ಅಂತರಂಗ
ಧರ್ಮ ಮರ್ಮ – 10 : ಅಲ್ಲಿರುವುದು ನಮ್ಮನೆ
- ಯೋಗೇಶ್ ಮಾಸ್ಟರ್
ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಅಂತ ಸುಂಸುಮ್ನೆ ಹೊಡೆಯೋ ಡೈಲಾಗ್ನೆಲ್ಲಾ ಯಾರೂ ವ್ಯಾವಹಾರಿಕವಾಗಿ ಸೀರಿಯಸ್ಸಾಗಿ ತಗೊಂಡಿರೋದನ್ನ ನಾವ್ಯಾರೂ ನೋಡೇ ಇಲ್ಲ. ಅಲ್ಲಿರೋದು ತಾನೇ ನಮ್ಮನೆ ಇಲ್ಲಿ ಸುಮ್ಮಸುಮ್ಮನೆ ಯಾಕೆ ಮನೆ ಕಟ್ಟಿಸೋದು? ಇಲ್ಲಿ ಇರೋದಕ್ಕೆ ಯಾಕೆ ಅಷ್ಟೋಂದು ಮುತುವರ್ಜಿ ವಹಿಸೋದು? ಅಂತೆಲ್ಲಾ ಅಂದ್ರೆ, ವೇದಾಂತ ಆಡೋಕೆ, ತಿನ್ನೋಕೆ ಬದನೆಕಾಯಿ ಅಂತ ಪೆಕ್ರುಪೆಕ್ರಾಗಿ ನಗ್ತಾರೆ.
ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ ಅಂತ ಶುದ್ಧ ಅಧಿಕ ಪ್ರಸಂಗದ ಮಾತು ನಿಜವಾಗಿಯೂ ಸಾವಿನ ದವಡೆಯಲ್ಲಿರುವವರ ಮನಸ್ಥಿತಿಗಳಿಗೆ ಅನ್ನಿಸೀತು. ಯಾವುದೇ ಕಾರಣಕ್ಕೆ ತಮ್ಮ ಸಾವಿನ ನಿಗಧಿತ ಸಮಯವನ್ನು ಅಥವಾ ಕಾಣುತ್ತಿರುವಂತೆಯೇ ಸಮೀಪಿಸುತ್ತಿರುವ ಸಾವನ್ನು ಎದುರಿಸುತ್ತಿರುವವರು ವೈರಾಗ್ಯ ಭಾವಕ್ಕೆ ಒಳಗಾಗುವುದನ್ನು ನಾನು ಕಂಡಿದ್ದೇನೆ.
ಕ್ಯಾನ್ಸರ್ ಬಾಧೆಯಲ್ಲಿ ಜೀವನ್ಮರಣದ ತಾಕಲಾಟವನ್ನು ಎದುರಿಸಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದ ಆ ಸಮಯದಲ್ಲಿ ಡಾ. ಎಂ ವಸು ಮಳಲಿ ತಮ್ಮ ಬದುಕಿನ ಇರುವ ಒಲವಿನ ಕುರಿತೂ, ಸಾವಿನ ಬಗ್ಗೆ ಸೈದ್ಧಾಂತಿಕವಾಗಿ ಮಾತಾಡುವುದಿರಲಿ, ಆಲೋಚಿಸುವುದಕ್ಕೂ ನಿರಾಕರಿಸುತ್ತಿದ್ದರು.
ಒಂದು ಪಕ್ಷ ಅಂತಹದ್ದೊಂದು ಮಾತು ಬಂದಾಗ ನೇರವಾಗಿ ಹೇಳುತ್ತಿದ್ದರು, “ನಿಮಗೆ ಎಲ್ಲವೂ ಸರಿಯಿದ್ದು, ಸಾವಿನ ಬಗ್ಗೆ ಭಯವಿಲ್ಲದಿರುವುದಕ್ಕೆ ಬೇಕಾದ ಫಿಲಾಸಫಿಯನ್ನ ಮಾತಾಡ್ತೀರಿ. ಸಾವನ್ನೂ ರೋಮ್ಯಾಂಟಿಕ್ ಆಗಿ ಬಣ್ಣಿಸ್ತೀರಿ. ಆದರೆ ಅದನ್ನು ನನ್ನಂತವಳು ಓದಿದರೆ ಅದು ಹುಸಿ ಅಂತ ಚೆನ್ನಾಗೇ ಗೊತ್ತಾಗತ್ತೆ” ಎಂದು ಹೇಳಿದ್ದರು. ಈಗ ಅವರಿಲ್ಲ. ಆದರೆ ಅವರು ನಿಜಕ್ಕೂ ಮೃತ್ಯುವಿನ ದವಡೆಗೆ ಹೋಗಿ ನಂತರ ಮರಣಿಸುವ ನಡುವೆ ಒಂದಷ್ಟು ಕಾಲ ಚೆನ್ನಾಗಿಯೇ ತಮ್ಮ ಜೀವನದ ಘನತೆಯನ್ನು ಸ್ಪಷ್ಟವಾಗಿಯೇ ಎತ್ತಿ ಹಿಡಿಯುತ್ತಾ ಚಟುವಟಿಕೆಪೂರ್ಣವಾಗಿಯೇ ಬದುಕಿದ್ದರು.
ಆ ಸಮಯದಲ್ಲಿ ಅವರೊಡನೆ ಹತ್ತಿರದಿಂದಾದರೂ, ಹೊರಗಿನಿಂದ ಒಡನಾಡುತ್ತಿದ್ದಾಗ ಸಾವಿನ ಬಗ್ಗೆ ಅವರು ಕಾಣುವಂತಹ ಒಳದೃಷ್ಟಿಯನ್ನು ನನಗೆ ಕಾಣಲಾಗುತ್ತಿರಲಿಲ್ಲ. ಅವರೆಷ್ಟೇ ಆಳದ ದೃಷ್ಟಿಯನ್ನು ನಮಗೆ ನೀಡಿದರೂ, ನನ್ನಂತವನು ಹೆಚ್ಚೆಂದರೆ ಸಕಾರಾತ್ಮಕವಾಗಿ ಬದುಕನ್ನು ನೋಡುವುದು, ನಾವು ಹೆದರುವ ಸಾವನ್ನು ಜಾಣತನದಿಂದ ಪಕ್ಕಕ್ಕೆ ಸರಿಸಿ ಬರೀ ಜೀವಿಸುವ ಅಂಶಗಳನ್ನಷ್ಟೇ ಸರಸಮಯವಾಗಿ ಚಿತ್ರಿಸುವುದಾಗುತ್ತಿತ್ತು. ಅದೂ ಸಾವಿನ ಭಯವಿರುವವರಿಗೆ ನಾವೇನೋ ಹೆದರಿಕೆಯನ್ನು ಹೋಗಲಾಡಿಸುವಂತೆ ಅಥವಾ ಪಾಸಿಟಿವ್ ಥಿಂಕಿಂಗ್ ಹೇಳಿಕೊಡುವಂತೆ!
ನನಗೆ ಎಷ್ಟೋ ಬಾರಿ ಅನ್ನಿಸುತ್ತದೆ, ನಮ್ಮಲ್ಲಿ ಬಹುಪಾಲು ಮಂದಿ ಯಾರಾದರೂ ಸತ್ತಾಗ ಅಳುವುದು ದುಃಖದಿಂದಲ್ಲ ಭಯದಿಂದ ಎಂದು. ಯಾವುದೇ ಒಂದು ಅಪಘಾತವಾದಿರುವುದನ್ನು ನೋಡಿದರೆ, ಕೇಳಿದರೆ ಆ ಕ್ಷಣಕ್ಕೆ ಕೊಂಚ ಎಚ್ಚರಿಕೆಯಿಂದ ವರ್ತಿಸುವ ನಂತರ ಮತ್ತೆ ಮರೆತುಬಿಡುವ ಜಾಯಮಾನ ನಮ್ಮದು. ಅಂತೆಯೇ ಮರಣಿಸಿದವರು ನಮ್ಮೊಡನೆ ಒಡನಾಡಿದ್ದರೆ ಆ ನೆನಪುಗಳಿಂದ ಬಾಧಿತರಾಗುತ್ತೇವೆ.
ನಮ್ಮೊಡನೆ ಮಾತಾಡಿದವರು, ಸ್ಪಂದಿಸಿದವರು, ನಮ್ಮ ಜೊತೆ ತಮ್ಮ ಪ್ರೀತಿ, ಅಕ್ಕರೆ, ಕನಸುಗಳನ್ನು ಹಂಚಿಕೊಂಡವರು, ಬಾಳನ್ನು ಬೆಳಗಿಸಿದವರು, ಬದುಕನ್ನು ಬೆರಗಿನಿಂದ ಸವಿದವರು ಇಂದು ನಿಶ್ಚೇತನರಾಗಿ ಮಣ್ಣಿನ ಕುಪ್ಪೆಯ ಕೆಳಗೆ ಮಲಗುವರು ಅಥವಾ ಬೆಂಕಿಯಲ್ಲಿ ಸುಟ್ಟು ಬೂಧಿಯಾಗುವರು ಎಂಬ ಆಲೋಚನೆಯೇ ಒಂದು ಆಘಾತಕರ, ಅವರಿನ್ನೆಂದೂ ನಮ್ಮೊಡನೆ ಈ ಮೊದಲಿದ್ದ ಹಾಗೆ ಇರುವುದೇ ಇಲ್ಲ ಎಂದು ಬರಿದೇ ನೆನೆಸಿಕೊಳ್ಳಲೂ ಸಂಕಟಕರ.
ಏನೇ ಸಕಾರಾತ್ಮಕವಾಗಿ ಯೋಚಿಸಿದರೂ ಸಾವೆಂಬುವ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲದೇ ಇರುವ ಕಾರಣದಿಂದಲೇ ಚೇತನ, ಆತ್ಮ, ಮುಕ್ತಿ ಇತ್ಯಾದಿಗಳನ್ನು ಚಿಂತಿಸಲಾಯ್ತು. ಬೇರೆ ದಾರಿಗಳಿಲ್ಲದೇ ಸತ್ತವರ ಆತ್ಮಕ್ಕೆ ಶಾಂತಿ ಕೋರುವ, ಅವರ ಚೈತನ್ಯವು ನಮ್ಮೊಡನೆ ಇರುವಂತಹ ಅನೇಕ ಅಸಂಗತ ವಿಚಾರಗಳಿಂದ ನಮ್ಮ ಮನಸ್ಸುಗಳಿಗೆ ಸಮಾಧಾನ ತಂದುಕೊಳ್ಳುವ ರೀತಿಗಳನ್ನು ಕಂಡುಕೊಳ್ಳಲಾಯಿತು.
ಯಾರದೇ ಶವಸಂಸ್ಕಾರಕ್ಕೆ ಹೋದಾಗ “ಬದುಕು ಇಷ್ಟೇನೇ” ಎಂದು ಅನ್ನಿಸುವಂತಹ ಸ್ಮಶಾನ ವೈರಾಗ್ಯವನ್ನೇ ಗಟ್ಟಿಯಾಗಿ ಹಿಡಿದು, ಭೂಮಿಯ ವಿಸ್ತಾರ ಜೀವನದಲ್ಲಿ ನಮ್ಮ ಆಗಮನ ಮತ್ತು ನಿರ್ಗಮನದ ನಡುವಿನ ಅವಧಿಯು ಬಹಳ ಅಲ್ಪವೇ ಆದ್ದರಿಂದ, ಅಷ್ಟೂ ಸಮಯ ಸಾರ್ಥಕವಾಗಿ, ದಯೆ, ಕರುಣೆ, ಪ್ರೀತಿ, ಭಕ್ತಿಗಳಿಂದ ಬಾಳಿ ಬದುಕಿ “ಹೊರಟೆ ಸೇರೆ ನಮ್ಮ ಊರ” ಎಂದು (ತುಕಾರಾಂ ಹೇಳುವಂತೆ) ಹೋಗುತ್ತೇವೆ ಎಂಬುದನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಲೇ ಸಂಸಾರ ಕ್ಷಣಭಂಗುರ, ನೀರಿನ ಮೇಲೆ ಗುಳ್ಳೆ ನಿಜವಲ್ಲಾ ಹರಿಯೇ ಎಂದೆಲ್ಲಾ ದಾಸರು ಹೇಳುವುದು. ಇಂತಹ ವೈರಾಗ್ಯವೇ ಜೈನ ತೀರ್ಥಂಕರರ ಕಾರಣಿಕ ಶಕ್ತಿ, ಸಾರ.
ಈ ಅರಿವಿನಿಂದಲೇ ಭಾರತದಲ್ಲಂತೂ ಸಂತವರ್ಗದ ಸೃಷ್ಟಿ ಮತ್ತು ಬೆಳವಣಿಗೆ ಬಹಳವಾಯಿತು. ಇದೇ ತಿಳುವಳಿಕೆಯೇ ಆಧ್ಯಾತ್ಮಿಕತೆಯ ನೈತಿಕತೆಯ ಭದ್ರಬುನಾದಿಯನ್ನು ಭಕ್ತಿ ಚಳವಳಿಗೆ ನೀಡಿದ್ದು. ಈ ವಿಚಾರವೇ ಜಾತಿ, ಮತ, ಧರ್ಮಗಳು ಮತ್ತು ವರ್ಗಗಳು ಹುಟ್ಟಿ ಹಾಕಿದ ಮೇಲರಿಮೆ ಮತ್ತು ಕೀಳರಿಮೆಗಳನ್ನು ನಿರಾಕರಿಸಲು, ಸಂಪೂರ್ಣ ಧಿಕ್ಕರಿಸಲು ಸಹಕರಿಸಿದ್ದು. ಅರಿವಿಲ್ಲದಂತೆ ಆದ ಹುಟ್ಟೂ, ಅರಿತಿಲ್ಲದ್ದ ಬರುವ ಸಾವಿನ ನಡುವಿನ ಜೀವಿತಾವಧಿಯನ್ನು ಸಾರ್ಥಕಗೊಳಿಸಿಕೊಳ್ಳಲು, ಅದನ್ನು ಸಂಪೂರ್ಣವಾಗಿ ಸತ್ವಭರಿತವನ್ನಾಗಿಸಲು ಭಕ್ತಿ ಮತ್ತು ವೈರಾಗ್ಯವನ್ನು ಹೇಳಿಕೊಟ್ಟಿದ್ದು ನಮ್ಮ ಭಕ್ತಿ ಪರಂಪರೆ.
ಈ ಭಕ್ತಿಪರಂಪರೆಯು ಚಳುವಳಿಯ ರೀತಿಯಲ್ಲಿ ಸಮಾಜದಲ್ಲಿ ನೆಲೆಸಿದ್ದ ಅಸಮಾನತೆಯ ವಿರುದ್ಧ ಬಹಳ ಗಟ್ಟಿತನದಿಂದಲೂ, ಸಾತ್ವಿಕ ರೀತಿಯಿಂದಲೂ ಹೋರಾಡಿತು. ಬಹುದೊಡ್ಡ ಜನ ಸಮುದಾಯಕ್ಕೆ ವೈರಾಗ್ಯದ ಮನವರಿಕೆ ಮಾಡಿತ್ತು. ಇಂದಲ್ಲ ನಾಳೆ ನಾನು ಸಾಯುತ್ತೇನೆ. ಸಾಯುವ ಮುನ್ನ ಯಾವುದೇ ನಕಾರಾತ್ಮಕವಾಗಿರುವುದನ್ನು ಸಾಧಿಸಿ, ಇತರರನ್ನು ನೋಯಿಸಿ ಹೋಗಕೂಡದೆಂಬ ದಿವ್ಯ ಜ್ಞಾನವು ಸದಾ ಜಾಗೃತವಾಗಿರಲು ಭಕ್ತಿ ಪರಂಪರೆಯವರು ಬಳಸಿದ ಅತಿ ದೊಡ್ಡ ಅಸ್ತ್ರವೆಂದರೆ ಭಗವಂತನಲ್ಲಿ ನಿಷ್ಕಾಮ ಪ್ರೀತಿ. ಯಾವ ಪ್ರತಿಫಲವನ್ನೂ ಬಯಸದ ಭಕ್ತಿ. ಬರಿದೇ ಮುಕ್ತಿ.
ಕೋಳೂರ ಕೊಡಗೂಸು
ಮುಕ್ತಿಯನ್ನು ಪಡೆಯಲು, ನಿಜವಾದ ವೈರಾಗ್ಯ ಭಾವವನ್ನು ಹೊಂದಲು ಸಾಮಾಜಿಕ ಮತ್ತು ವೈಯಕ್ತಿಕವಾದ ಸ್ಥಾನ ಮಾನಗಳ ಅರಿಮೆಗಳನ್ನು, ಅಹಂಕಾರಗಳಿಂದ ಹುಟ್ಟಿರುವ ಭ್ರಮೆಗಳಿಂದ ಹೊರಬರುವ ಅಗತ್ಯವನ್ನು ಭಕ್ತಿ ಚಳುವಳಿಯು ಹೇಳುತ್ತಾ ಹೇಳುತ್ತಾ ಬಹು ಮುಖ್ಯವಾದ ಮತ್ತೊಂದು ವಿಷಯವನ್ನೂ ಸ್ಪಷ್ಟಗೊಳಿಸಿದ್ದರು. ಆಚರಣೆ ಮತ್ತು ಧಾರ್ಮಿಕ ನಿರ್ಬಂಧ ವಿಚಾರಗಳಿಂದ ಹೊರಗೆ ಬರಬೇಕೆಂಬುದನ್ನು ಕಾಲದಿಂದ ಕಾಲಕ್ಕೆ ತಿಳಿಸುತ್ತಲೇ ಬಂದರು.
ಭಗವಂತನೆಂಬ ಪರಿಕಲ್ಪನೆಯನ್ನು ಕಲ್ಲಿನಲ್ಲಿ ಸ್ಥಿರಗೊಳಿಸಿ, ನಮ್ಮ ಭಕ್ತಿ, ಪ್ರೀತಿಗಳನ್ನು ಮುಗ್ಧತೆಯಿಲ್ಲದೇ ಬರಿಯ ಆಚರಣೆಗಳಿಗೆ ಒಳಪಡಿಸಿ, ನೇಮದಲ್ಲಿದ್ದರೆ ಅದೂ ಕೂಡ ವ್ಯರ್ಥವೆಂದು ಸಾಧಿಸಲು ಅನೇಕ ಐತಿಹ್ಯಗಳನ್ನು ಸಮಾಜದ ಕಣ್ಣ ಮುಂದೆ ತಂದರು. ಅದರಲ್ಲಿ ಕೋಳೂರು ಕೊಡಗೂಸು ಒಂದು ಸುಂದರ ಕಥೆ.
ಧಾರವಾಡ ಜಿಲ್ಲೆಯ ಹಾವೇರಿಯಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ಗ್ರಾಮವೇ ಈ ಕೋಳೂರು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನೇರ ತಮಿಳುನಾಡಿಗೆ ಒಯ್ಯುತ್ತಾರೆ. ಇದು ತಮಿಳು ಶೈವ ಭಕ್ತಿ ಪರಂಪರೆಯ ಪ್ರಮುಖವಾದ ಕಥೆಗಳಲ್ಲೊಂದು.ಏನೇ ಆಗಲಿ, ನಮ್ಮ ಭಕ್ತಿಯ ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಳ್ಳಲು ಈ ಕಥೆ ಬಹಳ ಮುಖ್ಯ.
ಕೋಳೂರಿನ ಶಿವ ದೇವಾಲಯದಲ್ಲಿ ಶಿವದೇವನೆಂಬ ಬ್ರಾಹ್ಮಣ ಅರ್ಚಕ. ಅವನಿಗೆ ಒಬ್ಬಳೇ ಮಗಳು ಈ ನಮ್ಮ ಕೊಡಗೂಸು. ಅವಳೋ ಮಗುವಾಗಿದ್ದಾಗಲೇ ತಾಯನ್ನು ಕಳೆದುಕೊಂಡವಳು ಮತ್ತು ತಂದೆಯ ಸುಪರ್ದಿನಲ್ಲಿ ಬೆಳೆಯುತ್ತಾ ಬರುವಳು. ಶಿವದೇವನು ಪ್ರತಿದಿನವೂ ಶಿವನಿಗೆ ಶಾಲ್ಯಾನ್ನದಂತಹ ಭಕ್ಷ್ಯವನ್ನು ಸಿದ್ಧಪಡಿಸಿ ನೈವೇದ್ಯವನ್ನು ನೀಡುತ್ತಿದ್ದನು. (ಕೆಲವೊಂದು ಕೃತಿಗಳಲ್ಲಿ ಕಪಿಲೆಯೆಂಬ ಹಸುವಿನ ಹಾಲು ಎಂದೂ ಇದೆ.) ಒಮ್ಮೆ ಆರೋಗ್ಯ ತಪ್ಪಿದ ತನ್ನ ಸಂಬಂಧಿಕರನ್ನು ನೋಡಿ ಬರಲು ಶಿವದೇವನು ಹೋಗಬೇಕಾಗಿತ್ತು.
ತನ್ನ ಶಿವಪೂಜೆ ಮತ್ತು ನೈವೇದ್ಯದ ನೇಮವು ತಪ್ಪ ಬಾರದೆಂದು ಮಗಳಿಗೆ ಅದನ್ನು ವಹಿಸಿ ತಂದೆ ಹೋಗುವನು. ಈ ಕೂಸು ಶಿವನಿಗೆ ಆಹಾರವನ್ನು ಅರ್ಪಿಸುವುದೆಂದರೆ ಆತನಿಗೆ ತಿನ್ನಲು ಕೊಡುವುದೆಂದೇ ಭಾವಿಸುತ್ತದೆ. ಅಂತೆಯೇ ಕೊಡಲು ಹೋದಾಗ ಲಿಂಗವು ಈಗ ಮೌನವಾಗಿಯೇ ಇರುವಂತೆ ಆಗಲೂ ನಿಶ್ಚೇತನವಾಗಿಯೇ ಇರುತ್ತದೆ. ಆದರೆ ಕೊಡಗೂಸು ತನ್ನ ತಂದೆ ಕೊಡುವಾಗ ಸೇವಿಸುವ ಶಿವ ತಾನು ಕೊಡುವಾಗ ಏಕೆ ಸ್ವೀಕರಿಸುತ್ತಿಲ್ಲ? ಎಂದು ಪರಿಪರಿಯಾಗಿ ಶಿವನನ್ನು ಕರೆಯುತ್ತಾಳೆ. ಆದರೆ ಅವನು ಬರುವುದಿಲ್ಲ. ಬರ್ತೀಯೋ ಇಲ್ಲವೋ, ಎಂದು ಕಂಬಕ್ಕೋ, ಪಾಣೀಪೀಠಕ್ಕೋ ತಲೆ ಚಚ್ಚಿಕೊಂಡು ರಕ್ತಧಾರೆ ಹರಿಸಲು ಮುಂದಾದಾಗ ಶಿವನು ಪ್ರತ್ಯಕ್ಷನಾಗಿ ಅವಳಿಂದ ಆಹಾರವನ್ನು ಸ್ವೀಕರಿಸುತ್ತಾನೆ.
ಶಿವದೇವನು ಮರಳಿ ಬರುವವರೆಗೂ ಈ ಕೂಸು ಹೀಗೇ ಜೀವಂತವಾಗಿ ಎದುರಿಗೆ ಬಂದ ಶಿವನಿಗೆ ಆಹಾರ ಅರ್ಪಿಸುತ್ತಿರುತ್ತಾಳೆ. ತಂದೆ ಬರುತ್ತಾನೆ. ಅದೇ ತಾನೇ ಕೊಡಗೂಸು ದೇವಾಲಯದಿಂದ ಬರುತ್ತಾಳೆ. ತಂದೆ ನೈವೇದ್ಯ ಮಾಡಿರುವ ಪ್ರಸಾದ ಕೇಳುತ್ತಾನೆ. ಆದರೆ ಅದು ಇರುವುದಿಲ್ಲ. ಶಿವ ತಿಂದ ಎನ್ನುವ ಮಾತನ್ನು ಅರ್ಚಕ ತಂದೆ ಒಪ್ಪುವುದಿಲ್ಲ. ತಾನೇ ತಿಂದು ಶಿವನ ಮೇಲೆ ಹೇಳುವ ಮಗಳನ್ನು ಗದರಿಸುತ್ತಾನೆ. ಅದನ್ನು ನಿರೂಪಿಸಲು ಕೂಸು ಮತ್ತೆ ಶಿವನ ಮುಂದೆ ಹೋಗಿ ತಿನ್ನಲು ಕರೆಯುತ್ತಾಳೆ. ಬರುವುದಿಲ್ಲ. ಅವಳು ಅದೇ ರೀತಿ ತಲೆ ಚಚ್ಚಿಕೊಳ್ಳುವ ಕೆಲಸಕ್ಕೆ ಮುಂದಾದಾಗ ಶಿವ ಅಲ್ಲಿ ಪ್ರತ್ಯಕ್ಷನಾಗಿ ಅವಳನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾನೆ.
ಲಿಂಗದೊಳಕ್ಕೆ ಹೋಗುವ ಮಗುವನ್ನು ಹಿಡಿಯಲು ಹೋಗುವ ತಂದೆಗೆ ಅವಳ ಕೂದಲಷ್ಟೇ ಕೈಗೆ ಸಿಗುತ್ತದೆ. ಆ ಕೂದಲು ಲಿಂಗದಿಂದ ಈಗಲೂ ಹೊರಗಿದೆ ಎಂದು ಪ್ರತೀತಿ ಇದೆ. ಇದನ್ನು ತನ್ನ ರಗಳೆಯಲ್ಲಿ ಹರಿಹರ ಕವಿಯು ಬಹು ಸುಂದರವಾಗಿ ವರ್ಣಿಸಿದ್ದಾನೆ.
ಸಾಂಕೇತಿಕವಾಗಿ ವಿಜೃಂಭಿಸುವ ಕಥೆಯ ಒಗಟನ್ನು ಬಿಡಿಸಬೇಕು. ನೈಜ ಘಟನೆಯಂತೆ ವಾಸ್ತವವಾಗಿ ನೋಡಿ ವಿಮರ್ಶೆ ಮಾಡಬಾರದು. ಹಾಗೆ ಮಾಡಿಬಿಟ್ಟರೆ, ಇಡೀ ಕಥೆಯನ್ನೇ ಸುಳ್ಳು ಎಂದು ಹೇಳುವಂತಾಗಿಬಿಡುತ್ತದೆ. ದೇವಾಲಯವೆಂದರೆ ಬರೀ ಶಿವದೇವ ಮತ್ತು ಅವನ ಕೂಸಿಗೆ ಮಾತ್ರವಿತ್ತೇ? ತಾಯಿ ಇಲ್ಲದ ಈ ಮಗುವು ತಂದೆಗೆ ಪೂಜೆಗೆ ಪ್ರತಿನಿತ್ಯ ನೆರವಾಗುತ್ತಿದ್ದಾಗ ನೈವೇದ್ಯ ಮಾಡುವುದನ್ನು ನೋಡುತ್ತಿರಲಿಲ್ಲವೇ? ಅವನೋ ಮಗುವನ್ನು ಎಲ್ಲೋ ಹೊರಗೆ ಕಳುಹಿಸಿ ರಹಸ್ಯವಾಗಿ ಎಡೆ ಇಡುತ್ತಿದ್ದನೇ? ಶಿವ ಎಂಬ ಲಿಂಗವನ್ನು ಆರಾಧಿಸುವುದನ್ನು ನೋಡುತ್ತಿದ್ದಳೇ ಹೊರತು, ಅವನು ಎದ್ದು ಬಂದು ತಿಂದದ್ದೇನೂ ಅವಳೂ ನೋಡಿರಲಿಲ್ಲವಲ್ಲ! ಹೋಕ್ಕೊಳ್ಳಿ, ಶಿವ ಬಂದು ತಿನ್ನಲ್ಲಿಲ್ಲಾಂತ ಅಷ್ಟು ಪುಟ್ಟ ಬಾಲಕಿ ತಲೆ ಚಚ್ಚಿಕೊಂಡು ರಕ್ತಸ್ರಾವ ಮಾಡಿಕೊಂಡು ಸತ್ತು ಹೋಗುತ್ತೇನೆಂದು ಹೆದರಿಸಿ ತನ್ನ ಕೆಲಸ ಸಾಧಿಸಿಕೊಳ್ಳುವಷ್ಟು ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಲು ಎಲ್ಲಿ ಕಲಿತಳು? ಹೇಗೆ ಮಾಡುವಳು? ತಂದೆ ಮಗಳ ಸತ್ಯತೆಯನ್ನು ನಿರಾಕರಿಸಿ ಅನುಮಾನಿಸಿದಾಗ ಬರುವ ಶಿವ ‘ಅಲ್ಲಾ ಕಣಯ್ಯಾ ಅರ್ಚಕಾ, ನೀನು ಬರೀ ನೇಮ ಮಾಡಿದೆ.
ನಿನ್ನ ಮಗಳು ತನ್ನ ಮುಗ್ಧತೆಯಿಂದ ನನಗೆ ಊಟವನ್ನೇ ಮಾಡಿಸಿಬಿಟ್ಟಳು ಕಣಯ್ಯಾ. ನೇಮ ಗೀಮಾ ಅಂತಿರೋ ಸಂಪ್ರದಾಯ ಅಲ್ಲ ಮುಖ್ಯ. ಮಗುವಿಗಿರುವಂತಹ ಭಕ್ತಿ ಪ್ರೀತಿ ಮುಖ್ಯ ಕಣಯ್ಯಾ’ ಅಂತ ಬುದ್ಧಿ ಹೇಳೋದು ಬಿಟ್ಟು, ತಟಕ್ಕಂತ ಬಂದು ಪಟಕ್ಕಂತ ಹಾರಿಸಿಕೊಂಡು ಹೋಗಿಬಿಡುವುದೇ! ಪಾಪದ ಶಿವದೇವನಿಗೆ ಪುತ್ರಿಶೋಕ ನೀಡಿ, ಬರೀ ಜುಟ್ಟುಳಿಸಿ ಹೋಗುವುದೇ?
ವಿಷಯ ಅದಲ್ಲ. ಶಿವದೇವ ಬ್ರಾಹ್ಮಣ. ಬ್ರಾಹ್ಮಣರಲ್ಲಿ ಯಜ್ಞೋಪವೀತ ಧರಿಸುವ ಮತ್ತು ಉಪನಯನ ಮಾಡಿಸಿಕೊಂಡು ದೇವತಾಕಾರ್ಯವನ್ನು ಮಾಡುವ ಅಧಿಕಾರ ಪುರುಷ ಹೊಂದಿರುತ್ತಾನೆ. ತಮಾಷೆಯೆಂದರೆ ಶೂದ್ರಳೆಂದು ಕರೆಯುವ ಹೆಣ್ಣು ತನಗೆ ಹೆಂಡತಿಯಾದ ಮೇಲೆ ಅವಳ ಪರವಾಗಿ ತಾನೇ ಜನಿವಾರ ಹಾಕಿಕೊಂಡು ದೇವತಾಕಾರ್ಯ ಮಾಡುತ್ತಾನೆ.
ಇಂತಹದ್ದೊಂದು ಢಾಂಭಿಕತನವನ್ನು ಧಿಕ್ಕರಿಸುವ ಕಥೆ ಇದು. ಒಬ್ಬ ಅರ್ಚಕನು ತನ್ನ ನೇಮಾದಿಗಳನ್ನು ಯಾಂತ್ರಿಕವಾಗಿ ಮಾಡುತ್ತಾನೆಯೇ ಹೊರತು, ಅವನು ಹೊರತು ಪಡಿಸಿರುವಂತಹ ಹೆಣ್ಣು ತನ್ನ ನಿಜವಾದ ಭಕ್ತಿಯಿಂದ ಯಾವ ದೈವಿಕತೆಯ ಸೂಕ್ಷ್ಮವನ್ನು ಹೊಂದುವಳೋ ಅದನ್ನು ತನ್ನ ಸಹಜತೆ ಮತ್ತು ಮುಗ್ಧತೆಯಿಂದ ಪಡೆಯುವಳು ಎಂದು ಈ ಕಥೆ ಹೇಳುವುದು.
ಹಾಗೆಯೇ ದೇವಸ್ಥಾನದ ಅರ್ಚಕನಾಗಿ ಬರಿಯ ಸಂಪ್ರದಾಯದ ಚೌಕಟ್ಟಲ್ಲಿ ಬಂಧಿತರಾಗುವ ಮಂದಿಗೆ ದೈವತ್ವದ ಅರಿವಾಗದೆಂದೂ, ಸಹಜವಾದ ಮುಗ್ಧತೆ ಮತ್ತು ಪ್ರೀತಿಯಿಂದ ಅದರ ಅನುಭೂತಿಯನ್ನು ಪಡೆಯಬೇಕೆಂಬ ಪ್ರತಿಮಾ ರೂಪದ ಕಥೆಯಿದು.
ಯೇಸುವು ಹೇಳುವುದನ್ನು ನೆನಪಿಸಿಕೊಳ್ಳೋಣ, “ನೀವು ಮಕ್ಕಳಂತಾಗದಿದ್ದರೆ ನಿಮಗೆ ಸ್ವರ್ಗ ಸಾಮ್ರಾಜ್ಯವು ಇಲ್ಲ.” ಅಂತೆಯೇ ಈ ಕಥೆ ಕೊಡುವ ಮತ್ತೊಂದು ಮಹತ್ತರ ಸೂಚನೆ ಎಂದರೆ, ನೇಮಾದಿಗಳ ಸಾಂಪ್ರದಾಯಿಕ ಚೌಕಟ್ಟನ್ನು ಮುರಿದು ಹೋಗುವವರನ್ನು ಸಂಪ್ರದಾಯವಾದಿಗಳು ಉಳಿಗೊಳಿಸುವುದಿಲ್ಲ ಎಂದೂ ಕೂಡ. ನೋಡಿ, ಕೊಡಗೂಸು ಶಿವನ ಸೇರಿಕೊಂಡುಬಿಟ್ಟಳು.
ಅವಳ ತಂದೆ ಅರ್ಚಕ ವೃತ್ತಿ ಮಾಡಿಕೊಂಡು, ಅದೇ ನೈವೇದ್ಯವಿಟ್ಟುಕೊಂಡು ಉಳಿದುಕೊಂಡ. ಸಂಪ್ರದಾಯದ ನೇಮವನ್ನು ಮುರಿದವರು ಒಂದು ಐತಿಹ್ಯವಾಗಿ ಉಳಿಯುತ್ತಾರೆ. ರೂಪಕವಾಗಿ ವಿಜೃಂಭಿಸುತ್ತಾರೆ. ಆದರೆ ನೇಮ ಮಾಡುವವರು ಉಳಿದು ಬಾಳುತ್ತಾರೆ. ಸಂಪ್ರದಾಯವು ಮುಂದುವರಿಯುತ್ತದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’
- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಹೊಸತನದ ಹೊಸ್ತಿಲಲ್ಲಿ..!
- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಕಾಮರೂಪದ ಪ್ರಭಾಕರ
- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?