Connect with us

ಅಂತರಂಗ

ಧರ್ಮ ಮರ್ಮ – 07 : ಕ್ರಿಸ್ತನೆಂಬ ಮೀನು ಬಸವಣ್ಣನೆಂಬ ಎತ್ತು

Published

on

  • ಯೋಗೇಶ್ ಮಾಸ್ಟರ್

ಇಕ್ತ್ಯುಸ್ ಎಂದರೆ ಪ್ರಾಚೀನ ಗ್ರೀಕ್ ಪದ. ಅದರ ಅರ್ಥ ಮೀನು. ಎರಡು ವಕ್ರರೇಖೆಗಳ ತುಂಡುಗಳು ಒಂದನ್ನೊಂದು ಹಾದು (ಇಂಗ್ಲೀಷಿನ ಎಕ್ಸ್ ಅಕ್ಷರದಂತೆ) ಎರಡರ ತುದಿಗಳು ಮಾತ್ರ ಒಂದು ಬಿಂದುವಲ್ಲಿ ಸೇರಿದರೆ ಅದು ಮೀನಿನ ಆಕೃತಿಯಲ್ಲಿ ಕಾಣುತ್ತದೆ. ಇದು ಹಿಂದೊಮ್ಮೆ ಕ್ರೈಸ್ತರ ರಹಸ್ಯ ಚಿಹ್ನೆಯಾಗಿತ್ತು.

ಕ್ರಿಸ್ತನ ಜೀವನದಲ್ಲಿ ಮತ್ತು ಬೋಧನೆಗಳಲ್ಲಿ ಮೀನು ಲೌಕಿಕವಾಗಿ, ತಾತ್ವಿಕವಾಗಿ ಮತ್ತು ಸಾಂಕೇತಿಕವಾಗಿ ತನ್ನ ಕುರುಹುಗಳನ್ನು ತೋರಿಸುತ್ತದೆ. ಕ್ರಿಸ್ತನೇ ಮೀನು ಹಿಡಿಯುತ್ತಾನೆ, ಮೀನು ಹಿಡಿಯುವವರ ಜೊತೆಗಾರನಾಗಿರುತ್ತಾರೆ, ಹೆಚ್ಚು ಮೀನುಗಳನ್ನು ಹಿಡಿಯುವ ಎಡೆ ತೋರುತ್ತಾನೆ, ಅಷ್ಟೇಕೆ ಯೇಸುವನ್ನು ಮಾನವರ ಕ್ರಿಸ್ತನೆಂದೂ (ಮಾರ್ಕ್ 1:17) ಕರೆಯುತ್ತಾರೆ.

ಮ್ಯಾಥ್ಯೂ, ಮಾರ್ಕ್, ಲೂಕ್, ಜಾನ್; ಈ ಎಲ್ಲರ ಬರಹಗಳಲ್ಲೂ ಸಾವಿರಾರು ಜನರಿಗೆ ಮೀನನ್ನು ಮತ್ತು ರೊಟ್ಟಿಯನ್ನು ಪವಾಡ ಸದೃಶವಾಗಿ ಉಣಬಡಿಸಿದ ಪ್ರಸಂಗವಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಗ್ರೀಕ್ ವರ್ಣಮಾಲೆಯ ಅನುಸಾರವಾಗಿ ಇಕ್ತ್ಯುಸ್ ಎನ್ನುವ ಪದದಲ್ಲಿ ಒಂದೊಂದು ಅಕ್ಷರಗಳು ‘ಯೇಸುವು ಅಭಿಷಕ್ತ ದೇವರ ಮಗ – ರಕ್ಷಕ’ ಎಂದು ಹೇಳುತ್ತದೆ.

ಕ್ರೈಸ್ತರ ಮತ್ತು ಶರಣರ ಕ್ರಾಂತಿಯ ದಿನಗಳು

ಯೇಸುವನ್ನು ಶಿಲುಬೆಗೆ ಏರಿಸಿ ಕೊಂದ ನಂತರದ ದಿನಗಳು ಕರ್ನಾಟಕದ ಶರಣರ ಕ್ರಾಂತಿಯ ದಿನಗಳನ್ನು ಹೋಲುತ್ತವೆ. ಯೇಸುವಿನ ಅನುಯಾಯಿಗಳು ರೋಮನ್ನರ ದಾಳಿ ಮತ್ತು ಹಿಂಸೆಯಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ತಾವು ಯೇಸುವಿನ ಅನುಯಾಯಿಗಳು ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಿರಲಿಲ್ಲ. ಅದೇ ರೀತಿ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಧಾರ್ಮಿಕ ಚಳವಳಿಯು ಪ್ರಬಲವಾಗುತ್ತಿತ್ತು.

ವೈದಿಕ ಮತ್ತು ಇನ್ನಿತರ ವರ್ಣಾಶ್ರಮಧರ್ಮವನ್ನು ಪ್ರತಿಪಾದಿಸುತ್ತಿದ್ದ ಸಂಪ್ರದಾಯವಾದಿಗಳು ಬಸವಣ್ಣ ಕಟ್ಟಿದ ಸಮಾಜೋಧಾರ್ಮಿಕ ಚಳವಳಿಯು ಗಟ್ಟಿಯಾಗಿ ತಳವೂರುವ ಲಕ್ಷಣಗಳನ್ನು ತೋರುತ್ತಿದ್ದ ಸಮಯದಲ್ಲಿಯೇ ಬಿಜ್ಜಳರಾಜನು ತನ್ನ ಎರಡನೆಯ ಮಗನಾದ ಸೋವೀದೇವನಿಗೆ ಪಟ್ಟ ಕಟ್ಟಿದ್ದನು.

ಹಾಗಾಗಿ ಅವನ ಇತರ ಮಕ್ಕಳಲ್ಲಿ ಮತ್ತು ಬಂಧುಗಳಲ್ಲಿ ತಿಕ್ಕಾಟ ಪ್ರಾರಂಭವಾಗಿತ್ತು. ಆಗಲೇ ಬಸವಣ್ಣನವರ ನೇತೃತ್ವದಲ್ಲಿ ಪ್ರೇಮವಿವಾಹ ಮಾತ್ರವಲ್ಲದೇ, ವರ್ಗಾಂತರವಿರುವ ಮತ್ತು ವರ್ಣಾಂತರವಾದ ವಿವಾಹವೂ ಇದಾಗಿತ್ತು. ಬಸವಣ್ಣನ ಚಳವಳಿಯನ್ನು ದಮನಿಸಲು ಯತ್ನಿಸುತ್ತಿದ್ದ ಆಸ್ಥಾನದ ಸಂಪ್ರದಾಯವಾದಿಗಳು ಆಗ ಹುಟ್ಟಿದ ರಾಜಕೀಯ ಆತಂಕವನ್ನು ಬಳಸಿಕೊಂಡರು.

ಇದರಿಂದ ಬಸವಣ್ಣ ತಮ್ಮ ಮಂತ್ರಿಪದವಿಯನ್ನು ತ್ಯಜಿಸಿ ಕಲ್ಯಾಣವನ್ನು ತೊರೆಯಬೇಕಾಯ್ತು. ಈ ಸಮಯವನ್ನು ಬಳಸಿಕೊಂಡು ವೈದಿಕರು ಮತ್ತು ವರ್ಣಾಶ್ರಮ ಸಂಪ್ರದಾಯಸ್ಥರು ವರ್ಣಾಂತರ ವಿವಾಹವಾದ ಮತ್ತು ಅದಕ್ಕೆ ಕಾರಣರಾದ ಹರಳಯ್ಯ, ಮಧುವರಸ ಮತ್ತು ಅವರ ಮಕ್ಕಳಿಗೆಲ್ಲಾ ಕಣ್ಣುಗಳನ್ನು ಕೀಳಿಸಿ ಆನೆಯ ಕಾಲಿಗೆ ಕಟ್ಟಿ ಎಳೆಸಿ ಕೊಲ್ಲುವಂತ ಶಿಕ್ಷೆ ಕೊಟ್ಟರು. ಕಂಡಕಂಡಲ್ಲಿ ಶರಣರ ಕಗ್ಗೊಲೆಗಳಾಗ ತೊಡಗಿದವು.

ಈ ಸಮಯದಲ್ಲಿ ವಚನ ಸಾಹಿತ್ಯವನ್ನು ರಕ್ಷಿಸುವ, ಶರಣರನ್ನು ರಕ್ಷಿಸುವ ಮಹತ್ತರ ಕೆಲಸದಲ್ಲಿ ಅನೇಕ ತ್ಯಾಗ ಬಲಿದಾನಗಳಾದವು. ಆಗಲೇ ಬಿಜ್ಜಳನ ಕೊಲೆಯಾಯಿತು. ರಾಜಕೀಯ ಸಂಘರ್ಷದಲ್ಲಿ ಬಲವುಳ್ಳವರ ಪರವಹಿಸುವ ಆಸ್ಥಾನಿಕರು ಕೊಲೆಗೆ ಕಾರಣ ಯಾರೇ ಆಗಿದ್ದರೂ ಅದನ್ನು ಶರಣರ ತಲೆಗೆ ಕಟ್ಟಲಾಯಿತು. ಪಾಲ್ಕುರಿಕೆ ಸೋಮನಾಥನು ರಚಿಸಿರುವ ಪುರಾಣದಲ್ಲಿ ಮಲ್ಲೆಬೊಮ್ಮ ಮತ್ತು ಜಗದೇವ ಎಂಬ ವೀರರು ಬಿಜ್ಜಳನ ಕೊಂದರೆಂದು ಹೇಳಿದರೆ, ಶಾಸನಗಳನ್ನು ಅನುಸರಿಸಿದರೆ ಸಿಗುವ ಮಾಹಿತಿಗಳಲ್ಲಿ ವ್ಯತ್ಯಾಸಗಳಿವೆ.

ಶಾಸನಗಳು ಮತ್ತು ಪುರಾಣಗಳನ್ನು ಆಧರಿಸಿಯೇ ಅಂದಿನ ಇತಿಹಾಸ ರಚಿಸಬೇಕಾಗಿರುವುದರಿಂದ ಅನೇಕ ವ್ಯತ್ಯಾಸಗಳಿವೆ. ಆದರೆ ಅಲ್ಲೊಂದು ಸಮಾಜೋಧಾರ್ಮಿಕ ಸಂಘರ್ಷ, ರಾಜಕೀಯ ಕೋಲಾಹಲಗಳು ನಡೆದು ವಚನ ಚಳವಳಿ ಮತ್ತು ಶರಣ ಸಂಸ್ಕೃತಿಗಳು ರೂಪುಗೊಂಡವು.

ಅದೆಲ್ಲಾ ಏನಾದರಾಗಲಿ ಬಸವಣ್ಣನ ಗಡಿಪಾರಿನ ನಂತರ, ಶರಣರ ತಲೆದಂಡದ ತರುವಾಯ ಮತ್ತು ಬಿಜ್ಜಳನ ಕೊಲೆಯ ಬೆನ್ನಲ್ಲೇ ಶರಣರು ಚದುರಲೇ ಬೇಕಾದ ಅನಿವಾರ್ಯ ಒದಗಿತ್ತು. ಅವರ ಕಗ್ಗೊಲೆಗಳಾಗತೊಡಗಿತ್ತು. ಬಸವಣ್ಣನ ಅನುಯಾಯಿಗಳು ಅಂದು ರೋಮನ್ನರಿಂದ ತಲೆಮರೆಸಿಕೊಳ್ಳಬೇಕಾದ ಅನಿವಾರ್ಯತೆಯುಳ್ಳ ಯೇಸುವಿನ ಅನುಯಾಯಿಗಳ ಸ್ಥಿತಿಯನ್ನೇ ಅನುಭವಿಸಿದ್ದರು.

ಅಂದಿನ ದಿನಗಳಲ್ಲಿ ರಸ್ತೆಯಲ್ಲೋ ಅಥವಾ ಇನ್ನೆಲ್ಲಾದರೂ ಅಪರಿಚಿತ ಕ್ರೈಸ್ತರು ಭೇಟಿಯಾದರೆ, ‘ತಾನು ಕ್ರಿಸ್ತನ ಅನುಯಾಯಿ, ನೀನು?’ ಎಂದು ಕೇಳಬೇಕಾದರೆ ಧೂಳಿನ ಮೇಲೋ, ಮಣ್ಣಿನ ಮೇಲೋ ಒಂದು ವಕ್ರರೇಖೆಯನ್ನು ಒಬ್ಬ ಎಳೆಯುತ್ತಿದ್ದ. ಮತ್ತೊಬ್ಬನು ಅದೇ ವಕ್ರರೇಖೆಗೆ ತನ್ನ ವಕ್ರರೇಖೆಯನ್ನು ಎಳೆದು ಮೀನಿನ ಆಕೃತಿ ಮೂಡಿಸಿದರೆ ಅವರು ಕ್ರಿಸ್ತಾನುಯಾಯಿಗಳು ಎಂದು ತಮ್ಮ ಸಂಗಾತಿತನವನ್ನು ದೃಢಪಡಿಸಿಕೊಳ್ಳುತ್ತಿದ್ದರು.

ತಾವು ಕ್ರಿಸ್ತನಲ್ಲಿ ಶ್ರದ್ಧೆ ಮತ್ತು ವಿಶ್ವಾಸವುಳ್ಳವರು ಎಂಬುದನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದರು. ಇದನ್ನು ತಾವು ರಹಸ್ಯ ಸಭೆ ನಡೆಸುವ ಜಾಗಗಳಿಗೂ ಗುರುತಿಗೆ ಉಪಯೋಗಿಸುತ್ತಿದ್ದರು. ಮುಂದೆ ರೋಮನ್ನರ ಚಕ್ರಾಧಿಪತ್ಯವನ್ನು ವಿರೋಧಿಸುವ ಸಂಕೇತವಾಗಿಯೂ ಕೂಡಾ ಅಲೆಕ್ಸಾಂಡ್ರಿಯಾದ ನಾಣ್ಯಗಳಲ್ಲಿ ಮೂಡಿರುವ ದಾಖಲೆಗಳಿವೆ.
ಆರಂಭದಲ್ಲಿ ಕ್ರೈಸ್ತರಾದವರೂ ಯಹೂದ್ಯರೇ. ಅವರಿಗೆ ಸಮಸ್ಯೆಗಳು ತಪ್ಪಿರಲಿಲ್ಲ. ಹನ್ನೆರಡು ಮಂದಿ ಪ್ರೇಷಿತರು ಎಂದು ಕರೆಯಿಸಿಕೊಳ್ಳುವ ಶಿಷ್ಯರು ಯೇಸುವಿನ ಬೋಧನೆಗಳನ್ನು ಧರ್ಮಸಭೆಯ ಸ್ಥಾಪನೆಯ ಉದ್ದೇಶದಿಂದ ಪ್ರಚಾರ ಮಾಡತೊಡಗಿದರು.

ಬಹಿರಂಗವಾಗಿ ಪೇತ್ರ ಮತ್ತು ಯೊವಾನ್ನರು ಪ್ರವಚನಗಳನ್ನು ಮಾಡುವಾಗಲೇ ಯಹೂದ್ಯರ ಕೆಂಗಣ್ಣಿಗೆ ಗುರಿಯಾದರು. ಪ್ರೇಷಿತರಿಗೆ ಚಾಟಿಗಳಿಂದ ಹೊಡೆಯುವುದು, ವಿವಿಧ ಬಗೆಯ ಅವಮಾನಗಳನ್ನು ಮಾಡುವುದು ಮುಂದುವರೆದಿತ್ತು. ಆದರೂ ಇವರು ಆಡುತ್ತಿರುವ ಮಾತುಗಳಲ್ಲಿ ವಿಶ್ವಾಸವನ್ನು ಕಂಡವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಏಳು ಜನ ಸಹಾಯಕರನ್ನು ಆಯ್ದುಕೊಂಡರು. ಅವರಲ್ಲಿ ಸ್ತೇಫನ ತುಂಬಾ ಶಕ್ತಿಭರಿತವಾಗಿ ಮಾತಾಡುತ್ತಿದ್ದ. ಅವನು ಮಾಡುತ್ತಿದ್ದ ಪ್ರವಚನ ಮತ್ತು ಬೋಧನೆ ಬಹಳ ಪರಿಣಾಮಕಾರಿಯಾಗಿದ್ದು, ನ್ಯಾಯಸಭೆಗಳು ಥರಗುಟ್ಟಿದವು.

ವಿಚಾರಣೆ ಮಾಡುವಾಗಲೂ ಸ್ತೇಫನ ಹಿಂಜರಿಯಲಿಲ್ಲ, ಧೃತಿಗೆಡಲಿಲ್ಲ. ತನ್ನ ಸತ್ಯವಿಶ್ವಾಸದ ಮಾತುಗಳನ್ನು ಆಡಿಯೇ ತೀರಿದನು. “ನೀವು ನಿಮ್ಮ ಹಳೆಯ ಸಂಪ್ರದಾಯಸ್ಥ ಪೂರ್ವಜರಂತೆಯೇ ಹಟಕ್ಕೆ ಬಿದ್ದು ಕಠಿಣ ಹೃದಯದವರಾಗಿದ್ದೀರಿ ಮತ್ತು ಹಿಂದಿನ ಎಲ್ಲಾ ಪ್ರವಾದಿಗಳನ್ನೂ ನೀವು ಹಿಂಸೆ ಕೊಟ್ಟಿರುವರೇ ಆಗಿದ್ದೀರಿ” ಎಂದು ಧೈರ್ಯವಾಗಿ ಹೇಳುತ್ತಿದ್ದನು. ನ್ಯಾಯಸಭೆಯ ಸದಸ್ಯರು ಸ್ತೇಫನಿಗೆ ಕಲ್ಲು ಹೊಡೆದು ಕೊಂದರು.

ಆಗ ಸ್ತೇಫನ, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ” ಎಂದು ಪ್ರಾರ್ಥಿಸಿದ್ದಲ್ಲದೇ, “ಪ್ರಭೂ, ಈ ಪಾಪವನ್ನು ಇವರ ಮೇಲೆ (ತನ್ನ ಮೇಲೆ ಕಲ್ಲು ಹೊಡೆಯುತ್ತಿರುವವರ ಮೇಲೆ) ಹೊರಿಸಬೇಡಿ” ಎಂದು ಪ್ರಾಣಬಿಟ್ಟನು.

ಧರ್ಮ ಎನ್ನುವುದು ಸ್ಥಾಪಕರೊಬ್ಬರ ಕ್ರಮವನ್ನು ಅನುಸರಿಸುವುದೆಂದರೆ ಹೀಗೆಯೇ. ಕ್ರಿಸ್ತನು ತನ್ನ ಸಾವಿನಲ್ಲೂ ಸೇಡನ್ನು ಹೊಂದದೇ ಕ್ಷಮಿಸಿದಂತೆ ಸ್ತೇಫನೂ ಕೂಡಾ ಹಾಗೇ ಮಾಡಿದನು. ಅವನು ಸತ್ತ ದಿನ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದುರಿಹೋದರು. ಆಗ ಮನೆಮನೆಗೂ ನುಗ್ಗಿ ಹೆಂಗಸರು ಗಂಡಸರು ಎಂದು ನೋಡದೇ ಯೇಸುವಿನ ವಿಶ್ವಾಸಿಗಳನ್ನು ಎಳೆದು ತಂದು ಸೆರೆಮನೆಗೆ ತಳ್ಳುತ್ತಿದ್ದರು.

ಅಂತಹ ಸನ್ನಿವೇಶಗಳನ್ನು ಎದುರಿಸುತ್ತಿದ್ದ ಯೇಸುವಿನ ವಿಶ್ವಾಸಿಗಳು ತಮ್ಮ ಧರ್ಮಸಭೆಗಳನ್ನು ರಹಸ್ಯವಾಗಿಯೇ ಮಾಡಬೇಕಿತ್ತು. ಆಗ ಇಕ್ತ್ಯುಸ್ ಎಂಬ ಮೀನಿನ ಗುರುತನ್ನು ತಮ್ಮ ರಹಸ್ಯ ಚಿಹ್ನೆಯಾಗಿಸಿಕೊಂಡಿದ್ದರು.

ಚದುರಿದ ಶರಣರು

ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿಯೂ ಕೂಡಾ ಆಗಿನ ಜೆರೂಸಲೇಮಿನ ಪರಿಸ್ಥಿತಿ ಉಂಟಾಗಿತ್ತು. ಚದುರಿದ ಶರಣರು ಉಳವಿ, ಶ್ರೀಶೈಲವೇ ಮೊದಲಾದ ಸ್ಥಳಗಳಿಗೆ ಹೊರಟು ಹೋದರು. ಅಲ್ಲಿ ಯೇಸು ಎದುರಿಸಿದ್ದ ಸಂಪ್ರದಾಯವಾದಿಗಳ ಆರೋಪ ಮತ್ತು ರಾಜಾಡಳಿತದ ತಲೆದಂಡವನ್ನು ಇಲ್ಲಿ ಬಸವಣ್ಣ ಎದುರಿಸಬೇಕಾಗಿತ್ತು. ಏಕೆಂದರೆ ಅಲ್ಲಿ ಯೇಸು ಸಮಾಜದ ತಳವರ್ಗದವರನ್ನು ತನ್ನ ಸಾಂಗತ್ಯದಲ್ಲಿ ಆಪ್ತಗೊಳಿಸಿಕೊಂಡಂತೆ ಇಲ್ಲಿ ಬಸವಣ್ಣನ ಮಹಾಮನೆಯಲ್ಲಿ ಮೇಲ್ವರ್ಗ ಮತ್ತು ಸವರ್ಣೀಯರು ಕೀಳಾಗಿ ಕಂಡವರೆಲ್ಲಾ ಮೌಲ್ಯವನ್ನು ಕಂಡುಕೊಂಡಿದ್ದರು. ಎರಡೂ ಕಡೆಯೂ ಸಮಾಜೋಧಾರ್ಮಿಕ ಆಂದೋಲನವು ಸಂಪ್ರದಾಯವಾದಿಗಳ, ಯಥಾಸ್ಥಿತಿವಾದಿಗಳನ್ನು ಕೆರಳಿಸಿತ್ತು. ರಾಜಕೀಯವನ್ನು ಬಳಸಿಕೊಂಡರು. ಅತ್ತ ಪ್ರೇಷಿತರು ಮತ್ತು ಯೇಸುವಿನ ವಿಶ್ವಾಸಿಗಳು ಕಿರುಕುಳ ಮತ್ತು ಹಿಂಸೆ ಅನುಭವಿಸುತ್ತಾ ಚದುರಿದರು. ಇತ್ತ ಶರಣರು ಹಾಗೂ ಇತರ ಬಸವಾನುಯಾಯಿಗಳು ಅದೇ ರೀತಿ ಚದುರಿದರು.

ಕುಂಬಾರಣ್ಣನ ಮಡದಿ ಕಡಗಾದ ಕೈಯಿಕ್ಕಿ
ಕೊಡದ ಮ್ಯಾಲೇನ ಬರೆದಾಳ ಕಲ್ಯಾಣದ
ಶರಣಬಸವಣ್ಣನ ನಿಲಿಸ್ಯಾಳ.

ಕ್ರಿಸ್ತನ ಅನುಯಾಯಿಗಳು ರೇಖೆಗಳಿಂದ ಇಕ್ತ್ಯುಸ್ ರಚಿಸಿ ತಾವು ಕ್ರಿಸ್ತನ ವಿಶ್ವಾಸಿಗಳು ಎಂದು ಗುಪ್ತಸಂದೇಶವನ್ನು ರವಾನೆ ಮಾಡುತ್ತಿದ್ದಂತೆ ಚದುರಿದ ಶರಣರು ಮತ್ತೆ ತಮ್ಮ ಶರಣ ಪರಂಪರೆಯನ್ನು ಮತ್ತು ಲಿಂಗಾಯತ ಧರ್ಮವನ್ನು ಪುನರುತ್ಥಾನ ಮಾಡುವ ಸಲುವಾಗಿ ಒಂದಾಗಲು ಶ್ರಮಿಕ ವರ್ಗದ ಕಾಯಕ ಯೋಗಿಗಳು ಹಾತೊರೆಯುತ್ತಿದ್ದರದು ಆಶ್ಚರ್ಯವೇನಿರಲಿಲ್ಲ.

ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ ಎನ್ನುತ್ತಿದ್ದ ಶರಣರು ಮತ್ತೊಬ್ಬ ಶರಣರನ್ನು ಗುರುತಿಸಲು ವಿವಾದಕ್ಕೆ ಒಳಗಾಗಿದ್ದ ಬಸವಣ್ಣನ ಹೆಸರೆತ್ತುವ ಬದಲು ಹೊಲದಲ್ಲಿನ ದುಡಿಮೆಯ ಬಸವನನ್ನು ಸಂಕೇತಿಸುತ್ತಿದ್ದರೂ ಆಶ್ಚರ್ಯವೇನಿಲ್ಲ. ಈ ದಿಕ್ಕಿನಲ್ಲಿ ಒಂದಷ್ಟು ಅಧ್ಯಯನ ಮತ್ತು ಆಲೋಚನೆಗಳನ್ನು ಮಾಡಬೇಕಿದೆ.

ನಾನು ಸಣ್ಣವನಿದ್ದಾಗಿನಿಂದಲೂ ಲಿಂಗಾಯತರ ರುದ್ರಭೂಮಿಯಲ್ಲಿ ಬಹುಪಾಲು ಸಮಾಧಿಗಳ ಮೇಲೆ ಲಿಂಗಕ್ಕಿಂತಲೂ ಹೆಚ್ಚಿನ ಕೋಡಿನ ಬಸವಣ್ಣನ ವಿಗ್ರಹಗಳನ್ನು ನೋಡುತ್ತಿದ್ದೆ. ಹಿರಿಯರೊಬ್ಬರಲ್ಲಿ ವಿಚಾರಿಸಿದಾಗ ಅದು ಶಿವನ ಮುಂದಿನ ನಂದಿ ಎಂದರು. ಅದು ತಾರ್ಕಿಕವಾಗಿ ಖಂಡಿತವಾಗಿ ಸಮ್ಮತವಾಗಿರಲಿಲ್ಲ. ಏಕೆಂದರೆ ಕೈಲಾಸದ ಶಿವನನ್ನೇ ಪರಿಗಣಿಸಿ, ಆತನ ವಾಹನವಾದ ನಂದಿಯೆಂದೇ ಗುರುತಿಸಿದರೂ, ಶಿವನ ಗುರುತೇ ಸುಲಭವೂ ಮತ್ತು ಉನ್ನತವೂ ಆಗಿರುವಾಗ ಬಿಡಿಸುವಲ್ಲಿ ಅಥವಾ ಕೆತ್ತುವಲ್ಲಿ ಲಿಂಗಕ್ಕಿಂತ ಕ್ಲಿಷ್ಟವಾಗಿರುವ ನಂದಿಯೇಕೇ ಎಂದು ವಿಚಾರಿಸುತ್ತಿದ್ದೆ.

ಆದರೆ, ನನಗೆ ಕ್ರಮೇಣ ತೋರತೊಡಗಿದ್ದು, ಅದು ಶಿವನ ವಾಹನ ನಂದಿಯಲ್ಲ, ಉಳುವ ಎತ್ತಿನ ಬಸವ ಎಂದು. ಹಾಗಾದರೆ, ಕೃಷಿಕರಲ್ಲದ, ಅಂತಹ ಎತ್ತಿನ ಜೊತೆಗೆ ಕಾಯಕದಲ್ಲಿ ಏನೂ ಸಂಬಂಧ ಹೊಂದಿಲ್ಲದ ನನ್ನ ಸಂಬಂಧಿಕರು ಬರೀ ಲಿಂಗಾಯತರು ಎಂಬ ಕಾರಣದಿಂದ ಬಸವನನ್ನು ಹೊಂದುವ ಕಾರಣವೇನು ಎಂಬುದು ದೀರ್ಘಕಾಲದ ಜಿಜ್ಞಾಸೆಯಾಗಿತ್ತು.

ಮುಂಜಾನೆದ್ದು ಕುಂಬಾರಣ್ಣದಂತಹ ಕೆಲವು ಜಾನಪದ ಗೀತೆಗಳಲ್ಲಿ ಕಲ್ಯಾಣದ ಶರಣಬಸವಣ್ಣನ ನಿಲ್ಲಿಸುವುದು ಅಥವಾ ಮೂಡಿಸುವುದರ ಉಲ್ಲೇಖವಿದೆ. ರಹಸ್ಯವಾಗಿ ಇಕ್ತ್ಯುಸ್ ಮೂಲಕ ಯೇಸುವನ್ನು ಸಂಕೇತಿಸುವ ಕ್ರಿಸ್ತಾನುಯಾಯಿಗಳಂತೆ ಕೋಡಿನ ಬಸವನ ಮೂಲಕ ಬಸವಣ್ಣನ ಅನುಯಾಯಿ ನಾನು ಎಂದು ಸಂಕೇತಿಸುವ ಚಿಹ್ನೆ ಇದಾಗಿದ್ದಿರಬಹುದೆಂದು ತೋರಿತು.

ಹಲವಾರು ಜಾನಪದ ಕಲಾಕೃತಿಗಳಲ್ಲಿ, ವಾದ್ಯಗಳ ಮೇಲಿನ ಕುಸುರಿ ಕೆಲಸಗಳಲ್ಲಿ, ಬಟ್ಟೆಗಳಲ್ಲಿ ವಿಭೂತಿ ಧರಿಸಿರುವ ಕೋಡಿನ ಬಸವ ಮತ್ತು ಅದರ ಡುಬ್ಬದ ಮೇಲೆ ಲಿಂಗ, ಕೆಲವೊಮ್ಮೆ ಡುಬ್ಬವನ್ನೇ ಲಿಂಗದಂತೆ ರೂಪಿಸುವ ಚಿತ್ರಗಳನ್ನು ಗುರುತಿಸಬಹುದು. ಕುಂಬಾರ, ನೇಯ್ಕಾರರಂತಹ ಶ್ರಮಿಕ ವರ್ಗಗಳು ಬಸವಣ್ಣನನ್ನು ತಮ್ಮ ಸಂಕೇತಗಳಲ್ಲಿ ಬಸವನ ರೂಪಿಸಿರಲು ಸಾಧ್ಯ.
ಆ ಸಾಂಕೇತಿಕತೆಯ ಮುಂದುವರಿಕೆಯ ಭಾಗವಾಗಿ ಅರಿವಿಲ್ಲದೆಯೇ ಇಂದಿಗೂ ಬಸವ ಜಯಂತಿಯ ದಿನ ಕೋಡಿನ ಬಸವನ ಪೂಜೆ ಮಾಡುವ ಸಂಪ್ರದಾಯವನ್ನು ಕೆಲವರು ಇಟ್ಟುಕೊಂಡಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ನಮ್ಮಲ್ಲಿ ವಾಸ್ತವವನ್ನು ಬಿಟ್ಟು ಸಂಕೇತಕ್ಕೇ ಅಂಟಿಕೊಳ್ಳುವುದು ಒಂದು ಹಳೆಯ ರೂಢಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending