ಅಂತರಂಗ
ಅರಿಮೆಯ ಅರಿವಿರಲಿ-7 : ಕುಮಾರ ಕಾಮ
- ಯೋಗೇಶ್ ಮಾಸ್ಟರ್
ಹಗ್ಗದ ಕೊನೆಗಳು
ಪ್ರೇಮ ಮತ್ತು ಕಾಮಗಳ ನಡುವೆ ಅದೆಷ್ಟೇ ಅಂತರವನ್ನು ಕಾಯ್ದುಕೊಂಡಿದ್ದರೂ, ಅಥವಾ ವ್ಯತ್ಯಾಸವನ್ನು ಕಂಡುಕೊಂಡಿದ್ದರೂ ಅವೆರಡೂ ಕೆಲವೊಮ್ಮೆ ಬೆರೆತುಕೊಂಡುಬಿಡುತ್ತವೆ. ಕಾರಣ ಈವೆರಡೂ ಒಂದೇ ಹಗ್ಗದ ಎರಡು ಕೊನೆಗಳೇ ಹೊರತು, ಎರಡು ಪ್ರತ್ಯೇಕ ಹಗ್ಗಗಳ ತುಂಡುಗಳಲ್ಲ. ಪ್ರೇಮಿಗಳಲ್ಲೂ ಗಮನಿಸಿ ಪವಿತ್ರ ಪ್ರೇಮದ ಬಗ್ಗೆ ಮಾತಾಡುತ್ತಲೇ, ವೈವಾಹಿಕ ಜೀವನದ ಬಗ್ಗೆ ಕನವರಿಸುತ್ತಲೇ ಹಗ್ಗ ಜಗ್ಗಾಟದಲ್ಲಿ ಯಾವಾಗಲೋ ಒಮ್ಮೆ ಮಧ್ಯದ ಗೆರೆಯನ್ನು ದಾಟುವಂತೆ ಯಾರೋ ಒಬ್ಬರು ಎಳೆದುಬಿಟ್ಟಿರುತ್ತಾರೆ. ಮತ್ತೊಬ್ಬರಲ್ಲೂ ಎಳೆಸಿಕೊಳ್ಳುವ ತವಕ ಗುಪ್ತವಾಗಿರುತ್ತದೆ. ಅದು ಪ್ರವೃತ್ತಿ. ಇದು ಇಲ್ಲವೇ, ಯಾವುದೇ ಕಾರಣದಿಂದ ಹಗ್ಗ ತುಂಡಾಗಿಬಿಟ್ಟಿರುತ್ತದೆ.
ಸರೀ, ಈ ಹಗ್ಗವ್ಯಾವುದು ಗೊತ್ತೇ? ಆನಂದ.
ಇರಲಿ, ಸಧ್ಯಕ್ಕೆ ಇಷ್ಟು ತಿಳಿದುಕೊಳ್ಳೋಣ. ಕಾಮ ಮತ್ತು ಪ್ರೇಮದ ಮೂಲದ್ರವ್ಯ ಆನಂದ. ಕಾಮವೂ ಆನಂದಕ್ಕಾಗಿಯೇ, ಪ್ರೇಮವೂ ಆನಂದಕ್ಕಾಗಿಯೇ. ಪ್ರೇಮಕ್ಕೂ ಮತ್ತು ಕಾಮಕ್ಕೂ ಸಧ್ಯಕ್ಕೆ ಕಣ್ಗಾವಲು ಎಂದರೆ ವ್ಯಕ್ತಿಯ ಪಾತ್ರ, ಹಾಗೂ ನೀತಿಸಂಹಿತೆಯನ್ನು ನೀಡುವುದೆಂದರೆ ಅದು ಹೊಣೆಗಾರಿಕೆ. ಅಂದರೆ ಪ್ರೇಮ ಮತ್ತು ಕಾಮದ ನಿರ್ವಹಣೆಯಲ್ಲಿ ಅಥವಾ ಅನುಭವದಲ್ಲಿ ಶಿಷ್ಟ ಅಥವಾ ಕ್ರಮಬದ್ದ ಸಮಾಜದಲ್ಲಿ ನಿರೀಕ್ಷಿಸಬೇಕಾಗಿರುವುದೇನೆಂದರೆ ಪಾತ್ರವರಿತ ಹೊಣೆಗಾರಿಕೆ ಅಥವಾ ಹೊಣೆಗಾರಿಕೆಯನ್ನರಿತ ಪಾತ್ರ. ಎರಡೂ ಒಂದೇ. ಅಳಿಯ ಅಲ್ಲ ಮಗಳ ಗಂಡ ಅಷ್ಟೇ. ಒಟ್ಟಾರೆ ಈ ಎಚ್ಚರಿಕೆ ಪ್ರೇಮ ಮತ್ತು ಕಾಮವು ದಿಕ್ಕು ದಾರಿ ಮತ್ತು ಗುರಿ ತಪ್ಪದಂತೆ ನೋಡಿಕೊಳ್ಳುತ್ತದೆ.
