ಅಂತರಂಗ
ಅರಿಮೆಯ ಅರಿವಿರಲಿ-47 : ತನ್ನತನದ ತನ್ನ ಭಾಷೆ
- ಯೋಗೇಶ್ ಮಾಸ್ಟರ್
ಮಾನಸಿಕವಾಗಿಯಾಗಲಿ,ಆಧ್ಯಾತ್ಮಿಕವಾಗಿಯಾಗಲಿ ಅಥವಾ ಸಾಮಾಜಿಕವಾಗಿ ಸಹಜ ಮನುಷ್ಯನಂತೆಯಾಗಲಿ ತನ್ನತನವನ್ನು ಕಂಡುಕೊಂಡವರ ಕೆಲವು ಮುಖ್ಯ ಲಕ್ಷಣಗಳು ಹೀಗಿರುತ್ತವೆ.
ತನಗೆ ತಾನೇ ಸಾಕ್ಷಿ
ತನ್ನನ್ನು ತಾನು ಉನ್ಮತ್ತನಂತೆ ಪ್ರದರ್ಶಿಸಿಕೊಳ್ಳುವುದಿಲ್ಲ. ತನ್ನ ಎಲ್ಲಾ ಪ್ರತಿಕ್ರಿಯೆ ಮತ್ತು ಪ್ರತಿವರ್ತನೆಗಳನ್ನು ತಾನು ರೂಪಿಸಿಕೊಂಡಿರುವ ವ್ಯಕ್ತಿತ್ವದ ಅರಿವಿನಲ್ಲಿ ಪ್ರದರ್ಶನಕ್ಕಿಡುತ್ತಾನೆ. ಮುಖ್ಯವಾಗಿ ತನ್ನ ಪ್ರದರ್ಶನವನ್ನು ತಾನು ನೋಡಲು ಸಮರ್ಥನಿರುತ್ತಾನೆ. ಉದಾಹರಣೆಗೆ ಯಾರೋ ಒಬ್ಬ ವ್ಯಕ್ತಿಯು ತನ್ನ ಜೊತೆಗೆ ವ್ಯತ್ಯಾಸವಾಗಿ ನಡೆದುಕೊಂಡನೆಂದರೆ ಅವನಿಗೆ ಪ್ರತಿಕ್ರಿಯಿಸುವ ತನ್ನ ನಡೆ, ನುಡಿ, ನಡವಳಿಕೆ ಅವನಿಗೆ ಮತ್ತು ತಮ್ಮಿಬ್ಬರನ್ನು ನೋಡುವವರಿಗೆ ಹೇಗೆ ಕಾಣುತ್ತಿರುತ್ತದೆ ಎಂಬುದನ್ನು ತಾನು ನೋಡುತ್ತಿರುತ್ತಾನೆ. ತನ್ನನ್ನು ಪ್ರಕಟಗೊಳಿಸಿಕೊಳ್ಳುವಾಗ ಇದು ಬಹಳ ಮುಖ್ಯವಾದ ಮತ್ತು ಉಪಯುಕ್ತವಾದ ಸಾಧನ.
ತನ್ನ ತಾನು ನೋಡಿಕೊಳ್ಳುವ ತಂತ್ರಗಾರಿಕೆ ಸಿದ್ಧಿಯಾಯಿತೆಂದರೆ ಅವನು ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿಯೂ ಪ್ರಾಮಾಣಿಕನಾಗಿರುವವನಲ್ಲದೇ, ಮಾನಸಿಕವಾಗಿ ಯಾವುದೇ ಸಮಸ್ಯೆಗಳಿದ್ದರೂ ಅದರಿಂದ ಮುಕ್ತನಾಗಲು ಸಾಧ್ಯ. ಇನ್ನೂ ಚೆಂದದ ವಿಷಯವೆಂದರೆ, ಈ ತನ್ನ ತಾನು ನೋಡಿಕೊಳ್ಳುವ ತಂತ್ರಗಾರಿಕೆಯನ್ನು ಅಭ್ಯಾಸ ಮಾಡುವುದರಿಂದ ಸಾರ್ವಜನಿಕವಾಗಿ ಮಾತಾಡುವವರು, ಭಾಷಣ ಮಾಡುವವರು, ತರಗತಿಗಳನ್ನು ತೆಗೆದುಕೊಳ್ಳುವವರು ತಮ್ಮ ಪ್ರದರ್ಶನಗಳನ್ನು ಉತ್ತಮ ಪಡಿಸಿಕೊಳ್ಳಬಲ್ಲರು.
ಇನ್ನು ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕಲಾವಿದರಿಗೂ ತಮ್ಮ ಪ್ರದರ್ಶನವನ್ನು ಸಂವೇದನಾಶೀಲವನ್ನಾಗಿಸಿಕೊಳ್ಳಲು ಸಾಧ್ಯ.
ತನಗೆ ತಾನೇ ಸಾಕ್ಷಿಯಾಗುವುದು; ಈ ಪರಿಕಲ್ಪನೆಯನ್ನು ಸರಳವಾಗಿ ರಂಗಭೂಮಿ ಭಾಷೆಯಲ್ಲಿ ಹೇಳುವುದಾದರೆ, ನಾನೇ ರಂಗದ ಮೇಲೆ ಅಭಿನಯಿಸುತ್ತಿರುವುದು. ಅದನ್ನು ನಾನೇ ಪ್ರೇಕ್ಷಕರಲ್ಲಿ ಕುಳಿತು ನೋಡುವುದು.
ಅಧೀನನಾಗುವುದಿಲ್ಲ
ತನ್ನತನವನ್ನು ರೂಪಿಸಿಕೊಂಡವನು ಮತ್ತು ಆ ತನ್ನತನದಲ್ಲಿ ಹರಳು ನೆಟ್ಟಿರುವ ಮೌಲ್ಯಗಳ ಜ್ಞಾನೋದಯವಾಗಿರುವವನು ಯಾರನ್ನೂ ತನ್ನ ಅಂತಿಮ ಮಾದರಿ ಎಂದಾಗಲಿ, ಆರಾಧ್ಯ ವ್ಯಕ್ತಿಯೆಂದಾಗಲಿ ಎಂದಿಟ್ಟುಕೊಳ್ಳುವುದಿಲ್ಲ. ಒಟ್ಟಾರೆ ಹಾರ್ಡ್ ಕೋರ್ ಫ್ಯಾನ್ ಅಥವಾ ಕಟ್ಟಾ ಅಭಿಮಾನಿ ಆಗುವುದಿಲ್ಲ. ಅದೇ ರೀತಿಯಲ್ಲಿ ತನ್ನ ಮನೆಯಲ್ಲಾಗಲಿ, ಕೆಲಸ ಮಾಡುವ ಕಡೆಯಲ್ಲಾಗಲಿ ಯಾವುದೇ ಮುಲಾಜಿತೆ ಯಾರೊಬ್ಬರ ಅಧೀನವಾಗಿರುವುದಿಲ್ಲ. ಗೌರವಿಸುವುದು, ವಿನಯವಾಗಿರುವುದು, ಅನುಸರಿಸಿಕೊಳ್ಳುವುದು; ಈ ಎಲ್ಲವೂ ಇರುತ್ತದೆ. ಆದರೆ ಅದು ಕಾರ್ಯಕಾರಣವಾದ ಸರಿಸಿಕೊಳ್ಳುವಿಕೆಯೇ ಹೊರತು ಯಾರಿಗೂ ಅಧೀನವಾಗಿರುವುದಿಲ್ಲ. ತಮ್ಮತನವನ್ನು ಪಣಕ್ಕಿಡುವುದಿಲ್ಲ.
ತನ್ನನ್ನು ತಾನು ಯಾರೋ ಒಬ್ಬ ನಟನ, ರಾಜಕೀಯ ವ್ಯಕ್ತಿಯ, ಧಾರ್ಮಿಕ ಪುರುಷನ, ಸಮಾಜ ಸುಧಾರಕನ ಭಕ್ತನಾಗಿಸಿಕೊಳ್ಳುವುದಿಲ್ಲ. ಯಾರು ತಮ್ಮನ್ನು ಕಟ್ಟಾ ಅಭಿಮಾನಿಗಳು ಎಂದು ಘೋಷಿಸಿಕೊಳ್ಳುತ್ತಾರೋ, ಪ್ರಾಮಾಣಿಕವಾಗಿ ಅವರಲ್ಲಿ ಅಂತಹ ಭಾವ ಇರುತ್ತದೆಯೋ ಅವರಿಗೆ ತಮ್ಮತನದ ಸಾಕ್ಷಾತ್ಕಾರವಾಗಿಲ್ಲವೆಂದೇ ಅರ್ಥ.
ತಮ್ಮತನದ ಅರಿವುಳ್ಳವರು ತಮ್ಮತನವನ್ನು ರೂಪುಗೊಳಿಸಿರುವ ಮೌಲ್ಯ ಮತ್ತು ಗುಣಗಳ ಅನುಸಾರವಾಗಿ ತಾವು ಗಮನಿಸುವ ಮಹಾನ್ ವ್ಯಕ್ತಿಗಳ, ತಮ್ಮ ಸಹಜೀವಿಗಳ, ಗುರುಗಳ ಇತ್ಯಾದಿ ಬೋಧನೆ ಮಾಡುವ ಸ್ಥಾನದಲ್ಲಿರುವವರ ಗುಣಗಳನ್ನು, ಸಲಹೆಗಳನ್ನು, ಉದಾಹರಣೆಗಳನ್ನು ಅನುಮೋದಿಸುತ್ತಾರೆ. ಹಾಗೆ ಅನುಮೋದಿಸುವ ಮೂಲಕ ತಮ್ಮ ತನ್ನತನದಲ್ಲಿ ಇರುವ ಅದೇ ಮಾದರಿಯ ಗುಣ ಸ್ವಭಾವಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.
ತಮ್ಮತನದ ಗುಣ ಸ್ವಭಾವಗಳಿಗೆ ಪೂರಕವಾಗಿರುವ ವಿಷಯಗಳನ್ನು ಅವರು ಎಲ್ಲಿಂದಾದರೂ, ಯಾರಿಂದಲಾದರೂ ಅವರು ಹೆಕ್ಕಿಕೊಳ್ಳುವರು. ಆದರೆ ಯಾವುದೇ ನಿರ್ಧಿಷ್ಟ ವ್ಯಕ್ತಿಗೆ ಅವರು ಸೀಮಿತವಾದರೆ ಅಥವಾ ವ್ಯಕ್ತಿಪೂಜೆ ಮಾಡುತ್ತಿದ್ದಾರೆಂದರೆ ಅವರು ತಮ್ಮತನದ ಸಾಕ್ಷಾತ್ಕಾರವನ್ನು ಪಡೆದಿಲ್ಲವೆಂದೋ ಅಥವಾ ತಮ್ಮತನವನ್ನು ರೂಪಿಸಿಕೊಳ್ಳುವುದರಲ್ಲಿ ಗೊಂದಲದಿಂದ ಕೂಡಿದ್ದಾರೆಂದೋ ತಿಳಿಯಬಹುದು.
ತಮ್ಮತನವೆನ್ನುವುದೇ ನೈತಿಕ ಮೌಲ್ಯ, ನಿರ್ಧಿಷ್ಟ ಗುಣಗಳಿಂದ ರೂಪುಗೊಂಡಿರುವುದು. ಯಾರೋ ಒಬ್ಬ ನಟರಾಗಲಿ, ರಾಜಕಾರಣಿಯಾಗಲಿ, ಸಾಹಿತಿಯಾಗಲಿ, ಕಲಾವಿದನಾಗಲಿ, ಅವರವರತನದ ಅಭಿವ್ಯಕ್ತಿಯಾಗಿ ತಮ್ಮ ಕ್ಷೇತ್ರದಲ್ಲಿ ತಮ್ಮ ಕೆಲಸದ ಮೂಲಕ ವ್ಯಕ್ತಪಡಿಸಿರುತ್ತಾರೆ.ಅವರು ಯಾವುದೇ ರೀತಿಯ ಕೊಡುಗೆಗಳನ್ನು ನಾಡು ನುಡಿ ಮತ್ತು ಸಮಾಜಕ್ಕೆ ಕೊಟ್ಟರೂ ಅವರ ಕೊಡುಗೆಗಳನ್ನು ಸ್ವೀಕರಿಸುವ ರೀತಿಯಲ್ಲಿ ಮತ್ತು ಕೊಟ್ಟಿರುವ ಅವರನ್ನು ಗೌರವಿಸುವ ರೀತಿಯಲ್ಲಿ ಉನ್ಮತ್ತನಾಗಿ ಮಾರು ಹೋಗುವ ಸಾಮೂಹಿಕ ಸನ್ನಿಯನ್ನು ಹೊಂದಿರುವುದಿಲ್ಲ. ಇಷ್ಟು ತಿಳಿದುಕೊಳ್ಳೋಣ.
ತನ್ನತನದ ಸಾಕ್ಷಾತ್ಕಾರವಾಗಿರುವವನು ಸಾಮೂಹಿಕ ಸನ್ನಿಯಿಂದ, ಜನಪ್ರಿಯ ಅನುಸರಣೆಗಳಿಂದ ಮುಕ್ತನಾಗಿರುತ್ತಾರೆ. ಉತ್ಪ್ರೇಕ್ಷೆಗಳ ಅಮಲಿನಲ್ಲಿ ಮೈ ಮರೆಯುವುದಿಲ್ಲ. ಮಾಸ್ತಿ ಕನ್ನಡದ ಆಸ್ತಿ ಎಂಬುದೊಂದು ಮಾತು. ಅದನ್ನು ಕೇಳಿದಾಗ ಈ ತನ್ನತನದ ವ್ಯಕ್ತಿಯೊಬ್ಬ ಲೇಖಕನಾಗಿದ್ದರೆ ಅವನ ಆಂತರಿಕ ಪ್ರತಿಕ್ರಿಯೆಗಳು ಹೀಗಿದ್ದಿರಬಹುದು. “ಕನ್ನಡ ನುಡಿಯ ಅಸ್ತಿತ್ವಕ್ಕೆ ಅವರು ನೀಡಿರುವ ಕೊಡುಗೆಗಳು ನಿಜಕ್ಕೂ ಗೌರವಪೂರ್ಣವೇ. ಆದರೆ ಅವನ್ನು ಪ್ರಶಂಸಿಸುವ ಉತ್ಪ್ರೇಕ್ಷೆಯ ಧ್ವನಿ ಇದು. ಆಸ್ತಿ ಎಂದು ಕರೆಯಿಸಿಕೊಳ್ಳದಿದ್ದರೂ ಇತರ ಅನೇಕಾನೇಕರ ಕೊಡುಗೆಗಳು ಕನ್ನಡಕ್ಕೆ ಇವೆ. ಇದರಲ್ಲಿ ನಾನೂ ಹೊರತಲ್ಲ.”
ಏಕೈಕ, ನ ಭೂತೋ ನ ಭವಿಷ್ಯತಿ, ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟುವುದಿಲ್ಲ, ಸಮಸ್ತರ ಹೃದಯ ನಿವಾಸಿ, ನಮ್ಮೆಲ್ಲರ ಆಶಾಕಿರಣ; ಇತ್ಯಾದಿಗಳು ಅವರ ಪದ ಭಂಡಾರದಲ್ಲಿರುವುದಿಲ್ಲ. ಬಸವಣ್ಣಾ ರಾಜಾ ಬಿಜ್ಜಳನ ಗೌರವಿಸಿದರೂ, ಪ್ರೀತಿಸಿದರೂ ಅವನ ಅಧಿಕಾರದ ಹಂಗನ್ನು ತಿರಸ್ಕರಿಸಿದ್ದನ್ನು ನೆನಪಿಸಿಕೊಳ್ಳೋಣ. ಎನಗಿಂತ ಕಿರಿಯರಿಲ್ಲ ಎನ್ನುವ ಬಸವಣ್ಣ ತನ್ನ ಅನ್ನ, ಅಧಿಕಾರ ಮತ್ತು ಅಂತಸ್ತಿಗೆ ಆಶ್ರಯನಾಗಿರುವ ಬಿಜ್ಜಳನ ಓಲೈಸುವ ಹೊಗಳುಭಟ್ಟಂಗಿಯಂತಹ ಕವಿಯಾಗಿ ವಚನಗಳನ್ನು ರಚಿಸಲಿಲ್ಲ. ತಮ್ಮತನವನ್ನು ವ್ಯವಸ್ಥೆಯ ಅಧೀನಕ್ಕೆ ಬಿಟ್ಟುಕೊಡಲು ಸಿದ್ಧರಲ್ಲದ ಬಸವಣ್ಣ ಸಾಯಲೂ ಸಿದ್ಧವಾಗಿ ಮರಣವೇ ಮಹಾನವಮಿ ಎಂದರು.
“ಜೋಳವಾಳಿಯವ ನಾನಲ್ಲ, ವೇಳವಾಳಿಯವ ನಾನಯ್ಯ” ಎನ್ನುವುದು ಅವರತನದ ಧೋರಣೆ.
‘ತನ್ನ ಜೀವಿತಕ್ಕೆ ಆಧಾರವಾಗಿರುವ ಆಹಾರಾದಿಗಳನ್ನು ಕೊಡುವ ಧಣಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಪದ್ಧತಿಯನ್ನು ಜೋಳವಾಳಿ ಎಂದೂ, ಯುಕ್ತ ಸಮಯಕ್ಕೆ ಸರಿಯಾಗಿ ನೆರವಿಗೆ ಬರುವ ಪದ್ಧತಿಯನ್ನು ವೇಳವಾಳಿ ಎಂದೂ ಕರೆಯಲಾಗುತ್ತಿತ್ತು.’ ಒಟ್ಟಿನಲ್ಲಿ ಇಷ್ಟು ತಿಳಿಯೋಣ ತನ್ನತನದ ಮನುಷ್ಯರು ವೇಳವಾಳಿಯವರೇ ಹೊರತು ಜೋಳವಾಳಿಯವರಲ್ಲ.
ಗುಂಪಿನ ಧ್ವನಿಯಲ್ಲ
ಎಲ್ಲರ ಮಾತನ್ನು ತನ್ನದು ಎಂಬಂತೆಯೂ, ತನ್ನ ಮಾತೇ ಎಲ್ಲರದು ಎಂಬಂತೆಯೂ ತನ್ನತನದ ಅರಿವುಳ್ಳವರು ಹೇಳುವುದಿಲ್ಲ. ಒಂದು ವೇಳೆ ಸಮೂಹಗಳು, ಸಂಘಟನೆಗಳು ಧ್ವನಿ ಎತ್ತಿದರೆ ಅವು ಸಾಂಘಿಕವಾಗಿವೆ ಎಂದೋ, ಅವರ ಬೆಂಬಲ ತನಗೆ ಬೇಕಾಗುತ್ತದೆ ಎಂದೋ ಧ್ವನಿಗೂಡಿಸುವುದಿಲ್ಲ. ತಾವು ಅದನ್ನು ಒಪ್ಪಿದ್ದರೆ ಮಾತ್ರವೇ ದನಿಗೂಡಿಸುತ್ತಾರೆ ಮತ್ತು ತಮ್ಮದೇ ಆದ ರೀತಿಯಲ್ಲಿ ಅನುಮೋದಿಸುತ್ತಾರೆ. ಸಂಘಟನೆಗಳನ್ನು ಮಾಡಿದರೂ ಅದರಲ್ಲಿ ಪ್ರಜಾತಂತ್ರಾತ್ಮಕ ರೀತಿಯನ್ನು ಅನುಸರಿಸುತ್ತಾರೆ.
ನಾಯಕನೆಂದು ಅವರಿವರೆಂದರೂ ತಾನು ತನ್ನ ವೈಯಕ್ತಿಕ ಬದ್ಧತೆಯಿಂದ ಹೊತ್ತಿರುವ ಸಂಕಲಿತ ಜವಾಬ್ದಾರಿಯ ಮುಂದಾಳು, ಮೊದಲು ಕೆಲಸ ಮಾಡಬೇಕಾಗಿರುವ ಆಳೆಂಬ ಅರಿವಿರುತ್ತದೆಯೇ ಹೊರತು, ಹಲವರನ್ನು ಅಧೀನದಲ್ಲಿಟ್ಟುಕೊಂಡಿರುವ ನಾಯಕ ತಾನು ಎಂಬ ಮೇಲರಿಮೆಯ ಭಾವ ಇರುವುದಿಲ್ಲ. ಅಷ್ಟೇ ಅಲ್ಲ, ತಮ್ಮ ಒಲವು ಮತ್ತು ನಿಲುವುಗಳನ್ನು, ಅಭಿಪ್ರಾಯಗಳನ್ನು ಸಾಮಾನ್ಯೀಕರಿಸುವುದಿಲ್ಲ. ಮತ್ತು ಯಾವುದೇ ಸಾರ್ವಜನಿಕವಾದ ವಿಷಯಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆಯೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ.
ತಮ್ಮತನದ ಅರಿವಿರುವವರು ಸದಾ ಇತರರಿಗೂ ಅವರತನವೊಂದಿರುತ್ತದೆ ಎಂಬ ಅರಿವಿನಲ್ಲಿ ಜಾಗೃತವಾಗಿರುತ್ತಾರೆ. ತಮ್ಮತನಕ್ಕೆ ಬದ್ಧವಾಗಿರುವವರು ಇತರರ ತಮ್ಮತನವನ್ನೂ ಗೌರವಿಸುತ್ತಾರೆ. ತಮ್ಮದನ್ನೇ ಹೇರುವ ಮತ್ತು ಒಪ್ಪಿಸುವ ಧಾವಂತ ಎಂದಿಗೂ ಅವರಲ್ಲಿ ಇರುವುದಿಲ್ಲ. ಒಂದು ವೇಳೆ ತಮ್ಮ ಮಾತು ಬಿದ್ದು ಹೋಗುವ ಅಥವಾ ನಗಣ್ಯವಾಗುವುದನ್ನು ಕಂಡರೂ ಭಾವೋದ್ರೇಕಗೊಳ್ಳುವುದಿಲ್ಲ.
“ನಾನೆಷ್ಟು ಕಾಳಜಿ ಮತ್ತು ಪ್ರೀತಿಯಿಂದ ವಿಷಯವನ್ನು ಪ್ರಸ್ತುತ ಪಡಿಸಿದ್ದೇನೆ. ಆದರೆ ನೀವು ಅದನ್ನು ಪರಿಗಣಿಸಿಯೇ ಇಲ್ಲ. ನನಗೆ ತುಂಬಾ ನೋವಾಯಿತು. ದಯಮಾಡಿ ಇದನ್ನು ಪರಿಶೀಲಿಸಿ, ಒಪ್ಪಿಕೊಳ್ಳಬೇಕೆಂದು ವಿನಯಪೂರ್ವಕವಾಗಿ ಆಗ್ರಹಿಸುತ್ತೇನೆ.” ಇಂತವೆಲ್ಲಾ ಅವರ ವಾಕ್ಯಗಳಲ್ಲ. ಮನವರಿಕೆ ಮಾಡಿಕೊಡುವ, ಮನದಟ್ಟು ಮಾಡಿಸುವ, ಮನವೊಲಿಸುವ ಸಂದರ್ಭಗಳು ಬಂದಾಗ ಅದಕ್ಕೆ ತಮ್ಮ ಪ್ರಯತ್ನವನ್ನು ಮಾಡುವರು. ಆದರೆ ತಮ್ಮತನವನ್ನು ಒತ್ತೆಯಿಟ್ಟಲ್ಲ. ಸರಳವಾಗಿ ಹೇಳುವುದಾದರೆ ಬಕೆಟ್ ಹಿಡಿಯುವುದಿಲ್ಲ.
ಎಲ್ಲವನ್ನೂ, ಎಲ್ಲರನ್ನೂ ಭಳಿರೇ ಭಳಿರೇ ಎಂದಂತೂ ಮೆಚ್ಚುವ ನಟನೆ ಮಾಡುತ್ತಾ ಅವರ ಮೆಚ್ಚುಗೆಗೆ ಪಾತ್ರರಾಗಲು ಯತ್ನಿಸುವುದಿಲ್ಲ. “ಸೂಳೆಗೆ ಹುಟ್ಟಿದ ಕೂಸಿನಂತೆ ಆರನಾದಡೆಯೂ ‘ಅಯ್ಯಾ ಅಯ್ಯಾ’ ಎನಲಾರೆ” ಎನ್ನುವ ಸ್ವಾಭಿಮಾನ. ಜೊತೆಗೆ, “ಚೆನ್ನಯ್ಯನೆಮ್ಮಯ್ಯನು, ಚೆನ್ನಯ್ಯನ ಮಗ ನಾನು. ಕೂಡಲಸಂಗನ ಮಹಾಮನೆಯಲಿ ಧರ್ಮಸಂತಾನಿ ಭಂಡಾರಿ ಬಸವಣ್ಣನು” ಎಂದು ಹೇಳಿಕೊಳ್ಳುವ ತನ್ನತನದ ಬದ್ಧತೆ.
ನನ್ನ ಭಾಷೆ ನನ್ನದು
ಫೇಸ್ಬುಕ್ ಮತ್ತು ವಾಟ್ಸಾಪ್ಗಳ ಅಂತರ್ಜಾಲ ವೇದಿಕೆಗಳಿಂದಾಗಿ ಸಾಮಾನ್ಯ, ಅಸಮಾನ್ಯ ಎನ್ನದೇ, ಪಂಡಿತ ಪಾಮರ ಎನ್ನದೇ ಯಾರಾದರೂ ತಮ್ಮ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಪ್ರಕಟಿಸಲು ಮತ್ತು ತಮ್ಮತನವನ್ನು ಪ್ರದರ್ಶಿಸಲು ಅವಕಾಶವಿದೆ. ಸಾಮಾನ್ಯವಾಗಿ ಇತರೇ ವಸ್ತುಗಳಿಗೆ ಮತ್ತು ವ್ಯವಸ್ಥೆಗಳಲ್ಲಿ ಇರುವಂತೆ ಇದರಲ್ಲಿಯೂ ಅನುಕೂಲಗಳು ಅನಾನುಕೂಲಗಳೂ ಇವೆ. ಬಳಸುವ ಬಗೆಯು ಅವರವರ ವಿವೇಚನೆಗೆ ಬಿಟ್ಟಿರುವುದೇ ಆಗಿರುತ್ತದೆ.
ವಿವೇಚನೆ ಎಂದರೇನು? ನಿಶ್ಚಿತವಾದ ತಿಳುವಳಿಕೆ ಮತ್ತು ಸ್ಪಷ್ಟವಾದ ಅರಿವು ಇದ್ದು ಅದನ್ನು ಸಾರಾಸಾರವನ್ನು ತಿಳಿದು, ಉಚಿತ ಅನುಚಿತವಾದುದು ಯಾವುದೆಂದು ಬಗೆದು ಆಲೋಚಿಸುವ, ಗ್ರಹಿಸುವ, ಪ್ರಕಟಗೊಳಿಸುವ, ಪ್ರದರ್ಶಿಸುವ ಒಬ್ಬನ ವಿವೇಕ. ತನ್ನತನದ ಸಾಕ್ಷಾತ್ಕಾರವುಳ್ಳವರಿಗೆ ಈ ವಿವೇಚನೆ ಅಥವಾ ವಿವೇಕ ಎನ್ನುವುದು ಸಹಜವಾದ ಗುಣವಾಗಿರುತ್ತದೆ ಅಥವಾ ಆಗಿರಬೇಕು.
ಫೇಸ್ಬುಕ್ಕಿನಲ್ಲಿ ಕೆಲವು ವಿಷಯಗಳು ಚರ್ಚೆಯಾಗುತ್ತಿರುತ್ತವೆ. ವಿಷಯದ ಪರವಾಗಿರುವವರೂ ಮತ್ತು ವಿರೋಧವಾಗಿರುವವರೂ ತಮ್ಮ ತಮ್ಮ ವಾದಗಳನ್ನು, ವಿಷಯಗಳನ್ನು ಮತ್ತು ಗ್ರಹಿಕೆಗಳನ್ನು ಪ್ರದರ್ಶಿಸುತ್ತಿರುತ್ತಾರೆ. ಆದರೆ ಅವರ ಮಾತುಗಳಲ್ಲಿ ಬಳಕೆಯಾಗುವ ಭಾಷೆಯನ್ನು ನೋಡಿದರೆ ಅವರ ಆಲೋಚನೆ, ಗ್ರಹಿಕೆ ಮತ್ತು ಅಧ್ಯಯನಗಳಿಗಿಂತ, ಅಥವಾ ಒಲವು ಮತ್ತು ನಿಲುವುಗಳಿಗಿಂತ ಅವರವರ ಪೂರ್ವಾಗ್ರಹಗಳು ಮತ್ತು ಮಾನಸಿಕ ಸಮಸ್ಯೆಗಳು ಪ್ರದರ್ಶನವಾಗುತ್ತಿರುತ್ತವೆ. ಆ ಪ್ರದರ್ಶನವಾಗುವುದು ಅವರು ಬಳಸುವ ಭಾಷೆಯಿಂದ.
ಬಹಳಷ್ಟು ಸಂದರ್ಭಗಳಲ್ಲಿ ವಿಷಯದ ವಿರೋಧಿಗಳೂ ಮತ್ತು ಪರವಾಗಿರುವವರಿಬ್ಬರೂ ಒಂದೇ ಭಾಷೆಯಲ್ಲಿ ಮಾತಾಡುತ್ತಿರುತ್ತಾರೆ. ಪರಸ್ಪರ ನಿಂದನೆಗಳಲ್ಲಿ, ಅವಹೇಳನಗಳಲ್ಲಿ ತೊಡಗಿರುವುದಲ್ಲದೇ ಅಭಿಪ್ರಾಯಗಳನ್ನು ಹೇಳುವ ಬದಲು ನಿರ್ಣಯಗಳನ್ನು ನೀಡುತ್ತಿರುತ್ತಾರೆ. ಅವುಗಳಲ್ಲಿ ಅವರು ವಿಷಯದ ಬಗ್ಗೆ ತಳೆದಿರುವ ಒಲವು ನಿಲುವುಗಳಿಗಿಂತ ವ್ಯಕ್ತಿಯಲ್ಲಿರುವ ಮೇಲರಿಮೆ, ಆತ್ಮರತಿ, ಕೀಳರಮೆ, ಬೈಪೋಲಾರ್ ಸಮಸ್ಯೆ, ಬಾರ್ಡರ್ ಲೈನ್ ಡಿಸಾರ್ಡರ್, ತನ್ನತನದ ಅರಿವಿಲ್ಲದೇ ಸಮೂಹ ಸನ್ನಿಗೆ ಒಳಗಾಗಿರುವ ಲಕ್ಷಣಗಳೇ ಪ್ರದರ್ಶಿತವಾಗುತ್ತಿರುತ್ತವೆ.
ಇಲ್ಲಿ ಗಮನಿಸಿ ನೋಡಿ. ಪರ ಅಥವಾ ವಿರೋಧವೇನೂ ಇಲ್ಲದ ಮೂರನೆಯ ವ್ಯಕ್ತಿಯೊಬ್ಬ ಈ ಚರ್ಚೆಯನ್ನು ಗಮನಿಸುತ್ತಿದ್ದಾಗ ಅವನಿಗೆ ಇಬ್ಬರ ಬಗ್ಗೆಯೂ ಒಲವುಂಟಾಗುವುದಿಲ್ಲ. ಬದಲಿಗೆ ಇಬ್ಬರ ಬಗ್ಗೆಯೂ ಜಿಗುಪ್ಸೆ ಹುಟ್ಟುತ್ತದೆ. ಹೀಗಾಗಿ ಅವನು ವಿಷಯದ ಪರವಾಗಿಯೂ ಮನವೊಲಿಯುವುದಿಲ್ಲ, ವಿರುದ್ಧವಾಗಿಯೂ ಮನವರಿಕೆಯಾಗುವುದಿಲ್ಲ. ಒಟ್ಟಾರೆ ಎರಡೂ ವರ್ಗಗಳ ನಡುವಿನ ಒಂದು ಸಂಘರ್ಷವಾಗಿ ಕಾಣುತ್ತದೆ.
ತನ್ನತನದ ಅರಿವಿರುವವರು ಎಂದಿಗೂ ತಮ್ಮ ಭಾಷೆಯನ್ನು ಸಡಿಲಬಿಡುವುದಾಗಲಿ, ತಾವೇ ಏಕಮೇವಾದ್ವಿತೀಯವೆಂಬಂತೆ ನಿರ್ಣಯ ತೆಗೆದುಕೊಂಡಂತೆ ಮಾತಾನಾಡುವುದಾಗಲಿ ಮಾಡುವುದಿಲ್ಲ. ನಿಂದನೆಯಂತೂ ದೂರದ ಮಾತು. ಉದಹರಿಸುವುದಾದರೆ, ಎಡಪಂಥ ಮತ್ತು ಬಲಪಂಥದವರು ಯಾವುದೋ ವಿಚಾರದ ಮೇಲೆ ಚರ್ಚೆ ಮಾಡುತ್ತಿದ್ದಾರೆಂದಿಟ್ಟುಕೊಳ್ಳಿ. ಯಾವ ಪಂಥದವರೂ ಅಲ್ಲದ ಬಹುದೊಡ್ಡ ಸಮೂಹವೊಂದು ಅದನ್ನು ನೋಡುತ್ತಿದೆ ಎಂದಿಟ್ಟುಕೊಳ್ಳಿ. ಇಬ್ಬರೂ ಬಳಸುವ ಭಾಷೆಗಳಲ್ಲಿ ಯಾರದು ಮುತ್ತಿನ ಹಾರದಂತೆ ತಾರ್ಕಿಕವಾಗಿ ಪೋಣಿಸಿಕೊಂಡು ಆಕರ್ಷಕವಾಗಿರುತ್ತದೋ, ಮಾಣಿಕ್ಯದ ದೀಪ್ತಿಯಂತೆ ಪ್ರಜ್ಞೆಯ ಬೆಳಕನ್ನು ಕೊಡುವುದೋ, ಸ್ಫಟಿಕದ ಸಲಾಕೆಯಂತೆ ವಿಷಯ ಸ್ಪಷ್ಟವಾಗಿ ಮತ್ತು ನೇರವಾಗಿರುತ್ತದೋ ಆಗ ಅಹುದಹುದು ಎಂದು ಒಪ್ಪಲಾಗುತ್ತದೆ.
ಅಲ್ಲಿ ಯಾರು ಘನತೆಯನ್ನು ಪ್ರದರ್ಶಿಸುತ್ತಾರೋ ಅವರ ಮಾತು ಘನವಾಗಿರುತ್ತದೆ. ತನ್ನತನದ ಘನತೆಯನ್ನು ಅರಿತವರು ಲಘುವಾದ ಭಾಷೆಗಳಿಂದ ಎದುರಾಳಿಯ ನಿಂದನೆಗಳನ್ನು ಮಾಡುತ್ತಾ ತನ್ನತನದ ಮೌಲ್ಯವನ್ನು, ತನ್ನತನವೆಂಬುದು ಬೆಂಬಲಿಸುವ ಮತ್ತು ಪೋಷಿಸುವ ವಿಷಯದ ಗೌರವವನ್ನು ಕಡೆಗಣಿಸುವುದಿಲ್ಲ.
ಬಹಳ ಎಚ್ಚರಿಕೆಯಿಂದ, ವಿವೇಕ ಮತ್ತು ವಿವೇಚನೆಗಳಿಂದ ಭಾಷೆಯನ್ನು ಬಳಸಲಾಗುತ್ತದೆ. ಏಕೆಂದರೆ ಅವರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ ತಾವು ಗೌರವಿಸುವ ಮೌಲ್ಯವು, ಅವುಗಳಿಂದ ರೂಪುಗೊಂಡಿರುವ ತಮ್ಮತನವು ಅಮೂರ್ತವಾದದ್ದು. ಹಾಗೂ ಅದನ್ನು ಪ್ರಕಟಿಸುವ ಮೂರ್ತಸ್ವರೂಪವೆಂದರೆ ಭಾಷೆ. ವ್ಯಕ್ತಿಯು ಉಪಯೋಗಿಸುವ ಭಾಷೆ ಮತ್ತು ಪರಿಭಾಷೆಗಳ ಆಧಾರದಲ್ಲಿ ಆತನು ತನ್ನತನವನ್ನು ಅದೆಷ್ಟರಮಟ್ಟಿಗೆ ಪ್ರದರ್ಶಿಸುತ್ತಾನೆ, ಗೌರವಿಸಿಕೊಳ್ಳುತ್ತಾನೆ ಎಂಬುದು ನಿರ್ಣಯವಾಗುತ್ತದೆ.
ಬಹಳಷ್ಟು ಸಲ ಹೊಟ್ಟನ್ನು ತೂರುವುದೇ ಆಗಿರುತ್ತದೆ. ಕಾಳನ್ನು ಎರಚುವುದಾಗಿರುವುದೇ ಇಲ್ಲ. ವಿವೇಕಿಯು ಬೀಜಗಳನ್ನು ಅಥವಾ ಕಾಳುಗಳನ್ನು ಎರಚಬೇಕು. ಏಕೆಂದರೆ ಅವು ಮೊಳೆತಾವು, ಬೆಳೆದಾವು, ಮುಂದೊಂದು ದಿನ ಬೆಳೆ ಕೊಟ್ಟಾವು. ತನ್ನತನದ ಸತ್ಯವೆಂಬುದು ಕೂರಲಗಾಗಿದ್ದರೂ ಅದರಿಂದ ತೊಂದರೆ, ನಷ್ಟವಾಗಬಹುದೆಂಬ ಭಯವಿಲ್ಲದೇ ಅದನ್ನು ಹಿಡಿದಿರುವುದೇ ತನ್ನ ಗೆಲುವು ಎಂದು ತನ್ನತನದ ಪ್ರಜ್ಞೆಯುಳ್ಳವರು ಅರಿತಿರುತ್ತಾರೆ. ಅವರಿಗೆ ಸೋಲಿನ ಭಯವೋ ಆತಂಕವೋ ಇರುವುದಿಲ್ಲ. ತನ್ನ ದೌರ್ಬಲ್ಯಗಳ ಪ್ರದರ್ಶನವಾಗುವುದು ಅವರಿಗೆ ಬೇಕಿಲ್ಲ.
ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ,
ಎರಡಾಳಿನ ಭಾಷೆಯ ಕೊಲುವೆನೆಂಬ ಭಾಷೆ ದೇವನದು
ಗೆಲುವೆನೆಂಬ ಭಾಷೆ ಭಕ್ತನದು
ಸತ್ಯವೆಂಬ ಕೂರಲಗನೆ ಹಿಡಿದುಕೊಂಡು ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವಾ.
ಒಟ್ಟಾರೆ ತನ್ನತನವ ಅರಿತವನ ಭಾಷೆ ಕೊಲುವೆನೆಂಬುದಾಗಿರುವುದಿಲ್ಲ. ಬದಲಿಗೆ ಗೆಲುವೆನೆಂದಾಗಿರುತ್ತದೆ. ಈ ಗೆಲುವೆಂಬುದು ಸವಾಲಿಗೆ ಸವಾಲೊಡ್ಡುವುದಲ್ಲ. ತನ್ನತನವನ್ನು ಕಳೆದುಕೊಳ್ಳುವ ಸೋಲನ್ನುಣ್ಣದಿರುವುದು. ಏಕೆಂದರೆ, “ನುಡಿಯೊಳಗಾಗಿ ನಡೆಯದಿದ್ದರೆ” ತಮ್ಮ ಆತ್ಮಸಾಕ್ಷಿಯು ಒಲಿಯುವುದಿಲ್ಲ ಎಂಬ ಅರಿವು ಅವರಿಗಿರುತ್ತದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ3 days agoಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ
-
ದಿನದ ಸುದ್ದಿ6 days agoಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು
-
ದಿನದ ಸುದ್ದಿ5 days agoಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
-
ದಿನದ ಸುದ್ದಿ3 days agoಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?
-
ದಿನದ ಸುದ್ದಿ7 days agoತ್ಯಾವಣಿಗೆಯ ಪ್ರಸಿದ್ಧ ಐವಿನ್ ಕಂಪ್ಯೂಟರ್ ತರಬೇತಿ ಕೇಂದ್ರ ; ಸೃಜನಶೀಲ ಚಟುವಟಿಕೆಯೊಂದಿಗೆ ಕಂಪ್ಯೂಟರ್ ಕಲಿಸ್ತಾರೆ ಈ ಚೇತನ್
-
ಅಂಕಣ3 days agoಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
-
ದಿನದ ಸುದ್ದಿ6 days agoಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್
-
ದಿನದ ಸುದ್ದಿ2 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು



