Connect with us

ಅಂತರಂಗ

ಧರ್ಮ ಮರ್ಮ – 05 : ಕ್ರಿಸ್ತ ಮತ್ತು ಬಸವಣ್ಣ ಧಾರ್ಮಿಕ ಪುರಾಣ

Published

on

Art: Klaus fabry
  • ಯೋಗೇಶ್ ಮಾಸ್ಟರ್

ಬಾಗೇವಾಡಿಯ ಬಸವೇಶ್ವರನ (ನಂದಿ) ದೇವಸ್ಥಾನಕ್ಕೆ ಹೋದರೆ ಬಸವಣ್ಣನವರ ತಾಯಿ ಇದೇ ಬಸವನ ಪೂಜೆ ಮಾಡಿ ಶಿಶು ಭಾಗ್ಯ ಪಡೆದರೆಂದು ಹೇಳುತ್ತಾ ಕೋಡುಳ್ಳ ನಂದಿಯ ವಿಗ್ರಹವನ್ನು ತೋರುತ್ತಾರೆ. ಅದಕ್ಕೆ ಅಲ್ಲಿ ಬಹಳ ಮಾನ್ಯತೆಯೂ ಇದೆ.

ಶಿವಗಣದಲ್ಲಿ ಒಬ್ಬನಾದ ಸಾಕ್ಷಾತ್ ನಂದಿಯೇ ತಾಯಿ ಮಾದಲಾಂಬಿಕೆಯ ಗರ್ಭವನ್ನು ಸೇರಿ ಬಸವಣ್ಣನಾಗಿ ಜನ್ಮತಾಳಿದ ಎಂದು ಹೇಳುವಂತಹ ಮಿಥಿಕವನ್ನು ನಮ್ಮಲ್ಲಿ ಕಟ್ಟಿದ್ದಾರೆ. ಯಾವ ಅವೈಚಾರಿಕವಾದ ಡೋಂಗಿ ಪುರಾಣಗಳನ್ನು ಗುಡಿಸಿ ಹಾಕಿ ಜನತೆಯನ್ನು ಪ್ರಜ್ಞಾವಂತರನ್ನಾಗಿ ಮಾಡಲು ಜೀವನವೆಲ್ಲಾ ಹೆಣಗಿ ಮರಣಿಸಿದ ಬಸವಣ್ಣನಿಗೆ ಸಂದ ಗೌರವವಿದು.

ಅಂದು ಕಲ್ಯಾಣ ಕ್ರಾಂತಿಯಲ್ಲಿ ಶರಣರ ಕಗ್ಗೊಲೆಗಳು ನಡೆಯುವಾಗ ಸಂಪ್ರದಾಯವಾದಿಗಳ ಮಾರಣ ಘಾತಗಳಿಂದ ಶರಣರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಎತ್ತೆತ್ತಲೋ ವಲಸೆ ಹೋಗಬೇಕಾಯ್ತು. ತಲೆ ಮರೆಯಿಸಿಕೊಳ್ಳಬೇಕಾಯ್ತು. ನಂತರ ನಿಧಾನವಾಗಿ ತಮ್ಮ ಅಸ್ತಿತ್ವವನ್ನು ಮರುಸ್ಥಾಪಿಸಲು ಬಸವನ ಅನಾವರಣ ಮಾಡಲು, ಜನರ ನಡುವೆ ಬಸವನ ಬಗ್ಗೆ ಸದಭಿಮಾನವನ್ನು ಮೂಡಿಸಲು ಬಸವನ ಅಭಿಮಾನಿಗಳು ಪ್ರಯತ್ನಿಸುವಾಗ ಅದೇ ಹಳೆಯ ಪುರಾಣದ ತಂತ್ರಗಳನ್ನೂ ಬಳಸಲಾರಂಭಿಸಿದರು.

ಕ್ರಿಸ್ತ ಮತ್ತು ಬಸವರ ಕ್ರಾಂತಿ

ಕ್ರಿಸ್ತ ಮತ್ತು ಬಸವಣ್ಣ, ಇವರಿಬ್ಬರ ಸಾವು ಧರ್ಮ ಸ್ಥಾಪನೆಗೆ ನಾಂದಿಯಾಯ್ತು. ಇಬ್ಬರಲ್ಲೂ ಅನೇಕ ಸಾಮ್ಯತೆಗಳಿವೆ. ಕ್ರಿಸ್ತನ ಸಾವಿನ ನಂತರ ಅವನ ಅಭಿಮಾನಿ ಶಿಷ್ಯರು, ಅನುಯಾಯಿಗಳು ಹಾಗೂ ಬಸವನ ಸಾವಿನ ನಂತರ ಶರಣರು ಪಟ್ಟ ಪಾಡುಗಳಲ್ಲಿ ಸಾಮ್ಯತೆ ಇದೆ. ಅಷ್ಟೇ ಅಲ್ಲ.

ಯೆಹೂದಿಗಳ ಸಾಂಪ್ರದಾಯಕ ಅವೈಚಾರಿಕ ವಿಚಾರಗಳಿಗೆ ಮರುವ್ಯಾಖ್ಯಾನ ಮಾಡುತ್ತಾ, ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು ಕ್ರಿಸ್ತ ಯತ್ನಿಸಿದರೆ, ಬಸವ ಇಲ್ಲಿ ವೈದಿಕರ ಜಡ್ಡುಗಟ್ಟಿದ ಸಾಂಪ್ರದಾಯಿಕತೆಯ ನಿರರ್ಥಕತೆಗಳನ್ನು ಬಯಲಿಗೆ ತಂದು ಸಮಸಮಾಜದ ನಿರ್ಮಾಣಕ್ಕೆ, ವ್ಯಕ್ತಿಗತ ಜಾಗೃತಿಯ ಬಗ್ಗೆ ಪ್ರಜಾಸತ್ತಾತ್ಮಕವಾದ ಆಧ್ಯಾತ್ಮಿಕತೆ, ಧಾರ್ಮಿಕತೆಯನ್ನು ಪ್ರತಿಷ್ಠಾಪಿಸಲು ಚಳವಳಿ ಹೂಡಿದ.

ಈ ಇಬ್ಬರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಉದ್ದೇಶ ಒಂದೇ ಆಗಿದ್ದರೂ ಕೆಲವು ಸಾಮಾಜಿಕ ಸ್ಥಾನಮಾನದ ವಿಷಯದಲ್ಲಿ, ಸಾಮಾಜಿಕ ಚಟುವಟಿಕೆಯಲ್ಲಿ ವ್ಯತ್ಯಾಸಗಳು ಕಾಣುತ್ತವೆ. ಬಸವಣ್ಣ ಕ್ರಿಸ್ತನಂತೆ ಬಡವರೇನಾಗಿರಲಿಲ್ಲ. ಕ್ರಿಸ್ತನಿಗೆ ಸಮಾಜದಲ್ಲಿ ಪ್ರಭುತ್ವದ ಆಶ್ರಯವಿರುವಂತಹ ಯಾವ ಅಧಿಕಾರ ಇರಲಿಲ್ಲ. ಬಸವಣ್ಣನಿಗೆ ರಾಜ ಬಿಜ್ಜಳನು ಗೆಳೆಯನಾಗಿದ್ದ. ಬಸವಣ್ಣನ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳಿಗೆ ಬಿಜ್ಜಳನ ನೇರ ಕೊಡುಗೆ ಏನೂ ಇರದಿದ್ದರೂ, ಬಸವನಿಗಿದ್ದ ಅವನ ಗೆಳೆತನದ ಸಕಾರಾತ್ಮಕ ಪ್ರಭಾವವನ್ನು ಅಲ್ಲಗೆಳೆಯಲಾಗದು.

ನಿತ್ಯ ಅನ್ನದಾಸೋಹ ಮಾಡುತ್ತಿದ್ದ ಬಸವನ ಮಹಾಮನೆ ಕ್ರಿಸ್ತನಿಗಿರಲಿಲ್ಲ. ಆದರೆ ಕ್ರಿಸ್ತನೂ ಬಸವನಂತೆ ಅರಿವನ್ನೂ, ಆಹಾರವನ್ನೂ ಹಂಚಿಕೊಳ್ಳಲು ತನ್ನದೇ ರೀತಿಯಲ್ಲಿ ಕಾರ್ಯತತ್ಪರನಾಗಿದ್ದ. ಹಂಚಿಕೊಂಡು ಉಣ್ಣುವುದರಲ್ಲಿ ಬಸವನಂತೆಯೇ ಪ್ರಾಮುಖ್ಯತೆ ಕೊಟ್ಟಿದ್ದ. ಮುಂದೆ ಕ್ರಿಸ್ತನಿಗೂ ಮತ್ತು ಬಸವಣ್ಣನಿಗೂ ರಾಜದ್ರೋಹದ ಆಪಾದನೆಯನ್ನೇ ಮಾಡಿದರು. ಕ್ರಿಸ್ತನ ಶಿಲುಬೆಗೇರಿಸಿದರು. ಬಸವನ ಗಡಿಪಾರು ಮಾಡಿ ಕೊಂದರು. ಬಸವ ನೇರ ರಾಜಾಸ್ಥಾನದ ಸದಸ್ಯ ಮತ್ತು ಅಧಿಕಾರಿಯಾಗಿದ್ದರಿಂದ ರಾಜಕೀಯ ದ್ರೋಹದ ಆಪಾದನೆಗಳನ್ನೂ ಕೂಡ ಹೊರಿಸಿದರು, ರಾಜನನ್ನು ಕೊಂದರು, ಅದನ್ನು ಶರಣರ ತಲೆಗೆ ಕಟ್ಟಿದರು.

ಇನ್ನು ಶರಣರನ್ನು ಬೇಟೆಯಾಡ ತೊಡಗಿದಾಗ ಅವರು ನಿರ್ವಾಹವಿಲ್ಲದೇ ತಲೆ ಮರೆಸಿಕೊಂಡು ತಪ್ಪಿಸಿಕೊಳ್ಳಬೇಕಾಯ್ತು. ಅದೇ ರೀತಿ ಕ್ರಿಸ್ತನ ಅನುಯಾಯಿಗಳು ಕೂಡ ತಲೆ ಮರೆಯಿಸಿಕೊಂಡು ತಮ್ಮ ಕ್ರಿಸ್ತ ಧರ್ಮದ ಸಾರ ಸಿದ್ಧಾಂತಗಳನ್ನು ಗಟ್ಟಿಗೊಳಿಸಿಕೊಳ್ಳಲು ರಹಸ್ಯವಾಗಿ ಧರ್ಮಸಭೆಗಳನ್ನು ಸೇರಿಸಬೇಕಿತ್ತು.

ಪುನರುತ್ಥಾನಕ್ಕಾಗಿ ಮಿಥಿಕ

ಕ್ರಿಸ್ತಾನುಯಾಯಿಗಳೂ ಮತ್ತು ಬಸವಾನುಯಾಯಿಗಳೂ ಮಾಡಿದ ಎಡವಟ್ಟೆಂದರೆ ತಮ್ಮ ತಮ್ಮ ಅಭಿಮಾನದ ಆಧ್ಯಾತ್ಮಿಕ ನಾಯಕರಿಗೆ ಪವಾಡಗಳ ಮುಸುಕನ್ನು ಹಾಕಿ ಅವರವರ ಸತ್ಯತೆಗಳನ್ನು, ನಿಜ ಸ್ವರೂಪವನ್ನು ಮಂಕುಗೊಳಿಸಿದ್ದು. ಆದರೆ ಅವರನ್ನು ಮೂರ್ಖರೆಂದೋ, ಕುಯುಕ್ತಿಯ ತಂತ್ರಗಾರರೆಂದೋ ಕರೆಯಲಾರೆ.

ತಮ್ಮ ಅಸ್ತಿತ್ವವನ್ನು ಪುನರ್ಸ್ಥಾಪಿಸಲು ಆಗಿನ ಜನ ಸಾಮಾನ್ಯರ ನಡುವೆ ತಮ್ಮ ನಾಯಕರ ಬಗ್ಗೆ ಶ್ರದ್ಧೆ ಮತ್ತು ಭಕ್ತಿಯನ್ನು ಉಂಟುಮಾಡಲು, ಆಗ ವಾಡಿಕೆಯಲ್ಲಿದ್ದ ಮಿಥಿಕಗಳನ್ನು ಕಟ್ಟುವ ತಂತ್ರವನ್ನೇ ಉಪಯೋಗಿಸಿದರು. ಅದೇ ಕೈಲಾಸ ಒಡ್ಡೋಲಗ, ದೇವರ ಶಾಪ ಅಥವಾ ಅಣತಿಯಂತೆ ಭೂಲೋಕಕ್ಕಿಳಿಯುವುದು, ಸತ್ತವರನ್ನು ಬದುಕಿಸುವುದು, ಜನ ಸಾಮಾನ್ಯರು ಮಾಡಲಾಗದಂತಹ ಅದ್ಭುತಗಳನ್ನು ಸೃಷ್ಟಿಸುವುದು ಇತ್ಯಾದಿ. ಆದರೆ ನಂತರವೂ ಅದೇ ಉಳಿದುಕೊಂಡಿದ್ದು ಮಾತ್ರ ವಿಪರ್ಯಾಸ.

ಕ್ರಿಸ್ತನಾಗಲಿ, ಬಸವಣ್ಣನಾಗಲಿ ಎಂದಿಗೂ ಒಪ್ಪದಿರುವಂತಹ ತೀರಾ ಅವೈಚಾರಿಕ ಮತ್ತು ಪೆÇಳ್ಳು ಕಥೆಗಳ ಹೇರುವಿಕೆಗಳು ಈ ಪವಾಡಗಳು. ಬಸವಣ್ಣ ಅಥವಾ ಕ್ರಿಸ್ತ ಎಂದರೆ ಹೀಗೇ ಎಂದು ನೇರವಾಗಿ ಹೇಳಿದರೇನೇ ಬೆರಗುಗೊಳಿಸುವಂತಹ ಜೀವನದ ಅದ್ಭುತಗಳಿವೆ. ಸತ್ಯಾನ್ವೇಷಕರು ಶರಣಾಗುವಂತಹ ತತ್ವಗಳಿವೆ. ಆದರೆ ಅವುಗಳಿಗೆ ಪವಾಡಗಳ ಪೋಷಾಕನ್ನು ತೊಡಿಸಿ ಆ ಮಹಾಂತರ ಜೀವನಗಳನ್ನು ಮಂಕು ಮಾಡುತ್ತಿರುವ ಮಂದಿ ಈಗಲೂ ಇದ್ದಾರೆ.

ಪವಾಡ ಸದೃಶವಾದ ಭ್ರಾಮಕ ವ್ಯಕ್ತಿತ್ವಗಳನ್ನೇ ಮುಂದಿಡುತ್ತಾ ತಾವೂ ಅದೇ ಭ್ರಮಾಧೀನ ಸ್ಥಿತಿಯಲ್ಲಿದ್ದಾರೆ ಎಂಬುದೇ ವಿಷಾದನೀಯ. ಬಸವಣ್ಣ ತನ್ನ ವಚನಗಳ ಮೂಲಕವೇ, ಇತಿಹಾಸದಲ್ಲಿ ಸರಿದು ಸವೆದುಳಿಸಿದ ಕುರುಹುಗಳಿಂದಲೇ ಆಪ್ತ ಮತ್ತು ಆತ್ಮೀಯ ಹಿರಿಯಣ್ಣನಾಗಿಯೇ ಭಾವಪ್ರವೇಶ ಮಾಡುತ್ತಾನೆ. ಅಂತೆಯೇ ಯೇಸುವೂ ಕೂಡ ತನ್ನ ಪ್ರೇಮದ, ಕಾರುಣ್ಯದ, ಕ್ಷಮಾದಾನದ ನಿಲುವುಗಳಿಂದಲೇ ಇವ ನಮ್ಮವ ಇವ ನಮ್ಮವ ಎಂದೆನಿಸುತ್ತಾನೆ.

ಮನೆಯವರಂತೆ ಸಲುಗೆಯಿಂದಲೇ ಸ್ಪರ್ಶ ಕೊಡುವಂತೆ ಕಾಣುತ್ತಾರೆ. ಹಾಗಿರುವಾಗ ತಮ್ಮವರನ್ನು ಸಹಜದಲ್ಲಿ ಸ್ವೀಕರಿಸದೇ ಉತ್ಪ್ರೇಕ್ಷೆಯ ಪೌರಾಣಿಕ ಮೇಲಾಟಗಳು ಸಾಮಾನ್ಯ ಭ್ರಾಮಕ ಮನಸ್ಸುಗಳಿಗೆ ಬೆರಗುಗೊಳಿಸುತ್ತದೆ ಎಂಬುದೇನೋ ನಿಜ. ಆದರೆ ಅದೆಷ್ಟು ಮಟ್ಟಿಗೆ ಸರಿ? ಅರವಳಿಕೆಯಲ್ಲಿಯೇ ಜನರ ಮನಸ್ಸನ್ನು ನಿರ್ದೇಶಿಸುತ್ತಿರುವುದು ಅರಿವನ್ನು ಉಂಟುಮಾಡುವ, ಜಾಗೃತಿಗೊಳಿಸುವ ಕ್ರಿಸ್ತ ಮತ್ತು ಬಸವಣ್ಣರಿಬ್ಬರ ಉದ್ದೇಶವೇ ವಿಫಲ ಮಾಡಿದಂತೆ. ಅವರ ಉದ್ದೇಶವನ್ನು ವಿಫಲಗೊಳಿಸಿ ವ್ಯಕ್ತಿಯನ್ನು ವೈಭವೀಕರಿಸುವುದು ಅವರಿಬ್ಬರ ವ್ಯಕ್ತಿತ್ವಗಳೂ ಒಪ್ಪುವಂತದ್ದೇನಲ್ಲ.

ಶರಣ ಲೀಲಾಮೃತ

ಬಸವಣ್ಣನ ಜೀವನದಲ್ಲಿ 88 ಪವಾಡಗಳನ್ನು ಮಾಡಿದ, 360 ಜನರಿಗೆ ಪ್ರಾಣದಾನ ಮಾಡಿದ ಉಲ್ಲೇಖಗಳು ಸಿಗುತ್ತವೆ. ಶರಣ ಲೀಲಾಮೃತದ ಕವಿ ಚನ್ನಪ್ಪ, ಭೀಮಕವಿಯೇ ಮೊದಲಾಗಿ ಹಲವು ಕವಿಗಳು ಉತ್ಪ್ರೇಕ್ಷೆ ಮಾಡಿದ್ದಾರೆ ಎನ್ನುವುದೂ ಒಂದಾದರೆ, ಕೆಲವೊಂದನ್ನು ವಿಷಯಗಳನ್ನು ಸೂಚ್ಯವಾಗಿ ತಿಳಿಸಲು ಮಿಥಿಕಗಳನ್ನು ಬಳಸಿದ್ದಾರೆ ಎಂದು ತೋರುತ್ತದೆ.

ಹರಿಹರನ ಬಸವರಾಜ ದೇವರ ರಗಳೆಯೂ ಕೂಡ ಉತ್ಪ್ರೇಕ್ಷೆಗಳಿಂದ ಹೊರತಾಗಿಲ್ಲ. ಆದರೆ ಆ ಕಾವ್ಯವನ್ನು ಹೆಚ್ಚು ಗಂಭೀರವಾಗಿ ಗಮನಿಸಬೇಕಾದ ಅಗತ್ಯವಿದೆ. ಏಕೆಂದರೆ ಬಸವಣ್ಣನ ಅವಸಾನದ ನಂತರ ಸಮೀಪದ ಅವಧಿಯಲ್ಲಿ ಬರೆದಂತಹ ಕೃತಿ ಅದಾಗಿದೆ. ಆದರೆ ಅದೂ ಕೂಡ ತಿರುಚುವಿಕೆಗೆ ಒಳಗಾಗುವಂತಹ ಸಂದರ್ಭವೊದಗಿತು. ಅದನ್ನು ನಂತರ ವಿಚಾರಿಸುವ.

ಬಸವನ ಪವಾಡಗಳಲ್ಲಿ ಮುಖ್ಯವಾದುದು ಗೊಲ್ಲತಿಯ ಪವಾಡ, ಬದನೆಕಾಯಿ ಲಿಂಗವಾದದ್ದು, ಜೋಳದ ಕಾಳುಗಳನ್ನು ಮುತ್ತಿನ ಮಣಿಗಳನ್ನಾಗಿ ಮಾಡಿದ್ದು ಮತ್ತು ಇತರೆ. ತಮಿಳು ಶೈವ ಸಂತರ ಕಥನ ಪ್ರಭಾವಗಳು
ಶರಣ ಲೀಲಾಮೃತದಲ್ಲಂತೂ ಬಸವನನ್ನು ಸಣ್ಣವನಿಂದಲೇ ಮಹಾಮಹಿಮ, ಪವಾಡ ಪುರುಷನಂತೆ ಚಿತ್ರಿಸುತ್ತಾರೆ. ಬಾಲಕ ಬಸವ ಬಹಳ ಚುರುಕಿನ ವಿದ್ಯಾರ್ಥಿಯಾಗಿದ್ದು, ಅವನ ಸಹಪಾಠಿಗಳಿಗೆ ಅವನ ಕಂಡರೆ ಅಸೂಯೆ.

ಒಮ್ಮೆ ಬೆನಕನೆಂಬ ಅವರ ಸಹಪಾಠಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿಹೋಗುತ್ತಾನೆ. ಆಗ ಹೊಟ್ಟೆಕಿಚ್ಚಿನ ಬಸವನ ಓರಗೆಯವರು ಬಸವನೇ ಬೆನಕನನ್ನು ನೀರಿಗೆ ತಳ್ಳಿದ ಎಂದು ಆರೋಪವನ್ನು ಹೊರಿಸುತ್ತಾರೆ. ಆಗ ಹಿರಿಯರು ಕೋಪಗೊಂಡು ಬಸವನ ವಿಚಾರಣೆಗೆ ಒಳಪಡಿಸಿದಾಗ, “ಬೆನಕಾ, ನೀನೇ ಬಂದು ಹೇಳು, ನಾನು ನಿನ್ನನ್ನು ನೂಕಿದೆನೇ?” ಎಂದು ಜೋರಾಗಿ ಕೇಳಿದಾಗ ನೀರಿನಿಂದ ಜೀವ ತಳೆದು ಬಂದ ಬೆನಕ ಇಲ್ಲವೆಂದು ಸಾಕ್ಷಿ ಹೇಳುತ್ತಾನೆ. ಇಂತಹ ಪವಾಡಗಳಿಗೆ ತಮಿಳು ಶಿವಭಕ್ತರ ಕಥೆಗಳ ಪ್ರಭಾವವಿದೆ ಎಂದು ನೇರವಾಗಿ ಗೋಚರಿಸುತ್ತದೆ. ಕೊಡಗೂಸಿನ ಕಥೆಯಾಗಲಿ, ಸಿರಿಯಾಳ ಸೆಟ್ಟಿಯ ಕಥೆಯಾಗಲಿ ಇಂಥಾ ಪವಾಡ ಕಥನಗಳನ್ನೇ ಹೊಂದಿವೆ.

ಇನ್ನು ಗೊಲ್ಲತಿಯ ಕಥೆಯೆಂದರೆ, ಬಿಜ್ಜಳನ ಆಸ್ಥಾನದಲ್ಲಿ ಬಸವ ಕಾರ್ಯಕಲಾಪದಲ್ಲಿ ತೊಡಗಿದ್ದಾಗ ಕೆರೆಯ ಏರಿಯ ಮೇಲೆ ಗೊಲ್ಲತಿಯೊಬ್ಬಳು ಹೋಗುತ್ತಿದ್ದು, ಕಾಲು ಜಾರಿ ನೀರಿಗೆ ಬೀಳುವಾಗ “ಬಸವಾ ರಕ್ಷಿಸು” ಎಂದು ಕೂಗುವಳಂತೆ. ಆಗ ಬಸವ “ತಾಯೇ ನಿಲ್ಲು” ಎಂದು ತಡೆದರಂತೆ. ಬಿಜ್ಜಳ ಅಪಹಾಸ್ಯ ಮಾಡಲು, ಬಸವ ಪರೀಕ್ಷಿಸಲು ಹೇಳಿದರಂತೆ. ಅದರಂತೆ ರಾಜನು ತನ್ನ ಸೈನಿಕರನ್ನು ಕಳುಹಿಸಿ ವಿಚಾರಿಸಲಾಗಿ ಬಸವನ ಮಾತು ನಿಜವೆಂದು ತಿಳಿಯುವುದಂತೆ.

ಇದನ್ನು ನಾವು ತಿಳಿಯಬೇಕಾಗಿರುವುದು ಹೇಗೆಂದರೆ, ನಿಜಕ್ಕೂ ಬಸವಣ್ಣನವರು ತಮ್ಮ ಸಂಚಾರದ ಸಮಯದಲ್ಲಿ ಗೊಲ್ಲತಿಯೊಬ್ಬಳು ನೀರಿಗೆ ಬೀಳುವ ಅಥವಾ ಜಾರುವ ಸಮಯದಲ್ಲಿ ತಮ್ಮ ಸಾಮಾಜಿಕ ಸ್ಥಾನಮಾನದ ಗೊಡವೆಯೇ ಇಲ್ಲದೇ ಮುಂದಾಗಿ ಆಕೆಯನ್ನು ಪಾರು ಮಾಡಿದ್ದಿರಬಹುದು. ಅಂತಹ ಅವರ ಸಹಜ ಮತ್ತು ಉದಾತ್ತ ವರ್ತನೆಯನ್ನು ಹೀಗೆ ಮಿಥಿಕಕ್ಕೆ ಒಳಪಡಿಸಲಾಗಿದೆ ಎಂದು ತೋರುತ್ತದೆ.

ಮಹಾಮನೆಗೆ ಬದನೇಕಾಯಿಯ ತುಂಡುಗಳನ್ನು ಲಿಂಗವೆಂದು ತೋರುವಂತೆ ಬಟ್ಟೆಯಲ್ಲಿ ಕಟ್ಟಿಕೊಂಡು ಕಳ್ಳರು ಬರುತ್ತಾರೆ. ಆಗ ಬಸವನ ಲೀಲೆಯಿಂದ ಅವು ನಿಜವಾದ ಲಿಂಗಗಳೇ ಆದವೆಂದು ದಂತಕಥೆ. ಆದರೆ, ಬಸವಣ್ಣನು ವಸ್ತ್ರಗಳಲ್ಲಿ ಕಟ್ಟಿರುವ ಬದನೆಕಾಯಿಯ ತುಂಡುಗಳನ್ನು, ಲಿಂಗವೆಂದು ಹೆಸರಿಸಿದ್ದರಿಂದ, ಆ ವಸ್ತು ರಚಿತವಾದ ಸಾಮಗ್ರಿ ಅಥವಾ ಸ್ಥೂಲಕ್ಕೆ ಮಾನ್ಯತೆ ನೀಡದೇ, ಹೆಸರಿಸುವ ಮೂಲಕ ಭಾವಕ್ಕೇ ಪ್ರಾಮುಖ್ಯತೆಯನ್ನು ಕೊಟ್ಟು ಬದನೆಕಾಯಿಯ ತುಂಡುಗಳನ್ನು ನಿಜವಾದ ಲಿಂಗಗಳೆಂದೇ ಗೌರವಿಸಿರುತ್ತಾರೆ.

ಹೀಗಾಗಿ ಬದನೆಕಾಯಿಯ ತುಂಡುಗಳು ಲಿಂಗಗಳಾದ ಭಾವಾಂತರವೇ ಹೊರತು, ವಸ್ತುಗಳ ರೂಪಾಂತರವಲ್ಲ. ತೆಲುಗಿನಲ್ಲಿ ಪರಮಾನಂದಯ್ಯ ಶಿಷ್ಯಲು ಕಥಾ ಎಂಬ ಸಿನಿಮಾ ಕನ್ನಡಕ್ಕೆ ಗುರುಶಿಷ್ಯರು ಎಂಬ ಹೆಸರಿನಲ್ಲಿ ಮರು ಚಿತ್ರಿತವಾಯ್ತು. ಅದರಲ್ಲಿ ಭೋಗಾಭಿಲಾಷಿ ರಾಜ (ವಿಷ್ಣುವರ್ಧನ್) ರಾತ್ರಿಯಿಡೀ ವೇಶ್ಯೆಯ ಸಂಗದಲ್ಲಿರುತ್ತಾನೆ.

ಬೆಳಗಾಗುತ್ತಲೇ ಅವನ ಶಿವಾರ್ಚನೆಯ ವ್ರತಕ್ಕೆ ಭಂಗ ಬರುವಂತೆ ಅವನು ಅವಳ ಶಯ್ಯಾಗೃಹದಲ್ಲಿ ಬಂಧಿತನಾಗಿರುತ್ತಾನೆ. ಆದರೆ ಶಿವಪೂಜೆಯ ವ್ರತಕ್ಕೆ ಭಂಗಬರಬಾರದೆಂದು ಅವನು ಮಾಡುವುದೇನೆಂದರೆ, ಅಂಗಾತ ಮಲಗಿರುವ ಜಯಮಾಲಿಯ ಮೊಲೆಯ ಉಬ್ಬಿಗೆ ಶಿವಲಿಂಗವೆಂದು ಭಾವಿಸಿ ಪೂಜೆ ಮಾಡುತ್ತಾನೆ.

ಅಲ್ಲಿಗೆ ಅವನ ಶಿವಪೂಜೆಯ ವ್ರತಕ್ಕೆ ಭಂಗ ಬರುವುದಿಲ್ಲ. ಒಟ್ಟಾರೆ ಶಿವ ಎನ್ನುವುದು ಭಾವದಲ್ಲಿದೆಯೇ ಹೊರತು ವಸ್ತುವಿನಲ್ಲಿಲ್ಲ ಎಂಬುದರ ಸೂಚಕ ಇದು. ಭಕ್ತಿ ಮುಖ್ಯವಾಗುತ್ತದೆಯೇ ಹೊರತು, ವಸ್ತುವಲ್ಲ. ದೇವರೆಂಬುದು ಕಾಣುವುದರಲ್ಲಿ ಅಲ್ಲ, ಕಂಡುಕೊಳ್ಳುವುದರಲ್ಲಿ ಇರುವುದು ಎಂಬುದನ್ನು ಇದು ಸೂಚಿಸುತ್ತದೆ.

ಒಬ್ಬ ಸೆಟ್ಟಿಯು ಬಸವಣ್ಣನವರ ಭಕ್ತಿ ಔದಾರ್ಯಗಳನ್ನು ಪರೀಕ್ಷೆ ಮಾಡಲು ಹೇರು ಹೇರು ಮುತ್ತನ್ನು ಕೇಳುವನಂತೆ. ಆಗ ಬಸವ ಜೋಳವನ್ನೇ ಮುತ್ತುಗಳನ್ನಾಗಿ ಪರಿವರ್ತಿಸಿ ಕೊಟ್ಟರೆಂದು ಪುರಾಣಗಳು ಹೇಳುತ್ತವೆ. ಆದರೆ, ಸೆಟ್ಟಿಯ ದೃಷ್ಟಿಯಲ್ಲಿ ಬೆಲೆಬಾಳುವ ಮುತ್ತಿಗೆ ಬೆಲೆ ಎಂದಾದರೆ, ಬಸವಣ್ಣನವರ ದೃಷ್ಟಿಯಲ್ಲಿ ಆಹಾರಕ್ಕಾಗುವ, ಜೀವವನ್ನು ಪೋಷಿಸುವ ಜೋಳವನ್ನೇ ಮಹತ್ವದ್ದಾಗಿ ನೋಡುವಂತಹ ಅವರ ಧೋರಣೆಯನ್ನು ಪ್ರತಿನಿಧಿಸುವಂತಹ ಮಿಥಿಕ ಇದಾಗಿರುತ್ತದೆ.

ಇನ್ನೂ ಬಹಳ ಜನಪ್ರಿಯವಾದಂತಹ ಮಿಥಿಕವೆಂದರೆ, ಬಸವಣ್ಣನವರು ನಿದ್ರಿಸುವಾಗ ಶರಣರು ಬರುತ್ತಾರೆ. ಅಣ್ಣನವರು ವಿಶ್ರಾಂತಿ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಅವರನ್ನು ಹಿಂದಕ್ಕೆ ಕಳುಹಿಸಿದಾಗ ಬಸವಣ್ಣನ ಜೀವ (ಆತ್ಮ) ಶರಣರನ್ನೇ ಹಿಂಬಾಲಿಸಿಬಿಡುತ್ತದೆ. ಕಳೇವರವಾದ ಬಸವನ ಶರೀರವನ್ನು ಕಂಡು ಹೌಹಾರಿದ ಮಹಾಮನೆಯವರು ಮತ್ತೆ ಕಳುಹಿಸಿದ ಶರಣರ ಹುಡುಕಿಕೊಂಡು ಹೋಗಿ ಮತ್ತೆ ಕರೆದುಕೊಂಡು ಬಂದಮೇಲೆ ಬಸವಣ್ಣನವರ ದೇಹದೊಳಕ್ಕೆ ಜೀವ ಸೇರಿ ಸಜೀವವಾಗಿ ಎದ್ದು ಕೂತರು ಎಂಬುದು.
ಇದನ್ನು ಬಹಳ ನೇರವಾಗಿ ವಿಶ್ಲೇಷಿಸಬಹುದು.

ಶರಣರ ಬರವೆಮಗೆ ಜೀವಾಳ ಎನ್ನುವ ಅಣ್ಣನವರಿಗೆ ತನ್ನ ವಿಶ್ರಾಂತಿ, ಭೋಗ ಇತ್ಯಾದಿಗಳೆಲ್ಲಾ ಲೆಕ್ಕಕ್ಕಿಲ್ಲದ್ದು. ತೀರಾ ಗಂಭೀರವಾಗಿ ಗಣಿಸದೇ ಇರುವುದು. ತಮ್ಮ ಸಾಮಾಜಿಕ ಜೀವನವನ್ನೂ, ವೈಯಕ್ತಿಕ ಬದುಕನ್ನೂ ಒಂದಾಗಿಸಿಯೇ ಬಾಳಿದ ಬಸವಣ್ಣನವರಿಗೆ ತಾವು ಮಲಗಿದ್ದಾಗ ಬಂದು, ತೆರಳಿದ ಶರಣರ ಬಗ್ಗೆ ತಿಳಿಯುತ್ತಾರೆ. ಎಲ್ಲಿಂದಲೋ, ಎಷ್ಟೋ ದೂರವನ್ನು ಕ್ರಮಿಸಿ, ಕಷ್ಟಪಟ್ಟು ತಮ್ಮನ್ನು ಕಾಣಲು ಬಂದಿದ್ದ ಶರಣರನ್ನು ತನ್ನ ನಿದ್ದೆ ಅಥವಾ ವಿಶ್ರಾಂತಿಯಂತಹ ಕಾರಣಕ್ಕೆ ಹಿಂದಕ್ಕೆ ಕಳುಹಿಸಿರುವುದು ನಿಜಕ್ಕೂ ಬೇಸರವೂ, ದುಃಖವೂ ಆಗುತ್ತದೆ.

ಮಂಕಾಗಿರುವ ಬಸವಣ್ಣನವರನ್ನು ಕಂಡು ಚಿಂತೆಗೀಡಾದ ಶರಣರನ್ನು ಹಿಂದಕ್ಕೆ ಕಳುಹಿಸಿದವರು ಮತ್ತೆ ಅವರನ್ನು ಹುಡುಕಿ ಕರೆತಂದಾಗ ಅಣ್ಣನವರು ಉಲ್ಲಸಿತರಾಗುತ್ತಾರೆ. ಹೆಣದಂತೆ ಕಳಾಹೀನವಾಗಿದ್ದವರು, ಜೀವತಳೆದವರಂತೆ ಚೈತನ್ಯದಿಂದ ಕೂಡುತ್ತಾರೆ. ಇಂತಹ ಸಂಗತಿಗಳೆಲ್ಲವೂ ಕೂಡ ಪುರಾಣದ ರೂಪಕಗಳನ್ನು ಪಡೆದುಕೊಂಡಿರುತ್ತವೆ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೆಂದರೆ, ಕ್ರಿಸ್ತ ಮತ್ತು ಬಸವಣ್ಣರಿಬ್ಬರೂ ತಮ್ಮೊಟ್ಟಿನ ಜನರಿಗೆ ನಡೆದುಕೊಳ್ಳಲು ಕ್ರಮಗಳನ್ನು ರೂಪಿಸಿಕೊಟ್ಟರು. ತಾವೇ ಮಾದರಿಯಾಗಿ ಬಾಳಿದರು. ತಾವು ತಮ್ಮ ಮನಸ್ಸಿಗೆ, ತಮ್ಮ ಭಾವುಕತೆಗೆ, ತಮ್ಮ ಧೋರಣೆಗಳಿಗೆ, ತಮ್ಮ ಒಲವು ನಿಲುವುಗಳಿಗೆ ಇಂಥಾ ಬಗೆಯ ತರಬೇತಿಗಳನ್ನು ನೀಡಬೇಕೆಂದು ಕ್ರಮಗಳನ್ನು ರೂಪಿಸಿದರು.

ಆ ಕ್ರಮಗಳನ್ನು ಒಳಗೊಂಡ ಮಾದರಿ ಸಮಾಜವನ್ನು ರೂಪಿಸುವ ಉದ್ದೇಶ ಹೊಂದಿದ್ದರವರು. ಆದರೆ ಅವರ ಜೀವಿತಾವಧಿಯಲ್ಲಿ ಆ ಮಾದರಿ ಸಮಾಜ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬರಲಿಲ್ಲ. ವ್ಯಕ್ತಿಗತವಾಗಿ ರೂಪುಗೊಳ್ಳುತ್ತಿದ್ದವರು ಸಾಮಾಜಿಕವಾಗಿ ವ್ಯಾಪಕಗೊಳ್ಳುವ ಮೊದಲೇ ಅವರಿಬ್ಬರೂ ಮರಣಿಸಿದರು. ಹಾಗಾಗಿ ಅವರ ಕೆಲಸ ಪೂರ್ಣಗೊಳ್ಳಲಿಲ್ಲ.

ಆದರೆ ಅವರು ರೂಪಿಸಿದ ಕ್ರಮವು ಅಥವಾ ಧರ್ಮವು ಸಾಂಸ್ಥಿಕವಾಗಿ ಸ್ಥಾಪನೆಯಾಗಲು ಹಲವು ಬಗೆಯ ಕವಲುಗಳು ಮೂಡಿದವು. ಮುಂದೆ ನೋಡೋಣ. ಧರ್ಮ ಅಥವಾ ಧಾರ್ಮಿಕತೆಯ ತಾತ್ವಿಕ ಆಂತರ್ಯವನ್ನು ಅರಿಯಲು ಈಗ ನಾವೊಂದು ಮಾರ್ಗವನ್ನು ಹಿಡಿದಿದ್ದೇವೆ. ಇದೊಂದು ಬಗೆಯ ಅಧ್ಯಯನದ ರೀತಿ. ಇದು ಅಂತಿಮವಲ್ಲ. ಇದು ಸಂಪೂರ್ಣವೂ ಅಲ್ಲ. ಆದರೆ ಸಮಾಧಾನ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending