Connect with us

ಅಂತರಂಗ

ಧರ್ಮ ಮರ್ಮ-04 : ಧರ್ಮಶಾಸ್ತ್ರದ ಉಗಮ

Published

on

Art: Kim knoll, Chicago
  • ಯೋಗೇಶ್ ಮಾಸ್ಟರ್

ರ್ಮವು ತಾತ್ವಿಕವೋ ಅಥವಾ ಆಧ್ಯಾತ್ಮಿಕವೋ? ಇವನ್ನೂ ಒಳಗೊಂಡು ಮತ್ತು ಇವನ್ನು ಮೀರಿರುವ ಸಂಗತಿಗಳೋ. ಜೈವಿಕ ಅಗತ್ಯ ಮತ್ತು ಸಾಮಾಜಿಕ ವಾಸ್ತವಕ್ಕೆ ಈ ಧರ್ಮವೆನ್ನುವುದು ಬೇಕಾಗಿದೆಯೇ? ಧರ್ಮವೆಂಬ ಅಮೂರ್ತವಾದ ಪರಿಕಲ್ಪನೆಯನ್ನು ಅಥವಾ ಆಂತರಿಕ ಮೌಲ್ಯವನ್ನು ಕಾಪಾಡಲು ಅದರ ಸ್ವರೂಪನ್ನು, ವಿವರಣೆಯನ್ನು, ಅದನ್ನು ಕಂಡುಕೊಳ್ಳಬೇಕಾಗಿರುವ ಅಗತ್ಯವನ್ನು, ಅದನ್ನು ಪಾಲಿಸಬೇಕಾಗಿರುವ ಅವಶ್ಯಕತೆ ಮತ್ತು ಪಾಲಿಸದಿದ್ದರೆ ಆಗುವ ತೊಂದರೆಗಳನ್ನು ಹೇಳಬೇಕು. ಅದಕ್ಕಾಗಿ ಅದನ್ನು ಪಠ್ಯದಲ್ಲಿ ಕಟ್ಟಿಕೊಡುವ ಒಂದು ಅನುಕ್ರಮಣೀಯ ಶಾಸ್ತ್ರಬೇಕು.

ಯಾವಾಗ ಧರ್ಮ ಎಂಬುದು ಶಾಸ್ತ್ರದ ಕಟ್ಟಿನಲ್ಲಿ ಬಂದು ಬಿತ್ತೋ ಅದಕ್ಕೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಅಧಿಕಾರಗಳನ್ನೆಲ್ಲಾ ಹೊರಿಸಲಾಯಿತು. ಅಂತೆಯೇ ಅವೆಲ್ಲದರ ಗುಣಗಳನ್ನೂ ಆರೋಪಿಸಲಾಯಿತು. ಧರ್ಮದ ಆಂತರಿಕ ಮೌಲ್ಯವನ್ನು ತಾತ್ವಿಕವಾಗಿ ಗ್ರಹಿಸುವ ತತ್ವಜ್ಞಾನಿಯದು ಆಯಾಮವಾದರೆ, ಧರ್ಮಶಾಸ್ತ್ರದ ಪಂಡಿತನದು ಮತ್ತೊಂದು ಆಯಾಮ.

ಒಟ್ಟಾರೆ, ತತ್ವಜ್ಞಾನಿಯು ಕತ್ತಲೆಯ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕಿಗಾಗಿ ಹುಡುಕುವ ಕುರುಡನಂತಿದ್ದಾನೆ. ಧರ್ಮಶಾಸ್ತ್ರದ ಪಂಡಿತನು ಕತ್ತಲೆಯ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕಿಗಾಗಿ ಹುಡುಕುತ್ತಿರುವ ಕುರುಡುನಂತಿದ್ದೂ, ಅದನ್ನು ತಾನು ಕಂಡಿರುವುದಾಗಿ ಆಣೆಯಿಟ್ಟು ಹೇಳುತ್ತಿದ್ದಾನೆ. ನಮ್ಮ ಜನ ಈ ಆಣೆಯನ್ನು ನಂಬಿ ಮ್ಯಾಜಿಕ್ ಬಟ್ಟೆಯನ್ನು ತೊಟ್ಟು ಬಂದಿರುವ ರಾಜನ ಪ್ರಜೆಗಳು ಬಟ್ಟೆಯನ್ನು, ಅದರ ಬಣ್ಣಗಳನ್ನು, ವಿನ್ಯಾಸಗಳನ್ನು ವರ್ಣಿಸುತ್ತಾರೆ.

ಗೊತ್ತಲ್ಲಾ, ಒಬ್ಬ ರಾಜನಿಗೆ ಬಟ್ಟೆಯ ಹುಚ್ಚು. ಆತನಿಗೆ ಅದನ್ನು ಬಿಡಿಸಲು ಒಮ್ಮೆ ಮಂತ್ರಿಗಳು ಯಾರೋ ನೇಕಾರರನ್ನು ಕರೆತಂದರು. ಅವರು ನೇಯುವ ಬಟ್ಟೆ ಬುದ್ಧಿವಂತರಿಗೆ ಮಾತ್ರ ಕಾಣುವಂತದ್ದು. ಯಾರಿಗೂ ತಾವು ದಡ್ಡರೆಂದು ಕರೆಯಿಸಿಕೊಳ್ಳಲು ಇಷ್ಟವಿಲ್ಲ. ಆ ನೇಕಾರರು ಖಾಲಿ ಮಗ್ಗ ನೇಯುತ್ತಿದ್ದರೆ ನೋಡುಗರೆಲ್ಲಾ ಅದರ ವಿನ್ಯಾಸ, ಬಣ್ಣ, ಹೊಳಪನ್ನು ಹೊಗಳುತ್ತಿದ್ದರು. ಈ ಬಟ್ಟೆಯನ್ನು ತೊಟ್ಟ ರಾಜ ಬೆತ್ತಲಾಗೇ ಇದ್ದ.

ಆದರೆ ತಾವು ರಾಜ ಬಟ್ಟೆ ತೊಟ್ಟಿಲ್ಲವೆಂದು ಹೇಳಿದರೆ ತಾನು ದಡ್ಡನೆಂದು ಇತರರಿಗೆ ಗೊತ್ತಾಗುವುದೆಂದು ಎಲ್ಲರೂ ತೊಟ್ಟಿರದ ಬಟ್ಟೆಯನ್ನು ಹೊಗಳುವವರೇ. ಯಾವುದೋ ಒಂದು ಮಗುವು ಮಾತ್ರ ರಾಜನು ಬೆತ್ತಲಾಗಿದ್ದಾನೆಂದು ನೇರವಾಗಿ ಹೇಳಿತು. ನಂತರ ಅದು ಎಲ್ಲರೂ ಒಪ್ಪತೊಡಗಿದರು. ನಂತರ ನಾಚಿಕೆಯಿಂದ ರಾಜ ಮನೆ ಓಡಿದ. ಇದೊಂದು ಅತ್ಯಂತ ಸುಂದರವಾದ ಕಥೆ.

ನಮ್ಮ ಪುರಾಣಿಕರೂ ಕೂಡ ಅದೇನನ್ನೋ ತೋರಿಸುತ್ತಾ ವರ್ಣಿಸುತ್ತಿರುತ್ತಾರೆ. ನಮ್ಮವರೆಲ್ಲಾ ಅದೆಲ್ಲಾ ಅರ್ಥವಾಗಿರುವ ಹಾಗೆ ತಲೆದೂಗುತ್ತಾ ಒಪ್ಪುತ್ತಿರುತ್ತಾರೆ. ಅತ್ಯಂತ ಜ್ಞಾನಿಯೆಂದು ಕಾಣುವ ಆತನ ಮಾತನ್ನು ನಿರಾಕರಿಸಿದರೆ ತಾನು ದಡ್ಡನೆಂದು ನಿರೂಪಿತವಾಗುತ್ತದೆ ಎಂಬ ಭಯ. ನನ್ನ ಗೆಳೆಯ ಇಂಗ್ಲೀಷ್ ಸಿನಿಮಾ ನೋಡುವಾಗ ಯಾವುದಾದರೂ ಸಂಭಾಷಣೆಗೆ ಅಕ್ಕಪಕ್ಕದವರು ನಕ್ಕರೆ ಅವನೂ ನಗುತ್ತಿದ್ದ. ಏಕೆಂದರೆ ಇವನಿಗೆ ಇಂಗ್ಲೀಷ್ ಬಾರದು ಎಂದು ತಿಳಿಯಬಾರದಲ್ಲಾ. ಯಾರಿಗಾದರೂ ತಿಳಿದರೂ ಅಲ್ಲಿರುವವರಲ್ಲಿ ‘ಯಾಕಯ್ಯಾ ನೀನು ನಗಲ್ಲಾ, ಯಾಕಯ್ಯಾ ಇಂಗ್ಲೀಷ್ ಕಲಿತಿಲ್ಲ’ ಎಂದು ಯಾರೂ ಕೇಳುವುದಿಲ್ಲ. ಆದರೂ ಇವನಿಗೇ ಕೀಳರಿಮೆ.

ತನಗೂ ಜ್ಞಾನವಿದೆ ಎಂದು ಪ್ರದರ್ಶಿಸುವ ಹುಸಿ ಪ್ರತಿಷ್ಟೆ. ಈ ಬಗೆಯಲ್ಲಿ ತಮಗೆ ತೋಚಿದಂತೆ ಹೇಳಿ ಇದೇ ಸತ್ಯ ಎಂದು ಸಾಧಿಸುವವರ ಸಾಧನೆ ಎಂದರೆ ಧರ್ಮದ ಅಪವ್ಯಾಖ್ಯಾನಗಳು. ಹಾಗಾದರೆ ತಮಗೆ ಏನು ತೋಚುತ್ತದೆಯೋ, ತಮ್ಮ ಗ್ರಹಿಕೆಗೆ ಎಟುಕುತ್ತದೆಯೋ, ತಮ್ಮ ಅಧ್ಯಯನದ ಅರಿವಿಗೆ ನಿಲುಕುತ್ತದೆಯೋ ಅದನ್ನು ಹೇಳಬಾರದೇ? ಹೇಳಬೇಕು. ಆದರೆ ಅದೇ ಸತ್ಯವೆಂದು ಮತ್ತು ಅಂತಿಮವೆಂದು ನಂಬಬಾರದು ಮತ್ತು ನಂಬಿಸಲು ಹೋಗಬಾರದು. ಸತ್ಯವೆಂದು ಮತ್ತು ಅಂತಿಮವೆಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಯಾವುದನ್ನೂ ನಿರುಕಿಸಲಾಗದು. ಏಕೆಂದರೆ ಯಾವುದು ಸಜೀವವಾಗಿರುವುದೋ ಅದು ಬೆಳೆಯುತ್ತದೆ, ಅರಳುತ್ತದೆ, ವಿಕಾಸವಾಗುತ್ತಿರುತ್ತದೆ. ಬೆಳವಣಿಗೆ ಅಥವಾ ಪ್ರಗತಿ ಜೀವಂತಿಕೆಯ ಲಕ್ಷಣ.

ಧರ್ಮವಾಗಲಿ, ಸಂಸ್ಕೃತಿಯಾಗಲಿ, ಮೌಲ್ಯಗಳಾಗಲಿ; ಅವುಗಳನ್ನು ಜೀವಂತಿಕೆಯಿಂದಿರಿಸಿಕೊಳ್ಳಬೇಕೆಂದರೆ ಅವುಗಳು ವಿಕಾಸವಾಗಲು ಅವಕಾಶಕೊಡಬೇಕು. ಅವುಗಳ ಬೆಳವಣಿಗೆಯನ್ನು ಗೌರವಿಸುವ ಮನಸ್ಥಿತಿಯನ್ನು ನಮ್ಮದಾಗಿಸಿಕೊಳ್ಳಬೇಕು. ಅಂದೆಂದೋ ಕಾಲದ್ದು ಇಂದಿಗೂ ನಮಗೆ ಹಾಗೆಯೇ ಪ್ರಾಯೋಗಿಕವಾಗಿರಬೇಕೆಂದರೆ ಬದಲಾದ ಕಾಲಘಟ್ಟದಲ್ಲಿ ಅದು ಉಸಿರುಗಟ್ಟಿಸುತ್ತದೆ.
ನಾನು ಮೂರರ ಪ್ರಾಯದಲ್ಲಿದ್ದಾಗ ತೊಟ್ಟ ಬಟ್ಟೆಗಳು ಸುಸ್ಥಿತಿಯಲ್ಲಿವೆ ಎಂದಿಟ್ಟುಕೊಳ್ಳಿ. ಅದನ್ನು ನೋಡಿದಾಗ ನಾನೇ ಆಗ ತೊಡುತ್ತಿದ್ದ ಬಟ್ಟೆಗಳಿವು ಎಂಬ ಪ್ರಾಚ್ಯಗೌರವದಿಂದ ಅವನ್ನು ನೋಡುತ್ತೇನೆ.

ಹಾಗೆಯೇ ಅದನ್ನು ಮುಟ್ಟಿದಾಗ, ಸೋಕಿಸಿಕೊಂಡಾಗ ಮಧುರವಾದ ಭಾವನೆಗಳು ಉಂಟಾಗುತ್ತದೆ. ಒಟ್ಟಾರೆ ಅದರ ಮೇಲೆ ಏನೋ ವಿಶೇಷ ಅಭಿಮಾನವಿರುತ್ತದೆ. ಆದರೆ, ಅದನ್ನು ಈಗ ನಾನು ತೊಡಬೇಕೆಂದರೆ ಸಾಧ್ಯವೇ ಆಗದು. ಬಟ್ಟೆಯೆಂಬ ಭೌತಿಕ ವಸ್ತುವಿನಂತೆ ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪಿಸಿಕೊಂಡಿರುತ್ತೇವೆ. ತಾತ್ವಿಕವಾದ ಚಿಂತನೆಗಳು ಮೂಡಿರುತ್ತವೆ. ಆದರೆ, ಬದಲಾದ ಕಾಲಘಟ್ಟದ ವ್ಯವಸ್ಥೆಗೆ ತಕ್ಕಂತೆ ತಾತ್ವಿಕತೆಯೂ ಕೂಡಾ ರೂಪಾಂತರ ಹೊಂದದಿದ್ದರೆ ಹೇರಿಕೆಯಾಗಿ ಪರಿಣಮಿಸುತ್ತದೆ.

