Connect with us

ಅಂತರಂಗ

ಧರ್ಮ ಮರ್ಮ – 05 : ಕ್ರಿಸ್ತ ಮತ್ತು ಬಸವಣ್ಣ ಧಾರ್ಮಿಕ ಪುರಾಣ

Published

on

Art: Klaus fabry
  • ಯೋಗೇಶ್ ಮಾಸ್ಟರ್

ಬಾಗೇವಾಡಿಯ ಬಸವೇಶ್ವರನ (ನಂದಿ) ದೇವಸ್ಥಾನಕ್ಕೆ ಹೋದರೆ ಬಸವಣ್ಣನವರ ತಾಯಿ ಇದೇ ಬಸವನ ಪೂಜೆ ಮಾಡಿ ಶಿಶು ಭಾಗ್ಯ ಪಡೆದರೆಂದು ಹೇಳುತ್ತಾ ಕೋಡುಳ್ಳ ನಂದಿಯ ವಿಗ್ರಹವನ್ನು ತೋರುತ್ತಾರೆ. ಅದಕ್ಕೆ ಅಲ್ಲಿ ಬಹಳ ಮಾನ್ಯತೆಯೂ ಇದೆ.

ಶಿವಗಣದಲ್ಲಿ ಒಬ್ಬನಾದ ಸಾಕ್ಷಾತ್ ನಂದಿಯೇ ತಾಯಿ ಮಾದಲಾಂಬಿಕೆಯ ಗರ್ಭವನ್ನು ಸೇರಿ ಬಸವಣ್ಣನಾಗಿ ಜನ್ಮತಾಳಿದ ಎಂದು ಹೇಳುವಂತಹ ಮಿಥಿಕವನ್ನು ನಮ್ಮಲ್ಲಿ ಕಟ್ಟಿದ್ದಾರೆ. ಯಾವ ಅವೈಚಾರಿಕವಾದ ಡೋಂಗಿ ಪುರಾಣಗಳನ್ನು ಗುಡಿಸಿ ಹಾಕಿ ಜನತೆಯನ್ನು ಪ್ರಜ್ಞಾವಂತರನ್ನಾಗಿ ಮಾಡಲು ಜೀವನವೆಲ್ಲಾ ಹೆಣಗಿ ಮರಣಿಸಿದ ಬಸವಣ್ಣನಿಗೆ ಸಂದ ಗೌರವವಿದು.

ಅಂದು ಕಲ್ಯಾಣ ಕ್ರಾಂತಿಯಲ್ಲಿ ಶರಣರ ಕಗ್ಗೊಲೆಗಳು ನಡೆಯುವಾಗ ಸಂಪ್ರದಾಯವಾದಿಗಳ ಮಾರಣ ಘಾತಗಳಿಂದ ಶರಣರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಎತ್ತೆತ್ತಲೋ ವಲಸೆ ಹೋಗಬೇಕಾಯ್ತು. ತಲೆ ಮರೆಯಿಸಿಕೊಳ್ಳಬೇಕಾಯ್ತು. ನಂತರ ನಿಧಾನವಾಗಿ ತಮ್ಮ ಅಸ್ತಿತ್ವವನ್ನು ಮರುಸ್ಥಾಪಿಸಲು ಬಸವನ ಅನಾವರಣ ಮಾಡಲು, ಜನರ ನಡುವೆ ಬಸವನ ಬಗ್ಗೆ ಸದಭಿಮಾನವನ್ನು ಮೂಡಿಸಲು ಬಸವನ ಅಭಿಮಾನಿಗಳು ಪ್ರಯತ್ನಿಸುವಾಗ ಅದೇ ಹಳೆಯ ಪುರಾಣದ ತಂತ್ರಗಳನ್ನೂ ಬಳಸಲಾರಂಭಿಸಿದರು.

ಕ್ರಿಸ್ತ ಮತ್ತು ಬಸವರ ಕ್ರಾಂತಿ

ಕ್ರಿಸ್ತ ಮತ್ತು ಬಸವಣ್ಣ, ಇವರಿಬ್ಬರ ಸಾವು ಧರ್ಮ ಸ್ಥಾಪನೆಗೆ ನಾಂದಿಯಾಯ್ತು. ಇಬ್ಬರಲ್ಲೂ ಅನೇಕ ಸಾಮ್ಯತೆಗಳಿವೆ. ಕ್ರಿಸ್ತನ ಸಾವಿನ ನಂತರ ಅವನ ಅಭಿಮಾನಿ ಶಿಷ್ಯರು, ಅನುಯಾಯಿಗಳು ಹಾಗೂ ಬಸವನ ಸಾವಿನ ನಂತರ ಶರಣರು ಪಟ್ಟ ಪಾಡುಗಳಲ್ಲಿ ಸಾಮ್ಯತೆ ಇದೆ. ಅಷ್ಟೇ ಅಲ್ಲ.

ಯೆಹೂದಿಗಳ ಸಾಂಪ್ರದಾಯಕ ಅವೈಚಾರಿಕ ವಿಚಾರಗಳಿಗೆ ಮರುವ್ಯಾಖ್ಯಾನ ಮಾಡುತ್ತಾ, ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು ಕ್ರಿಸ್ತ ಯತ್ನಿಸಿದರೆ, ಬಸವ ಇಲ್ಲಿ ವೈದಿಕರ ಜಡ್ಡುಗಟ್ಟಿದ ಸಾಂಪ್ರದಾಯಿಕತೆಯ ನಿರರ್ಥಕತೆಗಳನ್ನು ಬಯಲಿಗೆ ತಂದು ಸಮಸಮಾಜದ ನಿರ್ಮಾಣಕ್ಕೆ, ವ್ಯಕ್ತಿಗತ ಜಾಗೃತಿಯ ಬಗ್ಗೆ ಪ್ರಜಾಸತ್ತಾತ್ಮಕವಾದ ಆಧ್ಯಾತ್ಮಿಕತೆ, ಧಾರ್ಮಿಕತೆಯನ್ನು ಪ್ರತಿಷ್ಠಾಪಿಸಲು ಚಳವಳಿ ಹೂಡಿದ.

ಈ ಇಬ್ಬರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಉದ್ದೇಶ ಒಂದೇ ಆಗಿದ್ದರೂ ಕೆಲವು ಸಾಮಾಜಿಕ ಸ್ಥಾನಮಾನದ ವಿಷಯದಲ್ಲಿ, ಸಾಮಾಜಿಕ ಚಟುವಟಿಕೆಯಲ್ಲಿ ವ್ಯತ್ಯಾಸಗಳು ಕಾಣುತ್ತವೆ. ಬಸವಣ್ಣ ಕ್ರಿಸ್ತನಂತೆ ಬಡವರೇನಾಗಿರಲಿಲ್ಲ. ಕ್ರಿಸ್ತನಿಗೆ ಸಮಾಜದಲ್ಲಿ ಪ್ರಭುತ್ವದ ಆಶ್ರಯವಿರುವಂತಹ ಯಾವ ಅಧಿಕಾರ ಇರಲಿಲ್ಲ. ಬಸವಣ್ಣನಿಗೆ ರಾಜ ಬಿಜ್ಜಳನು ಗೆಳೆಯನಾಗಿದ್ದ. ಬಸವಣ್ಣನ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳಿಗೆ ಬಿಜ್ಜಳನ ನೇರ ಕೊಡುಗೆ ಏನೂ ಇರದಿದ್ದರೂ, ಬಸವನಿಗಿದ್ದ ಅವನ ಗೆಳೆತನದ ಸಕಾರಾತ್ಮಕ ಪ್ರಭಾವವನ್ನು ಅಲ್ಲಗೆಳೆಯಲಾಗದು.

ನಿತ್ಯ ಅನ್ನದಾಸೋಹ ಮಾಡುತ್ತಿದ್ದ ಬಸವನ ಮಹಾಮನೆ ಕ್ರಿಸ್ತನಿಗಿರಲಿಲ್ಲ. ಆದರೆ ಕ್ರಿಸ್ತನೂ ಬಸವನಂತೆ ಅರಿವನ್ನೂ, ಆಹಾರವನ್ನೂ ಹಂಚಿಕೊಳ್ಳಲು ತನ್ನದೇ ರೀತಿಯಲ್ಲಿ ಕಾರ್ಯತತ್ಪರನಾಗಿದ್ದ. ಹಂಚಿಕೊಂಡು ಉಣ್ಣುವುದರಲ್ಲಿ ಬಸವನಂತೆಯೇ ಪ್ರಾಮುಖ್ಯತೆ ಕೊಟ್ಟಿದ್ದ. ಮುಂದೆ ಕ್ರಿಸ್ತನಿಗೂ ಮತ್ತು ಬಸವಣ್ಣನಿಗೂ ರಾಜದ್ರೋಹದ ಆಪಾದನೆಯನ್ನೇ ಮಾಡಿದರು. ಕ್ರಿಸ್ತನ ಶಿಲುಬೆಗೇರಿಸಿದರು. ಬಸವನ ಗಡಿಪಾರು ಮಾಡಿ ಕೊಂದರು. ಬಸವ ನೇರ ರಾಜಾಸ್ಥಾನದ ಸದಸ್ಯ ಮತ್ತು ಅಧಿಕಾರಿಯಾಗಿದ್ದರಿಂದ ರಾಜಕೀಯ ದ್ರೋಹದ ಆಪಾದನೆಗಳನ್ನೂ ಕೂಡ ಹೊರಿಸಿದರು, ರಾಜನನ್ನು ಕೊಂದರು, ಅದನ್ನು ಶರಣರ ತಲೆಗೆ ಕಟ್ಟಿದರು.

ಇನ್ನು ಶರಣರನ್ನು ಬೇಟೆಯಾಡ ತೊಡಗಿದಾಗ ಅವರು ನಿರ್ವಾಹವಿಲ್ಲದೇ ತಲೆ ಮರೆಸಿಕೊಂಡು ತಪ್ಪಿಸಿಕೊಳ್ಳಬೇಕಾಯ್ತು. ಅದೇ ರೀತಿ ಕ್ರಿಸ್ತನ ಅನುಯಾಯಿಗಳು ಕೂಡ ತಲೆ ಮರೆಯಿಸಿಕೊಂಡು ತಮ್ಮ ಕ್ರಿಸ್ತ ಧರ್ಮದ ಸಾರ ಸಿದ್ಧಾಂತಗಳನ್ನು ಗಟ್ಟಿಗೊಳಿಸಿಕೊಳ್ಳಲು ರಹಸ್ಯವಾಗಿ ಧರ್ಮಸಭೆಗಳನ್ನು ಸೇರಿಸಬೇಕಿತ್ತು.

ಪುನರುತ್ಥಾನಕ್ಕಾಗಿ ಮಿಥಿಕ

ಕ್ರಿಸ್ತಾನುಯಾಯಿಗಳೂ ಮತ್ತು ಬಸವಾನುಯಾಯಿಗಳೂ ಮಾಡಿದ ಎಡವಟ್ಟೆಂದರೆ ತಮ್ಮ ತಮ್ಮ ಅಭಿಮಾನದ ಆಧ್ಯಾತ್ಮಿಕ ನಾಯಕರಿಗೆ ಪವಾಡಗಳ ಮುಸುಕನ್ನು ಹಾಕಿ ಅವರವರ ಸತ್ಯತೆಗಳನ್ನು, ನಿಜ ಸ್ವರೂಪವನ್ನು ಮಂಕುಗೊಳಿಸಿದ್ದು. ಆದರೆ ಅವರನ್ನು ಮೂರ್ಖರೆಂದೋ, ಕುಯುಕ್ತಿಯ ತಂತ್ರಗಾರರೆಂದೋ ಕರೆಯಲಾರೆ.

ತಮ್ಮ ಅಸ್ತಿತ್ವವನ್ನು ಪುನರ್ಸ್ಥಾಪಿಸಲು ಆಗಿನ ಜನ ಸಾಮಾನ್ಯರ ನಡುವೆ ತಮ್ಮ ನಾಯಕರ ಬಗ್ಗೆ ಶ್ರದ್ಧೆ ಮತ್ತು ಭಕ್ತಿಯನ್ನು ಉಂಟುಮಾಡಲು, ಆಗ ವಾಡಿಕೆಯಲ್ಲಿದ್ದ ಮಿಥಿಕಗಳನ್ನು ಕಟ್ಟುವ ತಂತ್ರವನ್ನೇ ಉಪಯೋಗಿಸಿದರು. ಅದೇ ಕೈಲಾಸ ಒಡ್ಡೋಲಗ, ದೇವರ ಶಾಪ ಅಥವಾ ಅಣತಿಯಂತೆ ಭೂಲೋಕಕ್ಕಿಳಿಯುವುದು, ಸತ್ತವರನ್ನು ಬದುಕಿಸುವುದು, ಜನ ಸಾಮಾನ್ಯರು ಮಾಡಲಾಗದಂತಹ ಅದ್ಭುತಗಳನ್ನು ಸೃಷ್ಟಿಸುವುದು ಇತ್ಯಾದಿ. ಆದರೆ ನಂತರವೂ ಅದೇ ಉಳಿದುಕೊಂಡಿದ್ದು ಮಾತ್ರ ವಿಪರ್ಯಾಸ.

ಕ್ರಿಸ್ತನಾಗಲಿ, ಬಸವಣ್ಣನಾಗಲಿ ಎಂದಿಗೂ ಒಪ್ಪದಿರುವಂತಹ ತೀರಾ ಅವೈಚಾರಿಕ ಮತ್ತು ಪೆÇಳ್ಳು ಕಥೆಗಳ ಹೇರುವಿಕೆಗಳು ಈ ಪವಾಡಗಳು. ಬಸವಣ್ಣ ಅಥವಾ ಕ್ರಿಸ್ತ ಎಂದರೆ ಹೀಗೇ ಎಂದು ನೇರವಾಗಿ ಹೇಳಿದರೇನೇ ಬೆರಗುಗೊಳಿಸುವಂತಹ ಜೀವನದ ಅದ್ಭುತಗಳಿವೆ. ಸತ್ಯಾನ್ವೇಷಕರು ಶರಣಾಗುವಂತಹ ತತ್ವಗಳಿವೆ. ಆದರೆ ಅವುಗಳಿಗೆ ಪವಾಡಗಳ ಪೋಷಾಕನ್ನು ತೊಡಿಸಿ ಆ ಮಹಾಂತರ ಜೀವನಗಳನ್ನು ಮಂಕು ಮಾಡುತ್ತಿರುವ ಮಂದಿ ಈಗಲೂ ಇದ್ದಾರೆ.

ಪವಾಡ ಸದೃಶವಾದ ಭ್ರಾಮಕ ವ್ಯಕ್ತಿತ್ವಗಳನ್ನೇ ಮುಂದಿಡುತ್ತಾ ತಾವೂ ಅದೇ ಭ್ರಮಾಧೀನ ಸ್ಥಿತಿಯಲ್ಲಿದ್ದಾರೆ ಎಂಬುದೇ ವಿಷಾದನೀಯ. ಬಸವಣ್ಣ ತನ್ನ ವಚನಗಳ ಮೂಲಕವೇ, ಇತಿಹಾಸದಲ್ಲಿ ಸರಿದು ಸವೆದುಳಿಸಿದ ಕುರುಹುಗಳಿಂದಲೇ ಆಪ್ತ ಮತ್ತು ಆತ್ಮೀಯ ಹಿರಿಯಣ್ಣನಾಗಿಯೇ ಭಾವಪ್ರವೇಶ ಮಾಡುತ್ತಾನೆ. ಅಂತೆಯೇ ಯೇಸುವೂ ಕೂಡ ತನ್ನ ಪ್ರೇಮದ, ಕಾರುಣ್ಯದ, ಕ್ಷಮಾದಾನದ ನಿಲುವುಗಳಿಂದಲೇ ಇವ ನಮ್ಮವ ಇವ ನಮ್ಮವ ಎಂದೆನಿಸುತ್ತಾನೆ.

ಮನೆಯವರಂತೆ ಸಲುಗೆಯಿಂದಲೇ ಸ್ಪರ್ಶ ಕೊಡುವಂತೆ ಕಾಣುತ್ತಾರೆ. ಹಾಗಿರುವಾಗ ತಮ್ಮವರನ್ನು ಸಹಜದಲ್ಲಿ ಸ್ವೀಕರಿಸದೇ ಉತ್ಪ್ರೇಕ್ಷೆಯ ಪೌರಾಣಿಕ ಮೇಲಾಟಗಳು ಸಾಮಾನ್ಯ ಭ್ರಾಮಕ ಮನಸ್ಸುಗಳಿಗೆ ಬೆರಗುಗೊಳಿಸುತ್ತದೆ ಎಂಬುದೇನೋ ನಿಜ. ಆದರೆ ಅದೆಷ್ಟು ಮಟ್ಟಿಗೆ ಸರಿ? ಅರವಳಿಕೆಯಲ್ಲಿಯೇ ಜನರ ಮನಸ್ಸನ್ನು ನಿರ್ದೇಶಿಸುತ್ತಿರುವುದು ಅರಿವನ್ನು ಉಂಟುಮಾಡುವ, ಜಾಗೃತಿಗೊಳಿಸುವ ಕ್ರಿಸ್ತ ಮತ್ತು ಬಸವಣ್ಣರಿಬ್ಬರ ಉದ್ದೇಶವೇ ವಿಫಲ ಮಾಡಿದಂತೆ. ಅವರ ಉದ್ದೇಶವನ್ನು ವಿಫಲಗೊಳಿಸಿ ವ್ಯಕ್ತಿಯನ್ನು ವೈಭವೀಕರಿಸುವುದು ಅವರಿಬ್ಬರ ವ್ಯಕ್ತಿತ್ವಗಳೂ ಒಪ್ಪುವಂತದ್ದೇನಲ್ಲ.

ಶರಣ ಲೀಲಾಮೃತ

ಬಸವಣ್ಣನ ಜೀವನದಲ್ಲಿ 88 ಪವಾಡಗಳನ್ನು ಮಾಡಿದ, 360 ಜನರಿಗೆ ಪ್ರಾಣದಾನ ಮಾಡಿದ ಉಲ್ಲೇಖಗಳು ಸಿಗುತ್ತವೆ. ಶರಣ ಲೀಲಾಮೃತದ ಕವಿ ಚನ್ನಪ್ಪ, ಭೀಮಕವಿಯೇ ಮೊದಲಾಗಿ ಹಲವು ಕವಿಗಳು ಉತ್ಪ್ರೇಕ್ಷೆ ಮಾಡಿದ್ದಾರೆ ಎನ್ನುವುದೂ ಒಂದಾದರೆ, ಕೆಲವೊಂದನ್ನು ವಿಷಯಗಳನ್ನು ಸೂಚ್ಯವಾಗಿ ತಿಳಿಸಲು ಮಿಥಿಕಗಳನ್ನು ಬಳಸಿದ್ದಾರೆ ಎಂದು ತೋರುತ್ತದೆ.

ಹರಿಹರನ ಬಸವರಾಜ ದೇವರ ರಗಳೆಯೂ ಕೂಡ ಉತ್ಪ್ರೇಕ್ಷೆಗಳಿಂದ ಹೊರತಾಗಿಲ್ಲ. ಆದರೆ ಆ ಕಾವ್ಯವನ್ನು ಹೆಚ್ಚು ಗಂಭೀರವಾಗಿ ಗಮನಿಸಬೇಕಾದ ಅಗತ್ಯವಿದೆ. ಏಕೆಂದರೆ ಬಸವಣ್ಣನ ಅವಸಾನದ ನಂತರ ಸಮೀಪದ ಅವಧಿಯಲ್ಲಿ ಬರೆದಂತಹ ಕೃತಿ ಅದಾಗಿದೆ. ಆದರೆ ಅದೂ ಕೂಡ ತಿರುಚುವಿಕೆಗೆ ಒಳಗಾಗುವಂತಹ ಸಂದರ್ಭವೊದಗಿತು. ಅದನ್ನು ನಂತರ ವಿಚಾರಿಸುವ.

ಬಸವನ ಪವಾಡಗಳಲ್ಲಿ ಮುಖ್ಯವಾದುದು ಗೊಲ್ಲತಿಯ ಪವಾಡ, ಬದನೆಕಾಯಿ ಲಿಂಗವಾದದ್ದು, ಜೋಳದ ಕಾಳುಗಳನ್ನು ಮುತ್ತಿನ ಮಣಿಗಳನ್ನಾಗಿ ಮಾಡಿದ್ದು ಮತ್ತು ಇತರೆ. ತಮಿಳು ಶೈವ ಸಂತರ ಕಥನ ಪ್ರಭಾವಗಳು
ಶರಣ ಲೀಲಾಮೃತದಲ್ಲಂತೂ ಬಸವನನ್ನು ಸಣ್ಣವನಿಂದಲೇ ಮಹಾಮಹಿಮ, ಪವಾಡ ಪುರುಷನಂತೆ ಚಿತ್ರಿಸುತ್ತಾರೆ. ಬಾಲಕ ಬಸವ ಬಹಳ ಚುರುಕಿನ ವಿದ್ಯಾರ್ಥಿಯಾಗಿದ್ದು, ಅವನ ಸಹಪಾಠಿಗಳಿಗೆ ಅವನ ಕಂಡರೆ ಅಸೂಯೆ.

ಒಮ್ಮೆ ಬೆನಕನೆಂಬ ಅವರ ಸಹಪಾಠಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿಹೋಗುತ್ತಾನೆ. ಆಗ ಹೊಟ್ಟೆಕಿಚ್ಚಿನ ಬಸವನ ಓರಗೆಯವರು ಬಸವನೇ ಬೆನಕನನ್ನು ನೀರಿಗೆ ತಳ್ಳಿದ ಎಂದು ಆರೋಪವನ್ನು ಹೊರಿಸುತ್ತಾರೆ. ಆಗ ಹಿರಿಯರು ಕೋಪಗೊಂಡು ಬಸವನ ವಿಚಾರಣೆಗೆ ಒಳಪಡಿಸಿದಾಗ, “ಬೆನಕಾ, ನೀನೇ ಬಂದು ಹೇಳು, ನಾನು ನಿನ್ನನ್ನು ನೂಕಿದೆನೇ?” ಎಂದು ಜೋರಾಗಿ ಕೇಳಿದಾಗ ನೀರಿನಿಂದ ಜೀವ ತಳೆದು ಬಂದ ಬೆನಕ ಇಲ್ಲವೆಂದು ಸಾಕ್ಷಿ ಹೇಳುತ್ತಾನೆ. ಇಂತಹ ಪವಾಡಗಳಿಗೆ ತಮಿಳು ಶಿವಭಕ್ತರ ಕಥೆಗಳ ಪ್ರಭಾವವಿದೆ ಎಂದು ನೇರವಾಗಿ ಗೋಚರಿಸುತ್ತದೆ. ಕೊಡಗೂಸಿನ ಕಥೆಯಾಗಲಿ, ಸಿರಿಯಾಳ ಸೆಟ್ಟಿಯ ಕಥೆಯಾಗಲಿ ಇಂಥಾ ಪವಾಡ ಕಥನಗಳನ್ನೇ ಹೊಂದಿವೆ.

ಇನ್ನು ಗೊಲ್ಲತಿಯ ಕಥೆಯೆಂದರೆ, ಬಿಜ್ಜಳನ ಆಸ್ಥಾನದಲ್ಲಿ ಬಸವ ಕಾರ್ಯಕಲಾಪದಲ್ಲಿ ತೊಡಗಿದ್ದಾಗ ಕೆರೆಯ ಏರಿಯ ಮೇಲೆ ಗೊಲ್ಲತಿಯೊಬ್ಬಳು ಹೋಗುತ್ತಿದ್ದು, ಕಾಲು ಜಾರಿ ನೀರಿಗೆ ಬೀಳುವಾಗ “ಬಸವಾ ರಕ್ಷಿಸು” ಎಂದು ಕೂಗುವಳಂತೆ. ಆಗ ಬಸವ “ತಾಯೇ ನಿಲ್ಲು” ಎಂದು ತಡೆದರಂತೆ. ಬಿಜ್ಜಳ ಅಪಹಾಸ್ಯ ಮಾಡಲು, ಬಸವ ಪರೀಕ್ಷಿಸಲು ಹೇಳಿದರಂತೆ. ಅದರಂತೆ ರಾಜನು ತನ್ನ ಸೈನಿಕರನ್ನು ಕಳುಹಿಸಿ ವಿಚಾರಿಸಲಾಗಿ ಬಸವನ ಮಾತು ನಿಜವೆಂದು ತಿಳಿಯುವುದಂತೆ.

ಇದನ್ನು ನಾವು ತಿಳಿಯಬೇಕಾಗಿರುವುದು ಹೇಗೆಂದರೆ, ನಿಜಕ್ಕೂ ಬಸವಣ್ಣನವರು ತಮ್ಮ ಸಂಚಾರದ ಸಮಯದಲ್ಲಿ ಗೊಲ್ಲತಿಯೊಬ್ಬಳು ನೀರಿಗೆ ಬೀಳುವ ಅಥವಾ ಜಾರುವ ಸಮಯದಲ್ಲಿ ತಮ್ಮ ಸಾಮಾಜಿಕ ಸ್ಥಾನಮಾನದ ಗೊಡವೆಯೇ ಇಲ್ಲದೇ ಮುಂದಾಗಿ ಆಕೆಯನ್ನು ಪಾರು ಮಾಡಿದ್ದಿರಬಹುದು. ಅಂತಹ ಅವರ ಸಹಜ ಮತ್ತು ಉದಾತ್ತ ವರ್ತನೆಯನ್ನು ಹೀಗೆ ಮಿಥಿಕಕ್ಕೆ ಒಳಪಡಿಸಲಾಗಿದೆ ಎಂದು ತೋರುತ್ತದೆ.

ಮಹಾಮನೆಗೆ ಬದನೇಕಾಯಿಯ ತುಂಡುಗಳನ್ನು ಲಿಂಗವೆಂದು ತೋರುವಂತೆ ಬಟ್ಟೆಯಲ್ಲಿ ಕಟ್ಟಿಕೊಂಡು ಕಳ್ಳರು ಬರುತ್ತಾರೆ. ಆಗ ಬಸವನ ಲೀಲೆಯಿಂದ ಅವು ನಿಜವಾದ ಲಿಂಗಗಳೇ ಆದವೆಂದು ದಂತಕಥೆ. ಆದರೆ, ಬಸವಣ್ಣನು ವಸ್ತ್ರಗಳಲ್ಲಿ ಕಟ್ಟಿರುವ ಬದನೆಕಾಯಿಯ ತುಂಡುಗಳನ್ನು, ಲಿಂಗವೆಂದು ಹೆಸರಿಸಿದ್ದರಿಂದ, ಆ ವಸ್ತು ರಚಿತವಾದ ಸಾಮಗ್ರಿ ಅಥವಾ ಸ್ಥೂಲಕ್ಕೆ ಮಾನ್ಯತೆ ನೀಡದೇ, ಹೆಸರಿಸುವ ಮೂಲಕ ಭಾವಕ್ಕೇ ಪ್ರಾಮುಖ್ಯತೆಯನ್ನು ಕೊಟ್ಟು ಬದನೆಕಾಯಿಯ ತುಂಡುಗಳನ್ನು ನಿಜವಾದ ಲಿಂಗಗಳೆಂದೇ ಗೌರವಿಸಿರುತ್ತಾರೆ.

ಹೀಗಾಗಿ ಬದನೆಕಾಯಿಯ ತುಂಡುಗಳು ಲಿಂಗಗಳಾದ ಭಾವಾಂತರವೇ ಹೊರತು, ವಸ್ತುಗಳ ರೂಪಾಂತರವಲ್ಲ. ತೆಲುಗಿನಲ್ಲಿ ಪರಮಾನಂದಯ್ಯ ಶಿಷ್ಯಲು ಕಥಾ ಎಂಬ ಸಿನಿಮಾ ಕನ್ನಡಕ್ಕೆ ಗುರುಶಿಷ್ಯರು ಎಂಬ ಹೆಸರಿನಲ್ಲಿ ಮರು ಚಿತ್ರಿತವಾಯ್ತು. ಅದರಲ್ಲಿ ಭೋಗಾಭಿಲಾಷಿ ರಾಜ (ವಿಷ್ಣುವರ್ಧನ್) ರಾತ್ರಿಯಿಡೀ ವೇಶ್ಯೆಯ ಸಂಗದಲ್ಲಿರುತ್ತಾನೆ.

ಬೆಳಗಾಗುತ್ತಲೇ ಅವನ ಶಿವಾರ್ಚನೆಯ ವ್ರತಕ್ಕೆ ಭಂಗ ಬರುವಂತೆ ಅವನು ಅವಳ ಶಯ್ಯಾಗೃಹದಲ್ಲಿ ಬಂಧಿತನಾಗಿರುತ್ತಾನೆ. ಆದರೆ ಶಿವಪೂಜೆಯ ವ್ರತಕ್ಕೆ ಭಂಗಬರಬಾರದೆಂದು ಅವನು ಮಾಡುವುದೇನೆಂದರೆ, ಅಂಗಾತ ಮಲಗಿರುವ ಜಯಮಾಲಿಯ ಮೊಲೆಯ ಉಬ್ಬಿಗೆ ಶಿವಲಿಂಗವೆಂದು ಭಾವಿಸಿ ಪೂಜೆ ಮಾಡುತ್ತಾನೆ.

ಅಲ್ಲಿಗೆ ಅವನ ಶಿವಪೂಜೆಯ ವ್ರತಕ್ಕೆ ಭಂಗ ಬರುವುದಿಲ್ಲ. ಒಟ್ಟಾರೆ ಶಿವ ಎನ್ನುವುದು ಭಾವದಲ್ಲಿದೆಯೇ ಹೊರತು ವಸ್ತುವಿನಲ್ಲಿಲ್ಲ ಎಂಬುದರ ಸೂಚಕ ಇದು. ಭಕ್ತಿ ಮುಖ್ಯವಾಗುತ್ತದೆಯೇ ಹೊರತು, ವಸ್ತುವಲ್ಲ. ದೇವರೆಂಬುದು ಕಾಣುವುದರಲ್ಲಿ ಅಲ್ಲ, ಕಂಡುಕೊಳ್ಳುವುದರಲ್ಲಿ ಇರುವುದು ಎಂಬುದನ್ನು ಇದು ಸೂಚಿಸುತ್ತದೆ.

ಒಬ್ಬ ಸೆಟ್ಟಿಯು ಬಸವಣ್ಣನವರ ಭಕ್ತಿ ಔದಾರ್ಯಗಳನ್ನು ಪರೀಕ್ಷೆ ಮಾಡಲು ಹೇರು ಹೇರು ಮುತ್ತನ್ನು ಕೇಳುವನಂತೆ. ಆಗ ಬಸವ ಜೋಳವನ್ನೇ ಮುತ್ತುಗಳನ್ನಾಗಿ ಪರಿವರ್ತಿಸಿ ಕೊಟ್ಟರೆಂದು ಪುರಾಣಗಳು ಹೇಳುತ್ತವೆ. ಆದರೆ, ಸೆಟ್ಟಿಯ ದೃಷ್ಟಿಯಲ್ಲಿ ಬೆಲೆಬಾಳುವ ಮುತ್ತಿಗೆ ಬೆಲೆ ಎಂದಾದರೆ, ಬಸವಣ್ಣನವರ ದೃಷ್ಟಿಯಲ್ಲಿ ಆಹಾರಕ್ಕಾಗುವ, ಜೀವವನ್ನು ಪೋಷಿಸುವ ಜೋಳವನ್ನೇ ಮಹತ್ವದ್ದಾಗಿ ನೋಡುವಂತಹ ಅವರ ಧೋರಣೆಯನ್ನು ಪ್ರತಿನಿಧಿಸುವಂತಹ ಮಿಥಿಕ ಇದಾಗಿರುತ್ತದೆ.

ಇನ್ನೂ ಬಹಳ ಜನಪ್ರಿಯವಾದಂತಹ ಮಿಥಿಕವೆಂದರೆ, ಬಸವಣ್ಣನವರು ನಿದ್ರಿಸುವಾಗ ಶರಣರು ಬರುತ್ತಾರೆ. ಅಣ್ಣನವರು ವಿಶ್ರಾಂತಿ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಅವರನ್ನು ಹಿಂದಕ್ಕೆ ಕಳುಹಿಸಿದಾಗ ಬಸವಣ್ಣನ ಜೀವ (ಆತ್ಮ) ಶರಣರನ್ನೇ ಹಿಂಬಾಲಿಸಿಬಿಡುತ್ತದೆ. ಕಳೇವರವಾದ ಬಸವನ ಶರೀರವನ್ನು ಕಂಡು ಹೌಹಾರಿದ ಮಹಾಮನೆಯವರು ಮತ್ತೆ ಕಳುಹಿಸಿದ ಶರಣರ ಹುಡುಕಿಕೊಂಡು ಹೋಗಿ ಮತ್ತೆ ಕರೆದುಕೊಂಡು ಬಂದಮೇಲೆ ಬಸವಣ್ಣನವರ ದೇಹದೊಳಕ್ಕೆ ಜೀವ ಸೇರಿ ಸಜೀವವಾಗಿ ಎದ್ದು ಕೂತರು ಎಂಬುದು.
ಇದನ್ನು ಬಹಳ ನೇರವಾಗಿ ವಿಶ್ಲೇಷಿಸಬಹುದು.

ಶರಣರ ಬರವೆಮಗೆ ಜೀವಾಳ ಎನ್ನುವ ಅಣ್ಣನವರಿಗೆ ತನ್ನ ವಿಶ್ರಾಂತಿ, ಭೋಗ ಇತ್ಯಾದಿಗಳೆಲ್ಲಾ ಲೆಕ್ಕಕ್ಕಿಲ್ಲದ್ದು. ತೀರಾ ಗಂಭೀರವಾಗಿ ಗಣಿಸದೇ ಇರುವುದು. ತಮ್ಮ ಸಾಮಾಜಿಕ ಜೀವನವನ್ನೂ, ವೈಯಕ್ತಿಕ ಬದುಕನ್ನೂ ಒಂದಾಗಿಸಿಯೇ ಬಾಳಿದ ಬಸವಣ್ಣನವರಿಗೆ ತಾವು ಮಲಗಿದ್ದಾಗ ಬಂದು, ತೆರಳಿದ ಶರಣರ ಬಗ್ಗೆ ತಿಳಿಯುತ್ತಾರೆ. ಎಲ್ಲಿಂದಲೋ, ಎಷ್ಟೋ ದೂರವನ್ನು ಕ್ರಮಿಸಿ, ಕಷ್ಟಪಟ್ಟು ತಮ್ಮನ್ನು ಕಾಣಲು ಬಂದಿದ್ದ ಶರಣರನ್ನು ತನ್ನ ನಿದ್ದೆ ಅಥವಾ ವಿಶ್ರಾಂತಿಯಂತಹ ಕಾರಣಕ್ಕೆ ಹಿಂದಕ್ಕೆ ಕಳುಹಿಸಿರುವುದು ನಿಜಕ್ಕೂ ಬೇಸರವೂ, ದುಃಖವೂ ಆಗುತ್ತದೆ.

ಮಂಕಾಗಿರುವ ಬಸವಣ್ಣನವರನ್ನು ಕಂಡು ಚಿಂತೆಗೀಡಾದ ಶರಣರನ್ನು ಹಿಂದಕ್ಕೆ ಕಳುಹಿಸಿದವರು ಮತ್ತೆ ಅವರನ್ನು ಹುಡುಕಿ ಕರೆತಂದಾಗ ಅಣ್ಣನವರು ಉಲ್ಲಸಿತರಾಗುತ್ತಾರೆ. ಹೆಣದಂತೆ ಕಳಾಹೀನವಾಗಿದ್ದವರು, ಜೀವತಳೆದವರಂತೆ ಚೈತನ್ಯದಿಂದ ಕೂಡುತ್ತಾರೆ. ಇಂತಹ ಸಂಗತಿಗಳೆಲ್ಲವೂ ಕೂಡ ಪುರಾಣದ ರೂಪಕಗಳನ್ನು ಪಡೆದುಕೊಂಡಿರುತ್ತವೆ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೆಂದರೆ, ಕ್ರಿಸ್ತ ಮತ್ತು ಬಸವಣ್ಣರಿಬ್ಬರೂ ತಮ್ಮೊಟ್ಟಿನ ಜನರಿಗೆ ನಡೆದುಕೊಳ್ಳಲು ಕ್ರಮಗಳನ್ನು ರೂಪಿಸಿಕೊಟ್ಟರು. ತಾವೇ ಮಾದರಿಯಾಗಿ ಬಾಳಿದರು. ತಾವು ತಮ್ಮ ಮನಸ್ಸಿಗೆ, ತಮ್ಮ ಭಾವುಕತೆಗೆ, ತಮ್ಮ ಧೋರಣೆಗಳಿಗೆ, ತಮ್ಮ ಒಲವು ನಿಲುವುಗಳಿಗೆ ಇಂಥಾ ಬಗೆಯ ತರಬೇತಿಗಳನ್ನು ನೀಡಬೇಕೆಂದು ಕ್ರಮಗಳನ್ನು ರೂಪಿಸಿದರು.

ಆ ಕ್ರಮಗಳನ್ನು ಒಳಗೊಂಡ ಮಾದರಿ ಸಮಾಜವನ್ನು ರೂಪಿಸುವ ಉದ್ದೇಶ ಹೊಂದಿದ್ದರವರು. ಆದರೆ ಅವರ ಜೀವಿತಾವಧಿಯಲ್ಲಿ ಆ ಮಾದರಿ ಸಮಾಜ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬರಲಿಲ್ಲ. ವ್ಯಕ್ತಿಗತವಾಗಿ ರೂಪುಗೊಳ್ಳುತ್ತಿದ್ದವರು ಸಾಮಾಜಿಕವಾಗಿ ವ್ಯಾಪಕಗೊಳ್ಳುವ ಮೊದಲೇ ಅವರಿಬ್ಬರೂ ಮರಣಿಸಿದರು. ಹಾಗಾಗಿ ಅವರ ಕೆಲಸ ಪೂರ್ಣಗೊಳ್ಳಲಿಲ್ಲ.

ಆದರೆ ಅವರು ರೂಪಿಸಿದ ಕ್ರಮವು ಅಥವಾ ಧರ್ಮವು ಸಾಂಸ್ಥಿಕವಾಗಿ ಸ್ಥಾಪನೆಯಾಗಲು ಹಲವು ಬಗೆಯ ಕವಲುಗಳು ಮೂಡಿದವು. ಮುಂದೆ ನೋಡೋಣ. ಧರ್ಮ ಅಥವಾ ಧಾರ್ಮಿಕತೆಯ ತಾತ್ವಿಕ ಆಂತರ್ಯವನ್ನು ಅರಿಯಲು ಈಗ ನಾವೊಂದು ಮಾರ್ಗವನ್ನು ಹಿಡಿದಿದ್ದೇವೆ. ಇದೊಂದು ಬಗೆಯ ಅಧ್ಯಯನದ ರೀತಿ. ಇದು ಅಂತಿಮವಲ್ಲ. ಇದು ಸಂಪೂರ್ಣವೂ ಅಲ್ಲ. ಆದರೆ ಸಮಾಧಾನ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending