ಅಂತರಂಗ

ಅರಿಮೆಯ ಅರಿವಿರಲಿ-50 : ಮನಸ್ಸೆಂದರೆ ಏನದು..?

Published

on

  • ಯೋಗೇಶ್ ಮಾಸ್ಟರ್

ದೇವರು, ಧರ್ಮ, ಪ್ರೇಮ, ರಾಷ್ಟ್ರಭಕ್ತಿ, ಸಂಬಂಧ, ಶೀಲ, ಜೀವನ, ಆತ್ಮ, ಪರಮಾತ್ಮ, ಆಧ್ಯಾತ್ಮವೇ ಮೊದಲಾದ ಅನೇಕ ವಿಷಯಗಳು ಅತ್ಯಂತ ಅಪವ್ಯಾಖ್ಯಾನಕ್ಕೊಳಗಾಗಿವೆ. ಅದರಂತೆಯೇ ಮನಸ್ಸೂ ಕೂಡಾ. ವ್ಯಕ್ತಿಯು ತನ್ನ ಬದುಕಿನಲ್ಲಿ ಬಹು ಜನರು ಉಪಯೋಗಿಸುವ ಮತ್ತು ಬಹಳ ಗೌರವ ಕೊಡುವ ಕೆಲವು ಪರಿಕಲ್ಪನೆಗಳನ್ನು ತಾನೂ ಬಳಸಲು ಇಷ್ಟಪಡುತ್ತಾನೆ.

ಹಾಗೆ ಅವುಗಳನ್ನು ಬಳಸುವುದರಿಂದ ತನ್ನ ಗೌರವವು ಹೆಚ್ಚುತ್ತದೆ ಎಂದು ಭಾವಿಸುತ್ತಾನೆ. ಹಾಗಾಗಿ ಅದನ್ನು ತನಗೆ ತಿಳಿದ ಮಟ್ಟಿಗೆ ಬಳಸಲು, ವಿವರಿಸಲು ಪ್ರಾರಂಭಿಸುತ್ತಾನೆ. ಅವುಗಳೆಲ್ಲವೂ ಅಮೂರ್ತ (ಅಬ್ಸ್‍ಟ್ರಾಕ್ಟ್) ಆಗಿರುವುದರಿಂದ, ಭೌತಿಕವಾಗಿ ಸಿಕ್ಕು ಪ್ರಯೋಗಾಲಯದಲ್ಲಿ ಪ್ರಯೋಗಗಳ ಮೂಲಕ ಪರೀಕ್ಷಿಸಲು ಆಗದೇ ಇರುವುದಾಗಿರುವುದರಿಂದ ತಮ್ಮ ತಮ್ಮ ಮೂಗಿನ ನೇರಕ್ಕೆ, ತಮ್ಮ ತಮ್ಮ ಬಯಕೆಗಳಿಗೆ ವಿವರಿಸಿಕೊಂಡು ಆ ಅಮೂರ್ತ ಮತ್ತು ಮೌಲಿಕ ಪದಗಳು ತಮ್ಮವಾಗಿವೆ ಎಂದು ತೃಪ್ತಿಪಡಲು ಸಾಧ್ಯ.

ಸರಿ, ಇವು ಅಪವ್ಯಾಖ್ಯಾನಗಳು ಎಂದು ತಿಳಿವುದು ಹೇಗೆ? ವ್ಯಕ್ತಿಗಳು ಪ್ರಸ್ತುತಪಡಿಸುವ ವಿವರಣೆಗಳನ್ನು ಅಥವಾ ಅರ್ಥಗಳನ್ನು ಛೇದಿಸಿಕೊಂಡು ಹೋದಂತೆಲ್ಲಾ ಒಂದು ಕ್ರಮವರಿದ, ಹದವರಿತ ಅರಿವಿಗೆ ನಿಲುಕುತ್ತಾ ಹೋಗುತ್ತವೆ. ಉತ್ಪ್ರೇಕ್ಷೆಯಿಂದ, ಏಕಮುಖ ಅಭಿಪ್ರಾಯದಿಂದಲೋ, ಪೂರ್ವಾಗ್ರಹ ಪೀಡಿತವಾಗಿಯೋ ಇರುವಂತಹ ಜಾಳುಜಾಳಾದ ವಿವರಣೆಗಳ ಹೊಟ್ಟು ಹಾರಿಹೋಗುತ್ತವೆ. ಆಗ ಆ ಪರಿಕಲ್ಪನೆಗಳ ಅರ್ಥ ಒಂದು ಹಂತಕ್ಕೆ ಸರಿಯಾಗಿ ಆಗುತ್ತವೆ.

ಮನಸ್ಸಾಗಲಿ, ದೇವರಾಗಲಿ; ಅವು ಅಮೂರ್ತವಾದರೂ, ಅದೆಷ್ಟೇ ಗೊಂದಲಗಳ ಗೂಡಾದರೂ ಕ್ರಮವರಿತ ಮತ್ತು ನಿಖರವಾದ ಗ್ರಹಿಸುವಿಕೆಯಿಂದ ಅರ್ಥ ಮಾಡಿಕೊಳ್ಳುವುದು ಕಷ್ಟವೇನಿಲ್ಲ. ವಾಸ್ತವವಾಗಿ ಯಾವುದ್ಯಾವುದು ಅತ್ಯಂತ ಜಟಿಲವೆಂದು, ಸಂಕೀರ್ಣವೆಂದು ಮತ್ತು ಅರ್ಥಕ್ಕೆ ನಿಲುಕದೆಂದು ಹೇಳುತ್ತಾರೋ ಅವೆಲ್ಲವೂ ಸರಳವೇ ಆಗಿರುತ್ತದೆ. ಆದರೆ ಅವು ಅಷ್ಟೊಂದು ಸರಳವೂ ಮತ್ತು ನೇರವೂ ಆಗಿವೆ ಎಂದರೆ ಅದನ್ನು ಸ್ವೀಕರಿಸುವ ಮತ್ತು ಗೌರವಿಸುವವರು ಲಘುವಾಗಿ ಅಥವಾ ಹಗುರವಾಗಿ ಕಂಡುಬಿಡಬಹುದು.

ಅದರ ಮೌಲ್ಯವನ್ನು ಗುರುತಿಸದೇ ಹೋಗಿಬಿಡಬಹುದು ಎಂಬ ಆತಂಕದಿಂದ ಅವುಗಳನ್ನು ಕ್ಲಿಷ್ಟಗೊಳಿಸುತ್ತಾರೆ. ಸಂಕೀರ್ಣವೆಂಬಂತೆ ಪ್ರದರ್ಶಿಸುತ್ತಾರೆ. ಈ ಅಮೂರ್ತವಾದ ಪರಿಕಲ್ಪನೆಗಳನ್ನು ವಿವರಿಸುವವರು ಗೊಂದಲಗಳನ್ನು ಸೃಷ್ಟಿಸುತ್ತಾರೆಯೇ ಹೊರತು, ಅವುಗಳ ರಚನೆಯಲ್ಲಿ, ಸ್ವಭಾವದಲ್ಲಿ, ಅಸ್ತಿತ್ವದಲ್ಲಿ ಯಾವ ಗೊಂದಲಗಳೂ ಇಲ್ಲ.

ಮನಸ್ಸಿನ ವಿಜ್ಞಾನ

ಇನ್ನು ಮನಸ್ಸಂತೂ ಬರಿಯ ಅಮೂರ್ತವಾಗಿದ್ದರೂ ಪರಿಕಲ್ಪನೆಯಲ್ಲ. ಅದು ವಿಚಾರವೂ ಹೌದು, ವಿಜ್ಞಾನವೂ ಹೌದು. ಹೆಸರಿಸಿರುವಂತಹ ಚೈತನ್ಯ. ವಿದ್ಯುತ್ಚಕ್ತಿಯಂತೆ ಅದು ವಿಜ್ಞಾನದ ಶಾಖೆಯಾಗಿದ್ದು ಅನೇಕ ರೀತಿಯ ಪ್ರಯೋಗಗಳಿಗೆ ಒಳಗಾಗಿದೆ. ದೇವರ ರೀತಿಯಲ್ಲಿ ತಾತ್ವಿಕವಾಗಿ ಮಾತ್ರ ವಿವರಿಸುವ ಅಗತ್ಯವಿಲ್ಲ. ದೇವರಿಗೂ ಮತ್ತು ಮನಸ್ಸಿಗೂ ಏನೂ ಸಂಬಂಧವಿಲ್ಲ. ಮನಸ್ಸು ನೇರವಾಗಿ ಮನುಷ್ಯನ ಚಿಂತನಾ ಸಾಮರ್ಥ್ಯ ಮತ್ತು ಆಲೋಚನಾ ಕ್ರಮಕ್ಕೆ ಸಂಬಂಧಿಸಿದ್ದು.

ದೇವರ ವರ ಅಥವಾ ಶಾಪ ಕೂಡಾ ಮನಸ್ಸಿನ ಗ್ರಹಿಕೆಯ ಸಾಮರ್ಥ್ಯ ಅಥವಾ ದೌರ್ಬಲ್ಯಕ್ಕೆ ಸಂಬಂಧಿಸಿದ್ದೇ ಹೊರತು ಇದು ದೇವರ ಶಕ್ತಿಗೆ ಸಂಬಂಧಿಸಿದ ಪ್ರಾಯೋಗಿಕ ವಿಜ್ಞಾನದ ಶಾಖೆಯಲ್ಲ. ಇದು ಸರಳ ಎಂಬುದೇನೋ ನಿಜ. ಆದರೆ ಬಹಳ ಸೂಕ್ಷ್ಮವೂ ಮತ್ತು ಸಂವೇದನಾಶೀಲವೂ ಆಗಿರುವುದರಿಂದ ನಿಭಾಯಿಸುವುದರಲ್ಲಿ ಜಟಿಲತೆ ತೋರುತ್ತದೆ. ಆದರೆ, ಇದನ್ನು ಅರಿಯುವುದರಿಂದ ಮತ್ತು ನಿಭಾಯಿಸುವ ತಂತ್ರಗಳನ್ನು ಗಮನಪೂರ್ವಕವಾಗಿ ಬಳಸಿದ್ದಲ್ಲಿ ಸರಾಗವೇ ಇರುತ್ತದೆ.

“ಮನಸ್ಸು, ಆಲೋಚಿಸಲಾಗುವ ಜೀವಿಗಳಲ್ಲಿನ ಚೈತನ್ಯ ಅಥವಾ ಸಾಮರ್ಥ್ಯವಿದು. ಈ ಸಾಮರ್ಥ್ಯದ ಅಥವಾ ಚೈತನ್ಯದ ಪ್ರಧಾನ ಕೆಲಸಗಳೆಂದರೆ ಭಾವಿಸುತ್ತದೆ, ಆಲೋಚಿಸುತ್ತದೆ ಮತ್ತು ಸಂಕಲ್ಪಿಸುತ್ತದೆ.” ಇಷ್ಟೇ ಎಂದು ಹೇಳಿಬಿಟ್ಟರೆ ಬಹಳ ಸಣ್ಣ ವ್ಯಾಖ್ಯಾನವೇನೋ ನಿಜ. ಆದರೆ ಮನಸ್ಸಿನ ಅಸ್ತಿತ್ವ ಮತ್ತು ಅದರ ಚಟುವಟಿಕೆಗಳ ರೂಪುಗೊಳ್ಳುವುದು ಪ್ರಕ್ರಿಯೆಯ ಮೂಲಕ. ಅದನ್ನು ಆಧರಿಸಿಕೊಂಡು ಬೇಕಾದಂತೆ ಟಿಪ್ಪಣಿಗಳನ್ನು ಮಾಡಬಹುದು, ಪ್ರಮೇಯಗಳನ್ನು ಮಾಡಬಹುದು ಹಾಗೂ ವಿಚಾರ ಸರಣಿಗಳನ್ನು ವಿಸ್ತಾರಗೊಳಿಸುತ್ತಾ ಹೋಗಬಹುದು.

ಮನಸ್ಸೆಂಬ ಅದು

ಮನಸ್ಸನ್ನು ಸಿಕ್ಕಾಪಟ್ಟೆ ಶಾಸ್ತ್ರೀಯವಾಗಿ ನಾವು ಈಗ ಅಧ್ಯಯನ ಮಾಡಲು ಹೋಗುವುದು ಬೇಡ. ನಾವು ಮಹಾಪ್ರಭಂದವನ್ನು ರಚಿಸಬೇಕಿಲ್ಲ. ಮನಸ್ಸೆಂಬ ‘ಅದು’ ನಮ್ಮಲ್ಲಿ ಇರುವುದರಿಂದ ಅದರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿದರೆ ಎರಡು ಹೆಜ್ಜೆ ಮುಂದೆ ಇಡಬೇಕಾದ ಜಾಗದಲ್ಲಿ ಮುನ್ನಡೆಯಬಹುದು, ಹಿಂದಕ್ಕೆ ಸರಿಯಬೇಕಾದ ಕಡೆ ಸರಿಯಬಹುದು.

ಇಷ್ಟಕ್ಕಷ್ಟೇ ನಾವೀಗ ಗಮನ ಕೊಡಬೇಕಾಗಿರುವುದು. ಸಮಸ್ಯೆ ಏನೆಂದರೆ ಮುನ್ನಡೆಯ ಬೇಕಾದ ಕಡೆ ಹಿಂದೆ ಸರಿಯುವುದು, ಹಿಂದೆ ಸರಿಯಬೇಕಾದರೆ ಕಡೆ ಮುನ್ನುಗ್ಗುವುದು ಮಾನಸಿಕ ಸಮಸ್ಯೆಯ ಮಹಾಲಕ್ಷಣ.
ಮನಸ್ಸಿನ ಮತ್ತೊಂದು ಗುಣ ಲಕ್ಷಣವೆಂದರೆ ಅದರ ಚಟುವಟಿಕೆಯನ್ನು ಅದರಿಂದಲೇ ನಿಲ್ಲಿಸಬೇಕು. ಅದು ಮಂಕಾಗಿ ಮೂಲೆ ಹಿಡಿದಿದ್ದರೆ ಅದೇ ಪ್ರೇರೇಪಿಸಬೇಕು. ವಿಲಕ್ಷಣವಾದರೂ ನಿಜ. ಅಂದರೆ ಮನಸ್ಸಿನ ಚಟುವಟಿಕೆಗಳನ್ನು ಮನಸ್ಸೇ ನಿಯಂತ್ರಿಸಬೇಕು.

ಆಲೋಚನೆಗಳೇ ಅದರ ಚಟುವಟಿಕೆಗಳು. ಅದರ ಆ ಚಟುವಟಿಕೆಗಳೇ ಮನಸ್ಸು ಎಂಬ ಅಮೂರ್ತವನ್ನು ಮೂರ್ತೀಭವಿಸುವಂತೆ ಮಾಡುವುದು. ಅದೇ ಮನಸ್ಥಿತಿ ಎಂಬುದನ್ನು ಅಸ್ತಿತ್ವಕ್ಕೆ ತರುವುದು. ಅದೇ ಮನೋಭಾವ ಎಂಬುದನ್ನು ರೂಪಿಸುವುದು ಮತ್ತು ಅದೇ ಗೊಂದಲಗಳನ್ನು ಸೃಷ್ಟಿಸಿಕೊಂಡು ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುವುದು.

ಮನಸ್ಸೆಂಬುದೇ ಬಯಸುವುದು, ಆಲೋಚಿಸುವುದು, ಸಂಕಲ್ಪಿಸುವುದು, ಆಶಿಸುವುದು, ಭಾವಿಸುವುದು, ವಿಚಾರಿಸುವುದು; ಇವುಗಳಿಂದಲೇ ಆ ಮನಸ್ಸು ಎಂಬುದೂ ಕೂಡಾ ರೂಪುಗೊಳ್ಳುವುದು. ಅದೇ ಸಾಮರ್ಥ್ಯವೂ ಆಗುವುದು, ಅದೇ ದೌರ್ಬಲ್ಯವೂ ಆಗುವುದು.ಯಾವುದು ಆಲೋಚಿಸುವುದೋ ಅದರ ಬಗ್ಗೆ ಆಲೋಚಿಸಬೇಕು. ಇದೇ ಮಜ.

ಮನಸ್ಸು ಮಿತ್ರ ಮತ್ತು ಶತ್ರು

  • ಉದ್ಧರೇದಾತ್ಮನಾತ್ಮಾನಂ ನಾತ್ಮನಮವಸಾಧಯೇತ್
    ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ

ಭಗವತ್ಗೀತೆಯ 6:5 ಶ್ಲೋಕದಲ್ಲಿ ಆತ್ಮ ಎಂಬ ಪದವನ್ನು ಮನಶಕ್ತಿಯನ್ನಾಗಿಯೇ ಹೆಸರಿಸಿದ್ದಾರೆ. ಉದ್ಧಾರ ಅಂತ ಏನಾದರೂ ಆಗುವುದಿದ್ದರೆ ಅದು ನಿನ್ನ ಮನಸ್ಸಿನಿಂದಲೇ ಆಗುವುದು. ಅದರಿಂದಲೇ ಪತನಗೊಳ್ಳುವುದು ಬೇಡ. ಮನಸ್ಸೇ ಮನಸ್ಸಿಗೆ ಸ್ನೇಹಿತ. ಮನಸ್ಸೇ ಮನಸ್ಸಿಗೆ ಶತ್ರುವಾಗಬಹುದು. ಬಹಳ ಸ್ಪಷ್ಟವಾಗಿ ಮನಸ್ಸಿಂದಲೇ ಮನಸ್ಸು. ಮನಸ್ಸಿನ ಆಲೋಚನೆಗಳಿಂದಲೇ ಮನಸ್ಸಿನ ಚಟುವಟಿಕೆಗಳು.

ಆ ಆಲೋಚನೆಗಳು ರೂಪಿಸಿಕೊಂಡಿರುವ ತನ್ನತನಕ್ಕೆ ಪೂರಕವಾಗಿದ್ದರೆ ಮನಸ್ಸೆಂಬುದು ಗೆಳೆಯನಂತೆ. ಅದೇ ತನ್ನತನಕ್ಕೆ ಮಾರಕವಾಗಿದ್ದರೆ ಶತ್ರುವಿನಂತೆ. ತತ್ವಗಳು, ಸಿದ್ಧಾಂತಗಳು, ಆಧ್ಯಾತ್ಮದ ಚಿಂತನೆಗಳು ಮತ್ತು ಪ್ರಯೋಗಗಳು; ಎಲ್ಲವೂ ಈ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲೇ ಸಾವಿರಾರು ವರ್ಷಗಳಿಂದ ತಮ್ಮ ಸಮಯ, ಶ್ರಮ, ಸಂಪನ್ಮೂಲ, ಪ್ರತಿಭೆಗಳನ್ನೆಲ್ಲಾ ಬಳಸಿವೆ.

ಆದರೂ ನಾವು ಇನ್ನೂ ಸಶಕ್ತವಾದ ಮನಸ್ಸನ್ನು ಹೊಂದದೇ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಇದಕ್ಕೆ ಕಾರಣವೆಂದರೆ ಮನಸ್ಸೆಂಬ ಸೂಕ್ಷ್ಮ ಚೈತನ್ಯವನ್ನು ನಿಭಾಯಿಸುವ ಎಲ್ಲಾ ವಿಧಾನಗಳನ್ನು ಅಥವಾ ಮಾರ್ಗಗಳನ್ನು ಸಾಂಪ್ರದಾಯಿಕ ಆಚರಣೆಗಳನ್ನಾಗಿಸಿ ಮೇಲಿನ ಸ್ತರದಲ್ಲಿಯೇ ಉಳಿಸಿಬಿಟ್ಟಿದ್ದು. ಚಟುವಟಿಕೆಗಳ ಜೊತೆಜೊತೆಗೆ ಬಹಳ ಮುಖ್ಯವಾಗಿ ದೃಷ್ಟಿ ಮತ್ತು ಗಮನವೆರಡನ್ನೂ ಹೊಂದುವ ಬದಲು, ಬರಿದೇ ಗೊಡ್ಡು ಆಚರಣೆಗಳನ್ನಾಗಿಸಿದ್ದು. ಆಸೆ ಮತ್ತು ಭಯಗಳ ಮೂಲಧಾತುಗಳ ಮೇಲೆಯೇ ಆಧರಿಸಿರುವ ಲೌಕಿಕವಾದ ಹೊರದೃಷ್ಟಿಯನ್ನು ಒಳದೃಷ್ಟಿಯನ್ನಾಗಿಸಿಕೊಳ್ಳದೇ ಹೋದದ್ದು.

ಆಧ್ಯಾತ್ಮ, ಸಿದ್ಧಾಂತಗಳು, ಧಾರ್ಮಿಕ ಆಚರಣೆಗಳು, ದೈವಿಕ ಪರಿಕಲ್ಪನೆಗಳು; ಯಾವುದ್ಯಾವುದು ಮನುಷ್ಯನ ಉದ್ಧಾರಕ್ಕಾಗಿ ಮನಸ್ಸನ್ನು ತರಬೇತಿಗೊಳಿಸಲು ಬಂದವೋ ಅವೆಲ್ಲವೂ ಬಹುಪಾಲು ವಿಫಲಗೊಂಡವು. ಇಂದು ಇನ್ನೂ ಮಾನಸಿಕ ಸಮಸ್ಯೆಗಳು ಅಸ್ತಿತ್ವದಲ್ಲಿ ಬಹುದೊಡ್ಡ ಸ್ವರೂಪದಲ್ಲಿ ಇರಲು ಕಾರಣ ಅದನ್ನು ಅರಿಯುವ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಬೆಳೆಸಿಕೊಳ್ಳದೇ ಬರಿಯ ಆಚರಣೆಗಳ ಮಟ್ಟಕ್ಕೆ ನಿಂತದ್ದು.

ನಿಜಕ್ಕೂ ಇವುಗಳ ಯಶಸ್ಸಿಗೆ ಬೇಕಾಗಿದ್ದದ್ದು ಅರಿವು. ಸಂವೇದನಾಶೀಲ ಅರಿವು. ಸುಮ್ಮನೆ ಆಲೋಚಿಸಿ ನೋಡಿ. ನಮ್ಮ ಮನಸ್ಸೇ ಸಬ್ಜೆಕ್ಟ್. ಆ ಸಬ್ಜೆಕ್ಟಿಗೆ ತಾನೇ ಅಂದರೆ ಮನಸ್ಸೇ ಆಬ್ಜೆಕ್ಟ್. ಮಾಡುವುದು ಮತ್ತು ಮಾಡಿಸಿಕೊಳ್ಳುವುದು ಒಂದೇ ಆಗಿರುವುದು. ಸಾಲದಲ್ಲೆ ಮಾಡುವ ಕ್ರಿಯೆಯಾಗಿಯೂ ರೂಪಾಂತರ ಹೊಂದುತ್ತದೆ. ನಿಜಕ್ಕೂ ಮನಸ್ಸು ಬಹಳ ಕುತೂಹಲಕಾರಿಯಾದ, ಆಸಕ್ತಿಕರವಾಗಿ ಮತ್ತು ಸೃಜನಶೀಲ ಪ್ರಯೋಗಗಳಿಗೆ ಒಡ್ಡಿಕೊಳ್ಳಲಾಗುವಂತಹ ವಸ್ತು.

ಬೌದ್ಧರಲ್ಲಿಯೂ ಈ ಮನಸ್ಸಿನ ಸೂಕ್ಷ್ಮತೆಯ ಬಗ್ಗೆ ಬಹಳಷ್ಟು ಸಂವೇದನಾಶೀಲವಾದ ಮತ್ತು ಸೃಜನಶೀಲವಾದ ಪ್ರಯೋಗಗಳು ನಡೆದಿವೆ. ಅದರಲ್ಲೂ ಜೆನ್ ಮತ್ತು ಟಾವೋ ಹಾದಿಗಳು ಬಹಳ ಮುಕ್ತವಾಗಿಯೂ ಮತ್ತು ಆಳವಾಗಿಯೂ ಇವೆ.

ಗುರು ಲಾಟ್ಸೆ ಒಂದು ದಿನ ನಿದ್ರೆಯಿಂದ ಎದ್ದಾದ ಮೇಲೆ ಗಂಭೀರವಾಗಿ ಚಿಂತಿಸುತ್ತಿದ್ದನಂತೆ. ಶಿಷ್ಯರು ಕಾರಣ ಕೇಳಿದರೆ, “ನಾನು ನನ್ನ ಕನಸಿನಲ್ಲಿ ಚಿಟ್ಟೆಯಾಗಿ ಹಾರಾಡುತ್ತಿದ್ದೆ” ಎಂದನಂತೆ. ಸರಿ, ಈಗ ಅದಕ್ಕೇನೆಂದು ಕೇಳಿದರೆ, “ನಾನು ಚಿಟ್ಟೆಯಾಗಿ ಹಾರಾಡುವಂತೆ ಕನಸು ಕಂಡೆ. ಒಂದು ವೇಳೆ ಆ ಚಿಟ್ಟೆಯೇ ಲಾಟ್ಸೆಯಾಗಿರುವ ಕನಸನ್ನು ಕಾಣುತ್ತಿದೆಯೇ? ಯಾವುದು ನಿಜ?” ಎಂದನಂತೆ.

ಹೀಗೆ ಆಲೋಚಿಸುವಷ್ಟು ಸೂಕ್ಷ್ಮ ಸಂವೇದನೆಯ ದೃಷ್ಟಿಗಳು ಮನಸ್ಸನ್ನು ಅರಿಯುವಲ್ಲಿ, ಅದರ ಜಾಡನ್ನು ಅನುಸರಿಸುವಲ್ಲಿ, ಅದರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿಯುವಲ್ಲಿ ಆನಂದವನ್ನು ಪಡೆಯುತ್ತವೆ. ತನ್ನ ಮನಸ್ಸನ್ನು ತಾನು ಕಾಣುವುದೇ ಒಂದು ಮಜ.

ಮನ ಮೂಲ

ಮನಸ್ಸಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕಾಣುವ ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಕ್ಷೇತ್ರಗಳಿಂದಲೂ ಸಹಾಯ ಪಡೆದುಕೊಳ್ಳಬೇಕಾಗಿರುವ ಅಗತ್ಯತೆ ಇದೆ. ಸಾಹಿತ್ಯ, ವಿಜ್ಞಾನ, ಕಲೆ, ರಾಜಕೀಯ, ಕೈಗಾರಿಕೆ, ಧಾರ್ಮಿಕ, ಆಧ್ಯಾತ್ಮಿಕ, ದೈನಂದಿನ ಚಟುವಟಿಕೆಗಳು; ಹೀಗೆ ಮನುಷ್ಯರು ಭಾಗವಾಗಿರುವ ಅಥವಾ ಪಾಲುಗೊಳ್ಳುವ ಯಾವುದೇ ಕ್ಷೇತ್ರದ ಚಟುವಟಿಕೆಗಳು ಪೂರ್ಣಪ್ರಮಾಣದಲ್ಲಿ ಮನಸ್ಸಿನ ಚಟುವಟಿಕೆಗಳ ಮೇಲೆಯೇ ಆಧರಿಸಿರುತ್ತದೆ.

ಮನುಷ್ಯನೊಬ್ಬನ ವೈಯಕ್ತಿಕ ಸಾಧನೆ ಅಥವಾ ಸಾಮೂಹಿಕ ಸಾಧನೆಗಳೂ ಕೂಡ ಮನಸ್ಸಿನ ಸಂಕಲ್ಪ, ಸಾಮರ್ಥ್ಯ ಮತ್ತು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯದ ಮೇಲೆಯೇ ಅವಲಂಬಿತವಾಗಿರುತ್ತದೆ. ಹಾಗೆಯೇ ಯುದ್ಧ, ನಾಗರಿಕ ದಂಗೆ, ಸರ್ಕಾರದ ವೈಫಲ್ಯ, ವ್ಯವಸ್ಥೆಯ ವೈಫಲ್ಯ, ವ್ಯಕ್ತಿಗಳ ಮತ್ತು ಸಮೂಹಗಳ ಅಪರಾಧಗಳು, ಗುಂಪು ಘರ್ಷಣೆ; ಇತ್ಯಾದಿ ಅವಘಡಗಳಿಗೆಲ್ಲಾ ಅನಿಯಂತ್ರಿತ ಮತ್ತು ಅನುಚಿತ ಸ್ಥಿತಿಗಳ ಮನಸ್ಸಿನ ಚಟುವಟಿಕೆಗಳೇ ಕಾರಣವಾಗಿರುತ್ತವೆ. ಹೀಗಿರುವಾಗ ಮನಶಾಸ್ತ್ರ ಅಥವಾ ಮನೋವಿಜ್ಞಾನವನ್ನು ಗಂಭೀರವಾಗಿ ಪರಿಗಣಿಸದಿರುವುದು ಅತ್ಯಂತ ನಿರಾಶಾದಾಯಕ ಸ್ಥಿತಿ.

ಅದಕ್ಕೆ ತೀರಾ ಘನ ಪಾಂಡಿತ್ಯವಲ್ಲ ಬೇಕಾಗಿರುವುದು. ಸಾಮಾನ್ಯ ತಿಳುವಳಿಕೆ. ಸದಾ ಜಾಗೃತಿಯಲ್ಲಿರುವ ಸಾದಾ ಅರಿವು. ಅದೇ ನಮ್ಮೆಲ್ಲಾ ಒಳಗಿನ ಮತ್ತು ಹೊರಗಿನ ಸಮಸ್ಯೆಗಳನ್ನು ಗುಡಿಸಿ ಹಾಕುವುದು.
ಮನಮೂಲದಿಂದ ಸ್ಥಿತಿಗತಿಗಳು
ಮನವೇ ಅವುಗಳ ಮುಂದಾಳು
ನಡೆಯುವ ಎತ್ತಿನ ಹೆಜ್ಜೆಯ ಹಿಂದೆ
ಗಾಡಿಯು ನಡೆಯಲೇ ಬೇಕಹುದಂತೆ (ದಮ್ಮಪದ)

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version