ಅಂತರಂಗ

ಅರಿಮೆಯ ಅರಿವಿರಲಿ-43 : ನಿನ್ನ ಸಹವಾಸ ಸಾಕು

Published

on

  • ಯೋಗೇಶ್ ಮಾಸ್ಟರ್

ನಾನು’ – ದ ಫಸ್ಟ್ ಪರ್ಸನ್ – ಏಕವಚನದ ವ್ಯಕ್ತಿಯಾದ ನಾನು ನನ್ನ ಜೊತೆಗೆ ಜೀವಿಸುತ್ತಿರುವವರನ್ನು ಅರಿಮೆಯಿಂದ ಮುಕ್ತರನ್ನಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾದರೆ ಮೊದಲು ನನ್ನ ಅರಿಮೆಯನ್ನು ಅರಿಯಬೇಕು. ಅದನ್ನು ಒಪ್ಪಿಕೊಳ್ಳಲು ನನ್ನ ಅಹಂಕಾರ ಅಡ್ಡ ಬರಬಾರದು. ಎರಡನೆಯದು ಅದರ ಬಗ್ಗೆ ಸದಾ ಜಾಗರೂಕತೆಯಿಂದ ನನ್ನ ನಾನು ಗಮನಿಸಿಕೊಳ್ಳಬೇಕು. ಎಲ್ಲೆಲ್ಲಿ ಅದು ತನ್ನ ತಲೆ ಎತ್ತುವ ಸಾಧ್ಯತೆಗಳನ್ನು ಕಂಡುಕೊಳ್ಳುತ್ತೇನೋ ಅಲ್ಲಿ ಅದನ್ನು ಮಣಿಸುವಂತೆ ವರ್ತನೆಯನ್ನು ತೋರಬೇಕು.

ಉದಾಹರಣೆಗೆ ಆತ್ಮರತಿ ಅಥವಾ ನಾರ್ಸಿಸಂ ಗಮನಕ್ಕೆ ಬಂದ ಕೂಡಲೇ ಉದ್ದೇಶಪೂರ್ವಕವಾಗಿ ವಿನಯವನ್ನು ಅಭ್ಯಾಸ ಮಾಡಬೇಕು. ನಾನು ವಿನಯದ ವರ್ತನೆಯನ್ನು ತೋರಿದರೆ ನಾನು ಸೋತಂತೆ ನನ್ನ ಎದುರಾಳಿಗೆ ಗೆಲ್ಲುವುದಕ್ಕೆ ಬಿಟ್ಟಂತೆ ಎಂಬಂತಹ ಆಲೋಚನೆ ಬರಬಾರದು. ಬಂದರೂ ಪರವಾಗಿಲ್ಲ. ನನ್ನ ದೌರ್ಬಲ್ಯವನ್ನು ನಾನು ಗೆಲ್ಲುವುದು ಅತ್ಯಂತ ಮುಖ್ಯ ಎಂಬ ಮನವರಿಕೆಯಿಂದ ವರ್ತಿಸಬೇಕು. ಸಾಮಾನ್ಯವಾಗಿ ನನ್ನ ಎದುರಾಳಿಯು ನನ್ನ ವಿನಯವನ್ನು ನನ್ನ ಹೇಡಿತನವೆಂದು, ಅಸಹಾಯಕತೆ ಎಂದು ಭಾವಿಸುತ್ತಾನೆ. ಇದರಿಂದ ನನಗೆ ಅವಮಾನವಾಗುತ್ತದೆ ಎಂಬ ಭಾವ ಪದೇ ಪದೇ ಮೂಡುತ್ತಿರುತ್ತದೆ.

ಆದರೆ ಅದು ಭ್ರಮೆ. ಅವರು ಯಾರೂ ಏನೂ ನಮ್ಮ ಬಗ್ಗೆ ಹಾಗೆ ಅಂದುಕೊಳ್ಳುವುದಿಲ್ಲ. ಸರಿ, ಒಂದು ವೇಳೆ ಅಂದುಕೊಂಡರೆ, ಅಂದುಕೊಳ್ಳಲಿ ಪರವಾಗಿಲ್ಲ. ನನಗೆ ನಾನು ನನ್ನ ಅರಿಮೆಯಿಂದ ಮುಕ್ತವಾಗಬೇಕು ಎನ್ನುವ ಆಲೋಚನೆಯನ್ನು ಉದ್ದೇಶಪೂರ್ವಕವಾಗಿ ಮಾಡಬೇಕು. ಅದೇ ಪ್ರಜ್ಞೆಯಿಂದ ಅದನ್ನು ಬಲಗೊಳಿಸಿಕೊಳ್ಳಬೇಕು.

ಇನ್ನು ಮೂರನೆಯದಾಗಿ, ಯಾರಲ್ಲೇ ಯಾವುದೇ ಬಗೆಯ ಅರಿಮೆಯನ್ನಾಗಲಿ ಅಥವಾ ಮಾನಸಿಕ ಸಮಸ್ಯೆಯಾಗಲಿ ಕಂಡರೆ ಅವರ ಬಗ್ಗೆ ಅನುಕಂಪವನ್ನು ಹೊಂದಬೇಕು.ಅವರು ವ್ಯತ್ಯಾಸವಾಗಿ ವರ್ತಿಸಿದರೂ ‘ತಿಕ್ಕಲು ತಿಕ್ಕಲಾಗಿ ಆಡಬೇಡ’ ಎಂದೋ, ‘ಯೂ ಆರ್ ವಿಯರ್ಡ್’ ಅಂದರೆ ವಿಲಕ್ಷಣವಾಗಿ ಅಥವಾ ವಿಚಿತ್ರವಾಗಿ ಆಡುತ್ತಿದ್ದೀಯ ಎಂದೋ ಅನ್ನಬಾರದು. ಹೇ, ಯಾಕೆ ಹೇಗೇಗೋ ಒಳ್ಳೆ ದೆವ್ವ ಹಿಡದಂಗೆ, ದೇವರು ಮೈ ಮೇಲೆ ಬಂದಂಗೆ ಆಡ್ತಿದ್ದೀಯಾ, ಹುಚ್ಚು ಹಿಡಿದಿದೆಯಾ? ಪಿತ್ತ ನೆತ್ತಿಗೇರಿದೆಯಾ? ಇತ್ಯಾದಿ ಮಾತುಗಳನ್ನು ರೂಢಿಯಲ್ಲಿ ಆಡುತ್ತಾರೆ. ಅದರಲ್ಲೂ “ನಿನ್ನ ಸಹವಾಸ ಸಾಕಪ್ಪಾ” ಎಂದಂತೂ ಖಂಡಿತ ಅನ್ನಬಾರದು. ಅರಿಮೆಗಳ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಅರಿವು ಇಲ್ಲದವರ ಮಾತುಗಳು ಇವು.

ವೈದ್ಯನು ರೋಗಿಯನ್ನು ದ್ವೇಷಿಸುವುದು ನೈತಿಕವೇ?

ಯಾವ ವ್ಯಕ್ತಿಯೂ ತನ್ನ ಸಂಬಂಧಗಳನ್ನು ಹಾಳು ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ. ಅವನಿಗೆ ಆನಂದವೇ ಬೇಕಾಗಿರುವುದು. ತಾನೂ ಮತ್ತು ತನ್ನ ಜೊತೆಗಾರರೆಲ್ಲವೂ ಆನಂದವಾಗಿರಬೇಕೆಂದೇ ಬಯಸುವವನು. ಆದರೆ ಆನಂದ ಪಡೆಯುವ ಅಥವಾ ನೀಡುವ ಬದಲು ತನ್ನ ಮತ್ತು ಇತರರ ಸಂತೋಷವನ್ನು ಹಾಳುಮಾಡುವಂತಹ ಯಾವುದೇ ವರ್ತನೆಯನ್ನು ತೋರಿದರೂ, ಅಲ್ಲಿ ತಿಳಿದುಕೊಳ್ಳಿ, ಆತನಲ್ಲಿ ಅಥವಾ ಆಕೆಯಲ್ಲಿ ಸಮಸ್ಯೆ ಇದೆ ಎಂದು ಸ್ಪಷ್ಟವಾದ ಅರ್ಥ. ಆ ಸಮಸ್ಯೆಯನ್ನು ತಂದುಕೊಂಡಿರುವುದು ಅವರ ತಪ್ಪಲ್ಲ ಅಥವಾ ಅಪರಾಧವಲ್ಲ. ಏಕೆಂದರೆ ಮಾನಸಿಕ ಸಮಸ್ಯೆಗಳು ಅವರಿಗೆ ಅರಿವಿಲ್ಲದಂತೆಯೇ ಅವರಲ್ಲಿ ಇನ್‍ಸ್ಟಾಲ್ ಆಗಿರುತ್ತದೆ.

ಹಾಗೂ ಅವರಂತೂ ಖಂಡಿತ ಕಾರಣರಲ್ಲ. ಅವರಿಗೆ ಸಮಸ್ಯೆ ಇದೆ ಎಂದೇ ಗೊತ್ತಿರುವುದಿಲ್ಲ. ಎಷ್ಟೋ ಬಾರಿ ಅವರ ಸಮಸ್ಯೆಗಳನ್ನು ಅವರ ಸಾಮರ್ಥ್ಯ ಎಂದುಕೊಂಡಿರುತ್ತಾರೆ. ಅವರ ದೌರ್ಬಲ್ಯಗಳನ್ನು ಅವರ ಬಲ ಎಂದುಕೊಂಡಿರುತ್ತಾರೆ. ಹಾಗಾಗಿಯೇ ಅವರು ತಮ್ಮ ಸಮಸ್ಯೆಗಳನ್ನು ಅರಿತುಕೊಳ್ಳದೆಯೇ ಅದರ ಪ್ರಭಾವಗಳನ್ನು ಪ್ರಕಟಗೊಳಿಸುತ್ತಲೇ ಹೋಗುತ್ತಿರುತ್ತಾರೆ. ಅವರಿಗೆ ಗೊತ್ತಾದರೂ ಅವರು ಮುಂದುವರಿಸುತ್ತಿದ್ದಾರೆಂದರೆ ಅದು ಅವರ ನಿಯಂತ್ರಣಕ್ಕೆ ಮೀರಿ ಹೋಗಿದೆ ಎಂದು ಅರ್ಥ. ಅವರಿಗೆ ಅದನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ಅರ್ಥ.

ಇಡೀ ದೇಶವೇ ಸಾಂಘಿಕವಾಗಿ ತನ್ನ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಂಡು ಒಂದು ವೈರಸ್ ವಿರುದ್ಧ ಹೋರಾಡುವಾಗಲೂ ಬಹಳ ಕಷ್ಟಪಡುತ್ತದೆ. ಆಯಾಸಗೊಳ್ಳುತ್ತದೆ. ಸೋತಂತಾಗುತ್ತದೆ. ನಿಭಾಯಿಸಲು ಆಗದೇ ಕೈ ಚೆಲ್ಲುತ್ತದೆ. ವ್ಯವಸ್ಥೆಗಳಲ್ಲಿ ಕಪ್ಪೆಗಳನ್ನು ತಕ್ಕಡಿಗೆ ಹಾಕಿದಂತೆ ಇಲ್ಲಿ ತ್ಯಾಪೆ ಹಾಕಲು ಹೋದರೆ ಅಲ್ಲಿ ಹರಿಯುತ್ತದೆ. ಅಲ್ಲಿ ತ್ಯಾಪೆ ಹಾಕಲು ಹೋದರೆ ಇಲ್ಲಿ ಹರಿಯುತ್ತದೆ.ಹರಕುಗಳು ಎಲ್ಲೆಲ್ಲಿವೆ ಎಂದೇ ತಿಳಿಯದಷ್ಟು ಸೋಂಕುಗಳು ಸೋರುತ್ತಿರುತ್ತವೆ.

ಹಾಗಿರುವಾಗ ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಹೊಕ್ಕಿರುವ ವೈರಸ್ಸುಗಳು ಯಾವುವು ಎಂದೇ ತಿಳಿಯಲು ಸಾಧ್ಯವಾಗದೇ ಒದ್ದಾಡುವುದು, ಯಾವ ಯಾವ ಬಗೆಯ ವೈರಸ್ಸುಗಳು ಎಂದು ಕೂಡಾ ಪತ್ತೆ ಹಚ್ಚಲಾಗದೇ ಹೋಗುವುದು ಏನೂ ಹೆಚ್ಚಲ್ಲ. ಅಪರಾಧವೂ ಅಲ್ಲ. ಆದರೆ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡದೇ ಹೋಗುವುದು ಅಮಾನವೀಯ. ತಿಳುವಳಿಕೆಯನ್ನು ಪಡೆಯುವುದಕ್ಕೂ ಮುಂದಾಗದೇ ತನ್ನ ಹಟಮಾರಿತನದಲ್ಲಿ ಅಡಗಿಕೊಳ್ಳುವುದು ಅಜ್ಞಾನ.

ವೈದ್ಯನು ರೋಗಿಯ ಮೇಲೆ ಕೋಪಗೊಂಡರಾದೀತೇ? ವೈದ್ಯನ ಕಾಯಕವೇ ರೋಗವನ್ನು ಗುಣಪಡಿಸುವುದಾಗಿದ್ದು, ರೋಗಿಷ್ಟನಾಗಿದ್ದಾನೆಂದು ರೋಗಿಯನ್ನು ದ್ವೇಷಿಸುವುದು ನೈತಿಕವೇ? ಹಾಗೆಯೇ ಮನಸ್ಸಿನ ವಿಚಾರಗಳಲ್ಲಿ, ವರ್ತನೆ ಮತ್ತು ಸಂಬಂಧಗಳ ನಿರ್ವಹಣೆಗಳಲ್ಲಿ ಎಲ್ಲರೂ ಅರಿವುಳ್ಳವರಾಗಬೇಕು ಮತ್ತು ತಮ್ಮೊಡನೆ ವ್ಯತ್ಯಾಸವಾಗಿ ವರ್ತಿಸುವವರ ಮೇಲೆ ಅನುಕಂಪದಿಂದ ಅವರಿಗೆ ಸುಧಾರಿಸಿಕೊಳ್ಳಲು ನೆರವಾಗಬೇಕು. ಅವರು ಸುಧಾರಿಸಿಕೊಳ್ಳಲಾಗಲಿಲ್ಲವೆಂದರೆ ನಮ್ಮ ನೈಪುಣ್ಯಕೆ ಸವಾಲು ಎಂದು ಮತ್ತಷ್ಟು ಮಗದಷ್ಟು ಜ್ಞಾನ, ಪ್ರಜ್ಞೆ ಮತ್ತು ತಂತ್ರಗಳಿಂದ ನಿಪುಣರಾಗಲು ಯತ್ನಿಸಬೇಕು. ನೆಗಡಿ ಬಂದಿದೆ ಎಂದು ಮೂಗು ಕುಯ್ದುಕೊಳ್ಳುವುದೇ?

ಅಪರಾಧಿಗಳ ನಿರ್ಮಾತರು

ಕೆಟ್ಟದಾಗಿ ವರ್ತಿಸುವವನು, ಕೆಟ್ಟ ಕೆಲಸ ಮಾಡುವವನು, ಕೆಟ್ಟ ಮಾತುಗಳನ್ನು ಆಡುವವನು ಕೆಟ್ಟವನಲ್ಲವೇ? ದುಷ್ಟ ಎಂಬುವನು ಯಾರೂ ಇಲ್ಲವೇ? ಹಾಗಿದ್ದ ಮೇಲೆ ಯಾರನ್ನು ನಾವು ದುಷ್ಟರೆನ್ನಬೇಕು? ಯಾರನ್ನು ಕೆಟ್ಟವರೆನ್ನಬೇಕು? ಅಪರಾಧಿಗಳು ಎನ್ನುವವರು ಯಾರು ಎಂದು ಕೇಳಿದರೆ, ನನ್ನ ಉತ್ತರ ‘ಯಾರೂ ಇಲ್ಲ.’
Criminals are not born but they are made ಎಂಬ ಮಾತು ನಮಗೆ ಗೊತ್ತು. ಎಲ್ಲಾ ತಾಯಂದಿರೂ ಏನೂ ಅರಿಯದ ಮುಗ್ಧ ಶಿಶುವಿಗೇ ಜನ್ಮ ನೀಡುವುದು. ಯಾವ ತಾಯಿಯೂ ಅಪರಾಧಿ ಶಿಶುವನ್ನು ಹೆರುವುದಿಲ್ಲ. ಆದರೆ ಆ ಮಗುವು ಅಪರಾಧಿಯಾಗಿ ಮುಂದೆ ರೂಪುಗೊಳ್ಳುವುದು.

ಹಾಗೆ ರೂಪಿಸುವುದಾದರೂ ಯಾರು? ಕುಟುಂಬ, ಪರಿಸರ, ಸಮಾಜ, ವ್ಯವಸ್ಥೆ, ಸಂಸ್ಕೃತಿ ಇತ್ಯಾದಿ ಆ ಮಗುವಿನ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು. ಆದರೆ ಆ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ನಾವು ಹೇಳುವುದಾದರೂ ಏನು? ನಾವು ಎಷ್ಟು ಒಳ್ಳೆ ಮಾತು ಹೇಳಿದರೂ ಅವನು ಅಥವಾ ಅವಳು ಕೇಳುವುದಿಲ್ಲ ಎಂದು ದೂರುತ್ತೇವೆ. ಇನ್ನೂ ಸುಲಭವಾಗಿ ಅವನ ಅಥವಾ ಅವಳ ಹಣೆಬರಹವೇ ಆಗಿತ್ತು ಎನ್ನುತ್ತೇವೆ.

ಹಿಂದೆ ಮಾಡಿದ ಕರ್ಮ ಹೀಗೆ ಕಾಡುತ್ತಿದೆ ಎಂದೋ, ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದೋ, ಅವರ ಹುಟ್ಟಿದ ಗಳಿಗೆಯೇ ಹಾಗಿತ್ತು, ಜಾತಕದಲ್ಲಿ ಚೆನ್ನಾಗಿಲ್ಲ, ಗ್ರಹಗತಿ ಚೆನ್ನಾಗಿಲ್ಲ; ಹೀಗೆ ಹತ್ತು ಹಲವು ನೆಪಗಳನ್ನು ತೋರುತ್ತಿರುತ್ತೇವೆ, ಇದಕ್ಕೆ ಕಾರಣ ನಾನಲ್ಲ ಎಂದು ಹೊಣೆಗಾರಿಕೆಯನ್ನು ಕೊಡವಿಕೊಳ್ಳಲು.

ಒಂದು ಮಗುವಿನ ವ್ಯಕ್ತಿತ್ವದ ರೂಪುಗೊಳ್ಳುವಿಕೆಯಲ್ಲಿ, ವರ್ತನೆಯಳನ್ನು, ಆಲೋಚನೆಗಳನ್ನು ರೂಢಿಗೊಳಿಸುವಲ್ಲಿ ಕುಟುಂಬ, ಸಮಾಜ, ವ್ಯವಸ್ಥೆ ಮತ್ತು ಶಿಕ್ಷಣ ಎಲ್ಲವೂ ವಿಫಲವಾಗಿರುವ ಸ್ಪಷ್ಟ ಕುರುಹೇ ಅಪರಾಧಗಳಿಂದ ಕೂಡಿರುವ ಸಮಾಜ. ಯಾರೂ ಯಾರನ್ನೂ ದೂರುವುದು ಬೇಕಾಗಿಲ್ಲ. ಇದು ಸಾಂಘಿಕ ವೈಫಲ್ಯ. ನಾವು ಸಾಮೂಹಿಕ ಜವಾಬ್ದಾರಿಯನ್ನು ಹೊರಬೇಕು. ಎಲ್ಲರಿಗೂ ಅವರವರ ಹೊಣೆಗಾರಿಕೆಗಳಿವೆ.ಈ ಎಚ್ಚರಿಕೆಯನ್ನು ಹೊಂದಿದ್ದು, ಜಾಗೃತರಾಗಿ ಕೆಲಸ ಮಾಡುವುದಾದರೆ ಮಾತ್ರ ಒಂದಿಷ್ಟಾದರೂ ಮುಂದಿನ ಅವಘಡಗಳನ್ನು ತಪ್ಪಿಸಬಹುದು.

ಕೆಟ್ಟದ್ದು ಮತ್ತು ಒಳ್ಳೆಯದು ಎನ್ನುವುದೇ ಅವರವರ ಪರಿಕಲ್ಪನೆ. ಅವರವರ ಆಲೋಚನೆ, ಆಸಕ್ತಿ ಮತ್ತು ಇಷ್ಟಗಳ ಆಧಾರದ ಮೇಲೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಆಲೋಚಿಸುತ್ತಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ನಿರ್ಧರಿಸುತ್ತಾರೆ. ಅದರಂತೆಯೇ ವ್ಯಕ್ತಿಗಳನ್ನೂ, ಸಿದ್ಧಾಂತಗಳನ್ನೂ ಮತ್ತು ವ್ಯವಸ್ಥೆಗಳನ್ನೂ ದೂರುತ್ತಾರೆ ಅಥವಾ ಪ್ರಶಂಸಿಸುತ್ತಾರೆ. ಹಾಗಾಗಿಯೇ ಇಷ್ಟೊಂದು ಸಂಘರ್ಷ ಮತ್ತು ದೌರ್ಜನ್ಯಗಳು ಇರುವುದು.

ಒಬ್ಬ ಅಥವಾ ಎಲ್ಲರೂ ಮಾನಸಿಕವಾಗಿ ಉಲ್ಲಾಸದಿಂದ ಆನಂದದಿಂದ ಇರಬೇಕೆಂದರೆ ಎಂತಹ ಮನೋಭಾವವನ್ನು ಹೊಂದಿರಬೇಕೆಂದರೆ, ‘ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡು ನಾನು ನನ್ನವರೊಂದಿಗೆ ಚೆನ್ನಾಗಿರಬೇಕು. ಆನಂದವಾಗಿರಬೇಕು. ಹಾಗೆಯೇ ಇತರರೂ ಚೆನ್ನಾಗಿರಬೇಕು. ಆನಂದವಾಗಿರಬೇಕು. ಇಷ್ಟೇ ನಾವು ಒಳ್ಳೆಯದು ಅಥವಾ ಕೆಟ್ಟದು ಎಂಬ ಎಲ್ಲಾ ಸಿದ್ಧಾಂತಗಳನ್ನೂ ಮೀರಿ ಇರಬೇಕಾಗಿರುವ ಮೂಲ ಮನೋಭಾವ. ಇದಕ್ಕೆ ಮೀರಿ ಸಂಗತಿಗಳು ನಮ್ಮಲ್ಲಿ ಮತ್ತು ಸುತ್ತಮುತ್ತಲೂ ಘಟಿಸುತ್ತಿರುವುದರಿಂದ ಕ್ಷಮೆ, ಕರುಣೆ, ಔದಾರ್ಯ, ವಿನಯ, ಕೃತಜ್ಞತೆ ಇತ್ಯಾದಿ ಪರಿಕಲ್ಪನೆಗಳು ನಿರ್ವಹಣಾ ತಂತ್ರಗಳಾಗಿ (ಮೇನೇಜ್ಮೆಂಟ್ ಟೆಕ್ನಿಕ್ಸ್) ಬೇಕಾಗಿರುವುದು.

ಅರಿಮೆಗಳೆಲ್ಲಾ ರೋಗಗಳೇನಲ್ಲ

ನಾನು ಚೆನ್ನಾಗಿದ್ದು ನನ್ನೊಡನೆ ಇರುವವರು ಚೆನ್ನಾಗಿರಲಿಲ್ಲವೆಂದರೂ ಕೆಲವರಲ್ಲಿ ಕೀಳರಿಮೆ ಕಾಡುತ್ತದೆ. ಅದಕ್ಕೆ Successor ಅಥವಾ Survivor Guilt ಎನ್ನುತ್ತೇವೆ. ನೀವು ಜೀವನ ನಿರ್ವಹಣೆಗೆ ಅಗತ್ಯವಿರುವಂತಹ ಜೀವನೋಪಾಯಕ್ಕೆ ಮಾರ್ಗ ಕಂಡುಕೊಂಡಿರುತ್ತೀರಿ. ಆರ್ಥಿಕತೆಯಲ್ಲಿ ಸ್ವಾವಲಂಬಿಯಾಗಿರುತ್ತೀರಿ. ಆದರೆ ನಿಮ್ಮ ತಮ್ಮನೋ ಅಥವಾ ಅಣ್ಣನೋ ಅಥವಾ ಇನ್ನಾದರೂ ಗೆಳೆಯರೋ ನಿಮಗೆ ಆತ್ಮೀಯವಾಗಿ, ಬದುಕಿನಲ್ಲಿ ಆಪ್ತವಾಗಿರುವವರು ಪರಾವಲಂಬಿಯಾಗಿರುತ್ತಾರೆ. ಆರ್ಥಿಕವಾಗಿ ಮುನ್ನೆಲೆಗೆ ಬಂದಿರುವುದಿಲ್ಲ. ತೊಂದರೆಯಲ್ಲಿ ಬಳಲುತ್ತಿರುತ್ತಾರೆ. ಆಗ ನಿಮಗೆ ಈ ಅಪರಾಧ ಪ್ರಜ್ಞೆ ಕಾಡಬಹುದು.

ನಮ್ಮ ಆಪ್ತರ ಹೆಂಡತಿ ತೀರಿ ಹೋಗಿದ್ದು, ಅವರು ಸಂಸಾರ ನಿರ್ವಹಣೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ, ನಾನು ನನ್ನ ಹೆಂಡತಿಯೊಡನೆ ಸುಖವಾಗಿ ಸಂಸಾರ ನಡೆಸುವುದಕ್ಕೆ ಕಸಿವಿಸಿ ಎನ್ನಿಸುವ ಭಾವವೂ ಕೂಡಾ ಈ ಅರಿಮೆಯೇ. ಸ್ಥಾನಮಾನ, ಹೆಚ್ಚಿನ ಅಂಕ, ಉತ್ತಮವಾದ ಮನೆ; ಹೀಗೆ ಯಾವ ವಿಷಯಕ್ಕಾದರೂ ನಮ್ಮಲ್ಲಿ ನಮಗೆ ಆಪ್ತರಾಗಿರುವವರಿಗಿಂತ ಹೆಚ್ಚಾಗಿದ್ದರೆ ಈ ಅರಿಮೆಯು ಬರಬಹುದು.

ಇದಕ್ಕೆ ಮಾಡಬೇಕಾದುದೇನು? ಮುಖ್ಯವಾಗಿ ನಾವು ಯಾರ ಬಗ್ಗೆ ಹಾಗೆ ಯೋಚಿಸುತ್ತಿರುತ್ತೇವೆಯೋ ಅವರಿಗೆ ಆ ರೀತಿಯಲ್ಲಿ ನಮ್ಮ ಬಗ್ಗೆ ಭಾವನೆಗಳಿರುವುದಿಲ್ಲ ಎಂಬುದನ್ನು ಆಲೋಚಿಸಬೇಕು. ಹಾಗೆಯೇ, ನಾವು ಉದ್ದೇಶಪೂರ್ವಕವಾಗಿ ನಮ್ಮ ಏಳ್ಗೆಯನ್ನು ಕೆಳಗಿಳಿಸಿಕೊಳ್ಳದೇ ಅವರಿಗೆ ನೆರವಾಗಬೇಕು, ನಮ್ಮ ಅಹಂಕಾರವು ಎಂದಿಗೂ ಅವರಿಗೆ ನೋವನುಂಟು ಮಾಡಬಾರದು ಎಂಬ ಪ್ರಜ್ಞೆಯನ್ನು ಸದಾ ಎಚ್ಚರದಲ್ಲಿಟ್ಟುಕೊಂಡಿರಬೇಕು. ನಮ್ಮ ಏಳ್ಗೆಗೆ ಕಾರಣವಾಗಿರುವ ಅಂಶಗಳನ್ನು ಗುರುತಿಸಿಕೊಂಡು ಅವರಲ್ಲಿ ಕೊರತೆಯಾಗಿರುವ ಅಂಶಗಳನ್ನು ಪೂರೈಸುವ ಅಥವಾ ನೆರವಾಗುವ ಮೂಲಕ ಈ ಬಗೆಯ ಅಪರಾಧದ ಅರಿಮೆಯನ್ನು ತೊಡೆದುಕೊಳ್ಳಬಹುದು.

ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೆಂದರೆ ಎಲ್ಲಾ ಅರಿಮೆಗಳೂ ಮಾನಸಿಕವಾಗಿರುವುದಾದರೂ ಅವೆಲ್ಲವೂ ಮಾನಸಿಕ ಸಮಸ್ಯೆ ಆಗಿರಲೇ ಬೇಕೆಂದಿಲ್ಲ. ಅಪರಾಧ ಪ್ರಜ್ಞೆಯಂತಹ ಅರಿಮೆಗಳು ವ್ಯಕ್ತಿಯ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಅನುಕೂಲಕರವಾಗಿಯೂ ಪರಿಣಮಿಸಲು ಸಾಧ್ಯ. ಒಟ್ಟಾರೆ, ತನ್ನ ತಾನು ತಿಳಿಯುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ಸಹಜವಾಗಿ ತನ್ನ ವರ್ತನೆ ಮತ್ತು ಪ್ರತಿಕ್ರಿಯೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಅದರ ಮೂಲಕ ತಾನು ಯಾವ ಬಗೆಯ ಅರಿಮೆಗೆ ಒಳಗಾಗಿದ್ದೇನೆ ಮತ್ತು ಅದರಿಂದ ಹೊರಗೆ ಬರಲು ಏನು ಕೆಲಸ ಮಾಡಬೇಕು ಎಂಬುವುದರ ಬಗ್ಗೆ ಸಕಾರಾತ್ಮಕವಾಗಿ ಕೆಲಸ ಮಾಡಲು ಕೂಡಾ ಸಾಧ್ಯವಾಗುತ್ತದೆ. ಅದು ವ್ಯಕ್ತಿಗೂ ಹಿತವೇ, ಸಮಾಜಕ್ಕೂ ಹಿತವೇ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version