ಭಾವ ಭೈರಾಗಿ
ಕವಿತೆ | ನ್ಯಾಯ ಕೇಳುತ್ತಿವೆ ಪಾರಿವಾಳಗಳು
ಜಾತಿ ಮತಗಳ ದ್ವೇಷದಲ್ಲಿ
ಸುಟ್ಟು ಹೋದ ಗುಡಿಸಲುಗಳು
ಉರಿದು ಎದ್ದು ಹೊಗೆಯಾಗಿ
ನಭಕೆ ಚಿಮ್ಮಿ ಹಕ್ಕಿಗಳಾಗಿ
ನ್ಯಾಯ ಕೇಳುತ್ತಿವೆ ಪಾರಿವಾಳಗಳು
ಕೋರ್ಟಿನ ಮುಂದೆ.
ಉತ್ತಿದವರು ಬಿತ್ತಿದವರು
ಕೂಳಿಲ್ಲದೆ ಬತ್ತಿ ಹೋದವರು
ಆಳಿದವರು ಬಾಳಿದವರು
ಅಧಿಕಾರವಿಲ್ಲದೆ ಅಸ್ಪೃಶ್ಯರಾದವರು
ಪಾಲು ಕೇಳುತ್ತಿವೆ ಪಾರಿವಾಳಗಳು
ಸೌಧದ ಮುಂದೆ.
ಕಾಲಕಾಲದಿಂದಲೂ ನಿಮಗೆ
ಮನೆಗಳನ್ನು ಕಟ್ಟಿದವರು
ಮನಗಳನ್ನು ಕಟ್ಟಿದವರು
ನಾಡಿಲ್ಲದೆ, ಗೂಡಿಲ್ಲದೆ, ಕಾಡಿಲ್ಲದೆ
ಜಾಗ ಕೇಳುತ್ತಿವೆ ಪಾರಿವಾಳಗಳು
ಬಂಗಲೆಗಳ ಮುಂದೆ.
ಆನೆ ಕುದುರೆ ಕಾಲಾಳುಗಳು
ಬಣ ಬಣಗಳ ನಡುವೆ
ಬಡಿದಾಡಿ ಸತ್ತವರು
ನಿಮಗಾಗಿಯೆ ಜೀವ ತೆತ್ತವರು
ಬದುಕು ಕೇಳುತ್ತಿವೆ ಪಾರಿವಾಳಗಳು
ಅರಮನೆಗಳ ಮುಂದೆ.
ಶತಮಾನಗಳ ನೋವ ಬಿಕ್ಕಳಿಸಿ
ನ್ಯಾಯಕ್ಕಾಗಿ ಆಗ್ರಹಿಸಿ
ಚಿಲಿಪಿಲಿ ಕಿಚಿಪಿಚಿ ದನಿಯ ಎತ್ತರಿಸಿ
ಹಾಡುತ್ತಿರುವ ಹಕ್ಕಿಗಳನ್ನು
ಕಾಯುತ್ತಾ ನಿಂತಿವೆ ಪ್ರತಿಮೆಗಳು
ಊರಿನ ಮುಂದೆ.
–ಡಾ. ಪ್ರಸನ್ನ ನಂಜಾಪುರ
ಸುದ್ದಿದಿನ.ಕಾಂ|ವಾಟ್ಸಾಪ್|9986715401