ಅಂತರಂಗ

ಅರಿಮೆಯ ಅರಿವಿರಲಿ-33 : ಭೂತಬಾಧೆ

Published

on

  • ಯೋಗೇಶ್ ಮಾಸ್ಟರ್

ಒಬ್ಬ ವ್ಯಕ್ತಿ ಮತ್ತು ಹಲವು ವ್ಯಕ್ತಿಗಳಿಂದ ರಚಿತವಾಗಿರುವ ಸಮಾಜ; ಈ ಎರಡೂ ಸಂತೋಷವಾಗಿರಲು ಸಹಕರಿಸಲಾಗದ ಯಾವುದೇ ಪರಿಕಲ್ಪನೆಗಳಾದರೂ ಏಕೆ ಬೇಕು? ಧರ್ಮ, ಸಂಸ್ಕೃತಿ, ಆಚಾರ, ವಿಚಾರ, ರಾಜಕೀಯ, ಸಾಹಿತ್ಯ, ಕಲೆ; ಹೀಗೆ ಯಾವುದನ್ನೇ ತೆಗೆದುಕೊಳ್ಳಿ. ವ್ಯಕ್ತಿ ಮತ್ತು ಸಮಾಜವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಬೇಕು. ಬೌದ್ಧಿಕವಾಗಿ ಪ್ರಬುದ್ಧವಾಗಿರಬೇಕು. ಆಗ ಸಹಜವಾಗಿ ತನ್ನ ಜೀವನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಸಾಧ್ಯ. ಮನಶಾಸ್ತ್ರ, ಇತರೇ ವಿಜ್ಞಾನ, ಧರ್ಮ, ಸಂಸ್ಕೃತಿ, ರಾಜಕಾರಣ; ಈ ಎಲ್ಲವೂ ಪರಸ್ಪರ ಪೂರಕವೂ ಆಗಿರುವುದಲ್ಲದೇ ಒಂದರಲ್ಲೊಂದು ಹೆಣೆದುಕೊಂಡಿವೆ.

ಕಾರಣ ಎಲ್ಲದರ ಕೇಂದ್ರ ಮನುಷ್ಯ. ಎಲ್ಲವೂ ಅವನ ಒಳಿತಿಗೆ, ಅವನ ಶೇಯಸ್ಸಿಗೆ, ಅವನ ಆನಂದಕ್ಕೆ ಮತ್ತು ಅವನ ಉಳಿವಿಗೆ. ಹೀಗಿರುವಾಗ ಅವನಿಗಾಗಿ ಮತ್ತು ಅವನಿಂದ ಗಮನಿಸಲ್ಪಡುವ ಎಲ್ಲಾ ವಿಷಯಗಳನ್ನೂ ಸಮಗ್ರವಾಗಿ ಮತ್ತು ಪೂರಕವಾಗಿಯೇ ನೋಡುವಂತ ಮತ್ತು ಪರಿಗಣಿಸುವಂತಹ ಕೆಲಸವಾಗಬೇಕು.
ವಿಷಯಗಳೆಲ್ಲವೂ ಒಂದಕ್ಕೊಂದು ಪೂರಕವಾಗಿವೆ ಮತ್ತು ಹೆಣೆದುಕೊಂಡಿವೆ ಎಂಬುದನ್ನು ಬಿಟ್ಟು ಎಲ್ಲವನ್ನೂ ಪ್ರತ್ಯೇಕವಾಗಿಯೇ ಉಪಚರಿಸುವ ರೀತಿ ಬಹಳಷ್ಟು ತೊಂದರೆಗಳನ್ನು ಒಡ್ಡಿವೆ.

ಹೆಣಿಗೆ ಬಿಟ್ಟ ನಡಿಗೆ

ಮಕ್ಕಳು ಶಾಲೆಯಲ್ಲಿ ಪಡೆಯುವ ಶಿಕ್ಷಣ ಮತ್ತು ಅನೌಪಚಾರಿಕವಾಗಿ ಸಮಾಜದಲ್ಲಿ ಪಡೆಯುವ ಶಿಕ್ಷಣವು ಅವರಲ್ಲಿ ದ್ವಂದ್ವಗಳನ್ನು ಹುಟ್ಟಿಹಾಕುತ್ತವೆ. ಹಾಗೆಯೇ ವ್ಯಕ್ತಿಗಳ ಸಂಬಂಧಗಳಲ್ಲಿಯೂ ಕೂಡಾ ಭಿನ್ನ ನಿಲುವುಗಳು ಮತ್ತು ಭಿನ್ನ ರೂಢಿಗಳು ತಲೆದೋರುವುದರಿಂದ ಮಾನಸಿಕವಾದ ಒತ್ತಡಗಳು ಉಂಟಾಗುತ್ತವೆ. ಪರಸ್ಪರ ಬೆಸೆದುಕೊಂಡಿರುವ ವಿಷಯಗಳನ್ನು ಗಮನಿಸದೇ ಅವುಗಳ ಜಾಡುಗಳನ್ನು ಪ್ರತ್ಯೇಕವಾಗಿ ನೋಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.

ವ್ಯಕ್ತಿಯೊಬ್ಬನು ತಾನು ಅಪಮಾನಕ್ಕೆ ಒಳಗಾಗುವಂತೆ ಭಾವಿಸುವುದು, ಅಸಹಾಯಕ ಸ್ಥಿತಿಯನ್ನು ಎದುರಿಸುವುದು, ಭಾವೋದ್ರೇಕಕ್ಕೆ ಒಳಗಾಗುವುದು, ಒಳಗೊಳಗೇ ಉದ್ಭವಿಸುವ ವಿಚಾರಗಳು, ಕಾರ್ಯರೂಪಕ್ಕೆ ತರಲಾಗದ ಇದ್ದಕ್ಕಿದ್ದಂತೆ ಮೂಡುವ ಆಲೋಚನೆಗಳು, ತಿರಸ್ಕಾರಕ್ಕೆ ಒಳಗಾದ ಭಾವ, ಕೆಲವು ವಸ್ತುಗಳ, ಸ್ಥಳಗಳ ಮತ್ತು ವ್ಯಕ್ತಿಗಳ ಬಗ್ಗೆ ಇರುವಂತಹ ಭಯಗಳು, ಕೆಲವು ವ್ಯಕ್ತಿಗಳ ಬಗ್ಗೆ ತಳೆದಿರುವ ನಕಾರಾತ್ಮಕ ಭಾವನೆಗಳು, ಆತ್ಮಹತ್ಯೆಯ ಆಲೋಚನೆಗಳು, ಹತ್ಯೆ ಮಾಡುವಂತಹ ಬಯಕೆ ಮತ್ತು ಮಾಡಿಬಿಡುತ್ತೇನೆ ಎಂಬ ವಿಚಾರಗಳು; ಇಂತವೆಲ್ಲಾ posttraumatic disorders (PTED)ಸಾಲಿಗೇ ಬಂದು ಸೇರಿಬಿಡುತ್ತವೆ.

ಸಾಮಾನ್ಯವಾಗಿ ಈ ಸಮಸ್ಯೆ ಇರುವವರು ತಮಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ನಿರಾಕರಿಸುತ್ತಾರೆ. ಚಿಕಿತ್ಸೆಯ ನಿರಾಕರಣೆಯ ಮುಖ್ಯ ಕಾರಣವೆಂದರೆ, ಸಮಸ್ಯೆಯ ಮೂಲ ಹೊರಗಿನ ವ್ಯಕ್ತಿ, ಸನ್ನಿವೇಶ, ಸ್ಥಳ ಅಥವಾ ಘಟನೆಯಿಂದ ಆಗಿರುವುದೆಂದೂ, ಅದು ಸರಿ ಹೋದರೆ ತನ್ನಲ್ಲಿ ಸಮಸ್ಯೆ ಇರುವುದಿಲ್ಲವೆಂದು ನಂಬುತ್ತಾರೆ. ಇದರಿಂದ ಸಮಸ್ಯೆಯ ಮೂಲ ತಾವು ಎಂಬುದನ್ನು ಅವರು ಒಪ್ಪುವುದಿಲ್ಲ.

ಗಂಡ ಹೆಂಡತಿಯರ ನಡುವೆ ಜಗಳವಾಗಿದೆ ಎಂದಿಟ್ಟುಕೊಳ್ಳಿ. ಗಂಡನ ಒರಟು ವರ್ತನೆ ಮತ್ತು ದಾಳಿಯಿಂದ ಹೆಂಡತಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವಾಗಿದೆ. ಭಾವನಾತ್ಮಕವಾಗಿ ಕುಸಿದಿದ್ದು, ಜರ್ಜರಿತಳಾಗಿದ್ದಾಳೆ. ಅವಳಿಗೆ ‘ಈಗ ನಿನಗೆ posttraumatic disorders (PTED)ಇದೆ. ನಿನಗೆ ಸಮಾಲೋಚನೆ ಮತ್ತು ಚಿಕಿತ್ಸೆ ಬೇಕು” ಎಂದು ಹೇಳಿದರೆ ಆಕೆ ಅದನ್ನು ಕೇಳಲು ತಯಾರಿರುವುದಿಲ್ಲ. ಅವಳ ಪ್ರಕಾರ ಗಂಡನ ಒರಟುತನ ಮತ್ತು ಹಲ್ಲೆ ಮಾಡುವ ಗುಣದಿಂದಾಗಿ ನನ್ನ ದೇಹ ಮತ್ತು ಮನಸ್ಸಿಗೆ ನೋವಾಗಿದೆ. ಅವನು ಒರಟುತನ ಬಿಟ್ಟರೆ ಮತ್ತು ಉತ್ತಮ ರೀತಿಯಲ್ಲಿ ನಡೆದುಕೊಂಡರೆ ತಾನೂ ಸರಿ ಹೋಗುತ್ತೇನೆ ಎಂದು ನಂಬುತ್ತಾಳೆ. ಆದರೆ, ಅವನ ದಾಳಿಗೆ ಸಿಕ್ಕಿರುವ ಕಾರಣದಿಂದಲೇ ಅವಳಿಗೂ ಸಮಸ್ಯೆ ಇದೆ ಎನ್ನುವುದು ಅವಳಿಗೆ ಗೊತ್ತಾಗುವುದಿಲ್ಲ.

ಟ್ರೊಮಾ ಎಂದರೇನು?

ಗಂಡ ಹೊಡೆದ. ಹೆಂಡತಿಯ ಕೈಗೆ ಗಾಯವಾಯಿತು ಎಂದಿಟ್ಟುಕೊಳ್ಳಿ. ಈಗ ಹೊಡೆತಕ್ಕೆ ಸಿಕ್ಕು ಘಾಸಿತವಾಗಿರುವ ಕೈಗೆ ಉಪಚರಿಸಬೇಕು. ರಕ್ತಸ್ರಾವ ನಿಲ್ಲಿಸಬೇಕು. ಗಾಯ ಆಳವಾಗಿದ್ದರೆ ಹೊಲಿಗೆ ಹಾಕಿಸಬೇಕು. ಬ್ಯಾಂಡೇಜ್ ಕಟ್ಟಬೇಕು, ಇತ್ಯಾದಿ ಚಿಕಿತ್ಸೆ ನೀಡಬೇಕು. ಹೊಡೆಯುವ ಗಂಡ ತನ್ನ ತಪ್ಪನ್ನು ತಿಳಿದು ಮರುಗಿದರೆ, ಕ್ಷಮೆ ಕೇಳಿದರೆ ಗಾಯಗೊಂಡ ಕೈ ಸರಿ ಹೋಗುವುದಿಲ್ಲ. ಅದೇ ರೀತಿ ಮನಸ್ಸಿಗೆ ಆಗುವ ಗಾಯವೂ ಸಹ. ಒಮ್ಮೆ ಮನಸ್ಸು ಗಾಯಗೊಂಡರೆ ಅದಕ್ಕೊಂದು ಸಮಸ್ಯೆ ವಕ್ಕರಿಸಿತು ಎಂದೇ ಅರ್ಥ. ಅದು ಯಾವುದೋ ಒಂದು ರೀತಿಯಲ್ಲಿ ತನ್ನ ಪ್ರಭಾವವನ್ನು ಬೀರಿರಬಹುದು. ಸಂಬಂಧಗಳಲ್ಲಿ ಜಗಳ ಮುಗಿದು ಸರಿಹೋಗಿದ್ದರೂ, ನ್ಯಾಯ ಪಂಚಾಯತಿ ಮಾಡಿ ರಾಜಿಯಾಗಿದ್ದರೂ, ಪರಿಹಾರ ಸಿಕ್ಕಿದ್ದರೂ ಅಲ್ಲಿಗೆ ಮನಸ್ಸು ಸರಿ ಹೋಗಿದೆ ಎಂದಲ್ಲ.

ಟ್ರೋಮಾ ಎಂದರೇನೇ ಉಳಿದಿರುವ ನೋವು ಅಥವಾ ಅಡಗಿರುವ ಬಾಧೆ. ಅದು ದೈಹಿಕವಾಗಿಯಾದರೂ ಸರಿಯೇ, ಮಾನಸಿಕವಾಗಿಯಾದರೂ ಸರಿಯೇ.ಸಮಾಲೋಚನೆಗಳ ಮೂಲಕ, ಆತ್ಮಾವಲೋಕನದ ಮೂಲಕ, ತನ್ನ ಬದಲಾಗಿರುವ ವರ್ತನೆ, ಆಲೋಚನೆ ಮತ್ತು ಧೋರಣೆಗಳನ್ನು ಗಮನಿಸಿಕೊಳ್ಳುವ ಮೂಲಕ ತಮ್ಮಲ್ಲಿ ತಲೆದೋರಿರುವ ಸಮಸ್ಯೆಯನ್ನು ಗುರುತಿಸಿಕೊಳ್ಳಬೇಕು. ಮನಶಾಸ್ತ್ರಜ್ಞರು ಸಮಾಲೋಚನೆಗಳಾ ಮೂಲಕ ಇದನ್ನು ಗುರುತಿಸಿಕೊಳ್ಳಲು ಮತ್ತು ಅದರಿಂದ ಹೊರಗೆ ಬರಲು ಸಹಾಯ ಮಾಡುತ್ತಾರೆ.

ಮಗುವೊಂದು ಏನೋ ಬೇಕೆಂದು ಗಲಾಟೆ ಮಾಡಿ ಅಳುತ್ತದೆ. ನೀವು ಕೊಡಿಸುವುದಿಲ್ಲ. ಬೈಯುತ್ತೀರಿ. ಹಟ ಅತಿರೇಕಕ್ಕೆ ಹೋಗಿದೆ ಎಂದು ನಾಲ್ಕು ಬಿಗಿಯುತ್ತೀರಿ. ಆಮೇಲೆ ನಿಮಗೇ ಅಯ್ಯೋ ಪಾಪ ಎನಿಸುತ್ತದೆ. ನಂತರ ಕೊಡಿಸುತ್ತೀರಿ. ಮಗು ಅಳು ನಿಲ್ಲಿಸುತ್ತದೆ. ನಗುತ್ತದೆ. ನಿಮ್ಮ ಜೊತೆಗೆ ಎಂದಿನಂತೆ ಇರುತ್ತದೆ. ಇಷ್ಟಕ್ಕೆ ಮಗುವು ಸರಿ ಹೋಯಿತೆಂದು ತಿಳಿಯಬೇಡಿ. ನಿಮ್ಮ ಮತ್ತು ಮಗುವಿನ ಸಂಘರ್ಷದ ಸಮಯದಲ್ಲಿ ಮಗುವಿನ ಮನಸ್ಸಿನಲ್ಲಿ ಉಂಟಾದ ಏರುಪೇರು ಅಲ್ಲಿಗೆ ಸರಿ ಹೋಗಿದೆ ಎಂದು ಖಂಡಿತ ಅಲ್ಲ. ಹೊರಗಿನ ಸಂಘರ್ಷ ಕೊನೆಗೊಂಡಿತು ಅಷ್ಟೇ. ಒಳಗೆ ಅದರ ಪ್ರಭಾವ ಜೀವಂತವಾಗಿರುತ್ತದೆ. ಭೂತಕಾಲದ ಅಂತಹ ಪಳೆಯುಳಿಕೆಗಳೆಲ್ಲಾ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿಯೂ ಕಾಡುತ್ತದೆ ಅದನ್ನು ಗುರುತಿಸಿ ಚಿಕಿತ್ಸೆ ನೀಡದಿದ್ದ ಪಕ್ಷದಲ್ಲಿ. ಇದನ್ನೇ ಭೂತಬಾಧೆ ಎಂದು ಹೇಳಬಹುದು.

ನೋವಿನ ಪಳೆಯುಳಿಕೆಗಳು

ಅಪಘಾತವಾದ ಮೇಲೆ, ಯಾವುದೋ ಶಸ್ತ್ರಕ್ರಿಯೆ ನಡೆದ ಮೇಲೆ, ಮಾನಸಿಕವಾಗಿ ದಾಳಿಯಾದ ಮೇಲೆ, ಭಾವನಾತ್ಮಕವಾಗಿ ಕ್ಷೋಭೆಗೊಂಡಿದ್ದ ಮೇಲೆ, ಯಾವುದೋ ಅಹಿತಕರ ಘಟನೆಗಳು ನಡೆದ ಮೇಲೆ, ಸಂಘರ್ಷ, ನಿರಾಸೆ, ನಷ್ಟ, ನೋವು, ಸಾವು, ವಂಚನೆ, ಆಕ್ರಮಣ, ಅತ್ಯಾಚಾರದಂತಹ ಘಟನೆಗಳು ಸಂಭವಿಸಿದ ಮೇಲೆ; ಹೊರ ನೋಟಕ್ಕೆ ಸರಿಹೋದಂತೆ ಕಂಡರೂ ನೋವಿನ ಪಳೆಯುಳಿಕೆಗಳು ಜೀವಂತವಾಗಿರುತ್ತವೆ. ಅವುಗಳೇ ಟ್ರೋಮಾ. ಅವುಗಳನ್ನು ಬುಡಸಹಿತ ಇಲ್ಲವಾಗಿಸುವುದು ಕಷ್ಟವಾದರೂ ಸೂಕ್ತವಾದ ಸಮಾಲೋಚನೆ ಮತ್ತು ಚಿಕಿತ್ಸೆ ಬೇಕೇಬೇಕು.

ಒಂದು ಮನೆಯಲ್ಲಿ ಸಾವಾದರೂ ಬೇಕು, ವ್ಯಾಪಾರದಲ್ಲಿ ನಷ್ಟವಾದರೂ ಬೇಕು, ಪ್ರೇಮಿಗಳು ಬ್ರೇಕ್ ಅಪ್ ಆದರೂ ಬೇಕು, ಒಂದು ಮಗುವಿನ ಗೊಂಬೆ ಮುರಿದು ಹೋದರೂ ಬೇಕು. ಅವುಗಳ ಗಂಭೀರ ಪರಿಣಾಮದ ಅನುಗುಣವಾಗಿ ಸಮಯ ಮತ್ತು ವಿಧಾನಗಳನ್ನು ಕೂಡಾ ಪರಿಗಣಿಸಬೇಕು. ನಮ್ಮ ಭಾರತದಲ್ಲಂತೂ, “ಹೋಗಲಿ ಬಿಡು” ಎಂಬ ದಿವ್ಯಮಂತ್ರವನ್ನು ಸಾಂತ್ವಾನವಾಗಿ ನೀಡಿ ಸುಮ್ಮನಾಗಿರುತ್ತಾರೆ. ಎರಡನೆಯ ಮತ್ತು ಮೂರನೆಯ ವ್ಯಕ್ತಿಗೆ “ಹೋಗಲಿ ಬಿಡು” ಎನ್ನುವುದು ಸುಲಭ.

ತಾಯಿ ಸತ್ತ ಮಗನಿಗೆ, ಗಂಡನಿಂದ ಹೊಡೆಸಿಕೊಂಡಿರುವ ಹೆಂಡತಿಗೆ, ಹೆಂಡತಿಯಿಂದ ನೋವುಂಡ ಗಂಡನಿಗೆ, ಗೊಂಬೆಯನ್ನು ಕಳೆದುಕೊಂಡಿರುವ ಮಗುವಿಗೆ, ಪರೀಕ್ಷೆಯಲ್ಲಿ ನಪಾಸಾದ ವಿದ್ಯಾರ್ಥಿಗೆ; ಸಮಾಧಾನಿಸಲು “ಹೋಗಲಿ ಬಿಡು” ಎಂದು ಮೂರನೆಯ ವ್ಯಕ್ತಿ ಎನ್ನಬಹುದು. ಆದರೆ ನಷ್ಟವನ್ನು ಹೊಂದಿರುವ, ನೋವಿನಲ್ಲಿರುವ ಅವರಿಗೆ ಈ ಪದ ಏನೂ ಸಾಂತ್ವಾನ ನೀಡದು. ತಮ್ಮದಲ್ಲದ ನಷ್ಟಕ್ಕೆ ಯಾರಾದರೂ ಹೋಗಲಿಬಿಡು ಮಂತ್ರ ಧಾರಾಳವಾಗಿ ಹೇಳಬಹುದಲ್ಲವೇ? ವಾಸ್ತವವಾಗಿ ಅವರಿಗೆ ಬೇರೆ ಏನು ಹೇಳುವುದು ಎಂದು ತಿಳಿಯದೇ ಇದನ್ನು ಹೇಳುವುದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ.

ಇರಲಿ, ಗಂಡನ ಜೊತೆಗೆ ರಾಜಿಯಾಗಿರುವ ಹೆಂಡತಿ, ತಾಯಿಯೊಂದಿಗೆ ಮತ್ತೆ ಮೊದಲಿನಂತೆ ಇರುವ ಮಗು; ಇವರ ಮನಸ್ಸಿನಲ್ಲಿ ಪಟ್ಟ ನೋವಿನ ಪಳೆಯುಳಿಕೆಗಳು ಆಲೋಚನೆಗಳಾಗಿಯೋ, ಅಭಿಪ್ರಾಯವಾಗಿಯೋ, ನಿರ್ಣಯವಾಗಿಯೋ, ಒಟ್ಟು ಸೂಕ್ಷ್ಮಸ್ತರದಲ್ಲಿ ರೂಪುಗೊಂಡಿರುತ್ತದೆ. ಅದು ವರ್ತನೆಗಳಲ್ಲಿ, ಧೋರಣೆಗಳಲ್ಲಿ ಮತ್ತು ಪ್ರತಿಕ್ರಿಯೆಗಳಲ್ಲಿ ವ್ಯಕ್ತಗೊಳ್ಳುತ್ತಿರುತ್ತವೆ. ಹುಲ್ಲುಮಾಳದಲ್ಲಿ ಒಣಗಿದ ಹುಲ್ಲು ಸುಟ್ಟು ಹೋಗಿ ಅಲ್ಲಿ ಹುಲ್ಲೇನೂ ಕಾಣದಿದ್ದರೂ, ಮಳೆ ಬಂದಾಗ ಸುಟ್ಟ ಬೂದಿಯಿಂದ ಬೀಜಗಳು ಮೊಳೆತು ಬಂದಂತೆ.

ಭರವಸೆ ಹುಟ್ಟಿಸುವಂತಹ ಚಿಕಿತ್ಸೆ ಎಂದರೆ ಅವು ಆಪ್ತ ಸಮಾಲೋಚನೆಗಳು. ಈ ಆಪ್ತ ಸಮಾಲೋಚನೆಯಲ್ಲಿ ವ್ಯಕ್ತಿಯು ತನ್ನ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ಅವಲೋಕಿಸುವುದು, ಅದರಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಗ್ರಹಿಸುವುದು, ತನ್ನಲ್ಲಿ ಉಂಟಾಗಿರುವ ಭಾವನೆಗಳ ಸಾಂದ್ರತೆಯನ್ನು ಗುರುತಿಸುವುದು, ಅವುಗಳನ್ನು ವಿವೇಚಿಸುವುದು, ಅವುಗಳು ಉಂಟು ಮಾಡುತ್ತಿರುವ ಪರಿಣಾಮಗಳನ್ನು ಗುರುತಿಸುವುದು, ಅವುಗಳು ಎಷ್ಟರಮಟ್ಟಿಗೆ ಮೌಲ್ಯವನ್ನು ಹೊಂದಿವೆ ಎಂದು ವಿಚಾರ ಮಾಡುವುದು, ಬಹುಕಾಲಕ್ಕೆ ಬೇಕಾದ ಅಥವಾ ತಾಳಿಕೆ ಮತ್ತು ಬಾಳಿಕೆ ಬರುವಂತಹ ವಿಚಾರಗಳನ್ನು ಮಾಡುವುದು; ಇವೆಲ್ಲಾ ಆಗಬಹುದು, ಆಗಬೇಕು. ಆಗ ವ್ಯಕ್ತಿಯು ತನ್ನ ನೋವು ಮತ್ತು ಸಂಕಟಗಳ ಭೂತಬಾಧೆಯಿಂದ ಮುಕ್ತವಾಗಿ ಸೇಡಿನ ಮನೋಭಾವನ್ನು ಹೊಂದದೇ ಇರಲು ಸಾಧ್ಯ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version