ಅಂತರಂಗ
ಅರಿಮೆಯ ಅರಿವಿರಲಿ-12 : ಶವಮುಖದ ಶೃಂಗಾರ
- ಯೋಗೇಶ್ ಮಾಸ್ಟರ್
ಆತ್ಮರತಿಯು ಪ್ರೇಮವನ್ನು ಕೊಲ್ಲುತ್ತದೆ.ಆತ್ಮರತಿಯ ಆಳವಾದ ಅರಿಮೆಯ ಪ್ರಬಲವಾದ ಪ್ರಕಟಣೆಯೇ ಅಹಂಕಾರ. ನಮಗೆ ಸವಾಲೊಡ್ಡುವ ಒಬ್ಬನ ಅಹಂಕಾರವನ್ನು ಗುರುತಿಸುವ ಭರಾಟೆಯಲ್ಲಿ ನಮ್ಮ ಆತ್ಮರತಿಯ ಅರಿಮೆಯು ಹೊಂದಿರುವ ಉತ್ಕಟವಾದ ಇಚ್ಛೆಯು ನಮ್ಮ ಅಹಂಕಾರವನ್ನು ಝಳಪಿಸುತ್ತದೆ. ಎರಡು ಅಹಂಕಾರಗಳ ಖಡ್ಗಗಳ ಕಾಳಗದಲ್ಲಿ ಪ್ರೇಮ ಸಾಯುತ್ತದೆ. ವಾತ್ಸಲ್ಯ ಸಾಯುತ್ತದೆ. ಸೌಹಾರ್ಧ ಧೂಳೀಪಟವಾಗುತ್ತದೆ.
ನನಗೆ ಅವನ ಅಹಂಕಾರ ಕಾಣುತ್ತದೆ ಎಂದರೆ, ಅವನ ಅಹಂಕಾರವನ್ನು ಖಂಡಿಸುತ್ತಿದ್ದೇನೆಂದರೆ, ಅವನ ಅಹಂಕಾರಕ್ಕೆ ಮಣಿಯಲು ನಾನು ಒಪ್ಪದೇ ನಾನೂ ಸವಾಲೆಸೆಯುತ್ತಿದ್ದೇನೆಂದರೆ, ಹೌದು, ನನ್ನಲ್ಲಿರುವ ಆತ್ಮರತಿಯ ಅರಿಮೆಯು ತನ್ನ ಪ್ರಕಟಣೆಯಾದ ಅಹಂಕಾರವನ್ನು ವಿಜೃಂಭಿಸುತ್ತಿದೆ.
ಒಬ್ಬ ಕಳ್ಳನ ಲಕ್ಷಣಗಳನ್ನು ಮತ್ತೊಬ್ಬ ಕಳ್ಳ ಬಲ್ಲ. ಇಲ್ಲೂ ಚೌಕಾಸಿ ಮಾಡಿಕೊಳ್ಳಬಹುದು. ನನ್ನದನ್ನು ಅಹಂಕಾರ ಎಂದು ಒಪ್ಪಿಕೊಂಡರೂ ಅವನದನ್ನು ದುರಹಂಕಾರ ಎನ್ನುತ್ತೇನೆ. ಇದು ಆತ್ಮರತಿ ಅರಿಮೆಯ ಪಟ್ಟುಗಳು.
ಪ್ರಬಲವಾದ ಅಥವಾ ಉತ್ಕಟವಾದ ವಾಂಛೆ, ಒಳಗಿರುವ ಬಯಕೆಯೊಂದಿಗೆ ಆತ್ಮರತಿಯ ನಂಟು. ಆತ್ಮರತಿಗೆ ಎರಡು ಅಲುಗಿನ ಕತ್ತಿಯನ್ನು ಬಳಸಲು ಗೊತ್ತುಂಟು.
