ಅಂತರಂಗ
ಧರ್ಮ ಮರ್ಮ – 05 : ಕ್ರಿಸ್ತ ಮತ್ತು ಬಸವಣ್ಣ ಧಾರ್ಮಿಕ ಪುರಾಣ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/06/art_Klaus_fabry_suddidina.jpg&description=ಧರ್ಮ ಮರ್ಮ – 05 : ಕ್ರಿಸ್ತ ಮತ್ತು ಬಸವಣ್ಣ ಧಾರ್ಮಿಕ ಪುರಾಣ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/06/art_Klaus_fabry_suddidina.jpg&description=ಧರ್ಮ ಮರ್ಮ – 05 : ಕ್ರಿಸ್ತ ಮತ್ತು ಬಸವಣ್ಣ ಧಾರ್ಮಿಕ ಪುರಾಣ', 'pinterestShare', 'width=750,height=350'); return false;" title="Pin This Post">
- ಯೋಗೇಶ್ ಮಾಸ್ಟರ್
ಬಾಗೇವಾಡಿಯ ಬಸವೇಶ್ವರನ (ನಂದಿ) ದೇವಸ್ಥಾನಕ್ಕೆ ಹೋದರೆ ಬಸವಣ್ಣನವರ ತಾಯಿ ಇದೇ ಬಸವನ ಪೂಜೆ ಮಾಡಿ ಶಿಶು ಭಾಗ್ಯ ಪಡೆದರೆಂದು ಹೇಳುತ್ತಾ ಕೋಡುಳ್ಳ ನಂದಿಯ ವಿಗ್ರಹವನ್ನು ತೋರುತ್ತಾರೆ. ಅದಕ್ಕೆ ಅಲ್ಲಿ ಬಹಳ ಮಾನ್ಯತೆಯೂ ಇದೆ.
ಶಿವಗಣದಲ್ಲಿ ಒಬ್ಬನಾದ ಸಾಕ್ಷಾತ್ ನಂದಿಯೇ ತಾಯಿ ಮಾದಲಾಂಬಿಕೆಯ ಗರ್ಭವನ್ನು ಸೇರಿ ಬಸವಣ್ಣನಾಗಿ ಜನ್ಮತಾಳಿದ ಎಂದು ಹೇಳುವಂತಹ ಮಿಥಿಕವನ್ನು ನಮ್ಮಲ್ಲಿ ಕಟ್ಟಿದ್ದಾರೆ. ಯಾವ ಅವೈಚಾರಿಕವಾದ ಡೋಂಗಿ ಪುರಾಣಗಳನ್ನು ಗುಡಿಸಿ ಹಾಕಿ ಜನತೆಯನ್ನು ಪ್ರಜ್ಞಾವಂತರನ್ನಾಗಿ ಮಾಡಲು ಜೀವನವೆಲ್ಲಾ ಹೆಣಗಿ ಮರಣಿಸಿದ ಬಸವಣ್ಣನಿಗೆ ಸಂದ ಗೌರವವಿದು.
ಅಂದು ಕಲ್ಯಾಣ ಕ್ರಾಂತಿಯಲ್ಲಿ ಶರಣರ ಕಗ್ಗೊಲೆಗಳು ನಡೆಯುವಾಗ ಸಂಪ್ರದಾಯವಾದಿಗಳ ಮಾರಣ ಘಾತಗಳಿಂದ ಶರಣರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಎತ್ತೆತ್ತಲೋ ವಲಸೆ ಹೋಗಬೇಕಾಯ್ತು. ತಲೆ ಮರೆಯಿಸಿಕೊಳ್ಳಬೇಕಾಯ್ತು. ನಂತರ ನಿಧಾನವಾಗಿ ತಮ್ಮ ಅಸ್ತಿತ್ವವನ್ನು ಮರುಸ್ಥಾಪಿಸಲು ಬಸವನ ಅನಾವರಣ ಮಾಡಲು, ಜನರ ನಡುವೆ ಬಸವನ ಬಗ್ಗೆ ಸದಭಿಮಾನವನ್ನು ಮೂಡಿಸಲು ಬಸವನ ಅಭಿಮಾನಿಗಳು ಪ್ರಯತ್ನಿಸುವಾಗ ಅದೇ ಹಳೆಯ ಪುರಾಣದ ತಂತ್ರಗಳನ್ನೂ ಬಳಸಲಾರಂಭಿಸಿದರು.
ಕ್ರಿಸ್ತ ಮತ್ತು ಬಸವರ ಕ್ರಾಂತಿ
ಕ್ರಿಸ್ತ ಮತ್ತು ಬಸವಣ್ಣ, ಇವರಿಬ್ಬರ ಸಾವು ಧರ್ಮ ಸ್ಥಾಪನೆಗೆ ನಾಂದಿಯಾಯ್ತು. ಇಬ್ಬರಲ್ಲೂ ಅನೇಕ ಸಾಮ್ಯತೆಗಳಿವೆ. ಕ್ರಿಸ್ತನ ಸಾವಿನ ನಂತರ ಅವನ ಅಭಿಮಾನಿ ಶಿಷ್ಯರು, ಅನುಯಾಯಿಗಳು ಹಾಗೂ ಬಸವನ ಸಾವಿನ ನಂತರ ಶರಣರು ಪಟ್ಟ ಪಾಡುಗಳಲ್ಲಿ ಸಾಮ್ಯತೆ ಇದೆ. ಅಷ್ಟೇ ಅಲ್ಲ.
ಯೆಹೂದಿಗಳ ಸಾಂಪ್ರದಾಯಕ ಅವೈಚಾರಿಕ ವಿಚಾರಗಳಿಗೆ ಮರುವ್ಯಾಖ್ಯಾನ ಮಾಡುತ್ತಾ, ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು ಕ್ರಿಸ್ತ ಯತ್ನಿಸಿದರೆ, ಬಸವ ಇಲ್ಲಿ ವೈದಿಕರ ಜಡ್ಡುಗಟ್ಟಿದ ಸಾಂಪ್ರದಾಯಿಕತೆಯ ನಿರರ್ಥಕತೆಗಳನ್ನು ಬಯಲಿಗೆ ತಂದು ಸಮಸಮಾಜದ ನಿರ್ಮಾಣಕ್ಕೆ, ವ್ಯಕ್ತಿಗತ ಜಾಗೃತಿಯ ಬಗ್ಗೆ ಪ್ರಜಾಸತ್ತಾತ್ಮಕವಾದ ಆಧ್ಯಾತ್ಮಿಕತೆ, ಧಾರ್ಮಿಕತೆಯನ್ನು ಪ್ರತಿಷ್ಠಾಪಿಸಲು ಚಳವಳಿ ಹೂಡಿದ.
ಈ ಇಬ್ಬರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಉದ್ದೇಶ ಒಂದೇ ಆಗಿದ್ದರೂ ಕೆಲವು ಸಾಮಾಜಿಕ ಸ್ಥಾನಮಾನದ ವಿಷಯದಲ್ಲಿ, ಸಾಮಾಜಿಕ ಚಟುವಟಿಕೆಯಲ್ಲಿ ವ್ಯತ್ಯಾಸಗಳು ಕಾಣುತ್ತವೆ. ಬಸವಣ್ಣ ಕ್ರಿಸ್ತನಂತೆ ಬಡವರೇನಾಗಿರಲಿಲ್ಲ. ಕ್ರಿಸ್ತನಿಗೆ ಸಮಾಜದಲ್ಲಿ ಪ್ರಭುತ್ವದ ಆಶ್ರಯವಿರುವಂತಹ ಯಾವ ಅಧಿಕಾರ ಇರಲಿಲ್ಲ. ಬಸವಣ್ಣನಿಗೆ ರಾಜ ಬಿಜ್ಜಳನು ಗೆಳೆಯನಾಗಿದ್ದ. ಬಸವಣ್ಣನ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳಿಗೆ ಬಿಜ್ಜಳನ ನೇರ ಕೊಡುಗೆ ಏನೂ ಇರದಿದ್ದರೂ, ಬಸವನಿಗಿದ್ದ ಅವನ ಗೆಳೆತನದ ಸಕಾರಾತ್ಮಕ ಪ್ರಭಾವವನ್ನು ಅಲ್ಲಗೆಳೆಯಲಾಗದು.
ನಿತ್ಯ ಅನ್ನದಾಸೋಹ ಮಾಡುತ್ತಿದ್ದ ಬಸವನ ಮಹಾಮನೆ ಕ್ರಿಸ್ತನಿಗಿರಲಿಲ್ಲ. ಆದರೆ ಕ್ರಿಸ್ತನೂ ಬಸವನಂತೆ ಅರಿವನ್ನೂ, ಆಹಾರವನ್ನೂ ಹಂಚಿಕೊಳ್ಳಲು ತನ್ನದೇ ರೀತಿಯಲ್ಲಿ ಕಾರ್ಯತತ್ಪರನಾಗಿದ್ದ. ಹಂಚಿಕೊಂಡು ಉಣ್ಣುವುದರಲ್ಲಿ ಬಸವನಂತೆಯೇ ಪ್ರಾಮುಖ್ಯತೆ ಕೊಟ್ಟಿದ್ದ. ಮುಂದೆ ಕ್ರಿಸ್ತನಿಗೂ ಮತ್ತು ಬಸವಣ್ಣನಿಗೂ ರಾಜದ್ರೋಹದ ಆಪಾದನೆಯನ್ನೇ ಮಾಡಿದರು. ಕ್ರಿಸ್ತನ ಶಿಲುಬೆಗೇರಿಸಿದರು. ಬಸವನ ಗಡಿಪಾರು ಮಾಡಿ ಕೊಂದರು. ಬಸವ ನೇರ ರಾಜಾಸ್ಥಾನದ ಸದಸ್ಯ ಮತ್ತು ಅಧಿಕಾರಿಯಾಗಿದ್ದರಿಂದ ರಾಜಕೀಯ ದ್ರೋಹದ ಆಪಾದನೆಗಳನ್ನೂ ಕೂಡ ಹೊರಿಸಿದರು, ರಾಜನನ್ನು ಕೊಂದರು, ಅದನ್ನು ಶರಣರ ತಲೆಗೆ ಕಟ್ಟಿದರು.
ಇನ್ನು ಶರಣರನ್ನು ಬೇಟೆಯಾಡ ತೊಡಗಿದಾಗ ಅವರು ನಿರ್ವಾಹವಿಲ್ಲದೇ ತಲೆ ಮರೆಸಿಕೊಂಡು ತಪ್ಪಿಸಿಕೊಳ್ಳಬೇಕಾಯ್ತು. ಅದೇ ರೀತಿ ಕ್ರಿಸ್ತನ ಅನುಯಾಯಿಗಳು ಕೂಡ ತಲೆ ಮರೆಯಿಸಿಕೊಂಡು ತಮ್ಮ ಕ್ರಿಸ್ತ ಧರ್ಮದ ಸಾರ ಸಿದ್ಧಾಂತಗಳನ್ನು ಗಟ್ಟಿಗೊಳಿಸಿಕೊಳ್ಳಲು ರಹಸ್ಯವಾಗಿ ಧರ್ಮಸಭೆಗಳನ್ನು ಸೇರಿಸಬೇಕಿತ್ತು.
ಪುನರುತ್ಥಾನಕ್ಕಾಗಿ ಮಿಥಿಕ
ಕ್ರಿಸ್ತಾನುಯಾಯಿಗಳೂ ಮತ್ತು ಬಸವಾನುಯಾಯಿಗಳೂ ಮಾಡಿದ ಎಡವಟ್ಟೆಂದರೆ ತಮ್ಮ ತಮ್ಮ ಅಭಿಮಾನದ ಆಧ್ಯಾತ್ಮಿಕ ನಾಯಕರಿಗೆ ಪವಾಡಗಳ ಮುಸುಕನ್ನು ಹಾಕಿ ಅವರವರ ಸತ್ಯತೆಗಳನ್ನು, ನಿಜ ಸ್ವರೂಪವನ್ನು ಮಂಕುಗೊಳಿಸಿದ್ದು. ಆದರೆ ಅವರನ್ನು ಮೂರ್ಖರೆಂದೋ, ಕುಯುಕ್ತಿಯ ತಂತ್ರಗಾರರೆಂದೋ ಕರೆಯಲಾರೆ.
ತಮ್ಮ ಅಸ್ತಿತ್ವವನ್ನು ಪುನರ್ಸ್ಥಾಪಿಸಲು ಆಗಿನ ಜನ ಸಾಮಾನ್ಯರ ನಡುವೆ ತಮ್ಮ ನಾಯಕರ ಬಗ್ಗೆ ಶ್ರದ್ಧೆ ಮತ್ತು ಭಕ್ತಿಯನ್ನು ಉಂಟುಮಾಡಲು, ಆಗ ವಾಡಿಕೆಯಲ್ಲಿದ್ದ ಮಿಥಿಕಗಳನ್ನು ಕಟ್ಟುವ ತಂತ್ರವನ್ನೇ ಉಪಯೋಗಿಸಿದರು. ಅದೇ ಕೈಲಾಸ ಒಡ್ಡೋಲಗ, ದೇವರ ಶಾಪ ಅಥವಾ ಅಣತಿಯಂತೆ ಭೂಲೋಕಕ್ಕಿಳಿಯುವುದು, ಸತ್ತವರನ್ನು ಬದುಕಿಸುವುದು, ಜನ ಸಾಮಾನ್ಯರು ಮಾಡಲಾಗದಂತಹ ಅದ್ಭುತಗಳನ್ನು ಸೃಷ್ಟಿಸುವುದು ಇತ್ಯಾದಿ. ಆದರೆ ನಂತರವೂ ಅದೇ ಉಳಿದುಕೊಂಡಿದ್ದು ಮಾತ್ರ ವಿಪರ್ಯಾಸ.
ಕ್ರಿಸ್ತನಾಗಲಿ, ಬಸವಣ್ಣನಾಗಲಿ ಎಂದಿಗೂ ಒಪ್ಪದಿರುವಂತಹ ತೀರಾ ಅವೈಚಾರಿಕ ಮತ್ತು ಪೆÇಳ್ಳು ಕಥೆಗಳ ಹೇರುವಿಕೆಗಳು ಈ ಪವಾಡಗಳು. ಬಸವಣ್ಣ ಅಥವಾ ಕ್ರಿಸ್ತ ಎಂದರೆ ಹೀಗೇ ಎಂದು ನೇರವಾಗಿ ಹೇಳಿದರೇನೇ ಬೆರಗುಗೊಳಿಸುವಂತಹ ಜೀವನದ ಅದ್ಭುತಗಳಿವೆ. ಸತ್ಯಾನ್ವೇಷಕರು ಶರಣಾಗುವಂತಹ ತತ್ವಗಳಿವೆ. ಆದರೆ ಅವುಗಳಿಗೆ ಪವಾಡಗಳ ಪೋಷಾಕನ್ನು ತೊಡಿಸಿ ಆ ಮಹಾಂತರ ಜೀವನಗಳನ್ನು ಮಂಕು ಮಾಡುತ್ತಿರುವ ಮಂದಿ ಈಗಲೂ ಇದ್ದಾರೆ.
ಪವಾಡ ಸದೃಶವಾದ ಭ್ರಾಮಕ ವ್ಯಕ್ತಿತ್ವಗಳನ್ನೇ ಮುಂದಿಡುತ್ತಾ ತಾವೂ ಅದೇ ಭ್ರಮಾಧೀನ ಸ್ಥಿತಿಯಲ್ಲಿದ್ದಾರೆ ಎಂಬುದೇ ವಿಷಾದನೀಯ. ಬಸವಣ್ಣ ತನ್ನ ವಚನಗಳ ಮೂಲಕವೇ, ಇತಿಹಾಸದಲ್ಲಿ ಸರಿದು ಸವೆದುಳಿಸಿದ ಕುರುಹುಗಳಿಂದಲೇ ಆಪ್ತ ಮತ್ತು ಆತ್ಮೀಯ ಹಿರಿಯಣ್ಣನಾಗಿಯೇ ಭಾವಪ್ರವೇಶ ಮಾಡುತ್ತಾನೆ. ಅಂತೆಯೇ ಯೇಸುವೂ ಕೂಡ ತನ್ನ ಪ್ರೇಮದ, ಕಾರುಣ್ಯದ, ಕ್ಷಮಾದಾನದ ನಿಲುವುಗಳಿಂದಲೇ ಇವ ನಮ್ಮವ ಇವ ನಮ್ಮವ ಎಂದೆನಿಸುತ್ತಾನೆ.
ಮನೆಯವರಂತೆ ಸಲುಗೆಯಿಂದಲೇ ಸ್ಪರ್ಶ ಕೊಡುವಂತೆ ಕಾಣುತ್ತಾರೆ. ಹಾಗಿರುವಾಗ ತಮ್ಮವರನ್ನು ಸಹಜದಲ್ಲಿ ಸ್ವೀಕರಿಸದೇ ಉತ್ಪ್ರೇಕ್ಷೆಯ ಪೌರಾಣಿಕ ಮೇಲಾಟಗಳು ಸಾಮಾನ್ಯ ಭ್ರಾಮಕ ಮನಸ್ಸುಗಳಿಗೆ ಬೆರಗುಗೊಳಿಸುತ್ತದೆ ಎಂಬುದೇನೋ ನಿಜ. ಆದರೆ ಅದೆಷ್ಟು ಮಟ್ಟಿಗೆ ಸರಿ? ಅರವಳಿಕೆಯಲ್ಲಿಯೇ ಜನರ ಮನಸ್ಸನ್ನು ನಿರ್ದೇಶಿಸುತ್ತಿರುವುದು ಅರಿವನ್ನು ಉಂಟುಮಾಡುವ, ಜಾಗೃತಿಗೊಳಿಸುವ ಕ್ರಿಸ್ತ ಮತ್ತು ಬಸವಣ್ಣರಿಬ್ಬರ ಉದ್ದೇಶವೇ ವಿಫಲ ಮಾಡಿದಂತೆ. ಅವರ ಉದ್ದೇಶವನ್ನು ವಿಫಲಗೊಳಿಸಿ ವ್ಯಕ್ತಿಯನ್ನು ವೈಭವೀಕರಿಸುವುದು ಅವರಿಬ್ಬರ ವ್ಯಕ್ತಿತ್ವಗಳೂ ಒಪ್ಪುವಂತದ್ದೇನಲ್ಲ.
ಶರಣ ಲೀಲಾಮೃತ
ಬಸವಣ್ಣನ ಜೀವನದಲ್ಲಿ 88 ಪವಾಡಗಳನ್ನು ಮಾಡಿದ, 360 ಜನರಿಗೆ ಪ್ರಾಣದಾನ ಮಾಡಿದ ಉಲ್ಲೇಖಗಳು ಸಿಗುತ್ತವೆ. ಶರಣ ಲೀಲಾಮೃತದ ಕವಿ ಚನ್ನಪ್ಪ, ಭೀಮಕವಿಯೇ ಮೊದಲಾಗಿ ಹಲವು ಕವಿಗಳು ಉತ್ಪ್ರೇಕ್ಷೆ ಮಾಡಿದ್ದಾರೆ ಎನ್ನುವುದೂ ಒಂದಾದರೆ, ಕೆಲವೊಂದನ್ನು ವಿಷಯಗಳನ್ನು ಸೂಚ್ಯವಾಗಿ ತಿಳಿಸಲು ಮಿಥಿಕಗಳನ್ನು ಬಳಸಿದ್ದಾರೆ ಎಂದು ತೋರುತ್ತದೆ.
ಹರಿಹರನ ಬಸವರಾಜ ದೇವರ ರಗಳೆಯೂ ಕೂಡ ಉತ್ಪ್ರೇಕ್ಷೆಗಳಿಂದ ಹೊರತಾಗಿಲ್ಲ. ಆದರೆ ಆ ಕಾವ್ಯವನ್ನು ಹೆಚ್ಚು ಗಂಭೀರವಾಗಿ ಗಮನಿಸಬೇಕಾದ ಅಗತ್ಯವಿದೆ. ಏಕೆಂದರೆ ಬಸವಣ್ಣನ ಅವಸಾನದ ನಂತರ ಸಮೀಪದ ಅವಧಿಯಲ್ಲಿ ಬರೆದಂತಹ ಕೃತಿ ಅದಾಗಿದೆ. ಆದರೆ ಅದೂ ಕೂಡ ತಿರುಚುವಿಕೆಗೆ ಒಳಗಾಗುವಂತಹ ಸಂದರ್ಭವೊದಗಿತು. ಅದನ್ನು ನಂತರ ವಿಚಾರಿಸುವ.
ಬಸವನ ಪವಾಡಗಳಲ್ಲಿ ಮುಖ್ಯವಾದುದು ಗೊಲ್ಲತಿಯ ಪವಾಡ, ಬದನೆಕಾಯಿ ಲಿಂಗವಾದದ್ದು, ಜೋಳದ ಕಾಳುಗಳನ್ನು ಮುತ್ತಿನ ಮಣಿಗಳನ್ನಾಗಿ ಮಾಡಿದ್ದು ಮತ್ತು ಇತರೆ. ತಮಿಳು ಶೈವ ಸಂತರ ಕಥನ ಪ್ರಭಾವಗಳು
ಶರಣ ಲೀಲಾಮೃತದಲ್ಲಂತೂ ಬಸವನನ್ನು ಸಣ್ಣವನಿಂದಲೇ ಮಹಾಮಹಿಮ, ಪವಾಡ ಪುರುಷನಂತೆ ಚಿತ್ರಿಸುತ್ತಾರೆ. ಬಾಲಕ ಬಸವ ಬಹಳ ಚುರುಕಿನ ವಿದ್ಯಾರ್ಥಿಯಾಗಿದ್ದು, ಅವನ ಸಹಪಾಠಿಗಳಿಗೆ ಅವನ ಕಂಡರೆ ಅಸೂಯೆ.
ಒಮ್ಮೆ ಬೆನಕನೆಂಬ ಅವರ ಸಹಪಾಠಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿಹೋಗುತ್ತಾನೆ. ಆಗ ಹೊಟ್ಟೆಕಿಚ್ಚಿನ ಬಸವನ ಓರಗೆಯವರು ಬಸವನೇ ಬೆನಕನನ್ನು ನೀರಿಗೆ ತಳ್ಳಿದ ಎಂದು ಆರೋಪವನ್ನು ಹೊರಿಸುತ್ತಾರೆ. ಆಗ ಹಿರಿಯರು ಕೋಪಗೊಂಡು ಬಸವನ ವಿಚಾರಣೆಗೆ ಒಳಪಡಿಸಿದಾಗ, “ಬೆನಕಾ, ನೀನೇ ಬಂದು ಹೇಳು, ನಾನು ನಿನ್ನನ್ನು ನೂಕಿದೆನೇ?” ಎಂದು ಜೋರಾಗಿ ಕೇಳಿದಾಗ ನೀರಿನಿಂದ ಜೀವ ತಳೆದು ಬಂದ ಬೆನಕ ಇಲ್ಲವೆಂದು ಸಾಕ್ಷಿ ಹೇಳುತ್ತಾನೆ. ಇಂತಹ ಪವಾಡಗಳಿಗೆ ತಮಿಳು ಶಿವಭಕ್ತರ ಕಥೆಗಳ ಪ್ರಭಾವವಿದೆ ಎಂದು ನೇರವಾಗಿ ಗೋಚರಿಸುತ್ತದೆ. ಕೊಡಗೂಸಿನ ಕಥೆಯಾಗಲಿ, ಸಿರಿಯಾಳ ಸೆಟ್ಟಿಯ ಕಥೆಯಾಗಲಿ ಇಂಥಾ ಪವಾಡ ಕಥನಗಳನ್ನೇ ಹೊಂದಿವೆ.
ಇನ್ನು ಗೊಲ್ಲತಿಯ ಕಥೆಯೆಂದರೆ, ಬಿಜ್ಜಳನ ಆಸ್ಥಾನದಲ್ಲಿ ಬಸವ ಕಾರ್ಯಕಲಾಪದಲ್ಲಿ ತೊಡಗಿದ್ದಾಗ ಕೆರೆಯ ಏರಿಯ ಮೇಲೆ ಗೊಲ್ಲತಿಯೊಬ್ಬಳು ಹೋಗುತ್ತಿದ್ದು, ಕಾಲು ಜಾರಿ ನೀರಿಗೆ ಬೀಳುವಾಗ “ಬಸವಾ ರಕ್ಷಿಸು” ಎಂದು ಕೂಗುವಳಂತೆ. ಆಗ ಬಸವ “ತಾಯೇ ನಿಲ್ಲು” ಎಂದು ತಡೆದರಂತೆ. ಬಿಜ್ಜಳ ಅಪಹಾಸ್ಯ ಮಾಡಲು, ಬಸವ ಪರೀಕ್ಷಿಸಲು ಹೇಳಿದರಂತೆ. ಅದರಂತೆ ರಾಜನು ತನ್ನ ಸೈನಿಕರನ್ನು ಕಳುಹಿಸಿ ವಿಚಾರಿಸಲಾಗಿ ಬಸವನ ಮಾತು ನಿಜವೆಂದು ತಿಳಿಯುವುದಂತೆ.
ಇದನ್ನು ನಾವು ತಿಳಿಯಬೇಕಾಗಿರುವುದು ಹೇಗೆಂದರೆ, ನಿಜಕ್ಕೂ ಬಸವಣ್ಣನವರು ತಮ್ಮ ಸಂಚಾರದ ಸಮಯದಲ್ಲಿ ಗೊಲ್ಲತಿಯೊಬ್ಬಳು ನೀರಿಗೆ ಬೀಳುವ ಅಥವಾ ಜಾರುವ ಸಮಯದಲ್ಲಿ ತಮ್ಮ ಸಾಮಾಜಿಕ ಸ್ಥಾನಮಾನದ ಗೊಡವೆಯೇ ಇಲ್ಲದೇ ಮುಂದಾಗಿ ಆಕೆಯನ್ನು ಪಾರು ಮಾಡಿದ್ದಿರಬಹುದು. ಅಂತಹ ಅವರ ಸಹಜ ಮತ್ತು ಉದಾತ್ತ ವರ್ತನೆಯನ್ನು ಹೀಗೆ ಮಿಥಿಕಕ್ಕೆ ಒಳಪಡಿಸಲಾಗಿದೆ ಎಂದು ತೋರುತ್ತದೆ.
ಮಹಾಮನೆಗೆ ಬದನೇಕಾಯಿಯ ತುಂಡುಗಳನ್ನು ಲಿಂಗವೆಂದು ತೋರುವಂತೆ ಬಟ್ಟೆಯಲ್ಲಿ ಕಟ್ಟಿಕೊಂಡು ಕಳ್ಳರು ಬರುತ್ತಾರೆ. ಆಗ ಬಸವನ ಲೀಲೆಯಿಂದ ಅವು ನಿಜವಾದ ಲಿಂಗಗಳೇ ಆದವೆಂದು ದಂತಕಥೆ. ಆದರೆ, ಬಸವಣ್ಣನು ವಸ್ತ್ರಗಳಲ್ಲಿ ಕಟ್ಟಿರುವ ಬದನೆಕಾಯಿಯ ತುಂಡುಗಳನ್ನು, ಲಿಂಗವೆಂದು ಹೆಸರಿಸಿದ್ದರಿಂದ, ಆ ವಸ್ತು ರಚಿತವಾದ ಸಾಮಗ್ರಿ ಅಥವಾ ಸ್ಥೂಲಕ್ಕೆ ಮಾನ್ಯತೆ ನೀಡದೇ, ಹೆಸರಿಸುವ ಮೂಲಕ ಭಾವಕ್ಕೇ ಪ್ರಾಮುಖ್ಯತೆಯನ್ನು ಕೊಟ್ಟು ಬದನೆಕಾಯಿಯ ತುಂಡುಗಳನ್ನು ನಿಜವಾದ ಲಿಂಗಗಳೆಂದೇ ಗೌರವಿಸಿರುತ್ತಾರೆ.
ಹೀಗಾಗಿ ಬದನೆಕಾಯಿಯ ತುಂಡುಗಳು ಲಿಂಗಗಳಾದ ಭಾವಾಂತರವೇ ಹೊರತು, ವಸ್ತುಗಳ ರೂಪಾಂತರವಲ್ಲ. ತೆಲುಗಿನಲ್ಲಿ ಪರಮಾನಂದಯ್ಯ ಶಿಷ್ಯಲು ಕಥಾ ಎಂಬ ಸಿನಿಮಾ ಕನ್ನಡಕ್ಕೆ ಗುರುಶಿಷ್ಯರು ಎಂಬ ಹೆಸರಿನಲ್ಲಿ ಮರು ಚಿತ್ರಿತವಾಯ್ತು. ಅದರಲ್ಲಿ ಭೋಗಾಭಿಲಾಷಿ ರಾಜ (ವಿಷ್ಣುವರ್ಧನ್) ರಾತ್ರಿಯಿಡೀ ವೇಶ್ಯೆಯ ಸಂಗದಲ್ಲಿರುತ್ತಾನೆ.
ಬೆಳಗಾಗುತ್ತಲೇ ಅವನ ಶಿವಾರ್ಚನೆಯ ವ್ರತಕ್ಕೆ ಭಂಗ ಬರುವಂತೆ ಅವನು ಅವಳ ಶಯ್ಯಾಗೃಹದಲ್ಲಿ ಬಂಧಿತನಾಗಿರುತ್ತಾನೆ. ಆದರೆ ಶಿವಪೂಜೆಯ ವ್ರತಕ್ಕೆ ಭಂಗಬರಬಾರದೆಂದು ಅವನು ಮಾಡುವುದೇನೆಂದರೆ, ಅಂಗಾತ ಮಲಗಿರುವ ಜಯಮಾಲಿಯ ಮೊಲೆಯ ಉಬ್ಬಿಗೆ ಶಿವಲಿಂಗವೆಂದು ಭಾವಿಸಿ ಪೂಜೆ ಮಾಡುತ್ತಾನೆ.
ಅಲ್ಲಿಗೆ ಅವನ ಶಿವಪೂಜೆಯ ವ್ರತಕ್ಕೆ ಭಂಗ ಬರುವುದಿಲ್ಲ. ಒಟ್ಟಾರೆ ಶಿವ ಎನ್ನುವುದು ಭಾವದಲ್ಲಿದೆಯೇ ಹೊರತು ವಸ್ತುವಿನಲ್ಲಿಲ್ಲ ಎಂಬುದರ ಸೂಚಕ ಇದು. ಭಕ್ತಿ ಮುಖ್ಯವಾಗುತ್ತದೆಯೇ ಹೊರತು, ವಸ್ತುವಲ್ಲ. ದೇವರೆಂಬುದು ಕಾಣುವುದರಲ್ಲಿ ಅಲ್ಲ, ಕಂಡುಕೊಳ್ಳುವುದರಲ್ಲಿ ಇರುವುದು ಎಂಬುದನ್ನು ಇದು ಸೂಚಿಸುತ್ತದೆ.
ಒಬ್ಬ ಸೆಟ್ಟಿಯು ಬಸವಣ್ಣನವರ ಭಕ್ತಿ ಔದಾರ್ಯಗಳನ್ನು ಪರೀಕ್ಷೆ ಮಾಡಲು ಹೇರು ಹೇರು ಮುತ್ತನ್ನು ಕೇಳುವನಂತೆ. ಆಗ ಬಸವ ಜೋಳವನ್ನೇ ಮುತ್ತುಗಳನ್ನಾಗಿ ಪರಿವರ್ತಿಸಿ ಕೊಟ್ಟರೆಂದು ಪುರಾಣಗಳು ಹೇಳುತ್ತವೆ. ಆದರೆ, ಸೆಟ್ಟಿಯ ದೃಷ್ಟಿಯಲ್ಲಿ ಬೆಲೆಬಾಳುವ ಮುತ್ತಿಗೆ ಬೆಲೆ ಎಂದಾದರೆ, ಬಸವಣ್ಣನವರ ದೃಷ್ಟಿಯಲ್ಲಿ ಆಹಾರಕ್ಕಾಗುವ, ಜೀವವನ್ನು ಪೋಷಿಸುವ ಜೋಳವನ್ನೇ ಮಹತ್ವದ್ದಾಗಿ ನೋಡುವಂತಹ ಅವರ ಧೋರಣೆಯನ್ನು ಪ್ರತಿನಿಧಿಸುವಂತಹ ಮಿಥಿಕ ಇದಾಗಿರುತ್ತದೆ.
ಇನ್ನೂ ಬಹಳ ಜನಪ್ರಿಯವಾದಂತಹ ಮಿಥಿಕವೆಂದರೆ, ಬಸವಣ್ಣನವರು ನಿದ್ರಿಸುವಾಗ ಶರಣರು ಬರುತ್ತಾರೆ. ಅಣ್ಣನವರು ವಿಶ್ರಾಂತಿ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಅವರನ್ನು ಹಿಂದಕ್ಕೆ ಕಳುಹಿಸಿದಾಗ ಬಸವಣ್ಣನ ಜೀವ (ಆತ್ಮ) ಶರಣರನ್ನೇ ಹಿಂಬಾಲಿಸಿಬಿಡುತ್ತದೆ. ಕಳೇವರವಾದ ಬಸವನ ಶರೀರವನ್ನು ಕಂಡು ಹೌಹಾರಿದ ಮಹಾಮನೆಯವರು ಮತ್ತೆ ಕಳುಹಿಸಿದ ಶರಣರ ಹುಡುಕಿಕೊಂಡು ಹೋಗಿ ಮತ್ತೆ ಕರೆದುಕೊಂಡು ಬಂದಮೇಲೆ ಬಸವಣ್ಣನವರ ದೇಹದೊಳಕ್ಕೆ ಜೀವ ಸೇರಿ ಸಜೀವವಾಗಿ ಎದ್ದು ಕೂತರು ಎಂಬುದು.
ಇದನ್ನು ಬಹಳ ನೇರವಾಗಿ ವಿಶ್ಲೇಷಿಸಬಹುದು.
ಶರಣರ ಬರವೆಮಗೆ ಜೀವಾಳ ಎನ್ನುವ ಅಣ್ಣನವರಿಗೆ ತನ್ನ ವಿಶ್ರಾಂತಿ, ಭೋಗ ಇತ್ಯಾದಿಗಳೆಲ್ಲಾ ಲೆಕ್ಕಕ್ಕಿಲ್ಲದ್ದು. ತೀರಾ ಗಂಭೀರವಾಗಿ ಗಣಿಸದೇ ಇರುವುದು. ತಮ್ಮ ಸಾಮಾಜಿಕ ಜೀವನವನ್ನೂ, ವೈಯಕ್ತಿಕ ಬದುಕನ್ನೂ ಒಂದಾಗಿಸಿಯೇ ಬಾಳಿದ ಬಸವಣ್ಣನವರಿಗೆ ತಾವು ಮಲಗಿದ್ದಾಗ ಬಂದು, ತೆರಳಿದ ಶರಣರ ಬಗ್ಗೆ ತಿಳಿಯುತ್ತಾರೆ. ಎಲ್ಲಿಂದಲೋ, ಎಷ್ಟೋ ದೂರವನ್ನು ಕ್ರಮಿಸಿ, ಕಷ್ಟಪಟ್ಟು ತಮ್ಮನ್ನು ಕಾಣಲು ಬಂದಿದ್ದ ಶರಣರನ್ನು ತನ್ನ ನಿದ್ದೆ ಅಥವಾ ವಿಶ್ರಾಂತಿಯಂತಹ ಕಾರಣಕ್ಕೆ ಹಿಂದಕ್ಕೆ ಕಳುಹಿಸಿರುವುದು ನಿಜಕ್ಕೂ ಬೇಸರವೂ, ದುಃಖವೂ ಆಗುತ್ತದೆ.
ಮಂಕಾಗಿರುವ ಬಸವಣ್ಣನವರನ್ನು ಕಂಡು ಚಿಂತೆಗೀಡಾದ ಶರಣರನ್ನು ಹಿಂದಕ್ಕೆ ಕಳುಹಿಸಿದವರು ಮತ್ತೆ ಅವರನ್ನು ಹುಡುಕಿ ಕರೆತಂದಾಗ ಅಣ್ಣನವರು ಉಲ್ಲಸಿತರಾಗುತ್ತಾರೆ. ಹೆಣದಂತೆ ಕಳಾಹೀನವಾಗಿದ್ದವರು, ಜೀವತಳೆದವರಂತೆ ಚೈತನ್ಯದಿಂದ ಕೂಡುತ್ತಾರೆ. ಇಂತಹ ಸಂಗತಿಗಳೆಲ್ಲವೂ ಕೂಡ ಪುರಾಣದ ರೂಪಕಗಳನ್ನು ಪಡೆದುಕೊಂಡಿರುತ್ತವೆ.
ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೆಂದರೆ, ಕ್ರಿಸ್ತ ಮತ್ತು ಬಸವಣ್ಣರಿಬ್ಬರೂ ತಮ್ಮೊಟ್ಟಿನ ಜನರಿಗೆ ನಡೆದುಕೊಳ್ಳಲು ಕ್ರಮಗಳನ್ನು ರೂಪಿಸಿಕೊಟ್ಟರು. ತಾವೇ ಮಾದರಿಯಾಗಿ ಬಾಳಿದರು. ತಾವು ತಮ್ಮ ಮನಸ್ಸಿಗೆ, ತಮ್ಮ ಭಾವುಕತೆಗೆ, ತಮ್ಮ ಧೋರಣೆಗಳಿಗೆ, ತಮ್ಮ ಒಲವು ನಿಲುವುಗಳಿಗೆ ಇಂಥಾ ಬಗೆಯ ತರಬೇತಿಗಳನ್ನು ನೀಡಬೇಕೆಂದು ಕ್ರಮಗಳನ್ನು ರೂಪಿಸಿದರು.
ಆ ಕ್ರಮಗಳನ್ನು ಒಳಗೊಂಡ ಮಾದರಿ ಸಮಾಜವನ್ನು ರೂಪಿಸುವ ಉದ್ದೇಶ ಹೊಂದಿದ್ದರವರು. ಆದರೆ ಅವರ ಜೀವಿತಾವಧಿಯಲ್ಲಿ ಆ ಮಾದರಿ ಸಮಾಜ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬರಲಿಲ್ಲ. ವ್ಯಕ್ತಿಗತವಾಗಿ ರೂಪುಗೊಳ್ಳುತ್ತಿದ್ದವರು ಸಾಮಾಜಿಕವಾಗಿ ವ್ಯಾಪಕಗೊಳ್ಳುವ ಮೊದಲೇ ಅವರಿಬ್ಬರೂ ಮರಣಿಸಿದರು. ಹಾಗಾಗಿ ಅವರ ಕೆಲಸ ಪೂರ್ಣಗೊಳ್ಳಲಿಲ್ಲ.
ಆದರೆ ಅವರು ರೂಪಿಸಿದ ಕ್ರಮವು ಅಥವಾ ಧರ್ಮವು ಸಾಂಸ್ಥಿಕವಾಗಿ ಸ್ಥಾಪನೆಯಾಗಲು ಹಲವು ಬಗೆಯ ಕವಲುಗಳು ಮೂಡಿದವು. ಮುಂದೆ ನೋಡೋಣ. ಧರ್ಮ ಅಥವಾ ಧಾರ್ಮಿಕತೆಯ ತಾತ್ವಿಕ ಆಂತರ್ಯವನ್ನು ಅರಿಯಲು ಈಗ ನಾವೊಂದು ಮಾರ್ಗವನ್ನು ಹಿಡಿದಿದ್ದೇವೆ. ಇದೊಂದು ಬಗೆಯ ಅಧ್ಯಯನದ ರೀತಿ. ಇದು ಅಂತಿಮವಲ್ಲ. ಇದು ಸಂಪೂರ್ಣವೂ ಅಲ್ಲ. ಆದರೆ ಸಮಾಧಾನ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ5 days agoಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ
-
ದಿನದ ಸುದ್ದಿ5 days agoಎಸ್ಎಸ್ಎಲ್ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ
-
ದಿನದ ಸುದ್ದಿ27 minutes agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು



