ಸಿನಿ ಸುದ್ದಿ
ವರನಟ ಡಾ.ರಾಜಕುಮಾರ ‘ಒಂದು ಜಾಗತಿಕ ವಿಸ್ಮಯ’..!
- ನಿಜಲಿಂಗಯ್ಯ ಹಾಲದೇವರಮಠ
(ಲೇಖನ ಭಾಗ-2)
- “12ನೆಯ ಶತಮಾನದಲ್ಲಿ ಒಂದು ಪುಟ್ಟ ಮಗು ಕನ್ನಡ ಭಾಷೆಯ ವಿರೋಧಿಗಳ ವಿರುದ್ಧ ಧ್ವನಿ ಎತ್ತಿತ್ತು. ಅಲ್ಲಿಂದಲೇ ಕನ್ನಡ ಚಳುವಳಿ ಉಗಮವಾದದ್ದು ನಂತರ ಆ ಮಗು ಪ್ರಾಪ್ತಕ್ಕೆ ಬಂದಾಗ ವಚನ ಸಾಹಿತ್ಯದ ಮೂಲಕ ಸಮಾಜದ ಮೌಢ್ಯವನ್ನು ನಿವಾರಿಸುವಲ್ಲಿ ಶ್ರಮಿಸಿದ ವ್ಯಕ್ತಿಯೇ ನಮ್ಮ ಬಸವಣ್ಣ. ಹನ್ನೆರಡನೇ ಶತಮಾನ ಕಳೆದು 20ನೇ ಶತಮಾನಕ್ಕೆ ಅಡಿ ಇಟ್ಟಿದ್ದೇವೆ. ಈ ಆಧುನಿಕ ಯುಗದಲ್ಲಿ ಕಲಾ ಲೋಕದ ಮೂಲಕ ನಾಡು-ನುಡಿಗೆ ಸಂಸ್ಕೃತಿಗೆ ಶ್ರೇಷ್ಠ ಸೇವೆಗೈದು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡಿ ಅದರ ಉನ್ನತಿಗೆ ಶ್ರಮಿಸಿದ ವ್ಯಕ್ತಿಯೇ ರಾಜಣ್ಣ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಇಪ್ಪತ್ತನೇ ಶತಮಾನದಲ್ಲಿ ರಾಜಣ್ಣ”
–ಮಹಾಕವಿ ಸಿದ್ಧಯ್ಯ ಪುರಾಣಿಕರು
ಇತಿಹಾಸದಲ್ಲಿ 12ನೇ ಶತಮಾನದ ಬಸವಯುಗದಷ್ಟೇ ಪ್ರಖರವಾದದ್ದು ಇಪ್ಪತ್ತನೇ ಶತಮಾನದ ರಾಜಯುಗ. ಬಸವಣ್ಣನಂತೆ ರಾಜಣ್ಣನವರು ಕ್ರಾಂತಿಕಾರಿ ಬದಲಾವಣೆಯ ಕರ್ಮಯೋಗಿ. ಕನ್ನಡ ಸಮಾಜವನ್ನು ಒಂದುಗೂಡಿಸಿದ ಮಹಾಚೇತನ. ಕಲಾಜ್ಯೋತಿಯಿಂದ ಮಾನವ ಜ್ಯೋತಿ ಬೆಳಗಿಸಿದ ನಂದಾದೀಪ. ತಮ್ಮ ಕಾಯಕದಲ್ಲಿಯೇ ಕೈಲಾಸ ಕಂಡ ಅವರು ಕಾಯಕ ತತ್ವದ ಕರ್ಮಾನುಷ್ಠಾನಿ. ಸಂಸ್ಕೃತಿ ಮತ್ತು ಮಾನವತ್ವಗಳ ಮಹತ್ವವನ್ನು ಮನದಟ್ಟು ಮಾಡಿಕೊಟ್ಟು ಶತಮಾನಗಳಿಂದ ಹೆಪ್ಪುಗಟ್ಟಿದ್ದ ಮೌಢ್ಯಚಿಂತನೆಗಳನ್ನು ತಮ್ಮ ಪಾತ್ರಗಳ ಮೂಲಕ ಕಡೆದು ನವನೀತ ತೆಗೆದ ವಿಚಾರಶೀಲ.
ಸಮಾಜದ ಮೇಲು-ಕೀಳು, ಹಿಂಸೆ, ಅನ್ಯಾಯ, ಅನೀತಿ, ಬಡತನ, ಶೋಷಣೆ, ಜಾತೀಯತೆ, ಪಾಶ್ಚಾತ್ಯ ಸಂಸ್ಕೃತಿಯ ಹೀನ ಪ್ರಭಾವ ಮೊದಲಾದ ಸಮಾಜದ ಓರೆ-ಕೋರೆಗಳನ್ನು ತಮ್ಮ ಕಲಾ ಜೀವನದಿಂದಲೇ ತಿದ್ದಿ ತೀಡಿ ಮಾನವ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ವಿಶ್ವನಟ. ಕಾಳಸಂತೆ ಎಂಬ ಕಲೆಯನ್ನು ಕಿತ್ತುಹಾಕಿ ಕಲೆಗೆ ಕಿಮ್ಮತ್ತು ತಂದುಕೊಟ್ಟ ಕಲಾಯೋಗಿ. “ಕಲೆಯು ಕಲೆಗಾಗಿ ಅಲ್ಲ; ದಾನವನನ್ನು ಮಾನವನನ್ನಾಗಿ, ಮಾನವನನ್ನು ಮಹಾದೇವನನ್ನಾಗಿ ಮಾಡುವುದೇ ಕಲೆಯ ನಿಜವಾದ ಗುರಿ” ಎಂಬುದನ್ನು ರಾಜಕುಮಾರ್ ತಮ್ಮ ಸೇವೆಯಿಂದ ಸಾಧಿಸಿ ತೋರಿಸಿದ್ದಾರೆ.
ಈ ಮಹಾನುಭಾವರ ಕಲಾವಂತಿಕೆ, ಸಂಸ್ಕೃತಿ, ಮಾನವತೆ, ವಿನಯತೆ, ಸಾಮಾಜಿಕ ಚಿಂತನೆಗಳು ಎಂದೆಂದಿಗೂ ಪ್ರಸ್ತುತವಾಗಿವೆ. ರಾಜಕುಮಾರ ತತ್ವಗಳು ಕಾಲ, ದೇಶ, ಭಾಷೆ, ಜಾತಿಗಳನ್ನು ಗೆದ್ದುನಿಂತಿವೆ. ಅವು ನಿತ್ಯನೂತನ, ಸತ್ಯ ದರ್ಶನವಾಗಿವೆ. ವರಕವಿ ಬೇಂದ್ರೆಯವರು ಬೆಳಕನ್ನು ಕುರಿತು “ಇದು ಬರೀ ಬೆಳಗಲ್ಲೋ ಅಣ್ಣ” ಅನ್ನುವಂತೆ ವರನಟ ರಾಜಕುಮಾರ ಚಿತ್ರಗಳು “ಬರೀ ಚಿತ್ರವಲ್ಲೋ ಅಣ್ಣ” ಎಂಬಂತಿವೆ. ಅವುಗಳಲ್ಲಿ ಜಗತ್ತೇ ಅಡಗಿದೆ. ವರನಟರು ತಮ್ಮ ನೂರಾರು ಪಾತ್ರಗಳಲ್ಲಿ ಸಾವಿರಾರು ವೇಷಭೂಷಣಗಳಲ್ಲಿ ವಿಶ್ವ ದರ್ಶನವನ್ನೇ ಮಾಡಿಸಿದ್ದಾರೆ.
ಅವರ ಭಾವಚಿತ್ರವನ್ನೊಮ್ಮೆ ಗಮನವಿಟ್ಟು ನೋಡಿದರೆ ಕರ್ನಾಟಕ ದರ್ಶನವೇ ಆಗುತ್ತದೆ. ಅವರ ಚಿತ್ರಗಳಲ್ಲಿ ಭಾರತೀಯ ಪರಂಪರೆ ಕರ್ನಾಟಕದ ಸಂಸ್ಕೃತಿಯಿದೆ, ಕನ್ನಡಿಗರ ಭವಿಷ್ಯವಿದೆ, ಮಾನವ ಕಲ್ಯಾಣ ಅಡಗಿದೆ, ಬದುಕುವ ಕಲೆಯಿದೆ, ವಿಶ್ವಮಾನವ ಸಂದೇಶವಿದೆ, ಪರಿಪೂರ್ಣ ಮನುಷ್ಯತ್ವವಿದೆ, ಮಾತಾ-ಪಿತೃ ಭಕ್ತಿ, ಹೆಣ್ಣಿಗೆ ಗೌರವ ಸ್ಥಾನವಿದೆ, ಕೆಳವರ್ಗದ ಜಾತಿಯವರ ನೋವಿದೆ, ಆ ನೋವಿಗೆ ಸಾಂತ್ವನವಿದೆ, ಅನುಭಾವ, ಆಧ್ಯಾತ್ಮ, ತಪಸ್ಸಿದೆ, ಜ್ಞಾನ ಸರಸ್ವತಿಗೆ ಪೂಜ್ಯತೆ ಇದೆ, ಬುದ್ಧ, ಬಸವ, ಗಾಂಧಿ, ಕಾರ್ಲ್ ಮಾರ್ಕ್ಸ್, ಲೋಹಿಯಾ ತತ್ವಗಳು ಸಾಕಾರಗೊಂಡಿವೆ.
ಪರಮಹಂಸ ವಿವೇಕಾನಂದರ ಅಧ್ಯಾತ್ಮದ ತಾತ್ಪರ್ಯವು ಅವರ ವಿಭಿನ್ನ ಪಾತ್ರ ವೈವಿಧ್ಯತೆ ಮತ್ತು ಬದುಕಿನಲ್ಲಿ ಸೂಸಾಡಿದೆ, ಶತಮಾನಗಳವರೆಗೂ ಯಾವುದೇ ಪೀಳಿಗೆಯ ಜನರಿಗೂ ಬೇಕಾದ ಸಾರ್ವಕಾಲಿಕ ಮಾರ್ಗದರ್ಶನಗಳಿವೆ, ಬಡತನ, ಅವಿದ್ಯಾವಂತಿಕೆ, ಕೆಳವರ್ಗದ ಅವಮಾನಗಳ ಹಿನ್ನೆಲೆಯಿಂದ ಬಂದವನು ಸಾಧಿಸಿದ ಸಾಹಸಗಾಥೆಗಳಿವೆ, ಏನಾದರೂ ಆಗುವದಕ್ಕಿಂತ ಮೊದಲು ಮಾನವನಾಗುವ ಸಂದೇಶವಿದೆ, ಶಾಲಾ ಶಿಕ್ಷಣದ ಅವಶ್ಯಕತೆಯೇ ಇಲ್ಲದೆ ಜೀವನದಲ್ಲಿ ಬಂಗಾರದ ಮನುಷ್ಯನಾಗುವ ರಾಜಪಥವಿದೆ, “ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ” ಎಂದು ಜಗತ್ತಿಗೆ ಸಾರಲಾಗಿದೆ.
ಈ ಮೂಲಕ ಚಿತ್ರೋದ್ಯಮವೆಂಬ ವಾಣಿಜ್ಯ ಕ್ಷೇತ್ರವನ್ನು ಸಾಂಸ್ಕೃತಿಕ ಕ್ಷೇತ್ರವನ್ನಾಗಿ ಕಟ್ಟಿದ ಸಾಂಸ್ಕೃತಿಕ ಶಿಲ್ಪಿ. ಅವರ ಪೌರಾಣಿಕ, ಭಕ್ತಿ ಪ್ರಧಾನ, ಐತಿಹಾಸಿಕ, ಜಾನಪದ, ಸಾಮಾಜಿಕ, ಹಿಚ್ ಕಾಕ್, ಜೇಮ್ಸ್ ಬಾಂಡ್ ಯಾವುದೇ ಪಾತ್ರವಿರಲಿ, ಸಂಭಾಷಣೆಯಿರಲಿ, ಗೀತೆಯಿರಲಿ ಎಲ್ಲದರಲ್ಲೂ ಸಂಸ್ಕೃತಿಯು ಪ್ರತಿಧ್ವನಿಸುತ್ತಿತ್ತು. ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರು “ರಾಜಕುಮಾರ್ ಭಾರತದ ಸಂಸ್ಕೃತಿಯ ಸಂಪತ್ತು” ಎಂದು ಹೇಳಿದ ಮಾತು ಸ್ತುತ್ಯಾರ್ಹ. ಚಿತ್ರಗಳಲ್ಲಿ ಅದೆಷ್ಟೋ ನಾಟಕಗಳಲ್ಲಿ ಎಲ್ಲೂ ಅವಾಚ್ಯ ಪದಗಳ ಬಳಕೆಯಾಗಿಲ್ಲ, ಎಲ್ಲೂ ಧೂಮಪಾನ, ಮದ್ಯಪಾನಕ್ಕೆ ಅವಕಾಶವಿಲ್ಲದಂತೆ, ಹೆಣ್ಣಿಗೆ, ಸರಸ್ವತಿಗೆ ಅವಮಾನವಾಗದಂತೆ ಜಾಗೃತ ವಹಿಸುತ್ತಿದ್ದ ದಾರ್ಶನಿಕ ನಟ.
ಇತರೆ ಭಾರತೀಯ ನಟರಂತೆ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಬಹುದಿತ್ತು. ಆದರೆ ಅದೆಲ್ಲಕ್ಕಿಂತ ಅವರಿಗೆ ಸಾಮಾಜಿಕ ಕಳಕಳಿಯಿತ್ತು. ನಾನು ನುಡಿದಂತೆ ಜನ ನಡೆಯುತ್ತಾರೆ ಎಂಬ ಜವಾಬ್ದಾರಿ ಇತ್ತು. ಆದ್ದರಿಂದ ಅವರು ಮಾಡುವ ಪಾತ್ರಗಳು ಅವರ ಮಾತುಗಳು ನವ ಸಮಾಜದ ನಿರ್ಮಾಣಕ್ಕೆ ಆಶಯಗಳಾಗಿದ್ದವು. ಈ ದೃಷ್ಟಿಯಲ್ಲಿ ರಾಜಕುಮಾರ ಒಂದು ಶಾಲೆಯಾಗಿ ಕೆಲಸ ಮಾಡಿದ ಕಲಾವಿದ. ಅವರ ಚಿತ್ರ ಜೀವನದ ಮೂಲಕ ಶಿಕ್ಷಣ ಪಡೆದವನು ಸಂಸ್ಕಾರ ಜೀವಿಯಾಗಿ ಹೊರಬರುತ್ತಾನೆ. ಅವನು ಉನ್ನತ ಯಶಸ್ಸು ಮತ್ತು ಉತ್ತಮ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊರಬಂದು ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತಾನೆ.
ಈ ಪರಿದೃಷ್ಟಿಯಲ್ಲಿ “ರಾಜಕುಮಾರ ಒಬ್ಬ ಲೋಕ ಶಿಕ್ಷಕ, ಮಹಾನಾಡೋಜ, ಆಚಾರ್ಯ ಶ್ರೇಷ್ಠ.” ಅವರ ಮಾತು ಶುದ್ಧವಾಗಿತ್ತು, ನಡೆ ಶುದ್ಧವಾಗಿತ್ತು, ಮನಸ್ಸು ಶುದ್ಧವಾಗಿತ್ತು, ಜ್ಞಾನ ಶುದ್ಧವಾಗಿತ್ತು. ವರನಟರು ಶುದ್ಧತೆಗಾಗಿ ಬಾಳಿದರು, ಶುದ್ಧತೆಗಾಗಿ ನಟಿಸಿದರು, ಶುದ್ಧತೆಗಾಗಿ ಲೋಕವನ್ನು ನಡೆಸಿದರು ಅವರ ಕಂಡ ಶುದ್ಧತೆಯಲ್ಲಿ ಮಾನವತೆ ಇತ್ತು. ಅದನ್ನೇ ಬಿತ್ತಿದರು, ಬೆಳೆದರು, ಹಂಚಿದರು. ಬದುಕಿದರೆ ಅವರಂತೆ ಬದುಕಬೇಕೆಂದು ಬದುಕಿ ತೋರಿಸಿದರು.
ರಾಜಣ್ಣನವರು ವಚನಕಾರ ದೇವರ ದಾಸಿಮಯ್ಯನ ಉಕ್ತಿಯಂತೆ “ಕರಿಯನ್ನು ಬೇಡಲಿಲ್ಲ, ಸಿರಿಯನ್ನು ಬೇಡಲಿಲ್ಲ, ಹಿರಿದಪ್ಪ ರಾಜ್ಯವನ್ನು ಬೇಡಲಿಲ್ಲ, ಶರಣರ ಸೂಳ್ಳುಡಿಯನ್ನು ಬೇಡಿದರು.” ಅಭಿಮಾನಿ ದೇವರುಗಳೇ ಅವರಿಗೆ ಶರಣರಂತಿದ್ದರು. ಅವರ ಸೂಳ್ಳುಡಿಗಳು ವಾಕ್ ಶುದ್ದಿಯ ದೀಪಗಳಾಗಿದ್ದವು. ಅವರ ಮನಸ್ಸು ಅನ್ಯವಿಷಯಕ್ಕೆಳಸದಂತೆ ಸದಾ ಶುದ್ದಿಯ ತೀರ್ಥವಾಹಿನಿಯಾಗಿತ್ತು. ಬುದ್ಧ, ಗಾಂಧೀಜಿ, ಕುವೆಂಪು ಕನಸಿನ ಸಮಾಜ; ಮಾನವ ದೇವನಾಗುವ ಪರಿ ರಾಜಕುಮಾರ ಜೀವನವೇ ಆಗಿತ್ತು”.
“ವರನಟರ ಮುಂದೆ ನರನಟರು ವಿದ್ಯೆತೋರಬಾರದು” ಎಂಬ ಮಾತು ಇತರ ಭಾರತೀಯ ನಟರ ಸಂದರ್ಭದಲ್ಲಿ ರಾಜಕುಮಾರ ಅವರ ಘನತೆಯನ್ನು, ತೂಕವನ್ನು ಹೆಚ್ಚಿಸುತ್ತದೆ. ಏನೇನೋ ಹೇಳಿದವರಿದ್ದಾರೆ, ಅದಕ್ಕೆ ವಿರುದ್ಧವಾಗಿ ಬದುಕಿದವರಿದ್ದಾರೆ, ಎಷ್ಟೋ ಭಾರತೀಯ ನಟರು ರಾಜಕೀಯದ ಕೊಚ್ಚೆಯಲ್ಲಿ ಮಿಂದು ಮುಳುಗಿ ಹೋದರು, ಅನೇಕರು ಕಲೆಯನ್ನು ಮನರಂಜನೆಯ ಸರಕು ಎಂದು ತಿಳಿದರು.
ಹಲವರು ವ್ಯವಹಾರದಲ್ಲಿ ತೊಡಗಿಕೊಂಡರು, ತಮ್ಮನ್ನು ನಂಬಿದ ಅಭಿಮಾನಿಗಳನ್ನು ರಾಜಕೀಯಕ್ಕೆ ಬಳಿಸಿಕೊಂಡರು. ಇಂಥಹವರೆಲ್ಲರ ಮಧ್ಯೆ ಪಲ್ಲಟವಾಗದ ಕಲಾ ಪ್ರವಾದಿ ವರನಟರಿದ್ದಾರೆ. ಮಾನವನಿಂದ ಘಟಿಸುವ ಪ್ರಕೃತಿಸಹಜ ತಪ್ಪುಗಳನ್ನು ವರನಟರು ಮರುಕಳಿಸದಂತೆ ತಮ್ಮನ್ನು ಪರಿಶೋಧಿಸುಕೊಳ್ಳುತ್ತಾ, ಪರಿಶುದ್ಧಿಸಿಕೊಳ್ಳುತ್ತಾ ಸಾಗಿದರು, ಅವರು ಶ್ರದ್ಧೆಯಿಂದ ನಟಿಸಿದರು, ಸರಳವಾಗಿ ಬದುಕಿದರು, ತಮಗನಿಸಿದ್ದನ್ನು ಮಾತ್ರ ಮಾಡಿದರು, ವಿನಯವನ್ನು ಕಲಿಸಿಕೊಟ್ಟರು, ಬದುಕುವುದನ್ನು ಕಲಿಸಿಕೊಟ್ಟರು.
ಆ ಕಾಲದಿಂದ ಈ ಕಾಲಕ್ಕೆ ಬದಲಾಗದೆ ಉಳಿದ ಅಪರೂಪದ ಜೀವ, ಎಲ್ಲ ಜನರೇಷನ್ನಿನ ಜನತೆಯನ್ನು ಪ್ರಭಾವಿಸುವ ಭಾರತದ ಏಕೈಕ ರೋಲ್ ಮಾಡೆಲ್. ಆದ್ದರಿಂದಲೇ ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜಕುಮಾರ್ ಅವರನ್ನು ಮೀರಿಸುವ ಮಾತು ಒತ್ತಟ್ಟಿಗಿರಲಿ ಸರಿಗಟ್ಟುವವರು ಇಲ್ಲ ಎಂಬುವುದನ್ನು ಸಾರ್ವತ್ರಿಕವಾಗಿ ಸತ್ಯವಾಗಿ ಒಪ್ಪಿಕೊಳ್ಳಲಾಗಿದೆ. ಅವರು “ನ ಭೂತೋ ನ ಭವಿಷ್ಯತಿ” ಎನ್ನುವಷ್ಟು ತಮಗೊಂದು ಪರ್ಯಾಯವಿಲ್ಲದಂತೆ ಬೆಳೆದು ನಿಂತಿದ್ದಾರೆ.
ಭಾರತದಲ್ಲಿ ರಾಜಕುಮಾರ ಮುಂಚೆ ಕಪೂರ್ ಮನೆತನದವರಿದ್ದರು, ಕುಮಾರತ್ರಯರು ಬಂದರು, ಖನ್ನಾ, ಖಾನ್ ಗಳು ಬಂದರು, ಎಂ.ಜಿ.ಆರ್ , ಎನ್.ಟಿ.ಆರ್ , ಎ.ಎನ್.ಆರ್, ಶಿವಾಜಿ ಬಂದರು, ಇಂದು ಬಚ್ಚನ್, ರಜನಿಕಾಂತ್ ವಂಶಸ್ಥರಿದ್ದಾರೆ. ಆದರೆ ವರನಟ ರಾಜಕುಮಾರ್ ಅವರನ್ನು ಸರಿಗಟ್ಟುವ ಅಥವಾ ಮೀರಿಸುವ ನಟ ಭಾರತದ ಯಾವುದೇ ಭಾಷೆಯಲ್ಲಿ ಇದುವರೆಗೂ ಬಂದಿಲ್ಲ.
ಆದ್ದರಿಂದಲೇ ಪರಿಪೂರ್ಣವಾಗಿ ಭಾರತರತ್ನಕ್ಕೆ ಅರ್ಹರಾಗಬಲ್ಲ ಭಾರತದ ಏಕೈಕ ನಟರೆಂದರೆ ಅದು ರಾಜಕುಮಾರ್ ಮಾತ್ರ. ಇದನ್ನು ಅನ್ಯಭಾಷೆಯ ನಟರು, ವಿದ್ವಾಂಸರು, ಚಿತ್ರ ವಿಮರ್ಶಕರು ಒಪ್ಪಿಕೊಂಡಿದ್ದಾರೆ. ಆದರೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಂದ ರಾಜಕುಮಾರ್ ಒಬ್ಬ ಅವಿದ್ಯಾವಂತ, ಕೆಳವರ್ಗದವರು ಎಂಬ ಕಾರಣಕ್ಕೆ ತುಳಿಯಲ್ಪಟ್ಟುದು ದುರಂತ. ಈ ಅಮಾನವತೆ ಇಂದಿಗೂ ಸಕ್ರಿಯವಾಗಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ನಿಧನರಾಗಿ 35 ವರ್ಷಗಳ ಬಳಿಕ ಭಾರತರತ್ನ ನೀಡಿದ ನಮ್ಮ ದೇಶ ಸಾಂಸ್ಕೃತಿಕ ಶಿಲ್ಪಿ ಡಾ. ರಾಜಕುಮಾರ್ ಅವರಿಗೆ ಭಾರತರತ್ನ ನೀಡಲು ಎಷ್ಟು ವರ್ಷಗಳನ್ನು ಕಾಯಬೇಕಾಗಬಹುದೋ?
ಇಂಥ ನಿರ್ವಿಕಾರ ನಿರಾಡಂಬರ ನಿರ್ಲಿಪ್ತರಾಗಿ ಇಡೀ ರಾಷ್ಟ್ರವೇನು, ಜಗತ್ತೇ ನಿಬ್ಬೆರಗಾಗುವಂತೆ ಬದುಕಿ, ಸಾಧಿಸಿದ ಸರ್ವನಾಂಪ್ರಿಯ, ಲೋಕಮಿತ್ರ, ಪ್ರಶ್ನಾತೀತ, ಪಕ್ಷಾತೀತ ವಿಶ್ವನಟ ಡಾ.ರಾಜಕುಮಾರ್ ಭಾರತದ ಪಾಲಿಗೆ ಅನರ್ಘ್ಯರತ್ನ. ಆದ್ದರಿಂದಲೇ “ಗಾಂಧೀಜಿಯವರು ನೊಬೆಲ್ ಗಿಂತ ದೊಡ್ಡವರು; ರಾಜಕುಮಾರ ಭಾರತರತ್ನಕ್ಕಿಂತ ದೊಡ್ಡವರು”
–ನಿಜಲಿಂಗಯ್ಯ ಹಾಲದೇವರಮಠ (ರಾಜಸುತ)
(2012ರ ಡಿಸೆಂಬರ್ ಅವಧಿಯಲ್ಲಿ ನನ್ನ ಲಗ್ನ ಪತ್ರಿಕೆಯಲ್ಲಿ ವರನಟ ರಾಜಕುಮಾರ ಕುರಿತು ಬರೆದ ಲೇಖನದ ಆಯ್ದ ಭಾಗ-2)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.
ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.
ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.
ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



