ಅಂತರಂಗ
ಅರಿಮೆಯ ಅರಿವಿರಲಿ-11: ಆತ್ಮವೈಭವ
- ಯೋಗೇಶ್ ಮಾಸ್ಟರ್
ಆತ್ಮರತಿ ಅಥವಾ Narcissistic Personality ಒಮ್ಮೆ ಹೊಕ್ಕಿಕೊಂಡಿತೆಂದರೆ ಅದರಿಂದ ಬಿಡುಗಡೆ ಇಲ್ಲ ಅಂತೇನಿಲ್ಲ. ಇದು ಅನುವಂಶೀಯವಾದ ಸಮಸ್ಯೆಯೇನಲ್ಲ. ಜೊತೆಗೆ ಇದು ಸಾಂಕ್ರಾಮಿಕವೂ ಅಲ್ಲ. ಮನೋರೋಗಗಳಲ್ಲಿ ಕೆಲವು ಸಾಂಕ್ರಾಮಿಕವಾಗುವುದಿವೆ. ಒಬ್ಬರ ವರ್ತನೆ ಮತ್ತು ನಡವಳಿಕೆ ಅಥವಾ ಬಲವಾದ ಪ್ರಭಾವಗಳು ಇನ್ನೊಬ್ಬರಿಗೂ ಅಂತಹ ವರ್ತನೆಯನ್ನು ಪ್ರೇರೇಪಿಸುವಂತಹ ಸೋಂಕು ಇರುತ್ತದೆ. ಒಬ್ಬ ದುರ್ಬಲ ಮನಸ್ಕನು ತನಗಾಗಿರುವ ಭಯ ಅಥವಾ ಇನ್ನಿತರ ನಕಾರಾತ್ಮಕ ಭಾವವನ್ನು ಪದೇಪದೇ ವ್ಯಕ್ತಪಡಿಸುತ್ತಾ ಇನ್ನೊಬ್ಬ ದುರ್ಬಲ ಮನಸ್ಕನಿಗೆ ಅದನ್ನು ಸೋಂಕಿಸಬಹುದು.
ಇದು ಆ ಬಗೆಯದೂ ಅಲ್ಲ. ನಿಜ ಹೇಳಬೇಕೆಂದರೆ ನಾರ್ಸಿಸಂ ಅಥವಾ ಆತ್ಮರತಿಯರಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಅದು ಎಷ್ಟಿರಬೇಕೋ ಅಷ್ಟೇ ಇದ್ದರೆ ಆರೋಗ್ಯಕರ ಮನಸ್ಥಿತಿ ಎಂದೂ, ಮಿತಿಮೀರಿದರೆ ಅನಾರೋಗ್ಯಕರ ಮನಸ್ಥಿತಿ ಎಂದೂ ತಿಳಿಯಬೇಕು. ಒಬ್ಬ ವ್ಯಕ್ತಿಯ ಸಾಧಾರಣ ಬೆಳವಣಿಗೆಗೆ ಆತ್ಮರತಿಯೆಂಬುದು ಬಹಳ ಸಾಮಾನ್ಯವೂ, ಕೆಲವೊಮ್ಮೆ ಅಗತ್ಯವೂ ಆಗಿರುತ್ತದೆ, ಹಸ್ತಮೈಥುನದಂತೆ.
ಸಿಗ್ಮಂಡ್ ಫ್ರಾಯ್ಡ್ ಆತ್ಮರತಿಗೆ ಕೊಡುವ ಒಂದು ಸಾಧಾರಣ ಉದಾಹರಣೆ ಏನೆಂದರೆ, “ಗಂಡ ಹೆಂಡತಿ ಮಗುವನ್ನು ಹೆರುವುದು,” ತಮ್ಮ ತದ್ರೂಪುಗಳನ್ನು ರೂಪಿಸುವುದು ಅಥವಾ ವಂಶ ಮುಂದುವರಿಸುವುದೂ ಕೂಡಾ ಆತ್ಮರತಿಯೇ. ಇರಬಹುದು. ಅರಿವಿಗೆಟುಕದ ಅನೇಕ ಅರಿಮೆಗಳು ನಮ್ಮಲ್ಲಿ ಅಂತರ್ಗತವಾಗಿರುತ್ತವೆ. ಹಾಗಿರುವಾಗ, ಅಯ್ಯೋ ನನಗೆ ಇಂತದ್ದೊಂದು ಅರಿಮೆ ಇದೆ, ಕಾಂಪ್ಲೆಕ್ಸ್ ಕಾಡುತ್ತಿದೆ ಎಂದು ರೋಗಗ್ರಸ್ತ ಮನೋಭಾವವನ್ನು ಹೊಂದುವ ಬದಲು, ‘ಇದಕ್ಕೆ ಈ ಹೆಸರಿನಿಂದ ಕರೆಯುತ್ತಾರೆ’ ಎಂಬು ತಿಳುವಳಿಕೆಯನ್ನು ಹೊಂದುವುದು ಮತ್ತು ಮಿತಿ ಮೀರಲು ಹಾತೊರೆವ ಅರಿಮೆಯನ್ನು ಅರಿವಿನಿಂದ ಅಂಕೆಯಲ್ಲಿಡುವುದು ಜಾಣನಾದವನ ಲಕ್ಷಣ.
ನಾನು ಸರ್ವಶಕ್ತ ಸರ್ವಾಂತರ್ಯಾಮಿ
ಮನುಷ್ಯನಿಗೆ ಮಗುವಾಗಿರುವಾಗಲೇ ತನ್ನ ದೃಷ್ಟಿಯ ಮಿತಿಯಲ್ಲಿರುವ ಇಲ್ಲದಿರುವ ಬೇಕಿರುವ ಬೇಡದಿರುವ ಎಲ್ಲದರ ಮೇಲೆ ತನ್ನ ಒಡೆತನ ಅಥವಾ ಯಜಮಾನಿಕೆ ಅಥವಾ ಅಧಿಕಾರ ಇರಬೇಕೆಂದೂ ಆಸೆ ಇರುತ್ತದೆ.ತಾನೊಬ್ಬ ಸರ್ವಶಕ್ತ ಮತ್ತು ಸರ್ವಾಂತರ್ಯಾಮಿಯಾಗಿರಬೇಕೆಂಬ ಆತ್ಮವೈಭವದ ಪರಿಕಲ್ಪನೆ ಇರುತ್ತದೆ. ಮಗುವಿಗೆ ಆಲೋಚನೆಗಳು ಮೂಡತೊಡಗುವ ವಯಸ್ಸಿನಲ್ಲಿಯೇ, ತನ್ನ ಸುತ್ತಲ ವಿಷಯವಸ್ತುಗಳನ್ನು ಗುರುತಿಸುವಷ್ಟಾಗುತ್ತಿದ್ದಂತೆ, ಅದರಲ್ಲಿಯೂ ತನಗೆ ಯಾವುದರಿಂದ ಆನಂದ ಮತ್ತು ಸುಖ ಸಿಗುತ್ತದೆ ಎಂಬ ಅರಿವಾಗುತ್ತಿದ್ದಂತೆಯೇ ಮನಸ್ಸಿನಲ್ಲಿ ಕನಸುಗಳು ಗರಿಗೆದರತೊಡಗುತ್ತದೆ.
ಅವರ ಏಕಾಂತಗಳಲ್ಲಿ, ಒಬ್ಬರೇ ಆಡಿಕೊಳ್ಳುವ, ತಮ್ಮೊಂದಿಗೆ ತಾವೇ ಇರುವಂತಹ ಎಲ್ಲಾ ಅವಕಾಶಗಳಲ್ಲಿ ಅವರು ಕನವರಿಸುವುದು ತಮ್ಮ ಆತ್ಮವೈಭವವನ್ನೇ. ಇದನ್ನು ಮನಶಾಸ್ತ್ರದಲ್ಲಿ ಮೆಗಲೋಮೇನಿಯಾಕ್ ಆಮ್ನಿಪೇಟೆನ್ಸ್ ಆಲೋಚನೆಗಳು ಎನ್ನುತ್ತಾರೆ. ಸಾಲದಕ್ಕೆ ಕೆಲವು ಪೋಷಕರು, ಕೆಲವು ಶಿಕ್ಷಕರು, ಮಗುವನ್ನು ಪ್ರೀತಿಸುವವರು ಈ ಆಲೋಚನೆಗಳಿಗೆ, ಅವರು ಕನವರಿಸುವ ಕನಸುಗಳಿಗೆ ಕಸುವು ನೀಡುವಂತೆ ಪ್ರೇರಣೆಗಳನ್ನು ನೀಡುತ್ತಾರೆ.
ಪ್ರೋತ್ಸಾಹಿಸುತ್ತಾರೆ. ಕೆಲವು ಪೋಷಕರಂತೂ ತಾವೆಂದಿಗೂ ಸೇರಲಾಗದ ಗುರಿಯ ದಾರಿಯನ್ನು ಅವರ ಕಡೆಗೆ ತಿರುಗಿಸಿಬಿಡುತ್ತಾರೆ. ಮಕ್ಕಳಲ್ಲಿ ಅರಿಮೆಗಳನ್ನು ಬಲಗೊಳಿಸುವುದು ಸಾಮಾನ್ಯವಾಗಿ ಕುಟುಂಬವೇ. ಮಕ್ಕಳಲ್ಲಿರುವ ಮೌಲ್ಯವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅತ್ಯುತ್ಪ್ರೇಕ್ಷೆಯಿಂದ ವರ್ಣಿಸುವುದು. ಹೊಗಳುವುದು. ನಮ್ಮ ಮಗು ಬಿಟ್ಟಾರೆ ಈ ಜಗತ್ತಿನಲ್ಲಿ ಇಂತಹ ಮಕ್ಕಳೇ ಇಲ್ಲ ಎನ್ನುವಂತೆ ಕೊಂಡಾಡುವುದು; ಇವೆಲ್ಲಾ ಸಹಜವಾಗಿಯೇ ಮಕ್ಕಳಲ್ಲಿ ಇರುವ ಆತ್ಮವೈಭವವನ್ನು ಆತ್ಮರತಿಯ ಸಮಸ್ಯೆಯನ್ನಾಗಿ ಪರಿವರ್ತಿಸುತ್ತದೆ. ಒಂದು ವೇಳೆ ಪೋಷಕರು ಅಥವಾ ಮನೆಯವರು ಅಥವಾ ಸಾಮಾಜಿಕ ಪರಿಸರದಲ್ಲಿರುವವರು ಮಗುವಿಗೆ ಉಬ್ಬಿಸುವ ಬದಲು ಕುಗ್ಗಿಸಿದರೆ, ಮಕ್ಕಳು ಕೀಳರಿಮೆಯಲ್ಲಿ ಬಳಲುತ್ತಾರೆ.
ವಿರೂಪದರಿಮೆ
ಆತ್ಮರತಿಗೆ ವಿರುದ್ಧವಾದಂತಹ ಇನ್ನೊಂದು ಸಮಸ್ಯೆ ಇದೆ, ಅದು ವಿರೂಪದರಿಮೆಯ ಸಮಸ್ಯೆ Body dysmorphic disorder (BDD. ಇವರ ಸಮಸ್ಯೆ ಏನೆಂದರೆ, ತಮ್ಮ ಮುಖದಲ್ಲಿ, ದೇಹದಲ್ಲಿ, ನಡೆಯಲ್ಲಿ, ನಿಲುವಲ್ಲಿ, ಭಂಗಿಯಲ್ಲಿ; ಎಲ್ಲದರಲ್ಲೂ ಏನೋ ಒಂದು ಸಮಸ್ಯೆ ಇದೆ ಎಂದು ಕೊರಗುತ್ತಿರುತ್ತಾರೆ. ತಾನು ಚೆನ್ನಾಗಿಲ್ಲ. ಇತರರು ಇದ್ದಂತೆ ತಾನು ಸುರೂಪವಾಗಿಲ್ಲ. ನನ್ನ ಮೂಗು ವಕ್ರ, ಕೆನ್ನೆ ಚಪ್ಪೆ, ಮೂತಿ ಉದ್ದ, ಹಲ್ಲು ವಕ್ರ, ಮುಖದಲ್ಲಿ ಲಕ್ಷಣವಿಲ್ಲ; ಹೀಗೆ, ಒಂದಲ್ಲಾ ಒಂದು ವಿರೂಪವನ್ನು ತಮ್ಮಲ್ಲಿ ಗುರುತಿಸಿಕೊಂಡು ಕೀಳರಿಮೆಯಲ್ಲಿ ಬಳಲುತ್ತಿರುತ್ತಾರೆ. ತಾವು ಕಪ್ಪು ಎಂಬ ಅರಿಮೆ, ತಲೆಯಲ್ಲಿ ಕೂದಲಿಲ್ಲ ಎಂಬ ಕೊರಗು; ತಾನು ಸಣ್ಣಗಿದ್ದೇನೆ ಅಥವಾ ದಪ್ಪಗಿದ್ದೇನೆ; ಯಾವುದಾದರೂ ಅವರ ತಲೆಯಲ್ಲಿ ಕೂತಿರುತ್ತದೆ. ಹಲ್ಲು ಉಬ್ಬಿದೆ ಎಂದು ಮನಸೋಯಿಚ್ಚೆ ನಗಲಾರರು. ಹಲ್ಲು ಕಂಡವರು ಆಡಿಕೊಳ್ಳುತ್ತಾರೆ, ಅಪಹಾಸ್ಯ ಮಾಡುತ್ತಾರೆ ಎಂಬ ಹಿಂಜರಿಕೆ ಅವರಿಗೆ.
ಸಾಲದಕ್ಕೆ ನಮ್ಮ ಸಮಾಜವೂ ಸೌಂದರ್ಯವೆಂದರೆ ಹೀಗೆ ಎಂಬ ಮಾನದಂಡಗಳನ್ನು ಬೇರೆ ಇಟ್ಟಿದೆಯಲ್ಲಾ. ಹುಡುಗಿ ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು. “ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ, ನಾಸಿಕವು ಸಂಪಿಗೆಯಂತೆ, ನೀ ನಗಲು ಹೂಬಿರಿದಂತೆ,” ಎಂದು ಸೌಂದರ್ಯಕ್ಕೊಂದು ಮಾನದಂಡವಿಟ್ಟು, ಆ ಸುರೂಪದ ಮಾನದಂಡದ ವ್ಯಾಪ್ತಿಯಲ್ಲಿ ಬರದೇ ಇರುವವರು ತಮ್ಮನ್ನು ಕುರೂಪವೆಂದೋ, ವಿರೂಪವೆಂದೋ ಅಂದುಕೊಳ್ಳಬೇಕು ತಾನೆ? ಕತೆ, ಕಾವ್ಯ ಮತ್ತು ಕಾದಂಬರಿಗಳಂತಹ ಸಾಹಿತ್ಯ, ಸಂಗೀತ, ಸಿನಿಮಾಗಳು ಸಾಕಷ್ಟು ಪ್ರಮಾಣದಲ್ಲಿ ಅರಿಮೆಗಳನ್ನು ಗಟ್ಟಿಗೊಳಿಸುವ ಕಾಣ್ಕೆಗಳನ್ನು ನೀಡುತ್ತವೆ.
ಸುಮ್ಮನೆ ಆಗಲೋ ಈಗಲೋ ಗಮನಿಸಿ, ಬೆಳ್ಳಗಿದ್ದಾನೆಂದೋ, ದಷ್ಟಪುಷ್ಟವಾಗಿದ್ದಾನೆಂದೋ, ಎತ್ತರಕ್ಕಿದ್ದಾನೆಂದೋ, ಅಥವಾ ಇವೆಲ್ಲವೂ ಇದೆಯೆಂದೋ ಆತನಿಗೆ “ನೀನು ಹೀರೋ, ಒಳ್ಳೆ ಹೀರೋ ಇದ್ದಂಗಿದ್ದೀಯ. ಯಾಕೆ ಸಿನಿಮಾಗೆ ಪ್ರಯತ್ನ ಮಾಡಬಾರದು” ಎಂದೇ ಹೇಳುತ್ತಾರೆ.
ಅವರೇನೂ ಸುಮ್ಮನೆ ಹೇಳುತ್ತಿಲ್ಲ. ಅವರಲ್ಲಿ ಒಂದು ಸ್ವಂತ ಆಲೋಚನೆಯೊಂದು ಹುಟ್ಟಿ ಅದಕ್ಕೆ ಸರಿಯಾಗಿ ಅವರು ಮಾತಾಡುತ್ತಿಲ್ಲ. ಸಾಮಾನ್ಯವಾಗಿ ಸಮಾಜದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯವನ್ನು ತಮ್ಮದಾಗಿಸಿಕೊಂಡು ಅಭಿವ್ಯಕ್ತಪಡಿಸುತ್ತಿರುತ್ತಾರೆ.
ಅರಿಮೆಗಳ ಬಂಡವಾಳ ಮತ್ತು ವ್ಯಾಪಾರ
ಈ ಅರಿಮೆಗಳು ಎಷ್ಟೋ ಜನಕ್ಕೆ ಬಂಡವಾಳ. ಫೇರ್ ಆಗಿ, ಲವ್ಲೀ ಆಗಿ ಕಾಣಿರಿ ಎಂದು ಫೇರ್ನೆಸ್ ಕ್ರೀಂಗೆ ಬಂಡವಾಳ ಹಾಕಿದವರಿಗೆ ಲಾಭವಾಗುತ್ತಿರುವುದು ಯಾವ ಅರಿಮೆಯಿಂದ? ನಾವು ಧಾರ್ಮಿಕ ಮೌಢ್ಯಗಳನ್ನು ಧಿಕ್ಕರಿಸುತ್ತಾ ಬಂಡವಾಳದಾರರು ಪೋಷಿಸುವ ಮೌಢ್ಯಗಳನ್ನು ಗಮನಿಸುವಲ್ಲಿ ಹಿಂದುಳಿದುಬಿಡುತ್ತೇವೆ. ಹದಿನೈದು ದಿನಗಳ ಮುಖದ ಕಾಂತಿ ಇಂತಿರುವುದು ಅಂತಾಗಿಬಿಡುತ್ತದೆ ಎಂಬ ಬಣ್ಣದ ಮಾಪನದ ಪಟ್ಟಿಯನ್ನು ಹೊಂದಿರುವ ಮುಖಕಾಂತಿಯ ಕ್ರೀಮನ್ನು ವರ್ಷಾನು ವರ್ಷಗಟ್ಟಲೆ ಬಳಸುತ್ತಲೇ ಇದ್ದರೂ ‘ಈ ಕ್ರೀಮಿನವರು ಸುಳ್ಳುಗಾರ. ಈ ಕ್ರಿಮಿಂದ ನನಗೆ ಯಾವ ಮುಖಕಾಂತಿಯೂ ಬಂದಿಲ್ಲ’ ಎಂದು ಧಿಕ್ಕರಿಸದೇ ಇರುವಷ್ಟು ಕ್ರೀಮಿನ ವ್ಯಸನವು ಅಂಟಿರುತ್ತದೆ.
ಬಂಡವಾಳದಾರನಿಗೆ ನಾವು ವ್ಯಸನಕ್ಕಂಟುವುದೇ ಬೇಕಾಗಿರುವುದು. ಇಂದು ಸಮಸ್ಯೆ ಇದೆ ಎಂದು ಕೊಂಡು ನಾಳೆ ವಾಸಿಯಾದ ಮೇಲೆ ಬೇಡದೇ ಸುಮ್ಮನಾಗಿಬಿಡುವಂತಹ ಯಾವುದೋ ರೋಗದ ಔಷಧಿಯಲ್ಲ ಇದು. ಅರಿಮೆಯ ವ್ಯಸನ ಹೋಗದು, ಪರಿಹಾರ ಲಭಿಸದು ಎಂಬ ನಂಬಿಕೆ ಅವರದು.
ಬಂಡವಾಳದಾರರು ಅದೆಷ್ಟು ಅರಿಮೆಯನ್ನು ಗಟ್ಟಿಗೊಳಿಸುತ್ತಾರೆಂದರೆ, ನೀವು ಹಾಡುವ ಸಾಮರ್ಥ್ಯಕ್ಕೂ, ಅದಕ್ಕೆ ಬೇಕಾದ ಆತ್ಮವಿಶ್ವಾಸಕ್ಕೂ ನಿಮ್ಮ ಕಪ್ಪುತ್ವಚೆಯನ್ನು ತಗುಲಿಹಾಕುತ್ತಾರೆ. ಗೌರವವರ್ಣಕ್ಕೆ ನೀವು ತಿರುಗಿದ ಮೇಲೆ ಆತ್ಮವಿಶ್ವಾಸದಿಂದ ಹಾಡುತ್ತೀರಿ ಎನ್ನುತ್ತಾರೆ. ಅದನ್ನು ಒಪ್ಪಿ ಆ ವಸ್ತುಗಳನ್ನು ಕೊಳ್ಳುತ್ತಾರೆ. ಸಣ್ಣಗಿರುವವರಿಗೆ ದಪ್ಪಗಾಗಲು, ದಪ್ಪಗಿರುವವರಿಗೆ ಸಣ್ಣಗಾಗಲು, ಕುಳ್ಳಗಿರುವವರಿಗೆ ಉದ್ದವಾಗಲು, ತಲೆಯಲ್ಲಿ ಕಡಿಮೆ ಕೂದಲಿರುವವರಿಗೆ ಉದ್ದ ಕೂದಲು ಬರಲು; ಅಷ್ಟೇಕೆ ಮೊಲೆಗಳ ಗಾತ್ರವನ್ನು ಹೆಚ್ಚಿಸಲು, ನಿಮ್ಮ ಶಿಶ್ನವು ಚಿಕ್ಕದಾಗಿದ್ದರೆ ಅದನ್ನು ಉದ್ದ ಮಾಡಲು. ನಿಮ್ಮ ಸಂಭೋಗದ ಸಮಯವನ್ನು ರಾತ್ರಿಯಿಡೀ ಹಿಗ್ಗಿಸಲು; ಹೀಗೆ ಅರಿಮೆಗಳು ವ್ಯಾಪಾರಕ್ಕೆ ಬಂಡವಾಳಗಳೂ ಕೂಡಾ.
ಮೊಲೆಗಳು ಚಿಕ್ಕದಿರಲಿ, ದೊಡ್ಡದಿರಲಿ, ಅವುಗಳು ಆರೋಗ್ಯವಾಗಿದ್ದರೆ ಸಾಲದೇ? ಶಿಶ್ನವು ಉದ್ದಕ್ಕಿರಲಿ, ಸಣ್ಣಕ್ಕಿರಲಿ; ಆರೋಗ್ಯವಾಗಿ ಅದು ಮಾಡುವ ಕೆಲಸ ಮಾಡಿದರಾಗದೇ? ಹೋಗಲಿ ಅದು ಅತ್ಯಂತ ಆಕರ್ಷಕವಾಗಿದ್ದರೂ, ಇಲ್ಲದಿದ್ದರೂ ಏನು? ಅದೇನು ಮುಖದಲ್ಲಿ ಮೂಗಿರುವ ಜಾಗದಲ್ಲಿದೆಯೇ ವಡವೆಯೊಂದರಿಂದ ಅಲಂಕರಿಸಿಕೊಂಡು ಮೆರವಣಿಗೆ ಹೋಗಲು? ಆದರೆ ಅರಿಮೆಯ ಪ್ರಭಾವವೇ ಅಂತಹದ್ದು. ಆತ್ಮರತಿಯೇ ಮೊದಲಾದ ಅರಿಮೆ ಎಂಬುದು ಮನುಷ್ಯನ ಪ್ರದರ್ಶನದ ಆಯಾಮಗಳಲ್ಲಿ ಮಾತ್ರವಲ್ಲ ಗುಪ್ತನೆಲೆಗಳಲ್ಲಿ, ಒಳಗಿನ ನೆರಳುಗಳಲ್ಲೂ ಒಳಗೊಳಗೇ ಕಾಡುತ್ತಿರುತ್ತವೆ.
ಶಿಶ್ನದ ಗಾತ್ರವೇ ಮೊದಲಾದ ಲೈಂಗಿಕತೆಯ ಕೀಳರಿಮೆಗಳಿಂದ ಬಹಳಲುವ ಜನರ ಅದೆಷ್ಟು ಸಾಮರ್ಥ್ಯ ಮತ್ತು ಪ್ರತಿಭೆಗಳು ಹಾಗೆಯೇ ಸೊರಗಿ ಹೋಗಿವೆಯೋ ಕಂಡವರಾರು? ಲೆಕ್ಕವಿಟ್ಟವರಾರು? ಮೊದಲು ಇವನ್ನು ರೂಪಿಸಿದವರು ಯಾರು? ಯಾರಾದರಾಗಲಿ, ಹೇಗಾದರಾಗಲಿ; ಇಂತಹ ಸೋಂಕುಗಳಿಂದ ನಾವು ನಮ್ಮನ್ನೂ ರಕ್ಷಿಸಿಕೊಳ್ಳಬೇಕು, ಸಮಾಜವನ್ನೂ ರಕ್ಷಿಸಬೇಕು. ಖಂಡಿತವಾಗಿ ಅದು ಪ್ರಾರಂಭವಾಗಬೇಕಾಗಿರುವುದು ‘ನನ್ನಿಂದಲೇ’.
ಅಭಿಪ್ರಾಯಗಳೂ ಕೂಡಾ ಸೋಂಕುಗಳಂತೆ ವರ್ತಿಸುತ್ತಾ ಅರಿಮೆಗಳಿಗೆ ಕಾರಣವಾಗುತ್ತದೆ.
ವಿರೂಪದ ಅರಿಮೆಯು ತನ್ನ ಮೌಲ್ಯವನ್ನು ತಾನೇ ಗ್ರಹಿಸುವುದಕ್ಕೆ ಬಿಡುವುದಿಲ್ಲ. ತನಗಿರುವ ಸಾಮರ್ಥ್ಯದ ಸಾಧ್ಯತೆಗಳನ್ನು ಹುಡುಕಿಕೊಳ್ಳಲು ಬಿಡುವುದಿಲ್ಲ. ನನ್ನಂತವರಿಗೆ ಯಾರು ಹೆಣ್ಣು ಕೊಡ್ತಾರೆ? ನನ್ನ ಮುಖಕ್ಕೆ ಯಾರು ಕೆಲಸ ಕೊಡ್ತಾರೆ? ನನ್ನ ಯಾರೂ ಮೂಸುವವರಿಲ್ಲ? ಇವುಗಳ ಅವರ ಸಾಧಾರಣ ಮಾತುಗಳು.
ಮಹಾತ್ಮನ ಆತ್ಮ
ನಾನು ಅಂದರೆ ಯಾರು? ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡ್ತೇನೆ. ನನ್ನ ಮಾತೇ ನಡೆಯಬೇಕು ಎಂಬ ಅಹಂಕಾರದ ಆತ್ಮರತಿಯಂತೆ, ಇನ್ನೊಂದು ವಿನಯಶೀಲ, ಮಾನವೀಯ ಆತ್ಮರತಿಯೂ ಕೂಡಾ ಅಸ್ತಿತ್ವದಲ್ಲಿದೆ. ನಾನಲ್ಲದೇ ಇನ್ಯಾರು ನೋಡಬೇಕು? ನಾವೇ ಕಾಪಾಡಬೇಕು. ಅವರು ಏನೇ ಹೇಳಲಿ, ನಾನು ಸಮಾಧಾನವಾಗಿದ್ದು ಸನ್ನಿವೇಶವನ್ನು ನಿಯಂತ್ರಿಸಬೇಕು. ಅವನಿಗೆ ಗೊತ್ತಾಗಲ್ಲ ಅಂದರೆ ನನಗೆ ಗೊತ್ತಾಗಲ್ವಾ? ಇದೂ ಕೂಡಾ ಆತ್ಮರತಿಯೇ.
ಆದರೆ ಆಗ್ರಹಪೂರ್ವಕವಾಗಿರುವುದಿಲ್ಲ. ಆವೇಶಭರಿತವಾಗಿರುವುದಿಲ್ಲ. ಈ ಬಗೆಯ ಮೃದುವಾದ ಮತ್ತು ವಿನಯಶೀಲವಾದ ಆತ್ಮರತಿಯ ಮದನರು ಮಹಾತ್ಮರಾಗುತ್ತಾರೆ. ಜನರೂ ಮತ್ತು ಸಮಾಜವೂ ಅವರು ಪ್ರದರ್ಶಿಸುತ್ತಿರುವ ಪ್ರೇಮ, ಪ್ರೀತಿ, ಕಳಕಳಿ ಮತ್ತು ಸೇವೆಗಳನ್ನು ನೋಡುತ್ತಾ, ಅದರಲ್ಲೂ ತಾವು ಹಿಂಜರಿಯುವ ಕ್ಷೇತ್ರಗಳಲ್ಲಿ ಅಸಹ್ಯ ಪಡದೇ, ಧೈರ್ಯವಾಗಿ ಸೇವೆಗಳನ್ನು ಮಾಡುವ ಈ ಮೃದು ಆತ್ಮರತಿಯವರು ಸ್ತುತಿಗೆ ಅರ್ಹವಾಗುತ್ತಾರೆ.
ಪರೋಪಕಾರಾರ್ಥೇಮಿದಂ ಶರೀರಂ ಎಂದು ನಸುನಗುತ್ತಾ ಅವರಿವರಿಗೆ ಸೇವೆ ಸಲ್ಲಿಸುತ್ತಾ, ಬಡವರನ್ನು ಹುಡುಕಿ, ಅನಾಥಾಲಯಗಳನ್ನು ಹೊಕ್ಕು ತಮ್ಮ ಆ ಒಂದು ದಿನದ ಸೇವೆಯನ್ನು ಶಾಶ್ವತ ಫೋಟೋ ಫ್ರೇಮಿನಲ್ಲಿ ಬಂಧಿಸಿ, ಫೇಸ್ಬುಕ್ ವಾಟ್ಸಪ್ಪುಗಳಲ್ಲಿ ಪ್ರಚಾರಪಡಿಸುವ ಆತ್ಮರತಿಯೂ ಕೂಡಾ ನಾರ್ಸಿಸಮ್ ಅರಿಮೆಯ ಭಾಗವೇ.
ಈ ವಿವಿಧ ಬಗೆಯ ಆತ್ಮರತಿಗಳನ್ನು, ಅಹಂಕಾರಗಳನ್ನು, ಆತ್ಮಕೇಂದ್ರಿತ ಆಲೋಚನೆಗಳನ್ನು ತಿಳಿದುಕೊಂಡರೆ ಒಬ್ಬ ಯಾವುದರಲ್ಲೇ ಬಂಧಿತನಾಗಿದ್ದರೆ ಅದರಿಂದ ಮುಕ್ತನಾಗಬಹುದು. ತಿಳಿದುಕೊಳ್ಳೋಣ ಮುಂದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243