ಅಂತರಂಗ
ಧರ್ಮ ಮರ್ಮ-08 : ನವಸಮಾಜದ ಕನಸುಗಾರರು
- ಯೋಗೇಶ್ ಮಾಸ್ಟರ್
ಕ್ರಿಸ್ತನ ಮರಣಾನಂತರ ಪ್ರಾರಂಭಿಕ ಕ್ರೈಸ್ತರು ಮತ್ತು ಬಸವಣ್ಣನ ಗಡಿಪಾರಿನ ನಂತರ ಶರಣರು ಹೇಗೆ ಅಪಾರವಾದ ಕಿರುಕುಳ, ಹಿಂಸೆ ಮತ್ತು ಬಹಿಷ್ಕಾರಗಳನ್ನು ಅನುಭವಿಸಿದರು. ಅದು ಮುಸಲ್ಮಾನರಿಗೂ ತಪ್ಪಿದ್ದೇನಲ್ಲ. ಪ್ರವಾದಿ ಮಹಮದರ ಸಮಯದಲ್ಲಿಯೇ ಅವರಿಗೂ ಮತ್ತು ಅವರ ಅನುಯಾಯಿಗಳಿಗೆ ಭಯಾನಕ ಕಿರುಕುಳಗಳನ್ನು, ಹಿಂಸೆಗಳನ್ನು ನೀಡಲಾಗಿತ್ತು. ಅವರನ್ನು ತಡೆಯಲು ಅದೆಷ್ಟು ಸಾಧ್ಯವೋ ಅಷ್ಟು ಬಲಪ್ರಯೋಗಗಳಾಗುತ್ತಿದ್ದವು.
ಇದು ಯಾವುದೇ ಸತ್ಯಾನ್ವೇಷಕರಿಗೆ ಮತ್ತು ನವಸಮಾಜದ ಪ್ರತಿಪಾದಕರಿಗೆ ತಪ್ಪಿದ್ದೇನಲ್ಲ.
ಮುಸಲ್ಮಾನರ ಮೊದಲಿನ ಅಬ್ರಹಾಮನ ಧಾರ್ಮಿಕತೆಯ ಪರಂಪರೆಯನ್ನು ಗಮನಿಸುವುದಾದರೆ ಮೊದಲು ಈಜಿಪ್ಟಿನಲ್ಲಿ ಇಸ್ರೇಲರು ಈ ಕಿರುಕುಳಕ್ಕೆ ಒಳಗಾಗಿದ್ದರು. ಅವರನ್ನು ಐಗುಪ್ತ್ಯರ (ಈಜಿಪ್ಟಿನವರ) ಫರೋಹನು ಇಸ್ರೇಲಿನ ಹೀಬ್ರೂಗಳನ್ನು ತನ್ನ ದಾಸ್ಯದಲ್ಲಿರಿಸಿಕೊಂಡಿದ್ದರು. ಹಾಗೂ ಅವರ ಸಂತತಿಯು ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದನು. ಗಂಡು ಮಕ್ಕಳಾದರೆ ಕೊಲ್ಲುವ ಮತ್ತು ಹೆಣ್ಣು ಮಕ್ಕಳಾದರೆ ಮಾತ್ರ ಉಳಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಹಾಗೆ ಮಾಡಲು ಈಜಿಪ್ಟಿನ ಸೂಲಗಿತ್ತಿಯರಿಗೆ ಸೂಲಗಿತ್ತಿಯರಿಗೆ ಸೂಚನೆ ನೀಡಲಾಗಿತ್ತು. ಅವರು ಹಾಗೆ ಮಾಡಲಿಲ್ಲವೆನ್ನುವುದು ಬೇರೆ ವಿಚಾರ.
ಆದರೆ ಇದೇ ಬಗೆಯಲ್ಲಿ ದ್ವೇಷ ಮತ್ತು ಹಟದ ಸಾಧನೆಗಾಗಿ ಹುಟ್ಟುತ್ತಿದ್ದಂತೆ ಗಂಡು ಮಕ್ಕಳನ್ನು ಕೊಲ್ಲುವ ಪ್ರಕರಣಗಳನ್ನು ಹಲವು ಕಡೆ ಗಮನಿಸುತ್ತೇವೆ. ಅದಕ್ಕೆ ಎರಡು ಉದಾಹರಣೆಯೆಂದರೆ ಯೇಸುವಿನ ಜನನದ ಕಾಲದಲ್ಲಿ ಹೇರೋದನು ಯೆಹೂದ್ಯರ ಅರಸ ಹುಟ್ಟುವನು ಎಂಬ ಭವಿಷ್ಯವನ್ನು ನಂಬಿ ಆ ಸಮಯದಲ್ಲಿ ಹುಟ್ಟಿದ ಎಲ್ಲಾ ಗಂಡು ಮಕ್ಕಳನ್ನು ಕೊಲೆ ಮಾಡಲು ಆದೇಶಿಸಿದ್ದನು.
ಸುಳಿವು ತಿಳಿದ ಯೇಸುವಿನ ತಂದೆ ಜೋಸೇಫನು ತನ್ನ ಗರ್ಭಿಣಿ ಹೆಂಡತಿಯನ್ನು ಕರೆದುಕೊಂಡು ಈಜಿಪ್ಟಿಗೆ ಪಲಾಯನ ಮಾಡಬೇಕಾಯಿತು. ಅದೇ ರೀತಿ ಭಾರತದಲ್ಲಿ ಕೃಷ್ಣನ ಜನನದ ವಿಷಯದಲ್ಲಿಯೂ ಹೀಗೇ ಕಂಸನಿಂದ ಮಕ್ಕಳನ್ನು ಕೊಲ್ಲುವ ಕೆಲಸವಾಗಿತ್ತು. ಇದು ಖ್ಯಾತ ಮತ್ತು ಖ್ಯಾತವಲ್ಲದ ಅನೇಕಾನೇಕ ಸಾಮಾಜಿಕ ಮತ್ತು ಧಾರ್ಮಿಕ ಪರಂಪರೆಗಳ ಚರಿತ್ರೆಯಲ್ಲಿ ಗುರುತಿಸಬಹುದಾಗಿದೆ.
ಜನಾಂಗೀಯ, ಭಿನ್ನ ಸಂಸ್ಕೃತಿಗಳ, ಧರ್ಮಗಳ ಕಾರಣಗಳ, ರಾಜಕೀಯ ಸಂಘರ್ಷಗಳ ಕಾರಣಗಳಿಗೆ ಜನರ ಹತ್ಯಾಕಾಂಡಗಳಾಗಿವೆ. ಆದರೆ ಅವು ಕಾರಣಗಳಲ್ಲ, ನೆಪಗಳು. ಆದರೆ ನಿಜವಾದ ಕಾರಣ ತಮ್ಮ ಸಾರ್ವಭೌಮತ್ವವನ್ನು ಮತ್ತೊಬ್ಬರ ಮೇಲೆ ಹೇರುವುದು. ಇತರರನ್ನು ತಮ್ಮ ಅಧೀನದಲ್ಲಿ ಇರಿಸಿಕೊಳ್ಳುವುದು. ಕ್ಷಾಮ, ಸಾಂಕ್ರಮಿಕ ಕಾಯಿಲೆ, ಭೂಕಂಪ, ಪ್ರವಾಹ, ಜ್ವಾಲಾಮುಖಿ, ಹಿಮಪಾತಗಳಂತಹ ಅವಘಡಗಳಿಗಿಂತ ಹೆಚ್ಚು ಭೀಕರವಾಗಿ ಜನರನ್ನು ಕೊಂದಿಕ್ಕಿರುವುದು ಜನರಲ್ಲಿಯೇ ಇರುವ ಸಾರ್ವಭೌಮತ್ವದ ಅಹಂಕಾರದಿಂದ.
ವಿಮೋಚನಾ ಕಾಂಡ
ಐಗುಪ್ತ್ಯರು ಹೀಬ್ರೂಗಳನ್ನುದಾಸ್ಯದಲ್ಲಿಟ್ಟುಕೊಂಡು ತಮ್ಮಸಾರ್ವಭೌಮತ್ವವನ್ನು ಸಾಧಿಸಲು ಯತ್ನಿಸುತ್ತಿದ್ದರು. ಅವರ ಗಂಡು ಸಂತತಿ ಹೆಚ್ಚಿದರೆ ಬಲಿಷ್ಟರಾಗಿ ತಮ್ಮೊಡನೆ ಯುದ್ಧ ಮಾಡಿ ತಮ್ಮ ಸಾರ್ವಭೌಮತ್ವವನ್ನು ಮಣ್ಣುಗೂಡಿಸಬಹುದೆಂದು ಭಯ ಫರೋಹಗಳಿಗಿತ್ತು. ಇದನ್ನು ಸಾಕ್ಷೀಕರಿಸಿದವನು ಮೋಶೆ. ಹೀಬ್ರೂ ತಾಯಿಗೆ ಹುಟ್ಟಿದವನು, ಮಗುವನ್ನು ಕೊಲ್ಲುವವರೆಂದು ಅವನನ್ನು ಪೆಟ್ಟಿಗೆಯೊಂದರಲ್ಲಿ ಮಲಗಿಸಿ ನೈಲ್ ನದಿಯ ಅಂಚಿನ ಜಂಬುಹುಲ್ಲಿನ ಪೊದೆಯಲ್ಲಿ ಇಟ್ಟು ಅಡಗಿಕೊಂಡು ನೋಡುತ್ತಿರುತ್ತಾಳೆ.
ಫರೋಹನ ರಾಜಕನ್ನಿಕೆಯೊಬ್ಬಳು ಆ ಮಗುವಿನ ಮೇಲೆ ಕನಿಕರಪಟ್ಟು ತಾನೇ ಸಾಕುತ್ತಾಳೆ. ಅದಕ್ಕೆ ಮೊಲೆಯೂಡಲು ಅವನ ನಿಜವಾದ ತಾಯನ್ನೇ ಕರೆಯಿಸುವ ಕರುಣಾಜನಕ ಮತ್ತು ನಾಟಕೀಯವಾದಂತಹ ಕತೆ ಮೋಶೆಯ ಹುಟ್ಟು ಮತ್ತು ಬೆಳವಣಿಗೆಯದ್ದು. ಅದೇನೇ ಇರಲಿ, ಅವನು ರಾಜಮನೆತನದವನಾಗಿಯೇ ಬೆಳೆದರೂ ಅವನಿಗೆ ದಾಸ್ಯದಲ್ಲಿ ಹೀಬ್ರೂಗಳನ್ನು ನರಳಿಸುವುದು ಅವನಿಗೆ ಒಗ್ಗುತ್ತಿರಲಿಲ್ಲ. ಒಂದು ಸಂದರ್ಭದಲ್ಲಿ ಅವನಿಗೆ ತನ್ನ ಹುಟ್ಟಿನ ರಹಸ್ಯವೂ ತಿಳಿಯುತ್ತದೆ. ಒಟ್ಟಾರೆ ಅವನು ನಿರ್ಧರಿಸುವುದು ತನ್ನ ಜನರನ್ನು ದಾಸ್ಯದಿಂದ ಬಿಡಿಸಬೇಕೆಂಬುದು. ಇದೇ ವಿಮೋಚನಾ ಕಾಂಡ.
ಬಿಟ್ಟಿಚಾಕರಿ ಮಾಡುತ್ತಾ ದಾಸ್ಯದಲ್ಲಿ ನರಳುತ್ತಿದ್ದ ಹೀಬ್ರೂಗಳನ್ನು ಬಿಡಿಸಿದ ಮೋಶೆಯೂ ಮಾಡಿದ್ದೇನೆಂದರೆ ಅವರಿಗೆ ಬದುಕಲು ಒಂದು ಕ್ರಮವನ್ನು ಕೊಟ್ಟಿದ್ದು. ವಿಶ್ವಾಸಿಸಲು ಒಂದು ಪರಿಕಲ್ಪನೆಯನ್ನು ಕೊಟ್ಟಿದ್ದು. ಹತ್ತು ನಿಬಂಧನೆಗಳನ್ನು ಇತ್ತನು. ಸೀನಾಯಿ ಎಂದು ಕರೆಯಲ್ಪಡುವ ಬೆಟ್ಟವೊಂದರಲ್ಲಿ ಪೊದೆಯಲ್ಲಿ ಬೆಂಕಿಯಂತೆ ಕಾಣುವ ದೇವರು ಮೋಶೆ ತನ್ನ ಜನರು ನೇಮವಾಗಿ, ಶಿಸ್ತಿನಿಂದ ಮತ್ತು ಬದ್ಧತೆಯಿಂದ ನಡೆಯುವ ಅಗತ್ಯವಿರುವುದೆಂದು ಕಟ್ಟಳೆಗಳನ್ನು ನೀಡಿದನೆಂದು ಹೇಳಿಕೊಳ್ಳುವನು.
ದೇವರ ಹೆಸರಿನಲ್ಲಿ ತನ್ನ ಜನರು ದಾಸ್ಯದಿಂದ ಬಿಡುಗಡೆಯಾಗಿದ್ದು ಮತ್ತೆ ಪತನವಾಗದಿರಲೆಂಬ ಕಾಳಜಿಯಿಂದ ಅವನು ಒಂದು ದಾರಿಯನ್ನು ರೂಪಿಸಲು ಈ ಕಟ್ಟಳೆಗಳನ್ನು ವಿಧಿಸಿದನು. ಏಕೆಂದರೆ ಪಡೆದಿರುವಂತಹ ಸ್ವಾತಂತ್ರ್ಯವು ಫಲಪ್ರದವಾಗಬೇಕಾದರೆ ಅವರು ಆ ಸ್ವತಂತ್ರ ಕಾಲದಲ್ಲಿ ಮತ್ತು ಸ್ಥಿತಿಯಲ್ಲಿ ಸ್ವಶಿಸ್ತಿನಿಂದ ವರ್ತಿಸಬೇಕು. ಹಾಗೆಯೇ ತಿಳುವಳಿಗೆಯಿಂದ ಸ್ವಸ್ಥ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬೇಕು. ಅದು ಅವರ ಉದ್ದೇಶ. ಈ ನಿಬಂಧನೆಗಳು ದಾಸ್ಯಕ್ಕೊಳಿಸುವ ನಿರ್ಬಂಧವಲ್ಲ. ದಾಸ್ಯಕ್ಕೆ ಮರಳದಿರಲು ಬೇಕಾದ ಶಿಸ್ತು. ಶಿಸ್ತು ಕೂಡಾ ನಿಬಂಧನೆಯೇ. ಆದರೆ ಅದು ಕಾರ್ಯ ಸಾಧನೆಗೆ.
ಹತ್ತು ಕಟ್ಟಳೆಗಳು
ಮೋಶೆಯ ಹತ್ತು ಕಟ್ಟಳೆಗಳು ಅವರಲ್ಲಿದ್ದ ನ್ಯೂನ್ಯತೆಗಳನ್ನು ತೊಡೆಯುವ ದಿಕ್ಕಿನಲ್ಲಿಯೇ ಇದ್ದವು. ಮೂರ್ತಿ ಪೂಜೆಯನ್ನು ನಿರಾಕರಿಸಿತ್ತು. ಕಂಡಕಂಡ ವಸ್ತು ವ್ಯಕ್ತಿಗಳನ್ನೆಲ್ಲಾ ದೇವರೆಂದು ಒಪ್ಪಬಾರದಿತ್ತು. ಗ್ರೀಸ್ ಮತ್ತು ಈಜಿಪ್ಟಿನಲ್ಲಿ ಹಲವಾರು ದೇವತೆಗಳು, ಹಲವಾರು ಮೂಢ ನಂಬಿಕೆಗಳು ಬಹಳವಾಗಿತ್ತು. ಅದರ ಪ್ರಭಾವದಲ್ಲಿ ಇದ್ದ ಇವರು ಅದನ್ನೇ ಅನುಸರಿಸಬಾರದೆಂಬುದೂ ಆಗಿತ್ತು.
ಮುಂದಿನ ಪೀಳಿಗೆಗಳನ್ನು ಗಮನಿಸಿಕೊಂಡು, ಅವರ ಹಿತವನ್ನು ಕಾಯುವ ದೂರದೃಷ್ಟಿಯನ್ನು ಇಟ್ಟುಕೊಂಡು ತಾನು ಇಂದು ತಪ್ಪು ಮಾಡಬಾರದೆಂದಾಗಿತ್ತು. ದೇವರ ಹೆಸರನ್ನು ತನ್ನ ಸ್ವಾರ್ಥದ ಅಥವಾ ಕೆಟ್ಟ ಕೆಲಸಗಳಿಗೆ ಬಳಸಬಾರದು. ಹಗಲು ಇರುಳು ಎನ್ನದೇ ಬಿಟ್ಟಿ ಚಾಕರಿ ಮಾಡಿಕೊಂಡಿದ್ದ ಅವರು ಕೆಲಸದ ಮಧ್ಯೆ ವಿರಾಮವನ್ನೂ ಮತ್ತು ತಮ್ಮ ಕುಟುಂಬಗಳಿಗೆ ಸಮಯವನ್ನು ಕೊಡಲು ವಾರದ ಏಳನೆಯ ದಿನವಾದ ಸಬ್ಬತ್ ದಿನದಂದು ಏನೂ ಕೆಲಸ ಮಾಡಬಾರದೆಂದು ಇತ್ತು.
ತನ್ನ ಸ್ವಾರ್ಥಕ್ಕಾಗಿ ತಂದೆ, ತಾಯಿಯೇ ಮೊದಲ್ಗೊಂಡು ಸಂಬಂಧಗಳನ್ನು ಲೆಕ್ಕಿಸದಂತಹ ಪ್ರಕರಣಗಳನ್ನು ನೋಡಿದ್ದ ಮೋಶೆ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡರೆ ದೇವರಿಂದ ಅನುಗ್ರಹಿತವಾದ ಈ ಭೂಮಿಯಲ್ಲಿ ಚೆನ್ನಾಗಿ ಬಾಳುವೆ ಎಂದು ಆಶೆ ಇರಿಸಿದನು. ವಯಸ್ಸಾದ ತಂದೆ ತಾಯಿಯರು ಮಕ್ಕಳ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾಗದಿರಲು ಮೋಶೆ ಮನಗಂಡಿದ್ದನು.
ಹೀಗೇ ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮತ್ತೊಬ್ಬರ ಮನೆಯ ಜನರನ್ನಾಗಲಿ, ವಸ್ತುಗಳನ್ನಾಗಲಿ, ಪಶುಗಳನ್ನಾಗಲಿ ವಶಪಡಿಸಿಕೊಳ್ಳಲು ಬಯಸಬಾರದು. ಬಿಟ್ಟಿಚಾಕರಿ ಮಾಡುತ್ತಾ ಗುಲಾಮಗಿರಿಯಲ್ಲಿದ್ದ ಜನರಿಗೆ ಸ್ವಾತಂತ್ರ್ಯವು ಸಿಕ್ಕಿದಾಗ, ಅವರಿಗೆಂದು ಒಂದು ಭೂಮಿಯು ಬಾಳ್ವೆಗೆ ದೊರಕಿದಾಗ ತಾವು ಇನ್ನೊಬ್ಬರನ್ನು ದಾಸ್ಯಕ್ಕೆ ಒಳಮಾಡಬಾರದೆಂಬ ಮಮಕಾರ, ಕಾರುಣ್ಯ ಮೋಶೆಯಲ್ಲಿತ್ತು.
ವಿಮೋಚನೆಗೆ ದಾರಿ ತೋರಿದ್ದ ಮೋಶೆಯು ಮತ್ತೊಬ್ಬರನ್ನು ದಾಸ್ಯಕ್ಕೆ ಒಳಪಡಿಸಬಾರದೆಂಬ ಪ್ರಜ್ಞೆಯ ತರಬೇತಿ ಕೊಡಲು ದೇವರ ಹೆಸರು ಎತ್ತಿದ್ದ, ಹತ್ತು ನಿಬಂಧನೆಗಳನ್ನು ನೀಡಿದ್ದ. ನಿಜಕ್ಕೂ ಆತ ಧೀರನೂ ಹೌದು, ಕರುಣಾಳುವೂ ಹೌದು.
ಆದರೆ ದಶಾಜ್ಞೆಗಳು ಅಥವಾ ಹತ್ತು ನಿಬಂಧನೆಗಳನ್ನು ಹೀಬ್ರೂ ಜನರು ಒಂದಷ್ಟು ಕಾಲವಷ್ಟೇ ತನ್ನ ಮಾನ್ಯತೆಯನ್ನು ಪ್ರಾಮಾಣಿಕವಾಗಿ ಉಳಿಸಿಕೊಂಡಿದ್ದು. ನಂತರ ಅದನ್ನೇ ಮುಂದಿಟ್ಟುಕೊಂಡು ಪುರೋಹಿತರು ಮತ್ತೆ ಜನರನ್ನು ತಮ್ಮದೇ ಜನರನ್ನು ಶೋಷಿಸತೊಡಗಿದ್ದರು.
ಸಾಲದಕ್ಕೆ ತಮ್ಮ ಸ್ವಾರ್ಥ ಸಾಧನೆಗೆ ಬೇಕಾದಂತೆ ಅವನ್ನು ಬಳಸಿಕೊಳ್ಳಲೂ ತೊಡಗಿದ್ದರು. ಮತ್ತೆ ಗುಲಾಮರಂತಾಗಿದ್ದರು. ಅಂತಹ ಸಮಯದಲ್ಲಿ ಮೂಡಿದ ಮೋಶೆಯಂತೆಯೇ ಮತ್ತೊಬ್ಬ ಸಮಾಜ ಸುಧಾರಕ, ಆದರ್ಶ ಸಮಾಜದ ಕನಸುಗಾರ ಯೇಸು. ಸಾಂಪ್ರದಾಯಕವಾಗಿ ಬಂದಿರುವ ಧರ್ಮಶಾಸ್ತ್ರವನ್ನು ತಾನು ಕಡೆಗಣಿಸಲು ಅಥವಾ ತಿರಸ್ಕರಿಸಲು ಬಂದಿಲ್ಲ, ಬದಲಾಗಿ ಅವನ್ನು ಸರಿಯಾದ ರೀತಿಯಲ್ಲಿ ನೆರವೇರಿಸಲೆಂದೇ ಬಂದವನು ತಾನು ಎಂದೇ ಯೇಸು ನೀಡಿದ್ದ ಸ್ಪಷ್ಟತೆ.
ಆದರೆ ಯೇಸುವೂ ಕೂಡಾ ತನ್ನ ಜನರು ಮೌಢ್ಯ ಮತ್ತು ಕಂದಾಚಾರಗಳಿಂದ ಮುಕ್ತರಾಗಿ ಸಂಪೂರ್ಣ ಗುಣಮಟ್ಟದ ಜೀವನವನ್ನು ನಡೆಸಲು ತಾತ್ವಿಕವಾಗಿ ಮತ್ತು ಧಾರ್ಮಿಕವಾಗಿ ಮಾದರಿಯಾಗಿದ್ದೇ ಮಿತಿಯಲ್ಲಿರುವುದಾದರೂ ತಮ್ಮ ಚಿಲ್ಲರೆ ಸಾರ್ವಭೌಮತ್ವಕ್ಕೆ ಪೆಟ್ಟಾಗದಿರಲು ಯೇಸುವಿಗೇ ಪೆಟ್ಟುಕೊಟ್ಟರು. ಶಿಲುಬೆಯ ಪಟ್ಟಿಗಳಿಗೆ ಯೇಸುವನ್ನು ಜಡಿದು ಕೊಂದ ಮೇಲೆ ಕ್ರೈಸ್ತರಿಗೆ ಕೂಡಾ ಕಿರುಕುಳಗಳಾದವು.
ಪ್ರೇಷಿತರ ಮತ್ತು ಇತರ ಅನೇಕಾನೇಕ ಕ್ರಿಸ್ತನ ಅನುಯಾಯಿಗಳ ತ್ಯಾಗ ಬಲಿದಾನದ ನಂತರ ಕ್ರೈಸ್ತ ಧರ್ಮವು ಒಡಮೂಡಿತ್ತು. ಅದೂ ಕೂಡಾ ಕ್ರಮೇಣ ಪುರೋಹಿತ ಮತ್ತು ಪ್ರಭುತ್ವದವರ ಬಳಕೆಗೆ ಸಲಕರಣೆಯಾಗಿಬಿಟ್ಟಿತು. ಅರೇಬಿಯಾದ ಮಕ್ಕಾದಲ್ಲಿರುವ ಕಾಬಾ ಮಂದಿರದ ಮೇಲೆ ಕ್ರೈಸ್ತ ಅರಸರ ದಾಳಿಯ ಯೋಜನೆ ಇದಕ್ಕೊಂದು ನಿದರ್ಶನ.
ಅರಬರಲ್ಲಿನ ಅವ್ಯವಸ್ಥೆ
ಅರಬರಲ್ಲಿಯೇ ಹೊಂದಾಣಿಕೆ ಇರಲಿಲ್ಲ. ಭಿನ್ನ ಕುಲಗಳ ಮತ್ತು ಬುಡಕಟ್ಟುಗಳ ನಡುವೆ ಸಂಘರ್ಷ ತುಂಬಾ ಸಾಮಾನ್ಯವಾಗಿತ್ತು. ಮೂರ್ತಿ ಪೂಜೆಗಳು ವ್ಯಾಪಕವಾಗಿದ್ದವು. ಮೌಢ್ಯವೋ ಮುಗಿಲು ಮುಟ್ಟಿತ್ತು. ಯಾವ ನೈತಿಕತೆಯೂ ಇಲ್ಲದೇ ಜನರು ಕುಲಗಳ ನೆಪದಲ್ಲಿ, ಗೋತ್ರಗಳ ನೆಪದಲ್ಲಿ ಒಗ್ಗೂಡಿಕೊಂಡು ಬಡಿದಾಡಿಕೊಂಡು ಇದ್ದರು. ಹಿಂದೆ ಹೆಣ್ಣು ಮಕ್ಕಳನ್ನು ಉಳಿಸಿ, ಮುಂದೆ ಗಟ್ಟಿಗರಾದಾಗ ಹೋರಾಡಬಹುದೆಂದು ಗಂಡುಮಕ್ಕಳ ಹತ್ಯೆಗಳನ್ನು ಮಾಡುತ್ತಿದ್ದರು.
ಆದರೆ, ಆಗ ಅರೇಬಿಯಾದಲ್ಲಿ ಹೆಣ್ಣು ಮಕ್ಕಳನ್ನೂ ಕೂಡಾ ಜೀವಂತವಾಗಿ ಹೂಳುವಷ್ಟು ನೈತಿಕವಾಗಿ ಅವನತಿಯನ್ನು ಹೊಂದಿದ್ದರು. ಇಂತಹ ಸಮಯದಲ್ಲಿ ನವಸಮಾಜದ ನಿರ್ಮಾಪಕ ಬೇಕಾಗಿತ್ತು. ನೈತಿಕ ತಳಹದಿಯ ಮೇಲೆ ಆದರ್ಶ ಸಮಾಜದಲ್ಲಿ ಬಾಳುವುದಕ್ಕೆ ಮತ್ತೆ ಒಂದು ಧರ್ಮವನ್ನು ಅಥವಾ ಕ್ರಮವನ್ನು ರೂಪಿಸಬೇಕಿತ್ತು. ಬರೀ ಲೌಕಿಕವಾಗಿ ಮೇಲಿನ ಸ್ತರದಲ್ಲಿಯೇ ತಮ್ಮ ಬಾಳ್ವೆಗಳನ್ನು ಪೊಳ್ಳಾಗಿಸಿಕೊಂಡಿದ್ದು, ತಮ್ಮ ಸಹಜೀವಿಗಳಿಗೆ ಪೀಡೆಗಳಾಗುತ್ತಿದ್ದವರನ್ನು ಸರಿದಾರಿಗೆ ತರಲು ಅರಿವನ್ನು ನೀಡಬೇಕಿತ್ತು. ಆ ಕೆಲಸಕ್ಕೆ ನಿಂತವರು ಪ್ರವಾದಿ ಮುಹಮ್ಮದ್.
ಅಬ್ರಹಾಮನ ಸಮಾಜೋಧಾರ್ಮಿಕ ಪರಂಪರೆಯನ್ನು ಅವಲೋಕಿಸಿದ್ದ ಮುಹಮ್ಮದರಿಗೆ ಮೋಶೆಯ ಕಟ್ಟಳೆಯೂ ತಿಳಿದಿತ್ತು, ಯೇಸುವಿನ ಬಲಿದಾನದ ಅರಿವೂ ಇತ್ತು. ಅವುಗಳೆಲ್ಲವೂ ಅವರ ನಂತರದ ಕಾಲದಲ್ಲಿ ಹೇಗೆ ಹಳ್ಳ ಹಿಡಿಯಲಾರಂಭಿಸಿದ್ದವು ಎಂಬುದರ ಬಗ್ಗೆಯೂ ತಿಳುವಳಿಕೆ ಸ್ಪಷ್ಟವಾಗಿಯೇ ಇತ್ತು. ಇಷ್ಟು ನಮಗೆ ಅರ್ಥವಾಗಬೇಕು. ಮೋಶೆಯ ನಿಬಂಧನೆಗಳು ಪ್ರಾಮಾಣಿಕವಾಗಿ ಮತ್ತು ತಾತ್ವಿಕವಾಗಿ ಯಶಸ್ವಿಯಾಗಿದ್ದರೆ ಯೇಸುವಿನ ಅಗತ್ಯವಿರಲಿಲ್ಲ.
ಹೋಗಲಿ ಯೇಸುವಿನ ಬಲಿದಾನವನ್ನು ಮುಂದಿಟ್ಟುಕೊಂಡು ಮಹೋದ್ದೇಶದಿಂದ ಪೌಲನೇ ಮೊದಲಾದ ತ್ಯಾಗವೀರರು ರೂಪಿಸಿದ ಕ್ರೈಸ್ತ ಧರ್ಮವು ಪುರೋಹಿತ ಮತ್ತು ಪ್ರಭುತ್ವದ ಸ್ವಾರ್ಥಕ್ಕೆ ಬಳಕೆಯಾಗದಿದ್ದರೆ ಪ್ರವಾದಿ ಮುಹಮ್ಮದರೂ ಮತ್ತವರ ಪೂರ್ವಜರು ದೀನ್ ಎಂಬುದನ್ನು ಕನವರಿಸುವ ಅಗತ್ಯವಿರುತ್ತಿರಲಿಲ್ಲ. ಸತ್ಯವು ಯಾವುದೆಂದು ಅಂತರಂಗದಿಂದಲೇ ಅರಿತು ವಿದೇಯವಾಗುವುದು ಮತ್ತು ಅದನ್ನು ತಪ್ಪದಂತೆ ರೂಪಿಸಿಕೊಳ್ಳುವ ಕ್ರಮ ಅಥವಾ ದಾರಿಯನ್ನೇ ದೀನ್ ಎಂದು ಅರ್ಥೈಸಿಕೊಳ್ಳೋಣ.
ಮುಹಮ್ಮದ್ ಅವರ ಕಾಲದ ಸಮಾಜೋಧಾರ್ಮಿಕ ಅವ್ಯವಸ್ಥೆಗಳು ಮತ್ತು ಮನುಷ್ಯರ ಬಾಳ್ವೆಗೆ ಮಾರಕವಾಗಿರುವಂತಹ ಅತ್ಯಂತ ಕೆಟ್ಟ ಮತ್ತು ಕ್ರೂರವಾದಂತಹ ಸಂಘರ್ಷಗಳು ಅವರನ್ನು ಮತ್ತೊಮ್ಮೆ ನವಸಮಾಜವನ್ನು ಕನವರಿಸುವಂತಾಯಿತು. ಎಲ್ಲಾ ಅಸಮಾನತೆ, ವೈಪರಿತ್ಯ, ಅಭದ್ರತೆ, ತಾರತಮ್ಯ, ಕ್ರೂರವಾದ ಮೌಢ್ಯ; ಇತ್ಯಾದಿಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತು ಜನರಿಗೆ ದಾರಿಯನ್ನು ತೋರಲು ಸಿದ್ಧವಾದರು. ಅದೇ ಕುರಾನಿನ ಅವತರಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ5 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ3 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್