ಇದರ ಕಾಳಜಿ ಧರ್ಮವನ್ನು ಪ್ರತಿಪಾದನೆ ಮಾಡುವವರಿಗೆ ಖಂಡಿತ ಇರಬೇಕಾಗುತ್ತದೆ. ಇದನ್ನು ಪ್ರಾಯೋಗಿಕ ತತ್ವವಾಗಿ ಮನಗಂಡ ಡಿ ವಿ ಜಿ ಹೇಳುವುದು ಹೀಗೆ.

ಹೊಸ ಚಿಗುರು ಹಳೇಬೇರು ಕೂಡಿರಲು ಮರಸೊಬಗು, ಹೊಸ ಯುಕ್ತಿ ಹಳೇ ತತ್ವದೊಡಗೂಡೆ ಧರ್ಮ,
ಋಷಿವಾಕ್ಯದೊಡನೆ ವಿಜ್ಞಾನ ಕಲೆಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ.

ಹಳತಿನ ಬೇರಿನ ಮೇಲೆ ವಿಕಾಸವಾಗುವ ಹೊಸ ಚಿಗುರನ್ನು ಕಾಣುವ ಕ್ರಮವನ್ನೇ ಧರ್ಮ ಎಂದು ಹೇಳುವರು.

ಆಂತರಿಕವಾಗಿ ನೋಡಿದಾಗ ಧರ್ಮವೆಂದರೆ ಸ್ವಭಾವವೇನೋ ಸರಿ. ಆದರೆ ಸಾಮಾಜಿಕ ವಾಸ್ತವದಲ್ಲಿ ಅದನ್ನು ಕ್ರಮವಾಗಿ ನೋಡುವ ಅಗತ್ಯವಿದೆ. ಆದರೆ ಕ್ರಮವೆಂದು ನಿರ್ಧರಿಸುವವರು ಯಾರು? ಸಮಾಜವೆಂಬುದು ವೈವಿದ್ಯಮಯವಾದ ಜನರ ಸಮೂಹವಾಗಿದೆ.

ವಿವಿಧ ಜನರಲ್ಲಿ ಯಾವ ಜನ ಸಮಾಜಕ್ಕೆ ಧರ್ಮವನ್ನು ಅಂದರೆ ಪರಮೋಚ್ಛ ಕ್ರಮವನ್ನು ವಿಧಿಸುವುದು? ವಸ್ತುವೊಂದರ ಸ್ವಭಾವವು ತನ್ನ ನಡವಳಿಕೆ ಮತ್ತು ವರ್ತನೆಗಳಲ್ಲಿ ಪ್ರಕಟವಾಗುವಂತೆ, ಜನರು ಎಂದು ಕರೆಯಿಸಿಕೊಳ್ಳುವ ಜೀವಿಗಳಿಗೂ ಅವರದೇ ಧರ್ಮವಿದೆ. ಅದಕ್ಕೆ ತಕ್ಕಂತೆ ಕ್ರಮವೂ ಕೂಡಾ ನೇಮವಾಗಬೇಕು.

ಅಂದರೆ ಧರ್ಮಕ್ಕೆ ಶಾಸ್ತ್ರವೊಂದು ಬೇಕು ಮತ್ತು ಅದನ್ನು ವಿಧಿಸಬೇಕು. ಅದನ್ನು ವಿಧಿಸುವವರು ಯಾರು? ಇಲ್ಲಿ ಧರ್ಮವನ್ನು ಶಾಸ್ತ್ರದ ರೂಪದಲ್ಲಿ ಪಠ್ಯ ಮಾಡುವವರೊಬ್ಬರು ಬೇಕಾಗಿದ್ದಾರೆ. ಆ ಅಧಿಕಾರವನ್ನು ಪಡೆಯುವವರು ಧರ್ಮದ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಧರ್ಮದ ಉಲ್ಲಂಘನೆಯಾಗಬಾರದು; ಇವೆಲ್ಲಾ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ಧರ್ಮವನ್ನು ಶಾಸ್ತ್ರವಾಗಿ ಪಠ್ಯಕ್ಕೆ ಒಳಪಡಿಸುವವರ ಗಟ್ಟಿಗತನದ ಮೇಲೆ ಸಮಾಜದಲ್ಲಿ ಅವರ ವಿಕ್ರಮ ಕಹಳೆ ಮೊಳಗುತ್ತದೆ. ಅಲ್ಲಿಂದ ನಿರ್ಬಲರ ಮೇಲೆ ಸಬಲರ ಧರ್ಮಶಾಸ್ತ್ರದ ಕಟ್ಟಳೆಗಳು ಶೋಷಣೆ ಮಾಡಲಾರಂಭಿಸುತ್ತದೆ.

ಧರ್ಮಶಾಸ್ತ್ರಗಳನ್ನು ವಿಭಾಗಿಸುವುದಾದರೆ ಪುರಾಣ ಧರ್ಮಶಾಸ್ತ್ರ, ನಾಗರಿಕ ಧರ್ಮಶಾಸ್ತ್ರ ಎಂದು ಸ್ಪಷ್ಟವಾಗಿ ಗ್ರೀಕರು ಗುರುತಿಸಿದರೆ ಮತ್ತು ನಿಸರ್ಗ ಧರ್ಮಶಾಸ್ತ್ರವೆಂಬ ಒಂದು ಅಧ್ಯಯನ ಶಾಖೆಯನ್ನು ಪ್ಲೇಟೋ ಗುರುತಿಸಿದನು. ಪುರಾಣ ಧರ್ಮಶಾಸ್ತ್ರ ಎಂದರೆ ದೇವಾನುದೇವತೆಗಳ ಕಥೆಗಳು ಮತ್ತು ಕಾವ್ಯಗಳು.

ನಾಗರಿಕ ಧರ್ಮಶಾಸ್ತ್ರವೆಂದರೆ ಗ್ರೀಕರ ಪ್ರಕಾರ ಪ್ರಭುತ್ವದ ಸಮೃದ್ಧಿ – ಅರಕೆಗಳನ್ನು, ಕಾರ್ಯಕ್ರಮಗಳನ್ನು, ಅವಕ್ಕೆ ಸಂಬಂಧಿಸಿರುವಂತಹ ಆಚರಣೆಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ನಿಸರ್ಗ ಧರ್ಮಶಾಸ್ತ್ರದಲ್ಲಿ ದೈವ ಮತ್ತು ದೈವಿಕತೆಯ ಬಗೆಗಿನ ತತ್ವಗಳಿದ್ದು ಅದು ನಿಸರ್ಗ ಸಿದ್ಧಾಂತದ ಅಭಿನ್ನ ಅಂಗವಾಗಿದೆ.ಅದು ಮುಂದಿಡುವ ಮೂರು ಸಿದ್ಧಾಂತಗಳೆಂದರೆ,

  1. ದೇವರಿದ್ದಾನೆ ಮತ್ತು ನಾವು ಯಾವುದನ್ನು ನಿಸರ್ಗ ಅಥವಾ ವಿಶ್ವವೆನ್ನುತ್ತೇವೆಯೋ ಅದಕ್ಕೆ ಅವನೇ ಕರ್ತೃವಾಗಿದ್ದಾನೆ.
  2. ದೇವರು ನಿಸರ್ಗ ಸಮಸ್ತವನ್ನೂ ನಿಯಂತ್ರಿಸುತ್ತಾನೆ.
  3. ಮಾನವ ಕೋಟಿಯ ಮೇಲೆ ದೇವರ ಪ್ರಭುತ್ವವಿದೆ. ಆತನ ನ್ಯಾಯ ನೀತಿಯೇ ಉತ್ತಮೋತ್ತಮವಾದದ್ದು.

ಇದಕ್ಕೆಲ್ಲಾ ಹೊರತಾಗಿ ಅಂತಃಪ್ರೇರಣೆಯನ್ನು ಅನುಸರಿಸುವ ಸ್ವಧರ್ಮಶಾಸ್ತ್ರವೂ ಇದೆಯೆಂಬುದನ್ನು ಧರ್ಮಗಳು ಮಾಡುವ ಶೋಷಣೆಯನ್ನು ವಿರೋಧಿಸುವ ಅಂಬೇಡ್ಕರ್ ಕೂಡ ತಾತ್ವಿಕವಾಗಿ ಒಪ್ಪುತ್ತಾರೆ.

ಆದರೆ ಧರ್ಮವೆಂಬುದನ್ನು ನೈತಿಕತೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ನಿರ್ಧಾರ, ವ್ಯಕ್ತಿಗತ ನಂಬಿಕೆ, ಆಧ್ಯಾತ್ಮಿಕತೆ; ಹೀಗೆ ಎಲ್ಲವನ್ನೂ ಕಲಸು ಮೇಲೋಗರ ಮಾಡಿ ಯಾವುದಕ್ಕೂ ಸ್ಪಷ್ಟತೆಯಿಲ್ಲದೇ ಹೋಗಿರುವ ಸಾರ್ಥಕತೆ ನಮ್ಮ ಹುಸಿಪ್ರತಿಷ್ಟೆಯ ವಿವರಣೆಕಾರರಿಗಿದೆ.

ಬ ಛತ್ರಿಯಡಿಯಲ್ಲಿ ತನ್ನೆಲ್ಲಾ ಪೀಳಿಗೆಗಳು ಹಿತವಾಗಿ ಬದುಕುವ ಅತ್ಯಾಸೆಯಿಂದ, ಶ್ರೇಷ್ಟತೆಯ ಗೀಳಿನಿಂದ ಏನೆಲ್ಲ ಆಗಬಹುದೆಂದು ಮನುಸ್ಮೃತಿ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.

ಮನುಸ್ಮೃತಿಯಲ್ಲಿ ಹೇಳುವಂತೆ (8.374) ಉನ್ನತ ವರ್ಣದ ರಕ್ಷಿತ ಅಥವಾ ಅರಕ್ಷಿತ ಸ್ತ್ರೀಯೊಡನೆ ಸಂಭೋಗ ಮಾಡಿದ ಶೂದ್ರನಿಗೆ ಆತನ ಜನನಾಂಗವನ್ನು ಛೇದಿಸಬೇಕು ಅಥವಾ ಮರಣದಂಡನೆ ವಿಧಿಸಬೇಕು.

ಆದರೆ ಬ್ರಾಹ್ಮಣರು ತಮ್ಮನ್ನು ಭೂದೇವರೆಂದು, ಪೃಥ್ವಿಪತಿಗಳೆಂದು ಇದೇ ಮನುವಿನಿಂದ ಕರೆಸಿಕೊಂಡವರು ತಮಗೆ ಇತರ ವರ್ಗದ ಹೆಂಗಸರೊಡನೆ ಕೂಡುವ ಲೈಂಗಿಕ ಹಕ್ಕು ಇದೆಯೆಂದು ವಾದಿಸುತ್ತಿದ್ದರು. ಇದಕ್ಕೆ ರಾಣಿಯೂ ಕೂಡ ಹೊರತಾಗಿರಲಿಲ್ಲ. ಕ್ರಿ.ಶ. 1502 ರಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದ ಲುಡೊವಿಕೋ ಡಿ ವರ್ತೆಮಾ ಕಲ್ಲಿಕೋಟೆ ಬ್ರಾಹ್ಮಣರ ಬಗ್ಗೆ ಈ ಸಂಗತಿಯನ್ನು ದಾಖಲು ಮಾಡಿದ್ದಾನೆ.

ಬ್ರಾಹ್ಮಣರು, ಅರ್ಚಕರು ಹಾಗೆಯೇ ಧರ್ಮದ ಪ್ರಮುಖ ವ್ಯಕ್ತಿಗಳ ಪೈಕಿ ಅತ್ಯಮೂಲ್ಯ ಹಾಗೂ ಅತ್ಯಂತ ಗೌರವಾನ್ವಿತರನ್ನು ಆರಿಸಿ ಆಕೆಯ ಕನ್ಯತ್ವ ಕಳೆಯಲೆಂದು ಆಕೆಯೊಡನೆ ಮೊದಲರಾತ್ರಿ ಮಲಗುವಂತೆ ಮಾಡುತ್ತಿದ್ದರು.

ಹ್ಯಾಮಿಲ್ಟನ್ ದಾಖಲು ಮಾಡಿರುವ ವಿಚಾರವನ್ನು ಗಮನಿಸಿ. ಸಾಮೋರಿನ್ ಮದುವೆಯಾದಾಗ ನಂಬೂರಿ (ನಂಬೂದರಿ ಬ್ರಾಹ್ಮಣ) ಅಥವಾ ಮುಖ್ಯ ಅರ್ಚಕರು ಭೋಗಿಸುವವರೆಗೆ ವರನು ತನ್ನ ವಧುವನ್ನು ಸೇರುವಂತಿರಲಿಲ್ಲ. ಏಕೆಂದರೆ ಆಕೆಯ ಮೊದಲ ಫಲಗಳು ಅವಳು ಪೂಜಿಸುವ ದೇವರಿಗೆ ಸಲ್ಲಬೇಕಿತ್ತು.

1869ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಕರೊಸವದಾಸ್ ಮೂಲ್ಜಿ ಎಂಬುವವರ ವಿರುದ್ಧ ಅರ್ಚಕರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಏಕೆಂದರೆ ಮುಂಬೈ ಪ್ರಾಂತ್ಯದಲ್ಲಿ ವೈಷ್ಣವ ಕುಲದ ಅರ್ಚಕರ ಕುಲದ ಎಲ್ಲ ಹೆಂಗಸರ ಕನ್ಯತ್ವ ಕಳೆಯುವ ಹಕ್ಕು ಕೇಳಲಾಗಿತ್ತು. ಹೆಚ್ಚೂ ಕಡಿಮೆ 1869ರವರೆಗೂ ಮೊದಲರಾತ್ರಿಯ ಹಕ್ಕು ನಿರಂತರವಾಗಿ ರೂಢಿಯಲ್ಲಿತ್ತು. ಅದಾದ ನಂತರ ಬ್ರಾಹ್ಮಣರು ಯಾವುದೇ ಜಾತಿಯ ಹೆಣ್ಣನ್ನು ಲೈಂಗಿಕ ಕ್ರಿಯೆಗಾಗಿ ಬಳಸಿಕೊಳ್ಳುವ ಹಕ್ಕು ಕ್ಷೀಣಿಸುತ್ತಾ ಬಂದಿತು.

ದಾನ ದಕ್ಷಿಣೆಗಳನ್ನು ತಮ್ಮ ಅಧಿಕಾರದಂತೆ ನಿಗದಿತವಾಗಿ ಪಡೆಯುತ್ತಿದ್ದ ಬ್ರಾಹ್ಮಣರು ಶೂದ್ರರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಿದ್ದರು. ಆದರೆ ಅವರ ಪ್ರಕಾರ ವೈಶ್ಯರು ಕೇವಲ ತಮ್ಮ ದೈವೀದತ್ತವಾದ ಕರ್ತವ್ಯವನ್ನು ಮಾಡುತ್ತಿದ್ದಾರೆ. ಕ್ರಿಸ್ತಪೂರ್ವ 350ರ ಅರ್ಥಶಾಸ್ತ್ರದಲ್ಲಿಯೇ ಹೇಳಿದೆ, ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು ವೈಶ್ಯರ ಹಕ್ಕೆಂದು.

  • ಕ್ರಿಸ್ತಶಕ 150ಯ ಮನುಸ್ಮೃತಿಯು ಇನ್ನೂ ಮುಂದುವರಿದು ಹೇಳುತ್ತದೆ, ಬ್ರಾಹ್ಮಣರಿಗೆ ತಿಂಗಳಿಗೆ 2%, ಕ್ಷತ್ರಿಯರಿಗೆ 3%, ವೈಶ್ಯರಿಗೆ 4% ಮತ್ತು ಶೂದ್ರರಿಗೆ5% ಬಡ್ಡಿಯನ್ನು ವಿಧಿಸಬೇಕು ಎಂದು. ವಾರ್ಷಿಕವಾಗಿ ಲೆಕ್ಕಿಸಿದರೆ, ಬ್ರಾಹ್ಮಣರಿಗೆ ಶೇಕಡಾ 24 ಆದರೆ, ಶೂದ್ರ ಅಥವಾ ದಲಿತರಿಗೆ ಶೇಕಡಾ 60 ಬಡ್ಡಿಯಾಗುತ್ತದೆ.
  • ಮನುಸ್ಮೃತಿ (8.20) ಹುಟ್ಟು ಮಾತ್ರದಿಂದ ಬ್ರಾಹ್ಮಣನಾದವನೂ (ಅಂದರೆ ವಿದ್ಯೆ ಇಲ್ಲದಿರಲಿ, ಯಾವುದೇ ವೇದೋಕ್ತ ಕ್ರಿಯೆ ಮಾಡಿರದವನು) ರಾಜನಿಗೆ ಧರ್ಮ ಪ್ರವಚನ ಹೇಳಬಹುದು.
    (8.272) ಶೂದ್ರನು ದರ್ಪದಿಂದ ಬ್ರಾಹ್ಮಣನಿಗೆ ಧರ್ಮೋಪದೇಶ ಮಾಡಲು ಹೊರಟರೆ ರಾಜನು ಅವನ ಮುಖ, ಕಿವಿಗಳಿಗೆ ಕಾದ ಎಣ್ಣೆ ಸುರಿಯಬೇಕು.
  • (3.156) ವೇದವನ್ನು ಕದ್ದು ಕೇಳಿದ ಅಥವಾ ಉಚ್ಚರಿಸಿದ ಶೂದ್ರನ ನಾಲಿಗೆಯನ್ನು ಸೀಳಬೇಕು. ಕಿವಿಗೆ ಕಾದ ಸೀಸೆ ಸುರಿಯಬೇಕು ಎಂದು ರಾಜನಿಗೆ ಕಾತ್ಯಾಯನು ವಿಧಿಸುತ್ತಾನೆ.

ಇಂಥಾ ವ್ಯವಸ್ಥೆಯನ್ನು ಬ್ರಾಹ್ಮಣರು ಕಟ್ಟಿಕೊಳ್ಳುವಂತಹ ಶಾಸ್ತ್ರವನ್ನು ರಚಿಸುವ ಪ್ರಮೇಯಕ್ಕೂ ಕಾರಣಗಳು ಇಲ್ಲದಿಲ್ಲ. ತನ್ನ ಕೆಲಸದಿಂದ ವರ್ಣ ಅಥವಾ ಜಾತಿಯನ್ನು ಗುರುತಿಸುವ ರೂಢಿಯಿದ್ದ ಆಗಿನ ಸಮಾಜದಲ್ಲಿ, ಅದರಲ್ಲೂ ವೇದಗಳನ್ನು ಧಿಕ್ಕರಿಸಿ ಅಥವಾ ಪರ್ಯಾಯವಾಗಿ ಚಿಂತನೆಗಳನ್ನು ಮಾಡಿದ್ದ ಋಷಿಗಳಿಂದ ಉಪನಿಷತ್ತುಗಳು ರಚಿತವಾದವು. ಉಪನಿಷತ್ತುಗಳ ಕಾಲದಲ್ಲಿ ವರ್ಣವ್ಯವಸ್ಥೆಯ ವಿರುದ್ಧವಾದಂತಹ ಕ್ರಾಂತಿಕಾರಕ ನಡೆಗಳು ಉಂಟಾದವು.

ಕ್ರಾಂತಿಕಾರಕ ಉಪನಿಷತ್ತುಗಳು

ಛಾಂದೋಗ್ಯೋಪನಿಷತ್ತಿನ ಸತ್ಯಕಾಮ ಜಾಬಾಲಿಯ ಪ್ರಕರಣವನ್ನು ಗಮನಿಸಿದರೆ, ಸತ್ಯಕಾಮನೆಂಬ ಎದೆಯ ಮೇಲೆ ಯಜ್ಞೋಪವೀತವಿಲ್ಲದ ಬಾಲಕನು, ವಿದ್ಯಾಭ್ಯಾಸದ ಅಧಿಕಾರವನ್ನು ಹೊಂದಿರುವ ಬ್ರಾಹ್ಮಣ ಗುರುಕುಲದ ಮುಖ್ಯಸ್ಥನಾದ ಗೌತಮನ ಬಳಿಗೆ ಬರುತ್ತಾನೆ. ತನ್ನ ವಿದ್ಯಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾನೆ. ಆಗ ಗೌತಮನು ಆತನ ಗೋತ್ರವನ್ನೂ, ತಂದೆಯ ಹೆಸರನ್ನೂ ಕೇಳುತ್ತಾನೆ.

ಇದರ ಅರಿವಿರದಿದ್ದ ಸತ್ಯಕಾಮ ತನ್ನ ತಾಯಿ ಜಬಲಾಳ ಬಳಿಗೆ ಬಂದು ಇದರ ಕುರಿತು ವಿಚಾರಿಸಿದಾಗ, “ಮಗನೇ ನಾನು ದಾಸಿಯಾಗಿ ಹಲವು ಯಜಮಾನರಿಗೆ ಸೇವೆ ಮಾಡುತ್ತಿದ್ದೆ, ಹೀಗೆ ಯಾರಿಗೋ ಹುಟ್ಟಿದ ಮಗ ನೀನು.ನನಗೂ ಕೂಡ ನಿರ್ಧಿಷ್ಟವಾಗಿ ನಿನ್ನ ತಂದೆ ಯಾರೆಂದು ತಿಳಿಯದು” ಎಂದು ಹೇಳಿ “ನಾನು ನಿನ್ನ ತಾಯಿ. ಅದು ಸತ್ಯ. ನೀನು ಸತ್ಯಕಾಮ ಜಬಾಲ” ಎಂದು ಹೇಳಿ ಕಳುಹಿಸುತ್ತಾಳೆ. ಮಗನು ತಾಯಿಯ ಮಾತಿನಂತೆಯೇ ಬಂದು ಗುರು ಗೌತಮನ ಮುಂದೆ ಹೇಳಿದಾಗ ಗೌತಮನಿಗೆ ಅತ್ಯಾನಂದವಾಗುತ್ತದೆ.

ಅವನು ಹೇಳುವಂತೆ “ಯಾರು ಸತ್ಯವನ್ನು ಹೇಳುತ್ತಾರೋ ಅವರೇ ಬ್ರಾಹ್ಮಣ” ಎಂದು ಬಾಲಕ ಮತ್ತು ಅವನ ತಾಯಿಯ ಸತ್ಯವಂತಿಕೆಯ ಆಧಾರದ ಮೇಲೆ ಬ್ರಾಹ್ಮಣನೆಂದು ಗುರುತಿಸುತ್ತಾನೆ. ಮಹಾಭಾರತದ ವನಪರ್ವದಲ್ಲಿಯೂ ಕೂಡ ಸ್ಪಷ್ಟವಾಗಿ ಬ್ರಾಹ್ಮಣಿಕೆಯ ಆಧಾರವನ್ನು ಗುರುತಿಸುತ್ತಾರೆ.

ಯಾರೊಬ್ಬನೂ ತನ್ನ ಜನ್ಮದಿಂದಾಗಲಿ, ವೇದಾಧ್ಯಯದಿಂದಾಗಲಿ, ಉಪನಯನಾದಿ ಸಂಸ್ಕಾರದಿಂದಾಗಲಿ ಬ್ರಾಹ್ಮಣನಲ್ಲ. ಅವನ ಸದಾಚಾರದಿಂದ ಮಾತ್ರವೇ ಬ್ರಾಹ್ಮಣನಾಗುತ್ತಾನೆ ಎಂದು.

ಹೀಗೆ ತಮ್ಮ ಕಾಯಕ ಮತ್ತು ಆಚಾರ ವಿಚಾರಗಳಿಂದ ಎಲ್ಲರೂ ಬ್ರಾಹ್ಮಣರಾಗುತ್ತಾ ಹೋದರೆ ಹೇಗೆ? ಈ ಭಯ ಬ್ರಾಹ್ಮಣವಾದಿಗಳಿಗಿತ್ತು. ವೈದಿಕಾಚರಣೆಗಳಿಗೆ ವಿರುದ್ಧವಾಗಿಯೇ ಉಪನಿಷತ್ತುಗಳು ನಿಲುವನ್ನು ತಳೆದಿದ್ದವು. ವೇದವನ್ನು ಅನುಸರಿಸುವವರಿಗೆ ಮಾತ್ರವೇ ಯಜ್ಞ ಯಾಗಾದಿಗಳು ಇದ್ದಿದ್ದು. ಉಪನಿಷತ್ತಿನ ಋಷಿಗಳಿಗಲ್ಲ. ಈಶವಾಸ್ಯೋಪನಿಷತ್ತಿನ ದ್ರಷ್ಟಾರನಾದ ವಾಮದೇವನೆಂಬ ಋಷಿ ತನ್ನ ಜೀವಿತದಲ್ಲಿ ಯಾವ ಯಜ್ಞ ಯಾಗಾದಿಗಳಿಂದ ಸಮಯ ವ್ಯಯಿಸದೇ ಮರಗಳನ್ನು ನೆಡುತ್ತಲೇ ಬಂದಿದ್ದವನು.

ಬೃಹದಾರಣ್ಯಕೋಪನಿಷತ್ತಿನಲ್ಲಿ ಶ್ವೇತಕೇತು ದನಗಳನ್ನು ಮೇಯಿಸುತ್ತಿದ್ದ. ಬ್ರಾಹ್ಮಣರಲ್ಲಿ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದ ಮತ್ತು ಮಹಿಳೆಯರನ್ನು ಕಟ್ಟುಪಾಡುಗಳಿಂದ ಬಂಧಿಸಿರುವಾಗ ಗಾರ್ಗಿ ಮತ್ತು ಮೈತ್ರೇಯಿಗಳೆಂಬ ಹೆಂಗಸರು ಬ್ರಹ್ಮ ಜಿಜ್ಞಾಸುಗಳಾಗಿ ವಿಶ್ಲೇಷಣೆಗಳನ್ನು ಮಾಡುತ್ತಿದ್ದರು. ಕಠೋಪನಿಷತ್ತಿನಲ್ಲಿ ವಾಜಶ್ರವನೆಂಬ ಮುನಿ ವಿಶ್ವಜಿತ್ ಯಜ್ಞವನ್ನು ಮಾಡಿ ಅತ್ಯುನ್ನತವಾದ ಪದವಿಯನ್ನು ಪಡೆಯಲು ಸಿದ್ಧತೆಗಳನ್ನು ಮಾಡಿಕೊಳ್ಳುವಾಗ ಅವನ ಮಗನಾದ ನಚಿಕೇತ ಅದನ್ನು ಗಮನಿಸುತ್ತಾನೆ.

ಎಲ್ಲವನ್ನೂ ಯಜ್ಞಕಾರಣಕ್ಕಾಗಿ ದಾನ ಮಾಡಬೇಕೆಂದಿರುವಾಗ ಕೇವಲ ನಾಮಕಾವಸ್ಥೆಗಾಗಿ ಗೊಡ್ಡುದನಗಳನ್ನು, ಕೆಲಸಕ್ಕೆ ಬಾರದ ಪಶುಗಳನ್ನು ದಾನ ಮಾಡಲು ತತ್ಪರನಾಗಿದ್ದ ತನ್ನ ತಂದೆಗೆ “ಅಪ್ಪಾ ನನ್ನನ್ನು ಯಾರಿಗೆ ದಾನ ಕೊಡುತ್ತೀ?” ಎಂಬ ಕ್ರಾಂತಿಕಾರಕ ಪ್ರಶ್ನೆಯನ್ನು ಕೇಳುತ್ತಾನೆ. ಯಾಜ್ಞಿಕನಾಗಿದ್ದ ವಾಜಶ್ರವನ ಶ್ರದ್ಧೆಯನ್ನು ಸಂಶಯಿಸುವ ಮತ್ತು ನಿರಾಕರಿಸುವ ಈ ಪ್ರಶ್ನೆಯು ಪುನರಾವರ್ತನವಾದಾಗ “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ಆಗ್ರಹದಿಂದ ಹೇಳುವನು.

ಇದರಿಂದ ನಚಿಕೇತನಾದರೂ ಬಹುಜನರಲ್ಲಿ ಪ್ರಥಮನಾಗಿಯೂ, ಬಹುಜನರಲ್ಲಿ ಮಧ್ಯಮನಾಗಿಯೂ ಇರುವಂತಹ ನನ್ನಿಂದ ಯಾವ ಕೆಲಸ ಯಮನಿಗೆ ಆಗಬಹುದು ಎಂಬ ಆತ್ಮಗೌರವದಿಂದ ಮೃತ್ಯುವಿನ ಬಳಿಗೆ ನಡೆಯುತ್ತಾನೆ. ಮುಂದೆ ಮೃತ್ಯು ಮತ್ತು ಮರಣಾನಂತರ ಜೀವನದ ಬಗ್ಗೆ ಜಿಜ್ಞಾಸೆಗಳನ್ನು ಮಾಡುತ್ತಾನೆ.

ಛಾಂದೋಗ್ಯ ಉಪನಿಷತ್ತಿನಲ್ಲಿ ನಾರದನು ಸನತ್ಕುಮಾರನ ಬಳಿಗೆ ಬಂದು ಬೋಧನೆಗಾಗಿ ಕೋರಿಕೊಳ್ಳುತ್ತಾನೆ. ಸನತ್ಕುಮಾರ “ನಿನಗೆ ಏನು ಗೊತ್ತೋ ಅದನ್ನು ತಿಳಿಸು. ಅದನ್ನು ನೋಡಿಕೊಂಡು ನಾನು ಬೋಧಿಸುತ್ತೇನೆ” ಎಂದು ಹೇಳಿದಾಗ, ನಾರದನು ತನಗೆ ನಾಲ್ಕೂ ವೇದಗಳು, ಇತಿಹಾಸ, ಪುರಾಣ, ಪಿತೃಕರ್ಮಗಳು, ದೇವಶಾಸ್ತ್ರ, ನೀತಿಶಾಸ್ತ್ರ ಇತ್ಯಾದಿಗಳೆಲ್ಲಾ ಗೊತ್ತೆಂದು ಹೇಳಿದಾಗ, ಸನತ್ಕುಮಾರ, “ಈಗ ನೀನು ಏನು ತಿಳಿದುಕೊಂಡಿರುವೆಯೋ ಅವೆಲ್ಲವೂ ಕೇವಲ ಹೆಸರುಗಳಷ್ಟೇ. ಋಗ್ವೇದ ಎಂಬುದು ಒಂದು ಹೆಸರು. ಅಂತೆಯೇ ಇತರ ವೇದಗಳು ಕೇವಲ ಹೆಸರುಗಳು” ಎಂದು ಹೇಳುತ್ತಾ ಅವುಗಳ ಔಚಿತ್ಯ ಮತ್ತು ಔನತ್ಯವನ್ನು ಕಡೆಗಣಿಸುತ್ತಾನೆ.

ಹೀಗೆ ಉಪನಿಷತ್ತುಗಳು ವೇದಗಳಿಗೆ, ಯಜ್ಞಗಳಿಗೆ ಸೆಡ್ಡು ಹೊಡೆದು ಸತ್ಯಾನ್ವೇಷಕರಾಗಿದ್ದವು.
ಈ ಬಗೆಯಲ್ಲಿ ಉಪನಿಷತ್ತು ಋಷಿಗಳು ಮತ್ತು ಗುರುಕುಲದ ಗುರುಗಳು ಗುಣಗ್ರಾಹಿಗಳಾಗಿದ್ದು ಯಾವುದೇ ಜನ್ಮದಿಂದ ಬಂದವನಾಗಿದ್ದರೂ ಅವನಿಗೆ ಅಕ್ಷರವನ್ನೂ, ವಿದ್ಯೆಯನ್ನೂ ಕೇವಲ ಆತನ ಆಸಕ್ತಿ ಮತ್ತು ಅರ್ಹತೆಗಳಿಗೆ ಅನುಸಾರವಾಗಿ ನೀಡುವಂತವರಾಗಿದ್ದರು.

ಗುರುಕುಲದ ವರ್ಣಾಧಿಕಾರ

ಪುರಾಣಗಳಲ್ಲಿ ವ್ಯಕ್ತವಾಗುವ ಸನಾತನ ಸಂಪ್ರದಾಯದಂತೆ ಮನು (ಮನುಸ್ಮೃತಿಯ ಮನುವಲ್ಲ) ಮತ್ತು ಸಪ್ತರ್ಷಿಗಳೆಂಬ ಸ್ವತಂತ್ರ ಅಧಿಕಾರದ ವರ್ಗದಿಂದ ವರ್ಣ ನಿಗದಿಯಾಗುತ್ತಿತ್ತು. ಆ ವರ್ಣವು ನಿರ್ದಿಷ್ಟ ಅವಧಿಗಾಗಿ ಇದ್ದು, ನಂತರ ಅದನ್ನು ಬದಲಾಯಿಸಲಾಗುತ್ತಿತ್ತು. ಒಬ್ಬ ವ್ಯಕ್ತಿಯ ವರ್ಣವನ್ನು ನಾಲ್ಕು ವರ್ಷ ಅಂದರೆ ಒಂದು ಯುಗ ಕಾಲಕ್ಕಾಗಿ ನಿಗದಿ ಮಾಡುತ್ತಿದ್ದರು. ಆ ನಾಲ್ಕು ವರ್ಷಗಳ ಕೊನೆಯಲ್ಲಿ ಮನ್ವಂತರ ಉಂಟಾಗುತ್ತಿತ್ತು. ಆ ಮೂಲಕ ಪ್ರತಿ ನಾಲ್ಕನೆಯ ವರ್ಷ ಪಟ್ಟಿ ಬದಲಾಯಿಸುತ್ತಿತ್ತು.

ಈ ಸುಧಾರಣೆಯಲ್ಲಿ ಕೆಲವರು ಹಳೆಯ ವರ್ಣವನ್ನು ಬದಲಿಸಿಕೊಳ್ಳುತ್ತಿದ್ದರು. ಕೆಲವರು ಉಳಿಸಿಕೊಳ್ಳುತ್ತಿದ್ದರು. ಕೆಲವರು ಕಳೆದುಕೊಳ್ಳುತ್ತಿದ್ದರು ಮತ್ತೂ ಕೆಲವರು ಗಳಿಸಿಕೊಳ್ಳುತ್ತಿದ್ದರು. ಗುರುಕುಲದಲ್ಲಿ ಶಿಕ್ಷಣದ ಅವಧಿ ಹನ್ನೆರಡುವರ್ಷ. ಶಿಕ್ಷಣದ ಅವಧಿ ಮುಗಿದ ಮೇಲೆ ಗುರುಕುಲದಲ್ಲೇ ಆಚಾರ್ಯರಿಂದ ಉಪನಯನ ಸಮಾರಂಭವಿರುತ್ತಿತ್ತು.

ಈ ಉಪನಯನ – ಅತ್ಯಂತ ಮುಖ್ಯ ಸಮಾರಂಭವಾಗಿದ್ದು ಇದರಲ್ಲಿ ಆಚಾರ್ಯರು ವಿದ್ಯಾರ್ಥಿಯ ವರ್ಣವನ್ನು ನಿರ್ಧರಿಸಿ, ಆ ವರ್ಣದ ಕರ್ತವ್ಯಗಳನ್ನು ನಿರ್ವಹಿಸಲು ಹೊರ ಜಗತ್ತಿಗೆ ಕಳುಹಿಸುವಂತಹ ಸಮಾರಂಭವಾಗಿತ್ತು. ವರ್ಣವೆಂಬುದು ಎಂದಿಗೂ ಅನುವಂಶೀಯವಾಗಿರಲಿಲ್ಲ.

ಈ ವ್ಯವಸ್ಥೆಯಿಂದ ಬ್ರಾಹ್ಮಣ ಧರ್ಮವು ತೃಪ್ತವಾಗಲಿಲ್ಲ. ಏಕೆಂದರೆ ಆಗ ಪ್ರಚಲಿತವಿದ್ದ ವ್ಯವಸ್ಥೆಯಲ್ಲಿ ಬ್ರಾಹ್ಮಣನೊಬ್ಬನ ಮಗನು ಶೂದ್ರನಾಗಲು ಮಾತ್ರ ಯೋಗ್ಯವೆಂದು ನಿರ್ಧರಿಸಿ ಗುರುಗಳು ಕಳುಹಿಸುವ ಸಾಧ್ಯತೆಗಳಿದ್ದವು. ತನ್ನ ಮಗನು ಅರ್ಹನಾಗಲಿ, ಅರ್ಹನಾಗಿರದಿರಲಿ ಬ್ರಾಹ್ಮಣನಾಗಿಯೇ ಉಳಿಯಬೇಕೆಂಬ ಪಕ್ಷಪಾತ, ವಾಂಛೆ ಮತ್ತು ಅಪರಿಮಿತ ದುರಾಸೆಯಿಂದ ಮುಂದೆ ಅತ್ಯಂತ ನಿರ್ಲಜ್ಜರೀತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರು. ಬ್ರಾಹ್ಮಣಾಧಿಕ್ಯದ ಗೀಳಿನ ಮನುವು ಮುಂದೆ ಗುರುಕುಲದಲ್ಲಿ ಶಿಷ್ಯವೃತ್ತಿಯನ್ನು ಮಾಡಿದ ನಂತರ ಉಪನಯನದಂತಹ ಸಂಸ್ಕಾರದಲ್ಲಿ ಗುರುವನ್ನು ಒಳಮಾಡಿಕೊಳ್ಳುವುದಿಲ್ಲ.

ಮಗುವಿಗೆ ಉಪನಯನ ಮಾಡುವ ಅಧಿಕಾರವನ್ನು ತಂದೆಗೆ ವರ್ಗಾಯಿಸಲಾಯಿತು. ಇದರ ಪರಿಣಾಮವಾಗಿ ತನ್ನ ಮಗುವಿನ ಉಪನಯನ ಮಾಡುವ ತಂದೆಯು, ತನ್ನ ವರ್ಣವನ್ನೇ ತನ್ನ ಮಗನಿಗೆ ನೀಡುವ ಮೂಲಕ ಕಸುಬುಗಳು ಅಥವಾ ವರ್ಣಗಳು ಅನುವಂಶೀಯವಾಗುವಂತೆ ಮಾಡಿದರು.

ಜನ್ಮದಿಂದ ಜಾತಿ ಎಂಬ ಪದ್ಧತಿಗೆ ನಾಂದಿ ಹಾಡಿದರು, ಎಂದು ಹೇಳುತ್ತಾ ವರ್ಣ ನಿರ್ಧಾರದ ಜವಾಬ್ದಾರಿಯನ್ನು ಗುರುವಿನಿಂದ ಕಿತ್ತು ತಂದೆಗೆ ವಹಿಸಿದ ಈ ವಿಷಯವನ್ನು ಅಂಬೇಡ್ಕರ್ ಬಹಳ ಗಂಭೀರವಾಗಿ ವಿವೇಚಿಸುತ್ತಾರೆ.

ಏನೇ ಆಗಲಿ, ಬ್ರಾಹ್ಮಣ್ಯಾಧಿಕ್ಯದ ಗೀಳಿನ್ನು ಖಂಡಿಸುವ ಭರದಲ್ಲಿ ಬ್ರಾಹ್ಮಣರನ್ನು ದ್ವೇಷಿಸುವ, ಅವರನ್ನು ಅನುಮಾನಿಸುವ, ಅಪಮಾನಿಸುವ ಮತ್ತು ಅವರನ್ನು ಸದಾ ಅಪಹಾಸ್ಯ ಮಾಡುವವರು ತಮ್ಮ ನಡೆಗಳನ್ನು ನಿಷ್ಟುರವಾಗಿ ಪರಿಶೀಲಿಸಿಕೊಳ್ಳುವ ಅಗತ್ಯವಿದೆ.

ಬ್ರಾಹ್ಮಣ ಎಂಬ ಸಹಜೀವಿಯನ್ನು ಜಾತಿಯಾಧಾರದಲ್ಲಿ ಮಾತ್ರವೇ ನೋಡುವ ಮನಸ್ಥಿತಿಯೂ ಕೂಡಾ ಅಸ್ಪೃಷ್ಯತೆ ಆಚರಿಸುತ್ತಿದ್ದ ಸವರ್ಣೀಯ ಮನಸ್ಥಿತಿಗಳಿಗಿಂತ ಏನೂ ಮೇಲಲ್ಲ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

Trending