ದಿನದ ಸುದ್ದಿ
‘ನಡುಪಂಥ’ ಎನ್ನುವ ಗುಳ್ಳೇನರಿ ಸಿದ್ದಾಂತ | ಭಾಗ – 1
- ಲೋಕೇಶ್ ಪೂಜಾರಿ, ಬೆಂಗಳೂರು
ಸ್ವಾರ್ಥಸಾಧನೆಯನ್ನು ಚೊಕ್ಕವಾಗಿ ಮಾಡಿ,ಮಾನವೀಯ ಮೌಲ್ಯಗಳನ್ನು ಅಡಿಗೆ ಹಾಕುವವರು ನಡುಪಂಥೀಯರು. ಅವರು ದೋಣಿಯ ನಡುವಲ್ಲಿ ಕೂತಿರುತ್ತಾರೆ.ಎತ್ತ ವಾಲಿದರೂ ಜಾರಿಬೀಳುವುದಿಲ್ಲ.
ಅವರನ್ನು ಗುರುತಿಸುವುದು ಸುಲಭ. ಅವರು ಮಹಾತ್ಮ ಗಾಂಧಿಯವರ ಪೋಟೋ ಹಾಕಿಕೊಂಡು,ಗೋಡ್ಸೆಯನ್ನೂ ಸಮರ್ಥಿಸುತ್ತಾರೆ.ಹಾಗೇ ಮುಂದುವರೆದು ಒಂದು ದಿನ ಕಾಡುಗಳ್ಳ ವೀರಪ್ಪನ್ ನನ್ನು ವಾಲ್ಮೀಕಿಗೂ ಹೋಲಿಸಬಹುದು. ಅದರಿಂದ ಅವರಿಗೆ ಲಾಭ ಇರಬೇಕು ಅಷ್ಟೇ .
ಒಬ್ಬ ಬರೆಯುವ ಬರಹಗಳು ಯುವಜನರಿಗೆ ತಪ್ಪು ಸಂದೇಶ ಕೊಡುತ್ತವೆ ಎಂದು ಯಾರಾದರೂ ಹೇಳಿದಾಗ.. ,ನಾನು ಬರೆಯುವುದು ಸಮಾಜ ಪರಿವರ್ತನೆ ಗೆ ಅಲ್ಲ ಎನ್ನುವಂತಹ ಭೈರಪ್ಪ ಪ್ರೇರಿತ ಉತ್ತರ ಕೊಡುವವರು ಬಹಳ ಜನ ಇದ್ದಾರೆ .
ನಮ್ಮ ಬರವಣಿಗೆಯಿಂದ ಹುಡುಗರು ಹಾಳಾದರೆ ಅದು ಸಮಾಜದ ತಪ್ಪು ಅಥವಾ ರಾಜಕೀಯ ದ ತಪ್ಪು ಎಂದು ತಿಪ್ಪೆ ಸಾರಿಸುವ ಅಂತವರ ಬಳಿ ವಾದ ಮಾಡುವುದು ಕಷ್ಟ.
ಓದು ಮತ್ತು ವಯಸ್ಸಿಗೆ ಬಹಳ ಸಂಬಂಧ ಇದೆ.
ಎಳವೆಯಲ್ಲಿ ಇಷ್ಟ ಪಟ್ಟು ಚಂದಮಾಮ ಓದುತ್ತಿದ್ದವರು ಹೈಸ್ಕೂಲ್ ಸೇರಿದ ಬಳಿಕ ಯೆಂಡಮೂರಿ ವೀರೇಂದ್ರನಾಥರ ಪುಸ್ತಕ ಓದುತ್ತಾರೆ. ಅವರು ಎಷ್ಟು ಯೆಂಡಮೂರಿಯ ಬರಹಗಳನ್ನು ಇಷ್ಟ ಪಡುತ್ತಾರೆಂದರೆ ,ಪ್ರತೀ ಕಾದಂಬರಿನೂ ಹುಡುಕಿ ಹುಡುಕಿ ಓದುತ್ತಾರೆ.
ಆದರೆ ಆ ಸೆಳೆತ ಪಿಯುಸಿ ಮುಗಿದು ಡಿಗ್ರಿ ಓದುವ ತನಕ ಮಾತ್ರ .
ಹದಿನಾರರಿಂದ ಇಪ್ಪತ್ತರ ವಯಸ್ಸಿನ ಹೆಚ್ಚಿನವರು ಯೆಂಡಮೂರಿಯ ಬರಹಗಳನ್ನು ಇಷ್ಟ ಪಡುತ್ತಾರೆ. ಬಳಿಕ ಅವರಿಗೆ ತೇಜಸ್ವಿ ,ಕಾರಂತ ,ಬೈರಪ್ಪ ಇಷ್ಟವಾಗಲು ಶುರುವಾಗುತ್ತದೆ. ತಮ್ಮ ಆಯುಷ್ಯದಲ್ಲಿ ಬಹು ಭಾಗ ಇನ್ನೂ ಕಳೆಯಬೇಕಾಗಿರುವ ಯುವ ಜನರ ಓದುವ ರುಚಿ ಮತ್ತು ಬಹುಭಾಗದ ಆಯುಷ್ಯ ಕಳೆದು ಕೊಂಡು ಜೀವನಾನುಭವ ಪಡೆದು ಕೊಂಡಿರುವವರ ಓದುವ ರುಚಿ ಬೇರೆ ಬೇರೆ ಇರುತ್ತದೆ.
ಹದಿ ಹರೆಯದ ಮನಸ್ಸಿಗೆ ತಿರುಚಿದ ಇತಿಹಾಸ ಓದಲು ಕೊಡಬಾರದು. ಪ್ರತಿಯೊಂದಕ್ಕೂ ಪುರಾಣದ ಉದಾಹರಣೆ ಕೊಡಬಾರದು. ಬಹಳಷ್ಟು ನಾಗರೀಕತೆಗಳ ಹುಟ್ಟನ್ನು ಕಂಡ ಸನಾತನ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಪುರಾಣಕತೆಗಳಿವೆ.
ಪತಿಯೊಂದಕ್ಕೂ ಪುರಾಣಕತೆಗಳನ್ನು ಉದಾಹರಣೆ ಕೊಡಬಹುದು. ” ಕಣ್ಣಾ ಮುಚ್ಚೇ , ಕಾಡೇ ಗೂಡೇ… ಉದ್ದಿನ ಮೂಟೆ ಉರುಳೇ ಹೋಯ್ತು'” ಅನ್ನುವುದನ್ನೂ ರಾಮಾಯಣ ಕ್ಕೆ ಲಿಂಕ್ ಮಾಡಿ,
ಧಶರಥ ಕಣ್ಣುಮುಚ್ಚಲಾಗಿ ,ರಾಮನಿಗೆ ಕಾಡೇ ಮನೆಯಾಗಿ ,ಉದ್ದಿನ ಮೂಟೆಯಂತಹಾ ರಾವಣ ಉರುಳೇ ಹೋದ ” ಎಂದು ಬರೆದು ಬಿಡಬಹುದು.
ಆದರೆ ಅದು ವಿತಂಡವಾದ ಅನ್ನಿಸಿಕೊಳ್ಳುತ್ತದೆಯೇ ಹೊರತು ವಾದ ಅಲ್ಲ. ಹಾಗೆ ವಾದ ಮಾಡುವವರು ತಾವು ತುಂಬಾ ಓದಿದ್ದೇವೆ. ತಾವು ಇತಿಹಾಸ ಶಾಸ್ತ್ರ ಜ್ಞರು ಮನಃಶಾಸ್ತ್ರರು ಎಂದೆಲ್ಲಾ ಇಷ್ಟುದ್ದ ಹೇಳಿಕೊಳ್ಳುತ್ತಾರೆ. ಓದಿದವರೆಲ್ಲಾ ಮಹಾ ಮಾನವತಾವಾದಿಗಳಾಗಿರುತ್ತಾರೆ ಎಂದು ಕೊಳ್ಳುವುದೂ ತಪ್ಪು. ಒಸಾಮಾ ಬಿನ್ ಲಾದೆನ್ ಕೂಡಾ ತುಂಬಾ ಓದಿದ್ದ ಇಂಜಿನಿಯರ್ ಆಗಿದ್ದ.
ಒಂದು ಕಡೆ ಮಹಾತ್ಮಾ ಗಾಂಧಿ ಬಗ್ಗೆ ಬರೆಯುತ್ತಾ ,ಇನ್ನೊಂದು ಕಡೆ ಗೋಡ್ಸೆಯನ್ನು ದಾರಿತಪ್ಪಿದ ದೇಶಭಕ್ತ ಎಂದು ಬಲವಾಗಿ ಬಿಂಬಿಸುವವರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ? ಗೋಡ್ಸೆಗೆ ಗಾಂಧಿ ನ ಕೊಲ್ಲಲು ಕಾರಣ ಇತ್ತು . ಹಾಗೆಯೇ ಗೌರಿ ಲಂಕೇಶ್ ,ಪನ್ಸಾರೆ ,ಕಲಬುರ್ಗಿ ಹಂತಕರಿಗೂ ಕಾರಣ ಇತ್ತು.
ಇಂತಹದೇ ಕಾರಣ ಇತ್ತು ಎಂದು ಸಮರ್ಥನೆ ಇಳಿಯುವವರು, ಅಂತಹಾ ಸಮರ್ಥನೆಗಳನ್ನು ಮನಸ್ಸಿಗೆ ತುಂಬಿಕೊಂಡು ಕೊಲೆಗಾರರಾಗುವ ಸಮೂಹವನ್ನೂ ಹುಟ್ಟುಹಾಕುತ್ತಿದ್ದೇವೆ ಎಂದು ಯಾಕೆ ಯೋಚಿಸುತ್ತಿಲ್ಲ. ಅವರ ಯೋಚನೆ ನಡುಪಂಥೀಯ ಇರಬಹುದು ,ಆದರೆ ಅವರುಗಳು ಸೈತಾನಿಯೇ ಹೊರತು ಸನಾತನಿ ಖಂಡಿತಾ ಅಲ್ಲ.
ಬಹಳಷ್ಟು ಜನರ ಪ್ರೊಪೈಲ್ ನಲ್ಲಿ ಗಾಂಧಿ ಪೋಟೋ ಇರುತ್ತದೆ. ಆ ತರಹ ಇಟ್ಟುಕೊಂಡವರಲ್ಲಿ ಎರಡು ವಿಧ,
ಒಂದೇ ಅವರು ಪಕ್ಕಾಗಾಂಧಿವಾದಿಯಾಗಿರುತ್ತಾರೆ .
ಅಥವಾ ಅವರ ಮನಸ್ಸು ತುಂಬಾ ಗೋಡ್ಸೆ ತುಂಬಿರುತ್ತಾನೆ.
ನಮ್ಮೂರಿನ ಕೆಲವರು ಬಿಲ್ಲವ ರಾಜಕಾರಣಿ ಅಥವಾ ಮುಖಂಡನ ಬಗ್ಗೆ ಸಿಕ್ಕಾಪಟ್ಟೆ ತಕರಾರು ಮಾಡಿ ಪೋಸ್ಟ್ ಹಾಕಿದ ಬಳಿಕ ಶ್ರೀ ನಾರಾಯಣ ಗುರುಗಳ ಪೋಟೋ ಪ್ರೊಫೈಲ್ ಗೆ ಹಾಕಿಕೊಳ್ಳುತ್ತಾರೆ. ಶ್ರೀ ನಾರಾಯಣ ಗುರುಗಳು ಒಂದು ಜಾತಿಯ ಗುರು ಅಲ್ಲ ,ಅವರು ವಿಶ್ವಗುರು ಅಂತಾ ಅವರಿಗೂ ಗೊತ್ತು. ಅದರೂ ಯಾವುದೋ ಒಂದು social chemistry ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದು ಅವರ ನರಿಬುದ್ದಿಗೆ ಚೆನ್ನಾಗಿ ಹೊಳೆದಿರುತ್ತದೆ.ಕಾಣದ ಕೈಗಳ ಪ್ರತಿರೋದವನ್ನು ಕಡಿಮೆ ಮಾಡುವ ನರಿಬುದ್ದಿ ಅದು.
ಎಷ್ಟೋ ಜನ ಮೀಸಲಾತಿಯನ್ನು ವಿರೋಧಿಸುವುದರಿಂದ ಹಿಡಿದು ಜಾತಿವಾದವನ್ನು ಪುರಸ್ಕರಿಸುವಷ್ಟು ಮನುವಾದೀ ಮನಸ್ಸು ಹೊಂದಿರುವವರೂ ಅಂಬೇಡ್ಕರ್ ರಂತಹಾ ಮಾನವತಾವಾದಿಯ ಪೋಟೋ ಹಾಕಿಕೊಂಡಿರುತ್ತಾರೆ.
ಯಾರ ಪ್ರೊಫೈಲ್ ನಲ್ಲಿ ಯಾವ ಪೋಟೋ ಇರುತ್ತದೆ ಎನ್ನುವುದರಿಂದ ಅವರ ಸ್ವಭಾವ ಗುಣಲಕ್ಷಣಗಳನ್ನು ಅರಿಯಲು ಸಾದ್ಯವಿಲ್ಲ. ನಡುಪಂಥೀಯ ಗುಳ್ಳೆನರಿಗಳ ಬಗ್ಗೆ ದಿನಕ್ಕೊಂದು ಪೋಸ್ಟ್ ಹಾಕಿದರೂ ವರ್ಷ ಕಳೆದರೂ ಮುಗಿಯದಷ್ಟು ಇದೆ. ಆದರೂ ನೂರು ಎಪಿಸೋಡ್ ಗಳ ಒಳಗೇ ಮುಗಿಸಲು ನೋಡುತ್ತೇನೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನೂತನ ಸಂಸದರನ್ನು ಸ್ವಾಗತಿಸಲು ಲೋಕಸಭಾ ಕಾರ್ಯಾಲಯ ಸಜ್ಜು ; ಸಂಸದರಿಗೆ ಇಷ್ಟೆಲ್ಲಾ ಸವಲತ್ತುಗಳು..!
ಸುದ್ದಿದಿನ ಡೆಸ್ಕ್ : ಲೋಕಸಭೆಯ ಅಂತಿಮ ಚರಣದ ಮತದಾನ ದಿನ ಹಾಗೂ ನಂತರ ಚುನಾವಣಾ ಫಲಿತಾಂಶವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಂಸದರನ್ನು ಬರ ಮಾಡಿಕೊಳ್ಳಲು ಲೋಕಸಭಾ ಕಾರ್ಯಾಲಯ ವ್ಯಾಪಕ ವ್ಯವಸ್ಥೆಯಿಂದ ಸಜ್ಜುಗೊಳ್ಳುತ್ತಿದೆ. ಇದಕ್ಕಾಗಿ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಚುನಾಯಿತ ಅಭ್ಯರ್ಥಿಗಳ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ನೂತನ ಅಭ್ಯರ್ಥಿಗಳ ಆಗಮನ ಪ್ರಕ್ರಿಯೆ ಆರಂಭವಾಗುತ್ತದೆ. ಅವರ ಪ್ರಯಾಣಕ್ಕೆ ಮುನ್ನವೇ ಲೋಕಸಭೆ ಕಾರ್ಯಾಲಯದ ನೋಡಲ್ ಅಧಿಕಾರಿಗಳು ಅವರನ್ನು ಸಂಪರ್ಕಿಸುತ್ತಾರೆ. ಐಜಿಐ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ವಿವಿಧ ಟರ್ಮಿನಲ್ಗಳಲ್ಲಿ ವಿಶೇಷ ಸ್ವಾಗತ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸಂಸದರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗದಿತ ಕೇಂದ್ರಗಳಲ್ಲಿ ಬರ ಮಾಡಿಕೊಳ್ಳಲಾಗುತ್ತದೆ.
ಸಂಸತ್ತಿನ ಅನೆಕ್ಸೆ ವಿಸ್ತೃತ ಕಟ್ಟಡದ ಸ್ವಾಗತ ಕೇಂದ್ರಕ್ಕೆ ಆಗಮಿಸಿದ ನಂತರ ಅವರಿಗೆ ದೂರವಾಣಿ ಸಂಪರ್ಕ, ಹೊಸಬ್ಯಾಂಕ್ ಖಾತೆ, ಸಂಸತ್ ಕಟ್ಟಡಕ್ಕೆ ಪ್ರವೇಶ ಪಡೆಯಲು ಸ್ಮಾರ್ಟ್ ಆಕ್ಸೆಸ್ ಕಾರ್ಡ್, ಅವರ ವಾಹನಗಳಿಗಾಗಿ ಫಾಸ್ಟ್ ಟ್ಯಾಗ್ ಸ್ಟಿಕರ್ ಮತ್ತು ರಾಜತಾಂತ್ರಿಕ ಪಾಸ್ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಿ ಅತಿಥಿ ಭವನ ಹಾಗೂ ಪಶ್ಚಿಮ ನ್ಯಾಯಾಲಯ ಹಾಸ್ಟೇಲ್ ಸಂಕೀರ್ಣದಲ್ಲಿ ಅವರಿಗೆ ತಂಗಲು ಅವಕಾಶ ಕಲ್ಪಿಸಲಾಗುತ್ತದೆ. ಹೊಸ ಸದಸ್ಯರಿಗೆ ಸಂವಿಧಾನದ ಪ್ರತಿ ನೀತಿ ಮತ್ತು ಕಲಾಪ, ಪ್ರಕ್ರಿಯೆ, ನಿಯಮಾವಳಿ ಕೈಪಿಡಿಗಳನ್ನು ಅನುಸರಿಸಲು ನೀಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ
ಸುದ್ದಿದಿನ ಡೆಸ್ಕ್ : ಫ್ರಾನ್ಸ್ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಬ್ಬರು ನರ್ಸ್ಗಳ ಜೀವನ ಸುತ್ತಲಿನ ಕಥಾವಸ್ತು ಹೊಂದಿರುವ ’ಆಲ್ ವಿ ಇಮ್ಯಾಜಿನ್ ಆಜ್ ಲೈಟ್’ ಚಿತ್ರ ಪಾಮೆ ಡೋರ್ ವರ್ಗದಲ್ಲಿ ನಾಮನಿರ್ದೇಶಿತಗೊಂಡಿದ್ದು, ಈ ವರ್ಗದ 2ನೇ ಸ್ಥಾನವಾದ ಗ್ರಾಂಡ್ ಪ್ರಿಕ್ಸ್ಗೆ ಪಾತ್ರವಾಯಿತು.
ಇದರೊಂದಿಗೆ ಭಾರತ ಈ ಉತ್ಸವದಲ್ಲಿ ಚಿತ್ರ ನಿರ್ಮಾಣಕ್ಕಾಗಿ 2, ನಟನೆಗಾಗಿ 1, ಹಾಗೂ ಛಾಯಾಗ್ರಹಣಕ್ಕಾಗಿ 1ಹೀಗೆ ಒಟ್ಟು 4 ಗೌರವಗಳನ್ನು ಪಡೆದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಾಧನೆಗಾಗಿ ಪಾಯಲ್ ಕಪಾಡಿಯಾ ಅವರನ್ನು ಅಭಿನಂದಿಸಿದ್ದಾರೆ.
ಎಫ್ಟಿಐಐನ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರ ವಿಶೇಷವಾದ ಕೌಶಲ್ಯ ಭಾರತೀಯ ಹೊಸ ತಲೆಮಾರಿನ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಒಂದು ಕಪ್ ಕಾಫಿ
- ಲಕ್ಕೂರು ಆನಂದ್
ಕೊನೆಯ ಸಾರಿ
ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:
ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ
ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು !
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು,
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
ನೆಲಕ್ಕೆ ಬಾಗಿದ ಮೋಡಗಳಾಗಬಹುದು.
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ…
ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ,
ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!
ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.
ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?
ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!
ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್ಗಳು
ಈ ಕಾಫಿ ಕಪ್ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಕವಿ ಆನಂದ ಲಕ್ಕೂರು ನಿಧನ ; ಉದಯ ಇಟಗಿ ನುಡಿನಮನ
-
ಕ್ರೀಡೆ7 days ago
ಬೆಳಗಿನ ಸುದ್ದಿ ಮುಖ್ಯಾಂಶಗಳು
-
ದಿನದ ಸುದ್ದಿ7 days ago
ಇರಾನ್ ಅಧ್ಯಕ್ಷ ಹೆಲಿಕಾಪ್ಟರ್ ದುರಂತದಲ್ಲಿ ಸಾವು | ಅಘಾತಕಾರಿ ಸುದ್ದಿ ಕೇಳಿ ದುಃಖವಾಗಿದೆ : ಪ್ರಧಾನಿ ಮೋದಿ
-
ದಿನದ ಸುದ್ದಿ6 days ago
ರಾಜ್ಯ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ | ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
5ನೇ ಹಂತದ ಲೋಕಸಭೆ ಚುನಾವಣೆ; ಶೇಕಡ 60.09ರಷ್ಟು ಮತದಾನ
-
ದಿನದ ಸುದ್ದಿ6 days ago
ಆರು ಮತ್ತು ಏಳನೇ ಹಂತದ ಲೋಕಸಭಾ ಚುನಾವಣೆಗೆ ರಾಜಕೀಯ ನಾಯಕರಿಂದ ಬಿರುಸಿನ ಪ್ರಚಾರ
-
ದಿನದ ಸುದ್ದಿ3 days ago
ಪ್ರಜ್ವಲ್ ಪೋಲಿಸರಿಗೆ ಶರಣಾಗಿ ವಿಚಾರಣೆ ಎದುರಿಸಬೇಕು : ಮೊಮ್ಮಗನಿಗೆ ಮಾಜಿ ಪ್ರಧಾನಿ ದೇವೇಗೌಡ ಎಚ್ಚರಿಕೆ
-
ದಿನದ ಸುದ್ದಿ6 days ago
ದಾವಣಗೆರೆ | ಒಂದೇ ಕುಟುಂಬದ ಮೂವರು ನಾಪತ್ತೆ