ಅಂತರಂಗ

ಅರಿಮೆಯ ಅರಿವಿರಲಿ-42 : ದೌರ್ಬಲ್ಯವೇ ಮಹಾಬಲ

Published

on

  • ಯೋಗೇಶ್ ಮಾಸ್ಟರ್

ವ್ಯಕ್ತಿಗಳ ಗುಂಪು ಅಥವಾ ಸಮಾಜವು ಬೇಡದ ಸಂಗತಿಗಳನ್ನು ಚಿಂತಿಸುತ್ತಿದ್ದರೆ, ಅನಗತ್ಯವಾದುದನ್ನು ಚರ್ಚಿಸುತ್ತಿದ್ದರೆ, ಬೇಗನೆ ಕೆಲಸಕ್ಕೆ ಬಾರದವರಾಗುತ್ತಾರೆ. ಯಾವ ವ್ಯಕ್ತಿಗಳು ಅಥವಾ ಸಮೂಹವು ತನ್ನ ಈಗಿನ ಮತ್ತು ವರ್ತಮಾನದ ಮುಂದುವರಿಕೆಯ ಭಾಗವಾದ ಭವಿಷ್ಯವನ್ನು ಸಬಲಗೊಳಿಸಿಕೊಳ್ಳಲು ಅಥವಾ ವ್ಯವಸ್ಥಿತವಾಗಿ ಮುನ್ನಡೆಸಲು ವಿಚಾರ ಮಾಡುವುದಿಲ್ಲವೋ ಅವರು ಕ್ರಮೇಣ ಅನುತ್ಪಾದಕರಾಗುತೊಡಗುತ್ತಾರೆ, ರಚನಾತ್ಮಕವಾಗಿರುವುದಿಲ್ಲ.

ಏಕೆಂದರೆ ಅವರ ಒಲವು, ನಿಲುವು, ಆಸೆ, ನಿರಾಸೆ, ಸೇಡು, ದುಃಖ, ಹಟ ಇತ್ಯಾದಿಗಳೆಲ್ಲಾ ಧೋರಣೆ ಅಥವಾ ದೃಷ್ಟಿಗಳಾಗಿ ಬದಲಾಗಿರುತ್ತವೆ. ಅವು ಯಾವುದಾದರೂ ಅರಿಮೆಯ ಅಥವಾ ಮಾನಸಿಕ ಸಮಸ್ಯೆಗಳ ರೂಪದಲ್ಲಿ ಅವರ ವರ್ತನೆಗಳ, ಚಿಂತನೆಗಳ, ಪ್ರತಿಕ್ರಿಯೆಗಳ ಮತ್ತು ಕೆಲಸ ಮಾಡುವ ರೀತಿಗಳ, ಒಟ್ಟಾರೆ ವ್ಯಕ್ತಿತ್ವದ ಭಾಗವಾಗಿರುತ್ತವೆ. ಇದರ ಪರಿಣಾಮವಾಗಿ ಅವರಲ್ಲಿ ಕೋಪ, ಅಸೂಯೆ, ಅಸಹನೆ, ಆಗ್ರಹ, ದ್ವೇಷ, ಆಕ್ರೋಶ ಇತ್ಯಾದಿಗಳು ವ್ಯಕ್ತವಾಗುತ್ತಿರುತ್ತವೆ. ಇವುಗಳನ್ನು ನಾವು ಸಾಮಾನ್ಯವಾಗಿ ವ್ಯಕ್ತಿಯ ದೌರ್ಬಲ್ಯವೆನ್ನುತ್ತೀವೋ? ಅನ್ನಬಹುದು, ಅಡ್ಡಿಯಿಲ್ಲ. ಆದರೆ ಈ ದೌರ್ಬಲ್ಯವೇ ವ್ಯಕ್ತಿಯು ಉತ್ಪಾದಕನಾಗಿರದಂತೆ ತಡೆಯುವಷ್ಟು, ರಚನಾತ್ಮಕನಾಗಿ ತೊಡಗಿಕೊಳ್ಳುವುದಕ್ಕೆ ಅಡ್ಡಿ ಮಾಡುವಷ್ಟು ಸಮರ್ಥವಾಗಿರುತ್ತವೆ.

ಅಡಗಿರುವ ಭೂತಗಳ ಅಪ್ಪಣೆ

ಅರಿಮೆಗಳು ಹುಟ್ಟು ಹಾಕುವ ಧೋರಣೆಗಳನ್ನು, ಅಭಿಪ್ರಾಯಗಳನ್ನು ಮತ್ತು ನಿರ್ಣಯಗಳನ್ನು ವ್ಯಕ್ತಿಗಳು ಮೈಮರೆತವರಂತೆ ತೃಪ್ತಿಪಡಿಸಿಕೊಳ್ಳುತ್ತಿರುತ್ತಾರೆ. ತಮ್ಮ ಒಳಗೆ ಅಡಗಿರುವ ಭೂತವು ಕೊಡುತ್ತಿರುವ ತೀರ್ಮಾನಕ್ಕೆ ತಕ್ಕಂತೆ ಎಲ್ಲವನ್ನೂ ನಡೆಸಲು ಅವರು ಆಜ್ಞಾನುವರ್ತಿಗಳಾಗಿ ವರ್ತಿಸುತ್ತಿರುತ್ತಾರೆ. ಮತ್ತೊಬ್ಬ ವ್ಯಕ್ತಿಯೊಡನೆ ಹೊಂದಿರುವ ಅಥವಾ ಹೊಂದಬೇಕಾಗಿರುವ ಸಂಬಂಧ, ಇತರ ಹಕ್ಕುಗಳನ್ನು, ತನ್ನ ಕರ್ತವ್ಯಗಳನ್ನು ಮರೆಯುವಂತೆಯೂ ಅಲ್ಲಿ ಆಗುತ್ತಿರುತ್ತದೆ. ಸರಳವಾಗಿ ಹೇಳುವುದಾದರೆ ಉನ್ಮತ್ತರಾಗಿರುತ್ತಾರೆ.

ಆ ಅಮಲಿನಲ್ಲಿ ಅವರ ವಿವೇಕವು ಇಲ್ಲವಾಗಿರುತ್ತದೆ. ಪ್ರಜ್ಞೆಯು ಪ್ರಜ್ಞಾಹೀನವಾಗಿರುತ್ತದೆ. ವಿವೇಚನೆಯು ಕೆಲಸವೇ ಮಾಡುವುದಿಲ್ಲ. ತನ್ನ ಒಳಗೆ ಅರಿಮೆಗಳು ಅಥವಾ ಮನಸ್ಥಿತಿಗಳು ಸೃಷ್ಟಿಸಿರುವ ಪರಿಕಲ್ಪನೆಗಳನ್ನು ಅಥವಾ ಭ್ರಮೆಗಳನ್ನು ಅತಿಯಾಗಿ ಮೋಹಿಸುವ ಇವರು ಸದಾ ಅದರ ಬಗ್ಗೆಯೇ ಆಲೋಚನೆಗಳನ್ನು ಮಾಡುತ್ತಿರುತ್ತಾರೆ. ತಮ್ಮ ಇಷ್ಟಗಳನ್ನು ಇಷ್ಟಪಡದವರು ತನ್ನ ವಿರೋಧಿಗಳು ಎಂದು ಭಾವಿಸುತ್ತಾರೆ. ತನ್ನ ಅಭಿರುಚಿ ಮತ್ತು ಆಸಕ್ತಿಗಳನ್ನು ಹೊಂದದವರು ತನ್ನ ಇರುವಿಕೆಯ ಬೆದರಿಕೆ ಎಂದೇ ಭಾವಿಸುವಂತಿರುತ್ತದೆ.

ಹಾಗಾಗಿಯೇ ಅವರು ಆಗ್ರಹಪೂರ್ವಕವಾಗಿ ತಮ್ಮ ಇಷ್ಟ, ಆಸಕ್ತಿ, ಅಭಿರುಚಿಗಳಿಗೆ ವಿರೋಧವಾದ ಅಭಿಪ್ರಾಯ ವ್ಯಕ್ತಪಡಿಸುವವರನ್ನು ದ್ವೇಷಿಸತೊಡಗುತ್ತಾರೆ. ಇದರಿಂದ ವ್ಯಕ್ತಿ ವ್ಯಕ್ತಿಗಳು ಕೂಡಿ ರಚನಾತ್ಮಕವಾದುದನ್ನು ಮಾಡಲಾರದವರಾಗುತ್ತಾರೆ. ಉತ್ಪಾದನೆಯು ಕುಂಠಿತವಾಗುತ್ತದೆ. ಸಾಮಾಜಿಕ ಬಂಧದ ತಂತುಗಳು ದುರ್ಬಲವಾಗುತ್ತವೆ. ಇದು ವ್ಯಕ್ತಿಗಳಿಗೆ ಅರ್ಥವಾಗುವುದೇ ಇಲ್ಲ. ಏಕೆಂದರೆ ಅವರು ಆತ್ಮರತಿ ಅಥವಾ ನಾರ್ಸಿಸ್ಟ್‍ಗಳಂತೆ ಇಡೀ ಜಗತ್ತನ್ನು ತಮ್ಮ ಮೂಗಿನ ನೇರಕ್ಕೇ ನೋಡಿಕೊಳ್ಳುವವರಾಗಿರುತ್ತಾರೆ.

ಜೀವಂತ ಸ್ಫೋಟಕಗಳು

ಅನಾರೋಗ್ಯಕರ ಮನಸ್ಥಿತಿಯು ವ್ಯಕ್ತಿಗತವಾಗಿಯಾದರಾಗಲಿ, ಸಮಾಜದಲ್ಲಿ ಸಂಕಲಿತವಾಗಿಯಾದರಾಗಲಿ; ಉಂಟಾದರೆ, ಅವು ಕೊರಕಲುಗಳನ್ನು ನಿರಂತರವಾಗಿ ಕೊರೆಯುತ್ತಿರುತ್ತವೆ. ಇದರಿಂದ ಪರಸ್ಪರ ಗಟ್ಟಿ ಹಿಡಿಯಬೇಕಾದ ಅಂಶಗಳು ಸವೆಯಲಾರಂಭಿಸುತ್ತವೆ. ಒಂದಲ್ಲ ಒಂದು ದಿನ ಅವು ಕುಸಿಯುತ್ತವೆ. ವ್ಯಕ್ತಿಗತವಾದ ಗಂಡ ಹೆಂಡಿರ ಸಂಬಂಧಗಳಾಗಲಿ, ಪೆÇೀಷಕರ ಮತ್ತು ಮಕ್ಕಳ ನಡುವಿನ ಸಂಬಂಧ, ಕಾರ್ಯಕ್ಷೇತ್ರಗಳಲ್ಲಿ, ಸಾಮಾಜಿಕ ವ್ಯವಸ್ಥೆಯ ಅಂಗಗಳಲ್ಲಿ, ಸಮುದಾಯಗಳಲ್ಲಿ ಒಡಕು ಮೂಡುವುದು ಹೀಗೆಯೇ.

ಒಟ್ಟಾರೆ ಅರಿವಿಗೆ ಎಟುಕದ ಅರಿಮೆಯ ಮನಸ್ಥಿತಿಗಳೆಂದರೆ, ಅವು ಸ್ಫೋಟಕಗಳು. ನಮ್ಮ ಎದುರಿಗೆ ಓಡಾಡುತ್ತಿರುವ ವ್ಯಕ್ತಿಗಳು ಎಂತೆಂತಹ ಜೀವಂತ ಸ್ಫೋಟಕಗಳೋ ಯಾರು ಬಲ್ಲರು? ಗಂಡನೆಂಬ ಸ್ಫೋಟಕವೊಂದು ಹೆಂಡತಿಯೆಂಬ ಮತ್ತೊಂದು ಸ್ಫೋಟಕದ ಜೊತೆಗೆ, ಅಪ್ಪ ಎಂಬ ಸ್ಫೋಟಕವೊಂದು ಮಗನೆಂಬ ಸ್ಫೋಟಕದೊಂದಿಗೆ; ಹೀಗೆ ಒಟ್ಟೊಟ್ಟಿಗೆ ಅನಿವಾರ್ಯವಾಗಿ ವ್ಯವಹರಿಸುತ್ತಿರುತ್ತಾರೆ. ಯಾವುದೋ ಒಂದು ಸಣ್ಣದೋ ಅಥವಾ ದೊಡ್ಡದೋ; ಒಟ್ಟಾರೆ ಒಂದು ಕಿಡಿ ಒಬ್ಬರನ್ನು ಸ್ಫೋಟಗೊಳ್ಳುವಂತೆ ಮಾಡುತ್ತದೆ. ಅದೇ ಕಾರಣದಿಂದ ಮತ್ತೊಬ್ಬರು ಪ್ರತಿಸ್ಫೋಟಗೊಳ್ಳುತ್ತಾರೆ.

ಒಂದು ವ್ಯಕ್ತಿ ಮತ್ತೊಂದು ವ್ಯಕ್ತಿಯ ಬಗ್ಗೆ ಅಥವಾ ಒಂದು ಸಮುದಾಯ ಮತ್ತೊಂದು ಸಮುದಾಯದ ಬಗ್ಗೆ ತಳೆಯುವ ಅಭಿಪ್ರಾಯ, ಮಾಡುವ ಆಲೋಚನೆಗಳು ಅಭಿವ್ಯಕ್ತಗೊಳಿಸಲು ಹಾತೊರೆಯುತ್ತಿರುತ್ತದೆ. ಅದು ನಕಾರಾತ್ಮಕವಾಗಿದ್ದರೆ, ಇರಿಯಲು ಅವಕಾಶವನ್ನು ಕಾಯುತ್ತಿರುತ್ತದೆ. ಯಾವುದೋ ಒಂದು ಸಂಗತಿಯ ಸ್ಫೋಟದಲ್ಲಿ ಇರಿಯುತ್ತಾರೆ. ಆದರೆ ಆ ಸ್ಫೋಟದ ಮುನ್ನದ ಅವಧಿಯಲ್ಲಿ ಅವರು ತಮ್ಮ ಆಯುಧವನ್ನು ಮಸೆಯುತ್ತಿರುತ್ತಾರೆ. ಈ ಮಸೆಯುವಿಕೆಯ ಅವಧಿಯಲ್ಲಿ ಅವುಡುಗಚ್ಚಿರುತ್ತಾರೆ ಮತ್ತು ಕುದಿಯುತ್ತಿರುತ್ತಾರೆ.

ಇದನ್ನೇ ಬಸವಣ್ಣನವರು ‘ಮನೆಯೊಳಗಣ ಕಿಚ್ಚು’ ಎನ್ನುವುದು. ಈ ಕಿಚ್ಚು ಹೆಚ್ಚಾದಷ್ಟೂ ಹುಚ್ಚರಾಗುತ್ತಿರುತ್ತಾರೆ. ತಾವು ಉಣ್ಣುವಾಗಲೂ, ಉಡುವಾಗಲೂ, ಸ್ನಾನ ಮಾಡುವಾಗಲೂ, ತಮ್ಮ ಬದುಕಿನ ಅಗತ್ಯದ ಯಾವುದೇ ಕೆಲಸಗಳನ್ನು ಮಾಡುವಾಗಲೂ ಈ ಮಸೆಯುವಿಕೆ ಅಥವಾ ಕಿಚ್ಚು ಕ್ರಿಯಾಶೀಲವಾಗಿಯೇ ಇರುತ್ತದೆ. ಆದ್ದರಿಂದ ಉಣ್ಣುವ ಉಡುವ ಆನಂದ ಅವರಿಗೆ ಇರುವುದಿಲ್ಲ.

ತಾವು ಆನಂದವಾಗಿರಬಹುದಾದ ಸಂಗತಿಗಳಲ್ಲಿ ಆನಂದವಾಗಿರಲು ಸಾಧ್ಯವಾಗದೇ ಅವುಗಳನ್ನೂ ಕೂಡಾ ತಮ್ಮ ಪೂರ್ವನಿರ್ಧಾರಿತ ಆಲೋಚನೆಗಳ ಪ್ರಕಾರ ಅಥವಾ ತಮ್ಮ ಮುಂಚಿನ ಅನುಭವವನ್ನು ಮಾನದಂಡವನ್ನಾಗಿಟ್ಟುಕೊಂಡು ಚೆನ್ನಾಗಿದೆ, ಚೆನ್ನಾಗಿಲ್ಲ, ಹೀಗಿದೆ, ಹಾಗಿದೆ ಎಂದು ನಿರ್ಣಯಗಳನ್ನು ಕೊಡುತ್ತಿರುತ್ತಾರೆ. ಅವರಿಗೆ ಆಗ ಅಲ್ಲಿ ದಕ್ಕಿರುವಂತಹ ಯಾವುದೇ ಒಂದು ಅನುಭವವನ್ನು ಆಸ್ವಾದಿಸಲು ಆಗುವುದಿಲ್ಲ. ಆಸ್ವಾದಿಸಲು ಆಗದಿರುವುದು ಆನಂದವನ್ನು ಕೊಡುವುದಿಲ್ಲ. ಅವರ ಆನಂದ ಅಥವಾ ನಿರಾಕರಣೆಗಳು ಹಿಂದಿನ ಅನುಭವಗಳ ನೆನಪಷ್ಟೇ ಆಗಿರುತ್ತವೆ.

ಕಿಚ್ಚಿನ ಹುಚ್ಚು

ಪೂರ್ವಾಗ್ರಹ ಪೀಡಿತವಾಗಿರುವ ಅಭಿಪ್ರಾಯಗಳು ಮತ್ತು ಧೋರಣೆಗಳು ಅರಿಮೆಯ ಭಾಗವಾಗಿ, ಮನಸ್ಥಿತಿಯ ರಚನೆಯಾಗಿರುವಾಗ ಅವುಗಳು ಶಾಂತವಾದ ಹೊನಲಾಗಿರುವುದಿಲ್ಲ. ಕಿಚ್ಚಿನ ಪ್ರವಾಹವಾಗಿರುತ್ತದೆ. ಈ ಕಿಚ್ಚು, ಮನೆಯೊಳಗಣ ಕಿಚ್ಚು ಹೆಚ್ಚಾದಷ್ಟೂ ವ್ಯಕ್ತಿಗಳಿರಲಿ, ಸಮೂಹ ಸಮೂಹಗಳೇ ಹುಚ್ಚಾಗುತ್ತವೆ. ಹಾಗೆ ಒಮ್ಮೆ ಹುಚ್ಚೆದ್ದರೆ ಮುಗಿಯಿತು. ತಮ್ಮ ಒಳಗೆ ಅರಿಮೆಯು ಸೃಷ್ಟಿಸಿರುವ ಮನಸ್ಥಿತಿಯ ದಂಡನಾಯಕನ ಆಜ್ಞೆಯಂತೆ ಯುದ್ಧಗಳನ್ನು ಮಾಡುತ್ತಿರುತ್ತಾರೆ. ಆ ದಂಡನಾಯಕನ ಆಶಯವು ತಾನು ಗೆಲ್ಲುವುದಷ್ಟೇ ಆಗಿರುತ್ತದೆ.

ಹಾಗಾಗಿಯೇ ಇಂತಹ ಅರಿಮೆಯ ವ್ಯಕ್ತಿಗಳ ಜೊತೆಗೆ ಸಂವಾದ ಸಾಧ್ಯವಾಗದು. ಅವರಲ್ಲಿ ಪ್ರಶ್ನೆಗಳು ಇರುವುದಿಲ್ಲ. ತೀರ್ಮಾನಗಳಿರುತ್ತವೆ. ಪ್ರಶ್ನೆಗಳಂತೆ ಕಂಡವು ಅವು ಉತ್ತರ ಪಡೆಯುವ ಆಶಯ ಅಥವಾ ಆಸಕ್ತಿಗಳಿಲ್ಲದೇ ಖಂಡಿಸಲು ಬಳಸುವ ಶಸ್ತ್ರಗಳಾಗಿರುತ್ತವೆ. ಅವರು ತಮ್ಮ ಎದುರಾಳಿಯು ಎಂದಿಗೂ ಮಾತನ್ನು ಪೂರೈಸಲು ಅಥವಾ ಅಭಿಪ್ರಾಯವನ್ನು ತಾರ್ಕಿಕವಾಗಿ ಮಂಡಿಸಲು ಬಿಡುವುದಿಲ್ಲ.

ಏಕೆಂದರೆ ಅವರು ಸಾಧಾರವಾಗಿ ಅಥವಾ ತರ್ಕಬದ್ಧವಾಗಿ ತನ್ನನ್ನು ಮಣಿಸಿಬಿಟ್ಟರೆ? ಅಥವಾ ತನ್ನ ವಿರುದ್ಧವಾಗಿ ವಿಜಯ ಸಾಧಿಸಿಬಿಟ್ಟರೆ ಎಂಬ ಭಯದಲ್ಲಿ ತಮ್ಮ ಮಾತುಗಳಲ್ಲಿ ನಿರಂತರ ಧಾಳಿ ಮಾಡುತ್ತಿರುತ್ತಾರೆ. ಎದುರಾಳಿಯ ಕ್ರಿಯೆಗೆ ಮುಂಚೆಯೇ ಪ್ರತಿಕ್ರಿಯೆ ಕೊಡುತ್ತಿರುತ್ತಾರೆ. ಅಟ್ಯಾಕಿಗೆ ಮುಂಚೆಯೇ ಕೌಂಟರ್ ಅಟ್ಯಾಕ್ ಮಾಡುವುದೆಂದರೆ ಇದೆಯೇ.

ಸಾಗಿದೆ ಸಂಗ್ರಾಮ

ಅರಿಮೆಗಳು ಅಥವಾ ಮಾನಸಿಕ ಸಂಕೀರ್ಣತೆಗಳು ಸೃಷ್ಟಿಸುವ ಸಂಘರ್ಷದ ಫಲವಾದರೂ ಏನು? ಅತೃಪ್ತಿ, ಆಯಾಸ ಮತ್ತು ಮತ್ತಷ್ಟು ಸಂಘರ್ಷಗಳಿಗೆ ಸರಕು. ತಾವು ಆಯಾಸಗೊಳ್ಳುತ್ತಾರೆ ಮತ್ತು ತಮ್ಮೊಡನೆ ಇರುವವರನ್ನು ಚೈತನ್ಯಹೀನರನ್ನಾಗಿ ಮಾಡುತ್ತಾರೆ. ಆಯಾಸಗೊಂಡಿರುವ ಬೇಸರ ಮತ್ತು ಮಾಡಬೇಕಾದ ಕೆಲಸಗಳನ್ನು ಮಾಡದೇ ಇರುವ ಅತೃಪ್ತಿಯು ಹತಾಶೆಯಿಂದ ಮತ್ತೆ ಸಂಘರ್ಷಕ್ಕೆ ಮುಂದಾಗುತ್ತದೆ. ಹಾಗೆಯೇ ಇವರಿಂದ ಸಮಸ್ಯೆಗೀಡಾದವರು ಅಥವಾ ಚೈತನ್ಯಹೀನರಾದ ಅನುಭವ ಪಡೆದವರೂ ಕೂಡಾ ಅದೇ ಕೋಪಕ್ಕೆ ಸಂಘರ್ಷಕ್ಕೆ ಇಳಿಯುತ್ತಾರೆ.

ನೋಡಿ, ಸಾವಿರ ಸಾವಿರ ವರ್ಷಗಳಿಂದ ಈ ಸಂಘರ್ಷಗಳು ಕೊನೆಗೊಂಡಿಲ್ಲ. ಬೇರೆ ಬೇರೆ ರೂಪಗಳಲ್ಲಿ ಮೈದೋರುತ್ತಲೇ ಇವೆ. ಆಗೆಲ್ಲಾ ಈ ಸಂಘರ್ಷಗಳ ಮೂಲ ತಿಳಿದಿರಲಿಲ್ಲ. ಸಂಘರ್ಷಗಳ ಕಾರಣವಾಗಿ ಅವರು ತಮ್ಮಲ್ಲಿ ಹುಟ್ಟುವ ಆಕ್ರೋಶ, ದ್ವೇಷ ಮತ್ತು ಅಸಹನೆಗೆ ಹೊರಗಿನ ಕಾರಣಗಳನ್ನು ಹುಡುಕುತ್ತಿದ್ದರು. ಹಾಗೆಯೇ ಹೊರಗಿನ ಸಂಗತಿಗಳಿಗೇ ಕಾರಣಗಳನ್ನು ಆರೋಪಿಸುತ್ತಿದ್ದರು. ಈಗ ನಮಗೆ ಕಾರಣಗಳನ್ನು ತಿಳಿಯುವ ಬಗೆಗಳು ಅನಾವರಣಗೊಂಡಿವೆ.

ಆದರೆ ಈ ವಿಧಾನಗಳು ತಿಳಿಯುವ ಮುನ್ನ ಅನುಸರಿಸುತ್ತಿದ್ದ ವಿಧಾನಗಳಂತೆಯೇ ಹೊರಗಿನ ಕಾರಣಗಳನ್ನೇ ಹುಡುಕುವ, ತನ್ನ ಜವಾಬ್ದಾರಿಯಿಂದ ಹೊರತಾದ ಸಂಗತಿಗಳನ್ನು ಗುರುತಿಸಿ ಅವುಗಳಿಗೆ ಕಾರಣಗಳನ್ನು ಆರೋಪಿಸುವ ರೂಢಿಯೇ ಇನ್ನೂ ಮುಂದುವರಿದಿದೆ. ಹಾಗೆಯೇ ವ್ಯಕ್ತಿಯ ಮತ್ತು ಸಮಾಜದ ಮಾನಸಿಕ ಸಮಸ್ಯೆಗಳು ಚಿಕಿತ್ಸೆಗೆ ಒಳಪಡುವುದಿರಲಿ, ಪತ್ತೆಗೆ ಒಳಗಾಗದಂತೆ ಜಾರಿಕೊಳ್ಳುತ್ತಿವೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version