Connect with us

ದಿನದ ಸುದ್ದಿ

ಸರ್ವಾಧಿಕಾರದ ತುರ್ತು-ನವ ಉದಾರವಾದದ ಪರಿಸ್ಥಿತಿ

Published

on

  • ನಾ ದಿವಾಕರ

ತುರ್ತು ಪರಿಸ್ಥಿತಿ ನೆನಪಾದ ಕೂಡಲೇ ಒಂದು ಕರಾಳ ಛಾಯೆ ಕವಿದಂತೆ ಭಾವಿಸುವ ಒಂದು ಪೀಳಿಗೆ ನಮ್ಮ ನಡುವೆ ಇದೆ. ಈ ಪೀಳಿಗೆಯ ನಡುವೆಯೇ ಇರುವ ಹಿರಿಯ ಪೀಳಿಗೆಗೆ ಜೂನ್ 25 ಪ್ರಜಾಸತ್ತೆಯ ಕತ್ತು ಹಿಸುಕಿದ ಒಂದು ದುರಂತ ಪ್ರಯತ್ನದಂತೆ ಕಾಣುತ್ತದೆ.

ಈ ಎರಡೂ ಪೀಳಿಗೆಯ ಜನರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಹೋರಾಟದ ಮೂಲಕ, ಚಟುವಟಿಕೆಯ ಮೂಲಕ, ಅಧ್ಯಯನದ ಮೂಲಕ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಎದುರಿಸಿದ್ದಾರೆ. ಈ ಅನುಭವದ ಮೂಸೆಯಲ್ಲಿ ನಿಂತು ಇಂದಿನ ರಾಜಕಾರಣವನ್ನು ಅವಲೋಕನ ಮಾಡುವಾಗ ನಮ್ಮ ಮುಂದೆ ಇಂದಿನ ಯುವ ಪೀಳಿಗೆ ಪ್ರತ್ಯಕ್ಷವಾಗುತ್ತದೆ.

ಈ ಪೀಳಿಗೆಯ ಒಂದು ವರ್ಗ, ತುರ್ತುಪರಿಸ್ಥಿತಿಯ ಅನುಭವವಿಲ್ಲದಿದ್ದರೂ ವಾಸ್ತವ ಚರಿತ್ರೆಯ ಪುಟಗಳ ಒಳಹೊಕ್ಕು ಅಧ್ಯಯನಶೀಲತೆಯಿಂದ 1960-70ರ ದಶಕದ ಸಮಾಜೋ ಆರ್ಥಿಕ ಮತ್ತು ರಾಜಕೀಯ ಸ್ಥಿತ್ಯಂತರಗಳನ್ನು ಗ್ರಹಿಸುವ ಒಂದು ವರ್ಗ, ತುರ್ತುಪರಿಸ್ಥಿತಿಯನ್ನು ಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸಲು ಸಾಧ್ಯ.

ಈ ವರ್ಗ ವಾಟ್ಸಾಪ್ ವಿಶ್ವವಿದ್ಯಾಲಯ ಸ್ಥಾಪನೆಯಾಗುವ ಮುನ್ನವೇ ತಮ್ಮ ಸಾಮಾಜಿಕ ಪ್ರಜ್ಞೆಯನ್ನು ಹರಿತಗೊಳಿಸಿಕೊಂಡಿರುವುದರಿಂದ ಇವರಿಗೆ 1975ರ ಜೂನ್ 25 ರಾಜಕೀಯ ಪಲ್ಲಟ ಉಂಟುಮಾಡಿದ ಒಂದು ವಿದ್ಯಮಾನದಂತೆ ಕಾಣಲು ಸಾಧ್ಯ.

1960ರ ದಶಕದ ಯುದ್ಧ, ಬಡತನ, ಹಸಿವು, ನಿರುದ್ಯೋಗ ಮತ್ತು ಜನಾಂದೋಲನಗಳಿಗೂ 1970ರ ದಶಕದ ರಾಜಕೀಯ ಬೆಳವಣಿಗೆಗಳಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಈ ಎರಡೂ ವರ್ಗಗಳು ಸಮರ್ಥವಾಗಿ ಗ್ರಹಿಸಲು ಸಾಧ್ಯ. ಗತ ಚರಿತ್ರೆಯನ್ನು ಸಮಕಾಲೀನ ನೆಲೆಯಲ್ಲಿಟ್ಟು ನೋಡದೆ ವಸ್ತುನಿಷ್ಠವಾಗಿ ವಿಶ್ಲೇಷಿಸುವವರಿಗೆ ಈ ಸೂಕ್ಷ್ಮಗಳೊಡನೆ ಅಂದಿನ ಕಾಲಘಟ್ಟದ ನೈಜ ರಾಜಕೀಯ ಸ್ಥಿತ್ಯಂತರಗಳೂ ಅರಿವಾಗುತ್ತದೆ. 1975ರ ತುರ್ತುಪರಿಸ್ಥಿತಿಯನ್ನು ಕೇವಲ ಒಂದು ಸಹಿ, ತಿದ್ದುಪಡಿ ಅಥವಾ ಕಡತದಲ್ಲಿ ಕಾಣುವುದಕ್ಕಿಂತಲೂ, ಒಂದು ದಶಕದ ರಾಜಕೀಯ ಬೆಳವಣಿಗೆಗಳು ಮತ್ತು ಸಮಾಜೋ ಆರ್ಥಿಕ ಪಲ್ಲಟಗಳಲ್ಲಿ ಕಾಣಲೂ ಸಾಧ್ಯವಾಗಬಹುದು.

ಇಂದಿನ ಯುವ ಪೀಳಿಗೆಯ ಮತ್ತೊಂದು ವರ್ಗ, ಶತಮಾನದ ಯುವಜನತೆ ಅಥವಾ 1990ರ ನಂತರದ ಪೀಳಿಗೆಯನ್ನು ಪ್ರತಿನಿಧಿಸುವ ಒಂದು ವರ್ಗಕ್ಕೆ 1960ರ ಸಮಾಜೋ ಆರ್ಥಿಕ ವಿಪ್ಲವಗಳು, 1970ರ ರಾಜಕೀಯ ಬೆಳವಣಿಗೆಗಳು ಮತ್ತು 1980ರ ಸಮಾಜೋ ಸಾಂಸ್ಕೃತಿಕ ಬೆಳವಣಿಗೆಗಳು, ಈ ಮೂರೂ ವಿದ್ಯಮಾನಗಳು ಇತಿಹಾಸದ ಪುಟಗಳಾಗಿ ಮಾತ್ರ ಕಾಣುತ್ತವೆ. ಈ ಇತಿಹಾಸದ ಪುಟಗಳಲ್ಲಿ ಅಡಗಿರುವ ಮಿಥ್ಯೆಯ ಚೌಕಟ್ಟಿನಲ್ಲೇ ನವ ಭಾರತದ ಭವಿಷ್ಯದ ಇತಿಹಾಸವನ್ನು ಕಟ್ಟುವ ಪರಂಪರೆಗೆ ಈ ಪೀಳಿಗೆಯವರು ಬಲಿಯಾಗುತ್ತಿರುವುದನ್ನು ವಾಟ್ಸಾಪ್ ವಿಶ್ವವಿದ್ಯಾಲಯದ ಬೌದ್ಧಿಕ ವಲಯದಲ್ಲಿ ಕಾಣಬಹುದು.

ಇಂದು ತುರ್ತುಪರಿಸ್ಥಿತಿ ಹೇರಿದ 45 ವರ್ಷಗಳ ನಂತರ ನಾವು ಹಿಂದಿರುಗಿ ನೋಡಿದಾಗ ಒಂದು ಕ್ಷಣ ಸ್ತಬ್ಧರಾಗುತ್ತೇವೆ. ಮತ್ತೊಂದು ತುರ್ತುಪರಿಸ್ಥಿತಿ ಹೇರಲಾಗುತ್ತದೆ ಎಂಬ ಭೀತಿ ಕಾಡುತ್ತಲೇ ಇದೆ. ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಸಹ ಇದೇ ಆತಂಕ ವ್ಯಕ್ತಪಡಿಸಿದ್ದುದನ್ನು ಸ್ಮರಿಸಬಹುದು. ಆದರೆ ವಾಸ್ತವ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿದಾಗ, ತುರ್ತುಪರಿಸ್ಥಿತಿ ಹೇರಲು ಇನ್ನೇನು ಉಳಿದಿದೆ ಎಂಬ ಪ್ರಶ್ನೆಯೂ ಕಾಡುತ್ತದೆ. ಈಗಿರುವ ಪರಿಸ್ಥಿತಿ ಕೊಂಚ ಸುಧಾರಣೆಯಾದರೆ, ದಮನಿತ ದನಿಗಳು ಉಸಿರಾಡುವಂತಾದರೆ, ತುರ್ತುಪರಿಸ್ಥಿತಿ ತೆರವಾದಂತೆಯೇ ಎಂಬ ಭಾವನೆ ಮೂಡಿದರೂ ಅಚ್ಚರಿಯೇನಿಲ್ಲ.

1975 ಮತ್ತು 2020 ಈ ಎರಡು ಕಾಲಘಟ್ಟಗಳನ್ನು ಎರಡು ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸಿದರೂ ಕೆಲವು ಸಮಾನ ಅಂಶಗಳು ಸಹಜವಾಗಿ ಕಾಣುತ್ತವೆ. 1975ರಲ್ಲಿ ಸಕ್ರಿಯವಾಗಿಯೂ, ಕ್ರಿಯಾಶೀಲವಾಗಿಯೂ, ಸ್ವಾಯತ್ತ ಅಲ್ಲದಿದ್ದರೂ ಸ್ವತಂತ್ರವಾಗಿದ್ದ ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ಬಂಧಿಸುವ ಮೂಲಕ ತುರ್ತುಪರಿಸ್ಥಿತಿ ಹೇರಲಾಗಿತ್ತು. ಸಮಾಜಮುಖಿ ಎನ್ನಬಹುದಾಗಿದ್ದ, ಸಾಮಾಜಿಕ ತುಮುಲಗಳಿಗೆ ತುಡಿತ ಹೊಂದಿದ್ದ ಮಾಧ್ಯಮಗಳ ಕತ್ತು ಹಿಸುಕುವ ಪ್ರಯತ್ನ ನಡೆದಿತ್ತು. ಈ ನಿರಂಕುಶ ಅಧಿಕಾರವನ್ನು ಸಮರ್ಥಿಸಲು ಹಿಂಸಾತ್ಮಕ ಮಾರ್ಗವನ್ನೂ, ಕರಾಳ ಶಾಸನಗಳನ್ನೂ ಅನುಸರಿಸಲಾಗಿತ್ತು. ಇದನ್ನು ನಾವಿಂದು ಒಂದು ಪಕ್ಷದ ನೆಲೆಯಲ್ಲಿ ನಿಂತು ಕ್ರೂರ ದಬ್ಬಾಳಿಕೆ ಎಂದೋ, ಸರ್ವಾಧಿಕಾರ ಎಂದೋ ಖಂಡಿಸುತ್ತೇವೆ. ಖಂಡಿಸಲೂ ಬೇಕು.

ಆದರೆ 2020ರ ಸಂದರ್ಭವನ್ನೊಮ್ಮೆ ನೋಡಿದಾಗ, ಅಂದು ಒಂದು ಸಾಂವಿಧಾನಿಕ ತಿದ್ದುಪಡಿಯ ಮೂಲಕ ತಮ್ಮ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಸಾಂವಿಧಾನಿಕ ಸಂಸ್ಥೆಗಳು ಇಂದು ಯಾವುದೇ ಅಧಿಸೂಚನೆ ಇಲ್ಲದೆ, ಯಾವುದೇ ತಿದ್ದುಪಡಿ ಇಲ್ಲದೆಯೇ ನಿಷ್ಕ್ರಿಯವಾಗಿವೆ. ಬಹುತೇಕ ಸಾಂವಿಧಾನಿಕ ಸಂಸ್ಥೆಗಳು ಕ್ರಿಯಾಶೀಲತೆಯನ್ನು ಕಳೆದುಕೊಂಡಿವೆ, ಸಂವೇದನೆಯನ್ನು ಕಳೆದುಕೊಂಡಿವೆ.

ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎಂದೇ ಗುರುತಿಸಲ್ಪಡುವ ಮಾಧ್ಯಮಗಳು ( ಅಂದು ಕೇವಲ ಮುದ್ರಣ-ಇಂದು ವಿದ್ಯುನ್ಮಾನವೂ ಸೇರಿದೆ) ಅಂದು ಸರ್ವಾಧಿಕಾರದ ಪ್ರಹಾರಕ್ಕೆ ನಲುಗಿಹೋಗಿದ್ದವು. ಇಂದು ಕಾರ್ಪೋರೇಟ್ ರಾಜಕಾರಣದ ಪ್ರಹಾರಕ್ಕೆ ಶರಣಾಗಿದ್ದು, ಸ್ವತಃ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿವೆ. (ಕೆಲವು ಅಪವಾದಗಳನ್ನು ಹೊರತುಪಡಿಸಿ).

ಅಂದು ಬಹುಪಾಲು ಮಾಧ್ಯಮಗಳು ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಹೆಣಗಾಡಿದ್ದವು. ಇಂದು ಮಾರಿಕೊಳ್ಳಲು ಹೆಣಗಾಡುತ್ತಿವೆ. ಅಂದು ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ವಹಿಸುವ ಅಧಿಕಾರ ವರ್ಗ ಒತ್ತಡದ ರಾಜಕಾರಣಕ್ಕೆ ಸಿಲುಕಿ ಅಸಹಾಯಕತೆಯಿಂದ ನಲುಗಿಹೋಗಿದ್ದವು.

ಇಂದು ಇದೇ ಅಧಿಕಾರ ವರ್ಗ ಸ್ವಹಿತಾಸಕ್ತಿಯ ಸ್ವಾರ್ಥತೆಗೆ ಬಲಿಯಾಗಿ ನಲುಗಿಹೋಗುತ್ತಿರುವ ಜನಸಮುದಾಯಗಳನ್ನು ನಿರ್ಲಕ್ಷಿಸುತ್ತಿದೆ. ಸಂವಿಧಾನದ 42ನೆಯ ತಿದ್ದುಪಡಿ ಅನೂರ್ಜಿತವಾಗಿದೆ ನಿಜ, ಆದರೆ ನಿಷ್ಕ್ರಿಯವಾಗಿಲ್ಲ ಎನ್ನುವುದನ್ನು 2020ರಲ್ಲಿ ಕಾಣುತ್ತಿದ್ದೇವೆ. ಇಂದಿನ ರಾಜಕಾರಣದ ನೆಲೆಯಲ್ಲಿ ನಿಂತು 1975ರ ಸಂದರ್ಭವನ್ನು ಗಮನಿಸಿದಾಗ 42ನೆಯ ತಿದ್ದುಪಡಿ ಒಂದು ತೆಳು ಅಡ್ಡ ಪರದೆಯಂತೆ ಕಾಣುತ್ತದೆ.

ಈ ಬದಲಾವಣೆಯ ಹಿಂದೆ ಇರುವ ಬಂಡವಾಳ ವ್ಯವಸ್ಥೆಯನ್ನು ಗಮನಿಸುವಾಗಲೂ ಎರಡು ಭಿನ್ನ ನೆಲೆಗಳಲ್ಲಿ ನಿಂತು ವಿಶ್ಲೇಷಿಸಬೇಕಾಗುತ್ತದೆ. ಔದ್ಯಮಿಕ ಬಂಡವಾಳದ ಕಾಲಘಟ್ಟದ 1975 ಮತ್ತು ಹಣಕಾಸು ಬಂಡವಾಳ ಕಾಲಘಟ್ಟದ 2020 ವಿಭಿನ್ನವಾಗಿ ಕಾಣುವುದೇ ಆದರೆ ಅದು ಆರ್ಥಿಕ ನೆಲೆಯಲ್ಲಿ ಮಾತ್ರ. ಸಮಾಜೋ ಸಾಂಸ್ಕೃತಿಕ ನೆಲೆಗಳಲ್ಲಿ ಯಾವುದೇ ಭಿನ್ನತೆಯನ್ನು ಗುರುತಿಸಲಾಗುವುದಿಲ್ಲ.

ಅಂದು ಭಾರತವನ್ನು ಆಳುತ್ತಿದ್ದ ಪ್ರಜಾತಂತ್ರ ವ್ಯವಸ್ಥೆಯೇ ಇಂದಿಗೂ ಆಳುತ್ತದೆ. ಇಂದಿಗೂ ಅದೇ ಗಣತಂತ್ರ ಮತ್ತು ಒಕ್ಕೂಟ ವ್ಯವಸ್ಥೆಗೆ ಬದ್ಧವಾಗಿರುವ ಸಂವಿಧಾನವನ್ನು ಹೊತ್ತು ತಿರುಗುತ್ತಿದ್ದೇವೆ. ಅಂದು ತುರ್ತುಪರಿಸ್ಥಿತಿ ಹೇರಲು ಕಾರಣ ಎನ್ನಲಾಗಿದ್ದ ಪ್ರಭುತ್ವ ವಿರೋಧಿ ಹೋರಾಟದ ನೆಲೆಗಳು ಇಂದಿಗೂ ಜೀವಂತವಾಗಿವೆ.

ಸಮ ಸಮಾಜಕ್ಕಾಗಿ ಹೋರಾಡುವ ಮತ್ತು ಅಸಮಾನತೆ, ದೌರ್ಜನ್ಯ, ಶೋಷಣೆಯ ವಿರುದ್ಧ ದನಿ ಎತ್ತುವ ನಾಗರಿಕ ಸಮಾಜವನ್ನು ದಮನಿಸದೆ ಹೋದರೆ ಬಂಡವಾಳ ವ್ಯವಸ್ಥೆಗೆ ತನ್ನ ಅಧಿಪತ್ಯವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇದನ್ನು ಇಂದಿರಾಗಾಂಧಿ 1975ರಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಸಾಧಿಸಲು ಯತ್ನಿಸಿದ್ದರು. ಇಂದು ಸಂವಿಧಾನದ ಚೌಕಟ್ಟಿನಲ್ಲೇ ಯತ್ನಿಸಲಾಗುತ್ತಿದೆ. ಪ್ರಜೆಗಳ ದೃಷ್ಟಿಯಿಂದ ಪರಿಸ್ಥಿತಿ ಬದಲಾಗಿಲ್ಲ, ಪ್ರಭುತ್ವಕ್ಕೆ ಈ ಶೋಷಣೆಯ ಕ್ರಮದ ತುರ್ತು ಹಾಗೆಯೇ ಉಳಿದಿದೆ.

1975ರ ತುರ್ತುಪರಿಸ್ಥಿತಿಯನ್ನು ಒಂದು ಪಕ್ಷದ ಅಥವಾ ಓರ್ವ ಅಧಿನಾಯಕಿಯ ನಿರಂಕುಶ ಧೋರಣೆಯ ಪ್ರತೀಕ ಎಂದು ಭಾವಿಸುವುದು ತಾತ್ವಿಕ ನೆಲೆಯಲ್ಲಿ ಒಪ್ಪಬಹುದಾದರೂ, ಭಾರತದ ಪ್ರಭುತ್ವದ ಆಡಳಿತ ಧೋರಣೆಯಲ್ಲಿ ಕವಲೊಡೆದಿದ್ದು ಈ ಪರ್ವಕಾಲದ ಮೂಲಕವೇ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

1960-70ರ ದಶಕದ ಜನಪರ ಹೋರಾಟಗಳ ಚರಿತ್ರೆಯನ್ನು ಅವಲೋಕಿಸಿದಾಗ ಇದು ಸ್ಪಷ್ಟವಾಗುತ್ತದೆ. ಭೂ ಹೋರಾಟಗಳು, ನಕ್ಸಲ್‍ಬಾರಿ ಚಳುವಳಿ, ದಲಿತ-ಆದಿವಾಸಿ-ಮಹಿಳೆಯರ ಶೋಷಣೆಯ ವಿರುದ್ಧ ಹೊರಹೊಮ್ಮಿದ ಜನಾಂದೋಲನಗಳು, ಪ್ರಾದೇಶಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ದನಿಗಳು, ಕಾರ್ಮಿಕರು-ರೈತರು-ಕೃಷಿ ಕಾರ್ಮಿಕರ ಹಕ್ಕೊತ್ತಾಯಗಳು, ಸ್ವಾತಂತ್ರ್ಯೋತ್ತರ ಭಾರತದ ಅಭಿವೃದ್ಧಿ ಪಥದಲ್ಲಿ ವಂಚಿತರಾದ ಅನೇಕ ಜನಸಮುದಾಯಗಳ ಆಕ್ರೋಶದ ದನಿಗಳು, ಸಮಾಜೋ ಸಾಂಸ್ಕೃತಿಕ ತಾರತಮ್ಯಗಳ ವಿರುದ್ಧ ಸಿಡಿದೆದ್ದ ನಾಗರಿಕ ಸಮಾಜದ ಪ್ರಬುದ್ಧ ದನಿಗಳು ಅಂದಿನ ಸರ್ಕಾರವನ್ನು ಮತ್ತು ಭಾರತದ ಪ್ರಭುತ್ವವನ್ನು ಕಂಗೆಡಿಸಿದ್ದನ್ನು ನಿರ್ಲಕ್ಷಿಸಲಾಗುವುದಿಲ್ಲ.

1971ರ ಯುದ್ಧೋನ್ಮಾದವೂ ಈ ಜನಾಂದೋಲನಗಳ ಹುಮ್ಮಸ್ಸನ್ನು ಶಿಥಿಲಗೊಳಿಸಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಹಸಿರು ಕ್ರಾಂತಿ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ, ಸಾರ್ವಜನಿಕ ಉದ್ದಿಮೆಗಳ ಪ್ರಗತಿಯ ಹೊರತಾಗಿಯೂ ದೇಶದ ಶೋಷಿತ ಜನಸಮುದಾಯಗಳ ಬದುಕಿನ ಪ್ರಶ್ನೆ ಗಂಭೀರವಾಗಿತ್ತು. ಭೂ ಸುಧಾರಣೆ ಭೂಮಿಯ ಹಂಚಿಕೆಗೆ ನೆರವಾದರೂ ಊಳಿಗಮಾನ್ಯ ಶೋಷಣೆಯನ್ನು ಹೋಗಲಾಡಿಸಲಿಲ್ಲ.

ಸಮ ಸಮಾಜ ಮತ್ತು ಸಮಾಜವಾದದ ಪ್ರತಿಪಾದನೆಗಳ ನಡುವೆಯೇ ಸ್ವಾತಂತ್ರ್ಯದ ಪರಿಕಲ್ಪನೆಯನ್ನೇ ಪ್ರಶ್ನಿಸುವ ನಾಗರಿಕ ದನಿ ದಾಖಲಾಗಿದ್ದನ್ನು ಸ್ಮರಿಸಬಹುದು. ಈ ಹೋರಾಟಗಳು ಅರೆ ಸಮಾಜವಾದಿ ಭಾರತದ ಬಂಡವಾಳಶಾಹಿ ಪ್ರಭುತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದೂ ಹೌದು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಪ್ರಾದೇಶಿಕ ಅಸ್ಮಿತೆಯ ರಾಜಕಾರಣ ಗರಿಗೆದರಿದ್ದನ್ನೂ ಗಮನಿಸಬೇಕು.

1975ರ ತುರ್ತುಪರಿಸ್ಥಿತಿಯ ಹೇರಿಕೆಗೆ ಅಧಿಪತ್ಯ ರಾಜಕಾರಣ ಒಂದು ನೆಪಮಾತ್ರವಾಗಿತ್ತು. ಜಾಗತಿಕ ಬಂಡವಾಳಕ್ಕೆ ತೆರೆದುಕೊಳ್ಳುತ್ತಿದ್ದ ಭಾರತದ ಬಂಡವಾಳ ವ್ಯವಸ್ಥೆ ತನ್ನ ಸಮಾಜವಾದಿ ಪೊರೆಯನ್ನು ಕಳಚಿಕೊಂಡು ಜಾಗತಿಕ ಬಂಡವಾಳದೊಡನೆ ಬೆಸೆದುಕೊಳ್ಳುವ ನಿಟ್ಟಿನಲ್ಲಿ ದೇಶದ ಪ್ರಭುತ್ವ ತನ್ನ ಆಡಳಿತ ಧೋರಣೆಯನ್ನು ಬದಲಿಸುವುದು ಆಳುವ ವರ್ಗಗಳಿಗೆ ಅನಿವಾರ್ಯವೆನಿಸಿತ್ತು.

ಹಾಗಾಗಿಯೇ ತುರ್ತುಪರಿಸ್ಥಿತಿಯನ್ನು ಎಷ್ಟೇ ಉಗ್ರವಾಗಿ ವಿರೋಧಿಸಿದರೂ ಬೂರ್ಷ್ವಾ ರಾಜಕೀಯ ಪಕ್ಷಗಳು ನಂತರ ಎರಡು ಮೂರು ದಶಕಗಳಲ್ಲಿ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಯಾದ ಅನೇಕ ಕರಾಳ ಶಾಸನಗಳನ್ನು ಮೌನವಾಗಿ ಸಹಿಸಿಕೊಂಡಿದ್ದವು. ಇಂದಿಗೂ ಸಹಿಸಿಕೊಂಡಿವೆ. ಇದು ಪ್ರಭುತ್ವದ ತುರ್ತು ಮತ್ತು ಅನಿವಾರ್ಯತೆಯಾಗಿತ್ತು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿ, ದೇಶವ್ಯಾಪಿ ಹೋರಾಟಗಳನ್ನು ರೂಪಿಸಿ ಪ್ರಜಾತಂತ್ರದ ಉಳಿವಿಗಾಗಿ “ಅವಿರತ ಶ್ರಮಿಸಿದ” ರಾಜಕೀಯ ನಾಯಕರ ದಂಡು ಇಂದಿಗೂ ನಮ್ಮ ಮುಂದಿದೆ.

ಈ ನಾಯಕರಲ್ಲಿ ಸಾರ್ವಭೌಮ ಪ್ರಜೆಗಳ ಮತ್ತು ಭಾರತದ ಸಂವಿಧಾನದ ಪ್ರಜಾತಂತ್ರ ಆಶಯಗಳನ್ನು ಕಾಣಲು ಸಾಧ್ಯವೇ ? ಇಂದು ಸ್ವಾತಂತ್ರ್ಯ ಸೇನಾನಿಗಳಂತೆ ಆತ್ಮರತಿಯಲ್ಲಿ ತೊಡಗಿರುವ ರಾಜಕೀಯ ನಾಯಕರು, ಪ್ರಾದೇಶಿಕ ಪಕ್ಷಗಳ ನೇತಾರರು, ಸಾಂಸ್ಕøತಿಕ ರಾಜಕಾರಣದ ಅಧಿಪತಿಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಹಂತಹಂತವಾಗಿ ನಾಶಪಡಿಸುತ್ತಲೇ ಇರುವುದನ್ನು ಗಮನಿಸುತ್ತಲೇ ಇದ್ದೇವೆ.

ಮಾನವ ಹಕ್ಕುಗಳಿಗಾಗಿ, ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ, ಸಾಮಾಜಿಕ ನ್ಯಾಯಕ್ಕಾಗಿ, ಸಮಾನತೆಗಾಗಿ ಹೋರಾಡುವ ದನಿಗಳನ್ನು ನಿರಂತರವಾಗಿ ದಮನಿಸಲಾಗುತ್ತಿದ್ದರೂ ದಿವ್ಯ ಮೌನಕ್ಕೆ ಶರಣಾಗಿರುವ 1975ರ ಸೇನಾನಿಗಳು ನಮ್ಮ ನಡುವೆಯೇ ಅಧಿಕಾರದಲ್ಲಿದ್ದಾರೆ.

1975ರಲ್ಲಿ “ ಪ್ರಜಾತಂತ್ರದ ಉಳಿವಿಗಾಗಿ ” ತಮ್ಮ ಸೈದ್ಧಾಂತಿಕ ನೆಲೆಗಳನ್ನೂ ಬದಿಗಿಟ್ಟು ಒಂದಾದ ಸಮಾಜವಾದಿ ನಾಯಕರು ಇಂದು ಸಮ ಸಮಾಜದ ಮೌಲ್ಯಗಳನ್ನೇ ಮರೆತಂತೆ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ಬಲಪಂಥೀಯ ರಾಜಕಾರಣಕ್ಕೆ ಪ್ರತ್ಯಕ್ಷ-ಪರೋಕ್ಷ ಬೆಂಬಲ ನೀಡಿದ ಸಮಾಜವಾದಿ ನಾಯಕರು ನಂತರದ ದಿನಗಳಲ್ಲಿ, ಬಲಪಂಥೀಯ ಆಕ್ರಮಣಶೀಲತೆಯನ್ನು ಖಂಡಿಸುವ ವ್ಯವಧಾನವನ್ನೂ ಕಳೆದುಕೊಂಡಿದ್ದನ್ನು ಕಂಡಿದ್ದೇವೆ.

ಮತ್ತೊಂದೆಡೆ ಪ್ರಭುತ್ವದ ಆಶಯಗಳನ್ನು ಮತ್ತಷ್ಟು ಬಲಪಡಿಸಲೆಂದೇ 1975ರ ಸಂದರ್ಭವನ್ನು ಬಳಸಿಕೊಂಡು, ಸಮಾಜವಾದದ ಮೆಟ್ಟಿಲುಗಳನೇರಿ ತನ್ನ ಭದ್ರ ಕೋಟೆ ಕಟ್ಟಿದ ಬಲಪಂಥೀಯ ರಾಜಕಾರಣ ಇಂದು ಅಧಿಪತ್ಯ ಸಾಧಿಸಿರುವುದನ್ನೂ ಕಾಣುತ್ತಿದ್ದೇವೆ.

1975ರಲ್ಲಿ ಇಂದಿರಾ ಸೃಷ್ಟಿಸಿದ ಅಲೆ ಪ್ರಭುತ್ವದ ಮೂಲ ಲಕ್ಷಣಗಳನ್ನೇ ಬದಲಿಸುವ ಒಂದು ಆಯಾಮವನ್ನೂ ಹೊಂದಿತ್ತು ಎನ್ನುವುದನ್ನು 1980ರ ನಂತರದ ರಾಜಕೀಯ ಬೆಳವಣಿಗೆಗಳಲ್ಲಿ, 1990ರ ದಶಕದ ಸಾಂಸ್ಕೃತಿಕ ರಾಜಕಾರಣದಲ್ಲಿ, 2000ದ ನಂತರದ ನವ ಉದಾರವಾದದ ಬೆಳವಣಿಗೆಗಳಲ್ಲಿ ಮತ್ತು 2010ರ ನಂತರದ ದಮನಕಾರಿ ಆಡಳಿತ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಗಮನಿಸಬಹುದಲ್ಲವೇ ?

ಅಂದಿನ ತುರ್ತುಪರಿಸ್ಥಿತಿಯನ್ನು ನೆನೆದು ಉದ್ರೇಕದ ಮಾತುಗಳನ್ನಾಡುವ ಮುನ್ನ ಇಂದು ಅಪಾಯದಲ್ಲಿರುವ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆಯೂ ಉಸಿರೆತ್ತಬೇಕಲ್ಲವೇ ? ಮಾಧ್ಯಮ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ರಕ್ಷಣೆಗಾಗಿ 1975ರಲ್ಲಿ ಟೊಂಕಕಟ್ಟಿ ನಿಂತು ಸೆರೆವಾಸವನ್ನೂ ಅನುಭವಿಸಿದ ನಾಯಕರೇ ಇಂದು ದೇಶಾದ್ಯಂತ ಪ್ರತಿರೋಧದ ದನಿಗಳನ್ನು ಶಾಶ್ವತವಾಗಿ ಅಡಗಿಸಲು ಯತ್ನಿಸುತ್ತಿರುವುದನ್ನು ಗಮನಿಸಬೇಕಲ್ಲವೇ ?

ಅಂದು ಔದ್ಯಮಿಕ ಬಂಡವಾಳ ಸೃಷ್ಟಿಸಿದ ಬಿಕ್ಕಟ್ಟುಗಳಿಗಿಂತಲೂ ಹೆಚ್ಚಿನ ಬಿಕ್ಕಟ್ಟನ್ನು ನವ ಉದಾರವಾದದ ಹಣಕಾಸು ಬಂಡವಾಳ ಇಂದು ಸೃಷ್ಟಿಸಿದೆ. ಅಂದು ರೈತ ಸಮುದಾಯದಲ್ಲಿದ್ದ ಭೂಮಿಯ ಪ್ರಶ್ನೆ ಇಂದಿಗೂ ಜೀವಂತವಾಗಿದೆ. ಅಂದು ಸ್ಥಳೀಯ ಭೂಮಾಲಿಕರ ವಿರುದ್ಧ ಹೋರಾಡಬೇಕಿದ್ದ ಕೃಷಿಕ ಸಮುದಾಯ ಇಂದು ಜಾಗತಿಕ ಬಂಡವಾಳದ ವಿರುದ್ಧ ಹೋರಾಡಬೇಕಿದೆ.

ಭೂ ಸುಧಾರಣೆ ತಲೆಕೆಳಗಾಗಿ ಚಲಿಸುತ್ತಿರುವ ಈ ಸಂದರ್ಭದಲ್ಲಿ ಭೂಮಿಯ ಪ್ರಶ್ನೆ ಯಾವುದೇ ರಾಜಕೀಯ ಪಕ್ಷಗಳ, ದಲಿತ ಸಂಘಟನೆಗಳ ಆದ್ಯತೆಯಾಗಿಲ್ಲ ಎನ್ನುವುದೇ ಚಿಂತೆಗೀಡುಮಾಡುವ ವಿಚಾರವಾಗಿದೆ. ಮತ್ತೊಂದೆಡೆ ಅಂದು ಔದ್ಯಮಿಕ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಗೆ ಅಡಿಗಲ್ಲುಗಳಂತೆ ಶ್ರಮಿಸಿದ ದುಡಿಯುವ ವರ್ಗಗಳು ಇಂದು ಬಳಸಿ ಬಿಸಾಡಬಹುದಾದ ಮಾರುಕಟ್ಟೆ ಸರಕುಗಳಂತಾಗಿದ್ದಾರೆ.

ಕಾರ್ಮಿಕ ಸಂಘಟನೆಗಳು ಪ್ರಭುತ್ವ ವಿರೋಧಿ ನಿಲುವಿನಿಂದ ವಿಮುಖವಾಗಿದ್ದನ್ನು ಈ 45 ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಕಂಡಿದ್ದೇವೆ. ಇದರ ನೇರ ಪರಿಣಾಮ ಇಂದು ದೇಶದ ದುಡಿಯುವ ವರ್ಗಗಳ ಮೂಲ ನೆಲೆಯೇ ಶಿಥಿಲವಾಗಿದೆ.

ಅಸ್ಮಿತೆಯ ರಾಜಕಾರಣದಲ್ಲಿ ಅಸ್ತಿತ್ವದ ನೆಲೆಗಳನ್ನೇ ಕಳೆದುಕೊಂಡಿರುವ ಜನಸಮುದಾಯಗಳು ಇಂದು ರಾಜಕೀಯ ಬಂದಿಗಳಾಗಿವೆ. 1975ರ ತುರ್ತುಪರಿಸ್ಥಿತಿ ಈ ಬೆಳವಣಿಗೆಗೆ ಶಿಲಾನ್ಯಾಸ ಮಾಡಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಭೀಮಾ ಕೊರೆಗಾಂವ್ ಪ್ರಕರಣ, ಜೆಎನ್‍ಯು ಘಟನೆಗಳು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ವಿರೋಧಿ ಹೋರಾಟಗಳು ಈ ಶಿಲಾನ್ಯಾಸ ಫಲಕದಲ್ಲಿ ಬಿಂಬಿಸಲ್ಪಡುತ್ತಿವೆ.

ಕೃಷಿ ಭೂಮಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಂದರ್ಭದಲ್ಲಿ ಈ ದೇಶದ ರೈತ ಸಮುದಾಯ ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ. ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಲೇ ಅಸ್ತಿತ್ವದ ರಕ್ಷಣೆಗಾಗಿ ದುಡಿಯುವ ವರ್ಗಗಳು ಹೋರಾಡಬೇಕಿದೆ.

ಸಾಮಾಜಿಕ ನ್ಯಾಯದ ಪರಿಕಲ್ಪನೆ ನ್ಯಾಯಾಂಗದ
ಆವರಣದಲ್ಲೇ ಆವಿಯಾಗಿ ಹೋಗುತ್ತಿರುವ ಸಂದರ್ಭವನ್ನು ಶೋಷಿತ ಸಮುದಾಯಗಳು ಎದುರಿಸಬೇಕಿದೆ. ಹಣಕಾಸು ಬಂಡವಾಳದ ಆಕ್ರಮಣಕ್ಕೆ ಆದಿವಾಸಿ ಸಮುದಾಯ ತತ್ತರಿಸಿ ಹೋಗುತ್ತಿದೆ. ಹೆಣ್ತನದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮಹಿಳಾ ಸಮುದಾಯ ನಿರಂತರವಾಗಿ ಹೋರಾಡುವ ಅನಿವಾರ್ಯತೆಯಲ್ಲಿದೆ.

ಇಷ್ಟರ ನಡುವೆ ಮಾನವ ಹಕ್ಕುಗಳಿಗಾಗಿ, ನಾಗರಿಕ ಹಕ್ಕುಗಳಿಗಾಗಿ, ಪೌರತ್ವದ ಹಕ್ಕುಗಳಿಗಾಗಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ದನಿಗಳಿಗೆ ಎಲ್ಲ ಸಾಂವಿಧಾನಿಕ ಸಾಂಸ್ಥಿಕ ನೆಲೆಗಳೂ ಮುಚ್ಚಲ್ಪಟ್ಟಿವೆ. ನ್ಯಾಯಾಂಗದ ಅಂಗಳದಲ್ಲೂ ನ್ಯಾಯಕ್ಕಾಗಿ ಗೋಗರೆಯಬೇಕಾದ, ಹಾತೊರೆಯಬೇಕಾದ ಹತಾಶ ಪರಿಸ್ಥಿತಿ ನಿರ್ಮಾಣವಾಗಿದೆ.

1975ರಲ್ಲಿ ಈ ದನಿಗಳ ಪರ ನಿಂತಿದ್ದ ಪ್ರಜಾತಂತ್ರದ ನಾಲ್ಕನೆಯ ಸ್ತಂಭ , ಮಾಧ್ಯಮ ಜಗತ್ತು ಇಂದು ಬೇಲಿ ದಾಟಿ ಪ್ರಭುತ್ವದೊಡನೆ ನಿಂತಿದೆ. ಈ ದನಿಗಳಿಗೆ ರಾಜಕೀಯ ಪರ್ಯಾಯ ಒದಗಿಸಬೇಕಾದ ಪಕ್ಷಗಳು ಅಸ್ಮಿತೆಯ ರಾಜಕಾರಣಕ್ಕೆ ಬಲಿಯಾಗಿ ಬೆತ್ತಲಾಗಿವೆ. ಜನಪರ ಹೋರಾಟಗಳನ್ನೂ ಈ ಅಸ್ಮಿತೆಯ ರಾಜಕಾರಣವೇ ನುಂಗಿಹಾಕಿರುವುದನ್ನೂ ನೋಡುತ್ತಿದ್ದೇವೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲೇ 45 ವರ್ಷಗಳ ಹಿಂದಿನ ಕರಾಳ ದಿನಗಳನ್ನು ನೆನೆಯುತ್ತಿದ್ದೇವೆ. ಈ ಅವಧಿಯಲ್ಲಿ ದೇಶದ ಎಡಪಕ್ಷಗಳು ಮತ್ತು ದಲಿತ ಸಂಘಟನೆಗಳು ಹೋರಾಟದ ಹಾದಿಗಳನ್ನು ಸ್ಪಷ್ಟವಾಗಿ ಗುರುತಿಸದೆ ಹೋದದ್ದನ್ನು ಗಮನಿಸಬೇಕಿದೆ.

1975ರ ಕರಾಳ ದಿನಗಳನ್ನು ನೆನೆದು ದುಃಖಿಸುವ ಮುನ್ನ ನಮ್ಮ ಸುತ್ತಲೂ ಕವಿಯುತ್ತಿರುವ ಕಾರ್ಮೋಡದ ಪರಿವೆ ನಮ್ಮಲ್ಲಿದೆಯೇ ಎಂದು ಪ್ರಶ್ನಿಸಿಕೊಳ್ಳುವುದು ಒಳಿತಲ್ಲವೇ ? ಅಂದು ಹೇರಲಾಗಿತ್ತು ಇಂದು ಜಾರಿಗೊಳಿಸಲಾಗುತ್ತಿದೆ. ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ. ಅಧಿಕಾರ ರಾಜಕಾರಣದ ತುರ್ತು ಸಹ ಬದಲಾಗಿಲ್ಲ. ಯುವ ಪೀಳಿಗೆಗೆ ಇದನ್ನು ಮನದಟ್ಟು ಮಾಡುತ್ತಲೇ ನಾವು ಬದಲಾಗಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

ದಿನದ ಸುದ್ದಿ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

Published

on

ಕರ್ನಾಟಕದ ವೈಟ್‌ಫೀಲ್ಡ್-ಬಂಗಾರಪೇಟೆ, ಹೊಸೂರು-ಓಮಲೂರು ಮಾರ್ಗ ಸೇರಿ 9 ರಾಜ್ಯಗಳ 1200 ಕಿ.ಮೀ ರೈಲು ಜಾಲ ವಿಸ್ತರಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.

http://Visit : www.suddidina.com

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.

ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.

3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.

4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.

ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.

ಕರ್ನಾಟಕಕ್ಕೆ ಏನು ಲಾಭ?

ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.

ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.

ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Continue Reading

ದಿನದ ಸುದ್ದಿ

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

Published

on

ಸೆ.10 ರಂದು ವಿಧಾನಸೌಧದಲ್ಲಿ ಶತದಿನೋತ್ಸವ ಸಮಾರಂಭ; ಮಾಜಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ, ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಂವಾದ

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 

ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:

ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

http://Visit : www.suddidina.com

ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ

ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.

100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Continue Reading

Trending