ದಿನದ ಸುದ್ದಿ
ನನ್ನ ಹೆಸರಿನ ಪಜೀತಿ..! ನನ್ನ ಹೆಸರು ಹೇಗೆ ಬಂತು..?
- ಪರಶುರಾಮ್. ಎ
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಹೆಸರು ಇದ್ದೇ ಇರುತ್ತದೆ ಇರಲೇ ಬೇಕು ಸಹ. ಆ ವ್ಯಕ್ತಿ ಹೆಸರಿಗೂ ಇತಿಹಾಸದ ನಂಟು ಅಥವಾ ಒಂದು ಕತೆ ಇದ್ದೆ ಇರುತ್ತದೆ. ಅವುಗಳನ್ನ ಕೆದಕಿ ನೋಡಿದಾಗ ಆ ಕತೆಗಳು ನೆನಪುಗಳಾಗಿ ಮೇಲೆದ್ದು ಕಾಣಿಸಿಕೊಳ್ಳುತ್ತದೆ.
ಈಗೀಗ ಜನ ಸಮಾಜದಲ್ಲಿ ಹೆಸರು ಮಾಡಲು ಏನೇನೂ ಸರ್ಕಸ್ ಮಾಡ್ತಾರಂತ ನಿಮಗೆ ಗೊತ್ತೇ ಇದೆ. ರಾಜಕೀಯ. ಸಿನಿಮಾ. ರೌಡಿಸಂ. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ಡಬ್ ಸ್ಮಾಷ್. ಟಿಕ್ ಟಾಕ್ ನಲ್ಲಿ ಹುಚ್ಚರಾಗಿ ಹೆಸರು ಗಳಿಸಲು ನಾನಾ ತರದ ಸರ್ಕಸ್ ನಡಿತಾನೇ ಇದೆ. ಅವರ ಹೆಸರುಗಳು ಸಹ ವಿಚಿತ್ರ ವಿಚಿತ್ರವಾಗಿ ಇರ್ತವೆ!!! ಈ ವಿಚಿತ್ರ ಹೆಸರುಗಳ ಖಯಾಲಿ ಸಿನೆಮಾ, ರೌಡಿಸಂ ಕ್ಷೇತ್ರದಲ್ಲಿ ಹೆಚ್ಚು.
ಹೆಸರಿನಲ್ಲಿ ಏನಿದೆ ಬಿಡ್ರೀ ಮಹತ್ವ?? ಅನ್ನುವವರಿಗೆ ಅವರ ಹೆಸರು ಒಮ್ಮೆ ಹಾಳಾದಗಲೇ ಅದರ ನೋವು ಗೊತ್ತಾಗುವುದು ಹೆಸರಿನ ಮಹತ್ವ!! ಅಂದಾಗೆ ನಾನು ನನ್ನ ಹೆಸರು ಹುಟ್ಟಿನ ಬಗ್ಗೆ ಹೇಳ್ತಿನಿ ಆಮೇಲೆ ಆ ಹೆಸರಿನಿಂದ ನನಗಾದ ಪಜೀತಿಗಳೆಷ್ಟು ಅಂತ ಹೇಳ್ತಿನಿ. ನಾನು ಹುಟ್ಟಿದಾಗ ನನಗೆ ನಾಮಕರಣ ಮಾಡಲು ಹೆಸರಿಡಲು ವಾಡಿಕೆಯಂತೆ ಜ್ಯೋತಿಷ್ಯ ಕೇಳಿದಾಗ ನನಗೆ ಡ,ಡು,ಡೆ ಎಂಬ ಪದಗಳು ಬಂದವಂತೆ.
ಹೋಗಿ ಹೋಗಿ ಎಂತ ಪದಗಳು ಬಂದಿವೇ ನೋಡ್ರೀ!! ಈ ಡ,ಡು,ಡೆ ಎಂಬ ಪದಗಳಿಂದ ಯಾವ ಹೆಸರು ತಾನೇ ಕನ್ನಡದಲ್ಲಿ ಆಗಲಿ ಯಾವ ಭಾಷೆಯಲ್ಲಿ ಆಗಲಿ ಬರೊದಕ್ಕೆ ಸಾಧ್ಯ?? (ಈಗಲೂ ಈ ಅಕ್ಷರದಿಂದ ನಿಮಗೆ ಏನಾದರೂ ಹೆಸರು ಗೊತ್ತಾದರೆ ಹೇಳಿ ನನ್ನ ಹೆಸರೇ ಬದಲಾಯಿಸಿಕೊಳ್ತಿನಿ.) ಹೆಸರಿನ ಮೊದಲ ಅಕ್ಷರ ಹೇಳಿದ ಜ್ಯೋತಿಷಿ ಬಳಿ ಯಾವುದೇ ಉತ್ತರ ಸಿಗದೆ ಕಂಗಾಲಾಗಿ ನಮ್ಮ ಅಜ್ಜಿ ತಾತ ಮತ್ತು ಅಪ್ಪ ಅಮ್ಮ ಅಪ್ಪ ಆಕಾಶ ತಲೆ ಮೇಲೆ ಬಿದ್ದಂಗಾಗಿ ಏನಿದು ಹುಟ್ಟಿರೊ ಮಗುವಿಗೆ ಈ ರೀತಿಯಲ್ಲಿ ಅಕ್ಷರಗಳು ಬಂದಿದಾವಲ್ಲಂತ ಯೋಚಿಸಿ ಕುಳಿತರಂತೆ.!
ಹೀಗೆ ಯೋಚಿಸಿದಾಗ ಅವರಿಗೆ ಒಂದು ಜ್ಞಾನೋದಯ ಅಗಿ ಹೇಗಿದ್ದರೂ ನಮ್ಮ ಮನೆಯ ದೇವರು ಸವದತ್ತಿ ಯಲ್ಲಮ್ಮ ಈಗ ಹುಟ್ಟಿದ ಗಂಡು ಮಗುವಿಗೆ ಆಕೆಯ ಮಗನಾದ ಪರಶುರಾಮ ಎಂಬ ಹೆಸರನ್ನೇ ಇಟ್ಟು ಇನ್ನೂ ಮಿಕ್ಕಿದ್ದ ಪಾಪ ಪುಣ್ಯ ಎಲ್ಲಾ ಯಲ್ಲಮ್ಮನ ಮೇಲೆ ಹಾಕಿ ಪರಶುರಾಮ ಎಂಬ ಹೆಸರಿನಲ್ಲಿ ನನಗೆ ನಾಮಕರಣ ಮಾಡಿದರು. ಇವತ್ತಿಗೂ ನಮ್ಮ ಹಳ್ಳಿಯಲ್ಲಿನ ನಮ್ಮ ಸಂಬಂಧಿ ಚಂದ್ರಣ್ಣ ಎಂಬುವವರು ನನಗೆ ಈ ಕತೆ ಹೇಳಿ ನನ್ನ ಹೀಗೆ ಡ,ಡು,ಡೆ ಎಂದೇ ಸಂಬೋಧಿಸಿ ಕರೆಯುತ್ತಾರೆ.
ಅವರಿಗೆ ನನ್ನ ಹೆಸರೇ ತಮಾಷೆಯ ವಸ್ತು. ನಾನು ಹುಟ್ಟಿದಾಗಲೇ ಬ್ರಾಹ್ಮಣರ ಬಳಿಯಿಂದ ಹೆಸರನ್ನು ಪಡೆಯದೆ ಹುಟ್ಟಿನಿಂದಲೇ ನಾನು ಬ್ರಾಹ್ಮಣತ್ವದ ವಿರೋಧಿಯಾಗಿದ್ದೆ, ಹೋರಾಡಿದ್ದೆ ಎಂದು ಈಗ ಒಮ್ಮೊಮ್ಮೆ ಹಲವು ಸಲ ಮನದಲ್ಲಿ ಯೋಚಿಸಿ ನಗು ಬರುತ್ತದೆ. ನನ್ನ ಅಮ್ಮ ಈ ಸಂಗತಿಯನ್ನು ಅದೆಷ್ಟೋ ಸಲ ಹೇಳಿ ನಗ್ತಾಳೆ. ನೀನು ನನಗೆ ಹುಟ್ಟಿದಾಗ ನಿನಗೆ ಒಂದು ಸರಿಯಾದ ಹೆಸರು ಬರಲಿಲ್ಲ ಗೊತ್ತ ನಿನಗೆ ಅಂತ ಕೇಳಿ.
ಹೇಗೋ ನನಗೂ ಒಂದು ಹೆಸರು ಬಂತು ಅಂದುಕೊಂಡಾಗ, ನಾನು ಚಿಕ್ಕವಯಸ್ಸಿನಲ್ಲಿದ್ದಾಗ ನಮ್ಮ ಸಂಬಂಧಿಕರು ನನ್ನ ಪರ್ಶಿ, ಪರ್ಸೀ ಅಂದು ನನ್ನ ಹೆಸರೇ ಹಾಳು ಮಾಡಿದ್ದರು. ಪರಶುರಾಮ ಎಂಬ ಸುಂದರ ಹೆಸರನ್ನು ಹೀಗೆ ಹಾಳು ಮಾಡಿದಾಗ ಯಾರಿಗೆ ತಾನೇ ಕೋಪ ಬರಲ್ಲ ಹೇಳಿ?? ಬೆಳೆದು ದೊಡ್ಡವನಾದರೂ ಇನ್ನೂ ಅದೆಷ್ಟು ಸಂಬಂಧಿಕರು ನನ್ನ ಪರ್ಸಿ ಪರ್ಸಿ ಅಂತಾನೆ ಕರೆತಾರೆ ಇದಂತು ನನಗೆ ಅಳುನೇ ತರ್ಸುತ್ತೆ.
ಇನ್ನೂ ನಾನು ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ತಲೆಗೆ ಹತ್ತದೆ ಇದ್ದಾಗ ನನಗೆ rr ಎಂಬ ಟೀಚರ್ ಒಬ್ಬರು ಪರಶುರಾಮ ಎಂಬ ನನ್ನ ಹೆಸರನ್ನ ಸಿದ್ದರಾಮ ಎಂದು ರೇಗಿಸುತ್ತಿದ್ದರು ಅದು ತರಗತಿಯ ನನ್ನ ಎಲ್ಲಾ ಸ್ನೇಹಿತರ ಮುಂದೆ. ನನಗೆ ಎಷ್ಟು ಕೋಪ ಮುಜುಗರ ಬರಬೇಡ?? ಆಗ ನನಗೆ ಕೇವಲ ಏಳು ಅಥವಾ ಎಂಟು ವರ್ಷ. ಇನ್ನೂ ನಾನು ಐದನೇ ತರಗತಿಯ ಓದುವಾಗ ನಮಗೆ ಇಂಗ್ಲೀಷ್ ಭಾಷೆ ಪರಿಚಯಿಸಿದರು, ನೇತ್ರಾವತಿ ಟೀಚರ್ ಸಹ ನನ್ನ ಹೆಸರನ್ನು ಇಂಗ್ಲಿಷ್ ಓದಲು ಬಾರದೆ ಇದ್ದದ್ದಕ್ಕೆ ಮತ್ತದೇ ಸಿದ್ದರಾಮ ಎಂದು ಒತ್ತಿ ಒತ್ತಿ ಕರೆಯುತ್ತಿದ್ದರು.
ಆಗಲಂತು ನನ್ನ ಮನಸ್ಸು ನನ್ನ ಈ ಹೆಸರಿನ ಬಗೆಗೆ ತೀವ್ರ ಜಿಗುಪ್ಸೆ ತರಿಸಿತ್ತು.
ಇನ್ನೂ ಏಳನೇ ತರಗತಿಯಲ್ಲಿ ಪರಶುರಾಮ್ ಎಂಬ ನನ್ನೊಂದಿಗೆ ಪುರುಷೋತ್ತಮ ಎಂಬ ಎರಡು ಸ್ನೇಹಿತರು ಬೇರೆ ಒಂದೇ ತರಗತಿಯಲ್ಲಿ ಇದ್ದೆವು. ಆಗಲಂತು ತರಗತಿಗೆ ಬಂದ ಟೀಚರ್ ಗಳು ಅದೆಷ್ಟೋ ಬಾರಿ ಪುರುಷೋತ್ತಮನ ಪರಶುರಾಮ ಎಂದು ಪರಶುರಾಮನ ಪುರುಷೋತ್ತಮ ಎಂದು ಕರೆದು ಗೊಂದಲಕ್ಕೆ ಸಿಕ್ಕಿಸಿದರೊ ಗೊತ್ತಿಲ್ಲ. ಇದು ಒಂದು ವರ್ಷಗಳ ಕಾಲ ಹೀಗೆ ನಡೆಯಿತು.
ಇನ್ನೂ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಈ ಹೆಸರು ಮತ್ತದೆ ಯಥಾವತ್ ಜಿಗುಪ್ಸೆ ತರಿಸಿ ನನ್ನ ಹೆಸರೇ ನಾನು ಕಳಚುವಂತೆ ಯೋಚಿಸಲು ತಲೆನೋವು ತಂದಿತ್ತು. ಕಾರಣ ಸ್ನೇಹಿತರು ನನ್ನ ರೇಗಿಸಲು ನನ್ನ ಹೆಸರನ್ನೇ ಅಸ್ತ್ರವನ್ನಾಗಿ ಬಳಸಿ ಪರ್ಸು ಪರ್ಸು(purse) ಅನ್ನೊರು. ಆಗಲಂತು ನನಗೆ ಕೆಟ್ಟ ಕೋಪ ಬರೊದು ನಿಜವಾಗಿಯೂ ನನ್ನ ಹೆಸರಿಗೆ ತಕ್ಕಂತೆ ಪರಶುರಾಮನಾಗಿ ಹೊಡೆಯಲ ಎಂದು ಆದರೆ ಏನು ಮಾಡೊದು ಎಲ್ಲಾ ಸ್ನೇಹಿತರೆ ಅಂತ ನನಗೆ ನಾನೇ ಸಮಾದಾನವಾಗಿ ತಗೊಂಡು ನಾನು ಅವರೊಂದಿಗೆ ನಗ್ತ ಸುಮ್ಮನೆ ಆಗ್ತಿದ್ದೆ. ಹಿರಿಯರು ಮತ್ತು ಅನಕ್ಷರಸ್ಥರ ಬಾಯಲ್ಲಿ ನನ್ನ ಹೆಸರು ಹೀಗೆ ಹಾಳದದ್ದು ಉಂಟು ಆದರೆ ಅಕ್ಷರಸ್ಥರ ಬಾಯಲ್ಲಿ ಹೆಸರು ಹಾಳಾದಾಗ ಆಗುವ ನೋವು ಹೇಳಲಾಗದಷ್ಟು ಇತ್ತು.
ಇನ್ನೂ ನಾನು ಡಿ,ಎಡ್ ಓದುವಾಗಲಂತೂ ವಿಜ್ಞಾನದ ಸರ್ ಗುರುಮೂರ್ತಿಯವರಂತು ಪ್ರತಿ ಭಾರಿ ನನ್ನ ಪರಶಿವನಾಗಿ ಮಾಡಿದ್ದರು. ಪರಶಿವ ಎಂದರೆ ಶಿವನಾಗಿ ಅಲ್ಲ. ಪರಶುರಾಮನ ಹೆಸರನ್ನು ಅವರು ಗೊಂದಲದಲ್ಲಿ ಪರಶಿವ ಎಂದೇ ಕರೆಯುತ್ತಿದ್ದರು ಅದಕ್ಕೆ ಕಾರಣ ಎರಡು ವರ್ಷಗಳ ಹಿಂದಿನ ಡಿ,ಎಡ್ ಬ್ಯಾಚಿನಲ್ಲಿ ಪರಶಿವ ಎಂಬ ಹೆಸರಿನ ವಿದ್ಯಾರ್ಥಿ ಹುಡುಗನೊಬ್ಬ ಇದ್ದನಂತೆ ಅದರಿಂದಾಗಿ ನನ್ನ ಹೆಸರು ಹೀಗೆ ಬದಲಾಗಿತ್ತು.
ಡಿ.ಎಡ್ ಮಾಡಿದ ಎರಡು ವರ್ಷಗಳ ಕಾಲ ನನ್ನ ಅವರು ಕರೆದದ್ದು ಪರಶಿವನೆಂದೆ. ನನಗೂ ನನ್ನ ಹೆಸರು ಸರ್ ಗೆ ಹೇಳಿ ಹೇಳಿ ಸಾಕಾಗಿ ಸರಿ ಇನ್ನೂ ಮುಂದೆ ಸರ್ ಕೂಗುವ ಈ ಹೆಸರಿಗೆ ಪ್ರತಿಕ್ರಿಯಿಸಲು ನಾನೇ ಬದಲಾಗಿ ಅವರು ಪರಶಿವ ಎಂದಾಗಲೆಲ್ಲ ಓಗುಟ್ಟುತ್ತಿದ್ದೆ.
ಆದರೂ ಅವರು ಕೊನೆಯ ವರೆಗೆ ನನ್ನ ಹೆಸರು ಜ್ಞಾಪಕ ಶಕ್ತಿಯಲ್ಲಿ ಉಳಿಸಿಕೊಂಡಿದ್ದು ಪರಶಿವನಾಗಿಯೇ ಹೊರತು ಪರಶುರಾಮನಾಗಿ ಅಲ್ಲ!! ಇವತ್ತಿಗೂ ಆಗಾಗ ಕಾಲೇಜ್ ಕಡೆ ಹೋದಾಗ ಎದುರಾದರೆ ಏನಯ್ಯ ಪರಶಿವ ಅಂತಾರೆ. ಗುರುಗಳ ಆ ಮಾತಿಗೆ ಉತ್ತರಿಸಲೊ ಕೋಪಗೊಳ್ಳಲೊ ಅಥವಾ ಅವರ ಬಾಯಲ್ಲಿ ನನ್ನ ಬದಲಾದ ಹೆಸರಿಗೆ ಮುಜುಗರ ಪಡಲೊ ತಿಳಿಯದೆ ಕಂಗಲಾಗ್ತಿನಿ..
ಅಂದ ಹಾಗೆ ನಿಮಗೆ ನನ್ನ ಹೆಸರು ಸರಿಯಾಗಿ ಏನಂತ ಗೊತ್ತಾಯ್ತ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆÉ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ.ಬಿ : ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿ.ಐ.ಇ.ಟಿ. ಕಾಲೇಜು ಹಾಗೂ ಸುತ್ತ ಮುತ್ತ ಪ್ರದೇಶಗಳು.
ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಬಿ.ಟಿ.: ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಮೌನೇಶ್ವರ : ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ.
ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ, ಪಿ.ಬಿ. ರಸ್ತೆ., ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಕೆಟಿಜೆ: ಶ್ರೀ ಮುರಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತ ಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗು ಸುತ್ತಮುತ್ತ ಪ್ರದೇಶಗಳು, ಪಿಜೆ: ಪೋಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಿಜಿಹೆಚ್: ಎಮ್.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂದಿರ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳು.
ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ. ಕಛೇರಿ, ಜಿ.ಎಂ.ಐ.ಟಿ. ಬಸವೇಶ್ವರ ನಗರ, ರಶ್ಮೀ, ಹರಿಹರ ರಸ್ತೆ, ವಿಜಯ ನಗರ, ಅಶೋಕ ನಗರ, ಆರ್.ಟಿ.ಓ. ಕಛೇರಿ, ಎಸ್.ಪಿ. ಕಛೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ. ನಗರ, ಹಾಗೂ ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೆಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ, ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ, ಓಬಜ್ಜಿಹಳ್ಳಿ ಕ್ಯಾಂಪ್, ಕಡ್ಲೇಬಾಳು, ಹಳೆಕಡ್ಲೆಬಾಳು, ಮಾಳಗೊಂಡನಹಳ್ಳಿ, ಅರಸಾಪುರ, ಬದುನಾಯಕನತಾಂಡ, ಚಿಕ್ಕಓಬಜ್ಜೀಹಳ್ಳಿ, ದೊಡ್ಡಓಬಜ್ಜೀಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮ್ಯಾಸರಹಳ್ಳಿ, ಗುಮ್ಮನೂರು, ಹುಣಸೆಕಟ್ಟೆ, ಮುಡೇನಹಳ್ಳಿ, ಕೆಂಚಮ್ಮನಹಳ್ಳಿ, ಹೊಸಹಳ್ಳಿ, ಕಾಟಿಹಳ್ಳಿ.
ಮಂಡಲೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹನುಮನಹಳ್ಳಿ, ಕೊಗ್ಗÀನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್, ಗುಜರಿ ಲೈನ್, ಬಂಬೂ ಬಜಾರ್, ಮಟ್ಟಿಕಲ್, ಬಿಡಿಓ ಕಛೇರಿ, ಇಮಾಮ್ ನಗರ, ಅಮರಪ್ಪನ ತೋಟ.
ಆನೆಕೊಂಡ, ಎಲ್.ಬಿ.ಎಸ್. ನಗರ.ಟಿ.ಸಿ. ಲೇಔಟ್, ಬಿಟಿ ಲೇಔಟ್, ಕೆ.ಆರ್. ರಸ್ತೆ, ಇಮಾಮ್ ನಗರ, ಆನೆಕೊಂಡ, ಐನಳ್ಳಿ ಕಾಂಪೌಂಡ್, ಎಪಿಎಂಸಿ, ಭಾರತ್ ಕಾಲೋನಿ, ಶೇಖ್ರಪ್ಪ ನಗರ ಹೆಚ್.ಕೆ.ಆರ್. ನಗರ, ಕಬ್ಬೂರು ಬಸಾಪುರ ನಗರ, ಆಣ್ಣಾ ನಗರ, ಬಸಾಪುರ ರಸ್ತೆ, ಗೋಶಾಲೆ, ಪಿ.ಬಿ. ರಸ್ತೆ, ರವಿ ಮಿಲ್ ಹಾಗೂ ಆವರಗೆರೆ, ಹೊನ್ನೂರು, ಐಗೂರು, ಮಲ್ಲಶೆಟ್ಟಿಹಳ್ಳಿ, ತೊಳಹುಣಸೆ, ದಾವಣಗೆರೆ ವಿಶ್ವವಿದ್ಯಾಲಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಿಂಚಣಿ ದಾರರು ಸಕಾಲದಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿ
ಸುದ್ದಿದಿನ,ದಾವಣಗೆರೆ: ಪಿಂಚಣಿ ಪಡೆಯಲು ಜೀವಂತ ಸದಸ್ಯರ ಪ್ರಮಾಣ ಪತ್ರಗಳು ಕಡ್ಡಾಯವಾಗಿರುವುದರಿಂದ ಸಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಸಹಕರಿಸಿ ಎಂದು ಉಪ ಮಹಾಲೇಖಪಾಲರಾದ ಸಚ್ಚಿನ್ ಕೃಷ್ಣ ಕೌಶಿಕ್ ತಿಳಿಸಿದರು.
ಶುಕ್ರವಾರ ಜೂನ್(19) ಬೆಂಗಳೂರಿನ ಮಹಾಲೇಖಪಾಲರು ದಾವಣಗೆರೆ ಜಿಲ್ಲಾ ಖಜಾನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಭವಿಷ್ಯ ನಿಧಿ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಿಂಚಣಿದಾರರು ತಮ್ಮ ಎಲ್ಲಾ ಬ್ಯಾಂಕ್ಗೆ 2ನೇ ವಾರ ಭೇಟಿ ನೀಡಿದರೆ ನಿಮ್ಮ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಜೀವಂತ ಸದಸ್ಯರ ದೃಢೀಕರಣ ಪತ್ರವನ್ನು ಪಡೆಯಲು ಸೈಬರ್ಕೆಫೆ ಇನ್ನಿತರ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ನೀವು ಮನೆಯಲ್ಲಿ ಮೊಬೈಲ್ನಲ್ಲಿ ಅಫ್ ಲೋಡ್ ಮಾಡಿ ಪಡೆಯಬಹುದು. ಮತ್ತು ನಿಮ್ಮ ಸಮಸ್ಯೆಗಳನ್ನು ತಿಳಿಸುವಾಗ ಅರ್ಜಿಯಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ನಂಬರ್ನ್ನು ಕಡ್ಡಾಯವಾಗಿ ನಮೂದಿಸಿದರೆ, ಇದರಿಂದ ನಿಮಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.
ಪಿಂಚಣಿ ಅದಾಲತ್ ಎನ್ನುವುದು ನಿವೃತ್ತ ನೌಕರರು ಮತ್ತು ಪಿಂಚಣಿದಾರರ ದೀರ್ಘಕಾಲದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಅಥವಾ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷ ವೇದಿಕೆಯಾಗಿದೆ. ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ, ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕಪರಿಶೋಧನಾ ಅಧಿಕಾರಿ ನಾಗಸೇನಾ.ಟಿ.ವಿ, ಮತ್ತು ಪದ್ಮವತಿ, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ರಮೇಶ್ ಅರೆಮಲ್ಲಾಪುರ, ಸಹಾಯಕ ಲೆಕ್ಕಪರಿಶೋಧನಾ ಆಧಿಕಾರಿ ಚಂದನ್ ಮತ್ತು ಜಾಬ್ಲೀನೋ, ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


