ಅಂತರಂಗ

ಅರಿಮೆಯ ಅರಿವಿರಲಿ-20 : ನಾಲಾಯಕ್ ನಾಮಧೇಯ

Published

on

  • ಯೋಗೇಶ್ ಮಾಸ್ಟರ್

ಗಾಳಿಗೆ ಸಿಕ್ಕಿದ ಹದ್ದಿನ ಮರಿಯೊಂದು ಕೆಳಕ್ಕೆ ಬಿದ್ದು ಮೇಲೇರಲಾಗದೇ ಹತ್ತಿರದ ಕೋಳಿ ಸಾಕುವವರ ಹತ್ತಿರಕ್ಕೆ ಸಾಗಿತು. ಹದ್ದಿನ ಮರಿಯು ಕೋಳಿ ಸಾಕುವವರ ಕರುಣೆಗೆ ಪಾತ್ರವಾಗಿ ಕೋಳಿಗಳ ಜೊತೆಗೇ ಗುಟಕಿನ ಪಾಲನ್ನು ಪಡೆಯುತ್ತಾ ಬೆಳೆಯಿತು. ಪರಿಣಾಮ ಕೋಳಿಯಂತೇ ತಿನ್ನುವುದು, ಕೋಳಿಯಂತೇ ನಡೆಯುವುದು, ಕೋಳಿಯಂತೇ ಹೆದರುವುದು, ಕೋಳಿಯಷ್ಟೇ ಹಾರುವುದು.

ಕೋಳಿಪಿಳ್ಳೆಗಳನ್ನು ಎಗರಿಸಿಕೊಂಡು ಹೋಗಲು ಬಂದಿದ್ದ ವಯಸ್ಕ ಹದ್ದೊಂದು ತಮ್ಮ ಜಾತಿಯ ಯುವಕನೊಬ್ಬ ಕೋಳಿಯಂತೆ ವರ್ತಿಸುವುದನ್ನು ಕಂಡು ಅವನನ್ನು ಹಾರಿಸಿಕೊಂಡು ಹೋಗಿ ಹೇಳಿತು, “ಅಯ್ಯೋ ಪೆದ್ದಪ್ಪಾ, ನೀನು ಹದ್ದು. ಆಕಾಶದಲ್ಲಿ ರೆಕ್ಕೆಗಳನ್ನು ಬಿಚ್ಚಿಕೊಂಡು ಆನಂದದಲ್ಲಿ ಹಾರಬೇಕಾದವನು ಕೋಳಿಗಳ ತರ ಇದ್ದೀಯಲ್ಲಾ. ನೋಡು ನನ್ನಂತೆಯೇ ನಿನಗೆ ಕೊಕ್ಕು, ರೆಕ್ಕೆ, ಕಾಲಿನುಗುರು; ಎಲ್ಲಾ ಇದೆ” ಎಂದರೂ ಆ ಯುವ ಹದ್ದು, ನಾನು ಕೋಳಿ ಕೋಳಿ ಎಂದೇ ಜಪಿಸುತ್ತಿತ್ತು. ವಯಸ್ಕ ಹದ್ದು ಅದನ್ನು ಬೆಟ್ಟದ ಮೇಲಿಂದ ತಳ್ಳಿತು. ಅದು ಯುವ ಹದ್ದು ಹೆದರಿಕೆಯಿಂದ ರೆಕ್ಕೆಗಳನ್ನು ಬಡಿಯುವಾಗ ಅದು ಬೀಳದೇ ಹಾರಾಡತೊಡಗಿತು. ತನಗೆ ಆಕಾಶದ ಅವಕಾಶದಲ್ಲಿ ಹಾರಾಡಲು ಶಕ್ತ ಎಂಬ ಸತ್ಯವನ್ನು ಮನಗಂಡಿತು.

ಈ ಕತೆಯಲ್ಲಿ ಅಡಕವಾಗಿರುವ ಅಂಶಗಳನ್ನು ಗಮನಿಸಿ. ಮೊದಲನೆಯದು, ಅನುದ್ದೇಶದಿಂದ ಹದ್ದಿನ ಮರಿಯು ಕೋಳಿಗಳ ಪರಿವಾರವನ್ನು ಸೇರಿದ್ದು. ಎರಡನೆಯದು, ಸತತವಾಗಿ ಕಾಲ ಕಳೆದ ಪರಿಸರದ ಪ್ರಭಾವದಿಂದ ಹದ್ದು ಕೋಳಿಯಾಗಿ ರೂಪುಗೊಂಡಿದ್ದು. ಮೂರನೆಯದು, ಹದ್ದು ತನ್ನ ಸ್ವಾಭಾವಿಕ ಶಕ್ತಿಯನ್ನು ಅರಿಯುವ ಅವಕಾಶವನ್ನೇ ಪಡೆಯದೇ ತನ್ನ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಅದನ್ನೇ ಸತ್ಯ ಎಂದು ತಿಳಿದುಕೊಂಡಿದ್ದು. ನಾಲ್ಕನೆಯದು, ವಯಸ್ಕ ಹದ್ದು, ಯುವ ಹದ್ದಿಗೆ ವಿಷಯವನ್ನು ತಿಳಿಸಿದರೂ ಅದು ಅದನ್ನು ಒಪ್ಪದೇ ಹೋದದ್ದು. ಐದನೆಯದು, ವಯಸ್ಕ ಹದ್ದು ಯುವ ಹದ್ದಿನ ಸಹಜ ಸಾಮರ್ಥ್ಯವನ್ನು ಅರಿತಿದ್ದು, ಬೆಟ್ಟದಿಂದ ತಳ್ಳಿದ್ದು ಮತ್ತು ಅದು ಯಶಸ್ವಿಯಾದದ್ದು.

ತಮ್ಮ ಮುಂದೆ ಹುಟ್ಟಿದ ಮಗು, ತಮ್ಮ ಪಾಲನೆಯಲ್ಲಿ ಕಣ್ಬಿಟ್ಟು, ನಡೆಯುವುದನ್ನು ಕಲಿತ ಕೈಗೂಸು, ಪ್ರತಿಯೊಂದಕ್ಕೂ ತಮ್ಮ ಮೇಲೆ ಅವಲಂಬಿತವಾಗಿರುವ ಮಗುವನ್ನು ಹದ್ದು ಎಂದು ಗುರುತಿಸಲಾಗದ ಬಹಳಷ್ಟು ಕೋಳಿ ಪೋಷಕರು ತಮ್ಮ ನಿರ್ದೇಶನದಂತೆಯೇ ನಡೆಯಬೇಕು, ತಮ್ಮ ಕಣ್ಣಳತೆಯಲ್ಲಿಯೇ ಬೆಳೆಯಬೇಕು, ತಾವು ಹೇಳಿದಷ್ಟೇ ಹಾರಬೇಕು, ಏಕೆಂದರೆ ತಾವೆಲ್ಲಾ ಅಷ್ಟೇ ಹಾರಿರುವುದು, ಅದಕ್ಕಿಂತ ಮೇಲೆ ಹಾರಿದರೆ ಬಿದ್ದು ಹೋಗುವೆ; ಹೀಗೆ ತಮ್ಮದೊಂದು ಅಳತೆಗೋಲಿನ ಪ್ರಕಾರ ಅವರ ಮಕ್ಕಳ ಸಾಮರ್ಥ್ಯವನ್ನು ಅಳೆಯುತ್ತಿರುತ್ತಾರೆ. ಹೀಗೆ ನಿರಂತರವಾಗಿ ಅಳೆಯುವ, ಅಪ್ಪಣೆ ನೀಡುವ ಪರಿಣಾಮದಿಂದ ಮಕ್ಕಳಲ್ಲಿ ಕೀಳರಿಮೆ ಬೆಳೆಯುತ್ತದೆ.

ಹೇಗೋ ಏನೋ ಹುಟ್ಟುವ ಈ ಕೀಳರಿಮೆಯು ಮಕ್ಕಳ ಎಲ್ಲಾ ನಡೆಗಳಲ್ಲಿ ಮೇಲುಗೈಯನ್ನು ಸಾಧಿಸುತ್ತಿರುತ್ತದೆ. ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿಯದೇ, ಅದನ್ನು ಎಟುಕಿಸಿಕೊಳ್ಳದೇ, ತಮ್ಮನ್ನು ತಾವೇ ಸಂದೇಹಿಸಿಕೊಂಡು, ತಾವು ಖಂಡನೆಗೊಳಗಾಗುತ್ತೇವೆಂಬ ಸಂಶಯದಿಂದ ಮುಕ್ತವಾಗಿ ತೆರೆದುಕೊಳ್ಳದೇ, ತೊಂದರೆಗೊಳಗಾಗುತ್ತೇವೆಂಬ ಭಯದಿಂದ ಹಿನ್ನೆಡೆಯುವುದಕ್ಕೇ ಸದಾ ಸಿದ್ಧವಾಗಿರುವಂತಹ ಅರಿಮೆಯಿದು.

ಸಾಮಾನ್ಯವಾಗಿ ಸತತವಾದ ನಿರುತ್ಸಾಹ ಮತ್ತು ನಿರಾಶೆಗಳ ಪ್ರತಿಫಲವೇ ಕೀಳರಿಮೆ.
ಬಹಳಷ್ಟು  ಮತ್ತು ಪೋಷಕರು ಶಿಕ್ಷಕರು ಮಕ್ಕಳಿಗೆ ಕೊಡುವ ಬಿರುದು ನಾಲಾಯಕ್. ಮಕ್ಕಳೂ ಸತತವಾಗಿ ಕೇಳುವ ಈ ನಾಮಧೇಯವನ್ನು ತಮ್ಮದು ಎಂದು ಸ್ವೀಕರಿಸಿಬಿಡುತ್ತಾರೆ. ಒಪ್ಪಿಕೊಂಡಿರುವ ತನ್ನ ನಾಲಾಯಕ್ ಬಿರುದನ್ನು ಉಳಿಸಿಕೊಳ್ಳಲು ಮಗುವಿನ ಅಂತರಾಳ ಹೆಣಗಾಡುತ್ತಿದ್ದರೆ, ಪಟ್ಟ ಕಟ್ಟಿದವರು, ನಾಲಾಯಕ್ ಬಿತ್ತನೆ ಬಿತ್ತಿದವರು ಮಗುವು ಲಾಯಕ್ಕಾಗಿರಬೇಕೆಂದು ಹಟ ಹಿಡಿಯುತ್ತಾರೆ.

ಯಾವ ಮಕ್ಕಳು ತಮ್ಮ ಮನೆಯವರಿಂದ ಅಥವಾ ಶಿಕ್ಷಕರಿಂದ ಸದಾ ಖಂಡನೆಗೆ ಮತ್ತು ನಿಂದನೆಗೆ ಒಳಗಾಗುತ್ತಿರುತ್ತಾರೋ, ಅಥವಾ ಯಾವ ಮಕ್ಕಳು ತಮ್ಮ ಪೋಷಕರು ಅಥವಾ ಶಿಕ್ಷಕರ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂಬುದಾಗಿ ಭಾವಿಸುವಂತಾಗುತ್ತದೆಯೋ, ಅವರು ಕೀಳರಿಮೆಯಲ್ಲಿ ಬಳಲುತ್ತಾರೆ.

ನಿರುತ್ಸಾಹ, ನಿರಾಶೆ, ಖಂಡನೆ, ನಿಂದನೆ, ಖಿನ್ನತೆ, ಹತಾಶತೆ; ಇವುಗಳೆಲ್ಲಾ ಹುಟ್ಟುವುದಕ್ಕೆ ನಮ್ಮ ಸಮಾಜದಲ್ಲಿ ವ್ಯಕ್ತಿಗಳಿಂದ ಹಿಡಿದು, ಕುಟುಂಬವೂ ಒಳಗೊಂಡಂತೆ ಸಾಕಷ್ಟು ಸಾಮಾಜಿಕ ಸಂಸ್ಥೆಗಳು ದಣಿವರಿಯದೇ ಕೆಲಸ ಮಾಡುತ್ತಿರುತ್ತವೆ. ಕೌಟುಂಬ ಹಿನ್ನೆಲೆ, ಸಾಮಾಜಿಕ ಸ್ಥಾನಮಾನ, ಆರ್ಥಿಕತೆ, ವ್ಯಕ್ತಿಗತ ಪ್ರತಿಭೆ ಮತ್ತು ಸಾಮರ್ಥ್ಯಗಳು, ಶಿಕ್ಷಣ, ದೇಹಸ್ವರೂಪ; ಹೀಗೆ ಒಂದೆರಡಲ್ಲ ಕೀಳರಿಮೆಯ ಹುಟ್ಟಿಗೆ ಕಾರಣಗಳು. ವ್ಯಕ್ತಿಗಳು ಮತ್ತು ಸಮಾಜ ಧಾರಾಳವಾಗಿ ಮತ್ತು ಬಹಳ ಔದಾರ್ಯದಿಂದ ಕೊಡುವುದೇ ಟೀಕೆಗಳನ್ನು, ಖಂಡನೆಗಳನ್ನು, ಇಲ್ಲದಿರೆ ಅಪ್ರಮಾಣಿಕ ಮತ್ತು ಹುಸಿ ಪ್ರೋತ್ಸಾಹವನ್ನು. ನಿರ್ದಯ ಟೀಕೆಗಳು ಮತ್ತು ಹುಸಿಹೊಗಳಿಕೆಗಳು ಎರಡೂ ಒಂದಕ್ಕಿಂತ ಒಂದು ಅಪಾಯಕಾರಿ.

ಈ ಕೀಳರಿಮೆಯೆನ್ನುವುದು ಅಪಾಯಕಾರಿ ಎಂಬುದನ್ನು ಯಾಕಿಷ್ಟು ಒತ್ತಿ ಹೇಳಬೇಕೆಂದರೆ ಅದು ನೆಲೆಗೊಳ್ಳುವುದು ವ್ಯಕ್ತಿಯ ಸುಪ್ತಚೇತನದಲ್ಲಿ. ಅದು ವ್ಯಕ್ತಿಯ ವರ್ತನೆ, ಸಾಮರ್ಥ್ಯ, ಭಯ, ಪ್ರತಿಭೆ; ಎಲ್ಲವನ್ನೂ ನಿಯಂತ್ರಿಸುವುದು ಅಂತರಾಳದಿಂದಲೇ.
ತಾನು ಮಾಡುವ ಪ್ರತಿಯೊಂದು ಕೆಲಸದ ಮಹತ್ವವನ್ನು ತಾನೇ ಅನುಮಾನಿಸುವುದು, ಅದು ಸರಿಯಿದೆಯೋ ಇಲ್ಲವೋ ಎಂದು ಸದಾ ಬೇರೊಬ್ಬರ ಅಭಿಪ್ರಾಯದ ಮೇಲೆ ಅವಲಂಬಿತವಾಗಿರುವುದು, ಬೇರೊಬ್ಬರು ಸರಿ ಇದೆ ಎಂದಾಗ ಮಾತ್ರ ಅದನ್ನು ತಾವೂ ಒಪ್ಪುವುದು, ಅದರ ಮೌಲ್ಯವನ್ನು ಅಳೆಯಲು ಅರ್ಹರಲ್ಲದ ವ್ಯಕ್ತಿಗಳು ತಪ್ಪು ಎಂದರೂ ಖಿನ್ನರಾಗಿ ಕೆಲಸವನ್ನು ಅಥವಾ ವಿಷಯವನ್ನು ಕೈ ಬಿಡುವುದು; ಇವುಗಳೆಲ್ಲಾ ಕೀಳರಿಮೆಯ ಲಕ್ಷಣಗಳೇ.

ಮಿಸ್ಟರ್ ಪರ್ಫೆಕ್ಷನ್

ಈ ಕೀಳರಿಮೆಯಿಂದಾಗಿ ವ್ಯಕ್ತಿಗಳು ‘ಮಿಸ್ಟರ್ ಪರ್ಫೆಕ್ಷನ್’ ಆಗುವ ಗೀಳೂ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾರೆ. ಮಿಸ್ಟರ್ ಪರ್ಫೆಕ್ಷನ್‍ಗಳು ಒಳಗಾಗುವ ಒತ್ತಡಗಳು ಊಹಾತೀತ. ಯಾರು ತಮ್ಮ ಕೆಲಸದ ಬಗ್ಗೆ ಬೆರಳು ಮಾಡಿ ಏನು ಅಂದುಬಿಡುತ್ತಾರೋ, ಎಲ್ಲಿ ನಿರ್ಲಕ್ಷಿಸಿಬಿಡುತ್ತಾರೋ, ಖಂಡಿಸಿ ನಿರಾಕರಿಸಿಬಿಡುತ್ತಾರೋ ಎಂಬ ಅವಿರತ ಭಯ ಅವರನ್ನು ಕಾಡುತ್ತಿರುತ್ತದೆ. ಸಾಲದಕ್ಕೆ ತಮ್ಮ ಜೊತೆಯಲ್ಲಿರುವವರ ಮೇಲೂ ಅದನ್ನು ದಬ್ಬುತ್ತಿರುತ್ತಾರೆ.

ಇನ್ನೂ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳೋಣ. ಕೀಳರಿಮೆ ಎಂದ ತಕ್ಷಣವೇ ಇದೊಂದು ಮಹಾ ಮನೋರೋಗವೆಂದೇನೂ ಅಂದುಕೊಳ್ಳುವಷ್ಟಿಲ್ಲ. ಏಕೆಂದರೆ, ಎಲ್ಲರಿಗೂ ತಾವು ಮಾಡುವ ಕೆಲಸವೆಲ್ಲಿ ಕೆಡುವುದೋ, ಅಥವಾ ಮಾಡಲಾಗದೇ ಹೋಗುವುದೋ ಎಂಬ ಆತಂಕ ಇದ್ದೇ ಇರುತ್ತದೆ. ಈ ಆತಂಕ ಇರುವ ಹೊತ್ತಿಗೆ ಎಚ್ಚರಿಕೆಯಿಂದ ಕೆಲಸ ಮಾಡಲೂ ಸಾಧ್ಯ. ಕೆಲಸಗಳು ಕೆಡದಿರಲು ಸಾಧ್ಯ. ಆದರೆ ಇದು ಗೀಳಾಗಿ ಪರಿಣಮಿಸುವುದರ ಬಗ್ಗೆ ಅಥವಾ ಅರಿಮೆಯಾಗಿ ಮನಸ್ಸಿನಾಳದಲ್ಲಿ ಉಳಿದು ಕೆಲಸವನ್ನೇ ಮಾಡಲಾಗದೇ ದುರ್ಬಲರನ್ನಾಗಿಸುವುದರ ಬಗ್ಗೆ ಗಮನವನ್ನು ಕೇಂದ್ರೀಕರಿಸಬೇಕಾಗಿರುವುದು. ಆತಂಕ, ಭಯ, ಹಿಂಜರಿಕೆ ಇತ್ಯಾದಿಗಳೆಲ್ಲಾ ಆರೋಗ್ಯವಂತ ಮನಸ್ಸಿನ ಲಕ್ಷಣಗಳೇ. ಆದರೆ, ಅದು ಮುನ್ನಡೆಯಲು ಬಿಡದೇ ಹೋಗುತ್ತದೆ ಎಂದಾಗ ಮಾನಸಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಕೀಳರಿಮೆಯ ಬಗೆಗಳು

ಈ ಕೀಳರಿಮೆಗಳು ಹುಟ್ಟುವ ಮತ್ತು ಪ್ರಭಾವಿಸುವ ಮೂಲಗಳನ್ನು ಆಧರಿಸಿಕೊಂಡು ಅವನ್ನು ಎರಡು ಬಗೆಯಾಗಿ ಗುರುತಿಸಬಹುದು. ಪ್ರಾರಂಭಿಕ ಕೀಳರಿಮೆ ಮತ್ತು ಪ್ರಭಾವಿತ ಕೀಳರಿಮೆ. ಒಬ್ಬ ವ್ಯಕ್ತಿಯ ಪ್ರಾರಂಭಿಕ ಕೀಳರಿಮೆ ಹುಟ್ಟು ಅವನ ಬಾಲ್ಯದಲ್ಲಿಯೇ. ಅವನು ಸ್ವಾಭಾವಿಕವಾಗಿ ಸಣ್ಣಗೆಯೋ, ದೈಹಿಕವಾಗಿ ದುರ್ಬಲನಾಗಿಯೋ, ಬುದ್ಧಿಮತ್ತೆಯಲ್ಲಿ ಅಷ್ಟು ಚುರುಕಿಲ್ಲದವನಾಗಿಯೋ ಇದ್ದಿರಬಹುದು. ಆಗ ಅದನ್ನು ಪದೇ ಪದೇ ಆತನ ಗಮನಕ್ಕೆ ತರುವುದೇ ಅಲ್ಲದೇ ಅದನ್ನು ಕೇವಲವಾಗಿ ಕಾಣುವುದು, ಅಪಹಾಸ್ಯ ಮಾಡುವುದು, ಖಂಡಿಸುವುದು, ನಿಂದಿಸುವುದನ್ನು ಮಾಡುವಾಗ ಅದು ಅರಿಮೆಯಾಗಿ ಬೆಳೆಯುತ್ತದೆ.

ಒಬ್ಬರಿಗೆ ಮತ್ತೊಬ್ಬರನ್ನು ಹೋಲಿಸುವುದು, ಮತ್ತೊಬ್ಬರ ಸಾಧನೆಯನ್ನು ಮಾದರಿಯಾಗಿ ಮುಂದಿಡುವುದು, ಅತಿ ನಿರೀಕ್ಷೆಗಳನ್ನು ಮುಂದಿಡುವುದು; ಇವೆಲ್ಲವೂ ಕೂಡಾ ಬಾಲ್ಯದಲ್ಲಿ ಮಕ್ಕಳ ಮೇಲೆ ಮಾಡುವ ದಾಳಿಗಳೇ. ಇನ್ನೂ ಕ್ರೂರವೆಂದರೆ, ಒಬ್ಬನ ದೈಹಿಕ ಸ್ವರೂಪವನ್ನು ತಮ್ಮ ಹಾಸ್ಯಕ್ಕೆ ಮತ್ತು ಕುರೂಪತನದ ದೃಷ್ಟಿಗೆ ಬಳಸಿಕೊಳ್ಳುವುದು. ಕರಿಯ, ಕೆಂಚ, ಸಣಕಲ, ಹಲ್ಲುಬ್ಬ, ಬಾಂಡ್ಲಿ, ಡುಮ್ಮ, ಕುಂಟ, ಕುರುಡ, ಕೆಪ್ಪ; ಇತ್ಯಾದಿ.
ಇವೊಂದು ಕಡೆ ಇರಲಿ. ಒಬ್ಬನ ಅಸಹಾಯಕತೆ ಮತ್ತು ಅವಲಂಬನೆ ಕೂಡಾ ಅರಿಮೆಯ ಹುಟ್ಟಿಗೆ ಕಾರಣವಾಗುತ್ತದೆ. ತಿರುಬೋಕಿ, ದರಿದ್ರ, ಗತಿಗೆಟ್ಟವನು; ಇವುಗಳೂ ಕೂಡಾ ಅವನ ಸ್ಥಿತಿಗತಿಯ ಕಾರಣ ಅವನು ಎತ್ತರಕ್ಕೆ ಏರಲಾಗದು, ಅವನ ಸಾಮರ್ಥ್ಯ ಮತ್ತು ಪ್ರತಿಭೆಗಳು ಬೆಳಕಿಗೆ ಬರಲಾಗದು ಎಂಬ ಅರಿಮೆಯನ್ನು ಗಟ್ಟಿಗೊಳಿಸುತ್ತದೆ.

ಹಾಗಿರುವುದಕ್ಕೆಯೇ ಬಡತನದಲ್ಲಿರುವವರು ವಿದ್ಯಾವಂತರಾದರೆ, ತರಕಾರಿ ಮಾರುವವನ ಮಗಳು ಉನ್ನತ ಸ್ಥಾನ ಪಡೆದು ಚಿನ್ನದ ಪದಕವನ್ನು ಪಡೆದರೆ ಅತ್ಯುನ್ನತ ಸಾಧನೆ ಎಂದು ಪರಿಗಣಿಸುವುದು. ಏಕೆಂದರೆ ಮೇಲುಕೀಳುಗಳ ಸ್ಥಾನಮಾನಗಳನ್ನು ಸೃಷ್ಟಿಸಿರುವ ಸಮಾಜವು ಅಂತವರಿಗೆಲ್ಲಾ ಕೀಳರಿಮೆಯನ್ನು ಹುಟ್ಟಿಹಾಕಿದೆ. ಅದನ್ನು ಮೀರಿ ಅವರು ಬೆಳೆದರೆ, ಸಾಧಿಸಿದರೆ ಮಹತ್ವವೆಂದು ಪರಿಗಣಿಸುವರು. ನಿಜ ಹೇಳಬೇಕೆಂದರೆ, ಆ ರೀತಿ ಶಿಕ್ಷಣ ಪಡೆಯುವುದಾಗಲಿ, ಉನ್ನತಿಯನ್ನು ಸಾಧಿಸುವುದಾಗಲಿ ಎಲ್ಲರಿಗೂ ಸಾಧ್ಯವಾಗಬೇಕು. ಯಾರೋ ಕೆಲವೇ ವ್ಯಕ್ತಿಗಳಿಗಲ್ಲ. ಎಲ್ಲರಿಗೂ ಶಿಕ್ಷಣ ಬೇಕು. ಎಲ್ಲರೂ ಮಾನಸಿಕವಾಗಿ ಸದೃಢರಾಗಿರಬೇಕು. ಎಲ್ಲರೂ ಆರೋಗ್ಯಕರವಾದಂತಹ ಪರಿಸರವನ್ನು ರೂಪಿಸಿಕೊಂಡು ಉನ್ನತಿಗೇರಬೇಕು.

ಆದರೆ ಸಾಮಾನ್ಯವಾಗಿ ಕೀಳರಿಮೆಗೆ ಬಲಿಯಾಗುವವರೇ ಸಾಮಾನ್ಯವಾಗುವುದರಿಂದ ಅದನ್ನು ಮೀರಿರುವವರು ಸಾಧಕರನ್ನಾಗಿ ಸಮಾಜವು ಹಾಡಿ ಹೊಗಳುತ್ತದೆ. ಆ ಹೊಗಳಿಕೆ ಅವರು ಅರ್ಹರೇ. ಅದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಸಾಮಾಜಿಕ ಪರಿಸರವು ಸೃಷ್ಟಿಸುವ ಕೀಳರಿಮೆಗೆ ಅವರು ಬಲಿಪಶುಗಳಾಗದೇ ಶಕ್ತಿಶಾಲಿಗಳಾಗಿದ್ದಕ್ಕೆ. ಆದರೆ ಇಲ್ಲಿ ನನ್ನ ಆಕ್ಷೇಪವೇನೆಂದರೆ ಸಮಾಜವು ಹುಟ್ಟುಹಾಕುವ ಅರಿಮೆಯದ್ದು. ನಮ್ಮ ಸಮಾಜವಿದೆಯಲ್ಲಾ, ಅದು ಕಾಂಪ್ಲೆಕ್ಸುಗಳ ಕಾಂಪ್ಲೆಕ್ಸು.

ನಾಲಾಯಕ್ ವಯಸ್ಕ

ಇನ್ನು ವಯಸ್ಕನೊಬ್ಬನು ತಾನು ಬಯಸಿದ್ದ ಎತ್ತರವನ್ನು ಏರಲಾಗದೇ ಹೋದಾಗ, ಉದ್ಯೋಗದಲ್ಲಿ ಸದೃಢತೆಯನ್ನು ಕಾಯ್ದುಕೊಳ್ಳದೇ ಹೋದಾಗ, ಅಗತ್ಯವಿರುವಷ್ಟು ಆರ್ಥಿಕತೆಯಲ್ಲಿ ಸ್ವಾವಲಂಬಿಯಾಗದೇ ಹೋದಾಗ, ತನ್ನ ಸುರಕ್ಷತೆಯಲ್ಲಿ ಅಭದ್ರತೆ ಕಾಡುವಾಗ, ತನ್ನ ಬಯಕೆಗಳನ್ನು ಕೊರತೆಗಳಿಂದಾಗಿ ತ್ಯಾಗ ಮಾಡುವಂತಾದಾಗ, ತನ್ನನ್ನು ಮತ್ತು ತನ್ನ ಕುಟುಂಬದವರ ಅಗತ್ಯಗಳನ್ನು ಪೂರೈಸುವುದರಲ್ಲಿ ವಿಫಲರಾದಾಗ, ತಮ್ಮ ಕನಸುಗಳು ನನಸಾಗದೇ ಹೋದಾಗ ನಾಲಾಯಕ್ ಆಗಿ ಎರಡನೇ ಬಗೆಯ ಪ್ರಭಾವಿಕ ಕೀಳರಿಮೆ ಹುಟ್ಟುವುದು. ಇದಕ್ಕೇನೂ ವಿವರಣೆ ಬೇಕಾಗಿಲ್ಲ. ನೇರವಾಗಿ ತಿಳಿಯುತ್ತದೆ. ಗಣಿತದಲ್ಲಿ ಸರಿಯಾಗಿ ಲೆಕ್ಕಗಳನ್ನು ಮಾಡಲು ಬಾರದ ಬಾಲಕ ಅದಕ್ಕೆ ಸಂಬಂಧವೇ ಇರದಂತಹ ಕಾಂಪೌಂಡ್ ಹತ್ತುವುದರಲ್ಲಿ ವಿಫಲನಾಗುತ್ತಾನೆ. ಕಾಗುಣಿತ ತಪ್ಪುಗಳನ್ನು ಮಾಡುವ ಮನುಷ್ಯ ಯಾರೋ ಒಬ್ಬರನ್ನು ಮಾತಾಡಿಸಿ ಅವರಿಗೇನೋ ಹೇಳಿ ಬರಲು ಬೇಕಾದ ಅಲ್ಪ ಪ್ರಮಾಣದ ಆತ್ಮವಿಶ್ವಾಸವನ್ನೂ ಕಳೆದುಕೊಂಡಿರುತ್ತಾರೆ. ಅಷ್ಟು ಕೇಡಿನ ಒಳಸುಳಿಗಳನ್ನು ಹೊಂದಿರುವವು ಈ ಕೀಳರಿಮೆಗಳು. ಅವೆಲ್ಲಾ ಸರಿ, ಇವುಗಳೀಗಾಗಲೇ ಇದ್ದರೆ ಮಾಡುವುದೇನು? ಅವುಗಳನ್ನು ಮಕ್ಕಳಲ್ಲಿ ತಲೆದೋರದಂತೆ ಮಾಡುವುದು ಹೇಗೆ ಇತ್ಯಾದಿಗಳನ್ನು ಗಮನಿಸಬೇಕಾಗಿದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version