Connect with us

ಅಂತರಂಗ

ಅರಿಮೆಯ ಅರಿವಿರಲಿ-11: ಆತ್ಮವೈಭವ

Published

on

  • ಯೋಗೇಶ್ ಮಾಸ್ಟರ್

ತ್ಮರತಿ ಅಥವಾ Narcissistic Personality ಒಮ್ಮೆ ಹೊಕ್ಕಿಕೊಂಡಿತೆಂದರೆ ಅದರಿಂದ ಬಿಡುಗಡೆ ಇಲ್ಲ ಅಂತೇನಿಲ್ಲ. ಇದು ಅನುವಂಶೀಯವಾದ ಸಮಸ್ಯೆಯೇನಲ್ಲ. ಜೊತೆಗೆ ಇದು ಸಾಂಕ್ರಾಮಿಕವೂ ಅಲ್ಲ. ಮನೋರೋಗಗಳಲ್ಲಿ ಕೆಲವು ಸಾಂಕ್ರಾಮಿಕವಾಗುವುದಿವೆ. ಒಬ್ಬರ ವರ್ತನೆ ಮತ್ತು ನಡವಳಿಕೆ ಅಥವಾ ಬಲವಾದ ಪ್ರಭಾವಗಳು ಇನ್ನೊಬ್ಬರಿಗೂ ಅಂತಹ ವರ್ತನೆಯನ್ನು ಪ್ರೇರೇಪಿಸುವಂತಹ ಸೋಂಕು ಇರುತ್ತದೆ. ಒಬ್ಬ ದುರ್ಬಲ ಮನಸ್ಕನು ತನಗಾಗಿರುವ ಭಯ ಅಥವಾ ಇನ್ನಿತರ ನಕಾರಾತ್ಮಕ ಭಾವವನ್ನು ಪದೇಪದೇ ವ್ಯಕ್ತಪಡಿಸುತ್ತಾ ಇನ್ನೊಬ್ಬ ದುರ್ಬಲ ಮನಸ್ಕನಿಗೆ ಅದನ್ನು ಸೋಂಕಿಸಬಹುದು.

ಇದು ಆ ಬಗೆಯದೂ ಅಲ್ಲ. ನಿಜ ಹೇಳಬೇಕೆಂದರೆ ನಾರ್ಸಿಸಂ ಅಥವಾ ಆತ್ಮರತಿಯರಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಅದು ಎಷ್ಟಿರಬೇಕೋ ಅಷ್ಟೇ ಇದ್ದರೆ ಆರೋಗ್ಯಕರ ಮನಸ್ಥಿತಿ ಎಂದೂ, ಮಿತಿಮೀರಿದರೆ ಅನಾರೋಗ್ಯಕರ ಮನಸ್ಥಿತಿ ಎಂದೂ ತಿಳಿಯಬೇಕು. ಒಬ್ಬ ವ್ಯಕ್ತಿಯ ಸಾಧಾರಣ ಬೆಳವಣಿಗೆಗೆ ಆತ್ಮರತಿಯೆಂಬುದು ಬಹಳ ಸಾಮಾನ್ಯವೂ, ಕೆಲವೊಮ್ಮೆ ಅಗತ್ಯವೂ ಆಗಿರುತ್ತದೆ, ಹಸ್ತಮೈಥುನದಂತೆ.

ಸಿಗ್ಮಂಡ್ ಫ್ರಾಯ್ಡ್ ಆತ್ಮರತಿಗೆ ಕೊಡುವ ಒಂದು ಸಾಧಾರಣ ಉದಾಹರಣೆ ಏನೆಂದರೆ, “ಗಂಡ ಹೆಂಡತಿ ಮಗುವನ್ನು ಹೆರುವುದು,” ತಮ್ಮ ತದ್ರೂಪುಗಳನ್ನು ರೂಪಿಸುವುದು ಅಥವಾ ವಂಶ ಮುಂದುವರಿಸುವುದೂ ಕೂಡಾ ಆತ್ಮರತಿಯೇ. ಇರಬಹುದು. ಅರಿವಿಗೆಟುಕದ ಅನೇಕ ಅರಿಮೆಗಳು ನಮ್ಮಲ್ಲಿ ಅಂತರ್ಗತವಾಗಿರುತ್ತವೆ. ಹಾಗಿರುವಾಗ, ಅಯ್ಯೋ ನನಗೆ ಇಂತದ್ದೊಂದು ಅರಿಮೆ ಇದೆ, ಕಾಂಪ್ಲೆಕ್ಸ್ ಕಾಡುತ್ತಿದೆ ಎಂದು ರೋಗಗ್ರಸ್ತ ಮನೋಭಾವವನ್ನು ಹೊಂದುವ ಬದಲು, ‘ಇದಕ್ಕೆ ಈ ಹೆಸರಿನಿಂದ ಕರೆಯುತ್ತಾರೆ’ ಎಂಬು ತಿಳುವಳಿಕೆಯನ್ನು ಹೊಂದುವುದು ಮತ್ತು ಮಿತಿ ಮೀರಲು ಹಾತೊರೆವ ಅರಿಮೆಯನ್ನು ಅರಿವಿನಿಂದ ಅಂಕೆಯಲ್ಲಿಡುವುದು ಜಾಣನಾದವನ ಲಕ್ಷಣ.

ನಾನು ಸರ್ವಶಕ್ತ ಸರ್ವಾಂತರ್ಯಾಮಿ

ಮನುಷ್ಯನಿಗೆ ಮಗುವಾಗಿರುವಾಗಲೇ ತನ್ನ ದೃಷ್ಟಿಯ ಮಿತಿಯಲ್ಲಿರುವ ಇಲ್ಲದಿರುವ ಬೇಕಿರುವ ಬೇಡದಿರುವ ಎಲ್ಲದರ ಮೇಲೆ ತನ್ನ ಒಡೆತನ ಅಥವಾ ಯಜಮಾನಿಕೆ ಅಥವಾ ಅಧಿಕಾರ ಇರಬೇಕೆಂದೂ ಆಸೆ ಇರುತ್ತದೆ.ತಾನೊಬ್ಬ ಸರ್ವಶಕ್ತ ಮತ್ತು ಸರ್ವಾಂತರ್ಯಾಮಿಯಾಗಿರಬೇಕೆಂಬ ಆತ್ಮವೈಭವದ ಪರಿಕಲ್ಪನೆ ಇರುತ್ತದೆ. ಮಗುವಿಗೆ ಆಲೋಚನೆಗಳು ಮೂಡತೊಡಗುವ ವಯಸ್ಸಿನಲ್ಲಿಯೇ, ತನ್ನ ಸುತ್ತಲ ವಿಷಯವಸ್ತುಗಳನ್ನು ಗುರುತಿಸುವಷ್ಟಾಗುತ್ತಿದ್ದಂತೆ, ಅದರಲ್ಲಿಯೂ ತನಗೆ ಯಾವುದರಿಂದ ಆನಂದ ಮತ್ತು ಸುಖ ಸಿಗುತ್ತದೆ ಎಂಬ ಅರಿವಾಗುತ್ತಿದ್ದಂತೆಯೇ ಮನಸ್ಸಿನಲ್ಲಿ ಕನಸುಗಳು ಗರಿಗೆದರತೊಡಗುತ್ತದೆ.

ಅವರ ಏಕಾಂತಗಳಲ್ಲಿ, ಒಬ್ಬರೇ ಆಡಿಕೊಳ್ಳುವ, ತಮ್ಮೊಂದಿಗೆ ತಾವೇ ಇರುವಂತಹ ಎಲ್ಲಾ ಅವಕಾಶಗಳಲ್ಲಿ ಅವರು ಕನವರಿಸುವುದು ತಮ್ಮ ಆತ್ಮವೈಭವವನ್ನೇ. ಇದನ್ನು ಮನಶಾಸ್ತ್ರದಲ್ಲಿ ಮೆಗಲೋಮೇನಿಯಾಕ್ ಆಮ್ನಿಪೇಟೆನ್ಸ್ ಆಲೋಚನೆಗಳು ಎನ್ನುತ್ತಾರೆ. ಸಾಲದಕ್ಕೆ ಕೆಲವು ಪೋಷಕರು, ಕೆಲವು ಶಿಕ್ಷಕರು, ಮಗುವನ್ನು ಪ್ರೀತಿಸುವವರು ಈ ಆಲೋಚನೆಗಳಿಗೆ, ಅವರು ಕನವರಿಸುವ ಕನಸುಗಳಿಗೆ ಕಸುವು ನೀಡುವಂತೆ ಪ್ರೇರಣೆಗಳನ್ನು ನೀಡುತ್ತಾರೆ.

ಪ್ರೋತ್ಸಾಹಿಸುತ್ತಾರೆ. ಕೆಲವು ಪೋಷಕರಂತೂ ತಾವೆಂದಿಗೂ ಸೇರಲಾಗದ ಗುರಿಯ ದಾರಿಯನ್ನು ಅವರ ಕಡೆಗೆ ತಿರುಗಿಸಿಬಿಡುತ್ತಾರೆ. ಮಕ್ಕಳಲ್ಲಿ ಅರಿಮೆಗಳನ್ನು ಬಲಗೊಳಿಸುವುದು ಸಾಮಾನ್ಯವಾಗಿ ಕುಟುಂಬವೇ. ಮಕ್ಕಳಲ್ಲಿರುವ ಮೌಲ್ಯವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅತ್ಯುತ್ಪ್ರೇಕ್ಷೆಯಿಂದ ವರ್ಣಿಸುವುದು. ಹೊಗಳುವುದು. ನಮ್ಮ ಮಗು ಬಿಟ್ಟಾರೆ ಈ ಜಗತ್ತಿನಲ್ಲಿ ಇಂತಹ ಮಕ್ಕಳೇ ಇಲ್ಲ ಎನ್ನುವಂತೆ ಕೊಂಡಾಡುವುದು; ಇವೆಲ್ಲಾ ಸಹಜವಾಗಿಯೇ ಮಕ್ಕಳಲ್ಲಿ ಇರುವ ಆತ್ಮವೈಭವವನ್ನು ಆತ್ಮರತಿಯ ಸಮಸ್ಯೆಯನ್ನಾಗಿ ಪರಿವರ್ತಿಸುತ್ತದೆ. ಒಂದು ವೇಳೆ ಪೋಷಕರು ಅಥವಾ ಮನೆಯವರು ಅಥವಾ ಸಾಮಾಜಿಕ ಪರಿಸರದಲ್ಲಿರುವವರು ಮಗುವಿಗೆ ಉಬ್ಬಿಸುವ ಬದಲು ಕುಗ್ಗಿಸಿದರೆ, ಮಕ್ಕಳು ಕೀಳರಿಮೆಯಲ್ಲಿ ಬಳಲುತ್ತಾರೆ.

