ಅಂತರಂಗ

ಅರಿಮೆಯ ಅರಿವಿರಲಿ-19 : ನೋವಿನ ಸುಖ

Published

on

ಚಿತ್ರಕಲೆ : ಹಜರತ್ ಅಲಿ
  • ಯೋಗೇಶ್ ಮಾಸ್ಟರ್

ದೈಹಿಕವಾಗಿ ವ್ಯಾಯಾಮ ಮಾಡಿದಾಗ ಚೆನ್ನಾಗಿ ವ್ಯಾಯಾಮ ಸಿಕ್ಕಿದ ದೇಹದ ಭಾಗಗಳು ನೋಯುತ್ತಿರುತ್ತವೆ. ಆದರೆ ಆ ನೋವು ಗಾಯದಿಂದಲೋ, ಬಿದ್ದುದರಿಂದ ಆದ ನೋವಿನಂತೆಯೋ ಇರುವುದಿಲ್ಲ. ಒಂದು ರೀತಿಯಲ್ಲಿ ಹಿತವಾದ ನೋವು ಅದಾಗಿರುತ್ತದೆ. ಅಂಗಸೌಷ್ಟವಕ್ಕಾಗಿ ಅಥವಾ ಮೈಯನ್ನು ಹುರಿಗಟ್ಟಿಸುವುದಕ್ಕಾಗಿ ಸತತ ವ್ಯಾಯಾಮ ಮಾಡುವವರಿಗೆ ಈ ನೋವಿನ ಹಿತ ಅನುಭವಕ್ಕೆ ಬಂದಿರುತ್ತದೆ. ಆ ನೋವಿನ ಸುಖವಲ್ಲ ಇಲ್ಲಿ ಹೇಳುತ್ತಿರುವುದು.

ಅವಳ ಗಂಡ ಮಹಾ ಕುಡುಕ. ಸಾಲದಕ್ಕೆ ಪ್ರತಿದಿನವೂ ಕುಡಿದು ಬಂದಾಗ ಮೇಲೆ ಅವಳನ್ನು ನಿಂದಿಸುತ್ತಿದ್ದ. ಹೊಡೆಯುತ್ತಿದ್ದ. ಅವಳು ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಳು. ತನ್ನ ತವರು ಮನೆಯವರು ಬಂದಾಗ ತಿಳಿದು, ತಿಳಿದಿರುವ ಸ್ನೇಹಿತರು ಎಲ್ಲಾ ಅವಳಿಗೆ ಒಂದು ಸಲಹೆ ನೀಡಿದರು. ವಿಚ್ಛೇದನ ತೆಗೆದಿಕೋ. ಅವನಿಂದ ದೂರಾಗು. ನಂತರ ಬೇರಾವುದಾದರೂ ಮದುವೆಯಾಗಬಹುದು ಎಂದು. ಆದರೆ ಅವಳು ನಿರಾಕರಿಸಿದಳು. ಅವನು ಎಷ್ಟೇ ಹೊಡೆಯಲಿ, ಏನೇ ಮಾಡಲಿ. ಅವನು ನನ್ನ ಗಂಡ. ನಾನು ಡಿವೋರ್ಸ್ ತೆಗೆದುಕೊಳ್ಳುವುದಿಲ್ಲ ಮತ್ತು ಈ ಮನೆಯಿಂದ ಹೊರಗೆ ಬರುವುದಿಲ್ಲ. ಅವಳಿಗೆ ಸಿಗುತ್ತಿರುವ ನೋವಿನ ಸುಖ ಈ ಬಲಿದಾನದರಿಮೆಯದು.

ಇದೇ ರೀತಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಅಗತ್ಯಕ್ಕಿಂತ ಹೆಚ್ಚು ಸಮಯ ಕಛೇರಿಯಲ್ಲಿಯೇ ಉಳಿದು ಕೆಲಸ ಮಾಡುವವರು ಆ ರಾಯರು. “ಯಾಕ್ರೀ ಸುಮ್ಮನೆ ಹೀಗೆ ನಿಮ್ಮನ್ನು ನೀವು ದಂಡಿಸಿಕೊಳ್ತೀರಿ?” ಕರ್ಮಣ್ಯೇವಾಧಿಕಾರಸ್ತೇ ಮಾಫಲೇಶು ಕದಾಚನ ಎಂದು ಭಗವತ್ಗೀತೆಯ ಶ್ಲೋಕವೊಂದನ್ನು ಉದ್ದರಿಸಿ, “ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಬೇಕು. ನಿಷ್ಕಾಮ ಮನೋಭಾವದಿಂದ ಮಾಡುವ ಕೆಲಸವು ಭಗವಂತನ ಸೇವೆಯಾಗಿರುತ್ತದೆ” ಎಂದು ತಮ್ಮ ಬಲಿದಾನದರಿಮೆಗೆ ನಿಷ್ಕಾಮ ಕರ್ಮದ ಕವಚವನ್ನು ತೊಡಿಸುತ್ತಾರೆ.

ಆ ಹುಡುಗಿ ಪ್ರೌಢಶಾಲೆ ಓದುತ್ತಿದ್ದಾಳೆ. ಅವಳ ತಾಯಿ ಅವಳು ಮನೆಯಲ್ಲಿ ತನಗೆ ಸಹಾಯ ಮಾಡುವುದಿಲ್ಲ ಎಂದು ದೂರುತ್ತಿರುತ್ತಾಳೆ. ಹುಡುಗಿಯೋ ತನಗೆ ಬೇಕಾದಷ್ಟು ಶಾಲೆಯದೇ ಕೆಲಸಗಳಿವೆ, ಏನೋ ಒಂದಿಷ್ಟು ಸಣ್ಣಪುಟ್ಟ ಕೆಲಸ ಮಾಡಬಹುದು ಅಷ್ಟೇ ಎಂದರೆ ತಾಯಿ ಒಪ್ಪುವುದಿಲ್ಲ. “ನೀನು ಸ್ವಾರ್ಥಿ, ಮೈಗಳ್ಳಿ, ಒಂದು ಚೂರೂ ನನ್ನ ಕಷ್ಟವನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ನೀನು ಇಷ್ಟರ ಮಟ್ಟಿಗೆ ಬರಬೇಕೆಂದರೆ ನಾನೆಷ್ಟು ಕಷ್ಟಪಟ್ಟಿದ್ದೀನಿ. ಅದೆಷ್ಟು ಹೆಣಗಾಡಿದ್ದೀನಿ. ನೀನು ಅದನ್ನೆಲ್ಲಾ ನೋಡೋದೇ ಇಲ್ಲ” ಇತ್ಯಾದಿ ಆ ತಾಯಿಯ ಅಳಲು. ಈ ಅಳಲು ತನ್ನ ತ್ಯಾಗವನ್ನು ಗುರುತಿಸುತ್ತಿಲ್ಲ ಎಂಬ ಬಲಿದಾನದರಿಮೆಯ ಅಳಲು. ತಾನು ಮಾಡಿರುವ ತ್ಯಾಗ ಗುರುತಿಸಲ್ಪಡದೆಯೇ ವ್ಯರ್ಥವಾಗುತ್ತಿದೆ ಎಂದು ತಾಯಿ ಪ್ರಲಾಪಿಸಿದರೆ, ಮಗಳಿಗೆ “ಅಯ್ಯೋ, ಮನೆ ಅಂತ ಅಂದಮೇಲೆ ಹೀಗೆಲ್ಲಾ ಮಾಡೋದು ಹೆಣಗೋದು ಎಲ್ಲಾ ಇದ್ದೇ ಇರತ್ತಲ್ವಾ? ಅದಕ್ಕೆ ನಾನು ಏನು ಮಾಡಬೇಕು? ಹೇಗೆ ಅವರಿಗೆ ಗೌರವ ತೋರಿಸ್ಬೇಕೂಂತ ಅರ್ಥ ಆಗ್ತಿಲ್ಲ” ಅಂತ ಅವಲತ್ತುಕೊಳ್ಳುತ್ತಾಳೆ.

ಆ ನಿವೃತ್ತ ಹಿರಿಯ ನಾಗರಿಕರು ಈಗ ಎಪ್ಪತ್ತು ದಾಟಿದ್ದರೂ ಚೈತನ್ಯದ ಚಿಲುಮೆಯಂತೆ ತಮ್ಮ ಶೈಕ್ಷಣಿಕ ಸಂಸ್ಥೆಯನ್ನು ನೋಡಿಕೊಳ್ಳಲು ನಿವೃತ್ತರಾಗಲು ಇಷ್ಟಪಡುವುದಿಲ್ಲ. ಅವರ ಮಗ “ಅಪ್ಪಾ, ಈಗ ನೀವು ಸ್ಪಲ್ಪ ಹಿಂದೆ ಸರಿಯಿರಿ. ನಮಗೆ ಮಾಡಲು ಬಿಡಿ” ಅಂದರೆ, “ನಾನಿಲ್ಲದೇ ಹೋದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೆ. ಸರಿಯಾಗಿ ನೋಡಿಕೊಳ್ಳುವವರಿಲ್ಲದೇ ಇವೆಲ್ಲಾ ಹಾಳಾಗಿ ಹೋಗತ್ತೆ. ನಾನು ಬರದೇ ಬೇರೆ ದಾರಿಯೇ ಇಲ್ಲ” ಒಟ್ಟಾರೆ ಬಲಿದಾನದರಿಮೆಯ ಧ್ವನಿಯೇನೆಂದರೆ ‘ಅಜ್ಜಿ ಕೋಳಿ ಕೂಗಿದರೇನೇ ಬೆಳಗಾಗೋದು’ ಅಂತ. ಅದಕ್ಕೆ ನೀವು ಬನ್ನಿ ಅಂತ ಯಾರೂ ಕರೆಯದೇ ಇದ್ದರೂ, ಹೊಸ ಕೈಗಳಿಗೆ ಹಳೆಯ ಬೇಡಿಗಳನ್ನು ತೊಡಿಸಲು ಅದೆಷ್ಟು ಕಷ್ಟವಾದರೂ ಅವರು ಬರಲೇ ಬೇಕು.

ಒಲವಿನ ಹೆಸರಿನಲ್ಲಿ ನೋವನ್ನು ಅನುಭವಿಸುವುದು, ನಾನಿಲ್ಲದೇ ಹೋದರೆ ಎಲ್ಲವೂ ಛಿದ್ರಛಿದ್ರವಾಗಿ ಹೋಗುತ್ತದೆ ಎಂದು ನಂಬುವುದು, ಪ್ರತಿಯೊಬ್ಬರ ಸಂತೋಷ, ಸುಖಕ್ಕೆ ತಾವೇ ಜವಾಬ್ದಾರಿ ಹಾಗೂ ತಾವಿಲ್ಲದೇ ಹೋದರೆ ಅವರು ನರಳುತ್ತಾರೆ ಎಂದು ಭ್ರಮಿಸುವುದು, ಬೇರೆಯವರು ತಮ್ಮ ಸಮಸ್ಯೆಗೆ, ತೊಡಗಿಕೆ ಕಾರಣ ಎಂದು ದೂರುವುದು, ತಮ್ಮ ತ್ಯಾಗವನ್ನು ತ್ಯಾಗವೆಂದು ನೂರಕ್ಕೆ ನೂರು ಎಲ್ಲರೂ ಒಪ್ಪಬೇಕು ಎಂಬುವುದು, ಉಳಿದವರ ಕೆಲಸ ಕೆಲಸಕ್ಕೆ ಬಾರದು ಎನ್ನುವುದು; ಇಂತಹ ಧೋರಣೆಗಳು ಮತ್ತು ಸ್ವಭಾವಗಳು ನಿಮ್ಮಲ್ಲೋ ಅಥವಾ ನಿಮ್ಮೊಡನೆ ಇರುವ ಇತರರಲ್ಲೋ ಇದೆ ಎಂದರೆ ಈ ಬಲಿದಾನದರಿಮೆ ಇದೆ ಎಂದಾಯ್ತು. ಇದಕ್ಕೆ ಬಹಳ ಉತ್ತಮವಾದ ಪ್ರತಿಕ್ರಿಯೆ ಎಂದರೆ ಮೊದಲು ಕ್ಷಮಿಸುವುದು. ನಂತರ ಪ್ರೀತಿಸುವುದು. ಆಮೇಲೆ ಅವರಿಗೆ ಬಹಳ ಪ್ರಾಮಾಣಿಕವಾಗಿ ಇದು ಸಮಸ್ಯೆ ಎಂದು ತಿಳಿಸುವುದು. ಒಪ್ಪಿ ಸಮಾಲೋಚನೆಗಳು ನಡೆದರೆ ಸಂತೋಷ. ಇಲ್ಲವೆಂದರೆ ಹಗ್ಗ ಜಗ್ಗಾಟ ಇದ್ದೇ ಇರುವುದು.

ದೆವ್ವ ಹಿಡಿಯಿತು, ದೇವರು ಬಂದಿತು

ಅವರು ಆ ಮನೆಯ ಹಿರಿಯ ಸೊಸೆ. ಇದ್ದಕ್ಕಿದ್ದಂತೆ ಅವರ ಮೈ ಮೇಲೆ ಅವರ ಅಜ್ಜಿಯ ದೆವ್ವ ಬರಲಾರಂಭಿಸಿತು. ದೆವ್ವ ಹಿಡಿದಾಗ ಕೂಗುವುದೇನು, ಆರ್ಭಟಿಸುವುದೇನು, ಅವರಿವರಿವರಿಗೆಲ್ಲಾ ಧಮಕಿ ಹಾಕುವುದೇನು! ಮೈ ಮೇಲೆ ಬಂದ ಅಜ್ಜಿಯ ದೆವ್ವ ಮುಂದೆ ಕುಳಿತಿರುವ ಎಲ್ಲರಿಗೂ ಹೇಳುತ್ತದೆ. “ಈ ಮನೆಗೆ ನಾನು ಹಿರಿಯ ಸೊಸೆ ಆಗಿದ್ದೆ ಎಷ್ಟು ಕೆಲಸ ಮಾಡುತ್ತಿದ್ದೆ. ಗಂಧ ತೇಯುವಂತೆ ತೇಯುತ್ತಿದ್ದೆ. ನೀವ್ಯಾರೂ ನನಗೆ ಮರ್ಯಾದೆ ಕೊಡುತ್ತಿಲ್ಲ” ಎಂದು ಎಲ್ಲರಿಗೂ ಬೈಯುತ್ತದೆ. “ನಾನು ಈ ಮನೆಗೆ ಮಾಡಿರುವ ತ್ಯಾಗವನ್ನು ನೀವು ಗುರುತಿಸದೇ ಹೋದರೆ ನೀವೆಲ್ಲಾ ಸರ್ವನಾಶ ಆಗುತ್ತೀರಾ” ಎಂದು ಎಚ್ಚರಿಸುತ್ತದೆ. ಮನೆಯವರೆಲ್ಲಾ ಎಚ್ಚೆತ್ತು ಅಜ್ಜಿ ದೆವ್ವಕ್ಕೆ ಗೌರವಿಸುತ್ತಾರೆ. ಆ ಅಜ್ಜಿ ದೆವ್ವ ತಾನೆಂದು ಹೇಳಿಕೊಳ್ಳಬಹುದು. ಕೆಲವೊಮ್ಮೆ ಈಗಿನ ಹಿರಿಯ ಸೊಸೆ ಎಂದೇ ಹೇಳಬಹುದು. ಅದು ಆ ದೆವ್ವಕ್ಕೆ ಆಗಿರುವ ಮೂಡಿನ ಮೇಲೆ ವಾಕ್ಯಗಳು ಅವಲಂಬಿತವಾಗಿರುತ್ತವೆ.

ಈ ಮೂಲಕ ಗಂಧದಂತೆ ತೇಯುತ್ತಿರುವ ಸೊಸೆಯ ತ್ಯಾಗವು ಮರ್ಯಾದೆಗೆ ಒಳಪಡುತ್ತದೆ. ಕೆಲವು ಸಲ ದೆವ್ವದ ಬದಲು ಮನೆ ದೇವರೋ, ಊರ ದೇವರೋ ಬರಬಹುದು. ಸಾಮಾನ್ಯವಾಗಿ ಹೆಂಗಸರ ಮೇಲೆ ದೇವಿ ಅಥವಾ ಅಮ್ಮನೋರು ಬರುತ್ತಾರೆ. ಗಂಡಸರ ಮೇಲೂ ಅಮ್ಮನೋರು ಬರುತ್ತಾರೆ, ಕೆಲವು ಶನೀಶ್ವರ, ಮುನೀಶ್ವರನಂತಹ ಗಂಡು ದೇವರೂ ಬರುತ್ತಾರೆ. ದಕ್ಷಿಣ ಕನ್ನಡದ ಭಾಗಗಳಲ್ಲಾದರೆ ಭೂತಗಳು, ದೈವಗಳು ಬರಬಹುದು. ಬಿಡಿ, ಯಾರೋ ಒಬ್ಬರು ಬರುತ್ತಾರೆ. ಒಟ್ಟಾರೆ ನಿಮಗಾಗಿ ದುಡಿಯುತ್ತಿರುವವರ ತ್ಯಾಗವನ್ನು ಗುರುತಿಸದಿದ್ದರೆ, ಅದರ ಮಹಿಮೆಯನ್ನು ಕೊಂಡಾಡದಿದ್ದರೆ, ಯಾರೋ ಒಬ್ಬರು ಮೈ ಮೇಲೆ ಬರುತ್ತಾರೆ. ಇದು ಕೌಟುಂಬಿಕ ಪರಿಮಿತಿಗಳಲ್ಲಿ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಮೈ ಮೇಲೆ ಬರುವ ದೇವರು ಬೇರೆಯೇ ಪ್ರದರ್ಶಕ ಕಲೆಯ ವಿಷಯ. ಇಲ್ಲಿ ಅದರ ಅವಶ್ಯಕತೆ ಇಲ್ಲ.

ಒಂದು ವಿಷಯ ಅಂತೂ ಸತ್ಯ. ಯಾರದೇ ಮೈ ಮೇಲೆ ದೇವರು ಅಥವಾ ದೆವ್ವಗಳು ಬರುತ್ತಾವೆಂದರೆ ಒಂದೋ ಮಾನಸಿಕ ಸಮಸ್ಯೆಯಾಗಿರುತ್ತದೆ ಅಥವಾ ರಾಜಕೀಯವಾಗಿರುತ್ತದೆ.ಸರ್ವಾಂತರ್ಯಾಮಿಯಾದ, ಸರ್ವಶಕ್ತನಾದ, ಸರ್ವಜ್ಞನಾದ ಆ ಮಹಾಮಹಿಮ ಭಗವಂತನು ಇವನ್ಯಾರನ್ನೋ ಯಾಕೆ ಆಯ್ದುಕೊಳ್ಳಬೇಕು ಅವನಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವುದಕ್ಕೆ. ಅವನಿಗೇ ನೇರವಾಗಿ ಯಾವುದಾದರೊಂದು ರೀತಿಯಲ್ಲಿ ಹೇಳಲಾಗದೇ? ಬಿಡಿ, ಅದು ಬೇಡ ಈಗ. ಮನುಷ್ಯನ ಸಂಕೀರ್ಣಮಯವಾದ ಮನಸ್ಸಿನ ಸಮಸ್ಯೆಗಳ ಕಡೆಗೆ ಗಮನ ಹರಿಸೋಣ.

ರೋಗದ ಸುಖ

ದೇವರು, ದೆವ್ವ, ಭೂತ, ಗಣ, ದೈವವೇ ಮೊದಲಾಗಿ ಏನೂ ಬರದಿದ್ದರೂ ಏನಾದರೂ ಒಂದು ಖಾಯಿಲೆ ಬರುತ್ತದೆ. ಆ ಖಾಯಿಲೆಯ ಲಕ್ಷಣವನ್ನು ಈ ರೋಗಲಕ್ಷಣವೆಂದು ಗುರುತಿಸಲಾಗುವುದಿಲ್ಲ. ತಲೆ ನೋವತ್ತೆ, ತಲೆ ಸುತ್ತು ಬರತ್ತೆ, ಮೈ ಕೈ ನೋವತ್ತೆ, ಹೊಟ್ಟೆ ನೋವತ್ತೆ, ಎದೆ ಹಿಡಿದುಕೊಂಡಂತೆ ಆಗಿ ಬಿದ್ದೇ ಹೋಗುತ್ತಾರೆ. ಡಾಕ್ಟರ್ ಬಳಿಗೆ ಒಯ್ಯುತ್ತೀರಿ. ಅವರು ಔಷಧಿ ಕೊಡುತ್ತಾರೆ. ಅವರಿಗೆ ಇವರು ಹೇಳುತ್ತಿರುವ ರೋಗ ಲಕ್ಷಣಗಳೆಲ್ಲಾ ಕಲಸು ಮೇಲೋಗರವಾಗಿರುತ್ತದೆ. ಯಾವುದಕ್ಕೂ ಯಾವ ರೋಗಕ್ಕೆ ಹತ್ತಿರವಾಗಿದೆಯೋ ಆ ರೋಗದ ಚಿಕಿತ್ಸೆ ನೀಡಲಾರಂಭಿಸುತ್ತಾರೆ. ಇವರ ರೋಗ ವಾಸಿ ಆಗುವುದೇ ಇಲ್ಲ. ಡಾಕ್ಟರ್ ಇನ್ನೊಂದು ದಿಕ್ಕಿನಿಂದ ಚಿಕಿತ್ಸೆ ನೀಡುತ್ತಾರೆ.

ಪರೀಕ್ಷೆಗಳನ್ನು ಮಾಡಿದಾಗ ಅವರೆಂದುಕೊಂಡಿರುವ ರೋಗ ಲಕ್ಷಣಗಳು ಇರುವುದಿಲ್ಲ. ಹಾಗಾಗಿ ಸಾಮಾನ್ಯವಾಗಿ ದೈಹಿಕ ಅಥವಾ ಶಾರೀರಿಕ ರೋಗಗಳನ್ನು ಮತ್ತು ಚಿಕಿತ್ಸೆಗಳನ್ನು ಅಭ್ಯಾಸ ಮಾಡಿರುವ ಡಾಕ್ಟರ್ ಒಂದಷ್ಟು ಪ್ರಮಾಣದ ಮನಶಾಸ್ತ್ರವೂ ತಿಳಿದಿರುತ್ತದೆ, ತಿಳಿದಿರಬೇಕಾಗುತ್ತದೆ.
ಒಂದೇ ಸಮನೆ ಮನೆಯಲ್ಲಿ ದುಡಿಯುತ್ತಿದ್ದ ಆಕೆಯು ಖಾಯಿಲೆ ಎಂದು ಮಲಗಿದಾಗ ಮನೆಯವರಿಗೆ ಆಕೆಯ ಕೆಲಸದ ಮಹತ್ವ ತಿಳಿಯುತ್ತದೆ. ಆಕೆಯಿರದಿದ್ದರೆ ತಮಗೆಷ್ಟೆಲ್ಲಾ ಸಮಸ್ಯೆ ಉಂಟಾಗುವುದು ಎಂದು ತಿಳಿಯುತ್ತದೆ. ಆಗ ಆಕೆಗೆ ಉಪಚರಿಸುತ್ತಾರೆ. ನೀನು ಚೆನ್ನಾಗಿ ಓಡಾಡಿಕೊಂಡಿದ್ದಾಗ ನಮಗೆ ಏನೂ ಗೊತ್ತಾಗುತ್ತಿರಲಿಲ್ಲ. ಈಗ ನೀನು ಖಾಯಿಲೆ ಬಂದು ಮಲಗಿದ ಮೇಲೆ ಈಗ ನೀನೆಷ್ಟು ಮಾಡುತ್ತಿದ್ದೀಯ ಎಂದು ತಿಳಿಯುತ್ತಿದೆ. ಅಲ್ಲಿಗೆ ಆಕೆಗೆ ಬಂದ ಖಾಯಿಲೆಯು ತನ್ನ ಉದ್ದೇಶವನ್ನು ನೆರವೇರಿಸಿಕೊಂಡಿತು. ತನಗೆ ಸಿಗದಿದ್ದ ಮಾನ್ಯತೆಯನ್ನು ಪಡೆದುಕೊಂಡಿತು. ಈಗ ಆ ಖಾಯಿಲೆಯು ಹೋಗುವುದು. ತಾನು ಪಡೆದ ಸೆಕೆಂಡರಿ ಬೆನಿಫಿಟ್ ಸುಖ ನೀಡಿತು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version