Connect with us

ಅಂತರಂಗ

ಧರ್ಮ ಮರ್ಮ-05 : ಸಂಪ್ರದಾಯ ಮತ್ತು ಪರಂಪರೆ

Published

on

Art : Michèle Brown
  • ಯೋಗೇಶ್ ಮಾಸ್ಟರ್

ಗ್ರೀಸ್ ಮತ್ತು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪೌರಾಣಿಕ ವಿಚಾರಗಳಿಗೆ ಬಹಳ ಸಾಮ್ಯತೆ ಇದೆ. ಹೋಮರನ ಇಲಿಯಡ್ ಮತ್ತು ಒಡೆಸ್ಸಿ, ರಾಮಾಯಣ ಮತ್ತು ಮಹಾಭಾರತಗಳ ಮಹಾಕಾವ್ಯಗಳಲ್ಲೂ ಕೂಡ ಇಂತಹ ಸಾದೃಶ್ಯವನ್ನು ಗುರುತಿಸಬಹುದು.

ಗ್ರೀಸ್ ಮತ್ತು ಭಾರತ ದೇಶಗಳೆರಡೂ ಪ್ರಾಚೀನದಲ್ಲಿ ಮಾತೃಪ್ರಧಾನ ಸಂಸ್ಕೃತಿಯನ್ನೇ ಹೊಂದಿದ್ದು, ನಂತರ ಈ ಎರಡೂ ದೇಶಗಳೊಳಗೆ ಪಿತೃ ಪ್ರಧಾನ ಸಂಸ್ಕೃತಿಯನ್ನು ಹೊತ್ತು ತಂದವರು ಆರ್ಯರು. ಭೌಗೋಳಿಕ ಹಕ್ಕುದಾರಿಕೆಯೊಳಗೆ ಪ್ರವೇಶ ಮಾಡಿದರು. ಸಾಂಸ್ಕೃತಿಕವಾಗಿ ಮಿಲನಗೊಂಡರು. ಒಟ್ಟಾರೆ ಸಾಂಸ್ಕೃತಿಕ ಕ್ಷೇತ್ರವನ್ನು ವೈಭವದಿಂದ ವಿಜೃಂಭಿಸಿದರು.

ಆದರೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮೂಲನಿವಾಸಿಗಳನ್ನು ವಂಚಿಸುತ್ತಾ, ಒತ್ತರಿಸಿರುತ್ತಾ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಸಾಕಷ್ಟು ಹುನ್ನಾರಗಳನ್ನು ನಡೆಸಿದರು. ಪ್ರಭಾವ ಯಾವುದೇ ಆದರೂ ಸಾಂಸ್ಕೃತಿಕವಾಗಿ, ಕಲೆ ಮತ್ತು ಕರಕುಶಲತೆಗಳಲ್ಲಿ ಮಾನ್ಯತೆ ದೊರಕಿಬಿಡುತ್ತದೆ. ಏಕೆಂದರೆ ಸಂಗೀತ, ನೃತ್ಯಾದಿ ಲಲಿತಕಲೆ, ಕರಕುಶಲತೆ ಮತ್ತು ಚಿತ್ರ ಹಾಗೂ ವರ್ಣಕಲೆಗಳಲ್ಲಿ ಚುಂಬಕ ಶಕ್ತಿಯಿರುತ್ತದೆ. ಅದು ಸಹಜವಾಗಿ ಎಲ್ಲರನ್ನೂ ಸೆಳೆಯುತ್ತದೆ.

ಅಷ್ಟೇ ಅಲ್ಲದೇ ಅದನ್ನು ಅನುಕರಿಸುವ ಮತ್ತು ಅನುಸರಿಸುವ ಮೂಲಕ ತಮ್ಮ ಸಾಂಸ್ಕೃತಿಕ ಸಂಪದವನ್ನು ಹೆಚ್ಚಿಸಿಕೊಳ್ಳಲು ಅಥವಾ ವೈಭವೀಕರಿಸಿಕೊಳ್ಳಲು ಹಾತೊರೆಯುತ್ತಾರೆ. ಇದು ಗ್ರೀಸ್ ಮತ್ತು ಭಾರತ ಎರಡೂ ದೇಶಗಳಲ್ಲಾಯಿತು.

ಲಲಿತಕಲೆಗಳ ಪ್ರಭಾವ

ನಮ್ಮ ದೇಶದಲ್ಲೂ ಸಂಗೀತ, ನೃತ್ಯ, ಚಿತ್ರಕಲೆಗಳು, ಮೆಲೋಡ್ರಾಮ ಸಾಹಿತ್ಯಗಳು ಹಾಗೂ ರಂಗಭೂಮಿಯೂ ನೇರವಾಗಿ ಆರ್ಯರ ಅಥವಾ ಬ್ರಾಹ್ಮಣ್ಯದ ಮನಸ್ಥಿತಿಗಳನ್ನು ಗಟ್ಟಿಗೊಳಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ತನ್ನ ಕಾಣಿಕೆಗಳನ್ನು ನೀಡಿತು.

ಭಕ್ತಿಗೀತೆಗಳು, ಭಜನೆಗಳು, ದೇವ ದೇವಿಯರ ಚಿತ್ರ ಮತ್ತು ಶಿಲ್ಪಗಳು, ಕರಕೌಶಲ್ಯದ ಕಲಾಕೃತಿಗಳು ಕೂಡ ಜನರ ಮನಸ್ಸಿನೊಳಗೆ ಪ್ರವೇಶಿಸಿದವು. ಅದೂ ಭಾವನಾತ್ಮಕವಾಗಿ ಪ್ರವೇಶಿಸಿಬಿಟ್ಟವು. ನಮಗೆ ನೆನಪಿರಬೇಕು, ಲಲಿತಕಲೆಗಳು ತಲೆಗೆ ಸಂಬಂಧಪಟ್ಟದ್ದಲ್ಲ. ಅದರ ಗುರಿ ಹೃದಯ. ಅದು ಸಮಾಜದೊಳಗೆ ಪ್ರವೇಶಿಸುವುದೇ ಸಾಂಸ್ಕೃತಿಕ ಪ್ರಭಾವಗಳ ಮೂಲಕ. ಯಾವ ಸಂಸ್ಕೃತಿಯು ನಮ್ಮ ನಿತ್ಯ ಬದುಕಿಗೆ, ಜೀವನಾಧಾರಕ್ಕೆ ಸೊಬಗನ್ನು ಮತ್ತು ಹಿತವನ್ನು ಕೊಡುವುದೋ ಅದನ್ನು ಆಪ್ತಗೊಳಿಸಿಕೊಳ್ಳುತ್ತಾ ಪೀಳಿಗೆ ಪೀಳಿಗೆಗಳೇ ಮುಂದುವರಿಯುತ್ತವೆ.

ಯಾವುದು ಸನಾತನ? ಯಾವುದು ಪುರಾತನ?

ಭಾರತೀಯ ಸಂಸ್ಕೃತಿಯ ಪ್ರತೀಕವೆಂದೇ ಬಿಂಬಿಸಲಾಗುತ್ತಿರುವ ಸೀರೆ ಮೂಲತಃ ಭಾರತದ್ದೇ ಅಲ್ಲ. ಅದು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಚಂದ್ರಗುಪ್ತನ ಗ್ರೀಸಿನ ಹೆಂಡತಿಯೊಡನೆ ಭಾರತವನ್ನು ಪ್ರವೇಶಿಸಿತು. ನಮ್ಮ ಸನಾತನ ಸಂಸ್ಕೃತಿ ಎಂದು ಗಂಟಲು ಹರಿದುಕೊಳ್ಳುವ ಸಂಸ್ಕೃತಿ ರಕ್ಷಕರು ಇದನ್ನು ತಿಳಿದುಕೊಳ್ಳುವುದಿರಲಿ, ಜುಬ್ಬ ಮತ್ತು ಪೈಜಾಮಗಳೂ ಭಾರತದ್ದಲ್ಲ ಪರ್ಶಿಯಾವೇ ಮೊದಲಾದ ಈಗಿನ ಇಸ್ಲಾಂ ನಾಡುಗಳ ಮೂಲದ್ದು ಎಂದೂ ಗೊತ್ತಿಲ್ಲ.

ಮಾರು ಮಾರು ಉದ್ದದ ಬಟ್ಟೆಗಳನ್ನು ತೊಟ್ಟುಕೊಳ್ಳುವುದು ಭಾರತದ ಪ್ರಾಚೀನ ಸಂಸ್ಕೃತಿಯದ್ದಾಗಿರದೇ ಬರಿಯ ಮುಂಡ ಮತ್ತು ತುಂಡು ವಸ್ತ್ರಗಳನ್ನು ಧರಿಸುತ್ತಿದ್ದರು. ಪ್ರೇಮದ ಸಂಕೇತವೆಂದು ಗುರುತಿಸುವ ಗುಲಾಬಿಯನ್ನು ಭಾರತಕ್ಕೆ ಮೊದಲ ಬಾರಿ ಪರ್ಶಿಯಾದಿಂದ ತಂದವನು ಬಾಬರ್. ಅವನೇ ದೇಶದಲ್ಲಿ ಮೊಟ್ಟಮೊದಲ ಗುಲಾಬಿ ತೋಟವನ್ನು ಮಾಡಿಸಿದ್ದು. ಪೋರ್ಜುಗೀಸ್ ಮೂಲದ ಇಡ್ಲಿ ನಮ್ಮ ದೇಶದ್ದಲ್ಲ. ಪರಂಗಿ ಹಣ್ಣು ಮತ್ತು ಟೊಮ್ಯಾಟೋ ಮೊದಲಾದ ಹಣ್ಣು ತರಕಾರಿಗಳು ನಮ್ಮ ಪ್ರಾಚೀನ ಭಾರತದಲ್ಲಿರಲಿಲ್ಲ.

ಭಾರತದ ಮೂಲೆ ಮೂಲೆಗಳಲ್ಲಿ ಬೇಲಿಗಿಡಗಳಾಗಿ ಬೆಳೆದು ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳ ಎಷ್ಟೆಷ್ಟೋ ಸಂಸಾರಗಳಿಗೆ ಆಶ್ರಯತಾಣವಾಗಿದ್ದು, ನಮ್ಮ ನಾಯಿ ನರಿಗಳಿಗೆ ಔಷಧಿಯಾಗಿ ಅಗತ್ಯವಾಗಿ ಬೇಕಾಗಿರುವ ಲಾಂಟಾನದ ಗಿಡಗಳು ನಮ್ಮ ದೇಶದ್ದು ಸುತಾರಾಂ ಅಲ್ಲ. ಪೋರ್ಚುಗೀಸರ ನಾಡಿನಿಂದ ಸಸಿಯಾಗಿ ಬಂದಿದ್ದು. ಆದರೆ ಆ ಗಿಡಗಳಿಲ್ಲದ ಯಾವುದೇ ಹಳ್ಳಿಯನ್ನೂ ನೋಡಲು ಸಾಧ್ಯವಿಲ್ಲ! ಭಾರತದ ಸನಾತನ ಸಂಸ್ಕೃತಿಯೆಂದು ತೊಡುವ ಕಚ್ಚೆ, ಸೀರೆಗಳು ಗ್ರೀಸ್ ದೇಶದ್ದು.

ಅದೇನೇ ಇರಲಿ, ಹೇಳಲು ಹೊರಟಿದ್ದೇನೆಂದರೆ, ಯಾವುದೇ ಸಂಸ್ಕೃತಿಯ ಪ್ರಭಾವ ಮತ್ತು ಕೊಡುಗೆ ಹಿತವೆನಿಸಿದ್ದಲ್ಲಿ ಅವನ್ನು ಆಪ್ತವಾಗಿಸಿಕೊಳ್ಳುವ ಸಮಾಜವು ಅದನ್ನು ತನ್ನದಾಗಿಸಿಕೊಂಡು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು, ಅದನ್ನು ಅನುಕೂಲಕ್ಕೆ ತಕ್ಕಂತೆ ರೂಪಾಂತರಿಸಿಕೊಂಡು ನಡೆಯುತ್ತದೆ. ಮನುಷ್ಯನಿಗೆ ಕೊನೆಗೆ ಬೇಕಾಗಿರುವುದು ಅನುಕೂಲಕರವಾದ ಜೀವನ ಮತ್ತು ಅದರಿಂದ ದೊರಕುವ ನೆಮ್ಮದಿ.

ಹಾಗಾಗಿಯೇ ಸಮಾಜದಲ್ಲಿ ಅನೇಕಾನೇಕ ಹೊರಗಿನ ಪ್ರಭಾವಗಳನ್ನು ಪ್ರತಿರೋಧಿಸದೇ ತನ್ನ ವರ್ತುಲದೊಳಕ್ಕೆ ಬರಲುಬಿಡುವುದು ಮತ್ತು ಅಳವಡಿಸಿಕೊಳ್ಳುವುದು. ಇಲ್ಲಿ ಸರಿ ತಪ್ಪು ಎಂಬುವ ಚರ್ಚೆಯೇ ಬರುವುದಿಲ್ಲ. ಆದರೆ, ಸಾಹಿತ್ಯ, ಲಲಿತಕಲೆಗಳು ಪರೋಕ್ಷವಾಗಿ ಸಮೂಹಗಳಲ್ಲಿ ಪ್ರವೇಶಿಸುತ್ತಾ ವ್ಯಕ್ತಿಗತವಾಗಿ ಮನಸ್ಸುಗಳ ಮೇಲೆ ತಮ್ಮ ಶಾಶ್ವತ ಪ್ರಭಾವಗಳನ್ನು ಬೀರುವುದರ ಬಗ್ಗೆ ಪ್ರಶ್ನೆ ಎತ್ತಬೇಕಿದೆ.

ಏಕೆಂದರೆ ಇಂಥಾ ಲಲಿತಕಲೆಗಳನ್ನು ಬಲ್ಲವರು ತಮ್ಮ ಸಿದ್ಧಾಂತಗಳನ್ನು, ಧೋರಣೆಗಳನ್ನು ಹೇರುವುದಕ್ಕಷ್ಟೇ ಅಲ್ಲ, ಮರುಳು ಮಾಡಲು ಮತ್ತು ಅಧೀನದಲ್ಲಿಟ್ಟುಕೊಳ್ಳಲೂ ಬಳಸಿಬಿಟ್ಟರು. ಅದೇ ಈ ಲಲಿತಕಲಾಕ್ಷೇತ್ರದಲ್ಲಿ ಆದ ಬಹು ದೊಡ್ಡ ಎಡವಟ್ಟು. ಲಲಿತ ಕಲೆಗಳು ಧಾರ್ಮಿಕತೆಯ ಪ್ರಭಾವವನ್ನು ದಟ್ಟವಾಗಿ ಬೀರಿದವು.

ರಾಮ ಭಜನೆ, ಕೃಷ್ಣ ಗೀತೆ

ವ್ಯಕ್ತಿಗತವಾಗಿ ನಾನು ಪ್ರತಿಶತ ನಾಸ್ತಿಕನೇ (ಕಟ್ಟರ್ ಅಲ್ಲ) ಆದರೂ ದೇವರುಗಳಿಗೆ ಸಂಬಂಧಿಸಿದ ಕಲಾಕೃತಿಗಳನ್ನು ಉಡುಗೊರೆಗಳಾಗಿ ಪಡೆದಾಗ ಅವನ್ನು ನಿರಾಕರಿಸಲು ಮನಸ್ಸಾಗುವುದಿಲ್ಲ. ದೇವರನ್ನು ನಂಬದಿದ್ದರೇನಂತೆ ನಾನೊಬ್ಬ ಕಲೋಪಾಸಕ ಎಂಬ ವ್ಯಕ್ತಿಗತ ಒಲವು ಮತ್ತು ನಿಲುವುಗಳು ಗಟ್ಟಿಯಾಗಿರುವುದರಿಂದ ಯಾವ ದೇವರ ಕಲಾಕೃತಿಯನ್ನು ಮತ್ತು ಗೀತೆ ಹಾಗೂ ನೃತ್ಯಗಳನ್ನು ಅಲ್ಲಗಳೆದಿರುವುದು ಅಥವಾ ಖಂಡಿಸಿರುವುದು ನೆನಪೇ ಇಲ್ಲ.

ರಾಮಾಯಣದ ವಿಮರ್ಶೆ ಮಾಡಿದರೂ ಕೂಡ ತುಳಸೀದಾಸರ, ಕಬೀರರ ರಾಮನ ಭಜನೆಗಳನ್ನು ಹಾಡದೇ ಇರಲಾಗುವುದಿಲ್ಲ. ಕೃಷ್ಣನನ್ನು ಓರ್ವ ಬಿಂದಾಸ್ ಕೌಬಾಯ್ ಎಂಬಂತೆ ತಮಾಷೆ ಮಾಡಿದರೂ ಸೂರದಾಸ್, ಮೀರಾಬಾಯಿಯ ಕೃಷ್ಣನ ಭಜನೆಗಳನ್ನು ಹಾಡದೇ ಬಿಡುವುದಿಲ್ಲ. “ಪ್ರೇಮಮುದಿತ ಮನಸೆ ಕಹೋ, ರಾಮ ರಾಮ ರಾಮ್” ಎಂದು ಹಾಡುವಾಗ ಹೆಂಡತಿಯನ್ನು ಕಾಡಿಗಟ್ಟಿದ, ಶಂಭೂಕನನ್ನು ವಧಿಸಿದ, ಸುಗ್ರೀವನಿಗೆ ಶರಸಂಧಾನ ಮಾಡಿದ ರಾಮ ನೆನಪಿಗೇ ಬರುವುದಿಲ್ಲ. ರಾಮ ಎಂದು ವಿರಾಮ ನೀಡುವಂತಹ ಶಬ್ಧ ಅದಾಗಿರುತ್ತದೆ.

ನಾದಮಯವಾಗಿ, ಸ್ವರಸಂಚಾರ ಮಾಡುತ್ತಾ ಸುಲಲಿತವಾಗಿ ನಮ್ಮ ಹೃದಯವನ್ನು ಪ್ರವೇಶಿಸುವ ಸಂಗೀತ ಅದಾಗಿರುತ್ತದೆ. “ಮೇರೆ ತೋ ಗಿರಿಧರ ಗೋಪಾಲ, ದೂಸರೋನ ಕೋಯಿ” ಎಂದು ಮೀರಾಳೊಂದಿಗೆ ಜೊತೆಯಾಗಿ ನಾವೂ ನನಗೆ ಗಿರಿಧರ ಗೋಪಾಲ ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ದನಿಗೂಡಿಸಿಬಿಡುತ್ತೇವೆ. ಆದರೆ ಇದರರ್ಥ ನಾವು ರಾಮನಾರಾಧಕರೋ ಅಥವಾ ಕೃಷ್ಣನಾರಾಧಕರೋ ಆದೆವೆಂದಲ್ಲ.

ಕಬೀರ ಮತ್ತು ತುಳಸೀದಾಸರೇ ಮೊದಲಾದ ಸಂತರು ರಾಮನನ್ನು ತಮ್ಮ ಶ್ರದ್ಧೆಯ ಕುರುಹನ್ನಾಗಿಸಿಕೊಂಡಿದ್ದು, ಸೂರದಾಸ್, ಮೀರಾಬಾಯಿ ಕೃಷ್ಣನಿಗೆ ಶರಣು ಹೋಗಿದ್ದು, ನಾಮದೇವ್, ಚೋಕಾಮೇಲಾ, ತುಕಾರಾಂ, ಜ್ಞಾನದೇವ, ಸಕ್ಕೂಬಾಯಿ, ಸಾವರಿಯೇ ಮೊದಲಾದ ಸಂತರು ಅಚಲವಾದ ಭಕ್ತಿಯನ್ನು ವಿಠಲನಲ್ಲಿ ನೆಲೆಗೊಳಿಸಿದ್ದು, ಸೂಫಿಗಳು ಅಲ್ಲಾಹನಿಗೆ, ಕ್ರೈಸ್ತ ಸಂತರು ಟ್ರಿನಿಟಿ ಪರಿಕಲ್ಪನೆಗೆ ಶರಣಾಗುವುದು ಯಾವುದೂ ತಪ್ಪೆಂದೋ, ಸರಿಯೆಂದೋ ಚರ್ಚಿಸುವ ಅಗತ್ಯವೇ ಇಲ್ಲ. ಏಕೆಂದರೆ ಶರಣರ ಪರಿಕಲ್ಪನೆಯಂತೆ ದೇವರನ್ನು ಕಾಣುವುದಲ್ಲ, ಕಂಡುಕೊಳ್ಳುವುದು.

ಇಷ್ಟದೈವವೆಂಬುದು ಬಸವಣ್ಣನಿಗೆ ಕೂಡಲ ಸಂಗಮನಾಗಿದ್ದರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನ, ಸೂಳೆ ಸಂಕವ್ವಳಿಗೆ ನಿರ್ಲಜ್ಜೇಶ್ವರನಾಗಿರುತಿತ್ತು. ಆದರೆ ಅವರೆಲ್ಲರ ಒಲವು, ನಿಲುವು ಮತ್ತು ಧೋರಣೆಗಳು ಪ್ರಾಮಾಣಿಕವಾಗಿದ್ದವು, ಮುಕ್ತವಾಗಿದ್ದವು, ಮುಗ್ಧವಾಗಿದ್ದವು ಎಂಬುದಷ್ಟೇ ಅಲ್ಲಿ ತೋರುವುದು. ಅವಕ್ಕಷ್ಟೇ ಅಲ್ಲಿ ಮಾನ್ಯತೆ. ಹಾಗಾಗಿಯೇ ಗಿರಿಧರ ಗೋಪಾಲ, ರಾಮ, ಕೂಡಲಸಂಗಮದೇವ, ವಿಠಲರು ಮುಖ್ಯವಾಗದೇ ಮೀರಾ, ಕಬೀರ, ಬಸವ, ತುಕಾರಾಂ ಮುಖ್ಯವಾಗಿರುತ್ತಾರೆ.

ಅವರು ಪ್ರಾಮಾಣಿಕವಾಗಿ ಕಂಡುಕೊಂಡ ಶ್ರದ್ಧೆ ಮತ್ತು ಬದ್ಧತೆಗಳ ಪರಿಕಲ್ಪನೆಯೋ ಅಥವಾ ಕುರುಹುಗಳೋ ಅಥವಾ ಪ್ರೇಮವೋ ಆದಂತಹ ಅವರ ದೈವಗಳೂ ಅವರ ಮೂಲಕ ನಮ್ಮ ಗೌರವಕ್ಕೆ, ಆದರಕ್ಕೆ ಪ್ರಾಪ್ತರಾಗುತ್ತಾರೆ. ಧಾರ್ಮಿಕತೆಯು ಮುಗ್ಗರಿಸಿದ್ದೇ ಸಂಕೇತಗಳನ್ನು ಆರಾಧಿಸುವಲ್ಲಿ ಮತ್ತು ಆ ಸಂಕೇತಗಳನ್ನು ದಾಟದೇ ಹೋದಲ್ಲಿ.

ಪೂಜಾರಿಗಳು ಸಂತರಲ್ಲ

ಹತ್ತಾರು ವರ್ಷಗಳಿಂದ ಸಂಪ್ರದಾಯಬದ್ಧವಾಗಿ ಪೂಜಿಸುತ್ತಾ, ನೇಮ ನಿಷ್ಟೆಗಳಿಂದ ನೈವೇದ್ಯ ಇಡುತ್ತಿದ್ದ ಪೂಜಾರಿಯಿಂದ ಒಂದಗುಳನ್ನೂ ಸೇವಿಸದ ಶಿವ ಲಿಂಗವೊಡೆದು ಬಂದು ಕೋಳೂರಿನ ಕೊಡಗೂಸು ತರುವ ಅನ್ನಕ್ಕೆ ಕೈ ಚಾಚುತ್ತಾನೆ. ಅವಳಿಂದ ಪ್ರಸಾದ ಸೇವಿಸುವ ಕಥೆ ರೂಪಕವೇ ಆದರೂ ಒಂದು ಬಹುದೊಡ್ಡ ಧ್ವನಿಯನ್ನು ಎತ್ತುತ್ತದೆ, ಸಂಪ್ರದಾಯದ ಚೌಕಟ್ಟುಗಳನ್ನು ಒಡೆದು ಬನ್ನಿ ಎಂದು.

ವಿಶೇಷವೆಂದರೆ ಆ ಸಾಂಪ್ರದಾಯಿಕವಾದಂತಹ ಸರಪಳಿಗಳನ್ನು ಕಡಿದುಕೊಳ್ಳುವುದೂ ವೈಚಾರಿಕತೆಯಿಂದ ಅಲ್ಲ, ಮುಗ್ಧತೆಯಿಂದ. ಭಾವುಕತೆಯಿಂದ. ಆಮೇಲೆ ಯಾವಾಗ ಸಂಪ್ರದಾಯದ ನೇಮಮುರಿದ ಸಂಗತಿ ಜನಪ್ರಿಯತೆಯನ್ನೂ ಪಡೆಯುವುದೋ ನಂತರ ಅದೂ ಕೂಡ ಸಂಪ್ರದಾಯದ ಮುಂದುವರಿಕೆಯ ಮತ್ತೊಂದು ಭಾಗವಾಗುತ್ತದೆ. ಅದೊಂದು ದುರಂತ.

ಸಂಪ್ರದಾಯವು ಧರ್ಮವನ್ನು ಕೊಲ್ಲುತ್ತದೆ. ಪರಂಪರೆಯು ಧರ್ಮವನ್ನು ಬೆಳೆಸುತ್ತದೆ. ಬಹಳಷ್ಟು ಜನರಿಗೆ ಸಂಪ್ರದಾಯ ಮತ್ತು ಪರಂಪರೆಯ ವ್ಯತ್ಯಾಸಗಳು ತಿಳಿದಿರುವುದಿಲ್ಲ. ಪರಂಪರೆ ಎಂದು ಮಾತಾಡುತ್ತಾರೆ. ಆದರೆ ಅದರ ಕುರಿತಾದ ಸ್ಪಷ್ಟತೆಗಳು ಇರುವುದಿಲ್ಲ. ಸಂಪ್ರದಾಯಗಳು ಚೌಕಟ್ಟುಗಳನ್ನು ನಿರ್ಮಿಸುತ್ತವೆ. ಅದನ್ನು ಮೀರಿ ಹೋಗದಿರಲು ನಿರ್ಬಂಧವಿಧಿಸುತ್ತದೆ. ಆದರೆ ಪರಂಪರೆಗಳು ಇಂತಹ ಚೌಕಟ್ಟುಗಳಲ್ಲ. ಅವು ಮಾರ್ಗ.

ಮಾರ್ಗದಲ್ಲಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಘನವೆತ್ತ ನಡಿಗೆ ಪರಂಪರೆಯದ್ದಾಗಿರುತ್ತದೆ. ತುಂಬಾ ಸರಳವಾದ ಉದಾಹರಣೆ ನೀಡಬೇಕೆಂದರೆ, ಒಂದು ದೇವರನ್ನು ಹೀಗೇ ಪೂಜಿಸಬೇಕು, ಹೀಗೇ ನಡೆದುಕೊಳ್ಳಬೇಕು, ಇದನ್ನು ಹೊರತಾಗಿ ಬೇರೊಂದು ಹೊಸತನ್ನು ಮಾಡಬಾರದು ಎಂದು ಚೌಕಟ್ಟಿನಲ್ಲಿರುವುದು ಸಂಪ್ರದಾಯವಾದರೆ. ದೇವರನ್ನು ಕಂಡುಕೊಳ್ಳಲು, ಅವನನ್ನು ಆರಾಧಿಸಲು ಸಂತರು, ಸಾಧುಗಳು, ಶರಣರು, ಭಕ್ತರು, ಸೂಫಿಗಳು ತಮ್ಮದೇ ಆದಂತಹ ಮಾರ್ಗವನ್ನು ಹುಡುಕಿಕೊಂಡರು.

ಅವರು ದೈವ ಸಾಕ್ಷಾತ್ಕಾರದ, ಜೀವ ಪ್ರೇಮದ ವಿಷಯಗಳನ್ನು ತಮ್ಮ ನಡೆ ನುಡಿಗಳಲ್ಲಿ, ಆಚಾರ ವಿಚಾರಗಳಲ್ಲಿ ತಮ್ಮದೇ ನೆಲೆಗಟ್ಟಿನ ಪ್ರಭಾವದಲ್ಲಿಯೇ ಪ್ರಾಮಾಣಿಕವಾಗಿ ಅನುಷ್ಟಾನಕ್ಕೆ ತರುತ್ತಿದ್ದರು. ಯಾವುದೇ ಹಿನ್ನೆಲೆಯವರಾದರೂ ಅವರೆಲ್ಲರೂ ದೈವೀ ಸಾಕ್ಷಾತ್ಕಾರದ, ಜೀವಪ್ರೇಮದ ವಿಷಯವನ್ನು ಎತ್ತಿ ಹಿಡಿವ ಪರಂಪರೆಗೆ ಸೇರಿದವರಾಗುತ್ತಾರೆ.

ಯಾವುದೋ ಒಬ್ಬ ಸಂಪ್ರದಾಯಸ್ಥ ಪೂಜಾರಿ, ದೇವಸ್ಥಾನ ಪುರೋಹಿತ ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರದ ಪರಂಪರೆಯಲ್ಲಿ ತನ್ನ ಗುರುತನ್ನು ಮೂಡಿಸಲಾರ. ಆದರೆ ಸಂಪ್ರದಾಯವನ್ನು ಮುರಿದ, ತಮ್ಮ ಶ್ರದ್ಧಾ ಭಕ್ತಿಗಳಿಗೆ, ಒಲವು ನಿಲುವುಗಳಿಗೆ ಬದ್ಧವಾಗಿದ್ದ ಕ್ರಾಂತಿಕಾರರೆಲ್ಲಾ ಪರಂಪರೆಯಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸಿರುತ್ತಾರೆ.

ಆದರೆ ಅವರು ತಮ್ಮ ಜೀವಿತಾವಧಿಯಲ್ಲಿ ನೆಮ್ಮದಿಯಾಗೇನೂ ಇರುವುದಿಲ್ಲ. ಅವರು ಪಡುವ ಪಡಿಪಾಟಲುಗಳಿಗೆ ಅವರು ಸೊರಗಿರುತ್ತಾರೆ. ಹೆಚ್ಚಿನ ಪಾಲು ಅದರಲ್ಲೇ ಭೌತಿಕವಾಗಿ ನಾಶವೂ ಆಗುತ್ತಾರೆ. ಆದರೆ ಅವರ ಚೈತನ್ಯ ಮತ್ತು ಪರಂಪರೆಯಲ್ಲಿ ಉಳಿಸಿದ ಹೆಜ್ಜೆಗುರುತು ಮಾತ್ರ ಸರ್ವಕಾಲಿಕ ಗೌರವಕ್ಕೆ ಪಾತ್ರವಾಗಿಬಿಡುತ್ತದೆ. ಆದರೆ, ಇಲ್ಲೊಂದು ದೊಡ್ಡ ವಿಷಯವಿದೆ. ಇವರನ್ನೆಲ್ಲಾ ತಮ್ಮ ಪ್ರಭಾವದೊಳಕ್ಕೆ ಜನರನ್ನು ಮೂಢರನ್ನಾಗಿಸಿ ಸೆಳೆದುಕೊಳ್ಳುವುದಕ್ಕೆ ಬಳಸಿಕೊಳ್ಳುವುದೂ ಕೂಡ ಮೂಲಭೂತವಾದಿಗಳೇ.

ಸಂಸ್ಕೃತಿ ರಕ್ಷಕರೆಂದು ಬಿಂಬಿಸಿಕೊಳ್ಳುವ ರೋಗಗ್ರಸ್ಥ, ಸಂಕುಚಿತ ಮನಸ್ಥಿತಿಯವರೇ. ಅವರು ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ಬಳಸಿಕೊಳ್ಳುವ ವಿಷಯಗಳನ್ನು ಪ್ರಗತಿಪರರೆಸಿಕೊಳ್ಳುವವರು, ಜಾತ್ಯಾತೀತ ಮನೋಭಾವದವರು ಹಿಂದೊಮ್ಮೆ ತಮ್ಮಂತೆಯೇ ಕ್ರಾಂತಿಯನ್ನು ಬೆಂಬಲಿಸುತ್ತಿದ್ದ ಚೈತ್ಯನ್ಯಗಳನ್ನು ನಿರಾಕರಿಸಿಬಿಡುತ್ತಾರೆ. ಇದರಿಂದ ಅವರೇ ಒಂದು ಕ್ರಾಂತಿಮುಖವಾದ ಪರಂಪರೆಯನ್ನು ಧಿಕ್ಕರಿಸಿ, ‘ನಿರಾಕರಿಸುವಂತಹ’ ಒಂದು ಸಂಪ್ರದಾಯಕ್ಕೆ ಬದ್ಧವಾಗಿಬಿಡುತ್ತಾರೆ.

ಬಹಳಷ್ಟು ಜಾತ್ಯಾತೀತ ಮತ್ತು ಮೌಢ್ಯವಿರೋಧಿಗಳ ಮನಸ್ಥಿತಿ ಇದು. ಸಂಪ್ರದಾಯಸ್ಥರ ಆಕ್ರಮಣ, ಅತಿಕ್ರಮಣ ಮತ್ತು ಬಂಧನಗಳನ್ನು ನಿರಾಕರಿಸುವ ಭರದಲ್ಲಿ ಪ್ರಾಮಾಣಿಕವಾಗಿ ಕ್ರಾಂತಿಯ ಪರಂಪರೆಯಲ್ಲಿ ಮೂಡಿರುವ ಚೈತನ್ಯದ ಹೆಜ್ಜೆಗಳನ್ನೂ ತಳ್ಳಿಹಾಕಿಬಿಡುತ್ತಾರೆ. ಇದರಿಂದ ಪ್ರಗತಿಪರ ಶಕ್ತಿಗಳು ಮತ್ತು ಜಾತ್ಯಾತೀತ ಧೋರಣೆಗಳು ಬೃಹತ್ ಸಮಾಜದ ಯಾವುದೋ ಮೂಲೆಯೊಂದರಲ್ಲಿ ಗೊಣಗುವ ದುರ್ಬಲ ದನಿಗಳಾಗುವವೇ ಹೊರತು ಭಾವನಾತ್ಮಕವಾಗಿ ಜನರನ್ನು ಒಳಗೊಳ್ಳುವುದಿಲ್ಲ. ಸಾಮಾಜಿಕ ಕ್ರಾಂತಿಯ ಹೋರಾಟಕ್ಕೆ ಇದೊಂದು ಪೆಟ್ಟು.

ಏನೇ ಆಗಲಿ, ಪ್ರಾಚೀನ ಗ್ರೀಸ್ ಮತ್ತು ಭಾರತದಲ್ಲಿ ಮಿಥಿಕಗಳು ಮೂಡಿದ ವಿಷಯಗಳಾಗಲಿ, ಮಹಾಕಾವ್ಯಗಳು ಅರಳಿದ ವಿಷಯಗಳಾಗಲಿ, ಮಾತೃಪ್ರಾಧಾನ್ಯತೆ ನಶಿಸುತ್ತಾ ಪಿತೃ ಪ್ರಾಧಾನ್ಯತೆಯು ನುಸುಳುತ್ತಾ ಬಂದಂತಹ ವಿಷಯಗಳಾಗಲಿ ಸಾಧಾರಣವಲ್ಲ. ಅಲಕ್ಷಿಸುವಂತಿಲ್ಲ. ಅವು ನಮ್ಮ ಇಂದಿನ ಸಾಂಸ್ಕೃತಿಕ ರಾಜಕಾರಣವನ್ನು ತಿಳಿದುಕೊಳ್ಳಲು ಅತ್ಯಂತ ಅಗತ್ಯವಾಗಿವೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending