ಅಂತರಂಗ
ಅರಿಮೆಯ ಅರಿವಿರಲಿ-11: ಆತ್ಮವೈಭವ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/04/self_glory_suddidina.jpg&description=ಅರಿಮೆಯ ಅರಿವಿರಲಿ-11: ಆತ್ಮವೈಭವ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/04/self_glory_suddidina.jpg&description=ಅರಿಮೆಯ ಅರಿವಿರಲಿ-11: ಆತ್ಮವೈಭವ', 'pinterestShare', 'width=750,height=350'); return false;" title="Pin This Post">
- ಯೋಗೇಶ್ ಮಾಸ್ಟರ್
ಆತ್ಮರತಿ ಅಥವಾ Narcissistic Personality ಒಮ್ಮೆ ಹೊಕ್ಕಿಕೊಂಡಿತೆಂದರೆ ಅದರಿಂದ ಬಿಡುಗಡೆ ಇಲ್ಲ ಅಂತೇನಿಲ್ಲ. ಇದು ಅನುವಂಶೀಯವಾದ ಸಮಸ್ಯೆಯೇನಲ್ಲ. ಜೊತೆಗೆ ಇದು ಸಾಂಕ್ರಾಮಿಕವೂ ಅಲ್ಲ. ಮನೋರೋಗಗಳಲ್ಲಿ ಕೆಲವು ಸಾಂಕ್ರಾಮಿಕವಾಗುವುದಿವೆ. ಒಬ್ಬರ ವರ್ತನೆ ಮತ್ತು ನಡವಳಿಕೆ ಅಥವಾ ಬಲವಾದ ಪ್ರಭಾವಗಳು ಇನ್ನೊಬ್ಬರಿಗೂ ಅಂತಹ ವರ್ತನೆಯನ್ನು ಪ್ರೇರೇಪಿಸುವಂತಹ ಸೋಂಕು ಇರುತ್ತದೆ. ಒಬ್ಬ ದುರ್ಬಲ ಮನಸ್ಕನು ತನಗಾಗಿರುವ ಭಯ ಅಥವಾ ಇನ್ನಿತರ ನಕಾರಾತ್ಮಕ ಭಾವವನ್ನು ಪದೇಪದೇ ವ್ಯಕ್ತಪಡಿಸುತ್ತಾ ಇನ್ನೊಬ್ಬ ದುರ್ಬಲ ಮನಸ್ಕನಿಗೆ ಅದನ್ನು ಸೋಂಕಿಸಬಹುದು.
ಇದು ಆ ಬಗೆಯದೂ ಅಲ್ಲ. ನಿಜ ಹೇಳಬೇಕೆಂದರೆ ನಾರ್ಸಿಸಂ ಅಥವಾ ಆತ್ಮರತಿಯರಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಅದು ಎಷ್ಟಿರಬೇಕೋ ಅಷ್ಟೇ ಇದ್ದರೆ ಆರೋಗ್ಯಕರ ಮನಸ್ಥಿತಿ ಎಂದೂ, ಮಿತಿಮೀರಿದರೆ ಅನಾರೋಗ್ಯಕರ ಮನಸ್ಥಿತಿ ಎಂದೂ ತಿಳಿಯಬೇಕು. ಒಬ್ಬ ವ್ಯಕ್ತಿಯ ಸಾಧಾರಣ ಬೆಳವಣಿಗೆಗೆ ಆತ್ಮರತಿಯೆಂಬುದು ಬಹಳ ಸಾಮಾನ್ಯವೂ, ಕೆಲವೊಮ್ಮೆ ಅಗತ್ಯವೂ ಆಗಿರುತ್ತದೆ, ಹಸ್ತಮೈಥುನದಂತೆ.
ಸಿಗ್ಮಂಡ್ ಫ್ರಾಯ್ಡ್ ಆತ್ಮರತಿಗೆ ಕೊಡುವ ಒಂದು ಸಾಧಾರಣ ಉದಾಹರಣೆ ಏನೆಂದರೆ, “ಗಂಡ ಹೆಂಡತಿ ಮಗುವನ್ನು ಹೆರುವುದು,” ತಮ್ಮ ತದ್ರೂಪುಗಳನ್ನು ರೂಪಿಸುವುದು ಅಥವಾ ವಂಶ ಮುಂದುವರಿಸುವುದೂ ಕೂಡಾ ಆತ್ಮರತಿಯೇ. ಇರಬಹುದು. ಅರಿವಿಗೆಟುಕದ ಅನೇಕ ಅರಿಮೆಗಳು ನಮ್ಮಲ್ಲಿ ಅಂತರ್ಗತವಾಗಿರುತ್ತವೆ. ಹಾಗಿರುವಾಗ, ಅಯ್ಯೋ ನನಗೆ ಇಂತದ್ದೊಂದು ಅರಿಮೆ ಇದೆ, ಕಾಂಪ್ಲೆಕ್ಸ್ ಕಾಡುತ್ತಿದೆ ಎಂದು ರೋಗಗ್ರಸ್ತ ಮನೋಭಾವವನ್ನು ಹೊಂದುವ ಬದಲು, ‘ಇದಕ್ಕೆ ಈ ಹೆಸರಿನಿಂದ ಕರೆಯುತ್ತಾರೆ’ ಎಂಬು ತಿಳುವಳಿಕೆಯನ್ನು ಹೊಂದುವುದು ಮತ್ತು ಮಿತಿ ಮೀರಲು ಹಾತೊರೆವ ಅರಿಮೆಯನ್ನು ಅರಿವಿನಿಂದ ಅಂಕೆಯಲ್ಲಿಡುವುದು ಜಾಣನಾದವನ ಲಕ್ಷಣ.
ನಾನು ಸರ್ವಶಕ್ತ ಸರ್ವಾಂತರ್ಯಾಮಿ
ಮನುಷ್ಯನಿಗೆ ಮಗುವಾಗಿರುವಾಗಲೇ ತನ್ನ ದೃಷ್ಟಿಯ ಮಿತಿಯಲ್ಲಿರುವ ಇಲ್ಲದಿರುವ ಬೇಕಿರುವ ಬೇಡದಿರುವ ಎಲ್ಲದರ ಮೇಲೆ ತನ್ನ ಒಡೆತನ ಅಥವಾ ಯಜಮಾನಿಕೆ ಅಥವಾ ಅಧಿಕಾರ ಇರಬೇಕೆಂದೂ ಆಸೆ ಇರುತ್ತದೆ.ತಾನೊಬ್ಬ ಸರ್ವಶಕ್ತ ಮತ್ತು ಸರ್ವಾಂತರ್ಯಾಮಿಯಾಗಿರಬೇಕೆಂಬ ಆತ್ಮವೈಭವದ ಪರಿಕಲ್ಪನೆ ಇರುತ್ತದೆ. ಮಗುವಿಗೆ ಆಲೋಚನೆಗಳು ಮೂಡತೊಡಗುವ ವಯಸ್ಸಿನಲ್ಲಿಯೇ, ತನ್ನ ಸುತ್ತಲ ವಿಷಯವಸ್ತುಗಳನ್ನು ಗುರುತಿಸುವಷ್ಟಾಗುತ್ತಿದ್ದಂತೆ, ಅದರಲ್ಲಿಯೂ ತನಗೆ ಯಾವುದರಿಂದ ಆನಂದ ಮತ್ತು ಸುಖ ಸಿಗುತ್ತದೆ ಎಂಬ ಅರಿವಾಗುತ್ತಿದ್ದಂತೆಯೇ ಮನಸ್ಸಿನಲ್ಲಿ ಕನಸುಗಳು ಗರಿಗೆದರತೊಡಗುತ್ತದೆ.
ಅವರ ಏಕಾಂತಗಳಲ್ಲಿ, ಒಬ್ಬರೇ ಆಡಿಕೊಳ್ಳುವ, ತಮ್ಮೊಂದಿಗೆ ತಾವೇ ಇರುವಂತಹ ಎಲ್ಲಾ ಅವಕಾಶಗಳಲ್ಲಿ ಅವರು ಕನವರಿಸುವುದು ತಮ್ಮ ಆತ್ಮವೈಭವವನ್ನೇ. ಇದನ್ನು ಮನಶಾಸ್ತ್ರದಲ್ಲಿ ಮೆಗಲೋಮೇನಿಯಾಕ್ ಆಮ್ನಿಪೇಟೆನ್ಸ್ ಆಲೋಚನೆಗಳು ಎನ್ನುತ್ತಾರೆ. ಸಾಲದಕ್ಕೆ ಕೆಲವು ಪೋಷಕರು, ಕೆಲವು ಶಿಕ್ಷಕರು, ಮಗುವನ್ನು ಪ್ರೀತಿಸುವವರು ಈ ಆಲೋಚನೆಗಳಿಗೆ, ಅವರು ಕನವರಿಸುವ ಕನಸುಗಳಿಗೆ ಕಸುವು ನೀಡುವಂತೆ ಪ್ರೇರಣೆಗಳನ್ನು ನೀಡುತ್ತಾರೆ.
ಪ್ರೋತ್ಸಾಹಿಸುತ್ತಾರೆ. ಕೆಲವು ಪೋಷಕರಂತೂ ತಾವೆಂದಿಗೂ ಸೇರಲಾಗದ ಗುರಿಯ ದಾರಿಯನ್ನು ಅವರ ಕಡೆಗೆ ತಿರುಗಿಸಿಬಿಡುತ್ತಾರೆ. ಮಕ್ಕಳಲ್ಲಿ ಅರಿಮೆಗಳನ್ನು ಬಲಗೊಳಿಸುವುದು ಸಾಮಾನ್ಯವಾಗಿ ಕುಟುಂಬವೇ. ಮಕ್ಕಳಲ್ಲಿರುವ ಮೌಲ್ಯವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅತ್ಯುತ್ಪ್ರೇಕ್ಷೆಯಿಂದ ವರ್ಣಿಸುವುದು. ಹೊಗಳುವುದು. ನಮ್ಮ ಮಗು ಬಿಟ್ಟಾರೆ ಈ ಜಗತ್ತಿನಲ್ಲಿ ಇಂತಹ ಮಕ್ಕಳೇ ಇಲ್ಲ ಎನ್ನುವಂತೆ ಕೊಂಡಾಡುವುದು; ಇವೆಲ್ಲಾ ಸಹಜವಾಗಿಯೇ ಮಕ್ಕಳಲ್ಲಿ ಇರುವ ಆತ್ಮವೈಭವವನ್ನು ಆತ್ಮರತಿಯ ಸಮಸ್ಯೆಯನ್ನಾಗಿ ಪರಿವರ್ತಿಸುತ್ತದೆ. ಒಂದು ವೇಳೆ ಪೋಷಕರು ಅಥವಾ ಮನೆಯವರು ಅಥವಾ ಸಾಮಾಜಿಕ ಪರಿಸರದಲ್ಲಿರುವವರು ಮಗುವಿಗೆ ಉಬ್ಬಿಸುವ ಬದಲು ಕುಗ್ಗಿಸಿದರೆ, ಮಕ್ಕಳು ಕೀಳರಿಮೆಯಲ್ಲಿ ಬಳಲುತ್ತಾರೆ.
ವಿರೂಪದರಿಮೆ
ಆತ್ಮರತಿಗೆ ವಿರುದ್ಧವಾದಂತಹ ಇನ್ನೊಂದು ಸಮಸ್ಯೆ ಇದೆ, ಅದು ವಿರೂಪದರಿಮೆಯ ಸಮಸ್ಯೆ Body dysmorphic disorder (BDD. ಇವರ ಸಮಸ್ಯೆ ಏನೆಂದರೆ, ತಮ್ಮ ಮುಖದಲ್ಲಿ, ದೇಹದಲ್ಲಿ, ನಡೆಯಲ್ಲಿ, ನಿಲುವಲ್ಲಿ, ಭಂಗಿಯಲ್ಲಿ; ಎಲ್ಲದರಲ್ಲೂ ಏನೋ ಒಂದು ಸಮಸ್ಯೆ ಇದೆ ಎಂದು ಕೊರಗುತ್ತಿರುತ್ತಾರೆ. ತಾನು ಚೆನ್ನಾಗಿಲ್ಲ. ಇತರರು ಇದ್ದಂತೆ ತಾನು ಸುರೂಪವಾಗಿಲ್ಲ. ನನ್ನ ಮೂಗು ವಕ್ರ, ಕೆನ್ನೆ ಚಪ್ಪೆ, ಮೂತಿ ಉದ್ದ, ಹಲ್ಲು ವಕ್ರ, ಮುಖದಲ್ಲಿ ಲಕ್ಷಣವಿಲ್ಲ; ಹೀಗೆ, ಒಂದಲ್ಲಾ ಒಂದು ವಿರೂಪವನ್ನು ತಮ್ಮಲ್ಲಿ ಗುರುತಿಸಿಕೊಂಡು ಕೀಳರಿಮೆಯಲ್ಲಿ ಬಳಲುತ್ತಿರುತ್ತಾರೆ. ತಾವು ಕಪ್ಪು ಎಂಬ ಅರಿಮೆ, ತಲೆಯಲ್ಲಿ ಕೂದಲಿಲ್ಲ ಎಂಬ ಕೊರಗು; ತಾನು ಸಣ್ಣಗಿದ್ದೇನೆ ಅಥವಾ ದಪ್ಪಗಿದ್ದೇನೆ; ಯಾವುದಾದರೂ ಅವರ ತಲೆಯಲ್ಲಿ ಕೂತಿರುತ್ತದೆ. ಹಲ್ಲು ಉಬ್ಬಿದೆ ಎಂದು ಮನಸೋಯಿಚ್ಚೆ ನಗಲಾರರು. ಹಲ್ಲು ಕಂಡವರು ಆಡಿಕೊಳ್ಳುತ್ತಾರೆ, ಅಪಹಾಸ್ಯ ಮಾಡುತ್ತಾರೆ ಎಂಬ ಹಿಂಜರಿಕೆ ಅವರಿಗೆ.
ಸಾಲದಕ್ಕೆ ನಮ್ಮ ಸಮಾಜವೂ ಸೌಂದರ್ಯವೆಂದರೆ ಹೀಗೆ ಎಂಬ ಮಾನದಂಡಗಳನ್ನು ಬೇರೆ ಇಟ್ಟಿದೆಯಲ್ಲಾ. ಹುಡುಗಿ ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು. “ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ, ನಾಸಿಕವು ಸಂಪಿಗೆಯಂತೆ, ನೀ ನಗಲು ಹೂಬಿರಿದಂತೆ,” ಎಂದು ಸೌಂದರ್ಯಕ್ಕೊಂದು ಮಾನದಂಡವಿಟ್ಟು, ಆ ಸುರೂಪದ ಮಾನದಂಡದ ವ್ಯಾಪ್ತಿಯಲ್ಲಿ ಬರದೇ ಇರುವವರು ತಮ್ಮನ್ನು ಕುರೂಪವೆಂದೋ, ವಿರೂಪವೆಂದೋ ಅಂದುಕೊಳ್ಳಬೇಕು ತಾನೆ? ಕತೆ, ಕಾವ್ಯ ಮತ್ತು ಕಾದಂಬರಿಗಳಂತಹ ಸಾಹಿತ್ಯ, ಸಂಗೀತ, ಸಿನಿಮಾಗಳು ಸಾಕಷ್ಟು ಪ್ರಮಾಣದಲ್ಲಿ ಅರಿಮೆಗಳನ್ನು ಗಟ್ಟಿಗೊಳಿಸುವ ಕಾಣ್ಕೆಗಳನ್ನು ನೀಡುತ್ತವೆ.
ಸುಮ್ಮನೆ ಆಗಲೋ ಈಗಲೋ ಗಮನಿಸಿ, ಬೆಳ್ಳಗಿದ್ದಾನೆಂದೋ, ದಷ್ಟಪುಷ್ಟವಾಗಿದ್ದಾನೆಂದೋ, ಎತ್ತರಕ್ಕಿದ್ದಾನೆಂದೋ, ಅಥವಾ ಇವೆಲ್ಲವೂ ಇದೆಯೆಂದೋ ಆತನಿಗೆ “ನೀನು ಹೀರೋ, ಒಳ್ಳೆ ಹೀರೋ ಇದ್ದಂಗಿದ್ದೀಯ. ಯಾಕೆ ಸಿನಿಮಾಗೆ ಪ್ರಯತ್ನ ಮಾಡಬಾರದು” ಎಂದೇ ಹೇಳುತ್ತಾರೆ.
ಅವರೇನೂ ಸುಮ್ಮನೆ ಹೇಳುತ್ತಿಲ್ಲ. ಅವರಲ್ಲಿ ಒಂದು ಸ್ವಂತ ಆಲೋಚನೆಯೊಂದು ಹುಟ್ಟಿ ಅದಕ್ಕೆ ಸರಿಯಾಗಿ ಅವರು ಮಾತಾಡುತ್ತಿಲ್ಲ. ಸಾಮಾನ್ಯವಾಗಿ ಸಮಾಜದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯವನ್ನು ತಮ್ಮದಾಗಿಸಿಕೊಂಡು ಅಭಿವ್ಯಕ್ತಪಡಿಸುತ್ತಿರುತ್ತಾರೆ.
ಅರಿಮೆಗಳ ಬಂಡವಾಳ ಮತ್ತು ವ್ಯಾಪಾರ
ಈ ಅರಿಮೆಗಳು ಎಷ್ಟೋ ಜನಕ್ಕೆ ಬಂಡವಾಳ. ಫೇರ್ ಆಗಿ, ಲವ್ಲೀ ಆಗಿ ಕಾಣಿರಿ ಎಂದು ಫೇರ್ನೆಸ್ ಕ್ರೀಂಗೆ ಬಂಡವಾಳ ಹಾಕಿದವರಿಗೆ ಲಾಭವಾಗುತ್ತಿರುವುದು ಯಾವ ಅರಿಮೆಯಿಂದ? ನಾವು ಧಾರ್ಮಿಕ ಮೌಢ್ಯಗಳನ್ನು ಧಿಕ್ಕರಿಸುತ್ತಾ ಬಂಡವಾಳದಾರರು ಪೋಷಿಸುವ ಮೌಢ್ಯಗಳನ್ನು ಗಮನಿಸುವಲ್ಲಿ ಹಿಂದುಳಿದುಬಿಡುತ್ತೇವೆ. ಹದಿನೈದು ದಿನಗಳ ಮುಖದ ಕಾಂತಿ ಇಂತಿರುವುದು ಅಂತಾಗಿಬಿಡುತ್ತದೆ ಎಂಬ ಬಣ್ಣದ ಮಾಪನದ ಪಟ್ಟಿಯನ್ನು ಹೊಂದಿರುವ ಮುಖಕಾಂತಿಯ ಕ್ರೀಮನ್ನು ವರ್ಷಾನು ವರ್ಷಗಟ್ಟಲೆ ಬಳಸುತ್ತಲೇ ಇದ್ದರೂ ‘ಈ ಕ್ರೀಮಿನವರು ಸುಳ್ಳುಗಾರ. ಈ ಕ್ರಿಮಿಂದ ನನಗೆ ಯಾವ ಮುಖಕಾಂತಿಯೂ ಬಂದಿಲ್ಲ’ ಎಂದು ಧಿಕ್ಕರಿಸದೇ ಇರುವಷ್ಟು ಕ್ರೀಮಿನ ವ್ಯಸನವು ಅಂಟಿರುತ್ತದೆ.
ಬಂಡವಾಳದಾರನಿಗೆ ನಾವು ವ್ಯಸನಕ್ಕಂಟುವುದೇ ಬೇಕಾಗಿರುವುದು. ಇಂದು ಸಮಸ್ಯೆ ಇದೆ ಎಂದು ಕೊಂಡು ನಾಳೆ ವಾಸಿಯಾದ ಮೇಲೆ ಬೇಡದೇ ಸುಮ್ಮನಾಗಿಬಿಡುವಂತಹ ಯಾವುದೋ ರೋಗದ ಔಷಧಿಯಲ್ಲ ಇದು. ಅರಿಮೆಯ ವ್ಯಸನ ಹೋಗದು, ಪರಿಹಾರ ಲಭಿಸದು ಎಂಬ ನಂಬಿಕೆ ಅವರದು.
ಬಂಡವಾಳದಾರರು ಅದೆಷ್ಟು ಅರಿಮೆಯನ್ನು ಗಟ್ಟಿಗೊಳಿಸುತ್ತಾರೆಂದರೆ, ನೀವು ಹಾಡುವ ಸಾಮರ್ಥ್ಯಕ್ಕೂ, ಅದಕ್ಕೆ ಬೇಕಾದ ಆತ್ಮವಿಶ್ವಾಸಕ್ಕೂ ನಿಮ್ಮ ಕಪ್ಪುತ್ವಚೆಯನ್ನು ತಗುಲಿಹಾಕುತ್ತಾರೆ. ಗೌರವವರ್ಣಕ್ಕೆ ನೀವು ತಿರುಗಿದ ಮೇಲೆ ಆತ್ಮವಿಶ್ವಾಸದಿಂದ ಹಾಡುತ್ತೀರಿ ಎನ್ನುತ್ತಾರೆ. ಅದನ್ನು ಒಪ್ಪಿ ಆ ವಸ್ತುಗಳನ್ನು ಕೊಳ್ಳುತ್ತಾರೆ. ಸಣ್ಣಗಿರುವವರಿಗೆ ದಪ್ಪಗಾಗಲು, ದಪ್ಪಗಿರುವವರಿಗೆ ಸಣ್ಣಗಾಗಲು, ಕುಳ್ಳಗಿರುವವರಿಗೆ ಉದ್ದವಾಗಲು, ತಲೆಯಲ್ಲಿ ಕಡಿಮೆ ಕೂದಲಿರುವವರಿಗೆ ಉದ್ದ ಕೂದಲು ಬರಲು; ಅಷ್ಟೇಕೆ ಮೊಲೆಗಳ ಗಾತ್ರವನ್ನು ಹೆಚ್ಚಿಸಲು, ನಿಮ್ಮ ಶಿಶ್ನವು ಚಿಕ್ಕದಾಗಿದ್ದರೆ ಅದನ್ನು ಉದ್ದ ಮಾಡಲು. ನಿಮ್ಮ ಸಂಭೋಗದ ಸಮಯವನ್ನು ರಾತ್ರಿಯಿಡೀ ಹಿಗ್ಗಿಸಲು; ಹೀಗೆ ಅರಿಮೆಗಳು ವ್ಯಾಪಾರಕ್ಕೆ ಬಂಡವಾಳಗಳೂ ಕೂಡಾ.
ಮೊಲೆಗಳು ಚಿಕ್ಕದಿರಲಿ, ದೊಡ್ಡದಿರಲಿ, ಅವುಗಳು ಆರೋಗ್ಯವಾಗಿದ್ದರೆ ಸಾಲದೇ? ಶಿಶ್ನವು ಉದ್ದಕ್ಕಿರಲಿ, ಸಣ್ಣಕ್ಕಿರಲಿ; ಆರೋಗ್ಯವಾಗಿ ಅದು ಮಾಡುವ ಕೆಲಸ ಮಾಡಿದರಾಗದೇ? ಹೋಗಲಿ ಅದು ಅತ್ಯಂತ ಆಕರ್ಷಕವಾಗಿದ್ದರೂ, ಇಲ್ಲದಿದ್ದರೂ ಏನು? ಅದೇನು ಮುಖದಲ್ಲಿ ಮೂಗಿರುವ ಜಾಗದಲ್ಲಿದೆಯೇ ವಡವೆಯೊಂದರಿಂದ ಅಲಂಕರಿಸಿಕೊಂಡು ಮೆರವಣಿಗೆ ಹೋಗಲು? ಆದರೆ ಅರಿಮೆಯ ಪ್ರಭಾವವೇ ಅಂತಹದ್ದು. ಆತ್ಮರತಿಯೇ ಮೊದಲಾದ ಅರಿಮೆ ಎಂಬುದು ಮನುಷ್ಯನ ಪ್ರದರ್ಶನದ ಆಯಾಮಗಳಲ್ಲಿ ಮಾತ್ರವಲ್ಲ ಗುಪ್ತನೆಲೆಗಳಲ್ಲಿ, ಒಳಗಿನ ನೆರಳುಗಳಲ್ಲೂ ಒಳಗೊಳಗೇ ಕಾಡುತ್ತಿರುತ್ತವೆ.
ಶಿಶ್ನದ ಗಾತ್ರವೇ ಮೊದಲಾದ ಲೈಂಗಿಕತೆಯ ಕೀಳರಿಮೆಗಳಿಂದ ಬಹಳಲುವ ಜನರ ಅದೆಷ್ಟು ಸಾಮರ್ಥ್ಯ ಮತ್ತು ಪ್ರತಿಭೆಗಳು ಹಾಗೆಯೇ ಸೊರಗಿ ಹೋಗಿವೆಯೋ ಕಂಡವರಾರು? ಲೆಕ್ಕವಿಟ್ಟವರಾರು? ಮೊದಲು ಇವನ್ನು ರೂಪಿಸಿದವರು ಯಾರು? ಯಾರಾದರಾಗಲಿ, ಹೇಗಾದರಾಗಲಿ; ಇಂತಹ ಸೋಂಕುಗಳಿಂದ ನಾವು ನಮ್ಮನ್ನೂ ರಕ್ಷಿಸಿಕೊಳ್ಳಬೇಕು, ಸಮಾಜವನ್ನೂ ರಕ್ಷಿಸಬೇಕು. ಖಂಡಿತವಾಗಿ ಅದು ಪ್ರಾರಂಭವಾಗಬೇಕಾಗಿರುವುದು ‘ನನ್ನಿಂದಲೇ’.
ಅಭಿಪ್ರಾಯಗಳೂ ಕೂಡಾ ಸೋಂಕುಗಳಂತೆ ವರ್ತಿಸುತ್ತಾ ಅರಿಮೆಗಳಿಗೆ ಕಾರಣವಾಗುತ್ತದೆ.
ವಿರೂಪದ ಅರಿಮೆಯು ತನ್ನ ಮೌಲ್ಯವನ್ನು ತಾನೇ ಗ್ರಹಿಸುವುದಕ್ಕೆ ಬಿಡುವುದಿಲ್ಲ. ತನಗಿರುವ ಸಾಮರ್ಥ್ಯದ ಸಾಧ್ಯತೆಗಳನ್ನು ಹುಡುಕಿಕೊಳ್ಳಲು ಬಿಡುವುದಿಲ್ಲ. ನನ್ನಂತವರಿಗೆ ಯಾರು ಹೆಣ್ಣು ಕೊಡ್ತಾರೆ? ನನ್ನ ಮುಖಕ್ಕೆ ಯಾರು ಕೆಲಸ ಕೊಡ್ತಾರೆ? ನನ್ನ ಯಾರೂ ಮೂಸುವವರಿಲ್ಲ? ಇವುಗಳ ಅವರ ಸಾಧಾರಣ ಮಾತುಗಳು.
ಮಹಾತ್ಮನ ಆತ್ಮ
ನಾನು ಅಂದರೆ ಯಾರು? ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡ್ತೇನೆ. ನನ್ನ ಮಾತೇ ನಡೆಯಬೇಕು ಎಂಬ ಅಹಂಕಾರದ ಆತ್ಮರತಿಯಂತೆ, ಇನ್ನೊಂದು ವಿನಯಶೀಲ, ಮಾನವೀಯ ಆತ್ಮರತಿಯೂ ಕೂಡಾ ಅಸ್ತಿತ್ವದಲ್ಲಿದೆ. ನಾನಲ್ಲದೇ ಇನ್ಯಾರು ನೋಡಬೇಕು? ನಾವೇ ಕಾಪಾಡಬೇಕು. ಅವರು ಏನೇ ಹೇಳಲಿ, ನಾನು ಸಮಾಧಾನವಾಗಿದ್ದು ಸನ್ನಿವೇಶವನ್ನು ನಿಯಂತ್ರಿಸಬೇಕು. ಅವನಿಗೆ ಗೊತ್ತಾಗಲ್ಲ ಅಂದರೆ ನನಗೆ ಗೊತ್ತಾಗಲ್ವಾ? ಇದೂ ಕೂಡಾ ಆತ್ಮರತಿಯೇ.
ಆದರೆ ಆಗ್ರಹಪೂರ್ವಕವಾಗಿರುವುದಿಲ್ಲ. ಆವೇಶಭರಿತವಾಗಿರುವುದಿಲ್ಲ. ಈ ಬಗೆಯ ಮೃದುವಾದ ಮತ್ತು ವಿನಯಶೀಲವಾದ ಆತ್ಮರತಿಯ ಮದನರು ಮಹಾತ್ಮರಾಗುತ್ತಾರೆ. ಜನರೂ ಮತ್ತು ಸಮಾಜವೂ ಅವರು ಪ್ರದರ್ಶಿಸುತ್ತಿರುವ ಪ್ರೇಮ, ಪ್ರೀತಿ, ಕಳಕಳಿ ಮತ್ತು ಸೇವೆಗಳನ್ನು ನೋಡುತ್ತಾ, ಅದರಲ್ಲೂ ತಾವು ಹಿಂಜರಿಯುವ ಕ್ಷೇತ್ರಗಳಲ್ಲಿ ಅಸಹ್ಯ ಪಡದೇ, ಧೈರ್ಯವಾಗಿ ಸೇವೆಗಳನ್ನು ಮಾಡುವ ಈ ಮೃದು ಆತ್ಮರತಿಯವರು ಸ್ತುತಿಗೆ ಅರ್ಹವಾಗುತ್ತಾರೆ.
ಪರೋಪಕಾರಾರ್ಥೇಮಿದಂ ಶರೀರಂ ಎಂದು ನಸುನಗುತ್ತಾ ಅವರಿವರಿಗೆ ಸೇವೆ ಸಲ್ಲಿಸುತ್ತಾ, ಬಡವರನ್ನು ಹುಡುಕಿ, ಅನಾಥಾಲಯಗಳನ್ನು ಹೊಕ್ಕು ತಮ್ಮ ಆ ಒಂದು ದಿನದ ಸೇವೆಯನ್ನು ಶಾಶ್ವತ ಫೋಟೋ ಫ್ರೇಮಿನಲ್ಲಿ ಬಂಧಿಸಿ, ಫೇಸ್ಬುಕ್ ವಾಟ್ಸಪ್ಪುಗಳಲ್ಲಿ ಪ್ರಚಾರಪಡಿಸುವ ಆತ್ಮರತಿಯೂ ಕೂಡಾ ನಾರ್ಸಿಸಮ್ ಅರಿಮೆಯ ಭಾಗವೇ.
ಈ ವಿವಿಧ ಬಗೆಯ ಆತ್ಮರತಿಗಳನ್ನು, ಅಹಂಕಾರಗಳನ್ನು, ಆತ್ಮಕೇಂದ್ರಿತ ಆಲೋಚನೆಗಳನ್ನು ತಿಳಿದುಕೊಂಡರೆ ಒಬ್ಬ ಯಾವುದರಲ್ಲೇ ಬಂಧಿತನಾಗಿದ್ದರೆ ಅದರಿಂದ ಮುಕ್ತನಾಗಬಹುದು. ತಿಳಿದುಕೊಳ್ಳೋಣ ಮುಂದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ7 days agoಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ
-
ದಿನದ ಸುದ್ದಿ7 days agoಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ
-
ದಿನದ ಸುದ್ದಿ4 days agoಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ
-
ದಿನದ ಸುದ್ದಿ4 days agoಎಸ್ಎಸ್ಎಲ್ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ



