ಭಾವ ಭೈರಾಗಿ
ಕವಿತೆ | ಒರೆಸಿ ಬಿಡು ಬೇಕಾದರೆ
- ಮೂಲ : ಯೂಜೀನ್ ಮಾಂಟೇಲ್, ಕನ್ನಡಕ್ಕೆ : ಓ.ಎಲ್.ನಾಗಭೂಷಣ ಸ್ವಾಮಿ
ಒರೆಸಿ ಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು
ಡಸ್ಟರು ಸುಮ್ಮನೆ ಒರೆಸಿಬಿಡುವ ಹಾಗೆ
ನಿನ್ನ ವರ್ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ
ನಾನು ಹೆಜ್ಜೆ ಇಟ್ಟು ನಡೆದ ಬಳಲಿದ
ಹಾದಿಗಳೆಲ್ಲ ನಿನ್ನಲ್ಲಿ ತಲುಪಿ ನೆಲೆಗೊಳ್ಳಲಿ ಬಿಡು
ನಡೆ ನಡೆಯುತ್ತ ನನ್ನ ನಿಜ ದಂದುಗ ಮರೆವೆಗೆ ಸಂದಿತ್ತು ನಾನಿಲ್ಲಿಗೆ ಮತ್ತೆ ಬಂದಿರುವುದೇ ಸಾಕ್ಷಿ
ನನ್ನ ಮಾತು ವಚನವಾಗದೆ ಬರಿಯ ರಚನೆಯಾಗಿತ್ತು
ದಡಕ್ಕೊಮ್ಮೆ ಬಡಿದು ಉಲಿಯುವ ನಿನ್ನ ಅಲೆ ದನಿ ಕೇಳದಾಗ ಒಮ್ಮೊಮ್ಮೆ
ಮರೆತ ತನ್ನೂರನ್ನು ನೆನವ ಅಳಿಮನದವನಂತೆ ನನ್ನೆದೆ ತಳಮಳಗೊಳುತಿತ್ತು
ನೀಲವಿಸ್ತಾರಕ್ಕೆ ಎದೆ ತೆರೆದೊಡ್ಡಿ ಹರಡಿರುವ ನಿನ್ನ ಬಯಲ ಸೌಂದರ್ಯಕ್ಕಿಂತ
ನಟ್ಟ ನಡುಹಗಲ ಬಿಸಿಲುರಿಯಲ್ಲಿ ನಿರ್ಜನ ದಡದಲ್ಲಿ ಕೇಳುವ
ನಿನ್ನ ಅಲೆಗಳ ಸದ್ದಿರದ ಏದುಬ್ಬಸದ ದನಿ ಪಾಠ ಕಲಿಸಿದೆ ನನಗೆ
ಶರಣು ಶರಣು ನಿನಗೆ
ಬೆಳಕಿನ ಕಿರಣದೊಂದು ಅಣುವು ಮಾತ್ರ ನಾನು ಉರಿವುದೊಂದು ಬಿಟ್ಟು ಇನ್ಯಾವ ಅರ್ಥವೂ ಇಲ್ಲ ನನಗೆ
(‘ಒರೆಸಿ ಬಿಡು ಬೇಕಾದರೆ‘ – ಇಟಲಿಯ ಕವಿ ಯೂಜೀನ್ ಮಾಂಟೇಲ್ ನ ಈ ಕವಿತೆಯನ್ನು ಅನುವಾದಕರು ಹಾಗೂ ವಿಮರ್ಶಕರೂ ಆದ ಓ.ಎಲ್.ನಾಗಭೂಷಣ ಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಗಾತ ಪುಸ್ತಕ ಪ್ರಕಟಿಸಿರುವ ‘ ಕನ್ನಡಕ್ಕೆ ಬಂದ ಕವಿತೆ’ ಪುಸ್ತಕದಿಂದ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243