Connect with us

ಲೈಫ್ ಸ್ಟೈಲ್

ಹಣೆಬರಹ ಪೂರ್ವ – ನಿಯೋಜಿತವೇ..?

Published

on

ದಾ ಸ್ವರ್ಗ ಹಾಗೂ ನರಕದ ಆಮಿಷ ಹಾಗೂ ಭಯಕ್ಕೆ ಒಳಗಾಗಿ ಅತೀವ ಧಾರ್ಮಿಕತೆಗೆ ಒಳಗಾದ ಮಂದಿ ಜನರಲ್ ಆಗಿ ಒಪ್ಪುವ ಕಾಮನ್ ಸಂಗತಿಯೆಂದರೆ “ಹಣೆಬರಹ”. ನಾವು ಇಲ್ಲಿ ಹುಟ್ಟಿದ್ದು ನೆಪ ಮಾತ್ರ , ಎಲ್ಲವೂ ಅವನಾಡಿಸಿದಂತೆ ಆಡುವ ಆಟ. ಹೀಗೆ ಸದಾ ಜೀವನದಲ್ಲಿ ಈ ರೀತಿಯ ಯೋಚನೆಯಲ್ಲೇ ಅಥವ ಜಿಗುಪ್ಸೆಯನ್ನೇ ತುಂಬಿ ಬದುಕುವ ಮಂದಿ ಎಲ್ಲವೂ ಪೂರ್ವನಿಯೋಜಿತಗೊಂಡಂತೆ ನಮ್ಮ ಬದುಕಿನಲ್ಲಿ ನಡೆಯುತ್ತದೆ ಅದನ್ನು ತಪ್ಪಿಸಲು ಹಣೆಬರಹ ಬರೆದವನಿಂದಲೂ ಸಾಧ್ಯವಿಲ್ಲ ಎಂದು ಬಹಳ ಗಟ್ಟಿಯಾಗಿ ನಂಬುತ್ತಾರೆ.

ಇದಕ್ಕಾಗಿ ಪುರಾಣದ ಪುಟಗಳಿಂದ ಒಂದೆರಡು ಉದಾಹರಣೆಯಾಗಿ ಕಥೆಗಳನ್ನೂ ಉಲ್ಲೇಖ ಮಾಡುತ್ತಾರೆ. ಎಲ್ಲವೂ ಪೂರ್ವನಿಯೋಜಿತ ಹಾಗೂ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ “ಹಣೆಬರಹ”ವನ್ನೇ ಒಂದು ಸುತ್ತು ಹಾಕಿಕೊಂಡು ಬರೋಣ.

ನನಗೆ ಒಳ್ಳೆಯದಾಗಲಿ, ಕುಟುಂಬಕ್ಕೆ ಶ್ರೇಯಸ್ಸಾಗಲಿ, ವಿಧ್ಯಾರ್ಥಿಗಳಿಗೆ ಶ್ರೇಯಸ್ಸಾಗಲಿ (ನಮ್ಮ ವಿಟ್ಲದಲ್ಲಿ ಈಗ ವಿಧ್ಯಾರ್ಥಿಗಳ ಕ್ಷೇಮಕ್ಕಾಗಿ ಕಾಲೇಜಿನಲ್ಲೇ ಹೋಮ ನಡೆಯುವ ತಯಾರಿ ನಡೆಯುತ್ತಿದೆ), ದೋಷ ಕಳೆಯಲಿ, ದುಡ್ಡು ಬರಲಿ, ಲಾಸ್ ಆಗದಿರಲಿ, ಆರೋಗ್ಯ ವೃದ್ಧಿಸಲಿ, ಅಯಸ್ಸು ವೃದ್ಧಿಸಲಿ, ಮರಣದ ದವಡೆಯಿಂದ ತಪ್ಪಿಸಿಕೊಳ್ಳಲಿ, ನನ್ನ ವೈರಿ ಸಾಯಲಿ ಅಥವಾ ಹಾಳಾಗಿ ಹೋಗಲಿ ಎಂದು ಹರಕೆ, ಇತ್ಯಾದಿ ಬೇಡಿಕೆಗಳನ್ನಿಟ್ಟು ವಿಧ ವಿಧ ಬಗೆಯ ಆಚರಣೆ, ಪೂಜೆ, ಆರಾಧನೆಗಳೆಲ್ಲಾ ನಡೆಯುತ್ತದೆ. ಇದರ ಜೊತೆಗೆ ಮನೆಗಳಲ್ಲಿ ಶಾಂತಿ ನೆಲಸಲಿ ಎಂದು ಹೋಮ ಕೂಡಾ ಸೇರ್ಪಡೆಗೊಳಿಸಬಹುದು.

ಎಲ್ಲವೂ ನಿಮ್ಮ ನಿಮ್ಮ ಧಾರ್ಮಿಕ ನಂಬಿಕೆ. ಅದರಲ್ಲಿ ಎರಡು ಮಾತಿಲ್ಲ, ಆದರೆ ಇಲ್ಲಿ ಪ್ರಶ್ನೆ ಏನೆಂದರೆ, ಈ ಎಲ್ಲಾ ಆಚರಣೆ, ಆರಾಧನೆ, ಪೂಜೆ ನಡೆಸುವ ಉದ್ದೇಶದ ಬಗ್ಗೆ? ಇದನ್ನೆಲ್ಲಾ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಅಥವಾ ಕೆಟ್ಟದಾಗುವುದು ಬೇಡ ಎಂಬುದೊಂದೇ ಉದ್ದೇಶವಲ್ಲವೆ? ಲೋಕಕಲ್ಯಾಣಕ್ಕಾಗಿ ಎಂಬ ಹಣೆಪಟ್ಟಿಹೊತ್ತು ನಡೆಸುವ ಆಚರಣೆಗಳಲ್ಲೂ ನಾನು, ನೀವು ಆ ಲೋಕದಲ್ಲಿ ಸೇರ್ಪಡೆಗೊಂಡಿದ್ದೇವೆ ಎಂಬುದೂ ಸತ್ಯವಲ್ಲವೆ?

ಈಗ ಹಣೆಬರಹಕ್ಕೆ ಬರೋಣ. ಎಲ್ಲವೂ ಪೂರ್ವನಿಯೋಜಿತ, ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಅದು ಸೃಷ್ಟಿಕರ್ತನ ನಿಯಮ ಎನ್ನುವುದನ್ನೂ ನೀವು ನಂಬುವುದಾದರೆ, ಈ ಒಳ್ಳೆಯದಾಗಲಿ, ಕೆಟ್ಟದಾಗುವುದು ಬೇಡ ಎಂಬ ಆಸೆ, ಆತಂಕಕ್ಕೆ ಒಳಗಾಗಿ ಪೂಜೆ, ಆಚರಣೆ ನಡೆಸುವ ಅಗತ್ಯವಾದರೂ ಏನು? ನೀವು ಹುಟ್ಟಿದಾಗಲೇ ನಿಮ್ಮ ಸ್ಕ್ರಿಪ್ಟ್ ತಯಾರಾಗಿಯೇ ಬಂದಿದ್ದಲ್ಲವೆ? (ನನ್ನ ಪ್ರಕಾರವಲ್ಲ ನಿಮ್ಮ ಪ್ರಕಾರವೇ ಈ ಮಾತು). ಹಣೆಬರಹವನ್ನು ತಿದ್ದಲು, ಬದಲಾಯಿಸಲು ಸಾಧ್ಯವಿಲ್ಲವೆಂದರೆ ಈ ಪೂಜೆ, ಆಚರಣೆ, ಪ್ರಾರ್ಥನೆಗಳಿಂದ ನಿಮಗೆ ಒಳ್ಳೆಯದು ಹೇಗಾಗುತ್ತದೆ? ನಿಮಗೆ ಏನಾಗಬೇಕೋ ಅದು ಈಗಾಗಲೇ ಫಿಕ್ಸ್ ಆಗಿದೆ ಎಂದ ಮೇಲೆ ನಿಮಗೆ ಅನಗತ್ಯ ಚಿಂತೆ ಯಾಕೆ? ಈ ಗ್ರಹಣ ಸಂಧರ್ಭವನ್ನೂ ಸೇರಿಸಿಕೊಳ್ಳಿ, ಆ ರಾಶಿಯವನಿಗೆ ಹಾಗಾಗುತ್ತದೆ, ಈ ರಾಶಿ, ನಕ್ಷತ್ರದವನಿಗೆ ಹೀಗಾಗುತ್ತದೆ ಎಂದು ದೇವಸ್ಥಾನದಲ್ಲಿ ಕ್ಯೂ ನಿಂತು ನೂರೈವತ್ತರಿಂದ ಐನೂರು ಸಾವಿರದವರೆಗೂ ದುಡ್ಡು ಎಣಿಸಿ ಪೂಜೆ, ಅಭಿಷೇಕ ಮಾಡುವುದರಿಂದ ನಿಮ್ಮ ಹಣೆಬರಹ ಬದಲಾಗಿ ನಿಮಗೆ ಒಳ್ಳೆಯದಾಗುವು ದಾದರೂ ಹೇಗೆ?
ಒಂದೋ ಹಣೆಬರಹ ಅನ್ನೋದೇ ಸುಳ್ಳು. ಇಲ್ಲ ಹಣೆಬರಹ ಎಡಿಟ್ ಮಾಡುವುದು ಸಾಧ್ಯವಿಲ್ಲ, ಅಥವಾ ಎಡಿಟ್ ಮಾಡಬಹುದು.

ಈ ಮೂರರಲ್ಲಿ ಯಾವುದಾದರೂ ಒಂದು ನಿಲುವು ನಿಮ್ಮದಾಗಿರಬೇಕು. ನಿಮ್ಮ ನಂಬಿಕೆ ಪ್ರಕಾರ ಎಡಿಟಿಂಗ್ ಸಾಧ್ಯವೇ ಇಲ್ಲ. ಹಾಗಿದ್ದೂ ಈ ಎಡಿಟಿಂಗ್ ಮಾಡುವುದಕ್ಕೆ ಪೂಜೆ, ಅಭಿಷೇಕ ಎಲ್ಲಾ ಮಾಡೋ ಅಗತ್ಯವಾದರೂ ಏನು? ಇಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ತಕರಾರಿಲ್ಲ, ಆದರೆ ಪ್ರಶ್ನೆ, ನಿಮ್ಮಲ್ಲಿರುವ ಗೊಂದಲದ ಬಗ್ಗೆ ಅಥವಾ ದ್ವಂದ್ವ ನೀತಿಯ ಬಗ್ಗೆ. ಹಾಗೊಂದು ವೇಳೆ ದೇವರು ಮನಸ್ಸು ಮಾಡಿದರೆ ಹಣೆಬರಹ ಬದಲಾಗುತ್ತದೆ ಎನ್ನುವುದಾದರೆ ಅದನ್ನು ಅಪ್ರೋಚ್ ಮಾಡುವ ಬಗೆ ಹೇಗೆ?

ಹೀಗೆ ಪೂಜೆ, ಅಭಿಷೇಕ ಮಾಡುವುದರಿಂದ, ಅಂದರೆ ಥ್ರೂ ಪರ್ಟಿಕುಲರ್ ಪರ್ಸನ್ , ದೇವರಿಗೆ ಅವಹಾಲು ಸಲ್ಲಿಸುವುದರಿಂದ ನಿಮ್ಮ ಹಣೆಬರಹ ಎಡಿಟಿಂಗ್ ಮಾಡಬಹುದೇ? ಕನ್ಫರ್ಮ್ ಆಗುತ್ತದೆ ಎಂದಾದರೆ ದೇಶದಲ್ಲಿ ದಾರಿದ್ರ್ಯ ಅನ್ನೋದೇ ಇರಬಾರದಿತ್ತಲ್ಲವೇ? ಕಷ್ಟದಲ್ಲಿರುವವರ ಹಣೆಬರಹ ಎಡಿಟ್ ಮಾಡಿ ಅವರಿಗೂ ಒಂದು ನಿಮ್ಮದಿಯ ಬಾಳು ಕೊಡಬಹುದಿತ್ತಲ್ಲವೆ? ಒಬ್ಬ ಕಷ್ಟ ಅನಿಭವಿಸುವಾಗ ಒಂದೇ ಉಸಿರಲ್ಲಿ ಅದು ಅವನ ಹಣೆಬರಹ ಅಂತ ಷರಾ ಬರೆಯುವ ನೀವು ಅವನ ಹಣೆಬರಹವನ್ನು ತಿದ್ದಲು ಯಾಕೆ ಅಹವಾಲು ನೀಡಬಾರದು?

ಹಣೆಬರಹ ಎಂಬ ಭ್ರಮೆಯಲ್ಲಿ ತೇಲಾಡುವ ಮಂದಿ ಕನಿಷ್ಟ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ನಿಮ್ಮ ನೆಮ್ಮದಿಯ ಬದುಕನ್ನು ನಂಬಿಕೆಯ ಹೆಸರಲ್ಲಿ ಕಿತ್ತು ತಿನ್ನುವ ಅನಾಗರಿಕ ಜನರ ಬಗ್ಗೆ ಜಾಗ್ರತರಾಗಿ. ಇದೆಲ್ಲಾ ಹಿಂದಿನಿಂದಲೂ ಬಂದದ್ದು ಎನ್ನುವವರಲ್ಲಿ ನನ್ನ ಚರ್ಚೆಯಿಲ್ಲ. ಆದರೆ ಕನಿಷ್ಟ ತಮ್ಮ ಬಗ್ಗೆಯಾದರೂ ಪ್ರಜ್ಞೆಯಿಂದ ಯೋಚಿಸುವ ಮಂದಿಗೆ ವಿಮರ್ಷೆ ಮಾಡಲು ಸಹಕಾರಿಯಾದರೆ ಅಷ್ಟೇ ಸಾಕು. ನನ್ನನ್ನು ವಿರೋಧಿಸಲು, ಅಥವಾ ಅನ್ಯಧರ್ಮೀಯರಿಗೆ ಕಾಂಪಿಟೇಷನ್ ಕೊಡಲೆಂದೇ ಮೌಢ್ಯಕ್ಕೆ ಶರಣಾಗುವವರ ಬಗ್ಗೆ ನನ್ನ ತಕರಾರಿಲ್ಲ. ಕೀಪ್ ಕಂಟಿನ್ಯೂ.

– ಭಾಸ್ಕರ್ ವಿಟ್ಲ
ಪ್ರಾಧ್ಯಾಪಕರು
ಮಾನಸಿಕ ತಜ್ಞರು

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending