅಭಿಮಾನಿ ಶಿಷ್ಯರು, ಅನುಯಾಯಿಗಳು ಹಾಗೂ ಬಸವನ ಸಾವಿನ ನಂತರ ಶರಣರು ಪಟ್ಟ ಪಾಡುಗಳಲ್ಲಿ ಸಾಮ್ಯತೆ ಇದೆ. ಅಷ್ಟೇ ಅಲ್ಲ.

ಯೆಹೂದಿಗಳ ಸಾಂಪ್ರದಾಯಕ ಅವೈಚಾರಿಕ ವಿಚಾರಗಳಿಗೆ ಮರುವ್ಯಾಖ್ಯಾನ ಮಾಡುತ್ತಾ, ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು ಕ್ರಿಸ್ತ ಯತ್ನಿಸಿದರೆ, ಬಸವ ಇಲ್ಲಿ ವೈದಿಕರ ಜಡ್ಡುಗಟ್ಟಿದ ಸಾಂಪ್ರದಾಯಿಕತೆಯ ನಿರರ್ಥಕತೆಗಳನ್ನು ಬಯಲಿಗೆ ತಂದು ಸಮಸಮಾಜದ ನಿರ್ಮಾಣಕ್ಕೆ, ವ್ಯಕ್ತಿಗತ ಜಾಗೃತಿಯ ಬಗ್ಗೆ ಪ್ರಜಾಸತ್ತಾತ್ಮಕವಾದ ಆಧ್ಯಾತ್ಮಿಕತೆ, ಧಾರ್ಮಿಕತೆಯನ್ನು ಪ್ರತಿಷ್ಠಾಪಿಸಲು ಚಳವಳಿ ಹೂಡಿದ.

ಈ ಇಬ್ಬರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಉದ್ದೇಶ ಒಂದೇ ಆಗಿದ್ದರೂ ಕೆಲವು ಸಾಮಾಜಿಕ ಸ್ಥಾನಮಾನದ ವಿಷಯದಲ್ಲಿ, ಸಾಮಾಜಿಕ ಚಟುವಟಿಕೆಯಲ್ಲಿ ವ್ಯತ್ಯಾಸಗಳು ಕಾಣುತ್ತವೆ. ಬಸವಣ್ಣ ಕ್ರಿಸ್ತನಂತೆ ಬಡವರೇನಾಗಿರಲಿಲ್ಲ. ಕ್ರಿಸ್ತನಿಗೆ ಸಮಾಜದಲ್ಲಿ ಪ್ರಭುತ್ವದ ಆಶ್ರಯವಿರುವಂತಹ ಯಾವ ಅಧಿಕಾರ ಇರಲಿಲ್ಲ. ಬಸವಣ್ಣನಿಗೆ ರಾಜ ಬಿಜ್ಜಳನು ಗೆಳೆಯನಾಗಿದ್ದ. ಬಸವಣ್ಣನ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳಿಗೆ ಬಿಜ್ಜಳನ ನೇರ ಕೊಡುಗೆ ಏನೂ ಇರದಿದ್ದರೂ, ಬಸವನಿಗಿದ್ದ ಅವನ ಗೆಳೆತನದ ಸಕಾರಾತ್ಮಕ ಪ್ರಭಾವವನ್ನು ಅಲ್ಲಗೆಳೆಯಲಾಗದು.

ನಿತ್ಯ ಅನ್ನದಾಸೋಹ ಮಾಡುತ್ತಿದ್ದ ಬಸವನ ಮಹಾಮನೆ ಕ್ರಿಸ್ತನಿಗಿರಲಿಲ್ಲ. ಆದರೆ ಕ್ರಿಸ್ತನೂ ಬಸವನಂತೆ ಅರಿವನ್ನೂ, ಆಹಾರವನ್ನೂ ಹಂಚಿಕೊಳ್ಳಲು ತನ್ನದೇ ರೀತಿಯಲ್ಲಿ ಕಾರ್ಯತತ್ಪರನಾಗಿದ್ದ. ಹಂಚಿಕೊಂಡು ಉಣ್ಣುವುದರಲ್ಲಿ ಬಸವನಂತೆಯೇ ಪ್ರಾಮುಖ್ಯತೆ ಕೊಟ್ಟಿದ್ದ. ಮುಂದೆ ಕ್ರಿಸ್ತನಿಗೂ ಮತ್ತು ಬಸವಣ್ಣನಿಗೂ ರಾಜದ್ರೋಹದ ಆಪಾದನೆಯನ್ನೇ ಮಾಡಿದರು. ಕ್ರಿಸ್ತನ ಶಿಲುಬೆಗೇರಿಸಿದರು. ಬಸವನ ಗಡಿಪಾರು ಮಾಡಿ ಕೊಂದರು. ಬಸವ ನೇರ ರಾಜಾಸ್ಥಾನದ ಸದಸ್ಯ ಮತ್ತು ಅಧಿಕಾರಿಯಾಗಿದ್ದರಿಂದ ರಾಜಕೀಯ ದ್ರೋಹದ ಆಪಾದನೆಗಳನ್ನೂ ಕೂಡ ಹೊರಿಸಿದರು, ರಾಜನನ್ನು ಕೊಂದರು, ಅದನ್ನು ಶರಣರ ತಲೆಗೆ ಕಟ್ಟಿದರು.

ಇನ್ನು ಶರಣರನ್ನು ಬೇಟೆಯಾಡ ತೊಡಗಿದಾಗ ಅವರು ನಿರ್ವಾಹವಿಲ್ಲದೇ ತಲೆ ಮರೆಸಿಕೊಂಡು ತಪ್ಪಿಸಿಕೊಳ್ಳಬೇಕಾಯ್ತು. ಅದೇ ರೀತಿ ಕ್ರಿಸ್ತನ ಅನುಯಾಯಿಗಳು ಕೂಡ ತಲೆ ಮರೆಯಿಸಿಕೊಂಡು ತಮ್ಮ ಕ್ರಿಸ್ತ ಧರ್ಮದ ಸಾರ ಸಿದ್ಧಾಂತಗಳನ್ನು ಗಟ್ಟಿಗೊಳಿಸಿಕೊಳ್ಳಲು ರಹಸ್ಯವಾಗಿ ಧರ್ಮಸಭೆಗಳನ್ನು ಸೇರಿಸಬೇಕಿತ್ತು.

ಪುನರುತ್ಥಾನಕ್ಕಾಗಿ ಮಿಥಿಕ

ಕ್ರಿಸ್ತಾನುಯಾಯಿಗಳೂ ಮತ್ತು ಬಸವಾನುಯಾಯಿಗಳೂ ಮಾಡಿದ ಎಡವಟ್ಟೆಂದರೆ ತಮ್ಮ ತಮ್ಮ ಅಭಿಮಾನದ ಆಧ್ಯಾತ್ಮಿಕ ನಾಯಕರಿಗೆ ಪವಾಡಗಳ ಮುಸುಕನ್ನು ಹಾಕಿ ಅವರವರ ಸತ್ಯತೆಗಳನ್ನು, ನಿಜ ಸ್ವರೂಪವನ್ನು ಮಂಕುಗೊಳಿಸಿದ್ದು. ಆದರೆ ಅವರನ್ನು ಮೂರ್ಖರೆಂದೋ, ಕುಯುಕ್ತಿಯ ತಂತ್ರಗಾರರೆಂದೋ ಕರೆಯಲಾರೆ.

ತಮ್ಮ ಅಸ್ತಿತ್ವವನ್ನು ಪುನರ್ಸ್ಥಾಪಿಸಲು ಆಗಿನ ಜನ ಸಾಮಾನ್ಯರ ನಡುವೆ ತಮ್ಮ ನಾಯಕರ ಬಗ್ಗೆ ಶ್ರದ್ಧೆ ಮತ್ತು ಭಕ್ತಿಯನ್ನು ಉಂಟುಮಾಡಲು, ಆಗ ವಾಡಿಕೆಯಲ್ಲಿದ್ದ ಮಿಥಿಕಗಳನ್ನು ಕಟ್ಟುವ ತಂತ್ರವನ್ನೇ ಉಪಯೋಗಿಸಿದರು. ಅದೇ ಕೈಲಾಸ ಒಡ್ಡೋಲಗ, ದೇವರ ಶಾಪ ಅಥವಾ ಅಣತಿಯಂತೆ ಭೂಲೋಕಕ್ಕಿಳಿಯುವುದು, ಸತ್ತವರನ್ನು ಬದುಕಿಸುವುದು, ಜನ ಸಾಮಾನ್ಯರು ಮಾಡಲಾಗದಂತಹ ಅದ್ಭುತಗಳನ್ನು ಸೃಷ್ಟಿಸುವುದು ಇತ್ಯಾದಿ. ಆದರೆ ನಂತರವೂ ಅದೇ ಉಳಿದುಕೊಂಡಿದ್ದು ಮಾತ್ರ ವಿಪರ್ಯಾಸ.

ಕ್ರಿಸ್ತನಾಗಲಿ, ಬಸವಣ್ಣನಾಗಲಿ ಎಂದಿಗೂ ಒಪ್ಪದಿರುವಂತಹ ತೀರಾ ಅವೈಚಾರಿಕ ಮತ್ತು ಪೆÇಳ್ಳು ಕಥೆಗಳ ಹೇರುವಿಕೆಗಳು ಈ ಪವಾಡಗಳು. ಬಸವಣ್ಣ ಅಥವಾ ಕ್ರಿಸ್ತ ಎಂದರೆ ಹೀಗೇ ಎಂದು ನೇರವಾಗಿ ಹೇಳಿದರೇನೇ ಬೆರಗುಗೊಳಿಸುವಂತಹ ಜೀವನದ ಅದ್ಭುತಗಳಿವೆ. ಸತ್ಯಾನ್ವೇಷಕರು ಶರಣಾಗುವಂತಹ ತತ್ವಗಳಿವೆ. ಆದರೆ ಅವುಗಳಿಗೆ ಪವಾಡಗಳ ಪೋಷಾಕನ್ನು ತೊಡಿಸಿ ಆ ಮಹಾಂತರ ಜೀವನಗಳನ್ನು ಮಂಕು ಮಾಡುತ್ತಿರುವ ಮಂದಿ ಈಗಲೂ ಇದ್ದಾರೆ.

ಪವಾಡ ಸದೃಶವಾದ ಭ್ರಾಮಕ ವ್ಯಕ್ತಿತ್ವಗಳನ್ನೇ ಮುಂದಿಡುತ್ತಾ ತಾವೂ ಅದೇ ಭ್ರಮಾಧೀನ ಸ್ಥಿತಿಯಲ್ಲಿದ್ದಾರೆ ಎಂಬುದೇ ವಿಷಾದನೀಯ. ಬಸವಣ್ಣ ತನ್ನ ವಚನಗಳ ಮೂಲಕವೇ, ಇತಿಹಾಸದಲ್ಲಿ ಸರಿದು ಸವೆದುಳಿಸಿದ ಕುರುಹುಗಳಿಂದಲೇ ಆಪ್ತ ಮತ್ತು ಆತ್ಮೀಯ ಹಿರಿಯಣ್ಣನಾಗಿಯೇ ಭಾವಪ್ರವೇಶ ಮಾಡುತ್ತಾನೆ. ಅಂತೆಯೇ ಯೇಸುವೂ ಕೂಡ ತನ್ನ ಪ್ರೇಮದ, ಕಾರುಣ್ಯದ, ಕ್ಷಮಾದಾನದ ನಿಲುವುಗಳಿಂದಲೇ ಇವ ನಮ್ಮವ ಇವ ನಮ್ಮವ ಎಂದೆನಿಸುತ್ತಾನೆ.

ಮನೆಯವರಂತೆ ಸಲುಗೆಯಿಂದಲೇ ಸ್ಪರ್ಶ ಕೊಡುವಂತೆ ಕಾಣುತ್ತಾರೆ. ಹಾಗಿರುವಾಗ ತಮ್ಮವರನ್ನು ಸಹಜದಲ್ಲಿ ಸ್ವೀಕರಿಸದೇ ಉತ್ಪ್ರೇಕ್ಷೆಯ ಪೌರಾಣಿಕ ಮೇಲಾಟಗಳು ಸಾಮಾನ್ಯ ಭ್ರಾಮಕ ಮನಸ್ಸುಗಳಿಗೆ ಬೆರಗುಗೊಳಿಸುತ್ತದೆ ಎಂಬುದೇನೋ ನಿಜ. ಆದರೆ ಅದೆಷ್ಟು ಮಟ್ಟಿಗೆ ಸರಿ? ಅರವಳಿಕೆಯಲ್ಲಿಯೇ ಜನರ ಮನಸ್ಸನ್ನು ನಿರ್ದೇಶಿಸುತ್ತಿರುವುದು ಅರಿವನ್ನು ಉಂಟುಮಾಡುವ, ಜಾಗೃತಿಗೊಳಿಸುವ ಕ್ರಿಸ್ತ ಮತ್ತು ಬಸವಣ್ಣರಿಬ್ಬರ ಉದ್ದೇಶವೇ ವಿಫಲ ಮಾಡಿದಂತೆ. ಅವರ ಉದ್ದೇಶವನ್ನು ವಿಫಲಗೊಳಿಸಿ ವ್ಯಕ್ತಿಯನ್ನು ವೈಭವೀಕರಿಸುವುದು ಅವರಿಬ್ಬರ ವ್ಯಕ್ತಿತ್ವಗಳೂ ಒಪ್ಪುವಂತದ್ದೇನಲ್ಲ.

ಶರಣ ಲೀಲಾಮೃತ

ಬಸವಣ್ಣನ ಜೀವನದಲ್ಲಿ 88 ಪವಾಡಗಳನ್ನು ಮಾಡಿದ, 360 ಜನರಿಗೆ ಪ್ರಾಣದಾನ ಮಾಡಿದ ಉಲ್ಲೇಖಗಳು ಸಿಗುತ್ತವೆ. ಶರಣ ಲೀಲಾಮೃತದ ಕವಿ ಚನ್ನಪ್ಪ, ಭೀಮಕವಿಯೇ ಮೊದಲಾಗಿ ಹಲವು ಕವಿಗಳು ಉತ್ಪ್ರೇಕ್ಷೆ ಮಾಡಿದ್ದಾರೆ ಎನ್ನುವುದೂ ಒಂದಾದರೆ, ಕೆಲವೊಂದನ್ನು ವಿಷಯಗಳನ್ನು ಸೂಚ್ಯವಾಗಿ ತಿಳಿಸಲು ಮಿಥಿಕಗಳನ್ನು ಬಳಸಿದ್ದಾರೆ ಎಂದು ತೋರುತ್ತದೆ.

ಹರಿಹರನ ಬಸವರಾಜ ದೇವರ ರಗಳೆಯೂ ಕೂಡ ಉತ್ಪ್ರೇಕ್ಷೆಗಳಿಂದ ಹೊರತಾಗಿಲ್ಲ. ಆದರೆ ಆ ಕಾವ್ಯವನ್ನು ಹೆಚ್ಚು ಗಂಭೀರವಾಗಿ ಗಮನಿಸಬೇಕಾದ ಅಗತ್ಯವಿದೆ. ಏಕೆಂದರೆ ಬಸವಣ್ಣನ ಅವಸಾನದ ನಂತರ ಸಮೀಪದ ಅವಧಿಯಲ್ಲಿ ಬರೆದಂತಹ ಕೃತಿ ಅದಾಗಿದೆ. ಆದರೆ ಅದೂ ಕೂಡ ತಿರುಚುವಿಕೆಗೆ ಒಳಗಾಗುವಂತಹ ಸಂದರ್ಭವೊದಗಿತು. ಅದನ್ನು ನಂತರ ವಿಚಾರಿಸುವ.

ಬಸವನ ಪವಾಡಗಳಲ್ಲಿ ಮುಖ್ಯವಾದುದು ಗೊಲ್ಲತಿಯ ಪವಾಡ, ಬದನೆಕಾಯಿ ಲಿಂಗವಾದದ್ದು, ಜೋಳದ ಕಾಳುಗಳನ್ನು ಮುತ್ತಿನ ಮಣಿಗಳನ್ನಾಗಿ ಮಾಡಿದ್ದು ಮತ್ತು ಇತರೆ. ತಮಿಳು ಶೈವ ಸಂತರ ಕಥನ ಪ್ರಭಾವಗಳು
ಶರಣ ಲೀಲಾಮೃತದಲ್ಲಂತೂ ಬಸವನನ್ನು ಸಣ್ಣವನಿಂದಲೇ ಮಹಾಮಹಿಮ, ಪವಾಡ ಪುರುಷನಂತೆ ಚಿತ್ರಿಸುತ್ತಾರೆ. ಬಾಲಕ ಬಸವ ಬಹಳ ಚುರುಕಿನ ವಿದ್ಯಾರ್ಥಿಯಾಗಿದ್ದು, ಅವನ ಸಹಪಾಠಿಗಳಿಗೆ ಅವನ ಕಂಡರೆ ಅಸೂಯೆ.

ಒಮ್ಮೆ ಬೆನಕನೆಂಬ ಅವರ ಸಹಪಾಠಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿಹೋಗುತ್ತಾನೆ. ಆಗ ಹೊಟ್ಟೆಕಿಚ್ಚಿನ ಬಸವನ ಓರಗೆಯವರು ಬಸವನೇ ಬೆನಕನನ್ನು ನೀರಿಗೆ ತಳ್ಳಿದ ಎಂದು ಆರೋಪವನ್ನು ಹೊರಿಸುತ್ತಾರೆ. ಆಗ ಹಿರಿಯರು ಕೋಪಗೊಂಡು ಬಸವನ ವಿಚಾರಣೆಗೆ ಒಳಪಡಿಸಿದಾಗ, “ಬೆನಕಾ, ನೀನೇ ಬಂದು ಹೇಳು, ನಾನು ನಿನ್ನನ್ನು ನೂಕಿದೆನೇ?” ಎಂದು ಜೋರಾಗಿ ಕೇಳಿದಾಗ ನೀರಿನಿಂದ ಜೀವ ತಳೆದು ಬಂದ ಬೆನಕ ಇಲ್ಲವೆಂದು ಸಾಕ್ಷಿ ಹೇಳುತ್ತಾನೆ. ಇಂತಹ ಪವಾಡಗಳಿಗೆ ತಮಿಳು ಶಿವಭಕ್ತರ ಕಥೆಗಳ ಪ್ರಭಾವವಿದೆ ಎಂದು ನೇರವಾಗಿ ಗೋಚರಿಸುತ್ತದೆ. ಕೊಡಗೂಸಿನ ಕಥೆಯಾಗಲಿ, ಸಿರಿಯಾಳ ಸೆಟ್ಟಿಯ ಕಥೆಯಾಗಲಿ ಇಂಥಾ ಪವಾಡ ಕಥನಗಳನ್ನೇ ಹೊಂದಿವೆ.

ಇನ್ನು ಗೊಲ್ಲತಿಯ ಕಥೆಯೆಂದರೆ, ಬಿಜ್ಜಳನ ಆಸ್ಥಾನದಲ್ಲಿ ಬಸವ ಕಾರ್ಯಕಲಾಪದಲ್ಲಿ ತೊಡಗಿದ್ದಾಗ ಕೆರೆಯ ಏರಿಯ ಮೇಲೆ ಗೊಲ್ಲತಿಯೊಬ್ಬಳು ಹೋಗುತ್ತಿದ್ದು, ಕಾಲು ಜಾರಿ ನೀರಿಗೆ ಬೀಳುವಾಗ “ಬಸವಾ ರಕ್ಷಿಸು” ಎಂದು ಕೂಗುವಳಂತೆ. ಆಗ ಬಸವ “ತಾಯೇ ನಿಲ್ಲು” ಎಂದು ತಡೆದರಂತೆ. ಬಿಜ್ಜಳ ಅಪಹಾಸ್ಯ ಮಾಡಲು, ಬಸವ ಪರೀಕ್ಷಿಸಲು ಹೇಳಿದರಂತೆ. ಅದರಂತೆ ರಾಜನು ತನ್ನ ಸೈನಿಕರನ್ನು ಕಳುಹಿಸಿ ವಿಚಾರಿಸಲಾಗಿ ಬಸವನ ಮಾತು ನಿಜವೆಂದು ತಿಳಿಯುವುದಂತೆ.

ಇದನ್ನು ನಾವು ತಿಳಿಯಬೇಕಾಗಿರುವುದು ಹೇಗೆಂದರೆ, ನಿಜಕ್ಕೂ ಬಸವಣ್ಣನವರು ತಮ್ಮ ಸಂಚಾರದ ಸಮಯದಲ್ಲಿ ಗೊಲ್ಲತಿಯೊಬ್ಬಳು ನೀರಿಗೆ ಬೀಳುವ ಅಥವಾ ಜಾರುವ ಸಮಯದಲ್ಲಿ ತಮ್ಮ ಸಾಮಾಜಿಕ ಸ್ಥಾನಮಾನದ ಗೊಡವೆಯೇ ಇಲ್ಲದೇ ಮುಂದಾಗಿ ಆಕೆಯನ್ನು ಪಾರು ಮಾಡಿದ್ದಿರಬಹುದು. ಅಂತಹ ಅವರ ಸಹಜ ಮತ್ತು ಉದಾತ್ತ ವರ್ತನೆಯನ್ನು ಹೀಗೆ ಮಿಥಿಕಕ್ಕೆ ಒಳಪಡಿಸಲಾಗಿದೆ ಎಂದು ತೋರುತ್ತದೆ.

ಮಹಾಮನೆಗೆ ಬದನೇಕಾಯಿಯ ತುಂಡುಗಳನ್ನು ಲಿಂಗವೆಂದು ತೋರುವಂತೆ ಬಟ್ಟೆಯಲ್ಲಿ ಕಟ್ಟಿಕೊಂಡು ಕಳ್ಳರು ಬರುತ್ತಾರೆ. ಆಗ ಬಸವನ ಲೀಲೆಯಿಂದ ಅವು ನಿಜವಾದ ಲಿಂಗಗಳೇ ಆದವೆಂದು ದಂತಕಥೆ. ಆದರೆ, ಬಸವಣ್ಣನು ವಸ್ತ್ರಗಳಲ್ಲಿ ಕಟ್ಟಿರುವ ಬದನೆಕಾಯಿಯ ತುಂಡುಗಳನ್ನು, ಲಿಂಗವೆಂದು ಹೆಸರಿಸಿದ್ದರಿಂದ, ಆ ವಸ್ತು ರಚಿತವಾದ ಸಾಮಗ್ರಿ ಅಥವಾ ಸ್ಥೂಲಕ್ಕೆ ಮಾನ್ಯತೆ ನೀಡದೇ, ಹೆಸರಿಸುವ ಮೂಲಕ ಭಾವಕ್ಕೇ ಪ್ರಾಮುಖ್ಯತೆಯನ್ನು ಕೊಟ್ಟು ಬದನೆಕಾಯಿಯ ತುಂಡುಗಳನ್ನು ನಿಜವಾದ ಲಿಂಗಗಳೆಂದೇ ಗೌರವಿಸಿರುತ್ತಾರೆ.

ಹೀಗಾಗಿ ಬದನೆಕಾಯಿಯ ತುಂಡುಗಳು ಲಿಂಗಗಳಾದ ಭಾವಾಂತರವೇ ಹೊರತು, ವಸ್ತುಗಳ ರೂಪಾಂತರವಲ್ಲ. ತೆಲುಗಿನಲ್ಲಿ ಪರಮಾನಂದಯ್ಯ ಶಿಷ್ಯಲು ಕಥಾ ಎಂಬ ಸಿನಿಮಾ ಕನ್ನಡಕ್ಕೆ ಗುರುಶಿಷ್ಯರು ಎಂಬ ಹೆಸರಿನಲ್ಲಿ ಮರು ಚಿತ್ರಿತವಾಯ್ತು. ಅದರಲ್ಲಿ ಭೋಗಾಭಿಲಾಷಿ ರಾಜ (ವಿಷ್ಣುವರ್ಧನ್) ರಾತ್ರಿಯಿಡೀ ವೇಶ್ಯೆಯ ಸಂಗದಲ್ಲಿರುತ್ತಾನೆ.

ಬೆಳಗಾಗುತ್ತಲೇ ಅವನ ಶಿವಾರ್ಚನೆಯ ವ್ರತಕ್ಕೆ ಭಂಗ ಬರುವಂತೆ ಅವನು ಅವಳ ಶಯ್ಯಾಗೃಹದಲ್ಲಿ ಬಂಧಿತನಾಗಿರುತ್ತಾನೆ. ಆದರೆ ಶಿವಪೂಜೆಯ ವ್ರತಕ್ಕೆ ಭಂಗಬರಬಾರದೆಂದು ಅವನು ಮಾಡುವುದೇನೆಂದರೆ, ಅಂಗಾತ ಮಲಗಿರುವ ಜಯಮಾಲಿಯ ಮೊಲೆಯ ಉಬ್ಬಿಗೆ ಶಿವಲಿಂಗವೆಂದು ಭಾವಿಸಿ ಪೂಜೆ ಮಾಡುತ್ತಾನೆ.

ಅಲ್ಲಿಗೆ ಅವನ ಶಿವಪೂಜೆಯ ವ್ರತಕ್ಕೆ ಭಂಗ ಬರುವುದಿಲ್ಲ. ಒಟ್ಟಾರೆ ಶಿವ ಎನ್ನುವುದು ಭಾವದಲ್ಲಿದೆಯೇ ಹೊರತು ವಸ್ತುವಿನಲ್ಲಿಲ್ಲ ಎಂಬುದರ ಸೂಚಕ ಇದು. ಭಕ್ತಿ ಮುಖ್ಯವಾಗುತ್ತದೆಯೇ ಹೊರತು, ವಸ್ತುವಲ್ಲ. ದೇವರೆಂಬುದು ಕಾಣುವುದರಲ್ಲಿ ಅಲ್ಲ, ಕಂಡುಕೊಳ್ಳುವುದರಲ್ಲಿ ಇರುವುದು ಎಂಬುದನ್ನು ಇದು ಸೂಚಿಸುತ್ತದೆ.

ಒಬ್ಬ ಸೆಟ್ಟಿಯು ಬಸವಣ್ಣನವರ ಭಕ್ತಿ ಔದಾರ್ಯಗಳನ್ನು ಪರೀಕ್ಷೆ ಮಾಡಲು ಹೇರು ಹೇರು ಮುತ್ತನ್ನು ಕೇಳುವನಂತೆ. ಆಗ ಬಸವ ಜೋಳವನ್ನೇ ಮುತ್ತುಗಳನ್ನಾಗಿ ಪರಿವರ್ತಿಸಿ ಕೊಟ್ಟರೆಂದು ಪುರಾಣಗಳು ಹೇಳುತ್ತವೆ. ಆದರೆ, ಸೆಟ್ಟಿಯ ದೃಷ್ಟಿಯಲ್ಲಿ ಬೆಲೆಬಾಳುವ ಮುತ್ತಿಗೆ ಬೆಲೆ ಎಂದಾದರೆ, ಬಸವಣ್ಣನವರ ದೃಷ್ಟಿಯಲ್ಲಿ ಆಹಾರಕ್ಕಾಗುವ, ಜೀವವನ್ನು ಪೋಷಿಸುವ ಜೋಳವನ್ನೇ ಮಹತ್ವದ್ದಾಗಿ ನೋಡುವಂತಹ ಅವರ ಧೋರಣೆಯನ್ನು ಪ್ರತಿನಿಧಿಸುವಂತಹ ಮಿಥಿಕ ಇದಾಗಿರುತ್ತದೆ.

ಇನ್ನೂ ಬಹಳ ಜನಪ್ರಿಯವಾದಂತಹ ಮಿಥಿಕವೆಂದರೆ, ಬಸವಣ್ಣನವರು ನಿದ್ರಿಸುವಾಗ ಶರಣರು ಬರುತ್ತಾರೆ. ಅಣ್ಣನವರು ವಿಶ್ರಾಂತಿ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಅವರನ್ನು ಹಿಂದಕ್ಕೆ ಕಳುಹಿಸಿದಾಗ ಬಸವಣ್ಣನ ಜೀವ (ಆತ್ಮ) ಶರಣರನ್ನೇ ಹಿಂಬಾಲಿಸಿಬಿಡುತ್ತದೆ. ಕಳೇವರವಾದ ಬಸವನ ಶರೀರವನ್ನು ಕಂಡು ಹೌಹಾರಿದ ಮಹಾಮನೆಯವರು ಮತ್ತೆ ಕಳುಹಿಸಿದ ಶರಣರ ಹುಡುಕಿಕೊಂಡು ಹೋಗಿ ಮತ್ತೆ ಕರೆದುಕೊಂಡು ಬಂದಮೇಲೆ ಬಸವಣ್ಣನವರ ದೇಹದೊಳಕ್ಕೆ ಜೀವ ಸೇರಿ ಸಜೀವವಾಗಿ ಎದ್ದು ಕೂತರು ಎಂಬುದು.
ಇದನ್ನು ಬಹಳ ನೇರವಾಗಿ ವಿಶ್ಲೇಷಿಸಬಹುದು.

ಶರಣರ ಬರವೆಮಗೆ ಜೀವಾಳ ಎನ್ನುವ ಅಣ್ಣನವರಿಗೆ ತನ್ನ ವಿಶ್ರಾಂತಿ, ಭೋಗ ಇತ್ಯಾದಿಗಳೆಲ್ಲಾ ಲೆಕ್ಕಕ್ಕಿಲ್ಲದ್ದು. ತೀರಾ ಗಂಭೀರವಾಗಿ ಗಣಿಸದೇ ಇರುವುದು. ತಮ್ಮ ಸಾಮಾಜಿಕ ಜೀವನವನ್ನೂ, ವೈಯಕ್ತಿಕ ಬದುಕನ್ನೂ ಒಂದಾಗಿಸಿಯೇ ಬಾಳಿದ ಬಸವಣ್ಣನವರಿಗೆ ತಾವು ಮಲಗಿದ್ದಾಗ ಬಂದು, ತೆರಳಿದ ಶರಣರ ಬಗ್ಗೆ ತಿಳಿಯುತ್ತಾರೆ. ಎಲ್ಲಿಂದಲೋ, ಎಷ್ಟೋ ದೂರವನ್ನು ಕ್ರಮಿಸಿ, ಕಷ್ಟಪಟ್ಟು ತಮ್ಮನ್ನು ಕಾಣಲು ಬಂದಿದ್ದ ಶರಣರನ್ನು ತನ್ನ ನಿದ್ದೆ ಅಥವಾ ವಿಶ್ರಾಂತಿಯಂತಹ ಕಾರಣಕ್ಕೆ ಹಿಂದಕ್ಕೆ ಕಳುಹಿಸಿರುವುದು ನಿಜಕ್ಕೂ ಬೇಸರವೂ, ದುಃಖವೂ ಆಗುತ್ತದೆ.

ಮಂಕಾಗಿರುವ ಬಸವಣ್ಣನವರನ್ನು ಕಂಡು ಚಿಂತೆಗೀಡಾದ ಶರಣರನ್ನು ಹಿಂದಕ್ಕೆ ಕಳುಹಿಸಿದವರು ಮತ್ತೆ ಅವರನ್ನು ಹುಡುಕಿ ಕರೆತಂದಾಗ ಅಣ್ಣನವರು ಉಲ್ಲಸಿತರಾಗುತ್ತಾರೆ. ಹೆಣದಂತೆ ಕಳಾಹೀನವಾಗಿದ್ದವರು, ಜೀವತಳೆದವರಂತೆ ಚೈತನ್ಯದಿಂದ ಕೂಡುತ್ತಾರೆ. ಇಂತಹ ಸಂಗತಿಗಳೆಲ್ಲವೂ ಕೂಡ ಪುರಾಣದ ರೂಪಕಗಳನ್ನು ಪಡೆದುಕೊಂಡಿರುತ್ತವೆ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೆಂದರೆ, ಕ್ರಿಸ್ತ ಮತ್ತು ಬಸವಣ್ಣರಿಬ್ಬರೂ ತಮ್ಮೊಟ್ಟಿನ ಜನರಿಗೆ ನಡೆದುಕೊಳ್ಳಲು ಕ್ರಮಗಳನ್ನು ರೂಪಿಸಿಕೊಟ್ಟರು. ತಾವೇ ಮಾದರಿಯಾಗಿ ಬಾಳಿದರು. ತಾವು ತಮ್ಮ ಮನಸ್ಸಿಗೆ, ತಮ್ಮ ಭಾವುಕತೆಗೆ, ತಮ್ಮ ಧೋರಣೆಗಳಿಗೆ, ತಮ್ಮ ಒಲವು ನಿಲುವುಗಳಿಗೆ ಇಂಥಾ ಬಗೆಯ ತರಬೇತಿಗಳನ್ನು ನೀಡಬೇಕೆಂದು ಕ್ರಮಗಳನ್ನು ರೂಪಿಸಿದರು.

ಆ ಕ್ರಮಗಳನ್ನು ಒಳಗೊಂಡ ಮಾದರಿ ಸಮಾಜವನ್ನು ರೂಪಿಸುವ ಉದ್ದೇಶ ಹೊಂದಿದ್ದರವರು. ಆದರೆ ಅವರ ಜೀವಿತಾವಧಿಯಲ್ಲಿ ಆ ಮಾದರಿ ಸಮಾಜ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬರಲಿಲ್ಲ. ವ್ಯಕ್ತಿಗತವಾಗಿ ರೂಪುಗೊಳ್ಳುತ್ತಿದ್ದವರು ಸಾಮಾಜಿಕವಾಗಿ ವ್ಯಾಪಕಗೊಳ್ಳುವ ಮೊದಲೇ ಅವರಿಬ್ಬರೂ ಮರಣಿಸಿದರು. ಹಾಗಾಗಿ ಅವರ ಕೆಲಸ ಪೂರ್ಣಗೊಳ್ಳಲಿಲ್ಲ.

ಆದರೆ ಅವರು ರೂಪಿಸಿದ ಕ್ರಮವು ಅಥವಾ ಧರ್ಮವು ಸಾಂಸ್ಥಿಕವಾಗಿ ಸ್ಥಾಪನೆಯಾಗಲು ಹಲವು ಬಗೆಯ ಕವಲುಗಳು ಮೂಡಿದವು. ಮುಂದೆ ನೋಡೋಣ. ಧರ್ಮ ಅಥವಾ ಧಾರ್ಮಿಕತೆಯ ತಾತ್ವಿಕ ಆಂತರ್ಯವನ್ನು ಅರಿಯಲು ಈಗ ನಾವೊಂದು ಮಾರ್ಗವನ್ನು ಹಿಡಿದಿದ್ದೇವೆ. ಇದೊಂದು ಬಗೆಯ ಅಧ್ಯಯನದ ರೀತಿ. ಇದು ಅಂತಿಮವಲ್ಲ. ಇದು ಸಂಪೂರ್ಣವೂ ಅಲ್ಲ. ಆದರೆ ಸಮಾಧಾನ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version