Connect with us

ಅಂತರಂಗ

ಅರಿಮೆಯ ಅರಿವಿರಲಿ-12 : ಶವಮುಖದ ಶೃಂಗಾರ

Published

on

  • ಯೋಗೇಶ್ ಮಾಸ್ಟರ್

ತ್ಮರತಿಯು ಪ್ರೇಮವನ್ನು ಕೊಲ್ಲುತ್ತದೆ.ಆತ್ಮರತಿಯ ಆಳವಾದ ಅರಿಮೆಯ ಪ್ರಬಲವಾದ ಪ್ರಕಟಣೆಯೇ ಅಹಂಕಾರ. ನಮಗೆ ಸವಾಲೊಡ್ಡುವ ಒಬ್ಬನ ಅಹಂಕಾರವನ್ನು ಗುರುತಿಸುವ ಭರಾಟೆಯಲ್ಲಿ ನಮ್ಮ ಆತ್ಮರತಿಯ ಅರಿಮೆಯು ಹೊಂದಿರುವ ಉತ್ಕಟವಾದ ಇಚ್ಛೆಯು ನಮ್ಮ ಅಹಂಕಾರವನ್ನು ಝಳಪಿಸುತ್ತದೆ. ಎರಡು ಅಹಂಕಾರಗಳ ಖಡ್ಗಗಳ ಕಾಳಗದಲ್ಲಿ ಪ್ರೇಮ ಸಾಯುತ್ತದೆ. ವಾತ್ಸಲ್ಯ ಸಾಯುತ್ತದೆ. ಸೌಹಾರ್ಧ ಧೂಳೀಪಟವಾಗುತ್ತದೆ.

ನನಗೆ ಅವನ ಅಹಂಕಾರ ಕಾಣುತ್ತದೆ ಎಂದರೆ, ಅವನ ಅಹಂಕಾರವನ್ನು ಖಂಡಿಸುತ್ತಿದ್ದೇನೆಂದರೆ, ಅವನ ಅಹಂಕಾರಕ್ಕೆ ಮಣಿಯಲು ನಾನು ಒಪ್ಪದೇ ನಾನೂ ಸವಾಲೆಸೆಯುತ್ತಿದ್ದೇನೆಂದರೆ, ಹೌದು, ನನ್ನಲ್ಲಿರುವ ಆತ್ಮರತಿಯ ಅರಿಮೆಯು ತನ್ನ ಪ್ರಕಟಣೆಯಾದ ಅಹಂಕಾರವನ್ನು ವಿಜೃಂಭಿಸುತ್ತಿದೆ.

ಒಬ್ಬ ಕಳ್ಳನ ಲಕ್ಷಣಗಳನ್ನು ಮತ್ತೊಬ್ಬ ಕಳ್ಳ ಬಲ್ಲ. ಇಲ್ಲೂ ಚೌಕಾಸಿ ಮಾಡಿಕೊಳ್ಳಬಹುದು. ನನ್ನದನ್ನು ಅಹಂಕಾರ ಎಂದು ಒಪ್ಪಿಕೊಂಡರೂ ಅವನದನ್ನು ದುರಹಂಕಾರ ಎನ್ನುತ್ತೇನೆ. ಇದು ಆತ್ಮರತಿ ಅರಿಮೆಯ ಪಟ್ಟುಗಳು.
ಪ್ರಬಲವಾದ ಅಥವಾ ಉತ್ಕಟವಾದ ವಾಂಛೆ, ಒಳಗಿರುವ ಬಯಕೆಯೊಂದಿಗೆ ಆತ್ಮರತಿಯ ನಂಟು. ಆತ್ಮರತಿಗೆ ಎರಡು ಅಲುಗಿನ ಕತ್ತಿಯನ್ನು ಬಳಸಲು ಗೊತ್ತುಂಟು.

ಒಳಗಿರುವ ಕಾಮುಕನ ತಣಿಸಲು ಪ್ರೇಮವನ್ನು ತೋರಬಹುದು ಅಥವಾ ಅತ್ಯಾಚಾರವನ್ನೂ ಮಾಡಬಹುದು. ಆತ್ಮರತಿಯೂ ಹಾಗೆ. ತನ್ನೊಳಗಿನ ಆಸೆಯನ್ನು ತಣಿಸಿಕೊಳ್ಳಲು ವಿನಯವಾಗಿ ಪರೋಪಕಾರಿಯೂ ಆಗಬಹುದು, ಅಹಂಕಾರಿಯೂ ಆಗಬಹುದು. ಆತ್ಮಕ್ಕೆ ರತಿಯೇ ಮುಖ್ಯ. ಈ ಅರಿಮೆಗೆ ತಾನು ಯಾರನ್ನು ಹೊಕ್ಕಿದೆಯೋ ಅವನ ಮೂಲಕ ತಾನು ತೃಪ್ತವಾಗಬೇಕಷ್ಟೇ.

ಯಾರೋ ಒಬ್ಬರ ತಾಳಕ್ಕೆ ಕುಣಿಯುವ ಮೂಲಕವೂ ಆತ್ಮರತಿಯು ತಾನು ಸುಖವನ್ನು ಪಡುತ್ತದೆ. ಅದಕ್ಕೆ ತಾನು ತೃಪ್ತವಾಗಬೇಕು. ಆತ್ಮರತಿಯರಿಮೆಯು ಪ್ರೇಮದ ಮುಖವಾಡವನ್ನು ತೊಟ್ಟಿರುವ ಅತ್ಯಾಚಾರಿಯೂ ಆಗಿರಬಹುದು. ಆದರೆ ಅತ್ಯಾಚಾರಿಯನ್ನು ನೀವು ಎನ್ಕೌಂಟರ್ ಮಾಡುವಿರಿ. ಪ್ರೇಮಿಯನ್ನು ಅಲ್ಲ. ಅಷ್ಟೇಕೆ, ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿ ಸಂತ್ರಸ್ತೆಗೆ ನ್ಯಾಯವೊದಗಿಸುವ ಗನ್ನುಗಳನ್ನು ಹಿಡಿದಿರುವ ಕೈಗಳೂ ಆತ್ಮರತಿಯ ಕೈಗೊಂಬೆಗಳೇ. ಆತ್ಮರತಿಗೆ ಇಲ್ಲಿ ನ್ಯಾಯವೊದಗಿಸುವ ನೆಪ ಬೇಕಿತ್ತು.

ಹೊನ್ನಶೂಲದ ಅರಿವಾದೊಡೆ

ಅರಿಮೆಯು ಪ್ರಲೋಭನೆಗೆ ಒಡ್ಡುತ್ತಿರುವ ಪ್ರದರ್ಶನದ ಯಾವುದೇ ಇಚ್ಛೆಯನ್ನು ನಮ್ಮ ಅರಿವು ನಿರಾಕರಿಸಲು ಪ್ರಾರಂಭಿಸಿದ ಗಳಿಗೆಯಿಂದಲೇ ಆತ್ಮರತಿಯ ಅವನತಿ ಆರಂಭವಾಗುತ್ತದೆ. ಬಸವಣ್ಣನವರು ಫ್ರಾಯ್ಡ್‍ನ ನಾರ್ಸಿಸಂನ ಹೆಸರೆತ್ತದೇ ಆತ್ಮರತಿಯರಿಮೆಗೆ ಆಹಾರವೊದಗಿಸದಿರಲು ಅರಿವನ್ನು ಹೊಂದಿದ್ದರು. “ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ” ಎಂದು ನೋಯುವ ಅವರು “ಅಯ್ಯೋ ನೊಂದೆನು, ಸೈರಿಸಲಾರೆನು” ಎಂದು ಅವರ ಅರಿವು ಅರಿಮೆಯೊಂದಿಗೆ ಸಂಘರ್ಷಕ್ಕಿಳಿಯುತ್ತದೆ. ಕೂಡಲ ಸಂಗನ ಎಚ್ಚರಿಸುತ್ತಾರೆ “ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳತೆಗಡ್ಡ ಬಾರ, ಧರ್ಮೀ” ಎಂದು. ನಮ್ಮನ್ನು ಅರಿಮೆಯಿಂದ ಕಾಪಾಡಿಕೊಳ್ಳಲು ನಾವು ಮೊರೆಹೋಗಬೇಕಾಗಿರುವುದು ಅರಿವಿಗೇ.

ಬಸವಣ್ಣನವರ ಅರಿವು ಮತ್ತು ಅರಿಮೆಯ ಸಂಘರ್ಷದಲ್ಲಿ ಪ್ರಾಮಾಣಿಕವಾಗಿ ಅವರ ಪ್ರಕಟಣೆಯಲ್ಲಿ ಏನೆನ್ನುವರು ನೋಡಿ. “ಎನ್ನವರೆನಗೊಲಿದು ಹೊನ್ನಸೂಲವನಿಕ್ಕಿದರಯ್ಯಾ, ಅಹಂಕಾರಪೂರಾಯ ಘಾಯದಲ್ಲಿ ಆನೆಂತು ಬದುಕುವೆನೆಂತು ಜೀವಿಸುವೆ?”
ನಿಜ, ಆತ್ಮರತಿಯರಿಮೆಯ ತೃಪ್ತಿಗೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟರೆ, ಅಹಂಕಾರವು ವಿಜೃಂಭಿಸುತ್ತಾ ತನ್ನತನದ ಜೀವತ್ವವನ್ನು ಕಳೆದುಕೊಂಡು ಸಾಯಬೇಕಾಗುತ್ತದೆ. ಇನ್ನುಳಿದಂತೆ ಪಡೆವ ಗೌರವ ಮತ್ತು ವೈಭವಗಳೆಲ್ಲಾ ಶವಕ್ಕೆ ಮಾಡಿರುವ ಶೃಂಗಾರ.
ಶೂಲಕ್ಕಿರುವ ಅಲುಗುಗಳು.

ಮನಶಾಸ್ತ್ರಜ್ಞರು ಈ ಆತ್ಮರತಿಯರಿಮೆಯನ್ನು ಚಿಕಿತ್ಸೆ ನೀಡುವ ಸಲುವಾಗಿ ಗುರುತಿಸಲು ವಿಧಾನವೊಂದನ್ನು ಕೈಗೆತ್ತಿಕೊಳ್ಳುತ್ತಾರೆ. ಅದಕ್ಕೆ
The Narcissistic Personality Inventory (NPI) ಎಂದು ಹೆಸರಿಸುತ್ತಾರೆ. ಈ ಆತ್ಮರತಿಯರಿಮೆಗೆ ಯಾಕಿಷ್ಟು ತಲೆಕೆಡಿಸಿಕೊಳ್ಳಬೇಕೆಂದರೆ, ಇನ್ನು ನೀವು ಮುಂದೆ ಓದಲಿರುವ ಅನೇಕಾನೇಕ ಅರಿಮೆಗಳಿಗೆ ಇದು ತಾಯಿಯಂತೆ ಕಾಣುತ್ತದೆ. ಅನೇಕಾನೇಕ ಮಾನಸಿಕ ಸಮಸ್ಯೆಗಳಿಗೆ, ಗೀಳುಗಳಿಗೆ, ವ್ಯಸನಗಳಿಗೆ ಜನ್ಮ ಕೊಡುತ್ತದೆ. ಹಾಗಾಗಿಯೇ ಬುಡಮೂಲ ಚಿಕಿತ್ಸೆಯನ್ನು ಕೊಡಬೇಕೆಂದೋ ಅಥವಾ ಪಡೆಯಬೇಕೆಂದೋ ಬಯಸುವವರು ಈ ಆತ್ಮರತಿಯ ಅರಿಮೆಯನ್ನು ಅರಿತುಕೊಳ್ಳಲೇ ಬೇಕು.

ಇದು ಯಾವ್ಯಾವ ಆಯಾಮಗಳಲ್ಲಿ ಪ್ರಕಟಗೊಳ್ಳುತ್ತದೆ ಎಂದರೆ ಎಣಿಸಲಸದಳ. ಸಮಾಜಘಾತುಕನಾಗಿ, ಶೋಷಕನಾಗಿ, ಮೋಸಗಾರನಾಗಿ, ವಂಚಕನಾಗಿ ವ್ಯಕ್ತಿಯು ವರ್ತಿಸಬಹುದು. ಕಿಲಾಡಿಯಾಗಿ, ಕಾಮುಕತೆಯಿಂದ ಸಂಮೋಹಿಸುವವನಾಗಿ ಸೆಳೆಯಬಹುದು. ತಾನೊಬ್ಬ ಮಹಾ ಪ್ರಶಂಸನೀಯ ವ್ಯಕ್ತಿಯಾಗಿ, ಗಮನಾರ್ಹ ನಾಯಕನೆಂಬ ಭ್ರಮೆ ಹುಟ್ಟಿಸಿ, ಜನರನ್ನು ಸದಾ ಮೂರ್ಖರನ್ನಾಗಿಸುತ್ತಾ ನಯವಂಚಕ ಅಥವಾ ಕ್ರೂರಿ ಸರ್ವಾಧಿಕಾರಿಯನ್ನು ಇದು ಹುಟ್ಟಿಸಬಹುದು. ಆತ್ಮರತಿಯ ಅರಿಮೆಯು ತನ್ನ ಉತ್ಕಟ ಬಯಕೆಯನ್ನು ತೃಪ್ತಗೊಳಿಸಿಕೊಳ್ಳಲು ಯಾವ ಹಂತಕ್ಕೆ ಪ್ರಯಾಣಿಸುತ್ತದೆ ಎಂದು ಅದಕ್ಕೇ ತಿಳಿದಿರುವುದಿಲ್ಲ. ಆತ್ಮರತಿಯ ಶೂಲಕ್ಕೆ ಅದೆಷ್ಟು ಅಲುಗುಗಳಿರುವವೋ ಬಲ್ಲವರಾರು!

ಅಭಿಷಕ್ತ ಆತ್ಮರತಿ

ಇನ್ನೊಂದು ಬಗೆಯ ಆತ್ಮರತಿಯ ಅರಿಮೆ ಇದೆ. ಅದು ಜನಪ್ರಿಯತೆಯಿಂದ, ಗಳಿಸಿರುವ ಅಧಿಕಾರ ಅಥವಾ ಹಣದಿಂದ ಉಂಟಾಗುವುದು ಅಥವಾ ಇರುವುದು ಉಲ್ಬಣಗೊಳ್ಳುವುದು. ಸಾಧಾರಣವಾಗಿ ಇದ್ದೇ ಇರುವಂತಹ ಆತ್ಮರತಿಯು ದೊರಕಿದ ಖ್ಯಾತಿಯಿಂದಲೋ, ಹಣದಿಂದಲೋ, ಅಧಿಕಾರದಿಂದಲೋ ಮತ್ತಷ್ಟು ರೆಕ್ಕೆಪುಕ್ಕಗಳನ್ನು ಹೊಂದುವುದು.ಅದಕ್ಕೆ Acquired situational narcissism (ASN) ಎನ್ನುವರು. ನೀವು ನಿಮ್ಮ ಗೆಳೆಯರು ಬರಗೆಟ್ಟಾಗ ಒಟ್ಟೊಟ್ಟಾಗಿ ದೊರಕಿದ್ದನ್ನು ಗೋರಿಕೊಂಡು ಹಂಚಿ ಉಂಡಿರುತ್ತೀರಿ. ನಿಮ್ಮಲ್ಲೊಬ್ಬ ಹೇಗೋ ಏನೋ ಆರೋಪಿತ ಅದೃಷ್ಟದಿಂದ ಸೆಲೆಬ್ರಿಟಿಯಾಗಿಬಿಟ್ಟಿದ್ದಾನೆ. ಈಗ ಅವನು ನಿಮ್ಮ ಜೊತೆ ವ್ಯವಹರಿಸುವ ರೀತಿ ನೀತಿಗಳನ್ನು ನೋಡಿ. ನೀವು ಅವನ ಭುಜದ ಮೇಲೆ ಕೈ ಹಾಕಿ, ಬೆನ್ನಿಗೆ ಬಾರಿಸಿ ಮಾತಾಡಿಸಲು ಆಗುವುದಿಲ್ಲ. ಅದೇ ಹಿಂದಿನ ಸ್ಥಿತಿಯಲ್ಲಿರುವ ನೀವು ಅದೇ ಹಿಂದಿನ ರೀತಿಯಲ್ಲಿ ಮುಟ್ಟಿದರೆ ಅವನಿಗೆ ಇಕ್ಕಟ್ಟಿನಲ್ಲಿ ಸಿಲುಕಿದಂತಾಗುತ್ತದೆ. ಸಹಿಸಲಾಗುವುದಿಲ್ಲ. “ಯಾವಾಗ್ಲೂ ಒಂದೇನಾ?” ಅನ್ನುತ್ತಾನೆ.

ನಿಮಗೆ ಹಣದ ವಿಷಯದಲ್ಲಿ ಮತ್ತು ಖ್ಯಾತಿಯ ವ್ಯಾಪ್ತಿಯಲ್ಲಿ ಅವನು ಎಷ್ಟು ಎತ್ತರಕ್ಕೆ ಹೋದರೂ ನಿಮಗವನು ಸ್ನೇಹಿತನೇ ಎಂದು ನೀವು ಭಾವಿಸಲು ಯತ್ನಿಸುತ್ತೀರಿ. ಆದರೆ, ಅವನು ನಿಮ್ಮನ್ನು ನಿವಾರಿಸಿಕೊಳ್ಳಲು ಯತ್ನಿಸುವನು. ಏಕೆಂದರೆ ಅವನು ತಾನೆಂದರೆ ಒಂದು ಚಿತ್ರಣವೊಂದನ್ನು ಜನರಿಗೆ ಕಟ್ಟಿಕೊಟ್ಟಿರುತ್ತಾರೆ. ಆ ಗೌರವ, ಮಾನ್ಯತೆಗಳನ್ನು ನೀವು ನೀಡದೇ ಅವನ ಘನತೆಗೆ ಧಕ್ಕೆ ತರುತ್ತೀರೆಂದು ಅವನು ನಿಮ್ಮನ್ನು ಅವಾಯ್ಡ್ ಮಾಡುತ್ತಾನೆ.

ಸರಿ, ಅವನ ಆತ್ಮರತಿಯರಿಮೆಯು ಅವನನ್ನು ನಿಮ್ಮಿಂದ ದೂರಾಗಿಸಿದಂತೆ, ನಿಮ್ಮ ಆತ್ಮದರಿಮೆಯೂ ಕಡಿಮೆಯಿರುವುದಿಲ್ಲ. ತನ್ನ ವ್ಯಾಪ್ತಿ ಪ್ರದೇಶದಲ್ಲಿ, ತನಗೆ ಶ್ರೋತೃಗಳಾಗಿ, ಪ್ರೇಕ್ಷಕರಾಗಿ ದೊರಕಿರುವವರ ಮುಂದೆ ಆ ಸೆಲೆಬ್ರಿಟಿಯು ನಿಮ್ಮೊಡನಿದ್ದಾಗ ಅದೆಷ್ಟು ದೀನನಾಗಿದ್ದನು, ಎಷ್ಟು ನಿಮ್ಮಿಂದ ಪಡೆದಿದ್ದನೆಂದು ವಿವರ ಒಪ್ಪಿಸುವ ಮೂಲಕ ತನ್ನ ಉತ್ಕಟ ಬಯಕೆಯನ್ನು ತೃಪ್ತಿಗೊಳಿಸಿಕೊಳ್ಳಲು ಯತ್ನಿಸುತ್ತದೆ.
ಅವನ ಅಹಂಕಾರವನ್ನು ಖಂಡಿಸಲು ನಿಮ್ಮ ಅಹಂಕಾರ ವಿಜೃಂಭಿಸುತ್ತದೆ. ಇದೇ ಆತ್ಮರತಿಯ ಲೀಲೆ. ನಿಮಗೆ ಆಗ ಅವನು ಜೀವಂತವಿದ್ದ. ಈಗ ಅವನೆಷ್ಟೇ ವೈಭವದಲ್ಲಿ ಮೆರೆಯುತ್ತಿದ್ದರೂ ಸಾಗುತ್ತಿರುವ ಅಲಂಕರಿಸಲ್ಪಟ್ಟಿರುವ ಶವ! ಅವನಿಗೆ ನೀವು ಹಳೆಯ ಕೊಳೆ!

ನಾನೇನು ಖಾಲಿಪೀಲಿಯಲ್ಲ

ಆತ್ಮರತಿಯ ಸೆಲೆಬ್ರಿಟಿಯ ಶೋಕೇಸಿನಲ್ಲಿರುವ ಪ್ರದರ್ಶನಗಳ ಲೀಲೆ ಅಪಾರ. ಅವರು ಕಲಾವಿದರೇ. ಆದರೆ ಇತರ ಸ್ಟಾರ್ ಕಲಾವಿದರಿಗೆ ದೊರಕುವಷ್ಟು ಅವಕಾಶಗಳು ದೊರಕುವುದಿಲ್ಲ. ಅವರನ್ನು ಕರೆಯುವಷ್ಟು ಇವರನ್ನು ಸಮಾರಂಭಗಳಿಗೆ ಕರೆಯುವುದಿಲ್ಲ. ಆದರೂ ನೀವೇನಾದರೂ ಕಾರ್ಯಕ್ರಮಕ್ಕೋ ಅಥವಾ ನಿಮ್ಮದ್ಯಾವುದಾದರೂ ಯೋಜನೆಗೋ ಅವರಿಗೆ ಕರೆ ಮಾಡಿದರೆ, ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಖಾಲಿ ಕುಳಿತಿದ್ದೇನೆ ಎಂದು ಹೇಳಲು ಅವರಿಗೆ ಆಗುವುದಿಲ್ಲ. ಡೈರಿ ನೋಡುತ್ತೇನೆ. ನಂತರ ಹೇಳುತ್ತೇನೆ. ನನಗೆ ಯಾವುದೋ ಕಾರ್ಯಕ್ರಮವಿದೆ ಅನಿಸುತ್ತದೆ. ಆಗುವುದಿಲ್ಲ ಅನಿಸುತ್ತದೆ. ಯಾವುದಕ್ಕೂ ಆ ಕಾರ್ಯಕ್ರಮದ ಆಯೋಜಕರಿಗೆ ಕರೆ ಮಾಡಿ ತಿಳಿದು ನಂತರ ತಿಳಿಸುವೆ. ಇದೆಲ್ಲಾ ಅವರ ಕೆಟ್ಟ ಬುದ್ಧಿಯ, ಹೀನ ಮನಸ್ಥಿತಿಯ ವರ್ತನೆಗಳು ಎಂದು ಖಂಡಿತ ಅಂದುಕೊಂಡು ಅವರನ್ನು ಖಂಡಿಸಬೇಡಿ ಅಥವಾ ನಿರಾಕರಿಸಬೇಡಿ. ಪಾಪ, ಅವರ ಅರಿವಿಗೇ ಎಟುಕದಂತೆ ವರ್ತಿಸಲು ಪ್ರಚೋದಿಸುವ ಅರಿಮೆಯ ಪ್ರಭಾವಗಳು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending