ಅಂತರಂಗ
ಧರ್ಮ ಮರ್ಮ-04 : ಧರ್ಮಶಾಸ್ತ್ರದ ಉಗಮ
- ಯೋಗೇಶ್ ಮಾಸ್ಟರ್
ಧರ್ಮವು ತಾತ್ವಿಕವೋ ಅಥವಾ ಆಧ್ಯಾತ್ಮಿಕವೋ? ಇವನ್ನೂ ಒಳಗೊಂಡು ಮತ್ತು ಇವನ್ನು ಮೀರಿರುವ ಸಂಗತಿಗಳೋ. ಜೈವಿಕ ಅಗತ್ಯ ಮತ್ತು ಸಾಮಾಜಿಕ ವಾಸ್ತವಕ್ಕೆ ಈ ಧರ್ಮವೆನ್ನುವುದು ಬೇಕಾಗಿದೆಯೇ? ಧರ್ಮವೆಂಬ ಅಮೂರ್ತವಾದ ಪರಿಕಲ್ಪನೆಯನ್ನು ಅಥವಾ ಆಂತರಿಕ ಮೌಲ್ಯವನ್ನು ಕಾಪಾಡಲು ಅದರ ಸ್ವರೂಪನ್ನು, ವಿವರಣೆಯನ್ನು, ಅದನ್ನು ಕಂಡುಕೊಳ್ಳಬೇಕಾಗಿರುವ ಅಗತ್ಯವನ್ನು, ಅದನ್ನು ಪಾಲಿಸಬೇಕಾಗಿರುವ ಅವಶ್ಯಕತೆ ಮತ್ತು ಪಾಲಿಸದಿದ್ದರೆ ಆಗುವ ತೊಂದರೆಗಳನ್ನು ಹೇಳಬೇಕು. ಅದಕ್ಕಾಗಿ ಅದನ್ನು ಪಠ್ಯದಲ್ಲಿ ಕಟ್ಟಿಕೊಡುವ ಒಂದು ಅನುಕ್ರಮಣೀಯ ಶಾಸ್ತ್ರಬೇಕು.
ಯಾವಾಗ ಧರ್ಮ ಎಂಬುದು ಶಾಸ್ತ್ರದ ಕಟ್ಟಿನಲ್ಲಿ ಬಂದು ಬಿತ್ತೋ ಅದಕ್ಕೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಅಧಿಕಾರಗಳನ್ನೆಲ್ಲಾ ಹೊರಿಸಲಾಯಿತು. ಅಂತೆಯೇ ಅವೆಲ್ಲದರ ಗುಣಗಳನ್ನೂ ಆರೋಪಿಸಲಾಯಿತು. ಧರ್ಮದ ಆಂತರಿಕ ಮೌಲ್ಯವನ್ನು ತಾತ್ವಿಕವಾಗಿ ಗ್ರಹಿಸುವ ತತ್ವಜ್ಞಾನಿಯದು ಆಯಾಮವಾದರೆ, ಧರ್ಮಶಾಸ್ತ್ರದ ಪಂಡಿತನದು ಮತ್ತೊಂದು ಆಯಾಮ.
ಒಟ್ಟಾರೆ, ತತ್ವಜ್ಞಾನಿಯು ಕತ್ತಲೆಯ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕಿಗಾಗಿ ಹುಡುಕುವ ಕುರುಡನಂತಿದ್ದಾನೆ. ಧರ್ಮಶಾಸ್ತ್ರದ ಪಂಡಿತನು ಕತ್ತಲೆಯ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕಿಗಾಗಿ ಹುಡುಕುತ್ತಿರುವ ಕುರುಡುನಂತಿದ್ದೂ, ಅದನ್ನು ತಾನು ಕಂಡಿರುವುದಾಗಿ ಆಣೆಯಿಟ್ಟು ಹೇಳುತ್ತಿದ್ದಾನೆ. ನಮ್ಮ ಜನ ಈ ಆಣೆಯನ್ನು ನಂಬಿ ಮ್ಯಾಜಿಕ್ ಬಟ್ಟೆಯನ್ನು ತೊಟ್ಟು ಬಂದಿರುವ ರಾಜನ ಪ್ರಜೆಗಳು ಬಟ್ಟೆಯನ್ನು, ಅದರ ಬಣ್ಣಗಳನ್ನು, ವಿನ್ಯಾಸಗಳನ್ನು ವರ್ಣಿಸುತ್ತಾರೆ.
ಗೊತ್ತಲ್ಲಾ, ಒಬ್ಬ ರಾಜನಿಗೆ ಬಟ್ಟೆಯ ಹುಚ್ಚು. ಆತನಿಗೆ ಅದನ್ನು ಬಿಡಿಸಲು ಒಮ್ಮೆ ಮಂತ್ರಿಗಳು ಯಾರೋ ನೇಕಾರರನ್ನು ಕರೆತಂದರು. ಅವರು ನೇಯುವ ಬಟ್ಟೆ ಬುದ್ಧಿವಂತರಿಗೆ ಮಾತ್ರ ಕಾಣುವಂತದ್ದು. ಯಾರಿಗೂ ತಾವು ದಡ್ಡರೆಂದು ಕರೆಯಿಸಿಕೊಳ್ಳಲು ಇಷ್ಟವಿಲ್ಲ. ಆ ನೇಕಾರರು ಖಾಲಿ ಮಗ್ಗ ನೇಯುತ್ತಿದ್ದರೆ ನೋಡುಗರೆಲ್ಲಾ ಅದರ ವಿನ್ಯಾಸ, ಬಣ್ಣ, ಹೊಳಪನ್ನು ಹೊಗಳುತ್ತಿದ್ದರು. ಈ ಬಟ್ಟೆಯನ್ನು ತೊಟ್ಟ ರಾಜ ಬೆತ್ತಲಾಗೇ ಇದ್ದ.
ಆದರೆ ತಾವು ರಾಜ ಬಟ್ಟೆ ತೊಟ್ಟಿಲ್ಲವೆಂದು ಹೇಳಿದರೆ ತಾನು ದಡ್ಡನೆಂದು ಇತರರಿಗೆ ಗೊತ್ತಾಗುವುದೆಂದು ಎಲ್ಲರೂ ತೊಟ್ಟಿರದ ಬಟ್ಟೆಯನ್ನು ಹೊಗಳುವವರೇ. ಯಾವುದೋ ಒಂದು ಮಗುವು ಮಾತ್ರ ರಾಜನು ಬೆತ್ತಲಾಗಿದ್ದಾನೆಂದು ನೇರವಾಗಿ ಹೇಳಿತು. ನಂತರ ಅದು ಎಲ್ಲರೂ ಒಪ್ಪತೊಡಗಿದರು. ನಂತರ ನಾಚಿಕೆಯಿಂದ ರಾಜ ಮನೆ ಓಡಿದ. ಇದೊಂದು ಅತ್ಯಂತ ಸುಂದರವಾದ ಕಥೆ.
ನಮ್ಮ ಪುರಾಣಿಕರೂ ಕೂಡ ಅದೇನನ್ನೋ ತೋರಿಸುತ್ತಾ ವರ್ಣಿಸುತ್ತಿರುತ್ತಾರೆ. ನಮ್ಮವರೆಲ್ಲಾ ಅದೆಲ್ಲಾ ಅರ್ಥವಾಗಿರುವ ಹಾಗೆ ತಲೆದೂಗುತ್ತಾ ಒಪ್ಪುತ್ತಿರುತ್ತಾರೆ. ಅತ್ಯಂತ ಜ್ಞಾನಿಯೆಂದು ಕಾಣುವ ಆತನ ಮಾತನ್ನು ನಿರಾಕರಿಸಿದರೆ ತಾನು ದಡ್ಡನೆಂದು ನಿರೂಪಿತವಾಗುತ್ತದೆ ಎಂಬ ಭಯ. ನನ್ನ ಗೆಳೆಯ ಇಂಗ್ಲೀಷ್ ಸಿನಿಮಾ ನೋಡುವಾಗ ಯಾವುದಾದರೂ ಸಂಭಾಷಣೆಗೆ ಅಕ್ಕಪಕ್ಕದವರು ನಕ್ಕರೆ ಅವನೂ ನಗುತ್ತಿದ್ದ. ಏಕೆಂದರೆ ಇವನಿಗೆ ಇಂಗ್ಲೀಷ್ ಬಾರದು ಎಂದು ತಿಳಿಯಬಾರದಲ್ಲಾ. ಯಾರಿಗಾದರೂ ತಿಳಿದರೂ ಅಲ್ಲಿರುವವರಲ್ಲಿ ‘ಯಾಕಯ್ಯಾ ನೀನು ನಗಲ್ಲಾ, ಯಾಕಯ್ಯಾ ಇಂಗ್ಲೀಷ್ ಕಲಿತಿಲ್ಲ’ ಎಂದು ಯಾರೂ ಕೇಳುವುದಿಲ್ಲ. ಆದರೂ ಇವನಿಗೇ ಕೀಳರಿಮೆ.
ತನಗೂ ಜ್ಞಾನವಿದೆ ಎಂದು ಪ್ರದರ್ಶಿಸುವ ಹುಸಿ ಪ್ರತಿಷ್ಟೆ. ಈ ಬಗೆಯಲ್ಲಿ ತಮಗೆ ತೋಚಿದಂತೆ ಹೇಳಿ ಇದೇ ಸತ್ಯ ಎಂದು ಸಾಧಿಸುವವರ ಸಾಧನೆ ಎಂದರೆ ಧರ್ಮದ ಅಪವ್ಯಾಖ್ಯಾನಗಳು. ಹಾಗಾದರೆ ತಮಗೆ ಏನು ತೋಚುತ್ತದೆಯೋ, ತಮ್ಮ ಗ್ರಹಿಕೆಗೆ ಎಟುಕುತ್ತದೆಯೋ, ತಮ್ಮ ಅಧ್ಯಯನದ ಅರಿವಿಗೆ ನಿಲುಕುತ್ತದೆಯೋ ಅದನ್ನು ಹೇಳಬಾರದೇ? ಹೇಳಬೇಕು. ಆದರೆ ಅದೇ ಸತ್ಯವೆಂದು ಮತ್ತು ಅಂತಿಮವೆಂದು ನಂಬಬಾರದು ಮತ್ತು ನಂಬಿಸಲು ಹೋಗಬಾರದು. ಸತ್ಯವೆಂದು ಮತ್ತು ಅಂತಿಮವೆಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಯಾವುದನ್ನೂ ನಿರುಕಿಸಲಾಗದು. ಏಕೆಂದರೆ ಯಾವುದು ಸಜೀವವಾಗಿರುವುದೋ ಅದು ಬೆಳೆಯುತ್ತದೆ, ಅರಳುತ್ತದೆ, ವಿಕಾಸವಾಗುತ್ತಿರುತ್ತದೆ. ಬೆಳವಣಿಗೆ ಅಥವಾ ಪ್ರಗತಿ ಜೀವಂತಿಕೆಯ ಲಕ್ಷಣ.
ಧರ್ಮವಾಗಲಿ, ಸಂಸ್ಕೃತಿಯಾಗಲಿ, ಮೌಲ್ಯಗಳಾಗಲಿ; ಅವುಗಳನ್ನು ಜೀವಂತಿಕೆಯಿಂದಿರಿಸಿಕೊಳ್ಳಬೇಕೆಂದರೆ ಅವುಗಳು ವಿಕಾಸವಾಗಲು ಅವಕಾಶಕೊಡಬೇಕು. ಅವುಗಳ ಬೆಳವಣಿಗೆಯನ್ನು ಗೌರವಿಸುವ ಮನಸ್ಥಿತಿಯನ್ನು ನಮ್ಮದಾಗಿಸಿಕೊಳ್ಳಬೇಕು. ಅಂದೆಂದೋ ಕಾಲದ್ದು ಇಂದಿಗೂ ನಮಗೆ ಹಾಗೆಯೇ ಪ್ರಾಯೋಗಿಕವಾಗಿರಬೇಕೆಂದರೆ ಬದಲಾದ ಕಾಲಘಟ್ಟದಲ್ಲಿ ಅದು ಉಸಿರುಗಟ್ಟಿಸುತ್ತದೆ.
ನಾನು ಮೂರರ ಪ್ರಾಯದಲ್ಲಿದ್ದಾಗ ತೊಟ್ಟ ಬಟ್ಟೆಗಳು ಸುಸ್ಥಿತಿಯಲ್ಲಿವೆ ಎಂದಿಟ್ಟುಕೊಳ್ಳಿ. ಅದನ್ನು ನೋಡಿದಾಗ ನಾನೇ ಆಗ ತೊಡುತ್ತಿದ್ದ ಬಟ್ಟೆಗಳಿವು ಎಂಬ ಪ್ರಾಚ್ಯಗೌರವದಿಂದ ಅವನ್ನು ನೋಡುತ್ತೇನೆ.
ಹಾಗೆಯೇ ಅದನ್ನು ಮುಟ್ಟಿದಾಗ, ಸೋಕಿಸಿಕೊಂಡಾಗ ಮಧುರವಾದ ಭಾವನೆಗಳು ಉಂಟಾಗುತ್ತದೆ. ಒಟ್ಟಾರೆ ಅದರ ಮೇಲೆ ಏನೋ ವಿಶೇಷ ಅಭಿಮಾನವಿರುತ್ತದೆ. ಆದರೆ, ಅದನ್ನು ಈಗ ನಾನು ತೊಡಬೇಕೆಂದರೆ ಸಾಧ್ಯವೇ ಆಗದು. ಬಟ್ಟೆಯೆಂಬ ಭೌತಿಕ ವಸ್ತುವಿನಂತೆ ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪಿಸಿಕೊಂಡಿರುತ್ತೇವೆ. ತಾತ್ವಿಕವಾದ ಚಿಂತನೆಗಳು ಮೂಡಿರುತ್ತವೆ. ಆದರೆ, ಬದಲಾದ ಕಾಲಘಟ್ಟದ ವ್ಯವಸ್ಥೆಗೆ ತಕ್ಕಂತೆ ತಾತ್ವಿಕತೆಯೂ ಕೂಡಾ ರೂಪಾಂತರ ಹೊಂದದಿದ್ದರೆ ಹೇರಿಕೆಯಾಗಿ ಪರಿಣಮಿಸುತ್ತದೆ.
ಇದರ ಕಾಳಜಿ ಧರ್ಮವನ್ನು ಪ್ರತಿಪಾದನೆ ಮಾಡುವವರಿಗೆ ಖಂಡಿತ ಇರಬೇಕಾಗುತ್ತದೆ. ಇದನ್ನು ಪ್ರಾಯೋಗಿಕ ತತ್ವವಾಗಿ ಮನಗಂಡ ಡಿ ವಿ ಜಿ ಹೇಳುವುದು ಹೀಗೆ.
ಹೊಸ ಚಿಗುರು ಹಳೇಬೇರು ಕೂಡಿರಲು ಮರಸೊಬಗು, ಹೊಸ ಯುಕ್ತಿ ಹಳೇ ತತ್ವದೊಡಗೂಡೆ ಧರ್ಮ,
ಋಷಿವಾಕ್ಯದೊಡನೆ ವಿಜ್ಞಾನ ಕಲೆಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ.
ಹಳತಿನ ಬೇರಿನ ಮೇಲೆ ವಿಕಾಸವಾಗುವ ಹೊಸ ಚಿಗುರನ್ನು ಕಾಣುವ ಕ್ರಮವನ್ನೇ ಧರ್ಮ ಎಂದು ಹೇಳುವರು.
ಆಂತರಿಕವಾಗಿ ನೋಡಿದಾಗ ಧರ್ಮವೆಂದರೆ ಸ್ವಭಾವವೇನೋ ಸರಿ. ಆದರೆ ಸಾಮಾಜಿಕ ವಾಸ್ತವದಲ್ಲಿ ಅದನ್ನು ಕ್ರಮವಾಗಿ ನೋಡುವ ಅಗತ್ಯವಿದೆ. ಆದರೆ ಕ್ರಮವೆಂದು ನಿರ್ಧರಿಸುವವರು ಯಾರು? ಸಮಾಜವೆಂಬುದು ವೈವಿದ್ಯಮಯವಾದ ಜನರ ಸಮೂಹವಾಗಿದೆ.
ವಿವಿಧ ಜನರಲ್ಲಿ ಯಾವ ಜನ ಸಮಾಜಕ್ಕೆ ಧರ್ಮವನ್ನು ಅಂದರೆ ಪರಮೋಚ್ಛ ಕ್ರಮವನ್ನು ವಿಧಿಸುವುದು? ವಸ್ತುವೊಂದರ ಸ್ವಭಾವವು ತನ್ನ ನಡವಳಿಕೆ ಮತ್ತು ವರ್ತನೆಗಳಲ್ಲಿ ಪ್ರಕಟವಾಗುವಂತೆ, ಜನರು ಎಂದು ಕರೆಯಿಸಿಕೊಳ್ಳುವ ಜೀವಿಗಳಿಗೂ ಅವರದೇ ಧರ್ಮವಿದೆ. ಅದಕ್ಕೆ ತಕ್ಕಂತೆ ಕ್ರಮವೂ ಕೂಡಾ ನೇಮವಾಗಬೇಕು.
ಅಂದರೆ ಧರ್ಮಕ್ಕೆ ಶಾಸ್ತ್ರವೊಂದು ಬೇಕು ಮತ್ತು ಅದನ್ನು ವಿಧಿಸಬೇಕು. ಅದನ್ನು ವಿಧಿಸುವವರು ಯಾರು? ಇಲ್ಲಿ ಧರ್ಮವನ್ನು ಶಾಸ್ತ್ರದ ರೂಪದಲ್ಲಿ ಪಠ್ಯ ಮಾಡುವವರೊಬ್ಬರು ಬೇಕಾಗಿದ್ದಾರೆ. ಆ ಅಧಿಕಾರವನ್ನು ಪಡೆಯುವವರು ಧರ್ಮದ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಧರ್ಮದ ಉಲ್ಲಂಘನೆಯಾಗಬಾರದು; ಇವೆಲ್ಲಾ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.
ಧರ್ಮವನ್ನು ಶಾಸ್ತ್ರವಾಗಿ ಪಠ್ಯಕ್ಕೆ ಒಳಪಡಿಸುವವರ ಗಟ್ಟಿಗತನದ ಮೇಲೆ ಸಮಾಜದಲ್ಲಿ ಅವರ ವಿಕ್ರಮ ಕಹಳೆ ಮೊಳಗುತ್ತದೆ. ಅಲ್ಲಿಂದ ನಿರ್ಬಲರ ಮೇಲೆ ಸಬಲರ ಧರ್ಮಶಾಸ್ತ್ರದ ಕಟ್ಟಳೆಗಳು ಶೋಷಣೆ ಮಾಡಲಾರಂಭಿಸುತ್ತದೆ.
ಧರ್ಮಶಾಸ್ತ್ರಗಳನ್ನು ವಿಭಾಗಿಸುವುದಾದರೆ ಪುರಾಣ ಧರ್ಮಶಾಸ್ತ್ರ, ನಾಗರಿಕ ಧರ್ಮಶಾಸ್ತ್ರ ಎಂದು ಸ್ಪಷ್ಟವಾಗಿ ಗ್ರೀಕರು ಗುರುತಿಸಿದರೆ ಮತ್ತು ನಿಸರ್ಗ ಧರ್ಮಶಾಸ್ತ್ರವೆಂಬ ಒಂದು ಅಧ್ಯಯನ ಶಾಖೆಯನ್ನು ಪ್ಲೇಟೋ ಗುರುತಿಸಿದನು. ಪುರಾಣ ಧರ್ಮಶಾಸ್ತ್ರ ಎಂದರೆ ದೇವಾನುದೇವತೆಗಳ ಕಥೆಗಳು ಮತ್ತು ಕಾವ್ಯಗಳು.
ನಾಗರಿಕ ಧರ್ಮಶಾಸ್ತ್ರವೆಂದರೆ ಗ್ರೀಕರ ಪ್ರಕಾರ ಪ್ರಭುತ್ವದ ಸಮೃದ್ಧಿ – ಅರಕೆಗಳನ್ನು, ಕಾರ್ಯಕ್ರಮಗಳನ್ನು, ಅವಕ್ಕೆ ಸಂಬಂಧಿಸಿರುವಂತಹ ಆಚರಣೆಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ನಿಸರ್ಗ ಧರ್ಮಶಾಸ್ತ್ರದಲ್ಲಿ ದೈವ ಮತ್ತು ದೈವಿಕತೆಯ ಬಗೆಗಿನ ತತ್ವಗಳಿದ್ದು ಅದು ನಿಸರ್ಗ ಸಿದ್ಧಾಂತದ ಅಭಿನ್ನ ಅಂಗವಾಗಿದೆ.ಅದು ಮುಂದಿಡುವ ಮೂರು ಸಿದ್ಧಾಂತಗಳೆಂದರೆ,
- ದೇವರಿದ್ದಾನೆ ಮತ್ತು ನಾವು ಯಾವುದನ್ನು ನಿಸರ್ಗ ಅಥವಾ ವಿಶ್ವವೆನ್ನುತ್ತೇವೆಯೋ ಅದಕ್ಕೆ ಅವನೇ ಕರ್ತೃವಾಗಿದ್ದಾನೆ.
- ದೇವರು ನಿಸರ್ಗ ಸಮಸ್ತವನ್ನೂ ನಿಯಂತ್ರಿಸುತ್ತಾನೆ.
- ಮಾನವ ಕೋಟಿಯ ಮೇಲೆ ದೇವರ ಪ್ರಭುತ್ವವಿದೆ. ಆತನ ನ್ಯಾಯ ನೀತಿಯೇ ಉತ್ತಮೋತ್ತಮವಾದದ್ದು.
ಇದಕ್ಕೆಲ್ಲಾ ಹೊರತಾಗಿ ಅಂತಃಪ್ರೇರಣೆಯನ್ನು ಅನುಸರಿಸುವ ಸ್ವಧರ್ಮಶಾಸ್ತ್ರವೂ ಇದೆಯೆಂಬುದನ್ನು ಧರ್ಮಗಳು ಮಾಡುವ ಶೋಷಣೆಯನ್ನು ವಿರೋಧಿಸುವ ಅಂಬೇಡ್ಕರ್ ಕೂಡ ತಾತ್ವಿಕವಾಗಿ ಒಪ್ಪುತ್ತಾರೆ.
ಆದರೆ ಧರ್ಮವೆಂಬುದನ್ನು ನೈತಿಕತೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ನಿರ್ಧಾರ, ವ್ಯಕ್ತಿಗತ ನಂಬಿಕೆ, ಆಧ್ಯಾತ್ಮಿಕತೆ; ಹೀಗೆ ಎಲ್ಲವನ್ನೂ ಕಲಸು ಮೇಲೋಗರ ಮಾಡಿ ಯಾವುದಕ್ಕೂ ಸ್ಪಷ್ಟತೆಯಿಲ್ಲದೇ ಹೋಗಿರುವ ಸಾರ್ಥಕತೆ ನಮ್ಮ ಹುಸಿಪ್ರತಿಷ್ಟೆಯ ವಿವರಣೆಕಾರರಿಗಿದೆ.
ಬ ಛತ್ರಿಯಡಿಯಲ್ಲಿ ತನ್ನೆಲ್ಲಾ ಪೀಳಿಗೆಗಳು ಹಿತವಾಗಿ ಬದುಕುವ ಅತ್ಯಾಸೆಯಿಂದ, ಶ್ರೇಷ್ಟತೆಯ ಗೀಳಿನಿಂದ ಏನೆಲ್ಲ ಆಗಬಹುದೆಂದು ಮನುಸ್ಮೃತಿ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.
ಮನುಸ್ಮೃತಿಯಲ್ಲಿ ಹೇಳುವಂತೆ (8.374) ಉನ್ನತ ವರ್ಣದ ರಕ್ಷಿತ ಅಥವಾ ಅರಕ್ಷಿತ ಸ್ತ್ರೀಯೊಡನೆ ಸಂಭೋಗ ಮಾಡಿದ ಶೂದ್ರನಿಗೆ ಆತನ ಜನನಾಂಗವನ್ನು ಛೇದಿಸಬೇಕು ಅಥವಾ ಮರಣದಂಡನೆ ವಿಧಿಸಬೇಕು.
ಆದರೆ ಬ್ರಾಹ್ಮಣರು ತಮ್ಮನ್ನು ಭೂದೇವರೆಂದು, ಪೃಥ್ವಿಪತಿಗಳೆಂದು ಇದೇ ಮನುವಿನಿಂದ ಕರೆಸಿಕೊಂಡವರು ತಮಗೆ ಇತರ ವರ್ಗದ ಹೆಂಗಸರೊಡನೆ ಕೂಡುವ ಲೈಂಗಿಕ ಹಕ್ಕು ಇದೆಯೆಂದು ವಾದಿಸುತ್ತಿದ್ದರು. ಇದಕ್ಕೆ ರಾಣಿಯೂ ಕೂಡ ಹೊರತಾಗಿರಲಿಲ್ಲ. ಕ್ರಿ.ಶ. 1502 ರಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದ ಲುಡೊವಿಕೋ ಡಿ ವರ್ತೆಮಾ ಕಲ್ಲಿಕೋಟೆ ಬ್ರಾಹ್ಮಣರ ಬಗ್ಗೆ ಈ ಸಂಗತಿಯನ್ನು ದಾಖಲು ಮಾಡಿದ್ದಾನೆ.
ಬ್ರಾಹ್ಮಣರು, ಅರ್ಚಕರು ಹಾಗೆಯೇ ಧರ್ಮದ ಪ್ರಮುಖ ವ್ಯಕ್ತಿಗಳ ಪೈಕಿ ಅತ್ಯಮೂಲ್ಯ ಹಾಗೂ ಅತ್ಯಂತ ಗೌರವಾನ್ವಿತರನ್ನು ಆರಿಸಿ ಆಕೆಯ ಕನ್ಯತ್ವ ಕಳೆಯಲೆಂದು ಆಕೆಯೊಡನೆ ಮೊದಲರಾತ್ರಿ ಮಲಗುವಂತೆ ಮಾಡುತ್ತಿದ್ದರು.
ಹ್ಯಾಮಿಲ್ಟನ್ ದಾಖಲು ಮಾಡಿರುವ ವಿಚಾರವನ್ನು ಗಮನಿಸಿ. ಸಾಮೋರಿನ್ ಮದುವೆಯಾದಾಗ ನಂಬೂರಿ (ನಂಬೂದರಿ ಬ್ರಾಹ್ಮಣ) ಅಥವಾ ಮುಖ್ಯ ಅರ್ಚಕರು ಭೋಗಿಸುವವರೆಗೆ ವರನು ತನ್ನ ವಧುವನ್ನು ಸೇರುವಂತಿರಲಿಲ್ಲ. ಏಕೆಂದರೆ ಆಕೆಯ ಮೊದಲ ಫಲಗಳು ಅವಳು ಪೂಜಿಸುವ ದೇವರಿಗೆ ಸಲ್ಲಬೇಕಿತ್ತು.
1869ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಕರೊಸವದಾಸ್ ಮೂಲ್ಜಿ ಎಂಬುವವರ ವಿರುದ್ಧ ಅರ್ಚಕರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಏಕೆಂದರೆ ಮುಂಬೈ ಪ್ರಾಂತ್ಯದಲ್ಲಿ ವೈಷ್ಣವ ಕುಲದ ಅರ್ಚಕರ ಕುಲದ ಎಲ್ಲ ಹೆಂಗಸರ ಕನ್ಯತ್ವ ಕಳೆಯುವ ಹಕ್ಕು ಕೇಳಲಾಗಿತ್ತು. ಹೆಚ್ಚೂ ಕಡಿಮೆ 1869ರವರೆಗೂ ಮೊದಲರಾತ್ರಿಯ ಹಕ್ಕು ನಿರಂತರವಾಗಿ ರೂಢಿಯಲ್ಲಿತ್ತು. ಅದಾದ ನಂತರ ಬ್ರಾಹ್ಮಣರು ಯಾವುದೇ ಜಾತಿಯ ಹೆಣ್ಣನ್ನು ಲೈಂಗಿಕ ಕ್ರಿಯೆಗಾಗಿ ಬಳಸಿಕೊಳ್ಳುವ ಹಕ್ಕು ಕ್ಷೀಣಿಸುತ್ತಾ ಬಂದಿತು.
ದಾನ ದಕ್ಷಿಣೆಗಳನ್ನು ತಮ್ಮ ಅಧಿಕಾರದಂತೆ ನಿಗದಿತವಾಗಿ ಪಡೆಯುತ್ತಿದ್ದ ಬ್ರಾಹ್ಮಣರು ಶೂದ್ರರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಿದ್ದರು. ಆದರೆ ಅವರ ಪ್ರಕಾರ ವೈಶ್ಯರು ಕೇವಲ ತಮ್ಮ ದೈವೀದತ್ತವಾದ ಕರ್ತವ್ಯವನ್ನು ಮಾಡುತ್ತಿದ್ದಾರೆ. ಕ್ರಿಸ್ತಪೂರ್ವ 350ರ ಅರ್ಥಶಾಸ್ತ್ರದಲ್ಲಿಯೇ ಹೇಳಿದೆ, ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು ವೈಶ್ಯರ ಹಕ್ಕೆಂದು.
- ಕ್ರಿಸ್ತಶಕ 150ಯ ಮನುಸ್ಮೃತಿಯು ಇನ್ನೂ ಮುಂದುವರಿದು ಹೇಳುತ್ತದೆ, ಬ್ರಾಹ್ಮಣರಿಗೆ ತಿಂಗಳಿಗೆ 2%, ಕ್ಷತ್ರಿಯರಿಗೆ 3%, ವೈಶ್ಯರಿಗೆ 4% ಮತ್ತು ಶೂದ್ರರಿಗೆ5% ಬಡ್ಡಿಯನ್ನು ವಿಧಿಸಬೇಕು ಎಂದು. ವಾರ್ಷಿಕವಾಗಿ ಲೆಕ್ಕಿಸಿದರೆ, ಬ್ರಾಹ್ಮಣರಿಗೆ ಶೇಕಡಾ 24 ಆದರೆ, ಶೂದ್ರ ಅಥವಾ ದಲಿತರಿಗೆ ಶೇಕಡಾ 60 ಬಡ್ಡಿಯಾಗುತ್ತದೆ.
- ಮನುಸ್ಮೃತಿ (8.20) ಹುಟ್ಟು ಮಾತ್ರದಿಂದ ಬ್ರಾಹ್ಮಣನಾದವನೂ (ಅಂದರೆ ವಿದ್ಯೆ ಇಲ್ಲದಿರಲಿ, ಯಾವುದೇ ವೇದೋಕ್ತ ಕ್ರಿಯೆ ಮಾಡಿರದವನು) ರಾಜನಿಗೆ ಧರ್ಮ ಪ್ರವಚನ ಹೇಳಬಹುದು.
(8.272) ಶೂದ್ರನು ದರ್ಪದಿಂದ ಬ್ರಾಹ್ಮಣನಿಗೆ ಧರ್ಮೋಪದೇಶ ಮಾಡಲು ಹೊರಟರೆ ರಾಜನು ಅವನ ಮುಖ, ಕಿವಿಗಳಿಗೆ ಕಾದ ಎಣ್ಣೆ ಸುರಿಯಬೇಕು. - (3.156) ವೇದವನ್ನು ಕದ್ದು ಕೇಳಿದ ಅಥವಾ ಉಚ್ಚರಿಸಿದ ಶೂದ್ರನ ನಾಲಿಗೆಯನ್ನು ಸೀಳಬೇಕು. ಕಿವಿಗೆ ಕಾದ ಸೀಸೆ ಸುರಿಯಬೇಕು ಎಂದು ರಾಜನಿಗೆ ಕಾತ್ಯಾಯನು ವಿಧಿಸುತ್ತಾನೆ.
ಇಂಥಾ ವ್ಯವಸ್ಥೆಯನ್ನು ಬ್ರಾಹ್ಮಣರು ಕಟ್ಟಿಕೊಳ್ಳುವಂತಹ ಶಾಸ್ತ್ರವನ್ನು ರಚಿಸುವ ಪ್ರಮೇಯಕ್ಕೂ ಕಾರಣಗಳು ಇಲ್ಲದಿಲ್ಲ. ತನ್ನ ಕೆಲಸದಿಂದ ವರ್ಣ ಅಥವಾ ಜಾತಿಯನ್ನು ಗುರುತಿಸುವ ರೂಢಿಯಿದ್ದ ಆಗಿನ ಸಮಾಜದಲ್ಲಿ, ಅದರಲ್ಲೂ ವೇದಗಳನ್ನು ಧಿಕ್ಕರಿಸಿ ಅಥವಾ ಪರ್ಯಾಯವಾಗಿ ಚಿಂತನೆಗಳನ್ನು ಮಾಡಿದ್ದ ಋಷಿಗಳಿಂದ ಉಪನಿಷತ್ತುಗಳು ರಚಿತವಾದವು. ಉಪನಿಷತ್ತುಗಳ ಕಾಲದಲ್ಲಿ ವರ್ಣವ್ಯವಸ್ಥೆಯ ವಿರುದ್ಧವಾದಂತಹ ಕ್ರಾಂತಿಕಾರಕ ನಡೆಗಳು ಉಂಟಾದವು.
ಕ್ರಾಂತಿಕಾರಕ ಉಪನಿಷತ್ತುಗಳು
ಛಾಂದೋಗ್ಯೋಪನಿಷತ್ತಿನ ಸತ್ಯಕಾಮ ಜಾಬಾಲಿಯ ಪ್ರಕರಣವನ್ನು ಗಮನಿಸಿದರೆ, ಸತ್ಯಕಾಮನೆಂಬ ಎದೆಯ ಮೇಲೆ ಯಜ್ಞೋಪವೀತವಿಲ್ಲದ ಬಾಲಕನು, ವಿದ್ಯಾಭ್ಯಾಸದ ಅಧಿಕಾರವನ್ನು ಹೊಂದಿರುವ ಬ್ರಾಹ್ಮಣ ಗುರುಕುಲದ ಮುಖ್ಯಸ್ಥನಾದ ಗೌತಮನ ಬಳಿಗೆ ಬರುತ್ತಾನೆ. ತನ್ನ ವಿದ್ಯಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾನೆ. ಆಗ ಗೌತಮನು ಆತನ ಗೋತ್ರವನ್ನೂ, ತಂದೆಯ ಹೆಸರನ್ನೂ ಕೇಳುತ್ತಾನೆ.
ಇದರ ಅರಿವಿರದಿದ್ದ ಸತ್ಯಕಾಮ ತನ್ನ ತಾಯಿ ಜಬಲಾಳ ಬಳಿಗೆ ಬಂದು ಇದರ ಕುರಿತು ವಿಚಾರಿಸಿದಾಗ, “ಮಗನೇ ನಾನು ದಾಸಿಯಾಗಿ ಹಲವು ಯಜಮಾನರಿಗೆ ಸೇವೆ ಮಾಡುತ್ತಿದ್ದೆ, ಹೀಗೆ ಯಾರಿಗೋ ಹುಟ್ಟಿದ ಮಗ ನೀನು.ನನಗೂ ಕೂಡ ನಿರ್ಧಿಷ್ಟವಾಗಿ ನಿನ್ನ ತಂದೆ ಯಾರೆಂದು ತಿಳಿಯದು” ಎಂದು ಹೇಳಿ “ನಾನು ನಿನ್ನ ತಾಯಿ. ಅದು ಸತ್ಯ. ನೀನು ಸತ್ಯಕಾಮ ಜಬಾಲ” ಎಂದು ಹೇಳಿ ಕಳುಹಿಸುತ್ತಾಳೆ. ಮಗನು ತಾಯಿಯ ಮಾತಿನಂತೆಯೇ ಬಂದು ಗುರು ಗೌತಮನ ಮುಂದೆ ಹೇಳಿದಾಗ ಗೌತಮನಿಗೆ ಅತ್ಯಾನಂದವಾಗುತ್ತದೆ.
ಅವನು ಹೇಳುವಂತೆ “ಯಾರು ಸತ್ಯವನ್ನು ಹೇಳುತ್ತಾರೋ ಅವರೇ ಬ್ರಾಹ್ಮಣ” ಎಂದು ಬಾಲಕ ಮತ್ತು ಅವನ ತಾಯಿಯ ಸತ್ಯವಂತಿಕೆಯ ಆಧಾರದ ಮೇಲೆ ಬ್ರಾಹ್ಮಣನೆಂದು ಗುರುತಿಸುತ್ತಾನೆ. ಮಹಾಭಾರತದ ವನಪರ್ವದಲ್ಲಿಯೂ ಕೂಡ ಸ್ಪಷ್ಟವಾಗಿ ಬ್ರಾಹ್ಮಣಿಕೆಯ ಆಧಾರವನ್ನು ಗುರುತಿಸುತ್ತಾರೆ.
ಯಾರೊಬ್ಬನೂ ತನ್ನ ಜನ್ಮದಿಂದಾಗಲಿ, ವೇದಾಧ್ಯಯದಿಂದಾಗಲಿ, ಉಪನಯನಾದಿ ಸಂಸ್ಕಾರದಿಂದಾಗಲಿ ಬ್ರಾಹ್ಮಣನಲ್ಲ. ಅವನ ಸದಾಚಾರದಿಂದ ಮಾತ್ರವೇ ಬ್ರಾಹ್ಮಣನಾಗುತ್ತಾನೆ ಎಂದು.
ಹೀಗೆ ತಮ್ಮ ಕಾಯಕ ಮತ್ತು ಆಚಾರ ವಿಚಾರಗಳಿಂದ ಎಲ್ಲರೂ ಬ್ರಾಹ್ಮಣರಾಗುತ್ತಾ ಹೋದರೆ ಹೇಗೆ? ಈ ಭಯ ಬ್ರಾಹ್ಮಣವಾದಿಗಳಿಗಿತ್ತು. ವೈದಿಕಾಚರಣೆಗಳಿಗೆ ವಿರುದ್ಧವಾಗಿಯೇ ಉಪನಿಷತ್ತುಗಳು ನಿಲುವನ್ನು ತಳೆದಿದ್ದವು. ವೇದವನ್ನು ಅನುಸರಿಸುವವರಿಗೆ ಮಾತ್ರವೇ ಯಜ್ಞ ಯಾಗಾದಿಗಳು ಇದ್ದಿದ್ದು. ಉಪನಿಷತ್ತಿನ ಋಷಿಗಳಿಗಲ್ಲ. ಈಶವಾಸ್ಯೋಪನಿಷತ್ತಿನ ದ್ರಷ್ಟಾರನಾದ ವಾಮದೇವನೆಂಬ ಋಷಿ ತನ್ನ ಜೀವಿತದಲ್ಲಿ ಯಾವ ಯಜ್ಞ ಯಾಗಾದಿಗಳಿಂದ ಸಮಯ ವ್ಯಯಿಸದೇ ಮರಗಳನ್ನು ನೆಡುತ್ತಲೇ ಬಂದಿದ್ದವನು.
ಬೃಹದಾರಣ್ಯಕೋಪನಿಷತ್ತಿನಲ್ಲಿ ಶ್ವೇತಕೇತು ದನಗಳನ್ನು ಮೇಯಿಸುತ್ತಿದ್ದ. ಬ್ರಾಹ್ಮಣರಲ್ಲಿ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದ ಮತ್ತು ಮಹಿಳೆಯರನ್ನು ಕಟ್ಟುಪಾಡುಗಳಿಂದ ಬಂಧಿಸಿರುವಾಗ ಗಾರ್ಗಿ ಮತ್ತು ಮೈತ್ರೇಯಿಗಳೆಂಬ ಹೆಂಗಸರು ಬ್ರಹ್ಮ ಜಿಜ್ಞಾಸುಗಳಾಗಿ ವಿಶ್ಲೇಷಣೆಗಳನ್ನು ಮಾಡುತ್ತಿದ್ದರು. ಕಠೋಪನಿಷತ್ತಿನಲ್ಲಿ ವಾಜಶ್ರವನೆಂಬ ಮುನಿ ವಿಶ್ವಜಿತ್ ಯಜ್ಞವನ್ನು ಮಾಡಿ ಅತ್ಯುನ್ನತವಾದ ಪದವಿಯನ್ನು ಪಡೆಯಲು ಸಿದ್ಧತೆಗಳನ್ನು ಮಾಡಿಕೊಳ್ಳುವಾಗ ಅವನ ಮಗನಾದ ನಚಿಕೇತ ಅದನ್ನು ಗಮನಿಸುತ್ತಾನೆ.
ಎಲ್ಲವನ್ನೂ ಯಜ್ಞಕಾರಣಕ್ಕಾಗಿ ದಾನ ಮಾಡಬೇಕೆಂದಿರುವಾಗ ಕೇವಲ ನಾಮಕಾವಸ್ಥೆಗಾಗಿ ಗೊಡ್ಡುದನಗಳನ್ನು, ಕೆಲಸಕ್ಕೆ ಬಾರದ ಪಶುಗಳನ್ನು ದಾನ ಮಾಡಲು ತತ್ಪರನಾಗಿದ್ದ ತನ್ನ ತಂದೆಗೆ “ಅಪ್ಪಾ ನನ್ನನ್ನು ಯಾರಿಗೆ ದಾನ ಕೊಡುತ್ತೀ?” ಎಂಬ ಕ್ರಾಂತಿಕಾರಕ ಪ್ರಶ್ನೆಯನ್ನು ಕೇಳುತ್ತಾನೆ. ಯಾಜ್ಞಿಕನಾಗಿದ್ದ ವಾಜಶ್ರವನ ಶ್ರದ್ಧೆಯನ್ನು ಸಂಶಯಿಸುವ ಮತ್ತು ನಿರಾಕರಿಸುವ ಈ ಪ್ರಶ್ನೆಯು ಪುನರಾವರ್ತನವಾದಾಗ “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ಆಗ್ರಹದಿಂದ ಹೇಳುವನು.
ಇದರಿಂದ ನಚಿಕೇತನಾದರೂ ಬಹುಜನರಲ್ಲಿ ಪ್ರಥಮನಾಗಿಯೂ, ಬಹುಜನರಲ್ಲಿ ಮಧ್ಯಮನಾಗಿಯೂ ಇರುವಂತಹ ನನ್ನಿಂದ ಯಾವ ಕೆಲಸ ಯಮನಿಗೆ ಆಗಬಹುದು ಎಂಬ ಆತ್ಮಗೌರವದಿಂದ ಮೃತ್ಯುವಿನ ಬಳಿಗೆ ನಡೆಯುತ್ತಾನೆ. ಮುಂದೆ ಮೃತ್ಯು ಮತ್ತು ಮರಣಾನಂತರ ಜೀವನದ ಬಗ್ಗೆ ಜಿಜ್ಞಾಸೆಗಳನ್ನು ಮಾಡುತ್ತಾನೆ.
ಛಾಂದೋಗ್ಯ ಉಪನಿಷತ್ತಿನಲ್ಲಿ ನಾರದನು ಸನತ್ಕುಮಾರನ ಬಳಿಗೆ ಬಂದು ಬೋಧನೆಗಾಗಿ ಕೋರಿಕೊಳ್ಳುತ್ತಾನೆ. ಸನತ್ಕುಮಾರ “ನಿನಗೆ ಏನು ಗೊತ್ತೋ ಅದನ್ನು ತಿಳಿಸು. ಅದನ್ನು ನೋಡಿಕೊಂಡು ನಾನು ಬೋಧಿಸುತ್ತೇನೆ” ಎಂದು ಹೇಳಿದಾಗ, ನಾರದನು ತನಗೆ ನಾಲ್ಕೂ ವೇದಗಳು, ಇತಿಹಾಸ, ಪುರಾಣ, ಪಿತೃಕರ್ಮಗಳು, ದೇವಶಾಸ್ತ್ರ, ನೀತಿಶಾಸ್ತ್ರ ಇತ್ಯಾದಿಗಳೆಲ್ಲಾ ಗೊತ್ತೆಂದು ಹೇಳಿದಾಗ, ಸನತ್ಕುಮಾರ, “ಈಗ ನೀನು ಏನು ತಿಳಿದುಕೊಂಡಿರುವೆಯೋ ಅವೆಲ್ಲವೂ ಕೇವಲ ಹೆಸರುಗಳಷ್ಟೇ. ಋಗ್ವೇದ ಎಂಬುದು ಒಂದು ಹೆಸರು. ಅಂತೆಯೇ ಇತರ ವೇದಗಳು ಕೇವಲ ಹೆಸರುಗಳು” ಎಂದು ಹೇಳುತ್ತಾ ಅವುಗಳ ಔಚಿತ್ಯ ಮತ್ತು ಔನತ್ಯವನ್ನು ಕಡೆಗಣಿಸುತ್ತಾನೆ.
ಹೀಗೆ ಉಪನಿಷತ್ತುಗಳು ವೇದಗಳಿಗೆ, ಯಜ್ಞಗಳಿಗೆ ಸೆಡ್ಡು ಹೊಡೆದು ಸತ್ಯಾನ್ವೇಷಕರಾಗಿದ್ದವು.
ಈ ಬಗೆಯಲ್ಲಿ ಉಪನಿಷತ್ತು ಋಷಿಗಳು ಮತ್ತು ಗುರುಕುಲದ ಗುರುಗಳು ಗುಣಗ್ರಾಹಿಗಳಾಗಿದ್ದು ಯಾವುದೇ ಜನ್ಮದಿಂದ ಬಂದವನಾಗಿದ್ದರೂ ಅವನಿಗೆ ಅಕ್ಷರವನ್ನೂ, ವಿದ್ಯೆಯನ್ನೂ ಕೇವಲ ಆತನ ಆಸಕ್ತಿ ಮತ್ತು ಅರ್ಹತೆಗಳಿಗೆ ಅನುಸಾರವಾಗಿ ನೀಡುವಂತವರಾಗಿದ್ದರು.
ಗುರುಕುಲದ ವರ್ಣಾಧಿಕಾರ
ಪುರಾಣಗಳಲ್ಲಿ ವ್ಯಕ್ತವಾಗುವ ಸನಾತನ ಸಂಪ್ರದಾಯದಂತೆ ಮನು (ಮನುಸ್ಮೃತಿಯ ಮನುವಲ್ಲ) ಮತ್ತು ಸಪ್ತರ್ಷಿಗಳೆಂಬ ಸ್ವತಂತ್ರ ಅಧಿಕಾರದ ವರ್ಗದಿಂದ ವರ್ಣ ನಿಗದಿಯಾಗುತ್ತಿತ್ತು. ಆ ವರ್ಣವು ನಿರ್ದಿಷ್ಟ ಅವಧಿಗಾಗಿ ಇದ್ದು, ನಂತರ ಅದನ್ನು ಬದಲಾಯಿಸಲಾಗುತ್ತಿತ್ತು. ಒಬ್ಬ ವ್ಯಕ್ತಿಯ ವರ್ಣವನ್ನು ನಾಲ್ಕು ವರ್ಷ ಅಂದರೆ ಒಂದು ಯುಗ ಕಾಲಕ್ಕಾಗಿ ನಿಗದಿ ಮಾಡುತ್ತಿದ್ದರು. ಆ ನಾಲ್ಕು ವರ್ಷಗಳ ಕೊನೆಯಲ್ಲಿ ಮನ್ವಂತರ ಉಂಟಾಗುತ್ತಿತ್ತು. ಆ ಮೂಲಕ ಪ್ರತಿ ನಾಲ್ಕನೆಯ ವರ್ಷ ಪಟ್ಟಿ ಬದಲಾಯಿಸುತ್ತಿತ್ತು.
ಈ ಸುಧಾರಣೆಯಲ್ಲಿ ಕೆಲವರು ಹಳೆಯ ವರ್ಣವನ್ನು ಬದಲಿಸಿಕೊಳ್ಳುತ್ತಿದ್ದರು. ಕೆಲವರು ಉಳಿಸಿಕೊಳ್ಳುತ್ತಿದ್ದರು. ಕೆಲವರು ಕಳೆದುಕೊಳ್ಳುತ್ತಿದ್ದರು ಮತ್ತೂ ಕೆಲವರು ಗಳಿಸಿಕೊಳ್ಳುತ್ತಿದ್ದರು. ಗುರುಕುಲದಲ್ಲಿ ಶಿಕ್ಷಣದ ಅವಧಿ ಹನ್ನೆರಡುವರ್ಷ. ಶಿಕ್ಷಣದ ಅವಧಿ ಮುಗಿದ ಮೇಲೆ ಗುರುಕುಲದಲ್ಲೇ ಆಚಾರ್ಯರಿಂದ ಉಪನಯನ ಸಮಾರಂಭವಿರುತ್ತಿತ್ತು.
ಈ ಉಪನಯನ – ಅತ್ಯಂತ ಮುಖ್ಯ ಸಮಾರಂಭವಾಗಿದ್ದು ಇದರಲ್ಲಿ ಆಚಾರ್ಯರು ವಿದ್ಯಾರ್ಥಿಯ ವರ್ಣವನ್ನು ನಿರ್ಧರಿಸಿ, ಆ ವರ್ಣದ ಕರ್ತವ್ಯಗಳನ್ನು ನಿರ್ವಹಿಸಲು ಹೊರ ಜಗತ್ತಿಗೆ ಕಳುಹಿಸುವಂತಹ ಸಮಾರಂಭವಾಗಿತ್ತು. ವರ್ಣವೆಂಬುದು ಎಂದಿಗೂ ಅನುವಂಶೀಯವಾಗಿರಲಿಲ್ಲ.
ಈ ವ್ಯವಸ್ಥೆಯಿಂದ ಬ್ರಾಹ್ಮಣ ಧರ್ಮವು ತೃಪ್ತವಾಗಲಿಲ್ಲ. ಏಕೆಂದರೆ ಆಗ ಪ್ರಚಲಿತವಿದ್ದ ವ್ಯವಸ್ಥೆಯಲ್ಲಿ ಬ್ರಾಹ್ಮಣನೊಬ್ಬನ ಮಗನು ಶೂದ್ರನಾಗಲು ಮಾತ್ರ ಯೋಗ್ಯವೆಂದು ನಿರ್ಧರಿಸಿ ಗುರುಗಳು ಕಳುಹಿಸುವ ಸಾಧ್ಯತೆಗಳಿದ್ದವು. ತನ್ನ ಮಗನು ಅರ್ಹನಾಗಲಿ, ಅರ್ಹನಾಗಿರದಿರಲಿ ಬ್ರಾಹ್ಮಣನಾಗಿಯೇ ಉಳಿಯಬೇಕೆಂಬ ಪಕ್ಷಪಾತ, ವಾಂಛೆ ಮತ್ತು ಅಪರಿಮಿತ ದುರಾಸೆಯಿಂದ ಮುಂದೆ ಅತ್ಯಂತ ನಿರ್ಲಜ್ಜರೀತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರು. ಬ್ರಾಹ್ಮಣಾಧಿಕ್ಯದ ಗೀಳಿನ ಮನುವು ಮುಂದೆ ಗುರುಕುಲದಲ್ಲಿ ಶಿಷ್ಯವೃತ್ತಿಯನ್ನು ಮಾಡಿದ ನಂತರ ಉಪನಯನದಂತಹ ಸಂಸ್ಕಾರದಲ್ಲಿ ಗುರುವನ್ನು ಒಳಮಾಡಿಕೊಳ್ಳುವುದಿಲ್ಲ.
ಮಗುವಿಗೆ ಉಪನಯನ ಮಾಡುವ ಅಧಿಕಾರವನ್ನು ತಂದೆಗೆ ವರ್ಗಾಯಿಸಲಾಯಿತು. ಇದರ ಪರಿಣಾಮವಾಗಿ ತನ್ನ ಮಗುವಿನ ಉಪನಯನ ಮಾಡುವ ತಂದೆಯು, ತನ್ನ ವರ್ಣವನ್ನೇ ತನ್ನ ಮಗನಿಗೆ ನೀಡುವ ಮೂಲಕ ಕಸುಬುಗಳು ಅಥವಾ ವರ್ಣಗಳು ಅನುವಂಶೀಯವಾಗುವಂತೆ ಮಾಡಿದರು.
ಜನ್ಮದಿಂದ ಜಾತಿ ಎಂಬ ಪದ್ಧತಿಗೆ ನಾಂದಿ ಹಾಡಿದರು, ಎಂದು ಹೇಳುತ್ತಾ ವರ್ಣ ನಿರ್ಧಾರದ ಜವಾಬ್ದಾರಿಯನ್ನು ಗುರುವಿನಿಂದ ಕಿತ್ತು ತಂದೆಗೆ ವಹಿಸಿದ ಈ ವಿಷಯವನ್ನು ಅಂಬೇಡ್ಕರ್ ಬಹಳ ಗಂಭೀರವಾಗಿ ವಿವೇಚಿಸುತ್ತಾರೆ.
ಏನೇ ಆಗಲಿ, ಬ್ರಾಹ್ಮಣ್ಯಾಧಿಕ್ಯದ ಗೀಳಿನ್ನು ಖಂಡಿಸುವ ಭರದಲ್ಲಿ ಬ್ರಾಹ್ಮಣರನ್ನು ದ್ವೇಷಿಸುವ, ಅವರನ್ನು ಅನುಮಾನಿಸುವ, ಅಪಮಾನಿಸುವ ಮತ್ತು ಅವರನ್ನು ಸದಾ ಅಪಹಾಸ್ಯ ಮಾಡುವವರು ತಮ್ಮ ನಡೆಗಳನ್ನು ನಿಷ್ಟುರವಾಗಿ ಪರಿಶೀಲಿಸಿಕೊಳ್ಳುವ ಅಗತ್ಯವಿದೆ.
ಬ್ರಾಹ್ಮಣ ಎಂಬ ಸಹಜೀವಿಯನ್ನು ಜಾತಿಯಾಧಾರದಲ್ಲಿ ಮಾತ್ರವೇ ನೋಡುವ ಮನಸ್ಥಿತಿಯೂ ಕೂಡಾ ಅಸ್ಪೃಷ್ಯತೆ ಆಚರಿಸುತ್ತಿದ್ದ ಸವರ್ಣೀಯ ಮನಸ್ಥಿತಿಗಳಿಗಿಂತ ಏನೂ ಮೇಲಲ್ಲ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ5 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ3 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ17 hours agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ20 hours agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ21 hours agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ17 hours agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ17 hours agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ

