Connect with us

ಅಂತರಂಗ

ಧರ್ಮ ಮರ್ಮ – 06 : ಸ್ವರ್ಗದ ಆಸೆ, ನರಕದ ಭಯ

Published

on

  • ಯೋಗೇಶ್ ಮಾಸ್ಟರ್

ಯಾವುದೇ ಸ್ಥಾಪಿತ ಧರ್ಮವಾಗಲಿ, ಯಾವುದೇ ಮತದ ಕವಲುಗಳಾಗಲಿ ಹುಟ್ಟುವುದೇ ಸಂಘರ್ಷದ ಫಲವಾಗಿ. ಆಯಾ ಕಾಲಘಟ್ಟದ ಮೌಢ್ಯ, ಧಾರ್ಮಿಕ ಅಥವಾ ಸಾಂಪ್ರದಾಯಕ ವಿಧಿ ವಿಧಾನಗಳು ಸಮಂಜಸವಾಗಿಲ್ಲ ಎಂದು ಎತ್ತಿದ ದನಿಗಳು ಮತ್ತು ಪರ್ಯಾಯ ಮಾರ್ಗಗಳು ಹೊಸ ಧರ್ಮಗಳಾದವು ಅಥವಾ ಹೊಸ ಪಂಥಗಳಾದವು.

ಸ್ಥಾಪಿತ ವ್ಯಕ್ತಿ ಅಥವಾ ಸಮೂಹದ ಜೀವಿತಾವಧಿಯ ನಂತರದ ಕಾಲಘಟ್ಟಗಳಲ್ಲಿ ಅದೇ ಹೊಸ ಪಂಥದ ಸದಸ್ಯರೇ ಕಟ್ಟರ್ ಧೋರಣೆಗಳನ್ನು ಅನುಸರಿಸುತ್ತಾ, ತಮ್ಮದೇ ಪಂಥ ಅಥವಾ ಧರ್ಮ ಉದಸಿದ್ದ ವೈಶಾಲ್ಯದ ಕಾರಣವನ್ನು ಒಂದು ಚೌಕಟ್ಟಿಗೆ ಒಳಪಡಿಸಿ ಸಂಕುಚಿತಗೊಳಿಸುತ್ತಾರೆ.

ಹೊಸತರ ಆಕರ್ಷಣೆ ಅಥವಾ ಅದರಲ್ಲಿರುವ ವ್ಯಕ್ತಿಗಳ ಮೇಲಿನ ತಮ್ಮ ಗೌರವದಿಂದ ಪಂಥವನ್ನು ಪ್ರವೇಶಿಸಿದ್ದರೂ ಹಳೆಯ ಸಾಂಪ್ರಾದಯಕ ಮನಸ್ಥಿತಿಗಳು ಬದಲಾಗಿರುವುದಿಲ್ಲ. ಹಾಗಾಗಿ ಹಳೆಯ ಪಂಥದಲ್ಲಿದ್ದಂತಹ ಮನಸ್ಥಿತಿಗಳನ್ನು ಹೊಸದರಲ್ಲೂ ಮುಂದುವರಿಸುತ್ತಾರೆ. ಮುಖ್ಯವಾಗಿ ಅವರಿಗೆ ಸ್ಥಾಪಕರ ಮೂಲ ಆಶಯವೇ ಅವರಿಗೆ ತಿಳಿದಿರುವುದಿಲ್ಲ.

ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ, ಲಿಂಗಾಯತ ಮೊದಲಾದ ಧರ್ಮಗಳು, ಹಿಂದೂ ಜೀವನ ಪದ್ಧತಿಯ ಪಂಥಗಳು ಎಲ್ಲವೂ ಇದೇ ರೀತಿಯಲ್ಲಿ ಸೊರಗಿವೆ. ತಮ್ಮ ಮೂಲ ಆಶಯವನ್ನು ಜೀವಂತವಾಗಿರಿಸಿಕೊಳ್ಳಲು ವಿಫಲವಾಗಿವೆ. ಆದರೆ ಇಲ್ಲಿ ನಾವು ವಿಚಾರ ಮಾಡಬೇಕಾದ ಅಂಶವೆಂದರೆ ಸೋತಿರುವುದು ಅಥವಾ ವಿಫಲವಾಗಿರುವುದು ಧರ್ಮ ಅಥವಾ ಧರ್ಮದ ಸ್ಥಾಪಕರು ಅಲ್ಲ. ಆಯಾ ಧರ್ಮಗಳ ಧಾರ್ಮಿಕರು.

ಸಾಮಾನ್ಯವಾಗಿ ಧರ್ಮಗಳಲ್ಲಿ ಆಶಯದ ಅನುಷ್ಠಾನಕ್ಕೆ ಅಗತ್ಯವಿರುವ ನೇಮ, ನಿಯಮಗಳನ್ನು ಸಂಪ್ರದಾಯಗಳನ್ನಾಗಿಸಿ, ಅವುಗಳನ್ನು ಉಳಿಸಿಕೊಳ್ಳಲು ಅವುಗಳ ಬಗ್ಗೆ ಭಯ ಮತ್ತು ಆಸೆಗಳನ್ನು ಹುಟ್ಟುಹಾಕುವುದು ಆ ಸಂಪ್ರದಾಯಸ್ಥ ಮನಸ್ಥಿತಿಗಳ ಕೆಲಸ. ಭಯ ಮತ್ತು ಆಸೆಗಳನ್ನು ಹುಟ್ಟು ಹಾಕಲು ಅವರು ಬಳಸುವ ತಂತ್ರವೇ ಕಥನಕಲೆ. ಸಾಮಾನ್ಯವಾಗಿ ಕಥನ ನಿರೂಪಣೆಗಳಿಗೆ ಸಾಮಾನ್ಯರ ಮನಸ್ಸುಗಳು ಸೋಲುತ್ತವೆ.

ಅದರಲ್ಲೂ ಆ ನಿರೂಪಣೆಗಳು ಭಾವನಾತ್ಮಕವಾಗಿ ನಾಟಕೀಯವಾಗಿ ಪ್ರಸ್ತುತವಾಗಿಬಿಟ್ಟರಂತೂ ಅವರು ಸಂಪೂರ್ಣ ಮರುಳಾಗಿಬಿಡುತ್ತಾರೆ. ತಮ್ಮದೇ ಬದುಕಿನ ಪ್ರತಿಫಲನದಂತೆ ಆರಂಭವಾಗುವ ಆ ಕಥೆಗಳು ಯಾರದ್ದೋ ಆಗಿರುತ್ತವೆ. ಆದರೆ ನೋವು, ಸಂಕಟ, ಕಷ್ಟಗಳ ಸಾಮ್ಯತೆ ಇರುತ್ತವೆ. ಆ ಕಥೆಗಳಲ್ಲಿ ಅದ್ಯಾವುದೋ ಮಾರ್ಗದಿಂದ ಆ ಕಷ್ಟ ನೋವುಗಳು ಪರಿಹಾರವಾಗುತ್ತವೆ. ಹಾಗಾಗಿ ತಾವೂ ಅಂತೆಯೇ ವ್ರತವನ್ನು ಮಾಡಬೇಕು ಎಂದು ಜನ ತಿಳಿಯುತ್ತಾರೆ. ವ್ರತ ಎಂದರೇನೇ ನೇಮ. ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸುವುದು. ಇದರಿಂದ ಸಾಂಪ್ರದಾಯಕ ಚೌಕಟ್ಟುಗಳು ಬಲಗೊಳ್ಳುತ್ತಾ ಬರುವವು.

ಹಾಗೆಂದು ನೇಮ ನಿಷ್ಟೆಗಳನ್ನು ನಕಾರಾತ್ಮಕವಾಗಿ ನೋಡುವ ಅಗತ್ಯವಿಲ್ಲ. ಯಾವುದೇ ಸಂದರ್ಭದಲ್ಲಿ ಕೇಡಿನೊಂದಿಗೆ, ಅಸತ್ಯದೊಂದಿಗೆ, ಪರಿಸ್ಥಿತಿಗೆ ಅನುಗುಣವಾಗಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೇ ತನ್ನ ಜೀವನ್ಮುಖಿ ಧೋರಣೆಯನ್ನು, ಸತ್ಯ ನಿಷ್ಟತೆಯನ್ನು, ನ್ಯಾಯಪರತೆಯನ್ನು ಕಾದುಕೊಳ್ಳುತ್ತಾ ಬರುವುದು ಕೂಡ ನೇಮವೇ. ಅದೇ ಇಲ್ಲಿ ನಾವು ಸ್ಪಷ್ಟತೆಯನ್ನು ಕಂಡುಕೊಳ್ಳಬೇಕಾಗಿರುವುದು. ಯಾವ ನೇಮವನ್ನು ಮಾಡಿಕೊಂಡಿದ್ದೇವೆ.

ಅದರ ಆಶಯವೇನು? ಅದು ಯಾವ ಪರವಾಗಿದೆ? ಅದು ವಿಶಾಲಾರ್ಥದಲ್ಲಿ ಸಮಾಜಮುಖಿಯಾಗಿದೆಯೋ,ಜೀವನ್ಮುಖಿಯಾಗಿದೆಯೋ, ಜೀವಪರವಾಗಿದೆಯೋ, ತಮ್ಮದೇ ಪಂಥದ ಪ್ರತಿಷ್ಠೆ ಅಥವಾ ಅಹಂಭಾವದ ಧೋರಣೆಯಾಗಿದೆಯೋ, ಶ್ರೇಷ್ಟತೆಯ ವ್ಯಸನದಿಂದ ಕೂಡಿದೆಯೋ; ಇಂಥವನ್ನೆಲ್ಲಾ ತಿಳಿಯಬೇಕಾದರೆ ಒಬ್ಬಾತನಿಗೆ ವ್ಯಕ್ತಿಗತವಾಗಿ ಪರಾಮರ್ಶೆ ಮಾಡಿಕೊಳ್ಳುವ ಗುಣವಿರಬೇಕು. ತಾನೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಆತ್ಮವಿಶ್ವಾಸದಿಂದ ಕೂಡಿರುವ ಧೈರ್ಯವಿರಬೇಕು.

ತನ್ನ ಒಲವು, ನಿಲುವುಗಳಲ್ಲಿ ಸ್ಪಷ್ಟತೆ ಇದ್ದ ಪಕ್ಷದಲ್ಲಿ ಯಾವುದೇ ಧರ್ಮ, ಮತ ಅಥವಾ ಪಂಥದಲ್ಲಿದ್ದರೂ ಅದರ ಕೆಲವು ಅಂಶಗಳನ್ನು ಒಪ್ಪುವ ಅಥವಾ ನಿರಾಕರಿಸುವ, ಕೆಲವನ್ನು ಅಚ್ಚುಕಟ್ಟಾಗಿ ಪಾಲಿಸುವ ಅಥವಾ ತಿರಸ್ಕರಿಸುವ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾನೆ. ಅಲ್ಲದೇ ತನ್ನ ಧೋರಣೆ ಮತ್ತು ಆಶಯದ ಬಗ್ಗೆ ಸ್ಪಷ್ಟತೆಯನ್ನು ತಳೆದಿರುವ ಕಾರಣ ಕಾಳು ಹೊಟ್ಟುಗಳನ್ನು ಬೇರ್ಪಡಿಸುವ, ಅಗತ್ಯ ಮತ್ತು ಅನಗತ್ಯಗಳನ್ನು ಸ್ಪಷ್ಟವಾಗಿ ನೋಡುವಂತಹ ದೃಷ್ಟಿಯನ್ನು ಹೊಂದಿರುತ್ತಾರೆ.

ಇದರಿಂದಾಗಿಯೇ ಸ್ಥಾಪಿತ ಧರ್ಮಗಳಲ್ಲಿದ್ದು, ಅದೇ ಧರ್ಮದ ನೇಮ ನಿಷ್ಟೆ ಶ್ರದ್ಧೆಗಳನ್ನು ಹೊಂದಿದ್ದರೂ ಅವರು ಕ್ರಾಂತಿಕಾರಿಗಳಂತೆ ಕಾಣುತ್ತಾರೆ. ಏಕೆಂದರೆ ಬರಿಯ ಸಾಂಪ್ರದಾಯಿಕ ಮನಸ್ಥಿತಿಗಳ ಸಮೂಹವು ನಡೆದುಕೊಳ್ಳುವುದಕ್ಕಿಂದ ಭಿನ್ನವಾಗಿ ಇವರು ಕಾಣುತ್ತಾರೆ. ಅವರನ್ನು ಒಪ್ಪಬಹುದು, ನಿರಾಕರಿಸಬಹುದು, ನಿವಾರಿಸಿಯೇಬಿಡಬಹುದು. ಅದು ಸಾಂಪ್ರದಾಯಕ ಮನಸ್ಥಿತಿಯವರ ರೋಗಗ್ರಸ್ಥದ ಗಾಢತೆ ಮತ್ತು ಪ್ರಭಾವಗಳ ಮೇಲೆ ಆಧಾರಿತವಾಗಿರುತ್ತದೆ.

ಸ್ಪಷ್ಟವಾಗಿ ನಮಗೆ ಎಲ್ಲಾ ಧರ್ಮಗಳಲ್ಲೂ ಕಾಣಬರುವುದೇನೆಂದರೆ ಅದೇ ಧರ್ಮದ ನೇಮವನ್ನು ಆಚರಿಸುತ್ತಲೇ ಅದೇ ಧರ್ಮದ ಸಾಂಪ್ರದಾಯಿಕ ಧೋರಣೆಗಳ ಬಗ್ಗೆ ಧ್ವನಿ ಎತ್ತಿರುವಂತಹದ್ದು. ಆದರೆ ಇವರ ಸಂಖ್ಯೆ ಬಹಳ ಕಡಿಮೆ. ಕೆಲವೊಮ್ಮೆ ಇಲ್ಲವೇ ಇಲ್ಲ ಎಂದೆನಿಸುವಷ್ಟೂ ಕಡಿಮೆ. ಸ್ವರ್ಗ ನರಕಗಳ ಜನಕರು ಸಂಪ್ರದಾಯವಾದಿಗಳು ಮೂಲಭೂತ ಆಶಯವನ್ನು ಉಳಿಸಿಕೊಳ್ಳಲು ಹಾಕಿಕೊಟ್ಟಿರುವ ಮಾರ್ಗವನ್ನು ಬಿಡಲೇಬಾರದೆಂಬಂತಹ ವಿಚಾರಕ್ಕೆ ಬದ್ಧರಾಗಿರುವ ಕಾರಣದಿಂದ ಸಂಪ್ರದಾಯಕ್ಕೆ ಶರಣು ಹೋಗುವುದು. ಇತರರನ್ನು ಅದರ ತೆಕ್ಕೆಯಲ್ಲಿ ಸೆಳೆಯಲು ಅಥವಾ ಈಗಾಗಲೇ ಇರುವವರು ಬಿಟ್ಟು ಹೋಗದಿರಲು ಸ್ವರ್ಗದ ಗಳಿಕೆ ಮತ್ತು ನರಕದ ಭೀತಿಯನ್ನು ಇಟ್ಟಿರುವರು.

ಕನ್ನಡದ ನಾಗರಹೊಳೆ ಚಿತ್ರದಲ್ಲಿ “ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೆ ಇಲ್ಲ ಸುಳ್ಳು. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು” ಎಂಬ ಹಾಡು ಬಹಳ ಜನಪ್ರಿಯ. ಈ ಸ್ವರ್ಗ ಮತ್ತು ನರಕ ಸುಳ್ಳು ಎಂಬ ಧೋರಣೆ ತಳೆಯುವಂತಹ ಇಂತಹದ್ದೊಂದು ವಿಚಾರ ಬರಲು ಬಹಳಷ್ಟು ಕಾಲ ಬೇಕಾಯ್ತು. ಈಗ, ಈ ಕಾಲಘಟ್ಟದಲ್ಲಂತೂ ಸ್ವರ್ಗ ಮತ್ತು ನರಕದ ಭಯ ಬಹುತೇಕ ಯಾರಿಗೂ ಇಲ್ಲ. ಈಗ ಮಾಡಿದ್ದು ಈಗಲೇ ಎಂಬ ಮನಸ್ಥಿತಿಗೆ ತಲುಪಿಯಾಗಿದೆ. ಮರಣಾನಂತರದ ಜೀವನದಲ್ಲಿ, ದೇವರ ಸಾಮ್ರಾಜ್ಯದಲ್ಲಿ ಎಂದೇನೆಲ್ಲಾ ಯಾರಾದರೂ ಸತ್ತಾಗ ಹೇಳಬಹುದು.

ಅದು ಬರಿಯ ಆಗಿನ ನಂಬಿಕೆಯ ಉಳಿಕೆಯ ಮಾತಾಗಿದೆಯೇ ಹೊರತು ಯಾರಿಗೂ ಅದರ ಮೇಲೆ ಗಾಢವಾದ ನಂಬಿಕೆಯೇನೂ ಅಷ್ಟಿಲ್ಲ. ಕನಿಷ್ಟಪಕ್ಷ ಸಂಖ್ಯಾವಾರು ದೃಷ್ಟಿಯಿಂದಾದರೂ ಈ ಹಿಂದೆಲ್ಲಾ ಇರುವಷ್ಟು ಪ್ರಮಾಣದಲ್ಲಿ ಖಂಡಿತ ಇಲ್ಲ. ಆದರೆ, ಕಾಯುವ, ಮುನಿಯುವ ದೇವರ ಕಲ್ಪನೆ ಮಾತ್ರ ಜೀವಂತವಾಗಿದೆ. ಅದೂ ನಾವು ಮಾಡುವ ಭಕ್ತಿ ಅಥವಾ ದೇವರಿಗೆ ವಿಮುಖವಾಗಿ ಮಾಡುವಂತಹ ಕೆಲಸ “ದೋಸೆ ಮುಗುಚಿ ಹಾಕಿದಂತೆ” ಈಗಲೇ, ಈ ಒಂದು ಜನ್ಮದಲ್ಲೇ ಅನುಭವಕ್ಕೆ ಬರುತ್ತದೆ ಎಂಬ ನಂಬಿಕೆ ಗಾಢವಾಗಿದೆ. ಇದು ನೇರ ಕರ್ಮ ಸಿದ್ಧಾಂತದ ಪ್ರಭಾವ.

ಕರ್ಮ ಸಿದ್ಧಾಂತದ ಬೇರು

ಕರ್ಮ ಸಿದ್ಧಾಂತವು ಭಾರತದ ಕೊಡುಗೆ ಎಂದು ಬಹಳಷ್ಟು ವಿದ್ವಾಂಸರು ಹೇಳುವುದುಂಟು, ಹಾಗೆಯೇ ಸಾಮಾನ್ಯರಲ್ಲಿ ಒಂದು ನಂಬುಗೆ ಉಂಟು. ಆದರೆ ಹಾಗೇನೂ ಇಲ್ಲ. ಕರ್ಮ ಸಿದ್ಧಾಂತದ ಬೇರು ಪ್ರಪಂಚದ ಶ್ರದ್ಧಾಕ್ಷೇತ್ರದ ಮೂಲೆ ಮೂಲೆಯಲ್ಲಿದೆ. ಎಲ್ಲಾ ಧಾರ್ಮಿಕತೆಗಳಲ್ಲೂ, ಸಂಸ್ಕೃತಿ, ಆಧ್ಯಾತ್ಮಿಕತೆಗಳಲ್ಲೂ ಕರ್ಮ ಸಿದ್ಧಾಂತವು ಒಂದಿಲ್ಲೊಂದು ರೀತಿಯಲ್ಲಿ ನುಸುಳಿಕೊಂಡಿವೆ. ಆದರೆ ಈ ಕರ್ಮ ಸಿದ್ಧಾಂತದ ಮೂಲವನ್ನು ಮನಸ್ಸಿನ ಮೂಲದೊಂದಿಗೆ ಗುರುತಿಸಿದವನು ಮತ್ತು ಸಮೀಕರಿಸಿದವನು ಬುದ್ಧ.

ಭಗವತ್ಗೀತೆಯ ಕರ್ಮಯೋಗದಲ್ಲಿ ಮತ್ತು ಇತರ ಅಧ್ಯಾಯಗಳಲ್ಲಿ ಕರ್ಮಸಿದ್ಧಾಂತವನ್ನು ಬಹಳ ಸೂಕ್ಷ್ಮವಾಗಿ ಮತ್ತು ಯೋಗ್ಯವಾಗಿ, ಕೆಲವೊಮ್ಮೆ ಆಗ್ರಹಕ್ಕೊಳಗಾಗಿ ಚಿತ್ರಿಸಿದ್ದಾರೆ. ಅವು ನಿಜಕ್ಕೂ ಅಧ್ಯಯನ ಯೋಗ್ಯ. ಅದರಿಂದ ನಮ್ಮ ಪೂರ್ವಿಕರ ಒಲವು ನಿಲುವುಗಳು ಹಾಗೂ ಗೀತೆಯನ್ನು ತಮ್ಮ ಬಳಕೆಗೆ ತಂದುಕೊಳ್ಳುವಂತಹ ಮನಸ್ಥಿತಿಯವರ ಗುಪ್ತ ಆಶಯ ಅಥವಾ ಗೀಳುಗಳೂ ನಮಗೆ ಅರಿವಾಗುತ್ತಾ ಹೋಗುತ್ತದೆ. ಅಂತಹ ಅರಿವಿಗೆ ತೆರೆದುಕೊಳ್ಳುವುದರಿಂದಲೇ ಮಾರ್ಗಕ್ಕೆ ಸ್ಪಷ್ಟತೆಯೂ, ಗಮ್ಯಕ್ಕೆ ನಿಖರತೆಯೂ ಲಭ್ಯವಾಗುತ್ತದೆ.

ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ ಸ್ವರ್ಗ ನರಕಗಳ ಪರಿಕಲ್ಪನೆ ಮತ್ತು ನರಕದಲ್ಲಿ ಇರುವಂತಹ ಒಂದು ಕೆಟ್ಟದಾದ ನದಿಯ ಪರಿಕಲ್ಪನೆಯು ವಿಶ್ವದ ಬಹುಪಾಲು ಎಲ್ಲಾ ಸಂಸ್ಕೃತಿಗಳಲ್ಲಿ ಇರುವುದು. ಹಾಗೆಯೇ ಬಹುಪಾಲು ಪ್ರಾಚೀನ ಧಾರ್ಮಿಕ ಅಥವಾ ಆಧ್ಯಾತ್ಮಿಕ ಸಿದ್ಧಾಂತಗಳಲ್ಲಿ ಮತ್ತು ಪೌರಾಣಿಕ ನಿರೂಪಣೆಗಳಲ್ಲಿ ಜಗತ್ತಿನ ಸೃಷ್ಟಿ ಮತ್ತು ಪ್ರಳಯಗಳ ಬಗ್ಗೆ ಜಿಜ್ಞಾಸೆಗಳಿವೆ. ಅಂದರೆ ಎಲ್ಲರೂ ಒಂದು ಉತ್ಪತ್ತಿ ಮತ್ತು ನಾಶದ ಬಗ್ಗೆ ಅವಧಾನವನ್ನು ಹೊಂದಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಹೆಚ್ಚಿನ ಮಟ್ಟದ ಗಮನ ನೀಡುವ ಅಭಿಲಾಷೆಯನ್ನು ಹೊಂದಿದ್ದರು.

ಅದರಿಂದಾಗಿಯೇ ತಮ್ಮ ಕಣ್ಣಿಗೆ ಕಾಣುವ ಜೀವ ಸೃಷ್ಟಿಯ ಹಿಂದಿನದುರ ಬಗ್ಗೆ ಮತ್ತು ಜೀವ ನಾಶದ ನಂತರದ ಬಗ್ಗೆ ಅತೀವ ಆಸಕ್ತಿಯನ್ನೂ ಹೊಂದಿದ್ದಲ್ಲದೇ, ಅವರ ಕಾಲಘಟ್ಟದ ದಾರ್ಶನಿಕರು, ಬುದ್ಧಿವಂತರು, ಸೂಕ್ಷ್ಮವಿಚಾರವಾದಿಗಳು ಹೇಳುವುದನ್ನು ಶ್ರದ್ಧಾ ಭಕ್ತಿಗಳಿಂದ ಕೇಳಿದ್ದೇ ಅಲ್ಲದೇ ಒಪ್ಪಿರುತ್ತಿದ್ದರು.
ಜಡ್ಜ್‍ಮೆಂಟ್ ಡೇ ಸ್ಪಷ್ಟವಾಗಿ ದಾಖಲಾಗಿರುವ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ತೀರ್ಮಾನದ ದಿನ (ಜಡ್ಜ್‍ಮೆಂಟ್ ಡೇ) ಎಂಬುದು ಜಗತ್ತಿಗೂ ಇರುತ್ತದೆ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆ ಜಡ್ಜ್‍ಮೆಂಟ್ ಅವಧಿ ಬಂದಿರುತ್ತದೆ. ಅದೇ ಅವನ ಪಾಪ ಪುಣ್ಯಗಳ ವಿಚಾರಣಾ ದಿನವೂ ಹೌದು.

ಅವನು ಮಾಡಿರುವ ಪಾಪ ಪುಣ್ಯಗಳ ಅನುಸಾರವಾಗಿ ಅವನು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವನು. ಹಾಗೆಯೇ ಎರಡನ್ನೂ ತೂಕ ಮಾಡಿ ನೋಡಲು ಮಾಡಿರುವ ಪಾಪಕ್ಕಿಂತ ಪುಣ್ಯವೇ ಹೆಚ್ಚಾಗಿದ್ದ ಪಕ್ಷದಲ್ಲಿ ಸ್ವರ್ಗಕ್ಕೆ ಹೋಗುವನು. ಕೆಲವೊಮ್ಮೆ ಮಾಡಿರುವ ಪಾಪಕ್ಕೆ ಶಿಕ್ಷೆ ಅನುಭವಿಸುವಂತೆ ಮಾಡಿ, ಆ ಪಾಪಕರ್ಮದ ಫಲವನ್ನು ಕಳೆದುಕೊಂಡು ಸ್ವರ್ಗಕ್ಕೆ ಕಳುಹಿಸಲಾಗುವುದು. ಕೆಲವೊಮ್ಮೆ ಮಾಡಿದ ಪಾಪಗಳನ್ನೆಲ್ಲಾ ಒಮ್ಮಿಂದೊಮ್ಮೆಲೇ ಶುದ್ಧಗೊಳಿಸಿ, ಆತ್ಮವನ್ನು ಶುದ್ಧಾತ್ಮವನ್ನಾಗಿಸಿ ಏಕ್‍ದಂ ಸ್ವರ್ಗಕ್ಕೆ ಕಳುಹಿಸುವಂತಹ ಕೆಲವು ಸೂಕ್ಷ್ಮ ತಂತ್ರಗಾರಿಕೆಗಳು ಉಂಟು. ಅವೇನೇ ಇರಲಿ.

ಈ ಪಾಪ ಪುಣ್ಯ ಮತ್ತು ಸ್ವರ್ಗ ನರಕಗಳ ಪರಿಕಲ್ಪನೆಯು ಮನುಷ್ಯನನ್ನು ಅತ್ಯಂತ ಸುದೀರ್ಘ ಕಾಲ, ಸಾವಿರಾರು ವರ್ಷಗಳ ಕಾಲ ಆಳಿದೆ ಎಂಬುದು ಸುಳ್ಳಲ್ಲ. ಈ ಪರಿಕಲ್ಪನೆಗಳನ್ನು ಒಮ್ಮಿಂದೊಮ್ಮೆಲೇ ಸುಳ್ಳು ಎಂದು ತಳ್ಳಿ ಹಾಕಿಬಿಡುವುದರಿಂದ ಸಮಸ್ಯೆಯೇ ಇಲ್ಲ, ಕೆಲಸವೇ ಇಲ್ಲ. ಆದರೆ, ಇಂತಹದ್ದೊಂದು ಸುಳ್ಳು ಏಕಾಗಿ ಮತ್ತು ಹೇಗೆ ಇಷ್ಟೂ ಕಾಲ, ಅಷ್ಟು ವ್ಯಾಪಕವಾಗಿ ಸಮೂಹಗಳಲ್ಲಿ ಜೀವಂತವಾಗಿತ್ತು, ಅವರನ್ನು ಆಳುತ್ತಿತ್ತು, ಅವರ ಮನಸ್ಸುಗಳನ್ನು, ಬದುಕುಗಳನ್ನು, ಶಕ್ತಿಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿತ್ತು ಎಂದು ವಿಚಾರಿಸಲು ಹೋದರೆ ಬಹಳ ಸೂಕ್ಷ್ಮವಾದ ವಿಷಯಗಳು ಅನಾವರಣಗೊಳ್ಳುತ್ತಾ ಹೋಗುವವು.

ಅದೇನೇ ಆಗಲಿ, ಒಬ್ಬ ವ್ಯಕ್ತಿಯ ಜೀವನಾವಧಿಯಲ್ಲಿ ವಿಕಾಸದ ಘಟ್ಟಗಳನ್ನು ಗುರುತಿಸಿಕೊಳ್ಳುತ್ತಾ, ಹಿಂದಕ್ಕೆ ನಡೆಯುತ್ತಾ ಭೂತದಲ್ಲಿ ಆದ ಪ್ರಭಾವಗಳನ್ನು ಗುರುತಿಸುವಷ್ಟೇ ಸುಂದರವಾದ ಮತ್ತು ಅಗತ್ಯವಾದ ಕೆಲಸ ಇದಾಗಿರುತ್ತದೆ. ಸ್ವರ್ಗ ಮತ್ತು ನರಕಗಳ ಪರಿಕಲ್ಪನೆಗಳನ್ನು ಉಪಚರಿಸಿದ ಬಗೆಗಳಲ್ಲಿ ನಾನಾ ರೀತಿಗಳಿವೆ. ಆದರೆ ಪ್ರಾಚೀನ ಸಮಾಜಗಳು ಅವನ್ನು ಸ್ವೀಕರಿಸಿದ್ದವು. ಅವನ್ನು ಗ್ರಹಿಸುತ್ತಿದ್ದ ರೀತಿಗಳಲ್ಲಿ ಮತ್ತು ಪರಿಗಣಿಸುತ್ತಿದ್ದ ಮತಿಗಳಲ್ಲಿ ವೈರುಧ್ಯತೆಗಳಿರುತ್ತಿದ್ದವು.

ನಾನು ಸಣ್ಣವನಿರುವಾಗ ಅನೇಕ ವಿಷಯಗಳನ್ನು ಕೇಳುತ್ತಿದ್ದೆ. “ಯಾರಾದರೂ ಸತ್ತಾಗ ಅತಿಯಾಗಿ ಅಳಬಾರದು. ನಮ್ಮೆಲ್ಲರ ಕಣ್ಣೀರು ಸತ್ತವರ ಸ್ವರ್ಗಾವರೋಹಣಕ್ಕೆ ಪ್ರವಾಹವಾಗಿ ಅಡ್ಡ ಬಂದು ತೊಡಕಾಗುವುದು.”

ವಿಚಾರಣಾ ಸ್ಥಳದಿಂದ (ಯಮಲೋಕ) ಸ್ವರ್ಗಕ್ಕೆ ಹೋಗುವ ದಾರಿ ಬಹಳ ಸೂಕ್ಷ್ಮ. ಬೆಕ್ಕು ಅದನ್ನು ಕಡಿದು ಹಾಕಿದರೆ, ನಾಯಿಯು ತನ್ನ ಬಾಲದಿಂದ ದಾರಿಯು ತುಂಡಾಗದಂತೆ ಅಥವಾ ನಡೆಯುವಿಕೆಗೆ ತೊಡಕಾಗದಂತೆ ನೋಡಿಕೊಳ್ಳುತ್ತದೆ.

ಸತ್ತಮೇಲೆ ಮಾಡುವ ಸರಿಯಾದ ಸಂಸ್ಕಾರದಿಂದ, ಅವರ ಹೆಸರಿನಲ್ಲಿ ಮಾಡುವ ದಾನ ಧರ್ಮಗಳ ಪುಣ್ಯ ಸಂಚಯದಿಂದ ವಿಚಾರಣೆಯಲ್ಲಿರುವ ಮೃತವ್ಯಕ್ತಿಯ ಖಾತೆಗೆ ಪುಣ್ಯವು ಜಮಾಆಗಿ ಅವನು ಸ್ವರ್ಗಕ್ಕೆ ಹೋಗುವಂತಹ ಅರ್ಹತೆಗಳನ್ನು ಪಡೆಯುತ್ತಾನೆ.”

ದೇವಸ್ಥಾನದಲ್ಲಿ ದೇವರ ದುಡ್ಡನ್ನು ಕದಿಯುವವನು, ದೈವೀಕಾರ್ಯದಲ್ಲಿ ವಂಚಿಸಿ ಧನ ಸಂಗ್ರಹ ಮಾಡುವವನು ಮುಂದಿನ ಜನ್ಮದಲ್ಲಿ ನಾಯಿಯಾಗುತ್ತಾನೆ.” (ನಾನು ಸಣ್ಣವನಿದ್ದಾಗ ಇದನ್ನು ತಿಳಿದ ಮೇಲೆ ಬಹಳ ಗಂಭೀರವಾಗಿ ನಂಬಿದ್ದೇ ಅಲ್ಲದೇ ಎದುರಾಗುವ ಪ್ರತಿ ನಾಯಿಗೂ ಯಾವ ದೇವಸ್ಥಾನದ ಪೂಜಾರಿಯಾಗಿದ್ದೆ? ಯಾವ ದೇವರ ಅರ್ಚಕನಾಗಿದ್ದೆ? ಎಂದು ವಿಚಾರಿಸುತ್ತಿದ್ದೆ.)

ಕಬ್ಬಿಣವನ್ನು ಕದ್ದವನು ಮುಂದಿನ ಜನ್ಮದಲ್ಲಿ ಬಿಳಿಯ ಮಚ್ಚೆಗಳನ್ನು ಹೊಂದಿರುವಂತಹ ತೊನ್ನಿನ ರೋಗವನ್ನು ಪಡೆಯುತ್ತಾನೆ.” ಇತ್ಯಾದಿ. ಈ ಬಗೆಯ ಮಾತುಗಳೆಲ್ಲದರ ಹಿಂದೆ ಕಾರಣಗಳಿವೆ, ಪ್ರಭಾವಗಳಿವೆ ಮತ್ತು ಉದ್ದೇಶಗಳೂ ಸ್ಪಷ್ಟವಾಗಿವೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending