ಅಂತರಂಗ

ಅರಿಮೆಯ ಅರಿವಿರಲಿ-5 : ಮನೋಲೈಂಗಿಕ ಸಂಘರ್ಷಗಳು

Published

on

Jocasta and Oedipus
  • ಯೋಗೇಶ್ ಮಾಸ್ಟರ್

ಗನು ತಾಯಿಯ ಜೊತೆಗೆ ಹೊಂದಿರುವಂತಹ ಅತಿಯಾದ ವ್ಯಾಮೋಹದ ಕತೆಗಳನ್ನೆಲ್ಲಾ ಮಾತೃಪ್ರೇಮವೆಂದು ಕರೆಯುತ್ತೇವೆ. ಹಾಗೆಯೇ ಮಗಳು ತಂದೆಯನ್ನು ಹುಚ್ಚಳಂತೆ ಹಚ್ಚಿಕೊಂಡಿದ್ದರೆ ಪಿತೃಪ್ರೇಮ ಅಪಾರವಾಗಿದೆ ಎನ್ನುತ್ತೇವೆ. ಅನ್ನೋಣ ತಪ್ಪೇನಿಲ್ಲ. ಆದರೆ ಮಗುವಿಗೆ ಸಾಮಾನ್ಯವಾಗಿ ತನ್ನ ವಿರುದ್ಧಲಿಂಗಿಯ ಪೋಷಕರೊಡನೆ ಪ್ರೀತಿ ಅಥವಾ ವಾತ್ಸಲ್ಯವು ಕೊಂಚ ಹೆಚ್ಚೇ ಇರುತ್ತದೆ. ತಂದೆಯೂ ಕೂಡಾ ಮಗಳನ್ನು ಹೆಚ್ಚು ಲಾಲಿಸಿದರೆ, ತಾಯಿ ಮಗನನ್ನು ಹೆಚ್ಚು ತಲೆಯ ಮೇಲೆ ಹೊತ್ತು ತಿರುಗುತ್ತಾಳೆ. ಅದೇ ರೀತಿ ಸಂಘರ್ಷಗಳು ಕೂಡಾ ಮಗಳಿಗೆ ಹೆಚ್ಚು ತಕರಾರು ಇರುವುದು ತಾಯಿಯ ಜೊತೆಗೆ. ಮಗಳ ಮೇಲಿನ ದೂರುಗಳ ಪಟ್ಟಿ ತಾಯಿಗೆ ಸಾಮಾನ್ಯವಾಗಿ ದೊಡ್ಡದಿರುತ್ತದೆ.

ಹಾಗೆಯೇ ಮಗನನ್ನು ಶಿಸ್ತಿಗೊಳಪಡಿಸಲು ತಂದೆ ಹೆಚ್ಚು ನಿಷ್ಟುರವಾಗಿರುತ್ತಾರೆ. ಕಾಠಿಣ್ಯ ತೋರುತ್ತಾನೆ. ಅದೇ ಕಠೋರ ಮತ್ತು ನಿಷ್ಟುರ ಧೋರಣೆ ಮಗಳ ವಿಷಯದಲ್ಲಿರುವುದಿಲ್ಲ. ಮಗಳೂ ಹಾಗೆಯೇ, ಅಮ್ಮನ ಕಂಡರೆ ಭಯವಿದ್ದರೂ ಅಥವಾ ಅವಳು ಬೈಯುತ್ತಾಳೆ ಅಥವಾ ಹೊಡೆಯುತ್ತಾಳೆ ಎಂಬ ಅಂಜಿಕೆ ಇದ್ದರೂ ಅವಳ ಜೊತೆಗೆ ವರ್ತಿಸುವಾಗ ಒರಟುತನ ಪ್ರದರ್ಶಿಸುತ್ತಾಳೆ.

ಎದುರು ಜವಾಬು ಕೊಡುತ್ತಾಳೆ. ಸಂಘರ್ಷವನ್ನು ಹೆಚ್ಚಿಸಿಕೊಳ್ಳುತ್ತಾಳೆ. ಅದೇ ತನ್ನ ಬೈಯದ, ಹೊಡೆಯದ ತಂದೆಯ ಜೊತೆಗೆ ಅಕ್ಕರೆಯನ್ನೇ ತೋರುತ್ತಾಳೆ. ಎದುರು ವಾದಿಸುವುದು ಇಲ್ಲವೇ ಇಲ್ಲ ಎನ್ನಿಸುವಷ್ಟು ತೀರಾ ಕಡಿಮೆ. ಅವನ ಕಂಡರೆ ಭಯವಿರುವುದಿಲ್ಲ. ಭಯಪಡುವುದು ತೀರಾ ಅಪರೂಪಕ್ಕೆ. ತೀರಾ ಭಯವಿದೆ ಎಂದರೆ ಅಪ್ಪನಲ್ಲಿ ಕೆಲವು ಕ್ರೌರ್ಯ ಅಥವಾ ಹಿಂಸೆಯ ವರ್ತನೆಗಳನ್ನು ಪುನರಾವರ್ತಿತವಾಗಿ ಕಾಣುತ್ತಿರಬೇಕು.

ಈಡಿಪಸ್ ಕಾಂಪ್ಲೆಕ್ಸ್

ಈಡಿಪಸ್ ಕಾಂಪ್ಲೆಕ್ಸ್ ಎಂದರೆ ತಾಯರಿಮೆ ಎಂದು ಸರಳವಾಗಿ ಹೇಳಬಹುದು. ಶಿಶುವೊಂದು ತನ್ನ ಎಳೆತನದಲ್ಲಿ ತನ್ನ ತಾಯಿಯಿಂದ ಸಂಪೂರ್ಣ ಗಮನವನ್ನೂ ಮತ್ತು ಪ್ರೇಮವನ್ನೂ ತನಗಾಗಿ ಬಯಸುವುದು. ಅದರಲ್ಲೂ ಅದು ಗಂಡು ಮಗುವಾಗಿದ್ದು, ತಾಯಿಯ ಸಾಮಿಪ್ಯ ಮತ್ತು ಸ್ಪರ್ಷವನ್ನು ಗಾಢವಾಗಿ ಬಯಸುತ್ತಾ ತಂದೆಯ ಅಧಿಕಾರಯುತ ಮಧ್ಯ ಪ್ರವೇಶವನ್ನು ಧಿಕ್ಕರಿಸುವುದಕ್ಕೆ ತಾಯರಿಮೆ ಅಥವಾ ಈಡಿಪಸ್ ಕಾಂಪ್ಲೆಕ್ಸ್ ಎನ್ನುವುದು.
ಸಿಗ್ಮಂಡ್ ಫ್ರಾಯ್ಡ್, ಜರ್ಮನಿಯ ಮನಶಾಸ್ತ್ರಜ್ಞ ಈ ವಿಚಾರ ಸರಣಿಯನ್ನು ತಾತ್ವಿಕವಾಗಿ ಮುಂದಿಟ್ಟು ಶಾಸ್ತ್ರೀಯವಾಗಿ ಮಂಡಿಸಿದರು.

ಈ ಥಿಯರಿಗೆ ಅವರು ಈಡಿಪಸ್ ಎಂಬ ಗ್ರೀಕ್ ಪಾತ್ರದಿಂದ ಗುರುತಿಸಲು ಕಾರಣವಿದೆ.
ಆ ಈಡಿಪಸ್ ಕತೆಯೇನೆಂದರೆ; ಲೇಯಾಸ್ ಎಂಬುವನು ತಿಬೀಸ್ ರಾಜ. ಅವನ ರಾಣಿ ಜೊಕಾಸ್ಟಾ. ಅವರಿಗೆ ಹುಟ್ಟುವ ಮಗುವು ಅವನನ್ನು ಕೊಲ್ಲುತ್ತದೆ ಎಂಬ ಭವಿಷ್ಯವಾಣಿಯನ್ನು ಕೇಳಿ ಅದನ್ನು ಕೊಲ್ಲಲು ಲೇಯಾಸ್ ಕಳುಹಿಸುತ್ತಾನೆ. ಕಟುಕರ ಹೃದಯದಲ್ಲೂ ಹುಟ್ಟಿದ ಅನುಕಂಪದಿಂದಾಗಿ ಮಗುವು ಸಾಯದೇ ಕುರುಬನೊಬ್ಬನ ಪಾಲಾಗುತ್ತದೆ. ಆ ಕುರುಬನಿಂದ ಕೊರಿಂತ್ ಎಂಬ ರಾಜ್ಯದ ರಾಜ ಪಾಲಿಬಸ್ ಮತ್ತು ಅವನ ಹೆಂಡತಿ ಮಗುವನ್ನು ದತ್ತು ಪಡೆದು ತಮ್ಮದೇ ಮಗುವಿನಂತೆ ಸಾಕುತ್ತಾರೆ. ಅವರಿಗೆ ಈ ಮಗುವು ಲೇಯಾಸ್ ಮತ್ತು ಜೊಕಾಸ್ಟಾ ದಂಪತಿಗಳ ಮಗುವೆಂದು ತಿಳಿದಿರುವುದಿಲ್ಲ. ಆ ಮಗುವೇ ಈಡಿಪಸ್.

ಈಡಿಪಸ್ ಬೆಳೆದಂತೆ ತನ್ನ ಅಧ್ಯಯನದ ಪ್ರವಾಸದಲ್ಲಿ ತಿಬೀಸ್‍ಗೆ ಹೋಗುತ್ತಾನೆ. ಅಲ್ಲಿ ಹುಟ್ಟುವ ಜಗಳವೊಂದರಿಂದಾಗಿ ಲೇಯಾಸನನ್ನು ಕೊಲ್ಲುತ್ತಾನೆ. ಅಲ್ಲಿಯೇ ರಾಜ್ಯಕ್ಕೆ ಉಪದ್ರವಕಾರಿಯಾಗಿದ್ದ ಸಿಂಹನಾರಿ ಅಥವಾ ಸ್ಪಿಂಕ್ಸ್ ಕೇಳುವ ಒಗಟನ್ನು ಸರಿಯಾಗಿ ಈಡಿಪಸ್ ಬಿಡಿಸಿ ಉತ್ತರ ಹೇಳುತ್ತಾನೆ. ಇದರಿಂದ ಸಿಂಹನಾರಿ ತನ್ನನ್ನು ತಾನು ಕೊಂದುಕೊಂಡು ತಿಬೀಸ್ ಸಮಸ್ಯೆಯಿಂದ ಮುಕ್ತವಾಗುತ್ತದೆ. ಅವನೇ ತಿಬೀಸ್ ರಾಜನೂ ಆಗುತ್ತಾನೆ. ಲೇಯಾಸನ ಹೆಂಡತಿಯಾಗಿದ್ದು ವಿಧವೆಯಾದ ಜೊಕಾಸ್ಟಾಳನ್ನು ಈಡಿಪಸ್ ಗೆದ್ದರಸರ ವಾಡಿಕೆಯಂತೆ ಮದುವೆಯಾಗುತ್ತಾನೆ. ಅವರಿಬ್ಬರಿಗೆ ನಾಲ್ವರು ಮಕ್ಕಳು ಹುಟ್ಟುತ್ತಾರೆ. ನಂತರ ಮುಂದೆ ಯಾವಾಗಲೋ ಜೊಕಾಸ್ಟಾಗೆ ತಾನು ತನ್ನ ಮಗನನ್ನೇ ಮದುವೆಯಾದ ವಿಷಯ ತಿಳಿಯುತ್ತದೆ.

ಇದರಿಂದ ಮನನೊಂದು ನೇಣು ಹಾಕಿಕೊಂಡು ಸಾಯುತ್ತಾಳೆ. ಈ ಗ್ರೀಕಿನ ಜನಪದ ಕತೆಯಲ್ಲಿ ಈಡಿಪಸ್‍ಗೆ ತನ್ನ ತಾಯಿ ಎಂದು ತಿಳಿಯದೇ ಜೊಕಾಸ್ಟಾಳನ್ನು ಮೋಹಿಸುತ್ತಾನೆ ಮತ್ತು ಮದುವೆಯಾಗುತ್ತಾನೆ. ಈ ಕತೆಯ ನಾಯಕನ ಅರಿವಿಲ್ಲದೆ ತಾಯಿಯನ್ನು ಮದುವೆಯಾಗುವ ಪ್ರಕರಣವನ್ನೇ ಸಾಂಕೇತಿಕವಾಗಿ ಸಿಗ್ಮಂಡ್ ಫ್ರಾಯ್ಡ್ ಈ ಅರಿಮೆಯನ್ನು ಈಡಿಪಸ್ ಕಾಂಪ್ಲೆಕ್ಸ್ ಎಂದು ಹೆಸರಿಸುತ್ತಾರೆ. ಅವರ ಅನೇಕಾನೇಕ ವಿವಾದಾತ್ಮಕ ವಿಷಯ ಮಂಡನೆಗಳಲ್ಲಿ ಇದೂ ಒಂದು.
ಆದರೆ ಸಿಗ್ಮಂಡ್ ಫ್ರಾಯ್ಡ್‍ಗೆ ನಮ್ಮ ಭಾರತೀಯ ಪುರಾಣಗಳಲ್ಲಿನ ದೈವಿಕ ಪಾತ್ರವಾದ ಗಣಪತಿಯ ಬಗ್ಗೆ ತಿಳಿದಿರಲಿಲ್ಲವೆನಿಸುತ್ತದೆ. ತಾಯಿಯ ಗಾಢ ಪ್ರೇಮಕ್ಕೆ ಒಳಗಾದ ಮಗನು ಅವಳ ಖಾಸಗೀತನಕ್ಕೂ ತಂದೆಯ ಅಧಿಕಾರಯುತವಾದ ಪ್ರವೇಶವನ್ನು ತಡೆಯುವ ತಾಯರಿಮೆಯ ಸರಿಯಾದ ಉದಾಹರಣೆ ಗಣಪತಿಯ ಕತೆಯಲ್ಲಿ ಸಿಗುತ್ತದೆ.

ಶಿವನು ತಾನು ಪಾರ್ವತಿಯ ಗಂಡನೆಂಬ ಅಧಿಕಾರವನ್ನು ಪಾರ್ವತಿ ಎಂಬ ತಾಯಿಯ ಮಗನಾದ ಗಣಪತಿಯು ಒಪ್ಪುವುದಿಲ್ಲ. ಬದಲಾಗಿ ತಾಯಿಯ ಅಪ್ಪಣೆ ಎಂಬ ಕಾರಣದಿಂದ ಶಿವನನ್ನು ತಡೆಯುವಲ್ಲಿ ಪಟ್ಟು ಹಿಡಿಯುತ್ತಾನೆ. ಸಾಲದಕ್ಕೆ ತಂದೆ ಮತ್ತು ಮಗನ ಸಂಘರ್ಷಕ್ಕೆ ಶಿವ ಮತ್ತು ಗಣಪತಿಯ ಹೋರಾಟವು ಉದಾಹರಣೆಯಾಗುತ್ತದೆ. ಗಣಪತಿ ಎಂಬ ಮಗನಿಗೆ ಪಾರ್ವತಿ ಎಂಬ ತಾಯಿಯು ಸ್ನಾನ ಮಾಡುವಂತಹ ಖಾಸಗೀತನದ ಸಮಯದಲ್ಲಿ ಶಿವನೆಂಬ ತಂದೆಯನ್ನು ಪ್ರವೇಶಗೊಡದೇ ಹೋಗುವ ಪ್ರಸಂಗವು ತಾಯರಿಮೆಗೆ ಹೇಳಿ ಮಾಡಿಸಿದ ಉದಾಹರಣೆಯಾಗಿದೆ. ಈಡಿಪಸ್‍ಗಾದರೂ ಅವಳು ತನ್ನ ತಾಯೆಂದು ಅರಿವಿರುವುದಿಲ್ಲ.

ತಾನು ಕೊಲ್ಲುವ ರಾಜನು ತನ್ನ ತಂದೆ ಎಂದೂ ಅರಿವಿರುವುದಿಲ್ಲ. ಆದರೆ ಗಣಪನರಿಮೆಯಲ್ಲಿ ಗಣಪತಿಗೆ ತನ್ನ ತಾಯಿ ಎಂಬ ಅರಿವಿತ್ತು ಮತ್ತು ನಂತರ ತಾನು ಗಂಡನೆಂಬ ಅಹಂಕಾರದಿಂದ ಒಳಗೆ ಹೋಗುವವನು ತನ್ನ ತಾಯಿಯ ಪತಿ ಅಥವಾ ತನ್ನ ತಂದೆಯೆಂಬ ಅರಿವೂ ಇತ್ತು. ಆದರೆ ಆ ತಂದೆಯ ಅಧಿಕಾರಯುತವಾದ ಪ್ರವೇಶವು ತಾಯಿಯ ಖಾಸಗೀತನದಲ್ಲಿ ಅತಿಕ್ರಮ ಪ್ರವೇಶವೆಂದೇ ಮಗನ ಪ್ರತಿಭಟನೆಯಾದ್ದರಿಂದ ತಾಯರಿಮೆಗೆ ಗಣಪತಿಯ ಉದಾಹರಣೆ ಈಡಿಪಸ್‍ಗಿಂತ ಹೆಚ್ಚು ಸೂಕ್ತವಾಗುತ್ತದೆ.

ಇನ್ನು ಪ್ರಪಂಚದ ಇತಿಹಾಸದಲ್ಲಿ ತಂದೆ ಮತ್ತು ಮಗನ ಸಂಘರ್ಷದ ಅನೇಕಾನೇಕ ಸಂಗತಿಗಳು ದಾಖಲಾಗಿವೆ.ಮಗಧ ಸಾಮ್ರಾಜ್ಯವನ್ನು ಆಳಿದ ಬಿಂಬಿಸಾರ (ಕ್ರಿಸ್ತಪೂರ್ವ 546-494) ಮತ್ತು ಅವರ ಮಗ ಅಜಾತಶತ್ರು ನಡುವೆ ಮೂಡಿದ ಮನಸ್ತಾಪ ತೀವ್ರತರವಾದಂತಹ ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟಿತ್ತು. ತಾಯಿಗೆ ಮೆದುಹೃದಯದವನಾಗಿದ್ದ ಅಮೋಘವರ್ಷ ತನ್ನ ತಂದೆಯನ್ನು ಕಾರಾಗೃಹದಲ್ಲಿರಿಸಿದ್ದಾಗ ಕದ್ದು ಉಪಚರಿಸುತ್ತಿದ್ದಳೆಂದು ಕೋಪಗೊಂಡು ಅವಳನ್ನೂ ತಂದೆಯೊಂದಿಗೆ ಬಂಧಿಸಿದ. ಪರಿಸ್ಥಿತಿಗಳು ವಿಕೋಪಕ್ಕೆ ತಿರುಗಿ ಕೊನೆಗೆ ತನ್ನ ತಂದೆ ತಾಯಿಯನ್ನು ಕೊಲ್ಲಿಸಿದ. ಅರಿಮೆಯೇ ಮೊದಲಾದ ಮಾನಸಿಕ ಸಮಸ್ಯೆಗಳು ಗಾಢವಾದರೆ, ಮಿತಿ ಮೀರಿದರೆ ಯಾರೂ ಏನೂ ಮಾಡಲಾಗದು ಎಂಬುವುದಕ್ಕೆ ಇದೊಂದು ಉದಾಹರಣೆ. ಬಿಂಬಿಸಾರ ಬುದ್ಧನ ಶಿಷ್ಯನೂ, ಪೋಷಕನೂ, ಸ್ನೇಹಿತನೂ ಆಗಿದ್ದ. ಬುದ್ಧನ ತಂಗುವಿಕೆಗೆ ಮತ್ತು ಬೋಧನೆಗೆ ಅನುವಾಗುವಂತೆ ವೇಣುವನವನ್ನು ಬಿಟ್ಟುಕೊಟ್ಟಿದ್ದ. ಸಾವಿರಾರು ಜನರು ಸೇರುತ್ತಿದ್ದರು.

ಆದರೆ ಬುದ್ಧನ ಕಸಿನ್ ದೇವದತ್ತ ಬುದ್ಧನ ಬಗ್ಗೆಗಿದ್ದ ತನ್ನ ದಾಯಾದಿ ಮತ್ಸರದಿಂದ ಅಜಾತಶತ್ರುವಿನೊಂದಿಗೆ ಸೇರಿಕೊಂಡು ತನ್ನ ವೈರ ಸಾಧನೆಗೆ ಪೂರಕವಾಗುವಂತೆ ಅಮೋಘವರ್ಷ ತನ್ನ ತಂದೆಯ ವಿರುದ್ಧ ಕತ್ತಿ ಮಸೆಯುವಂತೆ ಮಾಡಿದ. ಬುದ್ಧನ ಸಾಂಗತ್ಯಕ್ಕೆ, ವರ್ಚಸ್ಸಿಗೆ ಬಿಂಬಿಸಾರನನ್ನು ಅಜಾತಶತ್ರುವಿನಿಂದ ಕಾಪಾಡಲು ಆಗಲಿಲ್ಲ. ಬುದ್ಧನ ಚರಿತ್ರೆಯಲ್ಲಿ ಕರುಳು ಹಿಂಡುವ ದುರಂತವಿದು.

ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗ (ಕ್ರಿಸ್ತಶಕ 800 ರಿಂದ 878) ಮತ್ತು ಅವರ ಮಗ ಎರಡನೆಯ ಕೃಷ್ಣನ ಜೊತೆ ಮನಸ್ತಾಪ ಮತ್ತು ಸಂಘರ್ಷಗಳಿದ್ದು ಕುಟುಂಬ ಮತ್ತು ರಾಜಕಾರಣವೆರಡರಲ್ಲೂ ಅದರ ನೆರಳು ಬಿದ್ದಿತ್ತು. ಮೊಗಲ್ ಸಾಮ್ರಾಟ ಅಕ್ಬರ್ ಮತ್ತು ಅವನ ಮಗ ಸಲೀಂ (ಜಹಂಗೀರ್) ನಡುವಿನ ಮನಸ್ತಾಪಗಳು ಮತ್ತು ಸಂಘರ್ಷಗಳು ಅತಿರೇಕಕ್ಕೆ ಮುಟ್ಟಿ 1599ರಲ್ಲಿ ತಂದೆಯ ವಿರುದ್ಧ ದಂಗೆ ಎದ್ದಿದ್ದ. ಅವರಿಬ್ಬರ ಸಂಘರ್ಷಗಳು ನಿಜಕ್ಕೂ ಯಾವುದೇ ಮನೆಯೊಂದರಲ್ಲಿ ತಂದೆ ಮಗನ ನಡುವಿನ ಮನಸ್ತಾಪಗಳಂತೆ ವಿಧವಿಧವಾದ ಸನ್ನಿವೇಶಗಳಿಂದ, ವ್ಯಕ್ತಿಗಳಿಂದಾಗುತ್ತಾ ಹೋಗುತ್ತವೆ.

1657ರಲ್ಲಿ ಷಾಜಹಾನ್‍ನನ್ನು ಬಂಧಿಸಿದ ಔರಂಗಜೇಬ್ ತಂದೆಯ ವಿರುದ್ಧ ತನ್ನ ಭಿನ್ನತೆಯನ್ನು ಸ್ಪಷ್ಟಪಡಿಸಿದ್ದ.
ಬಿಜಾಪುರದ ಮಹ್ಮದ್ ಆದಿಲ್ ಶಾ ಮತ್ತು ಅವನ ಎರಡನೆಯ ಮಗ ಅಲಿ ಆದಿಲ್ ಶಾ (ಆಳ್ವಿಕೆ 1656 ರಿಂದ 1672) ನಡುವಿನ ಪೈಪೋಟಿ ಮತ್ತು ಮನಸ್ತಾಪವು ಬೇರೊಂದು ರೀತಿಯಲ್ಲಿ ನಮಗೆ ಸ್ಮಾರಕವಾಗಿ ನಿಂತಿದೆ. ಮಹ್ಮದ್ ಆದಿಲ್ ಶಾ ಗೋಳಗುಮ್ಮಟವನ್ನು ಕಟ್ಟಿಸಿದ. ತಂದೆಯ ಮೇಲಿನ ಸ್ಪರ್ಧೆಗೆ ಅಲಿ ಅದಕ್ಕಿಂತಲೂ ಉನ್ನತವಾದ ಕಟ್ಟಡವಾದ ಅಲಿರೋಜಾ ಕಟ್ಟಿಸಲು ಪ್ರಾರಂಭಿಸಿದ.

ಆದರೆ, ಕೆಲಸವು ಪೂರ್ತಿಯಾಗದೇ ಬಾರಾ ಕಮಾನ್ ಆಗಿ ಉಳಿಯಿತು. ತಂದೆಯ ವಿರುದ್ಧವಾಗಿ ಹೂಡಿದ ಸ್ಪರ್ಧೆಯಲ್ಲಿ ಅಲಿ ವಿಜಯಿಯಾಗಲಿಲ್ಲ. ಅವನ ಸೋಲಿನ ಸ್ಮಾರಕವಾಗಿ ಬಾರಾಕಮಾನ್ ನಿಂತಿದೆ. ಒಂದು ವೇಳೆ ಅದು ಪೂರ್ಣಗೊಂಡಿದ್ದರೆ ವಿಶ್ವದಲ್ಲಿಯೇ ಅದೂ ಒಂದು ಅತ್ಯದ್ಭುತವಾದ ಕಟ್ಟಡವಾಗಿ ನಿಂತಿರುತ್ತಿತ್ತು. ಮನುಷ್ಯನ ಮನಸ್ಸಿರುವವರಿಗೆಲ್ಲಾ ಒಂದಲ್ಲಾ ಒಂದು ಮಾನಸಿಕ ಸಮಸ್ಯೆಗಳು ಇದ್ದೇ ಇರುತ್ತವೆ ಮೂಗಿರುವವರಿಗೆ ನೆಗಡಿ ತಪ್ಪದಂತೆ. ನೆಗಡಿಗಾದರೂ ಔಷಧಿ ಇಲ್ಲವೇನೋ ಆದರೆ ಮನೋರೋಗಕ್ಕೆ ಮದ್ದಿದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version