ಒಳಗಿರುವ ಕಾಮುಕನ ತಣಿಸಲು ಪ್ರೇಮವನ್ನು ತೋರಬಹುದು ಅಥವಾ ಅತ್ಯಾಚಾರವನ್ನೂ ಮಾಡಬಹುದು. ಆತ್ಮರತಿಯೂ ಹಾಗೆ. ತನ್ನೊಳಗಿನ ಆಸೆಯನ್ನು ತಣಿಸಿಕೊಳ್ಳಲು ವಿನಯವಾಗಿ ಪರೋಪಕಾರಿಯೂ ಆಗಬಹುದು, ಅಹಂಕಾರಿಯೂ ಆಗಬಹುದು. ಆತ್ಮಕ್ಕೆ ರತಿಯೇ ಮುಖ್ಯ. ಈ ಅರಿಮೆಗೆ ತಾನು ಯಾರನ್ನು ಹೊಕ್ಕಿದೆಯೋ ಅವನ ಮೂಲಕ ತಾನು ತೃಪ್ತವಾಗಬೇಕಷ್ಟೇ.
ಯಾರೋ ಒಬ್ಬರ ತಾಳಕ್ಕೆ ಕುಣಿಯುವ ಮೂಲಕವೂ ಆತ್ಮರತಿಯು ತಾನು ಸುಖವನ್ನು ಪಡುತ್ತದೆ. ಅದಕ್ಕೆ ತಾನು ತೃಪ್ತವಾಗಬೇಕು. ಆತ್ಮರತಿಯರಿಮೆಯು ಪ್ರೇಮದ ಮುಖವಾಡವನ್ನು ತೊಟ್ಟಿರುವ ಅತ್ಯಾಚಾರಿಯೂ ಆಗಿರಬಹುದು. ಆದರೆ ಅತ್ಯಾಚಾರಿಯನ್ನು ನೀವು ಎನ್ಕೌಂಟರ್ ಮಾಡುವಿರಿ. ಪ್ರೇಮಿಯನ್ನು ಅಲ್ಲ. ಅಷ್ಟೇಕೆ, ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿ ಸಂತ್ರಸ್ತೆಗೆ ನ್ಯಾಯವೊದಗಿಸುವ ಗನ್ನುಗಳನ್ನು ಹಿಡಿದಿರುವ ಕೈಗಳೂ ಆತ್ಮರತಿಯ ಕೈಗೊಂಬೆಗಳೇ. ಆತ್ಮರತಿಗೆ ಇಲ್ಲಿ ನ್ಯಾಯವೊದಗಿಸುವ ನೆಪ ಬೇಕಿತ್ತು.
ಹೊನ್ನಶೂಲದ ಅರಿವಾದೊಡೆ
ಅರಿಮೆಯು ಪ್ರಲೋಭನೆಗೆ ಒಡ್ಡುತ್ತಿರುವ ಪ್ರದರ್ಶನದ ಯಾವುದೇ ಇಚ್ಛೆಯನ್ನು ನಮ್ಮ ಅರಿವು ನಿರಾಕರಿಸಲು ಪ್ರಾರಂಭಿಸಿದ ಗಳಿಗೆಯಿಂದಲೇ ಆತ್ಮರತಿಯ ಅವನತಿ ಆರಂಭವಾಗುತ್ತದೆ. ಬಸವಣ್ಣನವರು ಫ್ರಾಯ್ಡ್ನ ನಾರ್ಸಿಸಂನ ಹೆಸರೆತ್ತದೇ ಆತ್ಮರತಿಯರಿಮೆಗೆ ಆಹಾರವೊದಗಿಸದಿರಲು ಅರಿವನ್ನು ಹೊಂದಿದ್ದರು. “ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ” ಎಂದು ನೋಯುವ ಅವರು “ಅಯ್ಯೋ ನೊಂದೆನು, ಸೈರಿಸಲಾರೆನು” ಎಂದು ಅವರ ಅರಿವು ಅರಿಮೆಯೊಂದಿಗೆ ಸಂಘರ್ಷಕ್ಕಿಳಿಯುತ್ತದೆ. ಕೂಡಲ ಸಂಗನ ಎಚ್ಚರಿಸುತ್ತಾರೆ “ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳತೆಗಡ್ಡ ಬಾರ, ಧರ್ಮೀ” ಎಂದು. ನಮ್ಮನ್ನು ಅರಿಮೆಯಿಂದ ಕಾಪಾಡಿಕೊಳ್ಳಲು ನಾವು ಮೊರೆಹೋಗಬೇಕಾಗಿರುವುದು ಅರಿವಿಗೇ.
ಬಸವಣ್ಣನವರ ಅರಿವು ಮತ್ತು ಅರಿಮೆಯ ಸಂಘರ್ಷದಲ್ಲಿ ಪ್ರಾಮಾಣಿಕವಾಗಿ ಅವರ ಪ್ರಕಟಣೆಯಲ್ಲಿ ಏನೆನ್ನುವರು ನೋಡಿ. “ಎನ್ನವರೆನಗೊಲಿದು ಹೊನ್ನಸೂಲವನಿಕ್ಕಿದರಯ್ಯಾ, ಅಹಂಕಾರಪೂರಾಯ ಘಾಯದಲ್ಲಿ ಆನೆಂತು ಬದುಕುವೆನೆಂತು ಜೀವಿಸುವೆ?”
ನಿಜ, ಆತ್ಮರತಿಯರಿಮೆಯ ತೃಪ್ತಿಗೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟರೆ, ಅಹಂಕಾರವು ವಿಜೃಂಭಿಸುತ್ತಾ ತನ್ನತನದ ಜೀವತ್ವವನ್ನು ಕಳೆದುಕೊಂಡು ಸಾಯಬೇಕಾಗುತ್ತದೆ. ಇನ್ನುಳಿದಂತೆ ಪಡೆವ ಗೌರವ ಮತ್ತು ವೈಭವಗಳೆಲ್ಲಾ ಶವಕ್ಕೆ ಮಾಡಿರುವ ಶೃಂಗಾರ.
ಶೂಲಕ್ಕಿರುವ ಅಲುಗುಗಳು.
ಮನಶಾಸ್ತ್ರಜ್ಞರು ಈ ಆತ್ಮರತಿಯರಿಮೆಯನ್ನು ಚಿಕಿತ್ಸೆ ನೀಡುವ ಸಲುವಾಗಿ ಗುರುತಿಸಲು ವಿಧಾನವೊಂದನ್ನು ಕೈಗೆತ್ತಿಕೊಳ್ಳುತ್ತಾರೆ. ಅದಕ್ಕೆ
The Narcissistic Personality Inventory (NPI) ಎಂದು ಹೆಸರಿಸುತ್ತಾರೆ. ಈ ಆತ್ಮರತಿಯರಿಮೆಗೆ ಯಾಕಿಷ್ಟು ತಲೆಕೆಡಿಸಿಕೊಳ್ಳಬೇಕೆಂದರೆ, ಇನ್ನು ನೀವು ಮುಂದೆ ಓದಲಿರುವ ಅನೇಕಾನೇಕ ಅರಿಮೆಗಳಿಗೆ ಇದು ತಾಯಿಯಂತೆ ಕಾಣುತ್ತದೆ. ಅನೇಕಾನೇಕ ಮಾನಸಿಕ ಸಮಸ್ಯೆಗಳಿಗೆ, ಗೀಳುಗಳಿಗೆ, ವ್ಯಸನಗಳಿಗೆ ಜನ್ಮ ಕೊಡುತ್ತದೆ. ಹಾಗಾಗಿಯೇ ಬುಡಮೂಲ ಚಿಕಿತ್ಸೆಯನ್ನು ಕೊಡಬೇಕೆಂದೋ ಅಥವಾ ಪಡೆಯಬೇಕೆಂದೋ ಬಯಸುವವರು ಈ ಆತ್ಮರತಿಯ ಅರಿಮೆಯನ್ನು ಅರಿತುಕೊಳ್ಳಲೇ ಬೇಕು.
ಇದು ಯಾವ್ಯಾವ ಆಯಾಮಗಳಲ್ಲಿ ಪ್ರಕಟಗೊಳ್ಳುತ್ತದೆ ಎಂದರೆ ಎಣಿಸಲಸದಳ. ಸಮಾಜಘಾತುಕನಾಗಿ, ಶೋಷಕನಾಗಿ, ಮೋಸಗಾರನಾಗಿ, ವಂಚಕನಾಗಿ ವ್ಯಕ್ತಿಯು ವರ್ತಿಸಬಹುದು. ಕಿಲಾಡಿಯಾಗಿ, ಕಾಮುಕತೆಯಿಂದ ಸಂಮೋಹಿಸುವವನಾಗಿ ಸೆಳೆಯಬಹುದು. ತಾನೊಬ್ಬ ಮಹಾ ಪ್ರಶಂಸನೀಯ ವ್ಯಕ್ತಿಯಾಗಿ, ಗಮನಾರ್ಹ ನಾಯಕನೆಂಬ ಭ್ರಮೆ ಹುಟ್ಟಿಸಿ, ಜನರನ್ನು ಸದಾ ಮೂರ್ಖರನ್ನಾಗಿಸುತ್ತಾ ನಯವಂಚಕ ಅಥವಾ ಕ್ರೂರಿ ಸರ್ವಾಧಿಕಾರಿಯನ್ನು ಇದು ಹುಟ್ಟಿಸಬಹುದು. ಆತ್ಮರತಿಯ ಅರಿಮೆಯು ತನ್ನ ಉತ್ಕಟ ಬಯಕೆಯನ್ನು ತೃಪ್ತಗೊಳಿಸಿಕೊಳ್ಳಲು ಯಾವ ಹಂತಕ್ಕೆ ಪ್ರಯಾಣಿಸುತ್ತದೆ ಎಂದು ಅದಕ್ಕೇ ತಿಳಿದಿರುವುದಿಲ್ಲ. ಆತ್ಮರತಿಯ ಶೂಲಕ್ಕೆ ಅದೆಷ್ಟು ಅಲುಗುಗಳಿರುವವೋ ಬಲ್ಲವರಾರು!
ಅಭಿಷಕ್ತ ಆತ್ಮರತಿ
ಇನ್ನೊಂದು ಬಗೆಯ ಆತ್ಮರತಿಯ ಅರಿಮೆ ಇದೆ. ಅದು ಜನಪ್ರಿಯತೆಯಿಂದ, ಗಳಿಸಿರುವ ಅಧಿಕಾರ ಅಥವಾ ಹಣದಿಂದ ಉಂಟಾಗುವುದು ಅಥವಾ ಇರುವುದು ಉಲ್ಬಣಗೊಳ್ಳುವುದು. ಸಾಧಾರಣವಾಗಿ ಇದ್ದೇ ಇರುವಂತಹ ಆತ್ಮರತಿಯು ದೊರಕಿದ ಖ್ಯಾತಿಯಿಂದಲೋ, ಹಣದಿಂದಲೋ, ಅಧಿಕಾರದಿಂದಲೋ ಮತ್ತಷ್ಟು ರೆಕ್ಕೆಪುಕ್ಕಗಳನ್ನು ಹೊಂದುವುದು.ಅದಕ್ಕೆ Acquired situational narcissism (ASN) ಎನ್ನುವರು. ನೀವು ನಿಮ್ಮ ಗೆಳೆಯರು ಬರಗೆಟ್ಟಾಗ ಒಟ್ಟೊಟ್ಟಾಗಿ ದೊರಕಿದ್ದನ್ನು ಗೋರಿಕೊಂಡು ಹಂಚಿ ಉಂಡಿರುತ್ತೀರಿ. ನಿಮ್ಮಲ್ಲೊಬ್ಬ ಹೇಗೋ ಏನೋ ಆರೋಪಿತ ಅದೃಷ್ಟದಿಂದ ಸೆಲೆಬ್ರಿಟಿಯಾಗಿಬಿಟ್ಟಿದ್ದಾನೆ. ಈಗ ಅವನು ನಿಮ್ಮ ಜೊತೆ ವ್ಯವಹರಿಸುವ ರೀತಿ ನೀತಿಗಳನ್ನು ನೋಡಿ. ನೀವು ಅವನ ಭುಜದ ಮೇಲೆ ಕೈ ಹಾಕಿ, ಬೆನ್ನಿಗೆ ಬಾರಿಸಿ ಮಾತಾಡಿಸಲು ಆಗುವುದಿಲ್ಲ. ಅದೇ ಹಿಂದಿನ ಸ್ಥಿತಿಯಲ್ಲಿರುವ ನೀವು ಅದೇ ಹಿಂದಿನ ರೀತಿಯಲ್ಲಿ ಮುಟ್ಟಿದರೆ ಅವನಿಗೆ ಇಕ್ಕಟ್ಟಿನಲ್ಲಿ ಸಿಲುಕಿದಂತಾಗುತ್ತದೆ. ಸಹಿಸಲಾಗುವುದಿಲ್ಲ. “ಯಾವಾಗ್ಲೂ ಒಂದೇನಾ?” ಅನ್ನುತ್ತಾನೆ.
ನಿಮಗೆ ಹಣದ ವಿಷಯದಲ್ಲಿ ಮತ್ತು ಖ್ಯಾತಿಯ ವ್ಯಾಪ್ತಿಯಲ್ಲಿ ಅವನು ಎಷ್ಟು ಎತ್ತರಕ್ಕೆ ಹೋದರೂ ನಿಮಗವನು ಸ್ನೇಹಿತನೇ ಎಂದು ನೀವು ಭಾವಿಸಲು ಯತ್ನಿಸುತ್ತೀರಿ. ಆದರೆ, ಅವನು ನಿಮ್ಮನ್ನು ನಿವಾರಿಸಿಕೊಳ್ಳಲು ಯತ್ನಿಸುವನು. ಏಕೆಂದರೆ ಅವನು ತಾನೆಂದರೆ ಒಂದು ಚಿತ್ರಣವೊಂದನ್ನು ಜನರಿಗೆ ಕಟ್ಟಿಕೊಟ್ಟಿರುತ್ತಾರೆ. ಆ ಗೌರವ, ಮಾನ್ಯತೆಗಳನ್ನು ನೀವು ನೀಡದೇ ಅವನ ಘನತೆಗೆ ಧಕ್ಕೆ ತರುತ್ತೀರೆಂದು ಅವನು ನಿಮ್ಮನ್ನು ಅವಾಯ್ಡ್ ಮಾಡುತ್ತಾನೆ.
ಸರಿ, ಅವನ ಆತ್ಮರತಿಯರಿಮೆಯು ಅವನನ್ನು ನಿಮ್ಮಿಂದ ದೂರಾಗಿಸಿದಂತೆ, ನಿಮ್ಮ ಆತ್ಮದರಿಮೆಯೂ ಕಡಿಮೆಯಿರುವುದಿಲ್ಲ. ತನ್ನ ವ್ಯಾಪ್ತಿ ಪ್ರದೇಶದಲ್ಲಿ, ತನಗೆ ಶ್ರೋತೃಗಳಾಗಿ, ಪ್ರೇಕ್ಷಕರಾಗಿ ದೊರಕಿರುವವರ ಮುಂದೆ ಆ ಸೆಲೆಬ್ರಿಟಿಯು ನಿಮ್ಮೊಡನಿದ್ದಾಗ ಅದೆಷ್ಟು ದೀನನಾಗಿದ್ದನು, ಎಷ್ಟು ನಿಮ್ಮಿಂದ ಪಡೆದಿದ್ದನೆಂದು ವಿವರ ಒಪ್ಪಿಸುವ ಮೂಲಕ ತನ್ನ ಉತ್ಕಟ ಬಯಕೆಯನ್ನು ತೃಪ್ತಿಗೊಳಿಸಿಕೊಳ್ಳಲು ಯತ್ನಿಸುತ್ತದೆ.
ಅವನ ಅಹಂಕಾರವನ್ನು ಖಂಡಿಸಲು ನಿಮ್ಮ ಅಹಂಕಾರ ವಿಜೃಂಭಿಸುತ್ತದೆ. ಇದೇ ಆತ್ಮರತಿಯ ಲೀಲೆ. ನಿಮಗೆ ಆಗ ಅವನು ಜೀವಂತವಿದ್ದ. ಈಗ ಅವನೆಷ್ಟೇ ವೈಭವದಲ್ಲಿ ಮೆರೆಯುತ್ತಿದ್ದರೂ ಸಾಗುತ್ತಿರುವ ಅಲಂಕರಿಸಲ್ಪಟ್ಟಿರುವ ಶವ! ಅವನಿಗೆ ನೀವು ಹಳೆಯ ಕೊಳೆ!
ನಾನೇನು ಖಾಲಿಪೀಲಿಯಲ್ಲ
ಆತ್ಮರತಿಯ ಸೆಲೆಬ್ರಿಟಿಯ ಶೋಕೇಸಿನಲ್ಲಿರುವ ಪ್ರದರ್ಶನಗಳ ಲೀಲೆ ಅಪಾರ. ಅವರು ಕಲಾವಿದರೇ. ಆದರೆ ಇತರ ಸ್ಟಾರ್ ಕಲಾವಿದರಿಗೆ ದೊರಕುವಷ್ಟು ಅವಕಾಶಗಳು ದೊರಕುವುದಿಲ್ಲ. ಅವರನ್ನು ಕರೆಯುವಷ್ಟು ಇವರನ್ನು ಸಮಾರಂಭಗಳಿಗೆ ಕರೆಯುವುದಿಲ್ಲ. ಆದರೂ ನೀವೇನಾದರೂ ಕಾರ್ಯಕ್ರಮಕ್ಕೋ ಅಥವಾ ನಿಮ್ಮದ್ಯಾವುದಾದರೂ ಯೋಜನೆಗೋ ಅವರಿಗೆ ಕರೆ ಮಾಡಿದರೆ, ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಖಾಲಿ ಕುಳಿತಿದ್ದೇನೆ ಎಂದು ಹೇಳಲು ಅವರಿಗೆ ಆಗುವುದಿಲ್ಲ. ಡೈರಿ ನೋಡುತ್ತೇನೆ. ನಂತರ ಹೇಳುತ್ತೇನೆ. ನನಗೆ ಯಾವುದೋ ಕಾರ್ಯಕ್ರಮವಿದೆ ಅನಿಸುತ್ತದೆ. ಆಗುವುದಿಲ್ಲ ಅನಿಸುತ್ತದೆ. ಯಾವುದಕ್ಕೂ ಆ ಕಾರ್ಯಕ್ರಮದ ಆಯೋಜಕರಿಗೆ ಕರೆ ಮಾಡಿ ತಿಳಿದು ನಂತರ ತಿಳಿಸುವೆ. ಇದೆಲ್ಲಾ ಅವರ ಕೆಟ್ಟ ಬುದ್ಧಿಯ, ಹೀನ ಮನಸ್ಥಿತಿಯ ವರ್ತನೆಗಳು ಎಂದು ಖಂಡಿತ ಅಂದುಕೊಂಡು ಅವರನ್ನು ಖಂಡಿಸಬೇಡಿ ಅಥವಾ ನಿರಾಕರಿಸಬೇಡಿ. ಪಾಪ, ಅವರ ಅರಿವಿಗೇ ಎಟುಕದಂತೆ ವರ್ತಿಸಲು ಪ್ರಚೋದಿಸುವ ಅರಿಮೆಯ ಪ್ರಭಾವಗಳು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243