ಅಂತರಂಗ
ಧರ್ಮ ಮರ್ಮ – 09 : ದೀನ್ ವಿಶ್ವಾಸಿ
- ಯೋಗೇಶ್ ಮಾಸ್ಟರ್
ಧರ್ಮ ಮತ್ತು ದೇವರಿಗೆ ಸಂಬಂಧ ಕಲ್ಪಿಸಿದವನು ವ್ಯಕ್ತಿ. ಯಾವ ದೇವರೂ ಧರ್ಮವನ್ನು ಸ್ಥಾಪಿಸಲಿಲ್ಲ. ದೇವರೆಂಬುವ ಪರಿಕಲ್ಪನೆ ನಮ್ಮ ಪೂರ್ವಿಕರಲ್ಲಿ ಯಾವುದ್ಯಾವುದೋ ಕಾರಣಗಳಿಂದ ಮೂಡಿತ್ತು ಮತ್ತು ಅದರ ಕೋಪಕ್ಕೆ ಗುರಿಯಾಗದಿರಲು ಮತ್ತು ಅದರ ಅನುಗ್ರಹಕ್ಕೆ ಪಾತ್ರವಾಗಲು ನಾನಾ ದಾರಿಗಳನ್ನು ಕಂಡುಕೊಳ್ಳುತ್ತಿದ್ದರು. ಪ್ರಕೃತಿಯಲ್ಲಿನ ಸೂರ್ಯನಂತೆ ಅಥವಾ ನೀರಿನಂತೆ ದೇವರ ಪರಿಕಲ್ಪನೆಯು ಅತ್ಯಂತ ಸಮೃದ್ಧವಾಗಿ ಮತ್ತು ಮುಕ್ತವಾಗಿ ಎಲ್ಲರಿಗೂ ದೊರಕಿತ್ತು.
ಬೈಬಲ್ಲಿನ ಆದಿಕಾಂಡದಲ್ಲಿ ತನ್ನ ದೇವರು ಸೃಷ್ಟಿಯ ಕೆಲಸವನ್ನು ಮುಗಿಸುತ್ತಾನೆ. ನಂತರ ‘ತನ್ನ ಸ್ವರೂಪದ ಪ್ರತಿರೂಪವಾಗಿ ಮನುಷ್ಯನನ್ನು ನಿರ್ಮಿಸುತ್ತಾನೆ’ ಎಂದಿದೆ. ಆದರೆ ವಿಷಯವೇನೆಂದರೆ ಮನುಷ್ಯ ತನ್ನ ಸ್ವರೂಪಕ್ಕೆ ಪ್ರತಿರೂಪವಾಗಿ ದೇವರನ್ನು ಸೃಷ್ಟಿಸಿಕೊಂಡ. ತಾನು ವಾಸಿಸುವ ಪ್ರಕೃತಿಯಲ್ಲಿ ಎಲ್ಲಾ ವಸ್ತುಗಳ, ಪ್ರಕೃತಿಯ ಇತರ ಎಲ್ಲಾ ಜೀವಿಗಳ ಮೇಲೆ ಅಧಿಪತ್ಯ ಸಾಧಿಸಲು ಆಶಿಸಿದ್ದ ಮತ್ತು ತನಗೆ ಆ ಸಾಮರ್ಥ್ಯ ಇದೆ ಎಂದೂ ಅವನಿಗೆ ಅನ್ನಿಸಿತ್ತು. ಅದಕ್ಕಾಗಿ ದೇವರ ಬಾಯಿಂದಲೇ ಅದನ್ನು ಹೊರಡಿಸಿದ.
‘ಸಮುದ್ರದಲ್ಲಿರುವ ಮೀನುಗಳ ಮೇಲೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳ ಮೇಲೆ, ನೆಲದ ಮೇಲೆ ಓಡಾಡುವ ಎಲ್ಲಾ ಪ್ರಾಣಿಗಳ ಮತ್ತು ಹರಿದಾಡುವ ಕೀಟಗಳ ಮೇಲೆ, ಎಲ್ಲಾ ಭೂಮಿಯ ಮೇಲೆ ತಾನು ಸೃಷ್ಟಿಸುವ ಈ ಮನುಷ್ಯನಿಗೆ ಒಡೆತನವಿರಲಿ. ಎಲ್ಲಾ ಜೀವಿಗಳ ಮೇಲೆ ದೊರೆತನ ಮಾಡಿರಿ’ ಎಂದು ತನ್ನ ಆಸೆಯನ್ನು ದೇವರ ಬಾಯಿಂದ ಹೇಳಿಸಿದ. ಅದೇನೇ ಇರಲಿ, ತನ್ನ ರೂಪದ ಪ್ರತಿರೂಪದಲ್ಲಿ ಮನುಷ್ಯನ ಸೃಷ್ಟಿ ಮಾಡಿದ ಚಿತ್ರವನ್ನು ತನ್ನ ಕುಂಚದಲ್ಲಿ ಸೆರೆ ಹಿಡಿದ ಮೈಕಲ್ಯಾಂಜಲೋ ಓರ್ವ ಅಪ್ರತಿಮ ಕಲೆಗಾರ.
ಆದಮನ ಸೃಷ್ಟಿ
ದೇವರನ್ನು ವಯಸ್ಸಾದ ಪ್ರಬುದ್ಧ ವೃದ್ಧನಂತೆ ಚಿತ್ರಿಸಿ, ಎಳೆಯ ಯುವಕನಂತೆ ಆದಮನನ್ನು ಚಿತ್ರಿಸಿರುವ ಮೈಕಲ್ಯಾಂಜಲೋ ಮನುಷ್ಯನಿಗೆ ದೇವರಿಂದ ಜೀವಪ್ರಧಾನವಾಗುತ್ತಿರುವಂತೆ ಚಿತ್ರಿಸಿದ್ದಾರೆ. ಚಿತ್ರಪಟದ ಬಲಭಾಗದಲ್ಲಿ ಹಾರಾಡುತ್ತಿರುವ ದೇವರು ತನ್ನ ಗಣಗಳೊಂದಿಗೆ ಬೆತ್ತಲೆಯಾಗಿ ಆರಾಮವಾಗಿ ಅರೆಶಯನದಲ್ಲಿರುವ ಯುವ ಆದಾಮನಿಗೆ ತನ್ನ ತೋರು ಬೆರಳಿಂದ ಚೈತನ್ಯವನ್ನು ನೀಡುತ್ತಿದ್ದಾನೆ.
ಅದು ಅವನನ್ನು ಮುಟ್ಟಿಸಿಲ್ಲ. ಆ ಚಿತ್ರರೂಪಕಕ್ಕೆ ಬೇಕಾದಷ್ಟು ವಿವರಣೆಗಳನ್ನು ಕೊಡುತ್ತಾರೆ. ಅದೊಂದು ಅದ್ಭುತವಾದಂತಹ ಕಲಾಕೃತಿ, ಸಂಶಯವಿಲ್ಲ. ಇದೇ ಬಗೆಯಲ್ಲಿ ಆದಿಕಾಂಡದ ಕತೆಯೂ ಒಂದು ಸಾಹಿತ್ಯ ರೂಪಕವೆಂದು ಸಾಲುಗಳ ನಡುವೆ ಓದಲು ನಮ್ಮಲ್ಲಿ ಸಂಯಮವಿಲ್ಲ.
ಸುಮ್ಮನೆ ತರ್ಕಕ್ಕೆ ಹೀಗೆ ವಿಚಾರ ಮಾಡೋಣ. ಮನುಷ್ಯನಿಗಿಂತ ಮುನ್ನ ತಾನು ಬಹು ಪ್ರೇಮದಿಂದ, ಆಸ್ತೆಯಿಂದ ಸೃಷ್ಟಿಸಿದ ಪ್ರಕೃತಿಗೆ ಗೊಂದಲದ, ವಿಧ್ವಂಸಕ, ಕಿಲಾಡಿತನದ ಬುದ್ಧಿ ಮತ್ತು ಮನಸ್ಸುಳ್ಳ ಮನುಷ್ಯನಿಗೆ ದೊರೆತನ ನೀಡುತ್ತಾನೆಯೇ? ತನ್ನ ಸುಂದರ ಸೃಷ್ಟಿಯನ್ನು ತಾನೇ ನಾಶ ಪಡಿಸಿಕೊಳ್ಳಲು ಅವನು ಬಯಸುತ್ತಾನೆಯೇ?
ಹೋಗಲಿ, ಮುಂದೊಂದು ದಿನ ಮನುಷ್ಯ ಅದೆಷ್ಟು ಕೆಟ್ಟು ಕೆರ ಹಿಡಿದು ನಿಸರ್ಗವನ್ನು ನಾಶ ಮಾಡುತ್ತಾ ಮತ್ತು ತನ್ನ ಮನುಷ್ಯ ಜನಾಂಗಗಳಲ್ಲೇ ಹೊಡೆದಾಡಿಕೊಂಡು ಕೊಲ್ಲುತ್ತಿರುತ್ತಾನೆ ಮತ್ತು ಕೊಲ್ಲಲ್ಪಡುತ್ತಿರುತ್ತಾನೆ ಎಂದು ಭವಿಷ್ಯ ತಿಳಿಯದೇ ಹೋದನೇ?
ಅದು ಹಾಗಲ್ಲ. “ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ” ಎಂದು ಪುರಂದರ ದಾಸರು ಎಚ್ಚರಿಸುತ್ತಾರೆ. ತನಗೆ ಆಲೋಚನೆ, ಸಂಕಲ್ಪ, ವಿವೇಚನೆ ಮಾಡುವ ಕಾರಣದಿಂದ ತಾನು ಜಗತ್ತಿನ ಎಲ್ಲಾ ಜೀವಿಗಳಿಗಿಂತ ಶ್ರೇಷ್ಟ ಎಂಬ ಅಹಂಕಾರ ಹೊಂದಿ ವಿಧ್ವಂಸಕನಾಗಿರುವ ಪರಿಯನ್ನು ನೋಡಿಯೇ ಅಧ್ಯಾತ್ಮದಲ್ಲಿ ಈ ವಿಶ್ವದಲ್ಲಿ ನೀನು ಎಷ್ಟು ಸಣ್ಣವ. ಬಂದು ಹೋಗುವವನಷ್ಟೇ. ನಿನಗೆ ಸಾವಿದೆ.ನೀನು ಇಲ್ಲಿ ಶಾಶ್ವತವಾಗಿ ಇರುವುದಿಲ್ಲ ಎಂದು ಜಗತ್ತಿನ ಮೂಲೆ ಮೂಲೆಗಳಿಂದ ಮನುಷ್ಯನ ಮನಸ್ಸಿನ ವಿಕೃತಿಗಳನ್ನು, ಕ್ರೌರ್ಯಗಳನ್ನು ಮತ್ತು ಶೋಷಣೆಗಳನ್ನು ಕಂಡು ಹೆದರಿದ ಕಾಳಜಿ ಇದ್ದ ಕರುಣಾಳುಗಳೆಲ್ಲರೂ ದೇವರೆಂಬ ಬೃಹತ್ತಾದ ಪರಿಕಲ್ಪನೆಯನ್ನು ಮುಂದೆ ನಿಲ್ಲಿಸಿ ಎಚ್ಚರಿಸುತ್ತಿದ್ದರು.
“ಕಾಲನ ದೂತರು ಕಾಲ್ಪಿಡಿದೆಳೆವಾಗ, ತಾಳು ತಾಳೆಂದರೆ ತಾಳುವರೆ. ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೋ” ಎಂದು ಪುರಂದರ ದಾಸರು ಸುಕೃತಕ್ಕೆ ಬದಲಾಗಿ ಮನಸ್ಸನ್ನು ವಿಕೃತವಾಗಿಸಿಕೊಳ್ಳುವ ಹುಚ್ಚಪ್ಪಗಳಿಗೆ ಹೇಳುತ್ತಾರೆ. ಯಾವುದು ಅವರು ಹೇಳುವ ಧರ್ಮ? ಅದು ನಮ್ಮ ಮನಸ್ಸಿನ ಆಲೋಚನೆಗಳಿಗೆ ಮತ್ತು ಲೆಕ್ಕಾಚಾರಗಳಿಗೆ ಮೀರಿರುವ ಸತ್ಯವೂ ಹೌದು ಮತ್ತು ಅದರ ಪ್ರಕಾರ ನಡೆದುಕೊಳ್ಳುವುದರ ಕ್ರಮ ಅಥವಾ ಮಾರ್ಗವೂ ಹೌದು.
ಆ ಸತ್ಯವೇ, ಆ ಉತ್ಕೃಷ್ಟ ಸಾರವೇ ದೀನ್. ಅದಕ್ಕೆ ದಾರಿಯನ್ನು ತೋರಲೆಂದೇ ದೇವರೆಂಬ ಬೆಚ್ಚಪ್ಪನನ್ನು ಮುಂದಿರಿಸಿದ್ದು, ಕ್ರಮವನ್ನು ರೂಪಿಸಿದ್ದು ಮತ್ತು ಮಾರ್ಗವನ್ನು ತೋರಿದ್ದು. ಆ ಧರ್ಮವೇ, ಆ ಮಾರ್ಗವೇ, ವಿನಯದಿಂದ ಅನುಸರಿಸುವ ಕ್ರಮವೇ ದೀನ್. ಶರಣು ಎಂಬುದು ಧ್ವನಿಸುವಂತಹ ದೀನಭಾವದ ದನಿ ಈ ದೀನ್.
ಕಾಬಾ ಭವನದ ಮೇಲೆ ದಾಳಿ
ಪ್ರವಾದಿ ಮುಹಮ್ಮದರ ತಾತ ಅಬ್ದುಲ್ ಮುತ್ತಲಿಬ್. ಅವರು ಸರದಾರರಾಗಿದ್ದರು. ಮಕ್ಕಾದಲ್ಲಿ ಅವರ ವಾಸ.ಕಾಬಾದಲ್ಲಿರುವ ಅಲ್ಲಾಹನ ಭವನವನ್ನು ಕಂಡರೆ ಯಮನ್ ದೇಶದ ರಾಜನಾದ ಅಬ್ರಹನಿಗೆ ಅಸಹನೆ ಮತ್ತು ಅಸೂಯೆ. ಆತ ಕ್ರೈಸ್ತ ಮತ್ತು ಅರೇಬಿಯಾದಲ್ಲಿ ತನ್ನ ನಿರ್ಮಾಣದ ಕ್ರೈಸ್ತ ದೇಗುಲ ಕೇಂದ್ರಾಕರ್ಷಣೆಯಾಗಬೇಕೆಂದು ಅವನ ಬಯಕೆ. ಕಾಬಾದ ಭವನವನ್ನು ನಾಶ ಮಾಡಲು ಸೈನ್ಯದೊಂದಿಗೆ ಬಂದ. ಆದರೆ ಅವನಿಗೇನೂ ಸರದಾರರಾಗಿದ್ದ ಅಬ್ದುಲ್ ಮುತ್ತಲಿಬ್ ಅವರಲ್ಲಿ ದ್ವೇಶವೇನೂ ಇರಲಿಲ್ಲ.
ಕಾಬಾವನ್ನು ಕೆಡವುವ ಕೆಲಸಕ್ಕೆ ಅಡ್ಡಿ ಬಂದರೆ ತಾನು ಜನರ ಮೇಲೆ ಆಕ್ರಮಣ ಮಾಡುವುದಾಗಿ ದೊಡ್ಡ ಸೈನ್ಯವನ್ನು ಮುಂದಿಟ್ಟುಕೊಂಡಿರುವ ಅಬ್ರಹ ಸಂದೇಶ ಕಳುಹಿಸಿದ. ಆದರೆ ಅವನು ಮಕ್ಕಾಗೆ ಬರುವಾಗಲೇ ತನ್ನ ದೋಚುವ ಕೆಲಸಕ್ಕೆ ತೊಡಗಿದ್ದು ಅದರಲ್ಲಿ ಅಬ್ದುಲ್ ಮುತ್ತಲಿಬ್ಬರ 200 ಒಂಟೆಯನ್ನೂ ಸೆರೆ ಹಿಡಿದುಕೊಂಡಿದ್ದ.
ರಾಜನ ರಾಯಭಾರಿ ಅಬ್ದುಲ್ ಮುತ್ತಲಿಬ್ಬರ ಬಳಿಗೆ ಬಂದು ತನ್ನ ರಾಜನ ಉದ್ದೇಶ ತಿಳಿಸಿದಾಗ, ಅವರು ರಾಜನನ್ನು ಕಾಣಲು ಹೋದರು. ಸರದಾರರ ವರ್ಚಸ್ಸಿನಿಂದಾಗಿ ಅವರ ಮೇಲೆ ರಾಜನಿಗೆ ಬಹಳ ಗೌರವವೂ ಮೂಡಿತ್ತು. “ನಾವು ಬಂದಿರುವುದು ನಿಮಗೆ ಏಕೆಂದು ತಿಳಿದಿದೆ. ನೀವು ನಮಗೆ ಏನು ಹೇಳಬೇಕೆಂದಿರುವವರೋ ಅದನ್ನು ಹೇಳಿ” ಎಂದ ಅಬ್ರಹ.
“ನೀವು ವಶಪಡಿಸಿಕೊಂಡಿರುವ ನಮ್ಮ ಒಂಟೆಗಳನ್ನು ಬಿಟ್ಟುಬಿಡಿ” ಎಂದು ಅಬ್ದುಲ್ ಮುತ್ತಲಿಬ್ಬರು ಹೇಳಿದರು. ಅಬ್ರಹನಿಗೆ ಆಶ್ಚರ್ಯವಾಯಿತು. ತಮ್ಮ ಪೂರ್ವಜರು ಆರಾಧಿಸಿಕೊಂಡು ಬಂದಿರುವ ಅಲ್ಲಾಹನ ಭವನವನ್ನು ಕೆಡವಲು ಬಂದಿದ್ದೇನೆ ಎಂದರೆ ಈ ವ್ಯಕ್ತಿ ಅದೆಷ್ಟು ಲೌಕಿಕವಾಗಿ ತಮ್ಮ ಒಂಟೆಗಳನ್ನು ಬಿಟ್ಟುಬಿಡಿ ಎನ್ನುತ್ತಾರಲ್ಲಾ! ಆ ಕಾಬಾದ ಮಂದಿರಕ್ಕಿಂತ ತನ್ನ ಒಂಟೆಗಳೇ ಮುಖ್ಯವೇ? ಧಾರ್ಮಿಕ ಶ್ರದ್ಧೆಗೆ ಆದ್ಯತೆ ಇಲ್ಲವೇ ಎಂದು ಅವನ ಪ್ರಶ್ನೆ. ಯಾಕೆ ಹೀಗೆ ಎಂದು ಅಬ್ರಹ ಕೇಳುವನು.
“ನಾನು ಈ ಒಂಟೆಗಳ ಒಡೆಯ. ಅದಕ್ಕಾಗಿ ಅದರ ಬಗ್ಗೆ ನಾನು ಮಾತಾಡುತ್ತೇನೆ. ಕಾಬಾದ ಭವನದ ಒಡೆಯ ಅಲ್ಲಾಹ್. ಅದನ್ನು ಅವನು ರಕ್ಷಿಸಿಕೊಳ್ಳುವನು” ಎಂದು ತಮ್ಮ ನಿಜವಾದ ಹೊಣೆಗಾರಿಕೆಯ ಬಗ್ಗೆ ಬದ್ಧತೆ ಪ್ರದರ್ಶಿಸುವುದು ಒಂದಾದರೆ, ಅಲ್ಲಾಹನ ಮೇಲಿನ ವಿಶ್ವಾಸ ಇನ್ನೊಂದು ಬಗೆಯದು. ತಾನು ಒಬ್ಬ ಶ್ರದ್ಧಾವಂತನಾಗಿ ಅಲ್ಲಾಹನ ಭವನವನ್ನು ತಾನು ರಕ್ಷಿಸುವೆನೆಂಬ ಉದ್ಧಟನವನ್ನು ತೋರದಿರುವುದರಲ್ಲಿ ದೇವರ ಶಕ್ತಿಯ ಮೇಲಿನ ವಿಶ್ವಾಸವನ್ನು ಪ್ರಕಟಿಸುತ್ತದೆ.
“ಅಲ್ಲಾಹ್ ಅದನ್ನು ನನ್ನಿಂದ ರಕ್ಷಿಸಿಕೊಳ್ಳಲಾಗುವುದಿಲ್ಲ” ಎಂದು ಯಮನ್ ದೊರೆ ಅಬ್ರಹನು ಅಬ್ದುಲ್ ಮುತ್ತಲಿಬ್ಬರನ್ನು ಕೆಣಕಿದರೂ ಅವರು ಪ್ರಚೋದನೆಗೆ ಒಳಗಾಗುವುದಿಲ್ಲ. ಅವರು ಹೇಳುವುದಿಷ್ಟು, “”ರುಗಿಸುತ್ತಾನೆ. ಮುಂದೆ ಕಾಬಾ ಮೇಲಿನ ದಾಳಿಯು ವಿಫಲವಾಗಿ ಅಬ್ರಹ ಸತ್ತು ಅವನ ಸೈನ್ಯ ಪಲಾಯನಗೊಳ್ಳುತ್ತದೆ. ಆನೆಗಳ ವರ್ಷ ಎಂದು ಕರೆಯುವ ಅದರ ವಿವರ ಸಧ್ಯಕ್ಕೆ ಇಲ್ಲಿ ಬೇಡ. ಅದರ ಬಗ್ಗೆ ಮುಂದೆ ಬರುತ್ತದೆ. ಆದರೆ ನಾನು ಪ್ರಸ್ತಾಪಿಸಲು ಇಷ್ಟಪಡುವ ವಿಷಯವೇನೆಂದರೆ ತಾವು ನಂಬಿರುವ ದೇವರ ಮೇಲಿನ ವಿಶ್ವಾಸದಲ್ಲಿ ತಮ್ಮ ವಿನಯತೆಯನ್ನು ಪ್ರದರ್ಶಿಸುವ ಅಬ್ದುಲ್ ಮುತ್ತಲಿಬ್ಬರ ಧೋರಣೆ. ಅಲ್ಲಿ ಅಹಂಕಾರದ ಆರ್ಭಟವಿಲ್ಲ.
ದೇವರ ಭವನವನ್ನು ತಾವು ರಕ್ಷಿಸುವೆವು ಎಂಬ ಉದ್ಧಟತನವಿಲ್ಲ. ತಮ್ಮ ಶ್ರದ್ಧೆಯ ಕೇಂದ್ರದ ಮೇಲೆ ದಾಳಿ ಮಾಡಲು ಬಂದವರೊಂದಿಗೆ ವಂದಿಸಿ ಕುಳಿತುಕೊಂಡು ಮಾತಾಡುವ ವಿನಯವಂತಿಕೆ ಇದೆ. ತಮಗೆ ಏನಾಗಬೇಕು ಎಂದು ಸರಳವಾಗಿ ಮತ್ತು ನೇರವಾಗಿ ಹೇಳುವಂತಹ ಸ್ಪಷ್ಟತೆ ಇದೆ. ಇದು ಅಬ್ದುಲ್ ಮುತ್ತಲಿಬ್ಬರ ಅಲ್ಲಾಹನ ಮೇಲಿನ ವಿಶ್ವಾಸ ಮತ್ತು ಆತ್ಮ ವಿಶ್ವಾಸ ಕೂಡ. ಇಂತಹ ಧೋರಣೆ ಮತ್ತು ವರ್ತನೆಗಳ ಪರಂಪರೆಯ ಮನೆಯ ಮಗು ಮುಹಮ್ಮದ್. ಸಹಜವಾಗಿ ಅವು ರೂಢಿಗೆ ಬರುತ್ತವೆ. ಅದು ವಿಸ್ತಾರವಾಗುವುದು ಅವರ ಜನಾನುರಾಗದಿಂದ.
ಜೊತೆಗೆ ತಾತ ಸರದಾರರಾಗಿದ್ದರೂ, ತಾತನ ಪ್ರೀತಿ ವಾತ್ಸಲ್ಯಗಳನ್ನು ಅದೆಷ್ಟೇ ಪಡೆದಿದ್ದರೂ ಬಾಲ್ಯದಲ್ಲಿಯೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥ ಪ್ರಜ್ಞೆ ಅವರ ಭಾವುಕ ಸಂಬಂಧಗಳನ್ನು ಮತ್ತಷ್ಟು ಸೂಕ್ಷ್ಮಗೊಳಿಸಿದ್ದಿತ್ತು. ಕುಟುಂಬದ ಸಂಬಧಗಳನ್ನು ಮೀರುವ ವಾತ್ಸಲ್ಯದ ನೈತಿಕತೆಯನ್ನು ತಾನು ವಾಸಿಸುತ್ತಿದ್ದ ಗೊಂದಲದ ಮತ್ತು ಕೆಡುಕಿನ ಸಮಾಜಕ್ಕೆ ಮುಹಮ್ಮದ್ ಬೋಧಿಸಬೇಕಿತ್ತು. ಅದಕ್ಕೆ ಕುರಾನ್ ಎಂಬ ಮಾರ್ಗಸೂಚಿ ಬೇಕಾಗಿತ್ತು.
ವಿಗ್ರಹಾರಾಧನೆ, ದಾಸ್ಯ, ಶೋಷಣೆ, ಕ್ರೌರ್ಯ, ಸಂಘರ್ಷ, ಹೆಣ್ಗೂಸುಗಳ ಹತ್ಯೆ; ಇಂತವೆಲ್ಲಾ ಪ್ರಚಲಿತದಲ್ಲಿದ್ದ ಸಮಾಜಕ್ಕೆ, ಆ ಕಾಲದ ಅಗತ್ಯಕ್ಕೆ, ನೈತಿಕ ಮಾರ್ಗಕ್ಕೆ ತಾವು ಮಾರ್ಗದರ್ಶಿಯಾಗಿ ನಿಲ್ಲಬೇಕಾದ ಅಗತ್ಯವನ್ನು ಅವರು ಮನಗಂಡರೆಂದು ಕಾಣುತ್ತದೆ. ಅದು ಅವರ ಸಮಾಜಮುಖಿ ಚಿಂತನೆ, ಜೀವಪರ ಕಾಳಜಿ.
ಹೇಗೆ ಯೇಸುವು ಅಂತಹುದ್ದೇ ಒಂದು ಕೆಟ್ಟುಕೊಳೆಯುತ್ತಿದ್ದ ಸಮಾಜಕ್ಕೆ ತಾನು ಬೆಳಕು, ಸತ್ಯ ಮತ್ತು ಮಾರ್ಗವಾಗಿ ಬರಬೇಕೆಂದು ನಿರ್ಧರಿಸಿಕೊಂಡಿದ್ದರೋ ಅದೇ ಬಗೆಯಲ್ಲಿ ಈಗ ಇಲ್ಲಿ ಮುಹಮ್ಮದ್ ಮುಂದಾದರು. ಕುರಾನಿನ ಮೊದಲ ಅಧ್ಯಾಯವು ಇಸ್ಲಾಮಿನ ಪ್ರವೇಶಿಕೆಯಾಗಿ ನನಗೆ ತೋರುತ್ತದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’
- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಹೊಸತನದ ಹೊಸ್ತಿಲಲ್ಲಿ..!
- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಕಾಮರೂಪದ ಪ್ರಭಾಕರ
- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?