ಪಾತ್ರನಿರ್ವಹಣೆಯ ಹೊಣೆಗಾರಿಕೆ
ನಾನು ಮತ್ತು ಅವಳು ಇಬ್ಬರೂ ವ್ಯಕ್ತಿಗಳು. ಈ ಇಬ್ಬರ ವ್ಯಕ್ತಿಗಳು ಪರಸ್ಪರ ಯಾವ ಪಾತ್ರಗಳನ್ನು ನಿರ್ವಹಿಸುತ್ತಾ ಸಂಬಂಧಿಸಿಕೊಂಡಿದ್ದೇವೆ? ನಮ್ಮ ನಮ್ಮ ಪಾತ್ರಗಳು ವಿಧಿಸಿಕೊಂಡಿರುವ ಅಥವಾ ವಿಧಿಸಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ಮತ್ತು ಗೊಂದಲ ಅಥವಾ ಸಂಘರ್ಷಗಳಿಲ್ಲದೇ ನಿಭಾಯಿಸಬೇಕೆಂದರೆ ಹಗ್ಗದ ಯಾವ ತುದಿಯನ್ನು ಹಿಡಿದುಕೊಳ್ಳಬೇಕು? ಆನಂದವು ಕ್ಷೋಭೆಗೊಳ್ಳದಿರಲು ಯಾವ ಕ್ರಮವನ್ನು ಪಾಲಿಸಬೇಕು? ಇದೇ ಪಾತ್ರಗಳು ತಮ್ಮ ಹೊಣೆಗಾರಿಕೆಯನುಸಾರವಾಗಿ ತೆಗೆದುಕೊಳ್ಳಬೇಕಾದ ತರಬೇತಿ. ಮಗುವೊಂದಕ್ಕೆ ಸಮಾಜವು ಈ ತರಬೇತಿಯನ್ನು ಭಾವನಾತ್ಮಕವಾಗಿಯೂ, ಮಾನಸಿಕವಾಗಿಯೂ ಹಾಗೂ ಭೌತಿಕವಾಗಿಯೂ ರೂಢಿಗೊಳ್ಳುವಂತೆ ನೀಡುತ್ತದೆ.
ಆದರೆ ಮನುಷ್ಯನು ಹುಟ್ಟುತ್ತಲೇ ತರಬೇತಿಯನ್ನು ಹೊಂದಿಲ್ಲದ ಕಾರಣ ಅವನು ಸ್ವಾಭಾವಿಕವಾಗಿ ನೈಸರ್ಗಿಕ ಪಶುವಿನಂತೆ ಪ್ರವೃತ್ತಿಗಳನ್ನು ಹೊಂದಿರುತ್ತಾನೆ. ಹಾಗಾಗಿಯೇ ತಾಯರಿಮೆ, ತಂದೆಯರಿಮೆ ಇತ್ಯಾದಿ ಅರಿಮೆಗಳು ಸಣ್ಣ ಮಗುವಿದ್ದಾಗ ಕಾಣುತ್ತವೆ, ನಂತರ ಶಿಷ್ಟ ಸಮಾಜದ ತರಬೇತಿಗೆ ಒಳಗಾಗುತ್ತಿದ್ದಂತೆ ಅವು ಮರೆಯಾಗುತ್ತವೆ.ವ್ಯಕ್ತಿಯಿಂದ ವ್ಯಕ್ತಿಗೆ ಕಲಿಕೆಯ ಸಾಮರ್ಥ್ಯದಲ್ಲಿ ವ್ಯತ್ಯಾಸವಿರುವಂತೆ, ಗ್ರಹಣಾಶಕ್ತಿಯಲ್ಲಿ ವ್ಯತ್ಯಾಸಗಳಿರುವಂತೆ, ಮನಸ್ಸೆಂಬ ವಿದ್ಯುತ್ಚಕ್ತಿಯ ಪ್ರವಹಿಸುವಿಕೆಯಲ್ಲಿ ವ್ಯತ್ಯಯವಾಗುವಂತೆ; ಮಾನಸಿಕ ಸ್ಥಿತಿಗಳೂ ಏಕಪ್ರಕಾರವಾಗಿ ನಿರಂತರ ಪ್ರವಹನೆಯಲ್ಲಿರುವುದಿಲ್ಲ. ಯಾವುದ್ಯಾವುದೋ ಪ್ರಭಾವಗಳು, ಪ್ರೇರಣೆಗಳು, ಸ್ಪಂದನೆಗಳು ಒಂದಿಷ್ಟು ಅಷ್ಟು ವ್ಯತ್ಯಾಸಗಳಾಗುವಂತೆ ಮಾಡುತ್ತವೆ. ಅದೇನೂ ಪ್ರಮಾದವಲ್ಲ. ಹಾಗಾಗುವುದು ಸ್ವಾಭಾವಿಕ.
ಆದರೆ, ಈ ವ್ಯತ್ಯಾಸದಲ್ಲೇ ಆನಂದವನ್ನು ಕಂಡುಕೊಂಡು ಅದನ್ನೇ ಗಟ್ಟಿಗೊಳಿಸಿಕೊಂಡುಬಿಟ್ಟರೆ ಕ್ರಮಗೊಳಿಸಿರುವ ಶಿಷ್ಟ ಸಮಾಜದ ವ್ಯವಸ್ಥೆಯು ಶಿಥಿಲಗೊಳ್ಳುವುದು ಮತ್ತು ಗೊಂದಲಗಳೂ ಹಾಗೂ ಸಂಘರ್ಷಗಳೂ ಆಗುವವು. ಹಲವು ಬಗೆಯ ವ್ಯಕ್ತಿಗಳೆಲ್ಲರೂ ಹಲವು ಬಗೆಯ ವ್ಯತ್ಯಾಸಗಳ ಮೇಲೆ ಹಕ್ಕು ಸ್ಥಾಪನೆ ಮಾಡಲು ಹೋದರೆ ಇಡೀ ಕ್ರಮವೇ ಪಲ್ಲಟಗೊಂಡು ಎಲ್ಲವೂ ಅಯೋಮಯವಾಗುವುದೆಂದು ನೈತಿಕ ಚೌಕಟ್ಟನ್ನು ವಿಧಿಸಿರುವುದು. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ; ಹೀಗೆ ಹಲವು ಪ್ರಕಾರಗಳಲ್ಲಿ ಮನಸ್ಸಿನ ವ್ಯತ್ಯಯಗಳನ್ನು ಅಂಕೆಯಲ್ಲಿಡಲು ಸಾಮಾಜಿಕ ವ್ಯವಸ್ಥೆಯು ಹೆಣಗಾಡುವುದು.
ಇರಲಿ, ಈಗ ನಾವು ಇಷ್ಟರಮಟ್ಟಿಗೆ ಈ ವ್ಯತ್ಯಾಸ ಅಥವಾ ವ್ಯತ್ಯಯಗಳನ್ನು ಕಂಡುಕೊಂಡು ಏನೋ ಒಂದು ಹೈಪೊಥೀಸಿಸ್ ಮಾಡುತ್ತಿದ್ದೇವೆ. ಆದರೆ ಈ ಕ್ರಮವರಿತ ತರಬೇತಿಗಳ ಅಗತ್ಯವನ್ನು ಕಂಡುಕೊಳ್ಳುವ ಮುನ್ನವೂ ನಮ್ಮ ಮಾನವನ ಬದುಕಿತ್ತಲ್ಲಾ! ಆಗಲೂ ಲೈಂಗಿಕ ಚಟುವಟಿಕೆಗಳು ನಡೆಯುತ್ತಿತ್ತಲ್ಲ! ಪ್ರೇಮವೋ, ಕಾಮವೋ ಎಂತದ್ದೋ ಆನಂದವನ್ನು ಪಡೆಯಲು ವ್ಯಕ್ತಿ ವ್ಯಕ್ತಿಗಳ ಸೆಳೆತವಿತ್ತಲ್ಲ! ಅವೆಲ್ಲವೂ ಇವತ್ತಿದ್ದಂತೆಯೇ ಇದ್ದಿರಲು ಸಾಧ್ಯವೇ ಇಲ್ಲ. ಈಗಿರುವುದನ್ನು ಮಾನವ ಸಮಾಜದ ವಯಸ್ಕ ಭಾಗ ಎನ್ನುವುದಾದರೆ ಈ ಮಾನವ ಸಮಾಜಕ್ಕೆ ಬಾಲ್ಯವೂ ಇದ್ದಿರಬೇಕಲ್ಲ?
ಪ್ರೌಢ ಸಮಾಜಕ್ಕೆ ಬಾಲ್ಯವಿಲ್ಲವೇ?
ಆ ಸಮಾಜದ ಬಾಲ್ಯದಲ್ಲಿ ಮನೋಲೈಂಗಿಕ ಸಂಘರ್ಷಗಳು ಇರಲಿಲ್ಲ. ಮನಸ್ಸಿಗೆ ಸಂಘರ್ಷವು ಪ್ರಾರಂಭವಾಗುವುದೇ ಕಟ್ಟುಪಾಡುಗಳಿಗೆ ಒಳಗಾದಾಗ. ಅದಕ್ಕೆ ಮುಕ್ತ ಅಭಿವ್ಯಕ್ತಿ ಸಾಧ್ಯವಾಗದಿದ್ದಾಗ, ಅದರ ಆಸೆ ಮತ್ತು ಅಗತ್ಯಗಳನ್ನು ಸ್ವತಂತ್ರವಾಗಿ ಹಾಗೂ ಸಮರ್ಥವಾಗಿ ಪೂರೈಸಿಕೊಳ್ಳಲು ನಿರ್ಬಂಧಗಳಿದ್ದಾಗ.
ಮಾನವನ ಪ್ರಾರಂಭಿಕ ಸಮುದಾಯದ ಬದುಕಿನಲ್ಲಿ ನಿರ್ಬಂಧಗಳಿರಲಿಲ್ಲ. ಸಂಬಂಧಗಳ ಕಟ್ಟುಪಾಡುಗಳಿರಲಿಲ್ಲ. ಅವನ ಜೀವಿತಕ್ಕೆ ಇದ್ದಂತಹ ಮಾದರಿಯೆಂದರೆ ಅವು ಪ್ರಾಣಿಗಳು. ಪ್ರಾಣಿಗಳ ಬದುಕೇ ನಮ್ಮ ಬದುಕೂ ಆಗಿತ್ತು. ಆ ಪ್ರಾಣಿಗಳಲ್ಲಿ ಅಮ್ಮ, ಅಪ್ಪ, ಅಜ್ಜ, ಅಜ್ಜಿ, ಸೋದರ ಮಾವ, ಅಳಿಯ, ಸೊಸೆ, ಗಂಡ ಹೆಂಡತಿ ಇವೆಲ್ಲವೂ ಇಲ್ಲ. ಈಗ ನಾವು ಗುರುತಿಸಿಕೊಂಡು ಕರೆದರೆ ಅವುಗಳ ಗಂಟೇನೂ ಹೋಗುವುದಿಲ್ಲ. ಅವುಗಳದೇನೂ ಅಭ್ಯಂತರವಿಲ್ಲ. ಆದರೆ ನೀನು ತಾಯಿ ನಾಯಿ, ಮಗನಾಗಿರುವ ನಾಯಿಯ ಜೊತೆ ಸಂಭೋಗ ಮಾಡಬೇಡ ಎಂದರೆ ಅವು ಕೇಳುವುದಿಲ್ಲ. ನೀವಿಬ್ಬರೂ ಸೋದರ ಸೋದರಿಯರು ನೀವಿಬ್ಬರು ಪ್ರೀತಿಸಬಹುದೇ ಹೊರತು ಲೈಂಗಿಕ ಕ್ರಿಯೆ ನಡೆಸಬಾರದು ಎಂಬ ಕಟ್ಟಳೆಯು ಪ್ರಾಣಿಗಳಲ್ಲಿ ಸಮ್ಮತವಿಲ್ಲ.ಅಷ್ಟೇಕೆ ನಮ್ಮ ಚಾರಿತ್ರಿಕ ನೆನಪುಗಳಲ್ಲಿ ಪುರಾತನ ಗ್ರೀಸಿನ ರಾಜಮನೆತನಗಳಲ್ಲಿ ಸೋದರ ಸೋದರಿಯರು ವಿವಾಹವಾಗುತ್ತಿದ್ದರು ಮತ್ತು ಮಕ್ಕಳನ್ನು ಪಡೆಯುತ್ತಿದ್ದರು.
ಜೊಕಾಸ್ಟ ಕಾಂಪ್ಲೆಕ್ಸ್
ತನ್ನ ಮಗುವಿನ ಕುರಿತಾದ ತಾಯಿಯ ಪ್ರೇಮವು ಕಾಮವಾಗಿ ಮಾರ್ಪಾಡಾಗುವುದನ್ನು ಮಗನರಿಮೆ ಅಥವಾ ಜೊಕಾಸ್ಟ ಕಾಂಪ್ಲೆಕ್ಸ್ ಎಂದು ಮನೋವಿಜ್ಞಾನದಲ್ಲಿ ಗುರುತಿಸುತ್ತಾರೆ. ಇದಕ್ಕೆ ಜೊಕಾಸ್ಟ ಕಾಂಪ್ಲೆಕ್ಸ್ ಎನ್ನುವ ಬದಲು ನಾವೂ ನಮ್ಮ ಕನ್ನಡದ ಐತಿಹ್ಯಗಳಲ್ಲಿ ಸಿಗುವಂತಹ ಕಥೆಗಳನ್ನು ಆಧರಿಸಿ ಹೆಸರಿಡಲು ಹೋದರೆ ಕುಮಾರ ಕಾಮ ಎನ್ನಬಹುದು. ಕುಮಾರ ರಾಮನ ಕಥೆಯಲ್ಲಿ ಅವನ ಮಲತಾಯಿಯು ಕುಮಾರ ರಾಮನನ್ನು ಕಾಮಿಸುತ್ತಾಳೆ. ಅದರಂತೆಯೇ ಅದರ ತದ್ರೂಪದ ಕತೆಯಂತಿರುವ ಸತ್ಯವಂತ ಸಾರಂಗಧರನದೂ ಇದೇ ಪ್ರಸಂಗವೇ.
ರಾಮನಗರದ ಕಡೆಗಿರುವ ಜಾನಪದ ಐತಿಹ್ಯ. ಕುಮಾರ ರಾಮನ ತಾಯಿಯಾಗಲಿ, ಅಥವಾ ಸಾರಂಗಧರನ ತಾಯಿಯಾಗಲಿ ಅವರವರ ಮಲತಾಯಿಯರು. ಮಲತಾಯಿಯಾದರೂ ಅವಳ ಪಾತ್ರ ತಾಯಿಯದು. ಹೆತ್ತ ತಾಯಿಯಷ್ಟು ನಿರ್ವಹಿಸಲು ಅಲ್ಲಿ ಅವಕಾಶವಿಲ್ಲವಾದರೂ, ಸಮಾಜದ ನಿರೀಕ್ಷೆ ಮತ್ತು ಅಪೇಕ್ಷೆ ತಾಯಿಯ ಪಾತ್ರವನ್ನು ನಿರ್ವಹಿಸುವುದು.
ಸಮಾಜದ ನಿರೀಕ್ಷೆ ಮತ್ತು ಅಪೇಕ್ಷೆಗಳನ್ನು ಪೂರೈಸಲು ಕೆಲವಷ್ಟು ಪಾತ್ರ ನಿರ್ವಹಣೆ ಮಾಡಲು ಸಾಧ್ಯವಿಲ್ಲದೇ ಹೋಗುವುದಕ್ಕೆ ಅವರದೇ ಆದಂತಹ ಕಾರಣಗಳಿರುತ್ತವೆ. ನಾವು ಬರಿಯ ಶಿಷ್ಟ ಚೌಕಟ್ಟಿನಲ್ಲಿ ಅಳೆದು ಬಸಿದು ಬಿಸಾಡಲಾಗದು. ಕುಮಾರ ರಾಮನ ಅಥವಾ ಸಾರಂಗಧರನ ಮಲತಾಯಿಯರಿಬ್ಬರೂ ವಯಸ್ಸಿನಲ್ಲಿ ಕಿರಿಯರೂ ಮತ್ತು ತಾವು ಮದುವೆಯಾದ ವ್ಯಕ್ತಿಯು ಒಂದು ಹಂತಕ್ಕೆ ವೃದ್ಧನೂ ಆಗಿದ್ದನು. ಜೊತೆಗೆ ಮನುಷ್ಯ ಸ್ವಾಭಾವಿಕವಾಗಿಯೇ ಹೆಚ್ಚೂ ಕಡಿಮೆ ತಮ್ಮದೇ ವಯಸ್ಸಿನ ಮಗನ ಜೊತೆಗೆ ಹಗ್ಗದ ಪ್ರೇಮದ ಕೊನೆಯಿಂದ ಕಾಮದ ಇನ್ನೊಂದು ಕೊನೆಗೆ ಬರುವುದು ವಿಚಿತ್ರವೋ ಅಥವಾ ಅಸಹಜವೋ ಅಲ್ಲ. ಆ ಅಂತರವನ್ನು ಕಾಪಾಡಿಕೊಳ್ಳುವುದು ಅವರ ತರಬೇತಿಯ ಅಥವಾ ರೂಢಿಯ ಸಾಮರ್ಥ್ಯವಷ್ಟೇ ಆಗಿರುತ್ತದೆ.
ಏನೇ ಆಗಲಿ, ಜೊಕಾಸ್ಟಾ ಕಾಂಪ್ಲೆಕ್ಸ್ ಅಥವಾ ಕುಮಾರ ಕಾಮವನ್ನು ಸಿಗ್ಮಂಡ್ ಫ್ರಾಯ್ಡ್ ನಾನಾ ರೀತಿಗಳಲ್ಲಿ ವಿವರಿಸಲು ಯತ್ನಿಸುತ್ತಾರೆ. ಮಗುವು ತಾಯಿಯ ಮೊಲೆ ಹಾಲು ಕುಡಿಯುವಾಗ ತಾಯಿಯು ಲೈಂಗಿಕಾನಂದವನ್ನು ಪಡೆಯುತ್ತಾಳೆ ಎಂದೂ ಹೇಳುತ್ತಾರೆ. ಆದರೆ ನಾನದನ್ನು ಬರಿಯ ಆನಂದಕ್ಕೆ ಸೀಮಿತಗೊಳಿಸಲು ಯತ್ನಿಸುತ್ತೇನೆ. ಫ್ರಾಯ್ಡ್ಅಂತೆ ಮೈಯನ್ನೆಲ್ಲಾ ಲಿಂಗಮಯಗೊಳಿಸಿಕೊಳ್ಳುವ ಬದಲು ಆನಂದಮಯಗೊಳಿಸಿಕೊಂಡರೆ ಸರಿ ಹೋಗುವುದು ಎಂಬುದು ನನ್ನ ಅಭಿಪ್ರಾಯ.
ಏಕೆಂದರೆ ಕಾಮ ಅಥವಾ ಆನಂದವೆನ್ನುವುದರ ಮೂಲ ಲಿಂಗ ಮಾತ್ರವಲ್ಲ. ಲಿಂಗವೂ ಕೂಡಾ ಕಾಮುಕತೆಯ ಏಕೈಕ ಮೂಲವಲ್ಲ. ಲಿಂಗದ ಹೊರತಾಗಿ ದೇಹದ ವಿವಿಧ ಭಾಗಗಳು ವಿವಿಧ ವ್ಯಕ್ತಿಗಳಿಗೆ ಲೈಂಗಿಕಾನಂದದ ಸರಕುಗಳೇ ಆಗಿರುತ್ತವೆ. ಅದು ಅವರವರ ಅಭಿರುಚಿ, ಆಸಕ್ತಿ, ಸಮಸ್ಯೆ, ಅರಿಮೆ; ಏನೋ ಒಂದು.
ಹಾಗೆಯೇ ಸಂಬಂಧಗಳಲ್ಲಿ ಬರಿಯ ಆನಂದದ ವಾಸನೆಯನ್ನು ಮಾತ್ರ ಬೆನ್ನತ್ತಿದರೆ ಆಗದು. ಬೇರೆ ಬೇರೆ ಆಯಾಮಗಳೂ ಕೂಡಾ ಸಂಬಂಧಗಳಲ್ಲಿ ಅನಾವರಣಗೊಳ್ಳುತ್ತಿರುತ್ತವೆ. ಕಾರಣಗಳು ಏನೇ ಇರಲಿ ಕಾಂಪ್ಲೆಕ್ಸುಗಳು ಮೂಲದಲ್ಲಿ ಕೆಲಸ ಮಾಡುತ್ತಿರುತ್ತವೆ.
ಬಹುಪತಿ ಪದ್ಧತಿ ಅಥವಾ ಪಾಲಿಯಂಡ್ರಿ
ಹಿಂದೆ ಮಾನವನ ಸಮುದಾಯದ ಬದುಕು ಬಾಲ್ಯಾವಸ್ಥೆಯಲ್ಲಿದ್ದಾಗ ಹೆಣ್ಣೇ ಗುಂಪಿನ ನಾಯಕಿ. ಆ ಹೆಣ್ಣನ್ನು ಇಂದಿನ ಪರಿಭಾಷೆಯಲ್ಲಿ ತಾಯಿ ಎನ್ನುತ್ತೇವೆ. ಅದನ್ನೇ ಉಪಯೋಗಿಸಿದರೆ ವಿಷಯ ಅರ್ಥ ಮಾಡಿಕೊಳ್ಳುವುದು ಸುಲಭ. ಆಗ ತಾಯಿಯು ತನ್ನ ಗುಂಪಿನಲ್ಲಿರುವ ಸಮರ್ಥನನ್ನು ತನ್ನೊಡನೆಯ ಸಂಭೋಗಕ್ಕೆ ಆಯ್ದುಕೊಳ್ಳುತ್ತಿದ್ದಳು. ಅದು ವಿವಾಹ ಪೂರ್ವ ಕಾಲದಲ್ಲಿ. ಸರಿ, ಮದುವೆಯ ವ್ಯವಸ್ಥೆಯು ತಲೆಯೆತ್ತಿದ ಮೇಲೂ ಒಂದು ಹೆಣ್ಣಿಗೆ ಹಲವು ಗಂಡುಗಳನ್ನು ಮದುವೆಯಾಗುವ ಅಧಿಕಾರವಿತ್ತು, ರೂಢಿಯೂ ಬಹಳ ಕಾಲ ಅಸ್ತಿತ್ವದಲ್ಲಿತ್ತು. ಅವಳು ವಿವಾಹಪೂರ್ವ ಕಾಲದಲ್ಲಿ ಗುಂಪಿನ ನಾಯಕಿಯಾಗಿದ್ದಂತೆ ಮದುವೆಯ ವ್ಯವಸ್ಥೆಯ ನಂತರವೂ ಮನೆಯ ಯಜಮಾನಿಯಾಗಿ ಮುಂದುವರಿದು ಸೂಕ್ತವಾದ ಶಿಷ್ಟ ಮಾರ್ಪಾಡುಗಳೊಡನೆ ಮಾತೃ ಪ್ರಧಾನ ಸಮಾಜವು ತಲೆ ಎತ್ತಿತ್ತು.
ಆದರೆ ಒಂದು ಹೆಣ್ಣು ವಿಧವೆಯಾದರೆ ತನ್ನ ಗಂಡನ ತಮ್ಮನನ್ನು ವೈದಿಕರೂ ಸೇರಿದಂತೆ ಹಲವಾರು ಬುಡಕಟ್ಟುಗಳಲ್ಲಿ ರೂಢಿಯಲ್ಲಿತ್ತು. ಇನ್ನೂ ಕೆಲವು ಬುಡಕಟ್ಟುಗಳಲ್ಲಿ ತನ್ನ ಹಿರಿಯ ಮಗನನ್ನು ಮದುವೆಯಾಗುವ ಪದ್ಧತಿಯೂ ನಮ್ಮ ಪ್ರಾಚೀನ ಭಾರತದಲ್ಲಿತ್ತು. ಅನೇಕ ಪುರುಷರನ್ನು ಒಬ್ಬಳು ಮದುವೆಯಾಗುವ ಪದ್ಧತಿಯಂತೂ ನಮ್ಮ ಪ್ರಾಚೀನ ಭಾರತಕ್ಕೆ ಏನೇನೂ ಪರಕೀಯವಾಗಿರಲಿಲ್ಲ. ದ್ರೌಪದಿಯು ಐವರು ಗಂಡಂದಿರ ಮದುವೆಯಾಗಿರುವುದು ಮಹಾಭಾರತದಲ್ಲಿರುವುದರಿಂದ ಅದು ಪ್ರಖ್ಯಾತ ದಾಖಲು. ದ್ರೌಪದಿ ಪಾತ್ರದ ಚಿತ್ರಣವೂ ಕೂಡಾ ಮಹಾಭಾರತದಲ್ಲಿ ಬಲವಾಗಿಯೇ ಇದೆ. ಐದೂ ಜನ ಗಂಡಂದಿರನ್ನು ಅವಳು ತನ್ನ ಅಂಕೆಯಲ್ಲಿಯೇ ಇಟ್ಟುಕೊಂಡಿದ್ದಳು.
ಗಟ್ಟಿತನದಿಂದಲೇ ಅವಳು ವ್ಯಕ್ತಿಗಳನ್ನೂ ಮತ್ತು ಸನ್ನಿವೇಶಗಳನ್ನು ನಿರ್ವಹಿಸುತ್ತಿದ್ದಳು. ಅವಳಲ್ಲಿ ಯಜಮಾನಿಕೆ ಇದೆ. ದ್ರೌಪದಿಯ ಊರು ಪಾಂಚಾಲ ಎಂದು ಹೆಸರಿಸುವುದು ಇಂದಿನ ಹಿಮಾಚಲ ಪ್ರದೇಶದ ಕಿನೌರ್ ಪ್ರಾಂತ್ಯದಲ್ಲಿ. ಉತ್ತರಖಂಡದ ಹಿಮಾಲಯದ ಕೆಳಗಣಿವೆಗಳ ಜೌನ್ಸರ್ ಬವರ್ ಪ್ರದೇಶದಲ್ಲಿ ಪಹಾರಿಗಳೆಂಬ ಜನಾಂಗವಿದೆ. ಅವರಲ್ಲಿಯೂ, ಹಾಗೆಯೇ ಅದರಂತೆಯೇ ದಕ್ಷಿಣ ಭಾರತಕ್ಕೆ ಬಂದರೆ ತೋಡಾ ಬುಡಕಟ್ಟಿನಲ್ಲಿಯೂ ಕೂಡಾ ಬಹುಪತಿ ಪದ್ಧತಿ ರೂಢಿಯಲ್ಲಿತ್ತು. ಹತ್ತೊಬತ್ತನೆಯ ಶತಮಾನದವರೆಗೂ ಕೇರಳದ ಹಲವಾರು ಜಾತಿಗಳಲ್ಲಿ ಇದು ರೂಢಿಯಲ್ಲಿತ್ತು.
1911ರ ಜನಗಣತಿಯಲ್ಲಿ ಇ ಎ ಗೈಟ್ ಟಿಬೇಟಿನಿಂದ ನಮ್ಮ ದಕ್ಷಿಣ ಭಾರತದ ಸಮುದ್ರದ ತುದಿಯವರೆಗೂ ಅನೇಕಾನೇಕ ಬುಡಕಟ್ಟುಗಳಲ್ಲಿ ಬಹುಪತಿ ಅಥವಾ ಪಾಲಿಯಂಡ್ರಿ ಪದ್ಧತಿಯನ್ನು ನಮೂದಿಸುತ್ತಾರೆ.
ಆಸ್ತಿಯ ಹಕ್ಕೂ ಕೂಡಾ ಅವಳಿಗೇ ಇತ್ತು. ಅದನ್ನು ಉಳಿಸಿಕೊಳ್ಳಲು ಮತ್ತು ಸಂಬಂಧವನ್ನೂ ಆಪ್ತಗೊಳಿಸಿಕೊಳ್ಳಲು ವಿವಾಹದ ಸಂಬಂಧಗಳನ್ನೂ ಬೆಳೆಸಿಕೊಳ್ಳುತ್ತಿದ್ದರು. ಹೆಣ್ಣು ತನ್ನ ತವರಿಗೇ ತನ್ನ ಮಗಳನ್ನು ಕೊಡುವುದು, ಅಂದರೆ ತನ್ನ ಸೋದರನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಂಡು ತವರಿನಾ ಬಾಂಧವ್ಯವನ್ನು ಉಳಿಸಿಕೊಳ್ಳುವ ಮೂಲದಲ್ಲಿ ಜೊಕಾಸ್ಟಾ ಕಾಂಪ್ಲೆಕ್ಸ್ ಹೊಗೆಯಾಡುತ್ತಿದೆ ಎಂದರೆ ಗಾಬರಿಯಾಗುವ ಅಗತ್ಯವೇನಿಲ್ಲ.
ವರಸೆ ಇದೆ.
ನನ್ನ ಗೆಳೆಯನೊಬ್ಬನಿಗೆ ಅವನ ಅಕ್ಕ ತನ್ನ ಮಗಳನ್ನು ಕೊಡಲು ಎಷ್ಟೋ ಪರಿಪಾಟಲು ಪಟ್ಟಳು. ಅವನು ಬಲವಾಗಿ ನಿರಾಕರಿಸುತ್ತಿದ್ದ. “ನನಗೆ ಅಕ್ಕನಾದ ನೀನೂ ಕೂಡಾ ತಾಯಂತೆ. ನಿನ್ನ ಮಗಳೂ ಅದೇ ರಕ್ತದವಳು. ಅವಳನ್ನು ನನಗೆ ಹೆಂಡತಿಯಾಗಿ ಒಪ್ಪಲು ಸಾಧ್ಯವೇ ಇಲ್ಲ. ಅವಳು ನನಗೆ ತಂಗಿಯ ಸಂಬಂಧದಂತೆಯೇ ತೋರುತ್ತಾಳೆ” ಎಂಬುದು ಅವನ ಭಾವ.
“ಹಾಗೆಲ್ಲ ಅಂದುಕೊಳ್ಳಬೇಡ. ನಿಮ್ಮಿಬ್ಬರಿಗೂ ವರಸೆ ಇದೆ” ಎಂದು ಅವನ ಅಕ್ಕ ಅವನಿಗೆ ಮನವೊಲಿಸಲು ಪ್ರಯತ್ನಿಸುತ್ತಿದ್ದಳು. ಅದಕ್ಕೆ ಅವನು ಕೊಟ್ಟ ಉತ್ತರ, “ನೀವು ಹೇಳುತ್ತಿರುವ ವರಸೆ ಕೂಡಾ ಅಂದುಕೊಳ್ಳುವುದು ತಾನೇ? ನಿಮಗೆ ಅನುಕೂಲವಾಗುವಂತೆ ನೀವು ಅಂದುಕೊಳ್ಳಿ. ನನ್ನ ಮನೋಭಾವಕ್ಕೆ ತೋರುವಂತೆ ನಾನು ಅಂದುಕೊಳ್ಳುತ್ತೇನೆ.
ಒಟ್ಟಿನಲ್ಲಿ ಸಂಬಂಧಗಳು ಅನ್ನೋದೇ ಅಂದುಕೊಳ್ಳೋದು. ಬಿಡಿ” ಎಂದ. ಅವನ ಅಕ್ಕನ ಮಗಳ ಜೊತೆ ಅವನ ಮದುವೆಯಾಗಲಿಲ್ಲ.ವೈದ್ಯಕೀಯವಾಗಿ ರಕ್ತಸಂಬಂಧದಲ್ಲಿ ಮದುವೆಯಾಗುವುದು ಅಷ್ಟೇನೂ ಒಳಿತಲ್ಲದ ಕಾರಣದಿಂದ ಅವನ ನಿರ್ಧಾರವೂ ಒಳ್ಳೆಯದೇ. ಏನೇ ಆಗಲಿ, ಸಂಬಂಧಗಳು ಅನ್ನೋದು ನಾವು ನಾವು ಅಂದುಕೊಳ್ಳೋದು ಅಷ್ಟೇ! ನೈಸರ್ಗಿಕವಾಗಿ ಏನಿದೆ? ನಿಸರ್ಗದ ಸ್ವಾಭಾವಿಕ ವಾಸನೆಗಳ ಪಳೆಯುಳಿಕೆಗಳೇ ಈ ಅರಿಮೆಗಳು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243