ವಿರೂಪದರಿಮೆ

ಆತ್ಮರತಿಗೆ ವಿರುದ್ಧವಾದಂತಹ ಇನ್ನೊಂದು ಸಮಸ್ಯೆ ಇದೆ, ಅದು ವಿರೂಪದರಿಮೆಯ ಸಮಸ್ಯೆ Body dysmorphic disorder (BDD. ಇವರ ಸಮಸ್ಯೆ ಏನೆಂದರೆ, ತಮ್ಮ ಮುಖದಲ್ಲಿ, ದೇಹದಲ್ಲಿ, ನಡೆಯಲ್ಲಿ, ನಿಲುವಲ್ಲಿ, ಭಂಗಿಯಲ್ಲಿ; ಎಲ್ಲದರಲ್ಲೂ ಏನೋ ಒಂದು ಸಮಸ್ಯೆ ಇದೆ ಎಂದು ಕೊರಗುತ್ತಿರುತ್ತಾರೆ. ತಾನು ಚೆನ್ನಾಗಿಲ್ಲ. ಇತರರು ಇದ್ದಂತೆ ತಾನು ಸುರೂಪವಾಗಿಲ್ಲ. ನನ್ನ ಮೂಗು ವಕ್ರ, ಕೆನ್ನೆ ಚಪ್ಪೆ, ಮೂತಿ ಉದ್ದ, ಹಲ್ಲು ವಕ್ರ, ಮುಖದಲ್ಲಿ ಲಕ್ಷಣವಿಲ್ಲ; ಹೀಗೆ, ಒಂದಲ್ಲಾ ಒಂದು ವಿರೂಪವನ್ನು ತಮ್ಮಲ್ಲಿ ಗುರುತಿಸಿಕೊಂಡು ಕೀಳರಿಮೆಯಲ್ಲಿ ಬಳಲುತ್ತಿರುತ್ತಾರೆ. ತಾವು ಕಪ್ಪು ಎಂಬ ಅರಿಮೆ, ತಲೆಯಲ್ಲಿ ಕೂದಲಿಲ್ಲ ಎಂಬ ಕೊರಗು; ತಾನು ಸಣ್ಣಗಿದ್ದೇನೆ ಅಥವಾ ದಪ್ಪಗಿದ್ದೇನೆ; ಯಾವುದಾದರೂ ಅವರ ತಲೆಯಲ್ಲಿ ಕೂತಿರುತ್ತದೆ. ಹಲ್ಲು ಉಬ್ಬಿದೆ ಎಂದು ಮನಸೋಯಿಚ್ಚೆ ನಗಲಾರರು. ಹಲ್ಲು ಕಂಡವರು ಆಡಿಕೊಳ್ಳುತ್ತಾರೆ, ಅಪಹಾಸ್ಯ ಮಾಡುತ್ತಾರೆ ಎಂಬ ಹಿಂಜರಿಕೆ ಅವರಿಗೆ.

ಸಾಲದಕ್ಕೆ ನಮ್ಮ ಸಮಾಜವೂ ಸೌಂದರ್ಯವೆಂದರೆ ಹೀಗೆ ಎಂಬ ಮಾನದಂಡಗಳನ್ನು ಬೇರೆ ಇಟ್ಟಿದೆಯಲ್ಲಾ. ಹುಡುಗಿ ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು. “ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ, ನಾಸಿಕವು ಸಂಪಿಗೆಯಂತೆ, ನೀ ನಗಲು ಹೂಬಿರಿದಂತೆ,” ಎಂದು ಸೌಂದರ್ಯಕ್ಕೊಂದು ಮಾನದಂಡವಿಟ್ಟು, ಆ ಸುರೂಪದ ಮಾನದಂಡದ ವ್ಯಾಪ್ತಿಯಲ್ಲಿ ಬರದೇ ಇರುವವರು ತಮ್ಮನ್ನು ಕುರೂಪವೆಂದೋ, ವಿರೂಪವೆಂದೋ ಅಂದುಕೊಳ್ಳಬೇಕು ತಾನೆ? ಕತೆ, ಕಾವ್ಯ ಮತ್ತು ಕಾದಂಬರಿಗಳಂತಹ ಸಾಹಿತ್ಯ, ಸಂಗೀತ, ಸಿನಿಮಾಗಳು ಸಾಕಷ್ಟು ಪ್ರಮಾಣದಲ್ಲಿ ಅರಿಮೆಗಳನ್ನು ಗಟ್ಟಿಗೊಳಿಸುವ ಕಾಣ್ಕೆಗಳನ್ನು ನೀಡುತ್ತವೆ.

ಸುಮ್ಮನೆ ಆಗಲೋ ಈಗಲೋ ಗಮನಿಸಿ, ಬೆಳ್ಳಗಿದ್ದಾನೆಂದೋ, ದಷ್ಟಪುಷ್ಟವಾಗಿದ್ದಾನೆಂದೋ, ಎತ್ತರಕ್ಕಿದ್ದಾನೆಂದೋ, ಅಥವಾ ಇವೆಲ್ಲವೂ ಇದೆಯೆಂದೋ ಆತನಿಗೆ “ನೀನು ಹೀರೋ, ಒಳ್ಳೆ ಹೀರೋ ಇದ್ದಂಗಿದ್ದೀಯ. ಯಾಕೆ ಸಿನಿಮಾಗೆ ಪ್ರಯತ್ನ ಮಾಡಬಾರದು” ಎಂದೇ ಹೇಳುತ್ತಾರೆ.
ಅವರೇನೂ ಸುಮ್ಮನೆ ಹೇಳುತ್ತಿಲ್ಲ. ಅವರಲ್ಲಿ ಒಂದು ಸ್ವಂತ ಆಲೋಚನೆಯೊಂದು ಹುಟ್ಟಿ ಅದಕ್ಕೆ ಸರಿಯಾಗಿ ಅವರು ಮಾತಾಡುತ್ತಿಲ್ಲ. ಸಾಮಾನ್ಯವಾಗಿ ಸಮಾಜದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯವನ್ನು ತಮ್ಮದಾಗಿಸಿಕೊಂಡು ಅಭಿವ್ಯಕ್ತಪಡಿಸುತ್ತಿರುತ್ತಾರೆ.

ಅರಿಮೆಗಳ ಬಂಡವಾಳ ಮತ್ತು ವ್ಯಾಪಾರ
ಈ ಅರಿಮೆಗಳು ಎಷ್ಟೋ ಜನಕ್ಕೆ ಬಂಡವಾಳ. ಫೇರ್ ಆಗಿ, ಲವ್ಲೀ ಆಗಿ ಕಾಣಿರಿ ಎಂದು ಫೇರ್ನೆಸ್ ಕ್ರೀಂಗೆ ಬಂಡವಾಳ ಹಾಕಿದವರಿಗೆ ಲಾಭವಾಗುತ್ತಿರುವುದು ಯಾವ ಅರಿಮೆಯಿಂದ? ನಾವು ಧಾರ್ಮಿಕ ಮೌಢ್ಯಗಳನ್ನು ಧಿಕ್ಕರಿಸುತ್ತಾ ಬಂಡವಾಳದಾರರು ಪೋಷಿಸುವ ಮೌಢ್ಯಗಳನ್ನು ಗಮನಿಸುವಲ್ಲಿ ಹಿಂದುಳಿದುಬಿಡುತ್ತೇವೆ. ಹದಿನೈದು ದಿನಗಳ ಮುಖದ ಕಾಂತಿ ಇಂತಿರುವುದು ಅಂತಾಗಿಬಿಡುತ್ತದೆ ಎಂಬ ಬಣ್ಣದ ಮಾಪನದ ಪಟ್ಟಿಯನ್ನು ಹೊಂದಿರುವ ಮುಖಕಾಂತಿಯ ಕ್ರೀಮನ್ನು ವರ್ಷಾನು ವರ್ಷಗಟ್ಟಲೆ ಬಳಸುತ್ತಲೇ ಇದ್ದರೂ ‘ಈ ಕ್ರೀಮಿನವರು ಸುಳ್ಳುಗಾರ. ಈ ಕ್ರಿಮಿಂದ ನನಗೆ ಯಾವ ಮುಖಕಾಂತಿಯೂ ಬಂದಿಲ್ಲ’ ಎಂದು ಧಿಕ್ಕರಿಸದೇ ಇರುವಷ್ಟು ಕ್ರೀಮಿನ ವ್ಯಸನವು ಅಂಟಿರುತ್ತದೆ.

ಬಂಡವಾಳದಾರನಿಗೆ ನಾವು ವ್ಯಸನಕ್ಕಂಟುವುದೇ ಬೇಕಾಗಿರುವುದು. ಇಂದು ಸಮಸ್ಯೆ ಇದೆ ಎಂದು ಕೊಂಡು ನಾಳೆ ವಾಸಿಯಾದ ಮೇಲೆ ಬೇಡದೇ ಸುಮ್ಮನಾಗಿಬಿಡುವಂತಹ ಯಾವುದೋ ರೋಗದ ಔಷಧಿಯಲ್ಲ ಇದು. ಅರಿಮೆಯ ವ್ಯಸನ ಹೋಗದು, ಪರಿಹಾರ ಲಭಿಸದು ಎಂಬ ನಂಬಿಕೆ ಅವರದು.

ಬಂಡವಾಳದಾರರು ಅದೆಷ್ಟು ಅರಿಮೆಯನ್ನು ಗಟ್ಟಿಗೊಳಿಸುತ್ತಾರೆಂದರೆ, ನೀವು ಹಾಡುವ ಸಾಮರ್ಥ್ಯಕ್ಕೂ, ಅದಕ್ಕೆ ಬೇಕಾದ ಆತ್ಮವಿಶ್ವಾಸಕ್ಕೂ ನಿಮ್ಮ ಕಪ್ಪುತ್ವಚೆಯನ್ನು ತಗುಲಿಹಾಕುತ್ತಾರೆ. ಗೌರವವರ್ಣಕ್ಕೆ ನೀವು ತಿರುಗಿದ ಮೇಲೆ ಆತ್ಮವಿಶ್ವಾಸದಿಂದ ಹಾಡುತ್ತೀರಿ ಎನ್ನುತ್ತಾರೆ. ಅದನ್ನು ಒಪ್ಪಿ ಆ ವಸ್ತುಗಳನ್ನು ಕೊಳ್ಳುತ್ತಾರೆ. ಸಣ್ಣಗಿರುವವರಿಗೆ ದಪ್ಪಗಾಗಲು, ದಪ್ಪಗಿರುವವರಿಗೆ ಸಣ್ಣಗಾಗಲು, ಕುಳ್ಳಗಿರುವವರಿಗೆ ಉದ್ದವಾಗಲು, ತಲೆಯಲ್ಲಿ ಕಡಿಮೆ ಕೂದಲಿರುವವರಿಗೆ ಉದ್ದ ಕೂದಲು ಬರಲು; ಅಷ್ಟೇಕೆ ಮೊಲೆಗಳ ಗಾತ್ರವನ್ನು ಹೆಚ್ಚಿಸಲು, ನಿಮ್ಮ ಶಿಶ್ನವು ಚಿಕ್ಕದಾಗಿದ್ದರೆ ಅದನ್ನು ಉದ್ದ ಮಾಡಲು. ನಿಮ್ಮ ಸಂಭೋಗದ ಸಮಯವನ್ನು ರಾತ್ರಿಯಿಡೀ ಹಿಗ್ಗಿಸಲು; ಹೀಗೆ ಅರಿಮೆಗಳು ವ್ಯಾಪಾರಕ್ಕೆ ಬಂಡವಾಳಗಳೂ ಕೂಡಾ.

ಮೊಲೆಗಳು ಚಿಕ್ಕದಿರಲಿ, ದೊಡ್ಡದಿರಲಿ, ಅವುಗಳು ಆರೋಗ್ಯವಾಗಿದ್ದರೆ ಸಾಲದೇ? ಶಿಶ್ನವು ಉದ್ದಕ್ಕಿರಲಿ, ಸಣ್ಣಕ್ಕಿರಲಿ; ಆರೋಗ್ಯವಾಗಿ ಅದು ಮಾಡುವ ಕೆಲಸ ಮಾಡಿದರಾಗದೇ? ಹೋಗಲಿ ಅದು ಅತ್ಯಂತ ಆಕರ್ಷಕವಾಗಿದ್ದರೂ, ಇಲ್ಲದಿದ್ದರೂ ಏನು? ಅದೇನು ಮುಖದಲ್ಲಿ ಮೂಗಿರುವ ಜಾಗದಲ್ಲಿದೆಯೇ ವಡವೆಯೊಂದರಿಂದ ಅಲಂಕರಿಸಿಕೊಂಡು ಮೆರವಣಿಗೆ ಹೋಗಲು? ಆದರೆ ಅರಿಮೆಯ ಪ್ರಭಾವವೇ ಅಂತಹದ್ದು. ಆತ್ಮರತಿಯೇ ಮೊದಲಾದ ಅರಿಮೆ ಎಂಬುದು ಮನುಷ್ಯನ ಪ್ರದರ್ಶನದ ಆಯಾಮಗಳಲ್ಲಿ ಮಾತ್ರವಲ್ಲ ಗುಪ್ತನೆಲೆಗಳಲ್ಲಿ, ಒಳಗಿನ ನೆರಳುಗಳಲ್ಲೂ ಒಳಗೊಳಗೇ ಕಾಡುತ್ತಿರುತ್ತವೆ.

ಶಿಶ್ನದ ಗಾತ್ರವೇ ಮೊದಲಾದ ಲೈಂಗಿಕತೆಯ ಕೀಳರಿಮೆಗಳಿಂದ ಬಹಳಲುವ ಜನರ ಅದೆಷ್ಟು ಸಾಮರ್ಥ್ಯ ಮತ್ತು ಪ್ರತಿಭೆಗಳು ಹಾಗೆಯೇ ಸೊರಗಿ ಹೋಗಿವೆಯೋ ಕಂಡವರಾರು? ಲೆಕ್ಕವಿಟ್ಟವರಾರು? ಮೊದಲು ಇವನ್ನು ರೂಪಿಸಿದವರು ಯಾರು? ಯಾರಾದರಾಗಲಿ, ಹೇಗಾದರಾಗಲಿ; ಇಂತಹ ಸೋಂಕುಗಳಿಂದ ನಾವು ನಮ್ಮನ್ನೂ ರಕ್ಷಿಸಿಕೊಳ್ಳಬೇಕು, ಸಮಾಜವನ್ನೂ ರಕ್ಷಿಸಬೇಕು. ಖಂಡಿತವಾಗಿ ಅದು ಪ್ರಾರಂಭವಾಗಬೇಕಾಗಿರುವುದು ‘ನನ್ನಿಂದಲೇ’.

ಅಭಿಪ್ರಾಯಗಳೂ ಕೂಡಾ ಸೋಂಕುಗಳಂತೆ ವರ್ತಿಸುತ್ತಾ ಅರಿಮೆಗಳಿಗೆ ಕಾರಣವಾಗುತ್ತದೆ.
ವಿರೂಪದ ಅರಿಮೆಯು ತನ್ನ ಮೌಲ್ಯವನ್ನು ತಾನೇ ಗ್ರಹಿಸುವುದಕ್ಕೆ ಬಿಡುವುದಿಲ್ಲ. ತನಗಿರುವ ಸಾಮರ್ಥ್ಯದ ಸಾಧ್ಯತೆಗಳನ್ನು ಹುಡುಕಿಕೊಳ್ಳಲು ಬಿಡುವುದಿಲ್ಲ. ನನ್ನಂತವರಿಗೆ ಯಾರು ಹೆಣ್ಣು ಕೊಡ್ತಾರೆ? ನನ್ನ ಮುಖಕ್ಕೆ ಯಾರು ಕೆಲಸ ಕೊಡ್ತಾರೆ? ನನ್ನ ಯಾರೂ ಮೂಸುವವರಿಲ್ಲ? ಇವುಗಳ ಅವರ ಸಾಧಾರಣ ಮಾತುಗಳು.

ಮಹಾತ್ಮನ ಆತ್ಮ

ನಾನು ಅಂದರೆ ಯಾರು? ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡ್ತೇನೆ. ನನ್ನ ಮಾತೇ ನಡೆಯಬೇಕು ಎಂಬ ಅಹಂಕಾರದ ಆತ್ಮರತಿಯಂತೆ, ಇನ್ನೊಂದು ವಿನಯಶೀಲ, ಮಾನವೀಯ ಆತ್ಮರತಿಯೂ ಕೂಡಾ ಅಸ್ತಿತ್ವದಲ್ಲಿದೆ. ನಾನಲ್ಲದೇ ಇನ್ಯಾರು ನೋಡಬೇಕು? ನಾವೇ ಕಾಪಾಡಬೇಕು. ಅವರು ಏನೇ ಹೇಳಲಿ, ನಾನು ಸಮಾಧಾನವಾಗಿದ್ದು ಸನ್ನಿವೇಶವನ್ನು ನಿಯಂತ್ರಿಸಬೇಕು. ಅವನಿಗೆ ಗೊತ್ತಾಗಲ್ಲ ಅಂದರೆ ನನಗೆ ಗೊತ್ತಾಗಲ್ವಾ? ಇದೂ ಕೂಡಾ ಆತ್ಮರತಿಯೇ.

ಆದರೆ ಆಗ್ರಹಪೂರ್ವಕವಾಗಿರುವುದಿಲ್ಲ. ಆವೇಶಭರಿತವಾಗಿರುವುದಿಲ್ಲ. ಈ ಬಗೆಯ ಮೃದುವಾದ ಮತ್ತು ವಿನಯಶೀಲವಾದ ಆತ್ಮರತಿಯ ಮದನರು ಮಹಾತ್ಮರಾಗುತ್ತಾರೆ. ಜನರೂ ಮತ್ತು ಸಮಾಜವೂ ಅವರು ಪ್ರದರ್ಶಿಸುತ್ತಿರುವ ಪ್ರೇಮ, ಪ್ರೀತಿ, ಕಳಕಳಿ ಮತ್ತು ಸೇವೆಗಳನ್ನು ನೋಡುತ್ತಾ, ಅದರಲ್ಲೂ ತಾವು ಹಿಂಜರಿಯುವ ಕ್ಷೇತ್ರಗಳಲ್ಲಿ ಅಸಹ್ಯ ಪಡದೇ, ಧೈರ್ಯವಾಗಿ ಸೇವೆಗಳನ್ನು ಮಾಡುವ ಈ ಮೃದು ಆತ್ಮರತಿಯವರು ಸ್ತುತಿಗೆ ಅರ್ಹವಾಗುತ್ತಾರೆ.

ಪರೋಪಕಾರಾರ್ಥೇಮಿದಂ ಶರೀರಂ ಎಂದು ನಸುನಗುತ್ತಾ ಅವರಿವರಿಗೆ ಸೇವೆ ಸಲ್ಲಿಸುತ್ತಾ, ಬಡವರನ್ನು ಹುಡುಕಿ, ಅನಾಥಾಲಯಗಳನ್ನು ಹೊಕ್ಕು ತಮ್ಮ ಆ ಒಂದು ದಿನದ ಸೇವೆಯನ್ನು ಶಾಶ್ವತ ಫೋಟೋ ಫ್ರೇಮಿನಲ್ಲಿ ಬಂಧಿಸಿ, ಫೇಸ್ಬುಕ್ ವಾಟ್ಸಪ್ಪುಗಳಲ್ಲಿ ಪ್ರಚಾರಪಡಿಸುವ ಆತ್ಮರತಿಯೂ ಕೂಡಾ ನಾರ್ಸಿಸಮ್ ಅರಿಮೆಯ ಭಾಗವೇ.

ಈ ವಿವಿಧ ಬಗೆಯ ಆತ್ಮರತಿಗಳನ್ನು, ಅಹಂಕಾರಗಳನ್ನು, ಆತ್ಮಕೇಂದ್ರಿತ ಆಲೋಚನೆಗಳನ್ನು ತಿಳಿದುಕೊಂಡರೆ ಒಬ್ಬ ಯಾವುದರಲ್ಲೇ ಬಂಧಿತನಾಗಿದ್ದರೆ ಅದರಿಂದ ಮುಕ್ತನಾಗಬಹುದು. ತಿಳಿದುಕೊಳ್ಳೋಣ ಮುಂದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending